Thursday 25 April 2019

ಚೌಕಿದಾರರನ್ನು ಮತ್ತೆ ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸಿದ ರಫೇಲ್



   ಕಳೆದವಾರ ಎರಡು ಬೆಳವಣಿಗೆಗಳು ನಡೆದುವು. ಈ ಎರಡೂ ಬೆಳವಣಿಗೆಗಳು ತಳಕು ಹಾಕಿಕೊಂಡಿರುವುದು ರಫೇಲ್ ಒಪ್ಪಂದದ ಜೊತೆ. ಮಾತ್ರವಲ್ಲ, ಈ ಎರಡೂ ಬೆಳವಣಿಗೆಗಳು ಚೌಕಿದಾರನೇ ಕಳ್ಳ ಅನ್ನುವುದಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸಿವೆ. ಇದರಲ್ಲಿ ಒಂದು ಸುಪ್ರೀಮ್ ಕೋರ್ಟಿನ ತೀರ್ಪು.
ರಫೇಲ್ ವ್ಯವಹಾರಕ್ಕೆ ಸಂಬಂಧಿಸಿ ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರುಣ್ ಶೌರಿ, ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿದ್ದರು. ಇವರು ಹೀಗೆ ಮನವಿ ಮಾಡಿಕೊಳ್ಳುವುದಕ್ಕೆ ಕಾರಣ- ದ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ತನಿಖಾ ವರದಿ. ಮೂರು ದಶಕಗಳ ಹಿಂದೆ ರಾಜೀವ್ ಗಾಂಧಿಯವರ ಕಾಲದಲ್ಲಿ ಭಾರತ ಸರಕಾರ ಸ್ವೀಡನ್ನಿನ ಮದ್ದುಗುಂಡು ತಯಾರಕ ಕಂಪೆನಿಯಾದ ಬೋಫೋರ್ಸ್‍ನೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಆ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ದ ಹಿಂದೂ ಪತ್ರಿಕೆಯ ಎನ್. ರಾಮ್ ಎಂಬ ಪತ್ರಕರ್ತ ಅಂದು ದೇಶದ ಮುಂದಿಟ್ಟಿದ್ದರು. ಅವರ ಆ ತನಿಖಾ ಬರಹ ದೇಶದ ರಾಜಕೀಯ ವಾತಾವರಣವನ್ನೇ ಬದಲಿಸಿತ್ತು. ಇದೀಗ ಅದೇ ಎನ್. ರಾಮ್ ಅವರು ರಫೇಲ್ ಒಪ್ಪಂದದಲ್ಲಾಗಿರುವ ಅವ್ಯವಹಾರವನ್ನು ಇತ್ತೀಚೆಗೆ ದ ಹಿಂದೂ ಪತ್ರಿಕೆಯಲ್ಲಿ ಆಧಾರ ಸಮೇತ ಬರೆದರು. ಇದೇ ಬರಹಗಳನ್ನು ಆಧರಿಸಿಕೊಂಡು ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿದರು. ಕೋರ್ಟು ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ಮೋದಿ ಸರಕಾರ ಬಲವಾಗಿ ವಿರೋಧಿಸಿತು. ರಕ್ಷಣಾ ಇಲಾಖೆಯಿಂದ ಕಳವು ಮಾಡಲಾದ ದಾಖಲೆಗಳನ್ನಿಟ್ಟುಕೊಂಡು ಎನ್. ರಾಮ್ ಅವರು ಲೇಖನ ಬರೆದಿದ್ದು, ಅದನ್ನು ಸಾಕ್ಷ್ಯವಾಗಿ ಪರಿಗಣಿಸಬಾರದೆಂದು ಕೇಂದ್ರ ಸರಕಾರ ವಾದಿಸಿತು. ಮಾತ್ರವಲ್ಲ, ಬ್ರಿಟಿಷ್ ಕಾಲದ ಮತ್ತು ಇಂದಿಗೆ ಅಪ್ರಸ್ತುತವಾಗಿರುವ ಅಧಿಕೃತ ರಹಸ್ಯ ಕಾಯ್ದೆಯಂತೆ ದ ಹಿಂದೂ ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿತು. ಯಾವಾಗ ಕೇಂದ್ರ ಸರಕಾರ ರಫೇಲ್ ಒಪ್ಪಂದದ ದಾಖಲೆಗಳು ಕಳವಾಗಿವೆ ಮತ್ತು ದ ಹಿಂದೂ ಪ್ರಕಟಿಸಿದ ಬರಹಗಳು ಅವೇ ದಾಖಲೆಗಳ ಆಧಾರಿತವಾಗಿವೆ ಎಂದು ಸುಪ್ರೀಮ್ ಕೋರ್ಟಿನಲ್ಲಿ ಒಪ್ಪಿಕೊಂಡಿತೋ ಆಗಲೇ ಈ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಅನ್ನುವುದು ಸ್ಪಷ್ಟವಾಯಿತು. ಮಾತ್ರವಲ್ಲ, ಸುಪ್ರೀಮ್ ಕೋರ್ಟು ಮತ್ತು ಈ ದೇಶದ ಮುಂದೆ ತಾನು ಸುಳ್ಳು ಹೇಳಿದ್ದೇನೆ ಎಂದೂ ಕೇಂದ್ರ ಸರಕಾರ ಘೋಷಿಸಿದಂತಾಯಿತು. ಎನ್. ರಾಮ್ ಅವರ ತನಿಖಾ ಬರಹಗಳು ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗುವುದಕ್ಕಿಂತ ಮೊದಲು ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ವಿಚಾರಣೆ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ತನ್ನೆದುರು ಹಾಜರುಪಡಿಸುವಂತೆ ಕೋರ್ಟು ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಆ ದಾಖಲೆಗಳ ಆಧಾರದಲ್ಲಿ ರಫೇಲ್ ಒಪ್ಪಂದಕ್ಕೆ ಸುಪ್ರೀಮ್ ಕೋರ್ಟು ಕ್ಲೀನ್‍ಚಿಟ್ ನೀಡಿತ್ತು. ಆದರೆ, ದ ಹಿಂದೂ ಪತ್ರಿಕೆ ಯಾವಾಗ ಸರಣಿ ಲೇಖನಗಳನ್ನು ಪ್ರಕಟಿಸತೊಡಗಿತೋ, ಕೇಂದ್ರ ಸರಕಾರದ ಸುಳ್ಳುಗಳು ಒಂದೊಂದೇ ಬಹಿರಂಗಕ್ಕೆ ಬಹಿರಂಗತೊಡಗಿದುವು. ನಿಜವಾಗಿ, ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಿಂದ ಪ್ರಮುಖ ದಾಖಲೆಗಳನ್ನೇ ಮುಚ್ಚಿಟ್ಟಿತ್ತು. ತನಗೆ ಅನುಕೂಲಕರವಾದ ದಾಖಲೆಗಳನ್ನಷ್ಟೇ ಕೋರ್ಟಿನ ಮುಂದಿರಿಸಿತ್ತು. ರಕ್ಷಣಾ ಒಪ್ಪಂದಕ್ಕಾಗಿ ಕೇಂದ್ರ ಸರಕಾರವೇ ರಚಿಸಿದ ತಜ್ಞರ ತಂಡವು ಒಂದುಕಡೆ ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗ, ಇನ್ನೊಂದು ಕಡೆ ಪ್ರಧಾನಮಂತ್ರಿ ಕಚೇರಿಯೇ ಮಧ್ಯ ಪ್ರವೇಶಿಸಿತ್ತೆಂದು ದ ಹಿಂದೂ ಪತ್ರಿಕೆ ಪ್ರಕಟಿಸಿದ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಗಳು ಸ್ಪಷ್ಟಪಡಿಸಿದುವು. ಸುಪ್ರೀಮ್ ಕೋರ್ಟಿನ ಮುಂದೆ ಕೇಂದ್ರ ಸರಕಾರ ಈ ಅಂಶವನ್ನು ಮುಚ್ಚಿಟ್ಟಿತ್ತು. ಅಲ್ಲದೇ, ಕೇಂದ್ರದ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಅವರೂ ಈ ಒಪ್ಪಂದದಲ್ಲಿ ಮಧ್ಯಪ್ರವೇಶ ಮಾಡಿz್ದÁರೆ ಎಂದೂ ಈ ದಾಖಲೆಗಳು ಹೇಳಿದುವು. ಅವರ ಭಾಗೀದಾರಿಕೆಯ ಬಳಿಕವೇ ಒಪ್ಪಂದದಿಂದ ಬ್ಯಾಂಕ್ ಖಾತರಿಯ ಷರತ್ತನ್ನು ತೆಗೆದುಹಾಕಲಾಯಿತು ಮತ್ತು ಆ ಮೂಲಕ ಡಸಾಲ್ಟ್ ಕಂಪೆನಿಗೆ ಅನುಕೂಲ ಮಾಡಿಕೊಡಲಾಯಿತು ಎಂಬುದನ್ನೂ ದ ಹಿಂದೂ ಪ್ರಕಟಿಸಿದ ದಾಖಲೆಗಳು ವಿವರಿಸಿದುವು. ಇದನ್ನೂ ಸುಪ್ರೀಮ್ ಕೋರ್ಟ್‍ನಿಂದ ಕೇಂದ್ರ ಸರಕಾರ ಮುಚ್ಚಿಟ್ಟಿತ್ತು. ನಿಜವಾಗಿ, ಇವೆರಡೂ ಗಂಭೀರ ಅಂಶಗಳು. ರಫೇಲ್ ಯುದ್ಧ ವಿಮಾನವನ್ನು ತಯಾರಿಸುವ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ತಜ್ಞರ ತಂಡವನ್ನು ಕೇಂದ್ರ ಸರಕಾರವೇ ರಚಿಸಿರುವಾಗ ಮತ್ತು ಅದು ಮಾತುಕತೆಯಲ್ಲಿ ನಿರತವಾಗಿರುವಾಗ ಪ್ರಧಾನ ಮಂತ್ರಿ ಕಚೇರಿ ಮಧ್ಯ ಪ್ರವೇಶಿಸಿದ್ದೇಕೆ? ಯಾರಿಗೆ ಅನುಕೂಲ ಮಾಡಿಕೊಡುವುದಕ್ಕೆ ಈ ಮಧ್ಯಪ್ರವೇಶ? ಅಜಿತ್ ಧೋವಲ್ ಅವರ ಮಧ್ಯಪ್ರವೇಶವೂ ಇಂಥದ್ದೊಂದು  ಅನುಮಾನವನ್ನು ಹುಟ್ಟು ಹಾಕುತ್ತದೆ. ಬ್ಯಾಂಕ್ ಖಾತರಿ ಎಂಬುದು ಯಾವುದೇ ಒಪ್ಪಂದದ ಬಹುದೊಡ್ಡ ಭಾಗ. ಧೋವಲ್ ಅವರು ಈ ಬ್ಯಾಂಕ್ ಖಾತರಿಯನ್ನೇ ರದ್ದುಪಡಿಸಿರುವುದು ಯಾಕೆ? ರಾಷ್ಟ್ರೀಯ ಭದ್ರತೆ, ದೇಶಭಕ್ತಿ ಎಂದೆಲ್ಲಾ ಹೇಳುತ್ತಾ ಬಂದ ಮೋದಿ ಮತ್ತು ಅವರ ತಂಡವು ಯಾಕೆ ದೇಶದ ಮುಂದೆ ಸುಳ್ಳುಗಳನ್ನು ಹೇಳಿದೆ? ತನ್ನ ಆಪ್ತ ಉದ್ಯಮಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ದೇಶರಕ್ಷಣೆಯಲ್ಲಿ ರಾಜಿ ಮಾಡಿಕೊಂಡರೇ ಮೋದಿ ಎಂಬ ಪ್ರಶ್ನೆಗಳು ಉದ್ಭವಿಸಿದುವು. ಇದನ್ನು ಸುಪ್ರೀಮ್ ಕೋರ್ಟು ಕೂಡ ಗಮನಿಸಿತು ಮತ್ತು ತನ್ನ ಈ ಹಿಂದಿನ ‘ಕ್ಲೀನ್‍ಚಿಟ್’ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಕೊಂಡಿತು.
ಕಳೆದವಾರ ನಡೆದ ಇನ್ನೊಂದು ಬೆಳವಣಿಗೆ ಏನೆಂದರೆ, ಫ್ರಾನ್ಸ್ ನ ಲೆ ಮಾಂಡೆ ಎಂಬ ಹೆಸರಿನ ಪತ್ರಿಕೆಯೊಂದು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ವರದಿಯೊಂದನ್ನು ಪ್ರಕಟಿಸಿದ್ದು. ಫ್ರಾನ್ಸ್ ನಲ್ಲಿರುವ ಅನಿಲ್ ಅಂಬಾನಿಯವರ ರಿಲಯನ್ಸ್ ಪ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ (ಎಸ್‍ಎಎಸ್) ಎಂಬ ಕಂಪೆನಿಗೆ ಫ್ರಾನ್ಸ್ ಸರಕಾರವು ರೂ. 1124.9 ಕೋಟಿಯಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದಕ್ಕೂ ರಫೇಲ್ ಒಪ್ಪಂದಕ್ಕೂ ಸಂಬಂಧ ಇದೆ ಎಂದು ಪತ್ರಿಕೆ ಹೇಳಿದೆ. ಡಸಾಲ್ಟ್ ಕಂಪೆನಿಯಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 6 ತಿಂಗಳ ಬಳಿಕ ಈ ತೆರಿಗೆ ವಿನಾಯಿತಿ ಬೆಳವಣಿಗೆ ನಡೆದಿದೆ ಎಂದು ಪತ್ರಿಕೆ ಬರೆದಿದೆ. ರಫೇಲ್ ಒಪ್ಪಂದಕ್ಕೆ ಮೊದಲು ತೆರಿಗೆ ಪಾವತಿಯಲ್ಲಿ ಯಾವ ವಿನಾಯಿತಿಯನ್ನು ಮಾಡಲೂ ಒಪ್ಪಿಕೊಳ್ಳದ ಫ್ರಾನ್ಸ್ ಸರಕಾರವು ಈ ಒಪ್ಪಂದದ ಬಳಿಕ ದಿಢೀರ್ ಆಗಿ ತೆರಿಗೆ ವಿನಾಯಿತಿ ಘೋಷಿಸಲು ಕಾರಣವೇನು ಅನ್ನುವ ಪ್ರಶ್ನೆಯನ್ನು ಲೆ ಮಾಂಡೆ ಪತ್ರಿಕಾ ವರದಿಯು ಸಹಜವಾಗಿಯೇ ಎತ್ತುತ್ತದೆ. ಇದಲ್ಲದೇ, ಸರಕಾರಿ ಸ್ವಾಮ್ಯದ ಮತ್ತು ಕರ್ನಾಟಕದಲ್ಲಿರುವ ಹೆಚ್‍ಎಎಲ್ ಕಂಪೆನಿಯನ್ನು ಕೈಬಿಟ್ಟು ಅನಿಲ್ ಅಂಬಾನಿಯ ಕಂಪೆನಿಗೆ ರಫೇಲ್ ಯುದ್ಧ ವಿಮಾನ ತಯಾರಿಯ ಗುತ್ತಿಗೆಯನ್ನು ಕೇಂದ್ರ ಸರಕಾರ ವಹಿಸಿಕೊಟ್ಟಿರುವುದೇಕೆ ಅನ್ನುವ ಪ್ರಶ್ನೆ ಈ ಮೊದಲೇ ಎದ್ದಿತ್ತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಈ ಒಪ್ಪಂದದ ಭಾರತೀಯ ಪಾಲುದಾರನಾಗಿ ಹೆಚ್‍ಎಎಲ್ ಅನ್ನು ಆರಿಸಿಕೊಳ್ಳಲಾಗಿತ್ತು. ಡಸಾಲ್ಟ್ ಮತ್ತು ಹೆಚ್‍ಎಎಲ್ ಜಂಟಿಯಾಗಿ ರಫೇಲ್ ಯುದ್ಧವಿಮಾನಗಳನ್ನು ನಿರ್ಮಿಸುವುದಾಗಿ ಒಪ್ಪಂದವಾಗಿತ್ತು. ಆದರೆ, ಮೋದಿಯವರು ಆ ಒಪ್ಪಂದವನ್ನು ರದ್ದುಗೊಳಿಸಿ ಹೆಚ್‍ಎಎಲ್‍ನ ಸ್ಥಾನದಲ್ಲಿ ಅನಿಲ್ ಅಂಬಾನಿಯನ್ನು ತಂದು ಕೂರಿಸಿದರು. ಸರಕಾರಿ ಸ್ವಾಮ್ಯದ ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಅನುಭವಿಯಾಗಿರುವ ಹೆಚ್‍ಎಎಲ್ ಅನ್ನು ಕೈಬಿಟ್ಟು ಅನನುಭವಿ ಅನಿಲ್ ಅಂಬಾನಿಯ ಕಂಪೆನಿಯನ್ನು ಆರಿಸಿಕೊಂಡಿದ್ದೇಕೆ ಎಂಬ ಈಗಾಗಲೇ ಇರುವ ಪ್ರಶ್ನೆಯ ಜೊತೆಗೇ ಲೆ ಮಾಂಡೆ ಪ್ರಕಟಿಸಿರುವ ‘ತೆರಿಗೆ ವಿನಾಯಿತಿ’ ವರದಿಯು ಇನ್ನಷ್ಟು ಪ್ರಶ್ನೆಗಳಿಗೆ ದಾರಿ ತೆರೆದಿದೆ. ಬಹುಕೋಟಿ ಅವ್ಯವಹಾರವೊಂದು ಈ ಒಪ್ಪಂದದ ಮೂಲಕ ನಡೆದಿದೆಯೇ? ಯಾರು ಇದರ ಫಲಾನುಭವಿಗಳು? ಈ ಅವ್ಯವಹಾರದಲ್ಲಿ ಪ್ರಧಾನಮಂತ್ರಿ ಕಚೇರಿಯವರ ಪಾತ್ರ ಏನು? ಅಜಿತ್ ಧೋವಲ್ ಅವರ ಪಾತ್ರ ಏನು? ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಹಳೇ ಒಪ್ಪಂದವನ್ನು ರದ್ದುಪಡಿಸಲಾಯಿತೇ? ಮೋದಿ ಸರಕಾರದ ದೇಶಪ್ರೇಮ, ಸೇನಾಪ್ರೇಮ, ರಾಷ್ಟ್ರೀಯ ಭದ್ರತೆ, ದೇಶರಕ್ಷಣೆ ಇತ್ಯಾದಿ ಇತ್ಯಾದಿ ಮಾತುಗಳೆಲ್ಲ ಬರೀ ಬೊಗಳೆಯೇ? ರಫೇಲ್ ಎಂಬುದು ಇನ್ನೊಂದು ಬೋಫೋರ್ಸ್ ಹಗರಣವೇ? ಚೌಕೀದಾರ ಕಳ್ಳನಾದ ಕತೆಯೇ?
ಈಗಾಗಲೇ ನಡೆದಿರುವ ಬೆಳವಣಿಗೆಗಳು ಮತ್ತು ಬಹಿರಂಗವಾಗಿರುವ ದಾಖಲೆಗಳಂತೂ ಚೌಕೀದಾರನನ್ನೇ ಕಳ್ಳ ಅನ್ನುತ್ತಿದೆ. ಉಳಿದುದನ್ನು ಸುಪ್ರೀಮ್ ಕೋರ್ಟೇ ಹೇಳಲಿ.

ಆಡಳಿತ ಪಕ್ಷದ ಮನೆಯ ಬೆಕ್ಕು ಮತ್ತು...



ಕಳೆದವಾರ ಚುನಾವಣಾ ಆಯೋಗವು ನೀಡಿರುವತೀರ್ಪನ್ನು ವಿಶ್ಲೇಷಕರುಗಂಭೀರವಾಗಿ ಪರಿಗಣಿಸುವ ಬದಲು ಜೋಕ್ ಆಗಿ ಸ್ವೀಕರಿಸಿದ್ದಾರೆ. ಅದಕ್ಕೆಕಾರಣವೂ ಇದೆ.
ವಿಜ್ಞಾನಿಗಳು ಹಾರಿಸಿದ ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮುಂದೆ ಬಂದರು. ಟಿ.ವಿ. ವಾಹಿನಿಗಳ ಮೂಲಕ ಸುಮಾರು 40 ನಿಮಿಷಗಳ ಕಾಲ ದೇಶವನ್ನುದ್ದೇಶಿಸಿ ಮಾತಾಡಿದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಸಿಪಿಐಎಂ ಪಕ್ಷವು ಚುನಾವಣಾ ಮಂಡಳಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಚುನಾವಣಾ ಮಂಡಳಿಯು ಪರಿಶೀಲನಾ ತಂಡವೊಂದನ್ನು ರಚಿಸಿತು. ಅದರ ಆಧಾರದಲ್ಲಿ ಚುನಾವಣಾ ಮಂಡಳಿ ನೀಡಿರುವ ತೀರ್ಪು ಎಷ್ಟು ತಮಾಷೆಯ ಸ್ವರೂಪದಲ್ಲಿ ಇದೆಯೆಂದರೆ, ಆ ತೀರ್ಪಿಗೆ ಕೆಜಿ ಕ್ಲಾಸಿನ ಮಗುವೂ ನಗಬಹುದು. ‘ದೂರದರ್ಶನವು ಆ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿಲ್ಲ,ANI ನಿಂದ ಪಡೆದುಕೊಂಡು ಅದು ಪ್ರಸಾರ ಮಾಡಿದೆ’ ಎಂಬ ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದಿದೆ. ನಿಜವಾಗಿ, ಈ ತೀರ್ಪಿನಲ್ಲಿಯೇ ಶರಣಾಗತಿಯ ಭಾವವಿದೆ. ನರೇಂದ್ರ ಮೋದಿಯವರನ್ನು ಎದುರು ಹಾಕಿಕೊಳ್ಳಲು ಬರುವುದಿಲ್ಲ ಎಂಬ ಸಂದೇಶ ಇದೆ. ಅಂದಹಾಗೆ,
ಒಂದು ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗವು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದೆಯೇ ಅನ್ನುವ ಪ್ರಶ್ನೆಗೆ ಇಲ್ಲ ಅನ್ನುವುದೇ ಉತ್ತರ. ದೂರದರ್ಶನದಲ್ಲಿ ನೇರವಾಗಿ ಪ್ರಸಾರವಾದರೆ ಮಾತ್ರವೇ ಈ ದೇಶದ ಮತದಾರರು ಅಂಥ ಭಾಷಣದಿಂದ ಪ್ರಭಾವಿತಗೊಳ್ಳುವುದೇ? ನೇರವಾಗಿ ಪ್ರಸಾರ ಮಾಡುವ ಖಾಸಗಿ ಟಿ.ವಿ. ಚಾನೆಲ್‍ಗಳಿಂದ ಸಿಗ್ನಲ್‍ಗಳನ್ನು ಪಡೆದುಕೊಂಡು ಹಾಗೆಯೇ ಪ್ರಸಾರ ಮಾಡುವುದರಿಂದ ಪ್ರಭಾವದಲ್ಲಿ ಕುಂಠಿತ ಆಗುವುದೇ? ಪ್ರಶ್ನೆ ಇರುವುದು- ದೂರದರ್ಶನ ಪ್ರಧಾನಿಯವರ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿದೆಯೋ ಇಲ್ಲವೋ ಎಂಬುದಲ್ಲ. ಚುನಾವಣಾ ನೀತಿ-ಸಂಹಿತೆ ಜಾರಿಯಾದ ಬಳಿಕ ಅಂಥದ್ದೊಂದು ಭಾಷಣ ಮತದಾರರ ಮೇಲೆ ಪ್ರಭಾವ ಬೀರಬಹುದೋ ಇಲ್ಲವೋ ಎಂಬುದು. ನೀತಿ ಸಂಹಿತೆಯನ್ನು ಅಕ್ಷರಾರ್ಥವಾಗಿ ಪರಿಗಣಿಸುವುದಕ್ಕೂ ಆಶಯಾರ್ಥವಾಗಿ ಪರಿಗಣಿಸುವುದಕ್ಕೂ ನಡುವೆ ವ್ಯತ್ಯಾಸ ಇದೆ. ಅಕ್ಷರಾರ್ಥವು ಅನುಕೂಲ ಸಿಂಧು ತೀರ್ಪನ್ನು ನೀಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಶಯಾರ್ಥ ಹಾಗಲ್ಲ. ನೀತಿ ಸಂಹಿತೆಯ ಆಶಯ ಏನಿದೆಯೋ ಅದನ್ನು ಅರಿತುಕೊಂಡು ತೀರ್ಪು ನೀಡಲು ಅದು ಒತ್ತಾಯಿಸುತ್ತದೆ. ಹಾಗಂತ, ಚುನಾವಣಾ ಆಯೋಗದ ದೌರ್ಬಲ್ಯವನ್ನು ಎತ್ತಿ ಹಿಡಿಯುವ ಪ್ರಕರಣ ಇದೊಂದೇ ಅಲ್ಲ.
ಪಾಕಿಸ್ತಾನದಲ್ಲಿ ಸೆರೆಯಾದ ಭಾರತದ ವಿಂಗ್‍ ಕಮಾಂಡರ್‍ ಅಭಿನಂದನ್ ವರ್ಧಮಾನ್‍ರನ್ನು ಬಿಜೆಪಿ ಚುನಾವಣೆಗೆ ಬಳಸಿಕೊಂಡಿತು. ಅವರ ಬೃಹತ್ ಹೋರ್ಡಿಂಗ್‍ಗಳನ್ನು ಪ್ರದರ್ಶಿಸಿತು. ನೀತಿ ಸಂಹಿತೆಯ ಆಶಯವನ್ನು ಪರಿಗಣಿಸುವುದಾದರೆ ಇದು ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗ ಈ ವಿಷಯದಲ್ಲಿ ಎಷ್ಟು ಮೃದು ನಿಲುವನ್ನು ತಾಳಿತೆಂದರೆ, ‘ನೀವು ಹಾಗೆ ಮಾಡಬೇಡಿ’ ಎಂಬ ವಿನಂತಿಯನ್ನು ಮಾಡಿಕೊಂಡು ಕೈ ತೊಳೆದುಕೊಂಡಿತು.  ಚುನಾವಣಾ ಆಯೋಗ ದುರ್ಬಲಗೊಂಡಾಗ ಆಗುವ ಬೆಳವಣಿಗೆಗಳು ಇವು.
ಭಾರತೀಯ ಸೇನಾ ಪಡೆಯನ್ನು ಮೋದಿಯ ಸೇನೆ ಎಂದು ವ್ಯಾಖ್ಯಾನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಿಗೆ ಎಚ್ಚರಿಗೆ ಕೊಟ್ಟು ಬಿಡಲಾಯಿತೇ ಹೊರತು ಯಾವ ಶಿಸ್ತುಕ್ರಮವನ್ನೂ ಜರುಗಿಸಲಿಲ್ಲ. ಇನ್ನೊಂದೆಡೆ ವಿರೋಧ ಪಕ್ಷಗಳ ಕುರಿತು ಈ ಸಡಿಲ ಧೋರಣೆ ಕಾಣಿಸುತ್ತಿಲ್ಲ. ಪ್ರಧಾನಮಂತ್ರಿ ಕಿಸಾನ್‍ಯೋಜನೆಯನ್ವಯ, ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ನರೇಂದ್ರ ಮೋದಿಯವರಿಗೆ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗವು ಸಾಲ ಮನ್ನಾದ ಫಲಾನುಭವಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅವಕಾಶ ನೀಡಿಲ್ಲ ಎಂಬ ದೂರಿದೆ. ವಿರೋಧ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಆದಾಯ ತೆರಿಗೆ ಇಲಾಖೆಯ ಬಗ್ಗೆಯೂ ಚುನಾವಣಾ ಆಯೋಗ ಏನನ್ನೂ ಹೇಳುತ್ತಿಲ್ಲ. ನೀತಿಸಂಹಿತೆ ಜಾರಿಯಾದ ಬಳಿಕ ಏಕಮುಖವಾಗಿ ಹೀಗೆ ದಾಳಿ ಮಾಡುವುದು ಕಾನೂನು ಬದ್ಧವೇ ಎಂಬ ಪ್ರಶ್ನೆ ಖಂಡಿತ ಪ್ರಸ್ತುತ. ಇಂಥ ಪ್ರಶ್ನೆಗಳಿಗೆ ಟಿ.ಎನ್. ಶೇಷನ್‍ ಧೈರ್ಯದಿಂದ ಎದೆಯೊಡ್ಡಿದ್ದರು. ಚುನಾವಣಾ ಆಯೋಗವು ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆ ಎಂಬುದು ಈ ದೇಶಕ್ಕೆಗೊತ್ತಾದದ್ದೇ ಅವರಿಂದ. ಅವರುಚುನಾವಣಾ ಆಯೋಗಕ್ಕೆ ಹೊಸ ರೂಪವನ್ನು ಕೊಟ್ಟರು. ಉಗುರು-ಹಲ್ಲುಗಳನ್ನು ಉದುರಿಸಿಕೊಂಡು ಸಾಧು ಹುಲಿಯಂತಾಗಿದ್ದ ಆಯೋಗಕ್ಕೆಅವರು ಉಗುರು ಹಲ್ಲುಗಳನ್ನು ಮರಳಿಸಿದುದಷ್ಟೇ ಅಲ್ಲ, ಪ್ರಶ್ನಿಸಿದವರ ಉಗುರು-ಹಲ್ಲುಗಳನ್ನು ಕಿತ್ತು ಹಾಕಲೂ ಹಿಂಜರಿಯಲಿಲ್ಲ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಒಂದೊಂದೇ ಕಾರ್ಯಕ್ರಮಗಳನ್ನು ಆಡಳಿತ ಪಕ್ಷ ಮುನ್ನೆಲೆಗೆ ತರುತ್ತಿದೆ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರವುಳ್ಳ ಚುನಾವಣಾ ಆಯೋಗವು ಪ್ರಶ್ನಿಸದೇ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದರೆ, ಆಯೋಗ ಭಯದಲ್ಲಿದೆ ಎಂದೇ ಅರ್ಥ. ಚುನಾವಣೆ ಘೋಷಣೆಯಾದ ಬಳಿಕ ಯಾಕೆ ನಮೋ ಟಿ.ವಿ. ಪ್ರಸಾರವನ್ನು ಆರಂಭಿಸುತ್ತದೆ, ವೈಜ್ಞಾನಿಕ ಸಾಧನೆಯನ್ನು ಘೋಷಿಸುವ ನೆಪದಲ್ಲಿ ಯಾಕೆ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತಾಡುತ್ತಾರೆ, ಯಾಕೆ ಅವರ ಜೀವನಾಧಾರಿತ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ಪ್ರಶ್ನೆಗೆಉತ್ತರ ಅತ್ಯಂತ ಸ್ಪಷ್ಟ. ಮತದಾರರನ್ನು ಓಲೈಸುವುದು. ಅಕ್ಷರಗಳಲ್ಲಿ ಬರೆದಿಟ್ಟ ನೀತಿಸಂಹಿತೆಯಲ್ಲಿ ಇವೆಲ್ಲವನ್ನೂ ಯಥಾಪ್ರಕಾರ ನಮೂದಿಸಿಲ್ಲದೇ ಇರಬಹುದು. ಆದರೆ, ಆ ಅಕ್ಷರಗಳ ಆಶಯದಲ್ಲಿ ಖಂಡಿತ ಇವೆಲ್ಲ ಒಳಗೊಂಡಿರುತ್ತದೆ. ‘ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸು ಸಾಧಿಸಿರುವುದನ್ನು ನೆಪವಾಗಿಸಿಕೊಂಡು ದೇಶವನ್ನುದ್ದೇಶಿಸಿ ಮಾತಾಡುವುದು ಮತ್ತು ಆ ಮಾತನ್ನು ಖಾಸಗಿ ಚಾನೆಲ್‍ಗಳಿಂದ ಪಡೆದುಕೊಂಡು ದೂರದರ್ಶನ ಪ್ರಸಾರ ಮಾಡುವುದು ತಪ್ಪು’ ಎಂಬುದಾಗಿ ನೀತಿ-ಸಂಹಿತೆಯಲ್ಲಿ ಬರೆದಿಟ್ಟಿರುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಉಪಗ್ರಹ ನಿರೋಧಕ ಕ್ಷಿಪಣಿ ಉಡಾವಣೆ ಎಂಬುದು ಆಯಾ ಕಾಲದ ಬೆಳವಣಿಗೆ. ಪ್ರಧಾನಮಂತ್ರಿ ಕಿಸಾನ್‍ ಯೋಜನೆಯಾಗಲಿ, ರೈತರ ಸಾಲ ಮನ್ನಾವಾಗಲಿ ಆಯಾ ಸಂದರ್ಭದ ಯೋಜನೆಗಳೇ ಹೊರತು ನೀತಿ ಸಂಹಿತೆಯಲ್ಲಿ ಅಕ್ಷರಗಳಲ್ಲಿ ನೇರವಾಗಿ ಬರೆದಿಡಬಹುದಾದಂತಹ ವಿಷಯವಲ್ಲ. ಆದ್ದರಿಂದ,
      ನೀತಿ ಸಂಹಿತೆಯನ್ನು ಅಕ್ಷರಗಳ ಬದಲು ಆಶಯವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಟಿ.ಎನ್. ಶೇಷನ್ ಮಾಡಿದ್ದು ಇದನ್ನೇ. ಆವರೆಗೆ ಬರೇ ಅಕ್ಷರಗಳಲ್ಲಿ ಕಳೆದುಹೋಗಿದ್ದ ನೀತಿ ಸಂಹಿತೆಯನ್ನು ಅವರು ಆಶಯಾರ್ಥವಾಗಿ ಬದಲಿಸಿದ್ದರು. ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಎಲ್ಲದರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರು. ಸದ್ಯ ಅನಾಥವಾಗಿರುವುದು ಈ ಗುಣವೇ. ನಿರ್ದಾಕ್ಷಿಣ್ಯಎಂಬುದು ದಾಕ್ಷಿಣ್ಯಕ್ಕೆ ಬಿದ್ದಿದೆ. ಆಡಳಿತ ಪಕ್ಷದ ಮನೆಯ ಬೆಕ್ಕಿನಂತೆ ಚುನಾವಣಾ ಮಂಡಳಿ ವರ್ತಿಸುತ್ತಿದೆ. ಇದು ಕಳವಳಕಾರಿ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶದ ಚುನಾವಣಾ ಆಯೋಗವು ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಧೈರ್ಯವನ್ನು ಪ್ರದರ್ಶಿಸದೇ ಹೋದರೆ, ಆಡಳಿತ ಪಕ್ಷವು ಮುಂದೊಂದು ದಿನ ಚುನಾವಣಾ ಆಯೋಗವನ್ನು ತಮ್ಮ ಚುನಾವಣಾ ಕಚೇರಿಯಾಗಿ ಪರಿವರ್ತಿಸಿಬಿಟ್ಟೀತು.

ಉತ್ತರ ಕೊಡಿ ಪ್ರಧಾನಿಯವರೇ...



 ಬಿಜೆಪಿಗೆ ಓಟು ಹಾಕಬೇಡಿ ಎಂದು ಈ ದೇಶದ ಪ್ರಮುಖ 100 ಮಂದಿ ಸಿನಿಮಾ ನಿರ್ದೇಶಕರು ಮತದಾರರೊಂದಿಗೆ ವಿನಂತಿಸಿದ್ದಾರೆ. ನಿಜವಾಗಿ, ಇದೊಂದು ಅಭೂತಪೂರ್ವ ಘಟನೆ. 1977ರ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿದರೆ, ಉಳಿದಂತೆ ಈ ದೇಶದ ಚುನಾವಣೆಯ ಇತಿಹಾಸದಲ್ಲಿ ಸಿನಿಮಾ ಕ್ಷೇತ್ರದಿಂದ ಇಂಥದ್ದೊಂದು  ಬೇಡಿಕೆ ಈ ವರೆಗೆ ಕೇಳಿಬಂದಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಇಂಥದ್ದೊಂದು  ವಿನಂತಿಯನ್ನು ಯಾವುದೇ ಕ್ಷೇತ್ರದ ಪ್ರಮುಖರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಿಲ್ಲ. ಸದ್ಯದ ಪರಿಸ್ಥಿತಿ ಎಷ್ಟು ಆತಂಕಕಾರಿ ಅನ್ನುವುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ. ಕಳೆದ 5 ವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಮಾಡಿದ ಸಾಧನೆಗಳೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನೇ ಅಮುಖ್ಯಗೊಳಿಸುವ ರೀತಿಯಲ್ಲಿ ಪ್ರಧಾನಿ ಮೋದಿ ವರ್ತಿಸುತ್ತಿದ್ದಾರೆ. ತನ್ನ 5 ವರ್ಷಗಳ ಸಾಧನೆಯಾಗಿ ಪ್ರಧಾನಿ ತೋರಿಸುತ್ತಿರುವುದು ಉಪಗ್ರಹ ಉಡಾವಣೆಯನ್ನು. ಪಾಕಿಸ್ತಾನದ ಬಾಲಾಕೋಟ್‍ನ ಮೇಲಿನ ದಾಳಿಯನ್ನು ಮತ್ತು ಎರಡ್ಮೂರು ಸರ್ಜಿಕಲ್ ಸ್ಟ್ರೈಕ್‍ಗಳನ್ನು. ಇವರ ಮಾತು ಇವತ್ತು ಆರಂಭವಾಗುವುದೇ ಪಾಕಿಸ್ತಾನ್ ಎಂಬ ಉಲ್ಲೇಖದ ಮೂಲಕ. ಪಾಕಿಸ್ತಾನ್, ಹಿಂದೂಸ್ತಾನ್, ಸರ್ಜಿಕಲ್ ಸ್ಟ್ರೈಕ್, ರಾಷ್ಟ್ರೀಯ ಭದ್ರತೆ, ದೇಶಪ್ರೇಮ ಇತ್ಯಾದಿ ಇತ್ಯಾದಿ ಮಾತುಗಳೇ ಇವತ್ತು ಪ್ರಧಾನಿಯವರ ಬಂಡವಾಳ. ಇನ್ನು ಸಮಯ ಸಿಕ್ಕಿದರೆ ವಿರೋಧ ಪಕ್ಷಗಳನ್ನು ವ್ಯಂಗ್ಯ ಮಾಡುವುದು, ರಾಹುಲ್ ಗಾಂಧಿಯನ್ನು ಡಿಸ್‍ಲೆಕ್ಸಿಯಾ ರೋಗಪೀಡಿತ ಎಂದು ಅಣಕವಾಡುವುದು, ವಿರೋಧ ಪಕ್ಷಗಳ ಒಕ್ಕೂಟವನ್ನು ಶರಾಬ್ (ಅಮಲು) ಎಂದು ಹೀಗಳೆಯುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ, 130 ಕೋಟಿ ಜನಸಂಖ್ಯೆಯಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದ ವಿಷಯಗಳೇ ಇವು? 5 ವರ್ಷಗಳ ಹಿಂದೆ ಇದೇ ಮೋದಿಯವರು ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದರು. ಅದರ ಮೂಲಕ ಹಲವು ಭರವಸೆಗಳನ್ನು ನೀಡಿದ್ದರು. ವಿದೇಶಿ ನೇರ ಹೂಡಿಕೆಯನ್ನು (ಎಫ್‍ಡಿಎ) ಅವತ್ತು ಇದೇ ಮೋದಿಯವರು ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಆಧಾರ್ ಚೀಟಿಯನ್ನು ದೇಶವಿರೋಧಿ ಎಂಬಂತೆ ಬಿಂಬಿಸಿದ್ದರು. ಗ್ಯಾಸ್ ಸಿಲಿಂಡರ್ ನ  ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದನ್ನೂ ಸಂಚು ಎಂದು ಕರೆದಿದ್ದರು. ಇವುಗಳನ್ನು ಮನ್‍ಮೋಹನ್ ಸಿಂಗ್ ಸರಕಾರದ ಮಹಾ ಜನವಿರೋಧಿ ನೀತಿಗಳೆಂದು ಪಟ್ಟಿ ಮಾಡಿದ್ದ ಇದೇ ಬಿಜೆಪಿ ಇವತ್ತು ಏನು ಹೇಳುತ್ತಿದೆ? ವಿರೋಧ ಪಕ್ಷದಲ್ಲಿದ್ದಾಗ ಖಂಡತುಂಡವಾಗಿ ವಿರೋಧಿಸಿದ್ದ ಅವೇ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದಾಗ ನೀವೇಕೆ ಜಾರಿ ಮಾಡಿದಿರಿ ಎಂಬ ಭಾರತೀಯರ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಯಾರು, ಪ್ರಧಾನಿಯಲ್ಲವೇ? ಮತ್ತೇಕೆ ಅವರು ಈ ಬಗ್ಗೆ ಮಾತನ್ನೇ ಆಡುತ್ತಿಲ್ಲ? ನೋಟ್‍ಬ್ಯಾನ್ ಎಂಬುದು ಬಿಜೆಪಿಯ ಪ್ರಣಾಳಿಕೆಯಲ್ಲೇ ಇರಲಿಲ್ಲ. ಆದರೆ ಅಧಿಕಾರಕ್ಕೆ ಬಂದರೆ ಪ್ರತಿಯೋರ್ವ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ  ರೂಪಾಯಿ ಹಣವನ್ನು ಜಮಾ ಮಾಡುತ್ತೇನೆಂದು ಸ್ವತಃ ಮೋದಿಯವರೇ ಹೇಳಿದ್ದರು. ಆದರೆ ಪ್ರಣಾಳಿಕೆಯಲ್ಲಿ ಹೇಳದ ನೋಟ್‍ಬ್ಯಾನ್ ಅನ್ನು ಭಾರತೀಯರು ನಿದ್ದೆಗೆ ಸಜ್ಜಾಗುವ ವೇಳೆಯಲ್ಲಿ ಘೋಷಿಸಿದರು. ಮಾತ್ರವಲ್ಲ, 50 ದಿನಗಳಲ್ಲಿ ಉದ್ದೇಶಿತ ಫಲಿತಾಂಶ ಸಿಗದಿದ್ದರೆ ನನ್ನನ್ನು ನೇಣಿಗೆ ಹಾಕಿ ಎಂದು ಭಾವುಕರಾಗಿ ನುಡಿದರು. ದುರಂತ ಏನೆಂದರೆ, ಈ 50 ದಿನಗಳ ಒಳಗೆ 100 ಕ್ಕಿಂತಲೂ ಅಧಿಕ ಬಡ ಭಾರತೀಯ ನೇಣಿಗೋ ಆತ್ಮಹತ್ಯೆಗೋ ಶರಣಾದರು. ನೋಟನ್ನು ಬದಲಿಸಿಕೊಳ್ಳುವುದಕ್ಕಾಗಿ ಬ್ಯಾಂಕ್‍ನ ಎದುರು ಬಿಸಿಲಲ್ಲಿ ಕಾದು ಕಾದು ಸುಸ್ತಾದರು. ಈ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಅಡ್ಡಪರಿಣಾಮವನ್ನು ಬೀರಿದ ಕ್ರಮ ಇದು. ಈ ದೇಶದ ಆರ್ಥಿಕ ತಜ್ಞರು ಆ ನೋಟ್ ಬ್ಯಾನನ್ನು ತುಘಲಕ್ ನೀತಿ ಎಂದು ಖಂಡಿಸಿದರು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನಾಶವಾದುವು. ಉದ್ಯೋಗ ಸೃಷ್ಟಿ ನಾಸ್ತಿಯಾಯಿತು. ಇರುವ ಉದ್ಯೋಗಗಳೂ ನಾಶದ ಭೀತಿಗೆ ಒಳಗಾದುವು. ವ್ಯಾಪಾರ-ವಹಿವಾಟುಗಳು ತೀರಾ ತೀರಾ ತಳಮಟ್ಟಕ್ಕೆ ಕುಸಿದುವು. ಜನರು ಕಂಗಾಲಾದರು. ವಿಷಾದ ಏನೆಂದರೆ, 50 ದಿನಗಳ ವಾಯಿದೆಯನ್ನು ನೀಡಿದ್ದ ಪ್ರಧಾನಿಯವರು ಬಳಿಕ ಆ ವಾಯಿದೆಯನ್ನೇ ಮರೆತರು. ನೋಟ್‍ಬ್ಯಾನ್‍ನಿಂದ ಗಳಿಸಿದ್ದೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನು ಕಾಶ್ಮೀರದ ಕಲ್ಲು, ನಕ್ಸಲ್ ಭಯೋತ್ಪಾದನೆ ಇತ್ಯಾದಿಗಳ ಮೂಲಕ ತೇಲಿಸಿ ಬಿಡತೊಡಗಿದರು. ನೋಟ್‍ಬ್ಯಾನ್ ಮಾಡುವಾಗ ಅವರು ಈ ಕಾರಣಗಳನ್ನು ನೀಡಿಯೇ ಇರಲಿಲ್ಲ. ಈ ಕಾರಣಗಳೂ ಸುಳ್ಳಾದಾಗ ಪ್ರಶ್ನಿಸುವುದನ್ನೇ ದೇಶದ್ರೋಹ ಅಂದರು. ಆದ್ದರಿಂದಲೇ, ಅವರ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಮೂಡುವುದು. ನಿಜವಾಗಿ, ಸಾಮಾನ್ಯ ನಾಗರಿಕರಿಗೆ ಒಳಿತು ಮಾಡುವ ಉದ್ದೇಶದಿಂದ ಅವರು ನೋಟ್‍ಬ್ಯಾನ್ ಮಾಡಿರಲಿಲ್ಲ. ಬದಲು ಅಂಬಾನಿ, ಅದಾನಿ, ಮಲ್ಯ, ಮೋದಿ ಮತ್ತು ಬಿಜೆಪಿಗೆ ಹಣ (ಪಾರ್ಟಿ ಫಂಡ್) ಒದಗಿಸುವ ಆಪ್ತರಿಗೆ ನೆರವಾಗುವ ಉದ್ದೇಶವೇ ನೋಟ್‍ಬ್ಯಾನ್‍ನ ಮುಖ್ಯ ಗುರಿಯಾಗಿತ್ತು. ಇದೇವೇಳೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಭಾರತೀಯ ಖಾತೆಗೆ ಜಮಾ ಮಾಡುವ ಹೊಣೆಗಾರಿಕೆಯಿಂದ ಅವರು ನುಣುಚಿಕೊಂಡರು. ಬಹುಶಃ, ಇದಕ್ಕೂ ಈ ಉದ್ಯಮಿಗಳೇ ಕಾರಣ ಎಂದೇ ಹೇಳಬೇಕಾಗುತ್ತದೆ. ವಿದೇಶಿ ಬ್ಯಾಂಕ್‍ಗಳಲ್ಲಿ ಕಪ್ಪು ಹಣವಿರುವುದು ಬಡ ಭಾರತೀಯರದ್ದಲ್ಲ. ಬಿಜೆಪಿಗೆ ಹಣ ಒದಗಿಸುವ ಉದ್ಯಮಿಗಳದ್ದು. ಒಂದುವೇಳೆ, ಅದನ್ನು ಭಾರತಕ್ಕೆ ಮರಳಿಸುವುದೆಂದರೆ, ಈ ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವುದು ಎಂದೇ ಅರ್ಥ. ಹೀಗೆ ಎದುರು ಹಾಕಿಕೊಂಡರೆ ಮುಂದೆ ಪಾರ್ಟಿ ಫಂಡ್ ಅಲಭ್ಯವಾಗುತ್ತದೆ. ಫಂಡ್ ಅಲಭ್ಯವಾದರೆ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಜನರಿಗೆ ವಚನಭಂಗ ಆದರೂ ತೊಂದರೆಯಿಲ್ಲ, ಶ್ರೀಮಂತರಿಗೆ ತೊಂದರೆಯಾಗಬಾರದು ಎಂಬ ನಿಲುವಿಗೆ ಅವರು ಅಂಟಿಕೊಂಡರು.
ಸದ್ಯ, ಈ ದೇಶದಲ್ಲಿ ಕಳೆದ 40 ವರ್ಷಗಳಲ್ಲೇ  ಅತ್ಯಂತ ಗರಿಷ್ಠತಮ ನಿರುದ್ಯೋಗ ಸಮಸ್ಯೆಯಿದೆ. ಹಾಗೆಯೇ ಕೇಂದ್ರ ಸರಕಾರದ ಆಡಳಿತಾಂಗದಲ್ಲಿ 77 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರತಿ ಅರ್ಧ ಗಂಟೆಗೊಮ್ಮೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ, ಇನ್ನೊಂದೆಡೆ ರೈತರಿಗೆ ವಿಮೆ ನೀಡುವ ಕಂಪೆನಿ 10 ಸಾವಿರ ಕೋಟಿ ಲಾಭವನ್ನು ತೋರಿಸಿದೆ. ಈ ಹಿಂದೆ 250 ರೂಪಾಯಿಗೆ ಅಗತ್ಯದ ಎಲ್ಲ ಟಿವಿ ಚಾನೆಲ್‍ಗಳನ್ನು ವೀಕ್ಷಿಸುತ್ತಿದ್ದ ಸಾಮಾನ್ಯ ಭಾರತೀಯನೊಬ್ಬ ಇವತ್ತು ಅವೇ ಚಾನೆಲ್‍ಗಳನ್ನು ಪಡೆಯಬೇಕಾದರೆ  ಕೇಬಲ್ ನಿರ್ವಾಹಕರಿಗೆ ದುಪ್ಪಟ್ಟು ಹಣ ಪಾವತಿಸಬೇಕಾಗಿದೆ. ಬೋಫೋರ್ಸ್‍ಗಿಂತ ಬಹುದೊಡ್ಡ ಹಗರಣವಾಗಿ ರಫೇಲ್ ಇವತ್ತು ದೇಶದ ಮುಂದಿದೆ. 1990ರ ಬಳಿಕ ಅತ್ಯಂತ ಹೆಚ್ಚಿನ ಅಶಾಂತ ಸ್ಥಿತಿಗೆ ಕಾಶ್ಮೀರ ತುತ್ತಾಗಿದೆ. ಅತ್ಯಂತ ಬಿಗಿ ಭದ್ರತೆಯ ಪುಲ್ವಾಮದಲ್ಲೇ  ನಮ್ಮ 40 ಯೋಧರ ಪ್ರಾಣಾಹುತಿ ನಡೆದಿದೆ. ಗುಂಪುಹತ್ಯೆ, ಥಳಿತ, ಅತ್ಯಾಚಾರ, ಆಹಾರ ವಸ್ತುಗಳ ಬೆಲೆ ಏರಿಕೆ, ತೈಲ ಬೆಲೆಯಲ್ಲಿ ಹೆಚ್ಚಳ ಇತ್ಯಾದಿಗಳಿಗೆ ತಡೆ ಹಾಕಲು ಪ್ರಧಾನಿಯವರಿಗೆ ಸಾಧ್ಯವಾಗಿಲ್ಲ. ನಿಜವಾಗಿ, ಮೋದಿಯವರು ಚುನಾವಣಾ ಸಭೆಗಳನ್ನು ಉದ್ದೇಶಿಸಿ ಈ ವಿಷಯಗಳ ಬಗ್ಗೆ ತನ್ನ ಸ್ಪಷ್ಟೀಕರಣಗಳನ್ನು ನೀಡಬೇಕಾಗಿತ್ತು. ತಾನೆಷ್ಟು ಉದ್ಯೋಗವನ್ನು ಸೃಷ್ಟಿಸಿದೆ, ಉಜ್ವಲ ಯೋಜನೆ ಎಷ್ಟು ಯಶಸ್ವಿ, ತಾನೇ ವಿರೋಧಿಸಿದ್ದ ಆಧಾರ್, ಎಫ್‍ಡಿಎ, ಸಬ್ಸಿಡಿ ಹಣ ನೇರ ವರ್ಗಾವಣೆ ಇತ್ಯಾದಿಗಳಲ್ಲಿ ನಿಲುವು ಬದಲಿಸಿದ್ದು ಯಾತಕ್ಕಾಗಿ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿತ್ತು. ತನ್ನ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಡುವುದು ಮತ್ತು ಆ ಮೂಲಕ ಮತ್ತೊಂದು ಅವಧಿಗೆ ಚುನಾಯಿಸುವಂತೆ ಕೇಳಿಕೊಳ್ಳುವುದು- ಇದು ಮೋದಿ ಎಂದಲ್ಲ ಯಾವುದೇ ಆಡಳಿತ ಪಕ್ಷದ ಸಹಜ ಆಯ್ಕೆಯಾಗಬೇಕು. ಮೋದಿಯವರು ಹೀಗೆ ಮಾಡುತ್ತಿಲ್ಲ ಎಂದಾದರೆ ಅವರಲ್ಲಿ ಹೇಳಿಕೊಳ್ಳುವುದಕ್ಕೆ ಸಾಧನೆಗಳಿಲ್ಲ ಎಂದೇ ಅರ್ಥ. ಕಳೆದ 5 ವರ್ಷಗಳಲ್ಲಿ ಅವರ ಪ್ರಮುಖ ಸಾಧನೆ ಎಂದರೆ ಮಾತು ಮಾತ್ರ. ಒಳ್ಳೆಯ ಭಾಷಣಕಾರರಾಗಿ ಅವರು ಕಳೆದ 5 ವರ್ಷಗಳಲ್ಲಿ ದೇಶದ ಗಮನ ಸೆಳೆದರು. ಧಾರಾಳ ವಿದೇಶ ಸುತ್ತಿದರು. ವಿರೋಧ ಪಕ್ಷಗಳನ್ನು ತಮಾಷೆ ಮಾಡಿದರು. ಮಾತ್ರವಲ್ಲ, ನೆರೆಯ ಬಹುತೇಕ ಎಲ್ಲ ರಾಷ್ಟ್ರಗಳೊಂದಿಗೆ ದ್ವೇಷ ಕಟ್ಟಿಕೊಂಡರು. ಎಲ್ಲಿಯವರೆಗೆಂದರೆ, ಮಸೂದ್ ಅಝರನ ವಿಷಯದಲ್ಲಿ ಚೀನಾದ ಬೆಂಬಲ ಗಳಿಸುವುದಕ್ಕೂ ಅವರು ವಿಫಲರಾದರು. ನಿಜವಾಗಿ,
ದೇಶದ ಪ್ರಮುಖ 100 ಮಂದಿ ಚಿತ್ರ ನಿದೇರ್ಶಕರ ವಿನಂತಿಗೆ ಬಲ ಬರುವುದು ಈ ಎಲ್ಲ ಕಾರಣಗಳಿಂದಲೇ. ಅವರು ನಿಜವನ್ನೇ ಹೇಳಿದ್ದಾರೆ. ನರೇಂದ್ರ ಮೋದಿ ವಿಫಲ ಪ್ರಧಾನಿ.

ಸನ್ಮಾರ್ಗ: ಸತ್ಯನಿಷ್ಠೆಗೆ 41 ವರ್ಷಗಳು



ಮಾಧ್ಯಮವು ಉದ್ಯಮ ಸ್ವರೂಪವನ್ನು ಪಡೆದಿರುವ ಈ ದಿನಗಳಲ್ಲಿ ಸತ್ಯನಿಷ್ಠೆ, ನ್ಯಾಯನಿಷ್ಠೆ, ಮೌಲ್ಯನಿಷ್ಠೆ ಇತ್ಯಾದಿಗಳನ್ನೆಲ್ಲ ಮಾಧ್ಯಮಗಳಿಂದ ಬಯಸುವುದು ಮತ್ತು ಹುಡುಕುವುದು ಬಾಲಿಶವಾಗಿ ಕಾಣಿಸುತ್ತದೆ. ಉದ್ಯಮವೊಂದರ ಬಹುಮುಖ್ಯ ಗುರಿಯೇನೆಂದರೆ, ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದು, ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪುವುದು ಮತ್ತು ಗ್ರಾಹಕರ ಬಯಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಮತ್ತು ಲಾಭಾಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪನ್ನದಲ್ಲಿ ಮಾರ್ಪಾಡುಗಳನ್ನು ಮಾಡುವುದು. ಒಂದು ಉತ್ಪನ್ನವು ರುಚಿಕಟ್ಟಾಗಿಲ್ಲ ಎಂಬುದು ಗಮನಕ್ಕೆ ಬಂದಾಗ ಅದನ್ನು ರುಚಿಕಟ್ಟಾಗಿಸುವ ರಾಸಾಯನಿಕಗಳನ್ನು ಬಳಸಿ ಗ್ರಾಹಕರಿಗೆ ರುಚಿಕಟ್ಟಾಗಿಸಿ ವಿತರಿಸುವುದು. ಇಲ್ಲಿ ಗ್ರಾಹಕರ ಆರೋಗ್ಯಕ್ಕಿಂತ ಉತ್ಪನ್ನದ ಮಾರಾಟವೇ ಬಹುಮುಖ್ಯ ಗುರಿ. ಇವತ್ತು ಗದ್ದೆಯಿಂದ ಹಿಡಿದು ಕೋಳಿಫಾರಮ್‍ನವರೆಗೆ ಈ ಬಗೆಯ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿವೆ. ನಾಗರಿಕರಲ್ಲಿ ಅಕ್ಕಿ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳು, ತರಕಾರಿಗಳು ಮತ್ತು ಹಣ್ಣು ಹಂಪಲುಗಳು ಮುಂತಾದ ಎಲ್ಲವುಗಳ ಬಗ್ಗೆಯೂ ಸಂದೇಹಗಳಿವೆ. ತಾವು ಬಳಸುವ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕಗಳಿವೆಯೇ ಎಂಬ ಭಯದೊಂದಿಗೆ ಮತ್ತು ಬಳಸದೇ ಉಪಾಯವಿಲ್ಲ ಎಂಬ ಅನಿವಾರ್ಯತೆಯೊಂದಿಗೆ ಬದುಕುತ್ತಿದ್ದಾರೆ. ದುರಂತ ಏನೆಂದರೆ,

ಇಂಥದ್ದೊಂದು  ಇಕ್ಕಟ್ಟಿನ ಸ್ಥಿತಿ ಮಾಧ್ಯಮ ಕ್ಷೇತ್ರದ ಬಗ್ಗೆಯೂ ತಲೆದೋರಿರುವುದು. ಮಾಧ್ಯಮ ರಂಗವು ಇವತ್ತು ವಿಶ್ವಾಸಾರ್ಹತೆಯ ಅತ್ಯಂತ ಕೆಳಮಟ್ಟಕ್ಕೆ ತಲುಪಿಬಿಟ್ಟಿದೆ. ಪತ್ರಿಕೆಗಳು ಮತ್ತು ಟಿ.ವಿ.ಗಳನ್ನು ಜನರು ಸಂದೇಹದ ಮೊನೆಯಲ್ಲಿಟ್ಟೇ ತೂಗುತ್ತಿದ್ದಾರೆ. ಯಾವುದೇ ಒಂದು ಸುದ್ದಿ ಯಾವ ಯಾವ ಪತ್ರಿಕೆಯಲ್ಲಿ ಹೇಗ್ಹೇಗೆ ಪ್ರಕಟವಾಗಬಹುದು ಮತ್ತು ಯಾವ ಚಾನೆಲ್‍ನಲ್ಲಿ ಯಾವ್ಯಾವ ರೀತಿ ಬಿಂಬಿಸಲ್ಪಡಬಹುದು ಎಂಬುದನ್ನು ಮೊದಲಾಗಿಯೇ ಕಣಿ ಹೇಳುವಷ್ಟು ಮಾಧ್ಯಮ ರಂಗದ ಬಗ್ಗೆ ಜನರು ಭ್ರಮನಿರಸರಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಇಂಥ ಸ್ಥಿತಿಯಲ್ಲಿ, ಸತ್ಯನಿಷ್ಠೆ ಮತ್ತು ಮೌಲ್ಯನಿಷ್ಠೆಯನ್ನು ಪ್ರತಿಪಾದಿಸುವ ಯಾವುದೇ ಪತ್ರಿಕೆಯ ಮುಂದೆ ಹೆಚ್ಚು ಆಯ್ಕೆಗಳಿರುವುದಿಲ್ಲ. ಸನ್ಮಾರ್ಗ ಪ್ರತಿ ಸಂದರ್ಭದಲ್ಲೂ ಇಂಥ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ ಮತ್ತು ಏನೇ ಎದುರಾದರೂ ಸತ್ಯನಿಷ್ಠೆ ಮತ್ತು ಮೌಲ್ಯನಿಷ್ಠೆಯೊಂದಿಗೆ ರಾಜಿಯಾಗಲಾರೆ ಎಂಬ ತನ್ನ ಮೂಲಭೂತ ತತ್ವವನ್ನು ಎತ್ತಿ ಹಿಡಿಯುತ್ತಲೇ ಸಾಗಿದೆ. ಪತ್ರಿಕೆಗೆ 41 ವರ್ಷಗಳು ಪೂರ್ಣಗೊಂಡು 42ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲೂ ಪತ್ರಿಕೆ ಇದೇ ಭರವಸೆಯನ್ನು ಮತ್ತೊಮ್ಮೆ ಓದುಗರ ಮುಂದಿಡುತ್ತಿದೆ.

1973 ಎಪ್ರಿಲ್ 24ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಂಡಾಗ ಮಾರುಕಟ್ಟೆಯಲ್ಲಿ ಪತ್ರಿಕೆಗಳಿದ್ದುದು ಕಡಿಮೆ. ಅದರಲ್ಲೂ ಸನ್ಮಾರ್ಗದಂಥ ಪತ್ರಿಕೆಗಳು ಮತ್ತೂ ಕಡಿಮೆ. ಇವತ್ತಿನಂತೆ ಸಾರಿಗೆ ವ್ಯವಸ್ಥೆ, ಸಂವಹನ ಸೌಲಭ್ಯಗಳು ಲಭ್ಯವಿಲ್ಲದಿದ್ದ 41 ವರ್ಷಗಳ ಹಿಂದಿನ ಕಾಲದಲ್ಲಿ ಪತ್ರಿಕೆಯೊಂದನ್ನು ಪ್ರಾರಂಭಿಸುವುದೇ ಬಹುದೊಡ್ಡ ಸಾಹಸ. ವಾಟ್ಸಾಪ್, ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂ ಇತ್ಯಾದಿ ಇತ್ಯಾದಿ ಇಂಟರ್‍ನೆಟ್ ಆಧಾರಿತ ಆಧುನಿಕ ಸಂವಹನ ಸೌಲಭ್ಯಗಳು ಅಂದಿನ ಕಾಲಕ್ಕೆ ಅಪರಿಚಿತವಾಗಿತ್ತು. ಇವತ್ತಿನಂಥ ಮುದ್ರಣ ವ್ಯವಸ್ಥೆಗಳೂ ಅಂದು ಇರಲಿಲ್ಲ. ಅಕ್ಷರಸ್ಥರೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಪತ್ರಿಕೆಯನ್ನು ಸಾಗಿಸಬೇಕಾದುದಕ್ಕೆ ಇರುವ ತೊಡಕುಗಳೂ ಅನೇಕ. ಅಲ್ಲದೇ,

ಸತ್ಯ, ನ್ಯಾಯ, ಮೌಲ್ಯ ಇತ್ಯಾದಿ ದುಬಾರಿ ತತ್ವಗಳನ್ನು ಧ್ಯೇಯವಾಗಿಸಿಕೊಂಡು ಮಾರುಕಟ್ಟೆಗೆ ಬರುವ ಪತ್ರಿಕೆಯೊಂದು ಇತರ ಪತ್ರಿಕೆಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. `ಒಂದೋ ನನ್ನಂತಾಗು ಇಲ್ಲವೇ ಉಸಿರುಗಟ್ಟಿ ಸಾಯು' ಎಂಬ ಸವಾಲನ್ನು ಅವು ಒಡ್ಡುತ್ತಲೇ ಇರುತ್ತವೆ. ಸನ್ಮಾರ್ಗಕ್ಕೆ ಕಳೆದ 4 ದಶಕಗಳುದ್ದಕ್ಕೂ ಈ ಸವಾಲು ಎದುರಾಗುತ್ತಲೇ ಬಂದಿದೆ. ಮಾರುಕಟ್ಟೆಯಲ್ಲಿರುವ ಪತ್ರಿಕೆಗಳನ್ನು ಮತ್ತು ಅವುಗಳ ದರಗಳನ್ನು ನೋಡಿಕೊಂಡು ಸನ್ಮಾರ್ಗವನ್ನು ತುಲನೆ ಮಾಡುವವರಿದ್ದಾರೆ. ಅವುಗಳ ಸೌಂದರ್ಯಕ್ಕೆ ಮಾರು ಹೋಗಿ ಸನ್ಮಾರ್ಗವನ್ನು ತೂಗುವವರಿದ್ದಾರೆ. ಅವುಗಳ ಪುಟಗಳನ್ನು ಲೆಕ್ಕ ಹಾಕಿಕೊಂಡು ಸನ್ಮಾರ್ಗವನ್ನು ಅಳೆಯುವವರಿದ್ದಾರೆ. ಹಾಗಂತ ಇವೆಲ್ಲ ತಪ್ಪೂ ಅಲ್ಲ, ಅಸಹಜವೂ ಅಲ್ಲ. ಮಾಧ್ಯಮ ರಂಗವು ತನ್ನ ನಿಷ್ಠೆಯನ್ನು ಮೌಲ್ಯದ ಬದಲು ಹಣದ ಮೇಲೆ ಕೇಂದ್ರೀಕರಿಸಿರುವಾಗ ಓದುಗರೂ ಅದರಿಂದ ಪ್ರಭಾವಿತಗೊಳ್ಳುವುದು ಸಹಜ. ಆದರೆ,

ಸನ್ಮಾರ್ಗ ಅವುಗಳಂತೆ ಅಲ್ಲ. ಸನ್ಮಾರ್ಗವನ್ನು ಪ್ರಕಟಿಸುವಾಗ ಇದ್ದ ಧ್ಯೇಯ ಏನೆಂದರೆ, ಸತ್ಯಕ್ಕೆ ನಿಷ್ಠವಾಗಿರುವ ಸುದ್ದಿ-ವಿಶ್ಲೇಷಣೆಗಳು ಜನರಿಗೆ ತಲುಪಬೇಕು ಎಂಬುದಾಗಿತ್ತು ಮತ್ತು ಮೌಲ್ಯವನ್ನು ಮೆಚ್ಚುವ ಹಾಗೂ ಪ್ರಾಮಾಣಿಕತೆಗೆ ನಿಷ್ಠವಾಗಿರುವ ಸಮಾಜವನ್ನು ಕಟ್ಟುವುದು ಆಗಿತ್ತು. ನಿಜವಾಗಿ, ಇಂಥದ್ದೊಂದು ಧ್ಯೇಯವು ಕೆಲವು ದುಬಾರಿ ಷರತ್ತುಗಳನ್ನು ವಿಧಿಸುತ್ತದೆ. ಮದ್ಯಪಾನದ ಜಾಹೀರಾತನ್ನು ಒಂದು ಪುಟದಲ್ಲಿ ಪ್ರಕಟಿಸಿ ಇನ್ನೊಂದು ಪುಟದಲ್ಲಿ ಮದ್ಯವಿರೋಧಿ ಲೇಖನವನ್ನು ಪ್ರಕಟಿಸುವುದಕ್ಕೆ ಈ ಷರತ್ತು ಅನುಮತಿಸುವುದಿಲ್ಲ. ಬಡ್ಡಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಡ್ಡಿ ಆಧಾರಿತ ಬ್ಯಾಂಕ್‍ನ ಜಾಹೀರಾತನ್ನು ಪ್ರಕಟಿಸುವುದು ಈ ಷರತ್ತಿನ ಪ್ರಕಾರ ಅಪರಾಧ. ಕೋಮುವಾದವನ್ನು ಧರ್ಮದ ಹಂಗಿಲ್ಲದೇ ಖಂಡಿಸುವುದು, ಸೌಹಾರ್ದತೆಯನ್ನು ಉಳಿಸಿ ಬೆಳೆಸುವುದಕ್ಕೆ ಆದ್ಯತೆ ಕೊಡುವುದು; ಅನ್ಯಾಯ, ಅಕ್ರಮ, ಅತ್ಯಾಚಾರ, ಹತ್ಯಾಕಾಂಡ ಇತ್ಯಾದಿಗಳನ್ನು ಧರ್ಮಾಧಾರಿತವಾಗಿ ನೋಡದೇ ಇರುವುದು; ದೇಶದ ಒಳಿತು ಮತ್ತು ಸಮಾಜದ ಒಳಿತಿಗೆ ಒತ್ತು ಕೊಟ್ಟು ಬರೆಯುವುದು; ಸರ್ವಧರ್ಮಗಳೂ ಒಪ್ಪುವ ಕೆಡುಕುಗಳ ನಿರ್ಮೂಲನೆಗೆ ನಾಗರಿಕ ಮನಸ್ಸುಗಳನ್ನು ಸಜ್ಜುಗೊಳಿಸುವುದು; ಭ್ರಷ್ಟಾಚಾರ, ಲೈಂಗಿಕ ಅರಾಜಕತೆ, ಜನಾಂಗೀಯತೆ, ಅಸಮಾನತೆ, ಅಸ್ಪೃಶ್ಯತೆ, ಮಹಿಳಾ ಕಡೆಗಣನೆ, ಅಂಧವಿಶ್ವಾಸ ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ರಾಜಿಮಾಡಿಕೊಳ್ಳುವುದಕ್ಕೂ ಈ ಷರತ್ತು ಅವಕಾಶ ನೀಡುವುದಿಲ್ಲ. ಇದರ ಜೊತೆಗೇ ಇದ್ದ ಇನ್ನೊಂದು ಪ್ರಮುಖ ಷರತ್ತು ಏನೆಂದರೆ, ಜನರಿಗೆ ಅವರ ಬದುಕಿನ ನೈಜ ಉದ್ದೇಶವನ್ನು ಮನವರಿಕೆ ಮಾಡಿಸುವುದು ಮತ್ತು ಅವರ ನೈಜ ಒಡೆಯನನ್ನು ಪರಿಚಯಿಸುವುದು. ನಿಜವಾಗಿ,

ಯಾವುದೇ ಪತ್ರಿಕೆಯ ಪಾಲಿಗೆ ಈ ಬಗೆಯ ಷರತ್ತುಗಳು ಮೌಂಟ್ ಎವರೆಸ್ಟನ್ನು ಏರುವಷ್ಟೇ ಸವಾಲಿನದ್ದು. ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಈ ಸವಾಲನ್ನು ಮೀರಿ ಬೆಳೆಯುವುದಕ್ಕೆ ಪ್ರಯತ್ನಿಸುತ್ತಲೇ ಇದೆ. ಮಾತ್ರವಲ್ಲ, ಸತ್ಯಕ್ಕೆ ನಿಷ್ಠವಾದ ಪತ್ರಿಕೆಯೊಂದು ದೀರ್ಘಕಾಲ ಉಳಿಯುವುದಕ್ಕೂ ಸಾಧ್ಯ ಅನ್ನುವುದನ್ನು ಈ ಕಳೆದ ನಾಲ್ಕು ದಶಕಗಳಲ್ಲಿ ಸಾಬೀತುಪಡಿಸುತ್ತಲೂ ಇದೆ. ಆದರೆ,

ಮಾಧ್ಯಮ ಕ್ಷೇತ್ರದಲ್ಲಿ ಇವತ್ತು ಆಗಿರುವ ಅಭೂತಪೂರ್ವ ಬದಲಾವಣೆಗಳು ಮೌಲ್ಯನಿಷ್ಠೆಗೆ ಬದ್ಧವಾಗಿರುವ ಯಾವುದೇ ಪತ್ರಿಕೆಯ ಪಾಲಿಗೂ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ ಎಂಬುದೂ ಸುಳ್ಳಲ್ಲ. ಸತ್ಯ, ನ್ಯಾಯ, ಮೌಲ್ಯ ಇತ್ಯಾದಿ ತತ್ವಗಳನ್ನು ಪ್ರತಿಪಾದಿಸುತ್ತಾ ಮತ್ತು ಅದಕ್ಕೆ ಬದ್ಧತೆ ತೋರುತ್ತಾ ಪ್ರಕಟವಾಗುವ ಯಾವ ಪತ್ರಿಕೆಯೂ ಸುರಕ್ಷಿತವಲ್ಲ ಎಂಬ ಸನ್ನಿವೇಶವನ್ನು ಮಾಧ್ಯಮ ಕ್ಷೇತ್ರದ ಇವತ್ತಿನ ‘ರಾಜಿ’ ಮನೋಭಾವವು ಸೃಷ್ಟಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸನ್ಮಾರ್ಗ ಸತ್ಯನಿಷ್ಠರಾದ ಓದುಗರ ಮೇಲೆಯೇ ಭರವಸೆ ಇರಿಸುತ್ತದೆ. ಸನ್ಮಾರ್ಗ ಜನರ ಪತ್ರಿಕೆ. ಲಾಭ ಈ ಪತ್ರಿಕೆಯ ಉದ್ದೇಶ ಅಲ್ಲ. ಸ್ವಸ್ಥ ಮತ್ತು ಸಂತುಲಿತ ಸಮಾಜದ ನಿರ್ಮಾಣವೇ ಈ ಪತ್ರಿಕೆಯ ಪಾಲಿನ ಲಾಭ. ಆದ್ದರಿಂದ, ಸನ್ಮಾರ್ಗವನ್ನು ಖರೀದಿಸುವುದು ಮತ್ತು ನಿಮ್ಮವರಿಗೂ ಪರಿಚಯಿಸುವುದೇ ಈ ಲಾಭದ ವ್ಯವಹಾರದಲ್ಲಿ ನೀವು ಹೂಡಬಹುದಾದ ಅತ್ಯುತ್ತಮ ಬಂಡವಾಳ. ಈ ಹೂಡಿಕೆ ನಿಮಗೆ ದುಬಾರಿಯಾಗದು ಎಂಬ ನಿರೀಕ್ಷೆ ನಮ್ಮದು. ಎಲ್ಲರಿಗೂ 42ನೇ ವರ್ಷದ ಶುಭಾಶಯಗಳು.

ಸುಳ್ಯದ ರೋಹಿತಾಶ್ವ ಹೇಳುವ ವೃದ್ಧಾಪ್ಯದ ಕತೆ

ಮನುಷ್ಯರೊಳಗಿರುವ ಕೌಟುಂಬಿಕ ಮತ್ತು ಮಾನವೀಯ ಸಂಬಂಧಗಳು ಬಿರುಕು ಬಿಡುತ್ತಿರುವುದಕ್ಕೆ ಏನು ಕಾರಣ, ಯಾರು ಕಾರಣ? ಅಪ್ಪ-ಅಮ್ಮ, ಮಕ್ಕಳು, ಮೊಮ್ಮಕ್ಕಳು, ಸಹೋದರ-ಸಹೋದರಿಯರು ಮುಂತಾದವರ ಮಧ್ಯೆ ಕರುಳಬಳ್ಳಿ ಸಂಬಂಧ ಇದೆ. ಈ ಸಂಬಂಧಗಳು ನೆಲೆಗೊಳ್ಳುವುದಕ್ಕೆ ಹಣ ಕಾರಣವಲ್ಲ. ಪತಿಯನ್ನು ಪತ್ನಿ ಮತ್ತು ಪತ್ನಿಯನ್ನು ಪತಿ ಪ್ರೀತಿಸುವುದು, ಆದರಿಸುವುದು ಮತ್ತು ಕಾಳಜಿ ತೋರುವುದೆಲ್ಲ ಹಣಯೇತರ ಕಾರಣಕ್ಕಾಗಿ. ಸಹೋದರ-ಸಹೋದರಿಯರ ನಡುವಿನ ಸಂಬಂಧಗಳೂ ಹಾಗೆಯೇ. ಅದರ ಹಿಂದೆ ಭಾವನಾತ್ಮಕತೆಯಿದೆ. ರಕ್ತ ಸಂಬಂಧದ ಕತೆಯಿದೆ. ಒಬ್ಬರಿಗೊಬ್ಬರು ಆದರಿಸಿಕೊಂಡು ಮತ್ತು ಅವಲಂಬಿಸಿಕೊಂಡು ಬದುಕುವ ಸಹಜತೆಯಿದೆ. ಆದರೆ, ಇವತ್ತಿನ ದಿನಗಳಲ್ಲಿ ಈ ಸಂಬಂಧಗಳಿಗೂ ಸಂಚಕಾರ ಬಂದಿರುವುದಕ್ಕೆ ಏನೆನ್ನಬೇಕು?
ಕಳೆದವಾರ ಹೃದಯ ವಿದ್ರಾವಕ ವರದಿಯೊಂದು ಪ್ರಕಟವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಲ್ಲಿರುವ ಶಾಂತಿನಗರದ ರೋಹಿತಾಶ್ವ ಎಂಬ 70 ವರ್ಷದ ವೃದ್ಧರು ಒಂಟಿಯಾಗಿದ್ದಾರೆ. ಹಾಗಂತ, ಪತ್ನಿ, ಮಕ್ಕಳು, ಸಹೋದರರು ಇಲ್ಲದ ಕೌಟುಂಬಿಕ ಹಿನ್ನೆಲೆ ಅವರದಲ್ಲ. ಅವರು ಕ್ಯಾಂಪ್ಕೊ ಸಂಸ್ಥೆಯಲ್ಲಿ ಅಧಿಕಾರಿಯಾಗಿ ದುಡಿದು ನಿವೃತ್ತರಾದವರು. ಪತ್ನಿ ನಿವೃತ್ತ ಶಿಕ್ಷಕಿ. ಮಗಳು ಆಯುರ್ವೇದ ವೈದ್ಯೆಯಾಗಿದ್ದಾರೆ. ಮಗನೂ ಇದ್ದಾನೆ. ಒಂದು ರೀತಿಯಲ್ಲಿ, ಅತ್ಯಂತ ಸಂತೋಷದಿಂದ ನಿವೃತ್ತ ಜೀವನ ಕಳೆಯಬೇಕಾದ ಇವರು ಇವತ್ತು ಮೃತ್ಯುವನ್ನು ಕಾಯುತ್ತಾ ಬದುಕುತ್ತಿದ್ದಾರೆ. ಪಾಳುಬಿದ್ದ ಒಂಟಿ ಮನೆಯಲ್ಲಿ ಇವರ ವಾಸ. ಕೆಲವು ಸಮಯದ ಹಿಂದೆ ಪತ್ನಿಯೂ ಇವರನ್ನು ತ್ಯಜಿಸಿ ಹೋಗಿದ್ದಾರೆ. ಮಕ್ಕಳೂ ಹತ್ತಿರ ಸೇರಿಸುತ್ತಿಲ್ಲ. ಅವರನ್ನು ಮನೆಯಿಂದ ಹೊರ ಹೋಗಲು  ಅನಾರೋಗ್ಯ ಬಿಡುತ್ತಲೂ ಇಲ್ಲ. ಸ್ಥಳೀಯರು ಮೂರು ಹೊತ್ತು ಊಟ ಕೊಡುವ ಮೂಲಕ ಅವರನ್ನು ಬದುಕಿಸುತ್ತಿದ್ದಾರೆ. ಅಂದಹಾಗೆ,
ಆರೋಗ್ಯ ಮತ್ತು ಉದ್ಯೋಗ ಇದ್ದ ಕಾಲದಲ್ಲಿ ಒಂಟಿಯಾಗದಿದ್ದ ರೋಹಿತಾಶ್ವರು ಅವೆಲ್ಲವನ್ನೂ ಕಳಕೊಂಡಾಗ ಒಂಟಿಯಾಗಲು ಕಾರಣವೇನು? ಆಯುಸ್ಸು ಮತ್ತು ಆರೋಗ್ಯ ಮನುಷ್ಯರ ಕೈಯಲ್ಲಿಲ್ಲ. ಬೇಡಬೇಡವೆಂದರೂ ಆಯುಸ್ಸು ಹೆಚ್ಚುತ್ತಲೇ ಇರುತ್ತದೆ. ಮಗುವೊಂದು ತಾನು ಸದಾ ಕಾಲ ಮಗುವಾಗಿಯೇ ಇರಬೇಕೆಂದು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಯೌವನ ಎಲ್ಲರ ಕನಸು. ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ತಲುಪುವುದನ್ನು ಇಷ್ಟಪಡುವವರು ಕಡಿಮೆ. ಸಂಪತ್ತು ಕೂಡಿಡುವುದಕ್ಕೂ ಅವಕಾಶ ಇರುವ ಪ್ರಾಯ ಅದು. ವೃದ್ಧಾಪ್ಯ ಹಾಗಲ್ಲ. ಅದು ಕೂಡಿಟ್ಟ ಸಂಪತ್ತನ್ನು ಅನೇಕ ಬಾರಿ ಖರ್ಚು ಮಾಡಬೇಕಾದ ಪ್ರಾಯವೂ ಹೌದು. ಯೌವನದಲ್ಲಿ ಹತ್ತಿರ ಬರದ ರೋಗಗಳು ವೃದ್ಧಾಪ್ಯದಲ್ಲಿ ಮುತ್ತಿಕೊಳ್ಳುತ್ತವೆ. ದೈಹಿಕ ಅಸಾಮರ್ಥ್ಯಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನ ಸಮಸ್ಯೆ, ನಾಲಗೆಯ ಸಮಸ್ಯೆ, ಚಲನೆಯ ಸಮಸ್ಯೆ ಇತ್ಯಾದಿಗಳೆಲ್ಲ ಎದುರಾಗುವುದು ವೃದ್ಧಾಪ್ಯದಲ್ಲೇ. ಅನೇಕ ಬಾರಿ ವೃದ್ಧಾಪ್ಯವು ವ್ಯಕ್ತಿಯನ್ನು ಮಗುತನಕ್ಕೆ ಒಯ್ಯುತ್ತದೆ. ವೃದ್ಧರು ಮಗುವಿನಂತೆ ಆಡುತ್ತಾರೆ. ಮಲ-ಮೂತ್ರಗಳ ಮೇಲೆಯೂ ನಿಯಂತ್ರಣವಿಲ್ಲದ ಸ್ಥಿತಿಗೆ ತಲುಪುತ್ತಾರೆ. ನಿಜವಾಗಿ, ಇದೊಂದು ಚಕ್ರ. ಮಗುತನದಿಂದ ಯೌವನಕ್ಕೆ, ಬಳಿಕ ನಡು ವಯಸ್ಸಿಗೆ ಮತ್ತು ಅಲ್ಲಿಂದ ವೃದ್ಧಾಪ್ಯಕ್ಕೆ.. ಹೀಗೆ ಜೀವನ ಚಕ್ರ ತಿರುಗುತ್ತಲೇ ಇರುತ್ತದೆ. ಈ ಚಕ್ರದಲ್ಲಿ ಅವಜ್ಞೆಗೆ ಮತ್ತು ತಿರಸ್ಕಾರಕ್ಕೆ ಒಳಗಾಗುವುದು ವೃದ್ಧಾಪ್ಯ ಮಾತ್ರ. ಮಗುವನ್ನು ಎಲ್ಲರೂ ಪ್ರೀತಿಸುತ್ತಾರೆ. ಮಲ-ಮೂತ್ರ ಇತ್ಯಾದಿಯಾಗಿ ಅದರ ಸಕಲ ಶೌಚಕ್ರಿಯೆಗಳನ್ನೂ ಯಾವ ಗೊಣಗಾಟವೂ ಇಲ್ಲದೇ ನಗುನಗುತ್ತಲೇ ನಿರ್ವಹಿಸುತ್ತಾರೆ. ಆದರೆ, ಅದೇ ಮಗು ಬೆಳೆದು ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ತಲುಪಿದಾಗ ಅದನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗುವುದಿಲ್ಲ. ಪತ್ನಿ-ಮಕ್ಕಳೂ ಅನೇಕ ಬಾರಿ ಈ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೆ. ರೋಹಿತಾಶ್ವರ ವಿಷಯದಲ್ಲಿ ಆಗಿರುವುದೂ ಇದುವೇ. ಆದ್ದರಿಂದ ಈ ಬಗ್ಗೆ ನಮ್ಮಲ್ಲಿ ಒಂದು ಅವಲೋಕನ ನಡೆಯಬೇಕು. ವೃದ್ಧರ ಆರೈಕೆಗೆ ಒತ್ತು ಕೊಡುವ ಮತ್ತು ಧರ್ಮಗಳು ವೃದ್ಧರಿಗೆ ಕೊಟ್ಟಿರುವ ಮಹತ್ವವನ್ನು ವಿವರಿಸುವ ಜಾಗೃತಿ ಅಭಿಯಾನಗಳು ನಡೆಯಬೇಕು. ಎರಡ್ಮೂರು ವರ್ಷಗಳ ಹಿಂದೆ ಪ್ರಕಟವಾದ ವರದಿಯಂತೆ, ಭಾರತದಲ್ಲಿ ಶೇ. 70ರಷ್ಟು ವೃದ್ಧರು ಮನೆಯಲ್ಲಿ ಕಿರುಕುಳ, ಹಿಂಸೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ವೃದ್ಧರಾಗಿರುವುದೇ ಇದಕ್ಕೆ ಕಾರಣ ಎಂಬುದೂ ಬಹಿರಂಗವಾಗಿತ್ತು.

ವೃದ್ಧ ಹೆತ್ತವರ ಆರೈಕೆಯ ಬಗ್ಗೆ ಧರ್ಮಗ್ರಂಥಗಳು ಪುಟಗಟ್ಟಲೆ ಹೇಳಿವೆ. ಶ್ರವಣ ಕುಮಾರನ ಕತೆಯನ್ನು ಈ ದೇಶದಲ್ಲಿ ಬಹಳ ಗೌರವದಿಂದ ಸ್ಮರಿಸಲಾಗುತ್ತದೆ. ಪವಿತ್ರ ಕುರ್‍ಆನ್ ಅಂತೂ ‘ದೇವನನ್ನು ಆರಾಧಿಸಿರಿ’ ಎಂದು ಹೇಳಿದ ಮರುಕ್ಷಣದಲ್ಲೇ, `ಹೆತ್ತವರನ್ನು ಗೌರವಿಸಿರಿ’ ಎಂದೂ ಹೇಳುವ ಮೂಲಕ ದೇವನ ಮೇಲಿನ ಆರಾಧನೆಯನ್ನು ಹೆತ್ತವರ ಜೊತೆಗಿಟ್ಟು ತೂಗಿದೆ. ವೃದ್ಧಾಪ್ಯಕ್ಕೆ ತಲುಪಿದ ಹೆತ್ತವರಿಗೆ ‘ಛೆ’ ಎಂಬ ಪದವನ್ನೂ ಬಳಸಬಾರದು ಎಂದು ಅದು ತಾಕೀತು ಮಾಡಿದೆ. ವೃದ್ಧ ಹೆತ್ತವರು ನಿಮ್ಮ ಪಾಲಿನ ಸ್ವರ್ಗ ಮತ್ತು ನರಕ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ವೃದ್ಧ ಹೆತ್ತವರನ್ನು ಸಂತೃಪ್ತಿಪಡಿಸಿದ ಮಕ್ಕಳಿಗೆ ಸ್ವರ್ಗ ಇದೆ ಅನ್ನುವುದು ಇದರ ತಾತ್ಪರ್ಯ. ಯಾರು ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೋ ಅವರು ದೇವನಿಗೆ ಎಷ್ಟೇ ನಮಾಝï, ಉಪವಾಸ ಆಚರಿಸಿದರೂ ನರಕಕ್ಕಷ್ಟೇ ಯೋಗ್ಯರಾಗಿರುತ್ತಾರೆ ಎಂಬುದು ಪ್ರವಾದಿಯವರ(ಸ) ಮಾತಿನ ಅರ್ಥ. ಹೆತ್ತವರಿಗಾಗಿ ಮಕ್ಕಳು ಸದಾ ಪ್ರಾರ್ಥಿಸುತ್ತಿರಬೇಕೆಂದು ಪವಿತ್ರ ಕುರ್‍ಆನ್ ಕಲಿಸುತ್ತದೆ. ‘ಎಳವೆಯಲ್ಲಿ ಹೆತ್ತವರು ನಮ್ಮ ಮೇಲೆ ಕರುಣೆ ತೋರಿದಂತೆಯೇ ಈ ವೃದ್ಧಾಪ್ಯದಲ್ಲಿ ಅವರ ಮೇಲೆ ಕರುಣೆ ತೋರು’ ಎಂದು ದೇವನಲ್ಲಿ ಪ್ರಾರ್ಥಿಸುವಂತೆ ಪವಿತ್ರ ಕುರ್‍ಆನ್ ಮಕ್ಕಳಿಗೆ ಆದೇಶಿಸುತ್ತದೆ. ಅಮ್ಮನ ಪಾದದಡಿಯಲ್ಲಿ ಸ್ವರ್ಗ ಇದೆ ಎಂದು ಪ್ರವಾದಿ ಮುಹಮ್ಮದರು(ಸ) ಹೇಳಿರುವುದರ ಹಿಂದೆ ಇದೇ ವೃದ್ಧಾಪ್ಯ ಸೇವೆಯ ಉದ್ದೇಶವೇ ಇದೆ. ನೀವು ಅಮ್ಮನ ಸೇವೆ ಮಾಡಿದರೆ ನಿಮಗೆ ಸ್ವರ್ಗ ಲಭಿಸುತ್ತದೆ ಎಂಬುದನ್ನು ಅವರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ವೃದ್ಧಾಪ್ಯ ಎಂಬುದು ಇನ್ನೊಬ್ಬರನ್ನು ಆಶ್ರಯಿಸಿ ಬದುಕುವಂತಹ ಕಾಲ. ಇವತ್ತು ಹೆತ್ತವರನ್ನು ನಿರ್ಲಕ್ಷ್ಯ ಮಾಡುವ ಮಕ್ಕಳೂ ನಾಳೆ ಆ ವೃದ್ಧಾಪ್ಯಕ್ಕೆ ತಲುಪಬಹುದು. ಒಂದುವೇಳೆ, ವೃದ್ಧ ಹೆತ್ತವರನ್ನು ಮಕ್ಕಳು ನಿರ್ಲಕ್ಷಿಸಿದರೂ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಅವರಲ್ಲಿರುವುದಿಲ್ಲ. ಒಂದು ಪ್ರತಿಭಟನೆ ಹಮ್ಮಿಕೊಂಡು ತಮ್ಮ ಸಮಸ್ಯೆಯನ್ನು ಸಮಾಜದ ಮುಂದಿಡುವ ಅವಕಾಶವೂ ಅವರಿಗಿರುವುದಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಒಳಗೊಳಗೇ ಮರುಗಿಕೊಂಡು ಬದುಕುವ ಅವರ ಕಣ್ಣೀರೇ ಮಕ್ಕಳ ಪಾಲಿಗೆ ಶಾಪವಾಗಲು ಧಾರಾಳ ಸಾಕು.
ತಮ್ಮ ದುಡಿಮೆಯ ಎಲ್ಲವನ್ನೂ ಮಕ್ಕಳು, ಕುಟುಂಬ ಎಂದು ವ್ಯಯಿಸುವ ಅಪ್ಪ ಮತ್ತು ತನ್ನ ಆಯುಷ್ಯವನ್ನೇ ಮಕ್ಕಳಿಗಾಗಿ ಮೀಸಲಿಡುವ ಅಮ್ಮ- ಇವೆರಡೂ ಈ ಜಗತ್ತಿನ ಅಮೂಲ್ಯ ರತ್ನಗಳು. ಅವರನ್ನು ನಿರ್ಲಕ್ಷಿಸುವುದೆಂದರೆ, ನಮ್ಮ ಜೊತೆಗಿರುವ ಈ ರತ್ನದ ಮೌಲ್ಯವನ್ನು ನಾವು ಅರಿತುಕೊಂಡಿಲ್ಲ ಎಂದೇ ಅರ್ಥ. ಇದು ಧರ್ಮವಿರೋಧಿ. ಆದ್ದರಿಂದ, ನಮ್ಮನ್ನು ಅವಲೋಕಿಸಿಕೊಳ್ಳುವುದಕ್ಕೆ ಸುಳ್ಯದ ರೋಹಿತಾಶ್ವರು ಒಂದು ನೆಪವಾಗಲಿ.

ಪುಲ್ವಾಮಾ: ಮುಸ್ಲಿಮ್ ಸಮುದಾಯದ ಸ್ವಾಗತಾರ್ಹ ನಡೆ



ಪುಲ್ವಾಮ ಘಟನೆಯಲ್ಲಿ ಕೇಂದ್ರ ಸರಕಾರದ ವೈಫಲ್ಯಗಳು ಚರ್ಚೆಯಾಗದಂತೆ ನೋಡಿಕೊಳ್ಳಬೇಕಾದರೆ ಬಿಜೆಪಿ ಬೆಂಬಲಿಗರ ಮುಂದೆ ಎರಡು ಆಯ್ಕೆಗಳಿದ್ದುವು: 1. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು. 2. ಪಾಕಿಸ್ತಾನದ ವಿರುದ್ಧ ತಕ್ಷಣ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದು. ಇದರಲ್ಲಿ 2ನೇ ಆಯ್ಕೆ ಈ ಬೆಂಬಲಿಗರ ಕೈಯಲ್ಲಿಲ್ಲ. ಅದನ್ನು ನಿರ್ಧರಿಸಬೇಕಾದುದು ಸರಕಾರ. ಆದ್ದರಿಂದ ಈ ದೇಶದ ಮುಸ್ಲಿಮರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವುದು ಮತ್ತು ಆ ಮುಖಾಂತರ ಬಿಜೆಪಿಯ `ನೋಟು ನಿಷೇಧದಿಂದ ತೊಡಗಿ ಮೆಹಬೂಬ್ ಮುಫ್ತಿಯವರ PDP ಪಕ್ಷದೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಅಧಿಕಾರದ ಸುಖವನ್ನು ಅನುಭವಿಸಿದುದರ ವರೆಗೆ’ ಯಾವುದೂ ಚರ್ಚೆಯ ಮುನ್ನೆಲೆಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿತ್ತು. ಆದರೆ, ಭಾರತೀಯ ಮುಸ್ಲಿಮರು ಅದನ್ನು ವಿಫಲಗೊಳಿಸಿದರು. ಪುಲ್ವಾಮ ಘಟನೆಗೆ ಭಾರತೀಯ ಮುಸ್ಲಿಮರಿಂದ ವ್ಯಕ್ತವಾದಷ್ಟು ಖಂಡನಾ ಹೇಳಿಕೆ ಇನ್ನಾವ ಸಮುದಾಯದಿಂದಲೂ ವ್ಯಕ್ತವಾಗಿಲ್ಲ ಎಂದೇ ಹೇಳಬೇಕು. ಸಾಮಾನ್ಯವಾಗಿ,
ಶುಕ್ರವಾರವೆಂಬುದು ಮುಸ್ಲಿಮರ ಪಾಲಿಗೆ ಬಹುಮಹತ್ವದ ದಿನ. ಆ ದಿನದಂದು ಮಧ್ಯಾಹ್ನ ಮಸೀದಿಗೆ ಹೋಗುವುದಕ್ಕೆ ಮತ್ತು ಪ್ರವಚನವನ್ನು ಆಲಿಸುವುದಕ್ಕೆ ಬಹಳ ಪ್ರಾಮುಖ್ಯತೆಯಿದೆ. ಎಷ್ಟೇ ತುರ್ತು ಕೆಲಸವಿದ್ದರೂ ಮುಸ್ಲಿಮರು ಆ ಸಂದರ್ಭವನ್ನು ತಪ್ಪಿಸಿಕೊಳ್ಳುವುದಿಲ್ಲ. ಸುಮಾರು ಒಂದು ಗಂಟೆಯಷ್ಟು ಅವಧಿಯ ಈ ಧಾರ್ಮಿಕ ಕ್ರಿಯೆಯಲ್ಲಿ ರಾಜಕೀಯಕ್ಕೆ ಅವಕಾಶ ಇರುವುದೂ ಇಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರೂ ಮಸೀದಿಯಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ಪ್ರವಚನ ಆಲಿಸುತ್ತಾರೆ. ನಮಾಝï ಮಾಡುತ್ತಾರೆ. ರಾಜಕೀಯ ರಹಿತವಾದ ಮತ್ತು ಅಪ್ಪಟ ಧಾರ್ಮಿಕ ಕ್ರಿಯೆಗೆ ಮೀಸಲಾದ ಈ ಸಂದರ್ಭವನ್ನು ಮುಸ್ಲಿಮ್ ಮೌಲಾನಗಳು ಪುಲ್ವಾಮ ಕ್ರೌರ್ಯವನ್ನು ಖಂಡಿಸುವುದಕ್ಕೆ ಬಳಸಿದರು. ಮಸೀದಿಯ ಪ್ರವಚನ ಪೀಠದಲ್ಲಿ ನಿಂತು ಯೋಧರ ಹತ್ಯೆಯನ್ನು ಖಂಡಿಸಿದರು. ಯೋಧರ ಕುಟುಂಬಗಳಿಗಾಗಿ ಪ್ರಾರ್ಥಿಸಿದರು. ಹಾಗಂತ, ಈ ಪ್ರಕ್ರಿಯೆ ಮಸೀದಿಗೆ ಮಾತ್ರ ಸೀಮಿತಗೊಳ್ಳಲೂ ಇಲ್ಲ. ಮಸೀದಿಯ ಹೊರಗೂ ಮುಸ್ಲಿಮರು ಯೋಧರ ಹತ್ಯೆಯನ್ನು ಖಂಡಿಸಿ ರಾಲಿ ನಡೆಸಿದರು. ವಿವಿಧ ಮುಸ್ಲಿಮ್ ಸಂಘಟನೆಗಳು ಮಾಧ್ಯಮಗಳಿಗೆ ಖಂಡನಾ ಹೇಳಿಕೆಯನ್ನು ನೀಡಿದುವು. ಅಷ್ಟಕ್ಕೂ,

`ಮುಸ್ಲಿಮರೇಕೆ ಪ್ರತ್ಯೇಕವಾಗಿ ಖಂಡನಾ ಹೇಳಿಕೆಗಳನ್ನು ನೀಡಬೇಕು, ಸ್ವತಃ ಖಂಡನಾರ್ಹವಾದ ಘಟನೆಯೊಂದಕ್ಕೆ ಮುಸ್ಲಿಮರು ಪ್ರತ್ಯೇಕವಾಗಿ ಖಂಡನಾ ಹೇಳಿಕೆಯನ್ನು ಹೊರಡಿಸುವುದು ಏನರ್ಥವನ್ನು ಕೊಡುತ್ತದೆ’ ಎಂಬ ಪ್ರಶ್ನೆಯಿದೆ. ಹಾಗಂತ, ಈ ಪ್ರಶ್ನೆ ಅಪ್ರಸ್ತುತವೂ ಅಲ್ಲ, ಅಸಂಬದ್ಧವೂ ಅಲ್ಲ. ಆದರೆ, ಈ ಪ್ರಶ್ನೆಯಾಚೆಗೆ ಕೆಲವು ಸತ್ಯಗಳಿವೆ. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿ ಬೆಳೆದುದರ ಹಿಂದೆ ‘ಮುಸ್ಲಿಮರು’ ಇದ್ದಾರೆ. ಮುಸ್ಲಿಮ್ ಸಮುದಾಯವನ್ನು ಪ್ರಶ್ನೆಯ ಮೊನೆಯಲ್ಲಿ ಇಟ್ಟೇ ಅವರು ರಾಜಕೀಯ ನಡೆಸಿದರು ಮತ್ತು ನಡೆಸುತ್ತಿದ್ದಾರೆ. ಮುಸ್ಲಿಮರ ಬಗ್ಗೆ, ಅವರ ದೇಶನಿಷ್ಠೆಯ ಬಗ್ಗೆ, ಅವರ ಕುಟುಂಬ ವ್ಯವಸ್ಥೆಯ ಬಗ್ಗೆ ಮತ್ತು ಅವರ ಪೂರ್ವಜರ ಬಗ್ಗೆ ವಿವಿಧ ಬಗೆಯ ನಕಾರಾತ್ಮಕ ಹೇಳಿಕೆಗಳನ್ನೂ ವ್ಯಾಖ್ಯಾನಗಳನ್ನೂ ನೀಡಿ, ಈ ದೇಶದ ನಿಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಅವರ ಮತ್ತು ಅವರ ಪಕ್ಷದ ರಾಜಕೀಯ ಅಜೆಂಡಾ. ತ್ರಿವಳಿ ತಲಾಕ್ ಅದಕ್ಕೆ ಇತ್ತೀಚಿನ ಸೇರ್ಪಡೆ. 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿ ಮತ್ತು ಅವರ ಬಳಗ ಮಾಡಿರುವ ಭಾಷಣ, ಬರಹ ಮತ್ತು ಪ್ರಚಾರ ಶೈಲಿಯನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರಿಗೆ ಮುಸ್ಲಿಮರು ಬೇಕು. ಮುಸ್ಲಿಮರಲ್ಲಿರಬಹುದಾದ ದೌರ್ಬಲ್ಯಗಳು ಬೇಕು. ಅವರಿಂದ ಆಗಬಹುದಾದ ಪ್ರಮಾದಗಳು ಬೇಕು. ಈ ಪ್ರಮಾದ ಮತ್ತು ದೌರ್ಬಲ್ಯಗಳೇ ಅವರ ರಾಜಕೀಯ ಮೆಟ್ಟಿಲು. ಆದ್ದರಿಂದ,
ಈ ದೇಶದ ಇತರೆಲ್ಲ ಸಮುದಾಯಗಳಲ್ಲಿರದ ಎಚ್ಚರಿಕೆಯ ಪ್ರಜ್ಞೆಯೊಂದು ಮುಸ್ಲಿಮರಲ್ಲಿರಬೇಕಾಗುತ್ತದೆ. ನಿಜವಾಗಿ ಭಯೋತ್ಪಾದಕ ಕೃತ್ಯವೊಂದು ಜಿಹಾದೋ ಕೊಲೆಪಾತಕವೋ ಎಂದು ತೀರ್ಮಾನಿಸಬೇಕಾದುದು ಭಯೋತ್ಪಾದಕ ಅಲ್ಲ, ನಾಗರಿಕ ಸಮಾಜ. ಪುಲ್ವಾಮ ಘಟನೆಯ ಬಗ್ಗೆಯೂ ಹೇಳಬೇಕಾದುದು ಇದನ್ನೇ. ಅದು ಕ್ರೌರ್ಯ, ಹತ್ಯಾಕಾಂಡ, ಮನುಷ್ಯ ವಿರೋಧಿ ಕೃತ್ಯ. ಇದನ್ನು ಎಸಗಿದವ ಅರಬಿ ಭಾಷೆಯನ್ನು ಉಚ್ಚರಿಸಿದ ಮಾತ್ರಕ್ಕೇ ಅದು ಜಿಹಾದೂ ಆಗುವುದಿಲ್ಲ, ಧರ್ಮಬದ್ಧವೂ ಆಗುವುದಿಲ್ಲ. ಇದು ಎಲ್ಲರಿಗೂ ಗೊತ್ತು. ಆದರೆ, ಈ ಸಹಜ ಸತ್ಯವನ್ನು ವಿರೂಪಗೊಳಿಸಿ ಕ್ರೌರ್ಯಕ್ಕೆ ವಿಪರೀತ ಅರ್ಥವನ್ನು ಕಲ್ಪಿಸುವ ಪ್ರಯತ್ನಗಳನ್ನು ವಿಫಲಗೊಳಿಸುವುದಕ್ಕಾಗಿ ಖಂಡನೆ ವ್ಯಕ್ತಪಡಿಸಬೇಕಾಗಿದೆ. ಭಯೋತ್ಪಾದಕನೊಬ್ಬ ಎಸಗಿದ ಕ್ರೌರ್ಯಕ್ಕೆ ನಾವೇಕೆ ಪ್ರತಿಕ್ರಿಯಿಸಬೇಕು ಎಂಬ ಉದಾಸೀನ ಭಾವದ ಆಚೆಗೆ, ಅಲೋಚಿಸಬೇಕಾಗಿದೆ. ವಿಶೇಷ ಏನೆಂದರೆ, ಈ ಬಾರಿ ಮುಸ್ಲಿಮ್ ಸಮುದಾಯ ಈ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಇದರಲ್ಲಡಗಿರುವ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ಸ್ವತಃ ಖಂಡನಾರ್ಹವಾದ ಘಟನೆಯನ್ನು ಅವರು ಮತ್ತೊಮ್ಮೆ ಖಂಡಿಸುವ ಮತ್ತು ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಾವು ರಾಜಕೀಯ ದಾಳವಾಗದಂತೆ ನೋಡಿಕೊಂಡಿದ್ದಾರೆ. ಎಚ್ಚರಿಕೆಯ ಈ ನಡೆ ಸ್ವಾಗತಾರ್ಹ.

 ಯಾವುದೇ ಅಕ್ರಮವೂ ಧರ್ಮ ವಿರೋಧಿಯೇ. ಅದು ಯೋಧರ ಹತ್ಯೆಯೇ ಆಗಬೇಕಿಲ್ಲ. ಮಾತಿನಿಂದ ಇನ್ನೊಬ್ಬರನ್ನು ನೋಯಿಸುವುದೂ ಅಕ್ರಮವೇ. ಕಾನೂನನ್ನು ಕೈಗೆತ್ತಿಕೊಳ್ಳುವುದೂ ಅಕ್ರಮವೇ. ಅಪಪ್ರಚಾರವೂ ಅಕ್ರಮವೇ. ಈ ಮೌಲ್ಯ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನಿಜವಾಗಿ, ಭಯೋತ್ಪಾದನೆಯಿಂದ ಅತ್ಯಂತ ಹೆಚ್ಚು ನಾಶ-ನಷ್ಟಗಳನ್ನು ಅನುಭವಿಸಿದವರು ಮುಸ್ಲಿಮರ ಆಗಿದ್ದಾರೆ. ಸಿರಿಯಾ, ಯಮನ್, ಪಾಕಿಸ್ತಾನ್, ಅಫಘಾನಿಸ್ತಾನ್‍ಗಳಿಂದ ಹಿಡಿದು ಕಾಶ್ಮೀರದವರೆಗೆ, ಉದ್ದಕ್ಕೂ ನಾಶ-ನಷ್ಟಗಳ ಪಟ್ಟಿಯ ಮೇಲ್ತುದಿಯಲ್ಲಿ ಮುಸ್ಲಿಮರೇ ಇದ್ದಾರೆ. ಕಾಶ್ಮೀರದಲ್ಲಿ ಉಗ್ರವಾದದಲ್ಲಿ ತೊಡಗಿರುವವರ ಸಂಖ್ಯೆ 150ರ ಒಳಗಿದೆ ಎಂದು ವರದಿಗಳು ಹೇಳುತ್ತವೆ. ಕಾಶ್ಮೀರಿಗಳನ್ನು ಅರ್ಥೈಸುವುದಕ್ಕೆ ಈ ಸಣ್ಣ ಸಂಖ್ಯೆಯೇ ಧಾರಾಳ ಸಾಕು. ಅವರೆಲ್ಲರೂ ಭಯೋತ್ಪಾದಕರಲ್ಲ ಮತ್ತು ಪ್ರತ್ಯೇಕ ರಾಷ್ಟ್ರದ ಬಯಕೆಯೂ ಅವರೆಲ್ಲರದ್ದಲ್ಲ. ಉಗ್ರವಾದಿ ಚಟುವಟಿಕೆಗಳಿಂದಾಗಿ ಅವರು ಎರಡು ಅಲುಗಿನ ಕತ್ತಿಯಲ್ಲಿ ಸಿಲುಕಿಕೊಂಡಿದ್ದಾರೆ. ಒಂದುಕಡೆ, ಉಗ್ರವಾದಿಗಳ ಕೆಂಗಣ್ಣು, ಇನ್ನೊಂದೆಡೆ, ಭದ್ರತಾ ಪಡೆಗಳ ಸಂದೇಹದ ದೃಷ್ಟಿ. ಈ ಎರಡನ್ನೂ ನಿಭಾಯಿಸಿಕೊಂಡು ಶಾಂತಿಯಿಂದ ಬದುಕುವುದೇ ಒಂದು ಸವಾಲು. ಇಂಥ ಸ್ಥಿತಿಯಲ್ಲಿ, ಕಾಶ್ಮೀರಿಗಳನ್ನೆಲ್ಲ ಭಯೋತ್ಪಾದಕರಂತೆ ಮತ್ತು ಭಾರತ ವಿರೋಧಿಗಳಂತೆ ಕಾಣುವುದರಿಂದ ಭಯೋತ್ಪಾಕದರು ಸಂತಸ ಪಡುವರೇ ಹೊರತು ಇನ್ನಾರಲ್ಲ. ಇದು ಭಯೋತ್ಪಾದಕರು ಬಯಕೆಯೂ ಹೌದು. ಭಾರತವು ಕಾಶ್ಮೀರಿಗಳನ್ನು ದ್ವೇಷಿಸುವ ಮೂಲಕ ಕಾಶ್ಮೀರಿಗಳಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡಬೇಕು ಎಂಬುದು ಅವರ ಮನದಾಸೆ. ಹಾಗಾದರೆ ಮಾತ್ರ ಜುಜುಬಿ ಸಂಖ್ಯೆಯಲ್ಲಿರುವ ತಮ್ಮ ತಂಡವನ್ನು ಬಲಗೊಳಿಸಬಹುದು ಎಂದು ಅವರು ತಿಳಿದಿದ್ದಾರೆ. ಅಂದಹಾಗೆ, ಅವರು ಬಹಿರಂಗವಾಗಿ ಯೋಧರನ್ನು ಗುರಿಮಾಡಿಕೊಂಡು ಬಾಂಬ್ ಸ್ಫೋಟ, ಗುಂಡು ಹಾರಾಟ ನಡೆಸುತ್ತಿರಬಹುದು. ಆದರೆ ಅವರ ನಿಜ ಗುರಿ ಯೋಧರಲ್ಲ, ಕಾಶ್ಮೀರಿಗಳು. ಯೋಧರನ್ನು ಸಾಯಿಸಿದರೆ ಯೋಧರು ಕಾಶ್ಮೀರಿಗಳ ವಿರುದ್ಧ ತಿರುಗಿ ಬೀಳುತ್ತಾರೆ ಮತ್ತು ಅದರಿಂದ ತಮ್ಮ ಉದ್ದೇಶ ಈಡೇರುತ್ತದೆ ಎಂದವರು ಭಾವಿಸಿದ್ದಾರೆ. ಆದ್ದರಿಂದ ಭಯೋತ್ಪಾದಕರ ಈ ಉದ್ದೇಶವನ್ನು ಈ ದೇಶ ವಿಫಲಗೊಳಿಸಬೇಕಾಗಿದೆ. ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ಪಡೆದು ಉಗ್ರವಾದಿಗಳನ್ನು ಪ್ರತ್ಯೇಕಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆಗೂ ಮಹತ್ವ ಇದೆ.
ಈ ಪ್ರಜ್ಞೆ ಸದಾ ಇರಲಿ.

ಧರಣಿ ಮಂಡಲ ಮಧ್ಯಪ್ರದೇಶದೊಳಗೆ




ಮಧ್ಯಪ್ರದೇಶ ಸರಕಾರವು ಒಂದೇ ವಾರದೊಳಗೆ ಎರಡು ಪ್ರಕರಣಗಳಿಗೆ ಸಂಬಂಧಿಸಿ 5 ಮಂದಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA)ಯನ್ವಯ ಕೇಸು ದಾಖಲಿಸಿದೆ. ಈ 5 ಮಂದಿಯ ಮೇಲೆಯೂ ಗೋಮಾಂಸ ಸಾಗಾಟ ಮಾಡಿದ ಆರೋಪ ಇದೆ. ಗೋಹತ್ಯೆ ಮತ್ತು ಗೋಮಾಂಸಕ್ಕೆ ನಿಷೇಧ ಇರುವ ರಾಜ್ಯವೊಂದರಲ್ಲಿ ಆ ನಿಷೇಧವನ್ನು ಉಲ್ಲಂಘಿಸುವುದು ಖಂಡಿತ ಅಪರಾಧ. ಅಲ್ಲದೇ, ಕೋಮು ಸೂಕ್ಷ್ಮ  ಪ್ರದೇಶಗಳಾದ ಖಾಂಡ್ವಾ ಮತ್ತು ಅಗಾರ್ ಪ್ರದೇಶಗಳಲ್ಲಿ ಈ ಎರಡು ಪ್ರಕರಣಗಳು ನಡೆದಿವೆ ಎಂಬುದೂ ಮುಖ್ಯ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅಗಾರ್ ಪ್ರದೇಶ ಸ್ತಬ್ಧ ಆಗಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ. ಸಂಘಪರಿವಾರವು ಪ್ರತಿಭಟನೆಯ ಬೆದರಿಕೆ ಹಾಕಿವೆ. ಆದ್ದರಿಂದಲೋ ಏನೋ, ಖಾಂಡ್ವಾ ಪ್ರಕರಣದ ಆರೋಪಿಗಳ ಮೇಲೆ ಮೊದಲು ಗೋಹತ್ಯೆ ನಿಷೇಧ ಕಾಯ್ದೆಯನ್ವಯ ದಾಖಲಿಸಿಕೊಳ್ಳಲಾಗಿದ್ದ ಕೇಸನ್ನು ಆ ಬಳಿಕ NSA ಅಡಿಯಲ್ಲಿ ಮರು ದಾಖಲಿಸಿಕೊಳ್ಳಲಾಗಿದೆ. ಅಗಾರ್ ಪ್ರದೇಶದಲ್ಲಿ ಗೋಮಾಂಸ ಸಾಗಾಟ ಮಾಡಿದ ಇಬ್ಬರು ಆರೋಪಿಗಳ ಮೇಲೆ ಈ ಹಿಂದೆಯೂ ಗೋಮಾಂಸ ಸಾಗಾಟ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಮೇಲೆ ನೇರವಾಗಿಯೇ NSA ಕಾಯ್ದೆಯನ್ನು ಪ್ರಯೋಗಿಸಲಾಗಿದೆ.
ತಕರಾರು ಇರುವುದು ಈ ಐವರನ್ನು ಬಂಧಿಸಿರುವುದರ ಮೇಲಲ್ಲ. ಕಾನೂನು ಉಲ್ಲಂಘಿಸಿದವರನ್ನು ಬಂಧಿಸಬಾರದು ಎಂದು ಹೇಳುತ್ತಲೂ ಇಲ್ಲ. ಆದರೆ ಗೋಹತ್ಯೆ ನಡೆಸಿದ ಆರೋಪಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಅನ್ವಯಿಸುವುದು ಸರಿಯೇ? ಭಯೋತ್ಪಾದಕರ ಮೇಲೆ ಹೇರಬೇಕಾದ ಕಾಯ್ದೆಯೊಂದನ್ನು ಭಯೋತ್ಪಾದನೆಯೊಂದಿಗೆ ಸಂಬಂಧವೇ ಇಲ್ಲದವರ ಮೇಲೆ ಹೇರುವುದು ನೈತಿಕವೇ? ಪಿಕ್‍ಪಾಕೆಟ್ ಕಳ್ಳನ ಮೇಲೆ ಫೋಕ್ಸೋ ಕಾಯ್ದೆಯನ್ನು ಹೇರುವಂತಿಲ್ಲ. ಯಾಕೆಂದರೆ, ಫೋಕ್ಸೋ ಕಾಯ್ದೆ ಅತ್ಯಾಚಾರಕ್ಕೆ ಸಂಬಂಧಿಸಿದ್ದು. ಅತ್ಯಾಚಾರ, ಹತ್ಯಾಯತ್ನ, ದರೋಡೆ, ಹತ್ಯೆ, ವಂಚನೆ ಇತ್ಯಾದಿ ಇತ್ಯಾದಿ ಪ್ರಕರಣಗಳೆಲ್ಲ ಸಮಾನ ಅಲ್ಲ. ಇವುಗಳಿಗೆಲ್ಲ ಬೇರೆ ಬೇರೆಯದೇ ಆದ ಕಾನೂನು ಸಂಹಿತೆಗಳಿವೆ. ಭಾರತೀಯ ದಂಡಸಂಹಿತೆಯ ಪ್ರಕಾರ ಇಂಥ ಪ್ರಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಲಾಗುತ್ತದೆ. ಅದರಂತೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಹತ್ಯಾಯತ್ನದ ಆರೋಪಿಗಳ ಮೇಲೆ ಭಾರತೀಯ ಅಪರಾಧ ದಂಡಸಂಹಿತೆ 307ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಬೇಕೇ ಹೊರತು ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಪನ್ 124 A ಯಂತೆ ಅಲ್ಲ.
ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಗುಂಡು ಹೊಡೆದ ಪ್ರಕರಣ ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆಯಿತು. ಹಿಂದೂ ಮಹಾಸಭಾದ ನಾಯಕಿ ಶಕುನ್ ಪೂಜಾ ಪಾಂಡೆಯವರು ಬಹಿರಂಗವಾಗಿಯೇ ಮತ್ತು ಮಾಧ್ಯಮ ಪ್ರತಿನಿಧಿಗಳ ಮುಂದೆಯೇ ಗಾಂಧಿ ಪ್ರತಿಕೃತಿಗೆ ಆಟಿಕೆಯ ಬಂದೂಕಿನಿಂದ ಗುಂಡು ಹೊಡೆದರು. ಆದರೆ, ಈ ಪಾಂಡೆಯ ವಿರುದ್ಧವಾಗಲಿ, ಅವರು ಪ್ರತಿನಿಧಿಸುವ ಸಂಘಟನೆಯ ಮೇಲಾಗಲಿ ಅಥವಾ ಅಲ್ಲಿ ಉಪಸ್ಥಿತರಿದ್ದು ಆ ಘಟನೆಯನ್ನು ಬೆಂಬಲಿಸಿದವರ ಮೇಲಾಗಲಿ ಪೊಲೀಸರು NSA ಅನ್ವಯ ಕೇಸು ದಾಖಲಿಸಿಕೊಳ್ಳಲಿಲ್ಲ. ರಾಷ್ಟ್ರಪಿತನ ಸಾವನ್ನು ಸಂಭ್ರಮಿಸುವುದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಬಹುದು ಎಂಬ ಭಾವನೆ ಪೊಲೀಸರಲ್ಲೂ ಮೂಡಲಿಲ್ಲ. ಸರಕಾರವನ್ನೂ ಕಾಡಲಿಲ್ಲ. ತೀರಾ ಸಾಮಾನ್ಯ ಕಾಯ್ದೆಗಳನ್ವಯ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಗಾಂಧೀಜಿಯನ್ನು ಈ ದೇಶ ಗೌರವಿಸುತ್ತದೆ. ರಾಷ್ಟ್ರಪಿತ ಎಂದು ನಾಮಕರಣ ಮಾಡಿ ಆದರಿಸುತ್ತದೆ. ಈ ದೇಶದ ಎಲ್ಲ ಶಾಲಾ-ಕಾಲೇಜುಗಳ ಪಠ್ಯಪದ್ಧತಿಯಲ್ಲಿ ಅವರ ಬಗ್ಗೆ ಪಾಠಗಳಿವೆ. ಅವರ ಹುಟ್ಟನ್ನು ಸಂಭ್ರಮಿಸುವ ಮತ್ತು ಸಾವಿಗೆ ಶೋಕ ವ್ಯಕ್ತಪಡಿಸುವ ಪರಂಪರೆ ಇಲ್ಲಿದೆ. ಹೀಗಿರುವಾಗ, ಅವರ ಸಾವನ್ನೇ ಸಂಭ್ರಮಿಸುವುದು ಮತ್ತು ಅವರ ಪ್ರತಿಕೃತಿಗೆ ಗುಂಡು ಹೊಡೆಯುವುದು ಯಾಕೆ ನಮ್ಮ ವ್ಯವಸ್ಥೆಗೆ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿ ಕಾಣಿಸಲಿಲ್ಲ? ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕಿದ ಪ್ರಕರಣ ನಡೆದದ್ದು ಉತ್ತರ ಪ್ರದೇಶದಲ್ಲಿ. ಇಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವಿದೆ. ಖಾಂಡ್ವಾ ಮತ್ತು ಅಗಾರ್ ಇರುವುದು ಮಧ್ಯಪ್ರದೇಶದಲ್ಲಿ. ಇಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವಿದೆ. ವಿಷಾದ ಏನೆಂದರೆ, ಎರಡೂ ಸರಕಾರಗಳು ಕಾನೂನನ್ನು ದುರುಪಯೋಗಿಸಿವೆ. ಗೋಹತ್ಯೆ ಆರೋಪಿಗಳ ಮೇಲೆ ಮಧ್ಯಪ್ರದೇಶದ ಈ ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಸರಕಾರವು 2007ರಿಂದ 2016ರ ಅವಧಿಯಲ್ಲಿ ಓSಂ ಕಾಯ್ದೆಯನ್ವಯ ಒಟ್ಟು 22 ಪ್ರಕರಣಗಳನ್ನು ದಾಖಲಿಸಿತ್ತು. ಕಮಲ್‍ನಾಥ್ ಅವರು ಚೌಹಾಣ್‍ರ ಪರಂಪರೆಯನ್ನು ಮುಂದುವರಿಸುವ ಸೂಚನೆಯನ್ನು ನೀಡಿದ್ದಾರೆ. ಇದು ಅತ್ಯಂತ ಅಪಾಯಕಾರಿ.
ಸರಕಾರ ಬದಲಾಗುವುದೆಂದರೆ ಬರೇ ಅಧಿಕಾರ ಹಸ್ತಾಂತರಗೊಳ್ಳುವುದು ಎಂದು ಅರ್ಥವಲ್ಲ. ಶಿವರಾಜ್ ಸಿಂಗ್ ಚೌಹಾಣ್‍ರ ಸರಕಾರವನ್ನು ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ಜನರು ತಿರಸ್ಕರಿಸಿದ್ದಾರೆ. ಕಮಲ್‍ನಾಥ್‍ರನ್ನು ಪುರಸ್ಕರಿಸಿದ್ದಾರೆ. ಈ ತಿರಸ್ಕಾರ ಮತ್ತು ಪುರಸ್ಕಾರ ಯಾವ ಕಾರಣಕ್ಕಾಗಿ ಅನ್ನುವುದು ಕಾಂಗ್ರೆಸ್‍ನ ಪಾಲಿಗೆ ಮುಖ್ಯವಾಗಬೇಕು. NSA ಯ ವಿಷಯದಲ್ಲಿ ಬಿಜೆಪಿಯ ಓಲೈಕೆ ನಿಲುವನ್ನೇ ಕಾಂಗ್ರೆಸ್ಸೂ ಮುಂದುವರಿಸುವುದಾದರೆ ಎರಡರ ನಡುವಿನ ವ್ಯತ್ಯಾಸವಾದರೂ ಏನು? ಗೋಹತ್ಯೆ ನಡೆಸುವವರ ವಿರುದ್ಧ ಗೋಹತ್ಯೆ ನಿಷೇಧ ಕಾನೂನಿನನ್ವಯ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಭಯೋತ್ಪಾದಕರಂತೆ ನಡೆಸಿಕೊಂಡರೆ ಹೇಗೆ? ಸದ್ಯ ಇಂಥದ್ದೊಂದು  ಪ್ರಶ್ನೆ ಕಾಂಗ್ರೆಸ್‍ನೊಳಗಡೆಯೇ ಕಾಣಿಸಿಕೊಂಡಿರುವುದು ಗಮನಾರ್ಹ. ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್, ರೋಷನ್ ಬೇಗ್, ದಿಗ್ವಿಜಯ್ ಸಿಂಗ್ ಇತ್ಯಾದಿ ನಾಯಕರು ಈ ಬೆಳವಣಿಗೆಯನ್ನು ಪ್ರಶ್ನಿಸಿದ್ದಾರೆ. ಕಮಲ್‍ನಾಥ್ ಸರಕಾರ ಈ ಬಗ್ಗೆ ಮರು ಅವಲೋಕನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಗಾಂಧೀಜಿಗೆ ಗುಂಡಿಕ್ಕಿದ ಆರೋಪಿಗಳ ಮೇಲೆ ಜುಜುಬಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಬಿಜೆಪಿ ಈ ವರೆಗೂ ಮಾತಾಡಿಲ್ಲ.
ತಿಂಗಳುಗಳ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಗೋವಿಗೆ ಪ್ರಮುಖ ಸ್ಥಾನವಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಗೋಸಂರಕ್ಷಣೆಯ ಕುರಿತಂತೆ ಪರಸ್ಪರ ಪೈಪೋಟಿಯಲ್ಲಿ ಭರವಸೆ ನೀಡಿದ್ದುವು. ತಾನು ಅಧಿಕಾರಕ್ಕೆ ಬಂದರೆ, ಪ್ರತಿ ಪಂಚಾಯತ್‍ನಲ್ಲೂ ಗೋಶಾಲೆಗಳನ್ನು ನಿರ್ಮಿಸುವುದಾಗಿ ಮತ್ತು ಗೊಬ್ಬರ ಮತ್ತು ಗೋಮೂತ್ರದಿಂದ ಮಾರುಕಟ್ಟೆ ಉತ್ಪನ್ನಗಳನ್ನು ತಯಾರಿಸಲು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ  ಭರವಸೆ ನೀಡಿತ್ತು. ಅಲ್ಲದೇ, ಖಾಂಡ್ವಾ ಮತ್ತು ಅಗಾರ್‍ನ ಪ್ರಕರಣಕ್ಕಿಂತ ಮೂರು ದಿನಗಳ ಮೊದಲಷ್ಟೇ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಗೋವಿಗೆ ಸಂಬಂಧಿಸಿ ಮಹತ್ವದ ನಿರ್ಧಾರವನ್ನು ಘೋಷಿಸಿದ್ದರು. ಮುಂದಿನ ನಾಲ್ಕು ತಿಂಗಳೊಳಗೆ 1000 ಗೋಶಾಲೆಗಳನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಹಾಗಂತ,
ಗೋವಿನ ಸಂರಕ್ಷಣೆ, ಗೌರವ, ಆದರ ಇವಾವುದೂ ತಪ್ಪಲ್ಲ ಮತ್ತು ಈ ಸಂಬಂಧಿ ಕಾನೂನನ್ನು ಉಲ್ಲಂಘಿಸುವವರನ್ನು ದಂಡಿಸಬೇಕಾದುದು ಎಲ್ಲ ರೀತಿಯಲ್ಲೂ ಸರಿ. ಆದರೆ, ಇವು ಯಾವುವೂ ಓಲೈಕೆ ಆಗಬಾರದು. ಒಂದು ಸಮುದಾಯವನ್ನು ಕಡೆಗಣಿಸುವಂತೆಯೂ ಇರಬಾರದು. ಯಾವ ಅಪರಾಧಕ್ಕೆ ಯಾವ ಕಾನೂನೋ ಅದನ್ನೇ ಅನ್ವಯಿಸಬೇಕು. ಗೋಮಾಂಸ ಸಾಗಾಟಗಾರರನ್ನು ದೇಶದ ಭದ್ರತೆಗೆ ಅಪಾಯಕಾರಿಗಳಂತೆ ಮತ್ತು ಭಯೋತ್ಪಾದಕರಂತೆ ನೋಡುವುದು ಅನ್ಯಾಯ, ಅಸಂಬದ್ಧ, ಅವಿವೇಕತನ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಆರೋಪಿಗಳು ಹಿಂದೂವಾಗಿರಲಿ, ಮುಸ್ಲಿಮರಾಗಿರಲಿ.





ನಗರಗಳೇಕೆ ದನ ಸಾಕುವುದಿಲ್ಲ?



    ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಪರಸ್ಪರ ಕೊಡು-ಕೊಳ್ಳುವಿಕೆಯ ಭಾಗವಾಗಿ ನೋಡದೆ ಪವಿತ್ರ-ಅಪವಿತ್ರತೆಯ ಸಂಬಂಧವಾಗಿ ನೋಡಿದರೆ ಏನಾಗಬಹುದು ಅನ್ನುವುದಕ್ಕೆ ಈಗಿನ ಉತ್ತರ ಪ್ರದೇಶ ಉತ್ತಮ ಉದಾಹರಣೆ. ಗೋಮಾಂಸದ ಹೆಸರಲ್ಲಿ ವೃದ್ಧ ಅಖ್ಲಾಕ್‍ರನ್ನು ಥಳಿಸಿ ಕೊಂದವರನ್ನು ಮತ್ತು ಆ ಬಗೆಯ ಮನಸ್ಥಿತಿ ಪ್ರತಿನಿಧಿಸುವವರನ್ನು ಸಮರ್ಥಿಸುತ್ತಲೇ ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಈಗ ದನಗಳೇ ಒಂದು ಸವಾಲಾಗಿ ನಿಂತಿವೆ. ಕಳೆದವಾರ ಉತ್ತರ ಪ್ರದೇಶದ ಬೀಡಾಡಿ ದನಗಳೂ ಮತ್ತು ರೈತರೂ ಸುದ್ದಿಯ ಮುನ್ನೆಲೆಗೆ ಬಂದರು. ನಿಜವಾಗಿ, ದನಗಳನ್ನು ಅತ್ಯಂತ ಹೆಚ್ಚು ಪ್ರೀತಿಸುವವರೆಂದರೆ ರೈತರು. ದನವಿಲ್ಲದ ರೈತ ಮತ್ತು ರೈತನ ಆಶ್ರಯವನ್ನು ಬಯಸದ ದನ ಇವೆರಡೂ ಅಸಾಧ್ಯ ಅನ್ನುವಷ್ಟು ಅನ್ಯೋನ್ಯ. ಆದರೂ ಉತ್ತರ ಪ್ರದೇಶದ ರೈತರು ಬೀಡಾಡಿ ದನಗಳಿಂದ ರೋಸಿ ಹೋದರು. ಮುಖ್ಯವಾಗಿ, ವಾರಣಾಸಿ, ಇಟಾವಾ, ಗೊಂಡಾ, ಹಥರಸ್, ಆಗ್ರಾ ಮುಂತಾದ ಪ್ರದೇಶಗಳ ರೈತರು ಸುಮಾರು 500ಕ್ಕಿಂತಲೂ ಅಧಿಕ ಬೀಡಾಡಿ ದನಗಳನ್ನು ಪೊಲೀಸು ಠಾಣೆ, ಶಾಲೆ ಮುಂತಾದ ಕಡೆ ಕಟ್ಟಿ ಹಾಕಿ ಪ್ರತಿಭಟಿಸಿದರು. ಹಾಗಂತ, ಹೀಗೆ ಕಟ್ಟುವುದಕ್ಕಿಂತ ಮೊದಲು ಅವರು ತಮ್ಮ ಗೋಧಿ, ಆಲೂಗಡ್ಡೆ, ಕಡಲೆ, ಬಟಾಣಿ, ಸಾಸಿವೆ ಇತ್ಯಾದಿ ಬೆಳೆಗಳನ್ನು ಬೀಡಾಡಿ ದನಗಳಿಂದ ರಕ್ಷಿಸುವುದಕ್ಕಾಗಿ ಮಾಡಬೇಕಾದ ಉಪಾಯಗಳ ಬಗ್ಗೆ ಚರ್ಚಿಸಿದ್ದರು. ರಾತ್ರಿ ಹಗಲೆನ್ನದೇ ತಮ್ಮ ಹೊಲಗಳನ್ನು ಕಾವಲು ಕಾಯುವುದಲ್ಲದೆ ಬೇರೆ ಉಪಾಯ ಇವರಿಗೆ ಕಾಣಿಸಿರಲಿಲ್ಲ. ಕೆಲವರು ಬಿದಿರಿನ ಬೇಲಿ ಹಾಕಿದರು. ಆದರೆ ದನಗಳು ಇವನ್ನೂ ಹೊಡೆದು ಹಾಕಿ ಬೆಳೆ ನಾಶ ಮಾಡಲು ಪ್ರಾರಂಭಿಸಿದಾಗ ಅನ್ಯ ದಾರಿ ಕಾಣದೇ ದನ ಕಟ್ಟಿ ಹಾಕುವ ಪ್ರತಿಭಟನೆಗಿಳಿದರು. ಆದರೆ ಸರಕಾರ ಸುಮಾರು ಎರಡು ಡಜನ್‍ನಷ್ಟು ರೈತರನ್ನು ಬಂಧಿಸಿತು. ದಂಡ ವಿಧಿಸಿತು.
ನಿಜವಾಗಿ, ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ಮತ್ತು ಭಾಷಣಕಾರನಿಗಿಂತ ಚೆನ್ನಾಗಿ ದನಗಳ ಬಗ್ಗೆ ಗೊತ್ತಿರುವವರೆಂದರೆ ರೈತರು. ದನ ಅವರ ಗೆಳೆಯ. ದನ ಅವರ ಆಸ್ತಿ. ದನ ಅವರ ಬದುಕು ಎಲ್ಲವೂ ಆಗಿದೆ. ಇಂಥ ದನಗಳನ್ನು ಅವರು ತಮ್ಮ ವೈರಿ ಎಂದು ಪರಿಗಣಿಸುವುದಕ್ಕೆ ಕಾರಣಗಳೇನು? ತನ್ನ ಒಡನಾಡಿಯ ವಿರುದ್ಧವೇ ಪ್ರತಿಭಟಿಸುವುದರ ಅರ್ಥವೇನು? ರೈತ ಮತ್ತು ರಾಜಕಾರಣಿ ಬೇರ್ಪಡುವುದು ಇಲ್ಲೇ.  ರೈತ ದನವನ್ನು ಪ್ರೀತಿಸುತ್ತಾನೆ. ಸಾಕುತ್ತಾನೆ. ಆರೈಕೆ ಮಾಡುತ್ತಾನೆ. ಆಹಾರ ಒದಗಿಸುತ್ತಾನೆ ಮತ್ತು ಆರಾಧನಾ ಭಾವದಿಂದಲೂ ನೋಡುತ್ತಾನೆ. ತನ್ನ ಮಕ್ಕಳ ಅಥವಾ ಕುಟುಂಬದವರ ಕಾಯಿಲೆಗೆ ಆತ ಹೇಗೆ ಸ್ಪಂದಿಸುತ್ತಾನೋ ಅದೇ ಬಗೆಯ ಸ್ಪಂದನೆ ದನಗಳ ಬಗ್ಗೆ ರೈತರಲ್ಲಿರುತ್ತದೆ. ಯಾಕೆಂದರೆ, ದನಗಳ ಹೊರತು ಅವರು ತನ್ನ ಜೀವನ ಬಂಡಿಯನ್ನು ಕಲ್ಪಿಸಿಕೊಳ್ಳುವ ಹಾಗಿಲ್ಲ. ಅದು ಹಾಲನ್ನು ಒದಗಿಸುತ್ತದೆ. ಹೊಲದಲ್ಲಿ ದುಡಿಯುತ್ತದೆ. ಗೊಬ್ಬರವನ್ನೂ ಒದಗಿಸುತ್ತದೆ. ಓರ್ವ ರೈತ ದನವನ್ನು ಪ್ರೀತಿಸುವುದಕ್ಕೆ ಇವೆಲ್ಲವೂ ಕಾರಣ ಅಥವಾ ಇವಾವುದನ್ನೂ ಒದಗಿಸದ ದನವೊಂದನ್ನು ಬಹುಕಾಲ ಸಾಕಲು ಮತ್ತು ಆರೈಕೆ ಮಾಡಲು ಓರ್ವ ರೈತನಿಂದ ಸಾಧ್ಯವಿಲ್ಲ. ಪರಸ್ಪರ ಕೊಡು-ಕೊಳ್ಳುವಿಕೆಯ ಸಂಬಂಧವೊಂದರ ಆಚೆಗೆ ಬರೇ ಆರಾಧನಾ ಭಾವದಿಂದ ರೈತನೋರ್ವ ದನಗಳನ್ನು ಸಾಕಲು ಸಾಧ್ಯವಿಲ್ಲ. ಇದು ಸಾಮಾಜಿಕ ವಾಸ್ತವ. ಒಂದುವೇಳೆ, ಇದು ಅವಾಸ್ತವಿಕ ಎಂದಾದರೆ, ದನಗಳೆಲ್ಲ ಯಾಕೆ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಗರಗಳಲ್ಲಿ ದನ ಸಾಕಾಣಿಕೆ ಶೂನ್ಯ ಅನ್ನುವಷ್ಟು ಕಡಿಮೆ. ಹತ್ತು-ಇಪ್ಪತ್ತು ಅಂತಸ್ತಿನ ಕಟ್ಟಡಗಳ ಒಡೆಯರೂ ತಮ್ಮ ಫ್ಲ್ಯಾಟಿನ ಪಕ್ಕ ದನ ಸಾಕಾಣಿಕೆಗಾಗಿ ದೊಡ್ಡಿಯೊಂದನ್ನು ಕಟ್ಟುವುದಿಲ್ಲ. ಬೃಹತ್ ಬಂಗಲೆಯಂಥ ಮನೆ ಕಟ್ಟುವವರು ಮತ್ತು ದುಬಾರಿ ಕಾರುಗಳನ್ನು ಇರಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಚಂದದ ಕಾರು ಪಾರ್ಕ್ ಮಾಡಿಕೊಳ್ಳುವವರು ಇಷ್ಟೇ ಮುತುವರ್ಜಿಯಿಂದ ದನ ಸಾಕಾಣಿಕೆಯ ಬಗ್ಗೆ ಮತ್ತು ಅಂಗಳದಲ್ಲೇ ಅದಕ್ಕೊಂದು ದೊಡ್ಡಿ ನಿರ್ಮಿಸುವ ಬಗ್ಗೆ ಕಾಳಜಿ ತೋರುವುದಿಲ್ಲ. ಬರೇ ಆರಾಧನೆಯ ಕಾರಣದಿಂದಾಗಿಯೇ ಯಾರಾದರೂ ದನ ಸಾಕುವುದಾದರೆ, ನಗರಗಳಲ್ಲಿ ವಾಸಿಸುವವರ ಪ್ರತಿ ಮನೆಗಳಲ್ಲೂ ದನ ಕಾಣಿಸಿಕೊಳ್ಳಬೇಕಿತ್ತು. ಫ್ಲ್ಯಾಟ್ ನಿರ್ಮಿಸುವಾಗಲೇ ದನ ಸಾಕಾಣಿಕೆಗಾಗಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಿತ್ತು. ಮನೆಗೊಂದು ಸಿಟೌಟ್ ಇರುವಂತೆಯೇ ಮನೆಗೊಂದು ದನ ದೊಡ್ಡಿ ನಿರ್ಮಿಸುವುದು ಮತ್ತು ದನ ಸಾಕಾಣಿಕೆಯನ್ನು ಒಂದು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ, ನಗರವಾಸಿಗಳಲ್ಲಿ ಈ ಬಗೆಯ ಉಮೇದು ಕಾಣಿಸುವುದೇ ಇಲ್ಲ. ಇದರರ್ಥ ಇವರೆಲ್ಲ ಗೋವಿನ ವಿರೋಧಿಗಳು ಎಂದಲ್ಲ ಮತ್ತು ಅವರು ಗೋವನ್ನು ಪ್ರೀತಿಸುವುದಿಲ್ಲ ಎಂದೂ ಅಲ್ಲ. ಗೋವಿಗೂ ಅದರ ಸಾಕಾಣಿಕೆಗೂ ಆರಾಧನಾ ಭಾವಕ್ಕಿಂತ ಹೊರತಾದ ಕಾರಣಗಳಿವೆ ಎಂದೇ ಅರ್ಥ. ರೈತ ನಗರಗಳಲ್ಲಿ ವಾಸಿಸುವುದಿಲ್ಲ. ಆದ್ದರಿಂದಲೇ ನಗರಗಳು ಗೋವನ್ನು ಸಾಕುವುದೂ ಇಲ್ಲ. ಕೃಷಿ ಕೆಲಸಗಳಿಗೆ ವಿಶಾಲ ಜಮೀನು ಬೇಕು. ಅದು ನಗರಗಳಲ್ಲಿ ಲಭ್ಯ ಇಲ್ಲ. ಆದ್ದರಿಂದ ರೈತರು ಕಾಣಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿ. ದನಗಳು ಕಾಣಸಿಗುವುದೂ ಅಲ್ಲೇ. ಇದು ವಿಚಿತ್ರ. ಇಲ್ಲಿ ಬಹುಮುಖ್ಯವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ದನಗಳೇಕೆ ರೈತರ ಜೊತೆಗೇ ಇವೆ? ದನವನ್ನು ಆರಾಧಿಸುವುದು ರೈತರು ಮಾತ್ರವೇ? ನಗರ ಪ್ರದೇಶಗಳ ಮಂದಿ ದನವನ್ನು ಆರಾಧಿಸುವುದಿಲ್ಲವೇ?
ದನಗಳ ಕುರಿತಂತೆ ಜನರ ನಿಜ ಭಾವನೆಗಳು ವ್ಯಕ್ತವಾಗುವುದು ಇಂಥ ಪ್ರಶ್ನೆಗಳು ಹುಟ್ಟಿಕೊಂಡಾಗಲೇ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಂದಿ ದನಗಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆದರೆ ಈ ಪ್ರೀತಿ ಷರತ್ತುಬದ್ಧ. ಸಾಕುವ ದನದಿಂದ ಸಾಕುವವನಿಗೂ ಪ್ರಯೋಜನವಿರಬೇಕು ಎಂಬುದೇ ಷರತ್ತು. ಪ್ರಯೋಜನವಿರದ ಸಾಕಾಣಿಕೆಯನ್ನು ಜನರು ಬಯಸುವುದಿಲ್ಲ. ನಗರ ಪ್ರದೇಶದ ಮಂದಿ ಯಾಕೆ ಗೋವನ್ನು ಸಾಕುವುದಿಲ್ಲ ಎಂದರೆ, ದನಸಾಕಾಣಿಕೆಗೆ ಪೂರಕವಾದ ಮತ್ತು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾದ ಯಾವ ವಾತಾವರಣವೂ ಅಲ್ಲಿಲ್ಲ. ಅಲ್ಲಿ ಅವರಿಗೆ ಜಮೀನು ಇಲ್ಲ. ಇನ್ನು, ಇರುವ ಸಣ್ಣ ಸ್ಥಳದಲ್ಲೇ  ಸಾಕುವ ಅಂದರೆ, ಅದು ಸುಲಭ ಅಲ್ಲ. ಅದರ ಆರೈಕೆ, ಗೊಬ್ಬರಗಳ ವಿಲೇವಾರಿ, ಪೋಷಣೆ, ಚಿಕಿತ್ಸೆ ಇತ್ಯಾದಿಗಳನ್ನು ನಿಭಾಯಿಸುವುದಕ್ಕೆ ಸಿದ್ಧರಾಗಬೇಕು. ಒಂದುವೇಳೆ, ಇಷ್ಟೆಲ್ಲವನ್ನು ಮಾಡಿದರೂ ಪ್ರತಿಯಾಗಿ ಏನು ಸಿಗುತ್ತದೆ ಮತ್ತು ಎಷ್ಟು ಸಿಗುತ್ತದೆ ಎಂಬ ಪ್ರಶ್ನೆಯಿದೆ. ಹಾಲು ಕೊಡುವ ಹಸುವಿನ ನಿರ್ವಹಣೆಗೂ ಸಮಯ ಮೀಸಲಿಡಬೇಕು. ಅದರ ಕರುವಿನ ಬಗ್ಗೆ ನಿಗಾ ವಹಿಸಬೇಕು. ಹೀಗೆ ದನದ ಕುಟುಂಬವೂ ವಿಸ್ತರಿಸುತ್ತಾ ಹೋದಂತೆ ಒಂದೋ ಹಟ್ಟಿಯನ್ನು ವಿಸ್ತರಿಸುತ್ತಾ ಹೋಗಬೇಕಾಗುತ್ತದೆ ಅಥವಾ ದನಗಳನ್ನು ಮಾರಬೇಕಾಗುತ್ತದೆ. ಮತ್ತದೇ ಸಮಸ್ಯೆ. ಯಾರಿಗೆ ಮಾರುವುದು? ಖರೀದಿಸುವವರು ಯಾಕಾಗಿ ಖರೀದಿಸುತ್ತಾರೆ? ಮಾಂಸಕ್ಕಾಗಿ ಮಾರುವುದು ಅನೈತಿಕವಲ್ಲವೇ? ಹಾಗಾದರೆ, ಇದನ್ನು ದೊಡ್ಡಿಯಲ್ಲಿ ಇಟ್ಟುಕೊಂಡು ಏನು ಮಾಡುವುದು? ಇದರ ಖರ್ಚನ್ನು ಹೇಗೆ ನಿಭಾಯಿಸುವುದು?
ದನಗಳೆಲ್ಲ ಗ್ರಾಮೀಣ ಪ್ರದೇಶದಲ್ಲಿ ಯಾಕಿವೆ ಅನ್ನುವುದಕ್ಕೆ ಈ ಮೇಲಿನ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳಲ್ಲೇ  ಇವೆ. ರೈತರು ಬರೇ ಭಾವನೆಗಾಗಿ ದನ ಸಾಕಾಣಿಕೆ ಮಾಡುತ್ತಿಲ್ಲ. ಅದು ಅವರ ಅನಿವಾರ್ಯತೆ. ಗದ್ದೆಯನ್ನು ಉಳಬೇಕಾದರೆ, ಗೊಬ್ಬರ ಹಾಕಬೇಕಾದರೆ ಅವರಿಗೆ ದನ ಬೇಕು. ಹೈನುತ್ಪನ್ನಗಳಿಗಾಗಿಯೂ ಅವರಿಗೆ ದನ ಬೇಕು. ಅದೊಂದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ. ನಗರಗಳಲ್ಲಿ ಈ ಅವಕಾಶ ಇಲ್ಲ. ಅಲ್ಲಿ ದನಗಳಿಗೆ ಕೊಡುವ ಪ್ರಕ್ರಿಯೆ ನಡೆಯಬಹುದೇ ಹೊರತು ದನಗಳಿಂದ ಕೊಳ್ಳುವಿಕೆಗೆ ಇರುವ ಅವಕಾಶಗಳು ತೀರಾ ತೀರಾ ಕಡಿಮೆ. ಆದ್ದರಿಂದಲೇ ನಗರ ಪ್ರದೇಶಗಳು ದನ ಸಾಕಾಣಿಕೆಯಿಂದ ಮುಕ್ತವಾಗಿವೆ. ಹಾಗಂತ, ಈ ವಾಸ್ತವ ರಾಜಕಾರಣಿಗಳಿಗೆ ಖಂಡಿತ ಗೊತ್ತು. ಆದರೆ ಅದನ್ನು ಹೇಳಿದರೆ ಓಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಹೇಳುತ್ತಿಲ್ಲ.
ಭಾವನಾತ್ಮಕ ರಾಜಕಾರಣಕ್ಕೆ ಯಶಸ್ಸು ಲಭ್ಯವಾಗಬೇಕೆಂದರೆ, ಗೋಸಾಕಾಣಿಕೆಯ ಸುತ್ತ ಇರುವ ಈ ಸತ್ಯಗಳನ್ನು ಅಡಗಿಸಬೇಕು. ‘ಗೋಹತ್ಯೆ ನಿಷೇಧ’ ಎಂಬ ಕೂಗೆಬ್ಬಿಸಿ ಭಾವನಾತ್ಮಕ ಯುದ್ಧಕ್ಕೆ ಜನರನ್ನು ಸಜ್ಜುಗೊಳಿಸಬೇಕು. ಸದ್ಯ ನಡೆಯುತ್ತಿರುವುದು ಇಷ್ಟೇ. ಉತ್ತರ ಪ್ರದೇಶದ ಬೀಡಾಡಿ ದನಗಳು ಸಾರುತ್ತಿರುವುದೂ ಈ ರಾಜಕೀಯದ ಅಡ್ಡ ಪರಿಣಾಮವನ್ನೇ.