Friday 10 July 2020

ಆಕ್ಸಿಜನ್ ಸೆಂಟರ್ ಆದ ಮಸೀದಿ, ಕ್ವಾರಂಟೈನ್ ಕೇಂದ್ರವಾದ ಹಜ್ ಭವನ: ಸುಳ್ಳೇ ಒಮ್ಮೆ ಶರಣಾಗು



ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್‍ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್‍ದೇವ್‍ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ  ಎಫ್‍ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ.  ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ  ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ  ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ  ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ  ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು.  ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು  ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್‍ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್‍ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ  ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು.  ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ.  ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ  ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು  ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು  ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ  ಮಂದಿಯನ್ನು ಇವತ್ತು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ  ಶಾಹೀನ್‍ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ  ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ  ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು  ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ  ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ  ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.

ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ  ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,

ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ  ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು.  ಆದರೆ,

ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್‍ದೇವ್‍ರ  ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.

ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ  ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.

Wednesday 1 July 2020

ಪ್ರಶ್ನೆಗೊಳಗಾಗಬೇಕಾದದ್ದು ಯಾರು- ಪರವಾನಿಗೆ ಕೊಟ್ಟ ಸರಕಾರವೋ ಅಲ್ಲ, ಮಾಂಸವೃತ್ತಿಯಲ್ಲಿರುವ ಬಡಪಾಯಿಗಳೋ?


ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹಿಂಸಾತ್ಮಕ ಘಟನೆಗಳು ನಡೆದಿವೆ. ಈ ಮೂರೂ ಘಟನೆಗಳು ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟಕ್ಕೆ ಸಂಬಂಧಿಸಿದವು. ಹಾವೇರಿಯ  ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ಮಂಗಳೂರಿಗೆ ಕಾನೂನುಬದ್ಧವಾಗಿಯೇ ಸಾಗಿಸುತ್ತಿದ್ದ ಮುಹಮ್ಮದ್ ಹನೀಫ್ ಎಂಬವರನ್ನು ಅವರದೇ ವಾಹನಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ನಡೆದ  ಬಳಿಕ ಇನ್ನೆರಡು ಇಂಥದ್ದೇ  ಘಟನೆಗಳು ನಡೆದುವು. ಇದರಲ್ಲಿ ಒಂದು ಸುಳ್ಯದಲ್ಲಿ ನಡೆದರೆ, ಇನ್ನೊಂದು ಮಂಗಳೂರಿನಲ್ಲಿ. ಮಂಗಳೂರಿನ ಪ್ರಾಣಿ ವಧಾಗೃಹದಿಂದ ಪಕ್ಕದ ಕಂಕನಾಡಿ ಮತ್ತು ಜೆಪ್ಪು  ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ರಶೀದ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ರಿಕ್ಷಾ ಟೆಂಪೋಗೆ ಹಾನಿ ಮಾಡಲಾಗಿದೆ.
ಇದೊಂದು ಬಗೆಯ ಕ್ರೌರ್ಯ. ವ್ಯವಸ್ಥೆಗೆ ಒಡ್ಡುವ ಸವಾಲು. ಕಾನೂನುಬದ್ಧ ವೃತ್ತಿಯನ್ನು ಅಪರಾಧಿ ಕೃತ್ಯದಂತೆ ಮತ್ತು ಆ ವೃತ್ತಿಯಲ್ಲಿ ತೊಡಗುವವರನ್ನು ಭೀತಿಗೆ ತಳ್ಳುವುದಕ್ಕೆ ಮಾಡುವ ಹುನ್ನಾರ.  ಮಂಗಳೂರಿನಲ್ಲಿರುವ ವಧಾಗೃಹಕ್ಕೆ ಪರವಾನಿಗೆ ಕೊಟ್ಟಿರುವುದು ನಿರ್ದಿಷ್ಟ ಧರ್ಮವೊಂದರ ಧರ್ಮಗುರುಗಳಲ್ಲ, ಸರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸಂಸದರಿದ್ದಾರೆ. 8 ಮಂದಿ ಶಾಸಕರ ಪೈಕಿ 7  ಮಂದಿಯೂ ಬಿಜೆಪಿಯವರೇ. ರಾಜ್ಯದಲ್ಲಿ ಬಿಜೆಪಿಯದ್ದೇ  ಆಡಳಿತವಿದೆ. ಮಂಗಳೂರು ನಗರದ ಸ್ಥಳೀಯಾಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟಿದ್ದೂ ಜಾನುವಾರು ಮತ್ತು ಮಾಂಸ ಸಾಗಾಟಗಾರರ  ಮೇಲೆ ಹಲ್ಲೆ ನಡೆಯುವುದೆಂದರೆ ಏನರ್ಥ? ಯಾಕೆ ಸಂಸದರು ಮತ್ತು ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸುತ್ತಿಲ್ಲ? ಒಂದುಕಡೆ ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಣಿಕೆಗೆ  ಪರವಾನಿಗೆಯನ್ನು ಕೊಡುವುದು ಮತ್ತು ಇನ್ನೊಂದು ಕಡೆ ಈ ಪ್ರಕ್ರಿಯೆಯನ್ನೇ ಅವಮಾನಿಸುವ ರೀತಿಯಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಮೌನವಾಗುವುದು- ಈ ದ್ವಂದ್ವವೇಕೆ?
ಮಾಂಸಾಹಾರದ ಬಗ್ಗೆ ಒಂದು ವರ್ಗದ ಜನರಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ನಿರಾಕರಿಸಬೇಕಿಲ್ಲ. 6 ಕೋಟಿ ಕನ್ನಡಗಿರುವ ಈ ರಾಜ್ಯದಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಭಿನ್ನ. ಆಹಾರ  ಕ್ರಮಗಳೂ ಭಿನ್ನ. ರಾಜಕೀಯ ಒಲವು, ಸಂಸ್ಕೃತಿ, ಧರ್ಮ, ರೂಢಿ-ಸಂಪ್ರದಾಯಗಳೂ ಏಕರೂಪದ್ದಲ್ಲ. ಈ ದೇಶದಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳುವ ಮತ್ತು ಅದರ ಪರ ಜನಜಾಗೃತಿಯನ್ನು  ಮೂಡಿಸುವ ಸ್ವಾತಂತ್ರ್ಯ ಇರುವಂತೆಯೇ ಮಾಂಸಾಹಾರವನ್ನು ಸೇವಿಸುವ ಮತ್ತು ಆ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುವ ಸ್ವಾತಂತ್ರ್ಯವೂ ಇದೆ. ಇದು ಪ್ರತಿಯೊಬ್ಬರಿಗೂ ಸಂವಿಧಾನ ಒದಗಿಸಿರುವ  ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಲ್ಲಿ ಬದಲಾವಣೆ ತರುವುದಕ್ಕೆ ಅದರದ್ದೇ  ಆದ ದಾರಿಯಿದೆ. ಅದು ಬೀದಿ ದುಷ್ಕರ್ಮದಿಂದ ಆಗಬೇಕಾದುದಲ್ಲ. ಈ ದೇಶದಲ್ಲಿ ಮದ್ಯಪಾನದ ವಿರುದ್ಧ ಹಲವು ಚಳವಳಿಗಳಾಗಿವೆ.  ಪಾನ ನಿಷೇಧವನ್ನು ಒತ್ತಾಯಿಸಿ ಚಿತ್ರದುರ್ಗದಿಂದ ಸಾವಿರಾರು ಮಹಿಳೆಯರು ವರ್ಷದ ಹಿಂದೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ವೀಣಾ ಭಟ್ ಅವರು ಮುಂಚೂಣಿಯಲ್ಲಿ ನಿಂತು ಈ  ಹೋರಾಟಕ್ಕೆ ಜೀವ ತುಂಬಿದ್ದರು. ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಿದ್ದರು. ಆ ಬಳಿಕವೂ ಈ ಹೋರಾಟ ಮುಂದುವರಿದಿದೆ. ಆದರೆ, ಸರಕಾರ  ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಕಾರಣವನ್ನೊಡ್ಡಿ ಈ ಹೋರಾಟದಲ್ಲಿದ್ದ ಯಾರೂ ಮದ್ಯಸಾಗಾಟ ವಾಹನಗಳನ್ನು ಹಾನಿಗೈದ ಘಟನೆ ನಡೆದಿಲ್ಲ. ಚಾಲಕರ ಮೇಲೆ ದೌರ್ಜನ್ಯ ಎಸಗಿದ್ದೂ  ಇಲ್ಲ. ಹಾಗಂತ, ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕೆಂಬುದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೊರಟ ಮಹಿಳೆಯರ ಮಾತ್ರ ಬೇಡಿಕೆಯಾಗಿರಲಿಲ್ಲ. ಈ ರಾಜ್ಯದ ಎಲ್ಲ ಧರ್ಮದ  ಧರ್ಮಗುರುಗಳು ಕೂಡ ಈ ಬೇಡಿಕೆಯ ಪರವಾಗಿ ಮಾತಾಡಿದ್ದರು. ಈ ಹೋರಾಟಕ್ಕೆ ಸ್ವಾಮೀಜಿಯವರೇ ಚಾಲನೆ ನೀಡಿದ್ದೂ ಇದೆ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಮದ್ಯಪಾವನವು ಆತ್ಮಹತ್ಯೆ, ಹಲ್ಲೆ ಮತ್ತು ಹತ್ಯಾ ಪ್ರಕರಣಗಳಿಗೆ ಪ್ರಚೋದನೆ ನೀಡುತ್ತಿವೆ ಎಂಬುದಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದ ತಜ್ಞರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈ ಬೇಡಿಕೆಯನ್ನು ಬೆಂಬಲಿಸುವ  ದೊಡ್ಡದೊಂದು ಜನಸಮುದಾಯವೇ ಇದೆ. ಆದರೂ ಈ ಗುಂಪು ಹಿಂಸೆಗೆ ಇಳಿದಿಲ್ಲ. ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ಕಂಡಿಲ್ಲ. ಯಾಕೆಂದರೆ, ಅವರು ಆ ವೃತ್ತಿಯಲ್ಲಿರುವುದಕ್ಕೆ ಇಲ್ಲಿನ  ಆಡಳಿತವೇ ಕಾರಣ. ಸರಕಾರ ಪರವಾನಿಗೆ ಕೊಡದೇ ಇರುತ್ತಿದ್ದರೆ, ಮದ್ಯ ಮಾರಾಟಗಾರರನ್ನು ಅಪರಾಧಿಗಳಂತೆ ನೋಡಬಹುದಿತ್ತು. ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಹುದಿತ್ತು. ಅಷ್ಟಕ್ಕೂ,
ವಧಾಗೃಹ ನಡೆಸುವ ಪರವಾನಿಗೆಯನ್ನು ಸರಕಾರ ಯಾವುದಾದರೊಂದು ನಿರ್ದಿಷ್ಟ ಧರ್ಮದ ಜನರಿಗೆ ಮೀಸಲಾಗಿ ಇಟ್ಟಿಲ್ಲ. ಅದು ಏಲಂನಲ್ಲಿ ವಿತರಣೆಯಾಗುತ್ತದೆ. ಯಾರು ಹೆಚ್ಚು ಬೆಲೆಗೆ  ಕೊಂಡುಕೊಳ್ಳಲು ತಯಾರಾಗುತ್ತಾರೋ ಅವರಿಗೆ ಪರವಾನಿಗೆ ಸಿಗುತ್ತದೆ. ಅದೊಂದು ಮುಕ್ತ ಪರವಾನಿಗೆ. ವಧಾಗೃಹಕ್ಕೆ ಜಾನುವಾರು ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಮುಕ್ತವಾಗಿದೆ.  ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಯಾರಿಗೂ ಅದು ಲಭಿಸುತ್ತದೆ. ವಧಾಗೃಹದಿಂದ ಮಾಂಸ ಸಾಗಾಟ ಮಾಡುವುದಕ್ಕೂ ಪರವಾನಿಗೆ ಇದೆ. ಅದೂ ಕೂಡ  ಮುಕ್ತವಾಗಿದೆ. ಆದ್ದರಿಂದ ಯಾರಿಗೆ ವಧಾಗೃಹದ ಮೇಲೆ, ಜಾನುವಾರು ಸಾಗಾಟ ಮತ್ತು ಮಾಂಸ ಸಾಗಾಟದ ಮೇಲೆ ಭಿನ್ನಾಭಿಪ್ರಾಯ ಇದೆಯೋ ಅವರು ವಧಾಗೃಹದ ಮೇಲೆ ಮತ್ತು ಜಾನುವಾರು  ಸಾಗಾಟಗಾರರ ಮೇಲೆ ದಾಳಿ ಮಾಡಬೇಕಾದುದಲ್ಲ. ಹೀಗೆ ಮಾಡುವುದು ಪ್ರಭುತ್ವಕ್ಕೆ ಎಸೆಯುವ ಸವಾಲು. ಆದರೂ ಮತ್ತೆ ಮತ್ತೆ ಇಂಥ ದಾಳಿಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ  ಮತ್ತು ಈ ದಾಳಿಗಳ ಹಿಂದಿನ ಹುನ್ನಾರ ಬಿಚ್ಚಿಕೊಳ್ಳುವುದೂ ಈ ಪ್ರಶ್ನೆಯಿಂದಲೇ.
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸ ವ್ಯಾಪಾರದಲ್ಲಿ ನಿರ್ದಿಷ್ಟ ಧರ್ಮವೊಂದರ ಸಾಕಷ್ಟು ಅನುಯಾಯಿಗಳು ತೊಡಗಿಸಿಕೊಂಡಿದ್ದಾರೆ. ಕಾನೂನುಬದ್ಧ ವೃತ್ತಿ ಎಂಬ ನೆಲೆಯಲ್ಲಿ ಅದು  ಅವಹೇಳನಕ್ಕೋ, ಹಿಂಜರಿಕೆಗೋ, ಕೀಳರಿಮೆಗೋ ಒಳಗಾಗಬೇಕಾದ್ದೂ ಅಲ್ಲ. ಆದರೆ, ದಾಳಿಗಳ ಹಿಂದಿನ ಉದ್ದೇಶವೂ ಇದುವೇ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು, ಕಾನೂನುಬದ್ಧ  ವೃತ್ತಿಯ ಬಗ್ಗೆ ಕೀಳರಿಮೆಗೆ ಗುರಿಪಡಿಸುವುದು ಮತ್ತು ಮುಸ್ಲಿಮರು ಪರವಾನಿಗೆಯಿಲ್ಲದೇ ಮಾಂಸ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುಳ್ಳನ್ನು ಸದಾ ಜೀವಂತ ಇಟ್ಟುಕೊಳ್ಳುವುದು- ಇವು ಮತ್ತು  ಇಂಥ ಇನ್ನಿತರ ಉದ್ದೇಶಗಳೇ ಈ ದಾಳಿಗಳ ಹಿಂದಿವೆ. ಇಂಥ ದಾಳಿಗಳು ರಾಜಕೀಯವಾಗಿಯೂ ಲಾಭವನ್ನು ತಂದುಕೊಡುತ್ತದೆ. ವಧಾಗೃಹದಿಂದ ಹಿಡಿದು ಮಾಂಸ ಸಾಗಾಟದ ವರೆಗೆ ನಡೆಯುವ ಎಲ್ಲ  ಪ್ರಕ್ರಿಯೆಗಳಿಗೆ ಸರಕಾರವೇ ಪರವಾನಿಗೆ ನೀಡಿದ್ದರೂ ಈ ದಾಳಿಗಳ ಸಂದರ್ಭದಲ್ಲಿ ಇವು ಯಾವುವೂ ಚರ್ಚೆಗೆ ಒಳಗಾಗದಂತೆ ಜಾಣತನದಿಂದ ನೋಡಿಕೊಳ್ಳಲಾಗುತ್ತದೆ. ಅಲ್ಲದೇ, ದುಷ್ಕರ್ಮಿಗಳು ಬಂಧ ನಕ್ಕೀಡಾದ ಮರುಕ್ಷಣವೇ ಜಾಮೀನು ಪಡೆದು ಹೊರಬರುತ್ತಾರೆ. ಇದೊಂದು ರೀತಿಯ ಕಣ್ಣಾಮುಚ್ಚಾಲೆ ಆಟ. ಈ ಆಟಕ್ಕೆ ಕೊನೆ ಹಾಡಲೇಬೇಕು. ರಾಜಕೀಯದ ಮಂದಿ ಆಡುತ್ತಿರುವ ಈ ಆಟಕ್ಕೆ ಕಾ ನೂನುಬದ್ಧವಾಗಿ ದುಡಿಯುತ್ತಿರುವ ಮಂದಿ ಪದೇಪದೇ ಬಲಿಯಾಗುವುದನ್ನು ನಾಗರಿಕರು ಸಹಿಸಬಾರದು. ಅಷ್ಟಕ್ಕೂ,
ಬರೇ ದಾಳಿ ನಡೆಸುವುದು ದುಷ್ಕರ್ಮಿಗಳ ಉದ್ದೇಶ ಅಲ್ಲ. ಎರಡೂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟು ಹಾಕುವುದೂ ಅವರ ಗುರಿಯಾಗಿದೆ. ಇದು ಗಂಭೀರ ಅಪರಾಧ. ಆದ್ದರಿಂದ  ದುಷ್ಕರ್ಮಿಗಳ ವಿರುದ್ಧ ಈ ಕಾಯ್ದೆಯಡಿ ಪೊಲೀಸರು ಕೇಸು ದಾಖಲಿಸಬೇಕು. ದುಷ್ಕರ್ಮಿಗಳು ಸುಲಭವಾಗಿ ಜಾಮೀನು ಪಡೆದು ಹೊರಬರದಂತೆ ನೋಡಿಕೊಳ್ಳಬೇಕು. ಅಂದಹಾಗೆ,
ವಧಾಗೃಹ, ಜಾನುವಾರು ಸಾಗಾಟ ಮತ್ತು ಮಾಂಸಾಹಾರದ ಬಗ್ಗೆ ಭಿನ್ನಾಭಿಪ್ರಾಯವನ್ನು ತಾಳುವುದು ಬೇರೆ ಹಾಗೂ ಕಾನೂನುಬದ್ಧ ವೃತ್ತಿಯಲ್ಲಿ ತೊಡಗಿರುವವರ ಮೇಲೆ ಹಲ್ಲೆ ನಡೆಸುವುದು ಬೇರೆ.  ಇವೆರಡನ್ನೂ ಸಮಾನವಾಗಿ ಕಾಣಲಾಗದು, ಕಾಣಬಾರದು.