Friday 14 September 2018

ಮೌನದ ಎದುರು ಸೋಲೊಪ್ಪಿಕೊಂಡ ವಾಚಾಳಿತನ


   
 ಬಟಾಟೆ, ಬೆಂಡೆಕಾಯಿ, ಹಸಿ ಮೆಣಸು, ಟೊಮೆಟೊ, ನೀರುಳ್ಳಿ ಇತ್ಯಾದಿಗಳನ್ನು ದಾರದಿಂದ ಪರಸ್ಪರ ಪೋಣಿಸಿ, ಮಾಲೆಯಂತೆ ಕೊರಳಿಗೆ ಧರಿಸಿದ ಸುಶ್ಮಾ ಸ್ವರಾಜ್‍ರ ಫೋಟೋವನ್ನು 2009 ಆಗಸ್ಟ್ 3ರಂದು ಇಂಡಿಯಾ ಟುಡೇ ಪತ್ರಿಕೆಯು ಪ್ರಕಟಿಸಿತ್ತು. ಫೋಟೋ ಕ್ಲಿಕ್ಕಿಸಿದ್ದು ಸುಬೀರ್ ಹೈದರ್ ಎಂದೂ ಅದು ನಮೂದಿಸಿತ್ತು. ದೆಹಲಿಯ ಜಂತರ್ ಮಂತರ್ ನಲ್ಲಿ ಸುಶ್ಮಾ ಸ್ವರಾಜ್‍ರು ಈ ರೀತಿ ಕಾಣಿಸಿಕೊಂಡಿದ್ದರು. ‘ಮನ್‍ಮೋಹನ್ ಸಿಂಗ್ ಸರಕಾರವು ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ’ ಎಂದು ಆರೋಪಿಸಿ ಬಿಜೆಪಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಹೀಗೆ ಕಾಣಿಸಿಕೊಂಡಿದ್ದರು. ಇದೇ ಸುಶ್ಮಾ ಸ್ವರಾಜ್ ಮತ್ತು ನಿತಿನ್ ಗಡ್ಕರಿಯವರೂ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪರಸ್ಪರ ಕೈ ಪೋಣಿಸಿ ಎತ್ತಿ ಹಿಡಿದ ದೃಶ್ಯವನ್ನು 2010 ಫೆಬ್ರವರಿ 10ರಂದು ಓಆಖಿಗಿ ಪ್ರಸಾರ ಮಾಡಿತ್ತು. ಈ ಪ್ರತಿಭಟನೆ ನಡೆದದ್ದೂ ಪ್ರಧಾನಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ. ಸ್ಥಳ: ಅದೇ ಜಂತರ್ ಮಂತರ್. ಆ ಪ್ರತಿಭಟನಾ ಸಭೆಯಲ್ಲಿ ಗಡ್ಕರಿಯವರು ಕ್ರಿಕೆಟ್ ಭಾಷೆಯಲ್ಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದರು. ‘ಸಕ್ಕರೆಯ ಬೆಲೆಯು ಅರ್ಧಶತಕವನ್ನು ದಾಟಿದೆ ಮತ್ತು ಬೇಳೆಯು ಶತಕ ಸಿಡಿಸಿದೆ. ಈ ತಂಡದ ಕೋಚ್ ಆಗಿ ಶರದ್ ಪವಾರ್ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದರು. ಅಲ್ಲಿ ಸೇರಿದ್ದ ಪ್ರತಿಭಟನಾಕಾರರಂತೂ ವಿವಿಧ ಹಣ್ಣು-ಹಂಪಲು ಮತ್ತು ತರಕಾರಿಗಳನ್ನು ದಾರದಲ್ಲಿ ಪೋಣಿಸಿ ಕೊರಳಿಗೆ ಹಾಕಿಕೊಂಡಿದ್ದರು. ಬೆಲೆ ಏರಿಕೆಯನ್ನು ಖಂಡಿಸಿ ಮನ್‍ಮೋಹನ್ ಸಿಂಗ್ ಸರಕಾರದ ವಿರುದ್ಧ 2010 ಡಿಸೆಂಬರ್ 15ರಂದು ಜಂತರ್ ಮಂತರ್‍ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿರುವ ಚಿತ್ರ ಮತ್ತು ಸುದ್ದಿಯು ಬಿಜೆಪಿ ವೆಬ್‍ಸೈಟ್‍ನಲ್ಲಿ ಈಗಲೂ ಇದೆ. ಇದೇ ಬೆಲೆ ಏರಿಕೆಯ ಕಾರಣವನ್ನು ಮುಂದಿಟ್ಟು 2011, ಸೆಪ್ಟೆಂಬರ್ 17 ಮತ್ತು 2012 ಅಕ್ಟೋಬರ್ 12ರಂದು ಬಿಜೆಪಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿರುವುದನ್ನು ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ಪ್ರಕಟಿಸಿವೆ. ಇದರ ಜೊತೆಗೇ, ಪ್ರಧಾನಿಯಾಗುವುದಕ್ಕಿಂತ ಮೊದಲು ನರೇಂದ್ರ ಮೋದಿಯವರು ಮಾಡಿರುವ ಭಾಷಣಗಳನ್ನೂ ಇಟ್ಟು ನೋಡಬೇಕು.

2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರ ಭಾಷಣವು ಪೆಟ್ರೋಲ್ ಮತ್ತು ಡೀಸೆಲ್‍ಗಳಿಲ್ಲದೇ ಕೊನೆಗೊಳ್ಳುತ್ತಲೇ ಇರಲಿಲ್ಲ. ತೈಲ ಬೆಲೆ ಏರಿಕೆಯನ್ನು ಅವರು ಮನ್‍ಮೋಹನ್ ಆಡಳಿತದ ವೈಫಲ್ಯಕ್ಕೆ ಸಾಕ್ಷ್ಯವಾಗಿ ದೇಶದ ಮುಂದಿಟ್ಟಿದ್ದರು. 2012 ಆಗಸ್ಟ್ 10ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಕಾಣಿಸಿಕೊಂಡ ಬಾಬಾ ರಾಮ್‍ದೇವ್‍ರಂತೂ ಲೋಕಪಾಲ ಕಾಯ್ದೆಯನ್ನು ಜಾರಿ ಮಾಡಿ ಕಪ್ಪು ಹಣವನ್ನು ಮರಳಿ ತಂದರೆ 35 ರೂಪಾಯಿಗೆ ಪೆಟ್ರೋಲ್ ಸಿಗಲಿದೆ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ರಾಮ್‍ದೇವ್‍ರ ಜೊತೆಗಿದ್ದುದು ಇದೇ ಬಿಜೆಪಿ. ಅವರ ಮಾತನ್ನು ತನ್ನದೇ ಮಾತು ಎಂಬಂತೆ ಅದು ಆಡಿಕೊಂಡಿತ್ತು. ಇದೀಗ ಮನ್‍ಮೋಹನ್ ಸಿಂಗ್ ಹೊರಟು ಹೋಗಿದ್ದಾರೆ. ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸುತ್ತೇನೆಂದು ಹೇಳಿದ, 100 ದಿನದೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದು ಪ್ರತಿಯೋರ್ವ ಪ್ರಜೆಯ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವೆನೆಂದು ಭರವಸೆ ಕೊಟ್ಟ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಇಳಿಸಿ, ಬೆಲೆ ಏರಿಕೆಯನ್ನು ತಡೆದು,  ಡಾಲರ್ ನ ಎದುರು ರೂಪಾಯಿ ಮೌಲ್ಯವನ್ನು ಏರಿಸುವೆನೆಂದು ಮಾತು ಕೊಟ್ಟ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. 2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿಯವರು ಮಾಡಿದ ಭಾಷಣಗಳನ್ನು ಗಣನೆಗೆ ತೆಗೆದುಕೊಂಡರೆ ಈ ಭರವಸೆಯ ಪಟ್ಟಿ ಇನ್ನಷ್ಟು ಬದ್ಧವಾಗಬಹುದು.

ಕಾಶ್ಮೀರದ 371ನೇ ವಿಧಿಯ ಬಗ್ಗೆ, ಸಮಾನ ನಾಗರಿಕ ಸಂಹಿತೆಯ ಬಗ್ಗೆ, ಪಾಕಿಸ್ತಾನಕ್ಕೆ ಪಾಠ ಕಲಿಸುವ ಬಗ್ಗೆ, ಕಾಶ್ಮೀರದ ಪ್ರತ್ಯೇಕತಾವಾದವನ್ನು ಹುಟ್ಟಡಗಿಸುವ ಬಗ್ಗೆ ಅವರು ಪುಂಖಾನುಪುಂಖ ಮಾತುಗಳನ್ನು ಆಡಿದ್ದರು. ಈಗ ಅವೇ ಪ್ರಶ್ನೆಗಳು ಬಿಜೆಪಿಯ ಎದುರು ನಿಂತಿವೆ. ಪ್ರತಿದಿನ ಡಾಲರ್ ನ ಎದುರು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ರೂಪಾಯಿಯನ್ನು ಮೇಲೆತ್ತಲು ಬಿಜೆಪಿ ಸರಕಾರ ಯಾಕೆ ವಿಫಲವಾಗುತ್ತಿದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿರುವುದರ ಹೊರತಾಗಿಯೂ ಭಾರತದಲ್ಲೇಕೆ ತೈಲ ಬೆಲೆಯಲ್ಲಿ ಪ್ರತಿದಿನ ಏರಿಕೆಯಾಗುತ್ತಲೇ ಇದೆ? 100 ದಿನಗಳೊಳಗೆ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆಂದು ಭರವಸೆ ನೀಡಿದ ನರೇಂದ್ರ ಮೋದಿಯವರು ಯಾಕೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಮನ್‍ಮೋಹನ್ ಸಿಂಗ್ ಸರಕಾರಕ್ಕೆ ಹೋಲಿಸಿದರೆ, ಇವತ್ತು ಗ್ಯಾಸ್‍ನ ಬೆಲೆ ದುಪ್ಪಟ್ಟಾಗಿದೆ. ದಿನಬಳಕೆಯ ವಸ್ತುಗಳ ಬೆಲೆಯಲ್ಲಂತೂ ತೀವ್ರ ಏರಿಕೆಯಾಗಿದೆ. ಸಮಾನ ನಾಗರಿಕ ಸಂಹಿತೆಯ ಪ್ರಸ್ತಾಪವನ್ನಂತೂ ಕೇಂದ್ರದ ಕಾನೂನು ಆಯೋಗವೇ ಅಪ್ರಾಯೋಗಿಕ ಎಂದು ತಿರಸ್ಕರಿಸಿದೆ. ಕಾಶ್ಮೀರದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಾಗಲಿ, 371ನೇ ವಿಧಿಯನ್ನು ರದ್ದುಪಡಿಸುವ ವಿಷಯದಲ್ಲಾಗಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.

ಮನ್‍ಮೋಹನ್ ಸಿಂಗ್ ಸರಕಾರವನ್ನು ಖಂಡಿಸುವುದಕ್ಕೆ ಹಣ್ಣು-ಹಂಪಲು ಮತ್ತು ತರಕಾರಿಗಳ ಮಾಲೆಯನ್ನು ಕೊರಳಿಗೆ ಹಾಕಿ ಪ್ರತಿಭಟಿಸಿದ ಸುಶ್ಮಾ, ಗಡ್ಕರಿ ಸಹಿತ ಬಿಜೆಪಿಯ ಯಾವ ನಾಯಕರೂ ಈಗ ಮಾತಾಡುತ್ತಿಲ್ಲ? ಐದಾರು ವರ್ಷಗಳ ಹಿಂದೆ ಅವರು ಕೊರಳಿಗೆ ಹಾಕಿಕೊಂಡಿದ್ದ ಮಾಲೆಗಳ ಉದ್ದೇಶ ಪ್ರಾಮಾಣಿಕವೇ ಆಗಿದ್ದಿದ್ದರೆ, ಈಗಲೂ ಅವೇ ಜನರಿದ್ದಾರಲ್ಲ ಮತ್ತು ಅಂದಿಗಿಂತಲೂ ದುರ್ದಿನಗಳಿವೆಯಲ್ಲ, ಯಾಕೆ ಅವರು ಬೀದಿಗಿಳಿಯುತ್ತಿಲ್ಲ? ಶತಕ ದಾಖಲಿಸುವ ಹಂತದಲ್ಲಿ ತೈಲಬೆಲೆ ಇದ್ದಾಗ್ಯೂ ನರೇಂದ್ರ ಮೋದಿಯವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದನ್ನೇ ಆದ್ಯತೆಯಾಗಿಟ್ಟುಕೊಂಡಿದ್ದಾರೆ. 2+2 ಮಾತುಕತೆಗಿಂತ 100 ಕೋಟಿ ಭಾರತೀಯರ ಬವಣೆಗಳು ಸುಶ್ಮಾರಿಗೆ ಮುಖ್ಯವಾಗಲಿಲ್ಲವೆಂದರೆ ಏನರ್ಥ?

2014ರ ಲೋಕಸಭಾ ಚುನಾವಣೆಗಿಂತ ಮೊದಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಯಾವ ಭರವಸೆಯನ್ನು ಹುಟ್ಟು ಹಾಕಿತ್ತೋ ಆ ಭರವಸೆಗಳೆಲ್ಲ ಇವತ್ತು ಹತಾಶೆಯಾಗಿ ಮಾರ್ಪಟ್ಟು ಬಿಟ್ಟಿದೆ. ವಿಶೇಷವಾಗಿ, ನರೇಂದ್ರ ಮೋದಿಯವರನ್ನು ಪರಿವರ್ತನೆಯ ಹರಿಕಾರ ಎಂದೇ ಮಾಧ್ಯಮಗಳು ಬಿಂಬಿಸಿದ್ದುವು. ಅಳೆದೂ ತೂಗಿ ಮಾತಾಡುವ ಮನ್‍ಮೋಹನ್ ಸಿಂಗ್‍ರಿಗಿಂತ ವಾಚಾಳಿ ನರೇಂದ್ರ ಮೋದಿಯವರಲ್ಲಿ ಈ ದೇಶದ ಜನರು ಏನೋ ಹೊಸತನ್ನು ನಿರೀಕ್ಷಿಸಿದರು. ಮಾತುಗಳಲ್ಲಿ ಅವರು ಕಟ್ಟಿಕೊಟ್ಟ ಅರಮನೆಯನ್ನು ನಿಜವೆಂದೇ ನಂಬಿದ್ದರು. ಆದರೆ ಆ ಮಾತುಗಳ ಆಚೆಗೆ ನರೇಂದ್ರ ಮೋದಿಯವರು ಅತ್ಯಂತ ದುರ್ಬಲ ಮತ್ತು ವಿಫಲ ನಾಯಕ ಎಂಬುದನ್ನು ಕಳೆದ ನಾಲ್ಕು ವರ್ಷಗಳು ಸ್ಪಷ್ಟಪಡಿಸಿದೆ. ಈಗಲೂ ಮೋದಿಯವರು ಬರೇ ಮಾತುಗಳನ್ನಷ್ಟೇ ಆಡುತ್ತಿದ್ದಾರೆ. ಆಡಿದ ಮಾತಿನ ಮೇಲೆ ಯಾವ ಹೊಣೆಗಾರಿಕೆಯನ್ನೂ ಹೊರದೇ ಅಡಗಿಕೊಳ್ಳುತ್ತಾರೆ. ಈಗ ಹಿಂತಿರುಗಿ ನೋಡಿದರೆ ಮನ್‍ಮೋಹನ್ ಸಿಂಗ್ ಎಷ್ಟೋ ಮಿಗಿಲು ಅನ್ನಿಸುತ್ತದೆ. ಅವರು ಆಡುವ ಮಾತುಗಳಲ್ಲಿ ತೂಕವಿತ್ತು. ಕೊಡುವ ಭರವಸೆಗಳಿಗೆ ಬದ್ಧತೆಯೂ ಇತ್ತು.

ಮಾತುಗಾರಿಕೆ ಮತ್ತು ಹೊಣೆಗಾರಿಕೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಮಾತು ಹೊಣೆಗಾರಿಕೆಯನ್ನು ಬಯಸುತ್ತದೆ. ಹೊಣೆ ಹೊರದ ಮಾತು ಹೊಣೆಗೇಡಿಯಾದುದು, ನಿಷ್ಫಲವಾದುದು. ಈ ದೇಶದ ಮಂದಿ ಪ್ರಧಾನಿಯನ್ನು ಹೊಣೆಗಾರನ ಸ್ಥಾನದಲ್ಲಿರಿಸಿ ನೋಡುತ್ತಾರೆ. ಮಾತು ತಪ್ಪುವುದು ಮತ್ತು ವಚನಭಂಗ ಮಾಡುವುದನ್ನು ಈ ದೇಶದ ಸಂಸ್ಕೃತಿಯು ಗಂಭೀರ ಅಪರಾಧವಾಗಿ ಪರಿಗಣಿಸುತ್ತದೆ. ಪ್ರಧಾನಿ ಮೋದಿಯವರು ಸದ್ಯ ಅಂಥದ್ದೊಂದು ಸ್ಥಿತಿಯಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಅವರು ಕಟ್ಟಿಕೊಟ್ಟ ಕನಸಿನ ಮನೆ ಇಷ್ಟು ಬೇಗ ಸೋರಬಹುದೆಂದು ಯಾರೂ ನಿರೀಕ್ಷಿಸಿರಲಾರರು.

Friday 7 September 2018

ಅನ್ಯರನ್ನು ಹತ್ಯೆಗೈದು ರಕ್ಷಿಸಿಕೊಳ್ಳಬೇಕಾದ ವಿಚಾರಧಾರೆಯಾದರೂ ಯಾವುದು?


        ಯಾಸೀನ್ ಭಟ್ಕಳ್ ಯಾರು ಮತ್ತು ಇಂಡಿಯನ್ ಮುಜಾಹಿದೀನ್ ಏನು ಅನ್ನುವ ಪ್ರಶ್ನೆಯನ್ನು ಏಳೆಂಟು ವರ್ಷಗಳ ಹಿಂದೆ ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಎತ್ತಲಾಗಿತ್ತು. ಇಂಡಿಯನ್ ಎಂಬ ಆಂಗ್ಲ ಪದ ಹಾಗೂ ಮುಜಾಹಿದೀನ್ ಎಂಬ ಅರೇಬಿಕ್ ಪದಗಳು ಜೊತೆ ಸೇರಿಕೊಂಡು ಉಂಟಾದ ಇಂಡಿಯನ್ ಮುಜಾಹಿದೀನ್ ಎಂಬ ಸಂಘಟನೆಯ ಫಲಾನುಭವಿಗಳು ಯಾರು, ಮೂಲ ಕೇಂದ್ರ ಎಲ್ಲಿ, ಅದರ ಕಾರ್ಯಚಟುವಟಿಕೆ ಹೇಗೆ, ಯಾವ ಉದ್ದೇಶದಿಂದ ಅದನ್ನು ಹುಟ್ಟು ಹಾಕಲಾಗಿದೆ.. ಎಂಬೆಲ್ಲ ಪ್ರಶ್ನೆಗಳು ಆಗ ಮುಂಚೂಣಿಯಲ್ಲಿತ್ತು. ಬಳಿಕ ಸ್ಪಷ್ಟಗೊಂಡ ಸಂಗತಿ ಏನೆಂದರೆ, ಅದು ದೇಶದಲ್ಲಿ ಯಾವ ಸಮಾಜಸೇವಾ ಕಾರ್ಯವನ್ನೂ ಮಾಡುತ್ತಿಲ್ಲ, ಯಾರ ಪರವಾಗಿಯೂ ಅದು ಹೋರಾಡು(ಮುಜಾಹಿದ್)ತ್ತಿಲ್ಲ ಮತ್ತು ಅದಕ್ಕೊಂದು ನಿಶ್ಚಿತವಾದ ಮೂಲ ನೆಲೆಯೂ ಇಲ್ಲ. ಭಾರತದಲ್ಲಿ ಅಸ್ಥಿರತೆಯನ್ನು ಹುಟ್ಟು ಹಾಕುವುದೇ ಅದರ ಮೂಲ ಗುರಿ ಎಂಬ ಮಾಹಿತಿಯನ್ನು ಈ ದೇಶದ ತನಿಖಾ ಸಂಸ್ಥೆಗಳು ಹೇಳಿಕೊಂಡವು.

ಸದ್ಯ ಈ ಮೇಲಿನ ಪ್ರಶ್ನೆಗಳಿಗೆ ಮತ್ತೊಮ್ಮೆ ಮಹತ್ವ ಲಭ್ಯವಾಗಿದೆ. ಈ ಬಾರಿ ಪ್ರಶ್ನೆಯ ಮೊನೆಗೆ ಸಿಲುಕಿಕೊಂಡಿರುವುದು- ಅಭಿನವ ಭಾರತ, ಸನಾತನ ಸಂಸ್ಥಾ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ ಇತ್ಯಾದಿ ಸಂಘಟನೆಗಳು. ನಿಜಕ್ಕೂ, ಈ ಸಂಘಟನೆಗಳ ಕಾರ್ಯವೈಖರಿ ಏನು, ಸದಸ್ಯತನದ ಬಗೆ ಹೇಗೆ, ಈ ಸಂಘಟನೆಗಳ ಉದ್ದೇಶ, ಗುರಿ, ಬೋಧನೆಗಳು ಏನೇನು ಇತ್ಯಾದಿಗಳು ಈಗ ಪ್ರಶ್ನೆಗೆ ಒಳಗಾಗಿವೆ. ಮೊಟ್ಟಮೊದಲು ಈ ಸಂಘಟನೆಗಳ ಕುರಿತಂತೆ ಇಂಥದ್ದೊಂದು ಪ್ರಶ್ನೆಯನ್ನೆತ್ತಿದ್ದು ಮುಂಬೈಯ ಪೊಲೀಸ್ ಮುಖ್ಯಸ್ಥ ಹೇಮಂತ್ ಕರ್ಕರೆ. ಇಂಡಿಯನ್ ಮುಜಾಹಿದೀನ್‍ನ ಉದ್ದೇಶ ಏನೇನೋ ಅದಕ್ಕೆ ಸಮಾನವಾದ ಉದ್ದೇಶವನ್ನೇ ಈ ಸಂಘಟನೆಗಳು ಹೊಂದಿವೆ ಎಂಬುದನ್ನು ಅವರು ಪತ್ತೆ ಹಚ್ಚಿದ್ದರು. ಸಂಜೋತಾ ಎಕ್ಸ್‍ಪ್ರೆಸ್, ಮಾಲೆಗಾಂವ್ ಸ್ಫೋಟ ಮತ್ತು ಮಕ್ಕಾ ಮಸೀದಿ ಸ್ಫೋಟಗಳ ಆರೋಪದಲ್ಲಿ ಅಭಿನವ್ ಭಾರತ್‍ನೊಂದಿಗೆ ಸಂಬಂಧ ಹೊಂದಿದ್ದ ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಸಹಿತ ಹಲವರನ್ನು ಅವರು ಬಂಧಿಸಿದ್ದರು. ಇಂಡಿಯನ್ ಮುಜಾಹಿದೀನ್‍ನ ಇನ್ನೊಂದು ಮುಖವಾಗಿ ಅಭಿನವ್ ಭಾರತ್ ಅನ್ನು ಅವರು ಈ ದೇಶದ ಮುಂದೆ ಅನಾವರಣಗೊಳಿಸಿದ್ದರು. ಈ ನಡುವೆ ಮುಂಬೈ ದಾಳಿಯ ವೇಳೆ ಅವರ ಹತ್ಯೆ ನಡೆಯಿತು. ಆ ಬಳಿಕ ಅವರ ತನಿಖೆಯಲ್ಲೇ ತಪ್ಪುಗಳನ್ನು ಹುಡುಕುವ ಪ್ರಯತ್ನಗಳು ಅತ್ಯಂತ ಯೋಜಿತವಾಗಿ ನಡೆದುವು. ಅವರನ್ನೇ ತಪ್ಪಿತಸ್ಥ ಎಂದು ಘೋಷಿಸುವ ಮಟ್ಟಕ್ಕೆ ವಾದಗಳು ಬೆಳೆದುವು.

ಇದೀಗ ಕರ್ಕರೆಯವರ ಅದೇ ಮಹಾರಾಷ್ಟ್ರದಲ್ಲಿ ಬಂಧನ ಸತ್ರ ನಡೆಯುತ್ತಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಸಿಬಿಐ ಮತ್ತು ಕರ್ನಾಟಕದ ಸಿಟ್ ಈ ಮೂರೂ ಸಂಸ್ಥೆಗಳು ಉಭಯ ರಾಜ್ಯಗಳಲ್ಲಿ ಹಲವರನ್ನು ಬಂಧಿಸಿವೆ. ವಿಶೇಷ ಏನೆಂದರೆ, ಬಂಧಿತರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸನಾತನ ಸಂಸ್ಥಾ, ಅಭಿನವ್ ಭಾರತ್, ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ ಇತ್ಯಾದಿಗಳೊಂದಿಗೆ ಗಾಢ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಇಂಡಿಯನ್ ಮುಜಾಹಿದೀನ್‍ನ ಸ್ಥಾಪಕ ಎಂದು ಹೇಳಲಾದ ಯಾಸೀನ್ ಭಟ್ಕಳ್‍ನ ಹೆಸರು ಅರಬಿ ಮೂಲವಾಗಿದ್ದರೆ ವೈಭವ್ ರಾವತ್, ವಾಘ್ಮೋರೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಅಮೋಳ್ ಕಾಳೆ, ಭರತ್ ಕುರ್ನೆ, ಶರದ್ ಕಳಾಸ್ಕರ್, ಸಚಿನ್ ಅಂಧುರೆ ಮತ್ತು ಇನ್ನಿತರ ಆರೋಪಿಗಳ ಹೆಸರುಗಳು ಅಚ್ಚ ಭಾರತೀಯ ಮೂಲದವು. ಹೆಸರುಗಳ ಮೂಲದಲ್ಲಿ ಯಾಸೀನ್ ಮತ್ತು ಇವರ ನಡುವೆ ವ್ಯತ್ಯಾಸ ಇದೆಯೇ ಹೊರತು ಮನೋಭಾವದಲ್ಲಿ ಇವರೆಲ್ಲ ಸಮಾನರೇ ಅನ್ನುವುದನ್ನು ತನಿಖಾ ವರದಿಗಳು ಪ್ರತಿದಿನ ಬಹಿರಂಗಪಡಿಸುತ್ತಿವೆ. ದೇಶದ ಹಲವು ಕಡೆ ಬಾಂಬ್ ಸ್ಫೋಟಿಸಿದ ಆರೋಪ ಯಾಸೀನ್ ಭಟ್ಕಳ್‍ನ ಮೇಲಿದ್ದರೆ, ಸನಾತನ ಸಂಸ್ಥಾದೊಂದಿಗೆ ಗುರುತಿಸಿಕೊಂಡಿರುವ ವೈಭವ್ ರಾವತ್‍ನಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ಮತ್ತು ಕರ್ನಾಟಕದ ಸಿಟ್‍ನಿಂದ ಬಂಧನಕ್ಕೊಳಗಾದವರ ಮೇಲಿರುವ ಆರೋಪವಂತೂ ಇದಕ್ಕಿಂತಲೂ ಗಂಭೀರ. ದಾಬೋಲ್ಕರ್, ಪನ್ಸಾರ್, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಲ್ಲಿ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ನಿಜವಾಗಿ, ಸಮಸ್ಯೆ ಇರುವುದು ಹೆಸರುಗಳಲ್ಲಲ್ಲ, ಮನಃಸ್ಥಿತಿಯಲ್ಲಿ. ಯಾಸೀನ್ ಕೆಟ್ಟ ಹೆಸರಲ್ಲ. ಪರಶುರಾಮ ವಾಘ್ಮೋರೆ ಕೂಡಾ ಹಾಗೆಯೇ. ಆದರೆ ಈ ಇಬ್ಬರ ಮನಃಸ್ಥಿತಿಯಿಂದಾಗಿ ಈ ಎರಡೂ ಹೆಸರುಗಳಿಗೆ ಕಳಂಕ ಅಂಟಿಕೊಂಡವು. ಸನಾತನ ಸಂಸ್ಥಾ ಅಥವಾ ಅಭಿನವ್ ಭಾರತ್ ಎಂಬ ಹೆಸರುಗಳು ಕೆಟ್ಟದ್ದೇನಲ್ಲ. ಆದರೆ ಈ ಹೆಸರಿನ ಅಡಿಯಲ್ಲಿ ಒಂದಾಗುವ ವ್ಯಕ್ತಿಗಳು ಯಾವ ಮನಃಸ್ಥಿತಿಯನ್ನು ಹೊಂದಿರುತ್ತಾರೋ ಆ ಮನಃಸ್ಥಿತಿ ಅವಕ್ಕೆ ಕೆಟ್ಟದಾದ ಅಥವಾ ಒಳ್ಳೆಯದಾದ ಹೆಸರುಗಳನ್ನು ಕೊಡಿಸುತ್ತವೆ. ಹಿಂದೂ ಜನಜಾಗೃತಿ ಸಮಿತಿ ಎಂಬ ಹೆಸರು ಬಾಹ್ಯನೋಟಕ್ಕೆ ಅತ್ಯಂತ ಅಂದವಾದುದು ಮತ್ತು ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತದ ಮಟ್ಟಿಗೆ ಅತ್ಯಂತ ಸೂಕ್ತವಾದುದು. ಆದರೆ ಸಮಸ್ಯೆ ಇರುವುದು ಈ ಸಂಘಟನೆಯ ಉದ್ದೇಶ ಮತ್ತು ಗುರಿಗಳಲ್ಲಿ.
  
 ಕ್ರೌರ್ಯ ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಲ್ಲ. ಅದು ಧರ್ಮಾತೀತ ಮತ್ತು ರಾಷ್ಟ್ರಾತೀತ ಮನಃಸ್ಥಿತಿ. ಅದು ಯಾಸೀನ್ ಎಂಬ ಹೆಸರಿನವನಲ್ಲೂ ಇರಬಹುದು ಅಥವಾ ವಾಘ್ಮೋರೆ ಎಂಬ ಹೆಸರಿನವನಲ್ಲೂ ಇರಬಹುದು. ವೈಭವ್ ರಾವತ್ ಎಂಬ ಹೆಸರು, ಆತನ ಹಣೆಯಲ್ಲಿರುವ ನಾಮ, ಹಿಂದೂ ಧರ್ಮದ ಬಗ್ಗೆ ಆತನಿಗಿರುವ ಜ್ಞಾನ ಮತ್ತು ನಿಷ್ಠೆ ಹಾಗೂ ಆತನಲ್ಲಿರುವ ಇನ್ನಿತರ ಧಾರ್ಮಿಕ ಸಂಕೇತಗಳು ಆತನನ್ನು ನಿಷ್ಠಾವಂತ ಹಿಂದೂ ಎನ್ನುವುದಕ್ಕೋ ಅಥವಾ ಹಿಂದೂ ಧರ್ಮದ ನೈಜ ಪ್ರತಿನಿಧಿ ಎಂದು ಸಾರುವುದಕ್ಕೋ ಪುರಾವೆ ಆಗಲಾರದು ಮತ್ತು ಆಗಬಾರದು ಕೂಡಾ. ದಾವೂದ್ ಇಬ್ರಾಹೀಮ್‍ನ ಬಗ್ಗೆ ಅಥವಾ ಕಸಬ್‍ನ ಬಗ್ಗೆಯೂ ಇವೇ ಮಾತುಗಳನ್ನು ಹೇಳಬೇಕು. ವ್ಯಕ್ತಿಯೋರ್ವನ ಬಾಹ್ಯ ಗುರುತುಗಳನ್ನು ನೋಡಿಕೊಂಡು ಆತನ ಧರ್ಮವನ್ನು ವ್ಯಾಖ್ಯಾನಿಸುವುದು ತಪ್ಪು. ಅವರ ತಪ್ಪುಗಳನ್ನು ಅವರ ಖಾತೆಗೆ ಸೇರಿಸುವುದೇ ನಿಜವಾದ ಧರ್ಮ. ಕ್ರೌರ್ಯ ಮನಃಸ್ಥಿತಿ ಯಾವ ಧರ್ಮದವನಲ್ಲೂ ಇರಬಹುದು. ಅಷ್ಟಕ್ಕೂ,

ಕ್ರೌರ್ಯ ಎಂಬುದು ಹತ್ಯೆಯಲ್ಲಿ ಭಾಗಿಯಾಗುವುದೋ ಬಾಂಬ್ ಸ್ಫೋಟಿಸುವುದೋ ಮಾತ್ರವಲ್ಲ, ಅದೊಂದು ಮನಃಸ್ಥಿತಿ. ದ್ವೇಷಿಸುವುದೇ ಅದರ ಪರಮ ನೀತಿ. ಭಾಷಣಗಳಲ್ಲಿ, ಬರಹಗಳಲ್ಲಿ ಕೂಡಾ ಇದು ವ್ಯಕ್ತವಾಗುತ್ತಿರುತ್ತದೆ. ಕೆಲವರು ಶಸ್ತ್ರಾಸ್ತ್ರಗಳ ಮೂಲಕ ಇದನ್ನು ವ್ಯಕ್ತಪಡಿಸುತ್ತಾರೆ. ಸದ್ಯದ ತುರ್ತು ಏನೆಂದರೆ, ಇಂತಹ ಮನಃಸ್ಥಿತಿಯನ್ನು ಪೋಷಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ಮೇಲೆ ನಿಗಾ ವಹಿಸುವುದು. ಅಂಥ ವಿಚಾರಧಾರೆಯೆಡೆಗೆ ಯುವಕರು ಆಕರ್ಷಿತರಾಗದಂತೆ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಸರಕಾರದ ನೇತೃತ್ವದಲ್ಲೇ  ಹಮ್ಮಿಕೊಳ್ಳುವುದು. ಸಾಧ್ಯವಾದರೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ನಿಜ ಧರ್ಮವನ್ನು ವಿವರಿಸುವ ಸಂದರ್ಭಗಳನ್ನು ಹುಟ್ಟು ಹಾಕುವುದು. ಧರ್ಮ ಮತ್ತು ಅಧರ್ಮದ ವ್ಯತ್ಯಾಸಗಳನ್ನು ಜನರಿಗೆ ಮನದಟ್ಟು ಮಾಡಿಸುವುದು.

ಯಾರನ್ನಾದರೂ ಹತ್ಯೆಗೈಯುವುದರಿಂದ ಮತ್ತು ಬಾಂಬ್ ಸ್ಫೋಟಿಸಿ ಸಾಯಿಸುವುದರಿಂದ ಧರ್ಮರಕ್ಷಣೆಯಾಗುತ್ತದೆ ಎಂದು ನಂಬುವುದೇ ಅಧರ್ಮ. ಇತರರನ್ನು ಸಾಯಿಸುವ ಮೂಲಕ ಬದುಕಿಕೊಳ್ಳಬೇಕಾದಷ್ಟು ಯಾವ ಧರ್ಮವೂ ದುರ್ಬಲ ಅಲ್ಲ. ಅದು ಸಾಯಿಸುವವರ ದೌರ್ಬಲ್ಯ. ಅವರ ದೌರ್ಬಲ್ಯವನ್ನು ಧರ್ಮದ ಮೇಲೆ ಹೊರಿಸುವುದು ಅತಿದೊಡ್ಡ ಅನ್ಯಾಯ. ಇದರ ವಿರುದ್ಧ ಧರ್ಮಾತೀತ ಜಾಗೃತಿ ಅತ್ಯಗತ್ಯ. ಹಿಂಸೆಯಲ್ಲಿ ನಂಬಿಕೆಯಿಟ್ಟಿರುವವರು ಇಂಡಿಯನ್ ಮುಜಾಹಿದೀನ್‍ನಲ್ಲಿರಲಿ ಅಥವಾ ಅಭಿನವ್ ಭಾರತ್, ಸನಾತನ್ ಸಂಸ್ಥಾದಲ್ಲಿರಲಿ, ಅವರು ಅಧರ್ಮಿಗಳು. ಅವರನ್ನು ಸಮರ್ಥಿಸದಿರುವುದೇ ನಾವು ಧರ್ಮಕ್ಕೆ ನೀಡಬಹುದಾದ ನಿಜವಾದ ಗೌರವ.

ಪ್ರಧಾನಿಯ ಕೊರಳಿನ ಉರುಳನ್ನು ಬಿಗಿಗೊಳಿಸುತ್ತಿರುವ ನೋಟು ಮತ್ತು ರಫೇಲ್




ಭ್ರಷ್ಟಾಚಾರವನ್ನು ಪ್ರಶ್ನಿಸಿ, ಖಂಡಿಸಿ ಮತ್ತು ಈ ಕಾರಣಕ್ಕಾಗಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಯು ಸದ್ಯ ಮನ್‍ಮೋಹನ್ ಸಿಂಗ್‍ರ ಸ್ಥಿತಿಯನ್ನೇ ಎದುರಿಸುತ್ತಿದೆ. ಅಧಿಕಾರದ ಕೇವಲ ನಾಲ್ಕು ವರ್ಷಗಳೊಳಗೆ ಎರಡು ಬೃಹತ್ ಹಗರಣಗಳು ಬಿಜೆಪಿಯ ಕೊರಳನ್ನು ಸುತ್ತಿಕೊಂಡಿದೆ. ಮಾತ್ರವಲ್ಲ, ದಿನೇ ದಿನೇ ಈ ಉರುಳು ಬಿಗಿಯಾಗುತ್ತಲೂ ಇದೆ. ಇದರಲ್ಲಿ ಒಂದು: ರಫೇಲ್ ಯುದ್ಧ ವಿಮಾನಗಳ ಖರೀದಿಯದ್ದಾದರೆ, ಇನ್ನೊಂದು: ನೋಟು ನಿಷೇಧ. ‘Refale talks were on when, Reliance Entertainment helped produce film for Francois Hollande’s partner’ ಎಂಬ ಶೀರ್ಷಿಕೆಯಲ್ಲಿ ‘ದ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯು ಆಗಸ್ಟ್ 31ರಂದು ದೀರ್ಘ ಲೇಖನವನ್ನೇ ಪ್ರಕಟಿಸಿತ್ತು.

 ರಫೇಲ್ ಒಡಂಬಡಿಕೆಯ ಸಮಯದಲ್ಲಿ ಫ್ರಾನ್ಸ್ ನ ಅಧ್ಯಕ್ಷರಾಗಿದ್ದವರು ಫ್ರಾಂಕೋಯಿಸ್ ಹೊಲ್ಲಾಂಡೆ. ಇವರ ಗೆಳತಿ  ಮತ್ತು ನಟಿಯಾಗಿರುವ ಜೂಲಿ ಗಯೆಟೆ ಅವರ ‘ರಗ್ ಇಂಟರ್ ನಾಶನಲ್ ಸಂಸ್ಥೆ’ಯೊಂದಿಗೆ ಸೇರಿಕೊಂಡು ಫ್ರೆಂಚ್ ಸಿನಿಮಾ ತಯಾರಿಸುವುದಾಗಿ 2016 ಜನವರಿ 24ರಂದು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯು ಘೋಷಿಸುತ್ತದೆ. ಇದಾಗಿ ಎರಡು ದಿನಗಳ ಬಳಿಕ- ಜನವರಿ 26ರಂದು -ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಬಂದ ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರು ರಫೇಲ್ ಖರೀದಿಯ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುತ್ತಾರೆ. ವಿಶೇಷ ಏನೆಂದರೆ, ರಫೇಲ್ ವಿಮಾನಗಳ ಉತ್ಪಾದನೆಯನ್ನು ಫ್ರಾನ್ಸ್ ನ ಡಸಲ್ಟ್ ಏವಿಯೇಶನ್ ಮತ್ತು ಅನಿಲ್ ಅಂಬಾನಿಯವರ ಒಡೆತನ ರಕ್ಷಣಾ ಸಂಸ್ಥೆಯು ಜೊತೆಯಾಗಿ ಮಾಡಲಿದ್ದು, ಗಯೆಟೆಯ ಸಿನಿಮಾದ ಸಹ ನಿರ್ಮಾಪಕನಾಗಿ ಇದೇ ಡಸಲ್ಟ್ ಸಂಸ್ಥೆಯು ಭಾಗಿಯಾಗಿದೆ. ಅಂದರೆ, ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರ ಗೆಳತಿಯ ಸಿನಿಮಾದಲ್ಲಿ ರಿಲಯನ್ಸ್ ಮತ್ತು ಡಸಲ್ಡ್ ಎರಡೂ ಸಂಸ್ಥೆಗಳು ಭಾಗಿಯಾಗಿವೆ ಮತ್ತು ಇವೆರಡೂ ಜೊತೆ ಸೇರಿಕೊಂಡೇ ರಫೇಲ್ ಯುದ್ಧ ವಿಮಾನಗಳನ್ನು ಉತ್ಪಾದಿಸಲಿವೆ. ಗಯೆಟೆ ಅವರ ಸಿನಿಮಾವನ್ನು ತಯಾರಿಸಲು ತೀರ್ಮಾನಿಸಿರುವುದಾಗಿ ಘೋಷಿಸಿದ ಎರಡು ದಿನಗಳ ಬಳಿಕ ರಫೇಲ್ ಖರೀದಿಯ ಬಗೆಗಿನ ತಿಳುವಳಿಕಾ ಪತ್ರಕ್ಕೆ ಫ್ರಾನ್ಸ್ ಅಧ್ಯಕ್ಷರು ಸಹಿ ಹಾಕುತ್ತಾರೆ. ಬಾಹ್ಯನೋಟಕ್ಕೆ ಕಾಕತಾಳೀಯವೆಂಬಂತೆ ಕಾಣುವ ಈ ಬೆಳವಣಿಗೆಯು ಕಾಕತಾಳೀಯಕ್ಕಿಂತಲೂ ಹೊರತಾದ ಇನ್ನಾವುದನ್ನೋ ಅಡಗಿಸಿಕೊಂಡಿದೆ ಅನ್ನುವ ಅನುಮಾನಕ್ಕೆ ಇದುವೇ ಕಾರಣ. ಬೋಫೋರ್ಸ್‍ಗಿಂತಲೂ ದೊಡ್ಡ ಹಗರಣ ಇದು ಎಂದು ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಬಿಜೆಪಿ ಮುಖಂಡ ಯಶವಂತ್ ಸಿನ್ಹ ಅವರು ಆರೋಪಿಸಿದ್ದಾರೆ.

ದಶಕದ ಹಿಂದೆ ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಸುಮಾರು 126 ರಫೇಲ್ ವಿಮಾನಗಳ ಖರೀದಿಗೆ ಫ್ರಾನ್ಸ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಒಂದು ವಿಮಾನಕ್ಕೆ ಸುಮಾರು 560 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿತ್ತು. ಅಲ್ಲದೇ ಈ ವಿಮಾನಗಳ ಉತ್ಪಾದನೆಯು ಕರ್ನಾಟಕದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಒಪ್ಪಂದಕ್ಕೆ ಮರುರೂಪವನ್ನು ಕೊಟ್ಟರಲ್ಲದೇ ಸರಕಾರಿ ಸಂಸ್ಥೆಯಾದ HAL  ಅನ್ನು ಕೈಬಿಟ್ಟು ರಿಲಯನ್ಸ್ ಸಂಸ್ಥೆಯನ್ನು ಸೇರಿಸಿಕೊಂಡರು. ಮಾತ್ರವಲ್ಲ, ಪ್ರತಿ ಯುದ್ಧ ವಿಮಾನಕ್ಕೆ ಮನ್‍ಮೋಹನ್ ಸಿಂಗ್ ಸರಕಾರ ತೀರ್ಮಾನಿಸಿದ್ದ 560 ಕೋಟಿ ರೂಪಾಯಿಯ ಬದಲು 1,660 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಯಿತು. ಈ ನಿಗದಿಯಲ್ಲೂ ಒಂದು ಗೊಂದಲ ಇದೆ. ಪ್ರಶಾಂತ್ ಭೂಷಣ್ ಅವರ ಪ್ರಕಾರ, ಪ್ರತಿ ವಿಮಾನಕ್ಕೆ 670 ಕೋಟಿ ರೂಪಾಯಿ ತಗಲುತ್ತದೆ ಎಂದು ಇದೇ ಸರಕಾರ ನವೆಂಬರ್ 2016ರಲ್ಲಿ ಹೇಳಿತ್ತು. ಆದರೆ ಆ ಬಳಿಕ ಪ್ರತಿ ವಿಮಾನಕ್ಕೆ 1,660 ಕೋಟಿ ರೂಪಾಯಿ ಖರ್ಚಾಗುತ್ತದೆಂದು ರಿಲಯನ್ಸ್ ಮತ್ತು ಡಸಲ್ಡ್ ಸಂಸ್ಥೆಯು ಘೋಷಿಸಿತು.


ಒಂದು ರೀತಿಯಲ್ಲಿ, ಈ ಇಡೀ ಒಪ್ಪಂದವು ತರಾತುರಿಯಿಂದ ನಡೆದಿದೆ. ಬೃಹತ್ ಹಗರಣವೊಂದರ ಸರ್ವಸಾಧ್ಯತೆಯನ್ನು ತೆರೆದಿಟ್ಟ ಈ ಒಪ್ಪಂದದ ಬಗ್ಗೆ ಹೆಚ್ಚಿನ ವಿವರವನ್ನು ಹಂಚಿಕೊಳ್ಳಲು ಕೇಂದ್ರ ಸರಕಾರ ನಿರಾಕರಿಸುತ್ತಿದೆ. ಸರಕಾರದ ಕೈ ಸ್ವಚ್ಛವಾಗಿದ್ದರೆ ಅಳುಕು ಏಕೆ? ಪ್ರಶ್ನೆಗಳಿಗೆ ಉತ್ತರಿಸದೇ ಸರಕಾರ ಮರೆಯಲ್ಲಿ ಅಡಗುವುದೇಕೆ? ಸರಕಾರಿ ಸಂಸ್ಥೆಯಾದ ಊಂಐ ಅನ್ನು ಕೈಬಿಟ್ಟು ಅನನುಭವಿ ರಿಲಯನ್ಸ್ ಅನ್ನು ಈ ಉತ್ಪಾದನಾ ರಂಗದಲ್ಲಿ ಸಹಭಾಗಿಗೊಳಿಸಿದ್ದು ಯಾವ ಉದ್ದೇಶದಿಂದ? ಈ ರಫೇಲ್ ಇನ್ನೊಂದು ಬೋಫೋರ್ಸ್ ಹಗರಣವೇ ಎಂಬ ಪ್ರಶ್ನೆ ವಿವಿಧೆಡೆಗಳಿಂದ ಕೇಳಿಬರತೊಡಗಿದೆ. ಇದರ ಜೊತೆಗೇ ನಾವು ನೋಟು ನಿಷೇಧವನ್ನೂ ಇಟ್ಟು ನೋಡಬೇಕು.

2016 ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ 500 ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಅಮಾನ್ಯಗೊಳಿಸಿದರು. ಕಪ್ಪುಹಣವನ್ನು ನಿರ್ಮೂಲನಗೊಳಿಸುವುದು ಇದರ ಮುಖ್ಯ ಗುರಿ ಎಂದವರು ಆಗ ಸಾರಿದ್ದರು. ಕಾಶ್ಮೀರದ ಘರ್ಷಣೆಗೆ ಮತ್ತು ನಕ್ಸಲ್ ಹಿಂಸಾಚಾರಕ್ಕೆ ಕಪ್ಪು ಹಣದ ಪ್ರಭಾವವೇ ಕಾರಣ ಎಂದೂ ಅವರು ಹೇಳಿದ್ದರು. ಇದೀಗ ಆರ್‍ ಬಿ ಐ ಕಳೆದವಾರ ನೋಟು ಅಮಾನ್ಯದ ಫಲಿತಾಂಶವನ್ನು ಪ್ರಕಟಿಸಿದೆ. ನಿಷೇಧಿತ ನೋಟುಗಳ ಪೈಕಿ 99.3% ನೋಟುಗಳೂ ಮರಳಿ ಬಂದಿವೆ ಎಂದೂ ಅದು ಹೇಳಿದೆ. ಇದರರ್ಥ, ನೋಟಿನ ರೂಪದಲ್ಲಿ ಕಪ್ಪುಹಣದ ಚಲಾವಣೆ ಶೂನ್ಯ ಅನ್ನುವಷ್ಟು ಕಡಿಮೆ ಇತ್ತು ಎಂದೇ.

ನಿಜವಾಗಿ, ನೋಟು ಅಮಾನ್ಯ ಅನ್ನುವುದು ಬಹುದೊಡ್ಡ ವೈಫಲ್ಯ. ಸಾಮಾನ್ಯ ಮಂದಿ ತಮ್ಮ ಬಳಿ ಇರುವ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳೆದುರು ಕ್ಯೂ ನಿಂತು ಬಸವಳಿದು ಹೋದರು. ಶ್ರೀಮಂತರು ಪ್ರಭಾವವನ್ನು ಬಳಸಿ ತಮ್ಮ ಬಳಿಯಿರುವ ನೋಟುಗಳನ್ನು ಬಿಳಿಯಾಗಿಸಿಕೊಂಡರು. ಈ ನೋಟು ಅಮಾನ್ಯದಿಂದ ಕಾಶ್ಮೀರದ ಹಿಂಸಾಚಾರವೂ ತಗ್ಗಲಿಲ್ಲ. ನಕ್ಸಲರೂ ಸುಮ್ಮನಾಗಲಿಲ್ಲ. ಆದರೆ ಕೋಟ್ಯಂತರ ಉದ್ಯೋಗಗಳು ನಾಶಗೊಂಡವು. ಸಣ್ಣ-ಪುಟ್ಟ ಉದ್ದಿಮೆಗಳು ನೆಲ ಕಚ್ಚಿದುವು. ಉದ್ಯೋಗ ಮತ್ತು ಕೃಷಿ ಕ್ಷೇತ್ರದ ಮೇಲೆ ಬಲವಾದ ಹೊಡೆತಗಳು ಬಿದ್ದುವು. ಜನಸಾಮಾನ್ಯರ ಕೈಯಲ್ಲಿದ್ದ ಹಣವನ್ನೆಲ್ಲ ಬ್ಯಾಂಕುಗಳು ವಶಪಡಿಸಿಕೊಂಡವಲ್ಲದೇ ಬೃಹತ್ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡಲಾಯಿತು. ಕೆಲವು ಶ್ರೀಮಂತ ಉದ್ಯಮಿಗಳು ಬ್ಯಾಂಕುಗಳನ್ನು ದೋಚಿ ಪಲಾಯನ ಮಾಡಿದರು. ಉದ್ಯಮಿಗಳಿಗೆ ಕೊಟ್ಟ ಕೋಟ್ಯಂತರ ರೂಪಾಯಿ ಸಾಲವನ್ನು ವಸೂಲು ಮಾಡಲಾಗದೆ ಖಜಾನೆ ಖಾಲಿ ಮಾಡಿಕೊಂಡಿದ್ದ ಬ್ಯಾಂಕುಗಳು ಆ ನಷ್ಟವನ್ನು ತುಂಬಿಸಿಕೊಳ್ಳುವುದಕ್ಕಾಗಿ ನೋಟು ನಿಷೇಧದ ದಂಧೆಗಿಳಿದವೋ ಅನ್ನುವ ಅನುಮಾನವೂ ಇದೆ. ಸಾಲ ಎತ್ತಿರುವ ಉದ್ಯಮಿಗಳೇ ಇಂಥದ್ದೊಂದು ತಂತ್ರವನ್ನು ಸರಕಾರಕ್ಕೆ ನೀಡಿದರೋ ಎಂದೂ ಪ್ರಶ್ನಿಸಬೇಕಾಗಿದೆ.

ನೋಟು ನಿಷೇಧ ಮತ್ತು ರಫೇಲ್ - ಇವೆರಡೂ ಇವತ್ತು ಸಾಕಷ್ಟು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಇವೆರಡರಿಂದಲೂ ಈ ದೇಶಕ್ಕಾದ ಲಾಭ ಏನು ಅನ್ನುವ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ನೀಡಲು ಈ ಸರಕಾರ ಹಿಂದೇಟು ಹಾಕುತ್ತಿದೆ. ಅದೇವೇಳೆ, ‘ಕೋಟ್ಯಂತರ ರೂಪಾಯಿಗಳ ಎರಡು ಬೃಹತ್ ಹಗರಣಗಳ ಹೆಸರುಗಳಿವು’ ಎಂಬ ವಾದಕ್ಕೆ ದಿನೇ ದಿನೇ ಆಧಾರಗಳು ಲಭ್ಯವಾಗುತ್ತಿವೆ.

ಅಂದಹಾಗೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟು ಮತ್ತು ರಫೇಲ್ ಎರಡೂ ಸೇರಿಕೊಂಡು ಮೋದಿಯವರನ್ನು ಕೆಳಗಿಳಿಸಿದರೂ ಅಚ್ಚರಿಯಿಲ್ಲ.