Tuesday 23 April 2024

ತ್ರಿವಳಿ ತಲಾಕ್: ಪ್ರಧಾನಿ ಹೇಳುವುದೇನು, ವಾಸ್ತವ ಏನು?



ಸನ್ಮಾರ್ಗ ಸಂಪಾದಕೀಯ 

ತ್ರಿವಳಿ ತಲಾಕ್‌ನ ವಿರುದ್ಧ ಕೇಂದ್ರ ಸರಕಾರ ತಂದಿರುವ ಕಾನೂನು ಕ್ರಾಂತಿಕಾರಿಯೇ? ಅದರಿಂದ ಮುಸ್ಲಿಮ್ ಮಹಿಳೆಯರ ಬದುಕಿಗೆ ಭದ್ರತೆ ಒದಗಿದೆಯೇ? ಮುಸ್ಲಿಮ್ ಮಹಿಳೆಯರು ಈ ಕಾನೂನಿ ನಿಂದ ಸಂತೃಪ್ತರಾಗಿದ್ದಾರೆಯೇ?

ಉತ್ತರಾಖಂಡದ ಉಧಂಸಿಂಗ್  ನಗರದ ಶಾಯರಾ ಬಾನು ಅವರನ್ನು 2002ರಲ್ಲಿ ರಿಝ್ವಾನ್ ಅಹ್ಮದ್ ಎಂಬವರು ವಿವಾಹವಾಗುತ್ತಾರೆ. 2015ರಲ್ಲಿ ಶಾಯರಾ ಬಾನುಗೆ ರಿಝ್ವಾನ್ ತಲಾಕ್ (ವಿಚ್ಛೇದನ) ನೀಡುತ್ತಾರೆ. ಶಾಯರಾ ಈ ವಿಚ್ಛೇದನ ಕ್ರಮವನ್ನು ಒಪ್ಪುವುದಿಲ್ಲ. ‘ತಲಾಕ್ ತಲಾಕ್ ತಲಾಕ್’ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ಕ್ರಮದ ಮೂಲಕ ತನಗೆ ವಿಚ್ಛೇದನ ನೀಡಲಾಗಿದ್ದು, ಈ ತಲಾಕನ್ನು ರದ್ದುಗೊಳಿಸಬೇಕೆಂದು ಕೋರಿ ಆಕೆ 2016 ಫೆಬ್ರವರಿಯಲ್ಲಿ ಸುಪ್ರೀಮ್ ಕೋರ್ಟ್ನ ಬಾಗಿಲು ತಟ್ಟುತ್ತಾರೆ. ಅಲ್ಲದೇ, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಎಂಬೆರಡು ಪದ್ಧತಿಗಳನ್ನೂ ರದ್ದುಗೊಳಿಸುವಂತೆ ಸುಪ್ರೀಮ್ ಕೋರ್ಟಿಗೆ ಮನವಿ ಮಾಡುತ್ತಾರೆ. ಈ ಅರ್ಜಿಯ ವಿಚಾರಣೆಗಾಗಿ 2017 ಮಾರ್ಚ್ 30ರಂದು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸುತ್ತದೆ. ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ನೇತೃತ್ವದಲ್ಲಿ ರಚಿಸಲಾದ ಈ ಸಮಿತಿಯಲ್ಲಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಯು.ಯು. ಲಲಿತ್ ಮತ್ತು ಅಬ್ದುಲ್ ನಝೀರ್‌ರನ್ನು ಸೇರಿಸಲಾಗುತ್ತದೆ. ಈ ಪೀಠವು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುತ್ತದೆ. ಆದರೆ,

2017 ಆಗಸ್ಟ್ 22ರಂದು ನೀಡಲಾದ ಈ ತೀರ್ಪು ಭಿನ್ನಮತದಿಂದ ಕೂಡಿತ್ತು. ಐವರು ನ್ಯಾಯಾ ಧೀಶರ ಪೈಕಿ ಮುಖ್ಯ ನ್ಯಾಯಾಧೀಶ ಕೇಹರ್ ಮತ್ತು ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುವುದಕ್ಕೆ ವಿರುದ್ಧ ಇದ್ದರು. ಆದರೆ ಇದಕ್ಕೆ ಇತರ ಮೂವರು ನ್ಯಾಯಾಧೀಶರ ಬೆಂಬಲ ಸಿಗಲಿಲ್ಲ. ಹೀಗೆ ತ್ರಿವಳಿ ತಲಾಕ್ ಅಸಿಂಧು ಎಂಬುದಾಗಿ  3:2 ಬಹುಮತದ ಮೂಲಕ ಸಾರಲಾಯಿತು. ಅಂದರೆ, ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದರೆ ಅದು ವಿಚ್ಛೇದನ ಆಗುವುದಿಲ್ಲ ಎಂದು ಅರ್ಥ ಮತ್ತು  ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಮುಂದುವರಿಯುತ್ತಾರೆ ಎಂಬುದೇ ಇದರ ತಾತ್ಪರ್ಯ. ಆದರೆ 2019 ಜುಲೈಯಲ್ಲಿ ಕೇಂದ್ರ ಸರಕಾರ ತ್ರಿವಳಿ ತಲಾಕ್ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಿತು. ಅದರ ಪ್ರಕಾರ, ತ್ರಿವಳಿ ತಲಾಕ್ ಹೇಳುವುದು ಕ್ರಿಮಿನಲ್ ಅಪರಾಧ ಮತ್ತು ಅಂಥ ಅಪರಾಧ ಎಸಗಿದವರಿಗೆ 3 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಅಂದರೆ,

ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಸಿಂಧು ಎಂದು ಘೋಷಿಸುವಾಗ, ಕೇಂದ್ರ ಸರಕಾರವು ಈ ಕಾನೂನಿನ ಮೂಲಕ ತ್ರಿವಳಿ ತಲಾಕನ್ನೇ  ಸಿಂಧು ಎಂದು ಪರೋಕ್ಷವಾಗಿ ಘೋಷಿಸಿದಂತಾಯಿತು. ಸುಪ್ರೀಮ್ ಕೋರ್ಟ್ ನ  ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಬಳಿಕವೂ ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಉಳಿಯುತ್ತಾರೆ. ಆದರೆ, ಕೇಂದ್ರ ಸರಕಾರದ ಕಾನೂನಿನ ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಪತಿ ಮೂರು ವರ್ಷ ಜೈಲು ಪಾಲಾಗುತ್ತಾನೆ. ಹಾಗಂತ, ಈ ಸಂದರ್ಭದಲ್ಲಿ ಪತ್ನಿ-ಮಕ್ಕಳ ಜೀವನಕ್ಕೇನು ದಾರಿ ಎಂಬುದರ ಬಗ್ಗೆ ಯಾವ ವಿವರಣೆಯೂ ಈ ಕಾನೂನಿನಲ್ಲಿಲ್ಲ. ಹೀಗೆ ಪತಿಯನ್ನೇ ಜೈಲಿಗಟ್ಟಿದ ಪತ್ನಿ ಆ ಬಳಿಕ ಸಾಮಾಜಿಕವಾಗಿ ಎದುರಿಸಬೇಕಾದ ಆರ್ಥಿಕ  ಸವಾಲುಗಳಿಗೂ ಈ ಕಾನೂನಿನಲ್ಲಿ ಪರಿಹಾರಗಳಿಲ್ಲ. ಅಲ್ಲದೇ, ಪತಿ ಜೈಲಲ್ಲಿರುವ 3 ವರ್ಷಗಳ ವರೆಗೆ ಈ ಪತ್ನಿಗೆ ಬೇರೆ ವಿವಾಹ ಆಗುವಂತೆಯೂ ಇರುವುದಿಲ್ಲ. ಯಾಕೆಂದರೆ, ಅವರ ವಿಚ್ಛೇದನವೇ ನಡೆದಿಲ್ಲ. ಇನ್ನು, ಆತ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಬಳಿಕ ಆಕೆಯನ್ನು ಒಪ್ಪಿಕೊಳ್ಳುತ್ತಾನಾ ಅನ್ನುವ ಪ್ರಶ್ನೆಯೂ ಇದೆ. ತನ್ನನ್ನು ಜೈಲಿಗೆ ಹಾಕಿದವಳು ಎಂಬ ಆಕ್ರೋಶದಲ್ಲಿ ಗೃಹಹಿಂಸೆ, ದೌರ್ಜನ್ಯ, ನಿಂದನೆ ಇತ್ಯಾದಿ ಗಳಿಗೆ ಆಕೆ ತುತ್ತಾಗಲೂ ಬಹುದು. ಅಥವಾ ಸರಿಯಾದ ರೀತಿಯಲ್ಲಿ ವಿಚ್ಛೇದನ ಪಡಕೊಳ್ಳುವ ಪ್ರಕ್ರಿಯೆ ಆರಂಭವಾಗಬಹುದು. ಆದರೂ ಅಮೂಲ್ಯ 3 ವರ್ಷಗಳು ಅದಾಗಲೇ ಆಕೆಯ ಪಾಲಿಗೆ ನಷ್ಟವಾಗಿರುತ್ತದೆ. ಅತ್ತ ವಿಚ್ಛೇದನವೂ ಸಿಗದೇ ಮತ್ತು ಇತ್ತ ಪತಿಯೂ ಇಲ್ಲದೇ ಅಂತಿಮವಾಗಿ ಆಕೆಯೇ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಒಂದುರೀತಿಯಲ್ಲಿ, ಮುಸ್ಲಿಮ್ ಮಹಿಳೆಯರ ಪರ ಎಂಬ ಹಣೆಪಟ್ಟಿಯೊಂದಿಗೆ ಜಾರಿಗೊಂಡ ತ್ರಿವಳಿ ತಲಾಕ್ ಕಾನೂನಿನ ಒಳಗುಟ್ಟು ಇದು. ಅಸಿಂಧು ತಲಾಕ್ ಹೇಳಿದ ತಪ್ಪಿಗೆ ಪತಿ ಜೈಲು ಪಾಲಾಗುತ್ತಾನೆ ಅನ್ನುವುದನ್ನು ಬಿಟ್ಟರೆ, ಆಕೆಗೇನೂ ಸುಖ ಸಿಗುವುದಿಲ್ಲ. ಆತ ಜೈಲಲ್ಲಿರುವಷ್ಟು ಸಮಯ ಜೀವನ ಭದ್ರತೆಯೂ ಇಲ್ಲದೇ, ಇನ್ನೊಂದು ಮದುವೆಯಾಗುವುದಕ್ಕೆ ಅವಕಾಶವೂ ಇಲ್ಲದೇ ಆಕೆ ಕೊರಗಬೇಕಾಗುತ್ತದೆ. ಅಂದಹಾಗೆ,

ಪತ್ನಿಯನ್ನು ಏಕಾಏಕಿ ಬಿಟ್ಟುಹೋಗುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ ಎಂದಾಗಿದ್ದರೆ ಕೇಂದ್ರ ಸರಕಾರ ಹಿಂದೂ ಪತಿಗೂ ಇದೇ ಕಾನೂನನ್ನು ಅನ್ವಯಗೊಳಿಸಬೇಕಿತ್ತಲ್ಲವೇ? ಆದರೆ, ತ್ರಿವಳಿ ತಲಾಕ್ ಹೇಳುವುದನ್ನು ಕ್ರಿಮಿನಲ್ ಅಪರಾಧವೆಂದು ಸಾರಿರುವ ಕೇಂದ್ರ ಸರಕಾರ ಹಿಂದೂ ಪತಿಯ ಇಂಥದ್ದೇ  ಕ್ರಮವನ್ನು ಸಿವಿಲ್ ಅಪರಾಧವಾಗಿ ದಾಖಲಿಸಿದೆ. ಆ ಕಾನೂನಿನಲ್ಲಿ ಇಂಥ ಯಾವ ತೀವ್ರತೆಯೂ ಇಲ್ಲ. ಸಮಾನ ನಾಗರಿಕ ಸಂಹಿತೆಯ ಬಗ್ಗೆ ನಿಂತಲ್ಲಿ ಕುಳಿತಲ್ಲಿ ಮಾತಾಡುವ ಇದೇ ಕೇಂದ್ರ ಸರಕಾರವೇ ಮುಸ್ಲಿಮರಿಗೊಂದು ಮತ್ತು ಹಿಂದೂಗಳಿಗೊಂದು  ಕಾನೂನನ್ನು ರೂಪಿಸಿದೆ ಎಂಬುದೂ ಗಮನಾರ್ಹ. ನಿಜವಾಗಿ,

ತ್ರಿವಳಿ ತಲಾಕ್‌ನ ವಿರುದ್ಧ ಸುಪ್ರೀಮ್ ಕೋರ್ಟಿಗೆ ದೂರು ಸಲ್ಲಿಸಿದ ಶಾಯರಾ ಬಾನುರದ್ದೇ  ಒಂದು ದೀರ್ಘ ಕತೆಯಿದೆ. ಈಕೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಬನ್ವಿಧರ್ ಭಾಗವತ್ ಸಮ್ಮುಖದಲ್ಲಿ 2020 ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಇದಕ್ಕಿಂತ ಎರಡು ವರ್ಷಗಳ ಮೊದಲೇ ತಾನು ಬಿಜೆಪಿ ಸೇರ್ಪಡೆಗೊಳ್ಳಲು ಬಯಸುವುದಾಗಿ ಹೇಳಿದ್ದರು. ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲೂ  ಸಿದ್ಧ ಎಂದೂ ಘೋಷಿಸಿದ್ದರು. ಆಕೆಯ ಮಾತು, ವರ್ತನೆ ಮತ್ತು ನಡವಳಿಕೆಗಳಲ್ಲಿ ಅನುಮಾನಕ್ಕೆ ಪೂರಕವಾದ ಧಾರಾಳ ಇದ್ದುವು. ತನ್ನ ಅಜೆಂಡಾ ಜಾರಿಗೊಳಿಸುವುದಕ್ಕಾಗಿ ಬಿಜೆಪಿ ಆಕೆಯನ್ನು ಬಳಸಿಕೊಂಡಿದೆ ಎಂಬ ಸಂದೇಹವನ್ನು ಆಕೆಯ ಬಿಜೆಪಿ ಸೇರ್ಪಡೆ ಪುಷ್ಠೀಕರಿಸಿದಂತಿತ್ತು. ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸುವುದಕ್ಕೆ ಬಿಜೆಪಿ ಆಕೆಯನ್ನು ಧಾರಾಳ ಬಳಸಿಕೊಂಡಿತು. ಅಸಮರ್ಪಕ ಕಾನೂನೊಂದನ್ನು ಸಂತ್ರಸ್ತೆಯ ಮೂಲಕವೇ ಸಮರ್ಥಿಸಿಕೊಂಡ ಬಿಜೆಪಿ, ತನ್ನನ್ನು ಮುಸ್ಲಿಮ್ ಮಹಿಳೆಯರ ಪಾಲಿನ ಮಸೀಹನಂತೆ ಬಿಂಬಿಸಿಕೊಂಡಿತು. ಇದೀಗ,

 ಪಶ್ಚಿಮ ಉತ್ತರ ಪ್ರದೇಶದ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಪ್ರಧಾನಿ ಮತ್ತೆ ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮ್ ಮಹಿಳೆಯರ ಬದುಕಿಗೆ ಭದ್ರತೆ ನೀಡಿ ವಿಮೋಚನೆಗೊಳಿಸಿದ್ದೇವೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಆದರೆ, ತ್ರಿವಳಿ ತಲಾಕ್ ಕಾನೂನಿಗಿಂತ ಮೊದಲು ದೇಶದಲ್ಲಿ ಎಷ್ಟು ತ್ರಿವಳಿ ತಲಾಕ್ ಪ್ರಕರಣಗಳಿದ್ದುವು ಮತ್ತು ಕಾನೂನಿನ ನಂತರ ಎಷ್ಟು ಪ್ರಕರಣಗಳಿವೆ ಎಂಬ ಸಣ್ಣ ಅಂಕಿ-ಅಂಶವನ್ನಾದರೂ ಅವರು ನೀಡಿರುತ್ತಿದ್ದರೆ ಅವರ ಮಾತಿಗೆ ಗೌರವ ಇರುತ್ತಿತ್ತು. ತ್ರಿವಳಿ ತಲಾಕ್‌ನಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಮುಸ್ಲಿಮ್ ಸಮುದಾಯದ ಒಪ್ಪಿತ ನಿಲುವಾಗಿದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದೇ ನಿಲುವನ್ನು ಹೊಂದಿದೆ. ತ್ರಿವಳಿ ತಲಾಕ್ ಬಿಡಿ, ಒಂದೇ ಉಸಿರಿನಲ್ಲಿ ನೂರು ತಲಾಕ್ ಹೇಳಿದರೂ ಅದು ಪೂರ್ಣ ತಲಾಕ್ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಮುಸ್ಲಿಮ್ ವಿದ್ವಾಂಸರು ಈ ಮೊದಲೇ ಹೊಂದಿದ್ದರು. ವಿಚ್ಛೇದನದ ಕನಿಷ್ಠ ಅವಧಿ 3 ತಿಂಗಳು. ಗರಿಷ್ಠ ಎಷ್ಟೂ ಆಗಬಹುದು. ಒಂದುಬಾರಿ ತಲಾಕ್ ಹೇಳಿ ಒಂದು ಆರ್ತವ ಕಾಲದ ವರೆಗೆ ಕಾಯಬೇಕು. ಆ ನಡುವೆ ಅವರಿಬ್ಬರೂ ಒಂದೇ ಮನೆಯಲ್ಲಿ ಪತಿ ಪತ್ನಿಯಾಗಿಯೇ ಇರುತ್ತಾರೆ. ಈ ನಡುವೆ ಅವರ ನಡುವೆ ದೈಹಿಕ ಸಂಬಂಧ ಏರ್ಪಟ್ಟರೆ ಆ ತಲಾಕ್ ಮುರಿಯುತ್ತದೆ. ಒಂದುವೇಳೆ, ಇಂಥ ಕ್ರಿಯೆ ಏರ್ಪಡದಿದ್ದರೆ ಕುಟುಂಬಗಳ ನಡುವೆ ಮಾತುಕತೆಯಂಥ ವಿವಿಧ ಕ್ರಿಯೆಗಳು ನಡೆಯಬೇಕು. ಇವೆಲ್ಲ ನಡೆದೂ ಪತಿ ವಿಚ್ಛೇದನಕ್ಕೆ ಬದ್ಧವಾಗಿರುವುದಾದರೆ ದ್ವಿತೀಯ ತಲಾಕ್ ಹೇಳಬೇಕು. ಆ ಬಳಿಕವೂ ಅವರಿಬ್ಬರೂ ಜೊತೆಯಾಗಿಯೇ ಇರಬೇಕು. ಆಗಲೂ ಅವರ ನಡುವೆ ದೈಹಿಕ ಸಂಬಂಧ  ಏರ್ಪಟ್ಟರೆ ತಲಾಕ್ ಮುರಿಯುತ್ತದೆ. ಒಂದು ವೇಳೆ, ಯಾವ ಮಾತುಕತೆ, ಕೌನ್ಸಿಲಿಂಗೂ ಯಶಸ್ವಿಯಾಗದಿದ್ದರೆ ಮೂರನೇ ತಲಾಕ್ ಮೂಲಕ ಆ ದಾಂಪತ್ಯ ಸಂಬಂಧ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಇದು ತಲಾಕ್‌ನ ಸರಿಯಾದ ಕ್ರಮ. ಆದರೆ,

ತಪ್ಪಾದ ಕ್ರಮದಿಂದ ಸರಿಯಾದ ಕ್ರಮದತ್ತ ಸಮಾಜವನ್ನು ಕೊಂಡೊಯ್ಯಬೇಕಾದ ಸರಕಾರ, ಪತಿಯನ್ನೇ ಜೈಲಲ್ಲಿಟ್ಟು ಪತ್ನಿಯನ್ನು ಅತಂತ್ರಗೊಳಿಸಿ ತಾನು ಮುಸ್ಲಿಮ್ ಮಹಿಳೆಯರ ಹಿತ ಕಾದಿದ್ದೇನೆ ಎಂದು ಹೇಳುತ್ತಿರುವುದು ನಾಚಿಕೆಗೇಡು.

Tuesday 9 April 2024

ಝಕಾತ್: ಭಿನ್ನ ಪ್ರಯೋಗದ ಮೂಲಕ ಮಾಧ್ಯಮ ಗಮನ ಸೆಳೆದ ಜಮಾಅತೆ ಇಸ್ಲಾಮೀ ಹಿಂದ್




ಮೂವ್‌ಮೆಂಟ್  ಫಾರ್ ಪೀಸ್ ಆ್ಯಂಡ್ ಜಸ್ಟೀಸ್ (ಎಂಪಿಜೆ) ಎಂಬ ತೆಲಂಗಾಣದ ಸಂಸ್ಥೆಯೊಂದು  ಝಕಾತ್‌ನ ಮೂಲಕ ಕೈದಿಗಳಿಗೆ ಹೇಗೆ ನೆರವಾಗುತ್ತಿದೆ ಎಂಬ ಬಗ್ಗೆ ದಿ ಹಿಂದೂ ಪತ್ರಿಕೆ ಮಾರ್ಚ್ 31ರ ಸಂಚಿಕೆಯ ಮುಖಪುಟದಲ್ಲಿ ವಿವರವಾದ ವರದಿಯೊಂದನ್ನು ಪ್ರಕಟಿಸಿದೆ. ‘Zakaat helps free inmates during Ramzan ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ವರದಿ ಹಲವು ಸಕಾರಾತ್ಮಕ ಅಂಶಗಳನ್ನು ಎತ್ತಿ ಹೇಳಿದೆ. ಝಕಾತ್ ಎಂಬುದು ಮುಸ್ಲಿಮರಲ್ಲಿ ಮಾತ್ರ ಆಚರಣೆಯಲ್ಲಿರುವ ಮತ್ತು ಶ್ರೀಮಂತರು ತಮ್ಮ ಆಸ್ತಿಯಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ದಾನ ಮಾಡಲೇಬೇಕು ಎಂಬ ನಿಯಮವಿರುವ ಕ್ರಮ. ಸಾಮಾನ್ಯವಾಗಿ ಝಕಾತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕಾಗಿ ಬಳಸುವ ರೂಢಿಯಿದೆ. ಆದರೆ ತೆಲಂಗಾಣದ ಎಂಪಿಜೆ ಸಂಸ್ಥೆಯು ಈ ಸಾಮಾನ್ಯ ಆಲೋಚನೆಗಿಂತ ಭಿನ್ನವಾಗಿ ಅಸಹಾಯಕ ಕೈದಿಗಳು ಮತ್ತು ಅವರ ಕುಟುಂಬದ ಕಡೆಗೆ ಗಮನ ಹರಿಸಿದೆ. ಆದ್ದರಿಂದಲೇ ಈ ಸಂಸ್ಥೆಯು ದೇಶದ ಪ್ರಮುಖ ಮಾಧ್ಯಮವೊಂದರ ಮುಖಪುಟದಲ್ಲಿ ಕಾಣಿಸಿಕೊಂಡಿದೆ. ಈ ಎಂಪಿಜೆಯು ತೆಲಂಗಾಣ ಜಮಾಅತೆ ಇಸ್ಲಾಮೀ ಹಿಂದ್‌ನ ಅಂಗಸಂಸ್ಥೆ.

ಗೊತ್ತಿದ್ದೋ  ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಆ ಬಳಿಕ ಜಾಮೀನು ಮೊತ್ತವನ್ನೂ ಭರಿಸಲಾಗದೇ ಜೈಲಲ್ಲೇ  ಕೊಳೆಯುವ ಕೈದಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿದಿರುವುದು ಬಹಳ ಕಡಿಮೆ. ಜೊತೆಗೆ, ವ್ಯವಸ್ಥೆಯದ್ದೋ  ವ್ಯಕ್ತಿಗಳದ್ದೋ  ಸಂಚಿನಿಂದ  ಆರೋಪಿಯಾಗಿ ಜೈಲಲ್ಲಿ ಕಳೆಯುವವರೂ ಇದ್ದಾರೆ. ಹಾಗೆಯೇ, ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಶಿಕ್ಷಾ ಅವಧಿಯನ್ನು ಜೈಲಲ್ಲಿ ಕಳೆದರೂ ದಂಡದ  ಮೊತ್ತವನ್ನು ಪಾವತಿಸುವ ಸಾಮರ್ಥ್ಯವಿಲ್ಲದೇ ಜೈಲಲ್ಲೇ  ಕೊಳೆಯಬೇಕಾಗಿ ಬರುವುದೂ ಇದೆ. ಇಂಥ ಅಪರಾಧಿಗಳು ಮತ್ತು ಕೈದಿಗಳ ಬಗ್ಗೆ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಅಂತರಭಾವ ಇದ್ದೇ  ಇರುತ್ತದೆ. ಹಾಗೆಯೇ ಆಯಾ ಕುಟುಂಬಗಳೂ ಒಂದು ಹಂತದವರೆಗೆ ಅಪರಾಧಿ ಭಾವದೊಂದಿಗೆ ಬದುಕುವುದೂ ಇದೆ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದ ಸಂಕಟದೊಂದಿಗೆ ಅವು ಬದುಕುತ್ತಿರುತ್ತವೆ. ಮನೆಯ ಏಕೈಕ ಆಧಾರಸ್ತಂಭವಾಗಿದ್ದ ವ್ಯಕ್ತಿ ಯಾವುದೋ ಅಪರಾಧ ಕೃತ್ಯದ ಆರೋಪದಲ್ಲಿ ಬಂಧನಕ್ಕೀಡಾದಾಗ ಅಥವಾ ಕೋರ್ಟು ಅಪರಾಧಿಯೆಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿದಾಗ ಆ ವ್ಯಕ್ತಿಗಿಂತಲೂ ಕುಟುಂಬ ಹೆಚ್ಚು ಕಂಗಾಲಾಗುತ್ತದೆ. ಆ ಸಮಯದಲ್ಲಿ ಸಮಾಜ ಆದರಿಸದೇ ಹೋದರಂತೂ ಕುಟುಂಬ ಅಕ್ಷರಶಃ ಒಂಟಿತನದ ಭಾವದಿಂದ ಬೇಯುತ್ತದೆ. ಅಲ್ಲದೇ, ಆರೋಪಿಯ ಕುಟುಂಬದೊಂದಿಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ನೆರೆಕರೆಯವರು ಅಂಜುವುದೂ ಇದೆ. ಎಲ್ಲಿ ತಮ್ಮ ಮೇಲೆ ಅಪವಾದ ಬೀಳುತ್ತೋ, ಸರಕಾರ ಎಲ್ಲಿ ತಮ್ಮನ್ನೂ ಗುರಿ ಮಾಡುತ್ತೋ ಎಂಬ ಭಯ ಸಾಮಾನ್ಯ ಜನರನ್ನು ಕಾಡುವುದೂ ಇದೆ. ಇಂಥ ಸ್ಥಿತಿಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ಮತ್ತು ಅವರಲ್ಲಿ ಧೈರ್ಯ ಮೂಡಿಸುವ ಪ್ರಯತ್ನಗಳೂ ಆಗಲೇಬೇಕು. ಆರೋಪಿ ಅಪರಾಧಿಯಲ್ಲ ಮತ್ತು ಅಪರಾಧಿಯ ಅಪರಾಧವು ಜೈಲು ಶಿಕ್ಷೆ ಪೂರ್ಣಗೊಳ್ಳುವುದರೊಂದಿಗೆ ಕೊನೆಗೊಳ್ಳುತ್ತದೆ ಎಂಬ ಸಕಾರಾತ್ಮಕ ಭಾವವನ್ನು ಸಮಾಜದಲ್ಲಿ ತುಂಬಬೇಕು. ಆದರೆ ಇಂಥ ಪ್ರಯತ್ನಗಳು ಆಗುತ್ತಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿಯೇ ಜಮಾಅತೆ ಇಸ್ಲಾಮೀ ಹಿಂದ್‌ನ ಈ ನಡೆಯನ್ನು ದಿ ಹಿಂದೂ ಪತ್ರಿಕೆ ಮುಖಪುಟದ ವಿಷಯವಾಗಿ ಎತ್ತಿಕೊಂಡಿದೆ ಎಂದೇ ಹೇಳಬೇಕಾಗುತ್ತದೆ.

ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್‌ನ ಪ್ರಕಾರ, ಈವರೆಗೆ 130 ಕೈದಿಗಳ ದಂಡದ ಮೊತ್ತವನ್ನು ಸಂಸ್ಥೆಯು ಭರಿಸಿದೆ. ಹಾಗೆಯೇ 35 ಆರೋಪಿಗಳ ಜಾಮೀನು ಮೊತ್ತವನ್ನು ಪಾವತಿಸಿದೆ. ಹೀಗೆ 165ರಷ್ಟು ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸುವುದಕ್ಕೆ ಅದು ನೆರವಾಗಿದೆ. ಸಾಮಾನ್ಯವಾಗಿ ಈ ಎಂಪಿಜೆ ಸಂಸ್ಥೆಯು ಮೊದಲ ಬಾರಿ ಅಪರಾಧ ಎಸಗಿದ ಮತ್ತು ಜಾಮೀನು ಅಥವಾ ದಂಡದ ಮೊತ್ತವನ್ನು ಪಾವತಿಸಲು ಕುಟುಂಬಿಕರು ಅಥವಾ ಸ್ನೇಹಿತರನ್ನು ಹೊಂದಿರದ ಜೈಲು ಬಂಧಿಗಳನ್ನು ಗುರುತಿಸುತ್ತದೆ. ಇಂಥ ಕೈದಿಗಳ ಕೆಲವು ಕುಟುಂಬಗಳು ಎಷ್ಟು ದಯನೀಯ ಸ್ಥಿತಿಯಲ್ಲಿ ಇರುತ್ತಾರೆಂದರೆ, 500 ರೂಪಾಯಿ ಪಾವತಿಸುವುದಕ್ಕೂ ಅವರಲ್ಲಿ ಸಾಮರ್ಥ್ಯ ಇರುವುದಿಲ್ಲ. ಹಾಗೆಯೇ ತಮ್ಮ ಮನೆಯ ವ್ಯಕ್ತಿ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದ ಕುಟುಂಬಗಳಿರುತ್ತವೆ. ವಾರಗಳು ಅಥವಾ ತಿಂಗಳುಗಳ ನಂತರವಷ್ಟೇ ತಮ್ಮ ಮನೆಯ ವ್ಯಕ್ತಿ ಜೈಲಲ್ಲಿದ್ದಾನೆ ಎಂದು ತಿಳಿಯುವ ಬಡಪಾಯಿ ಕುಟುಂಬಗಳೂ ಇವೆಯೆಂದು ಎಂಪಿಜೆಯ ಮುಖ್ಯಸ್ಥರಾದ ಅಹ್ಮದ್ ಹಮೀದುದ್ದೀನ್ ಶಕೀಲ್ ಹೇಳಿರುವುದನ್ನು ದಿ ಹಿಂದೂ ಪ್ರಕಟಿಸಿದೆ. 2007ರಿಂದಲೇ ಸಕ್ರಿಯವಾಗಿರುವ ಈ ಸಂಸ್ಥೆಯು ಇವತ್ತು ಅಸಹಾಯಕ ಕೈದಿಗಳು ಮತ್ತು ಕುಟುಂಬಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಟ್ಟಿದೆ. ಝಕಾತನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬ ಬಗ್ಗೆ ಅದು ಮಾದರಿಯೊಂದನ್ನು ಪರಿಚಯಿಸಿದೆ. ನಿಜವಾಗಿ,

ಝಕಾತ್ ಎಂಬುದು ಅತ್ಯಂತ ಕ್ರಾಂತಿಕಾರಿ ಯೋಜನೆ. ಶ್ರೀಮಂತರ ಸಂಪತ್ತಿನಲ್ಲಿ ಬಡವರಿಗೂ ಪಾಲಿದೆ ಎಂಬ ಅತಿ ವಿಶಿಷ್ಟ ಮತ್ತು ಅತಿ ಉದಾತ್ತ ಪರಿಕಲ್ಪನೆ. ವ್ಯಕ್ತಿಯ ವಾರ್ಷಿಕ ಉಳಿತಾಯದಿಂದ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಬಡವರಲ್ಲಿ ಹಂಚಬೇಕು ಎಂಬ ಈ ನಿಲುವು ವರ್ಗ ಸಂಘರ್ಷವನ್ನು ತಡೆಯುತ್ತದೆ. ಶ್ರೀಮಂತನ ಶ್ರೀಮಂತಿಕೆಯ ಮೇಲೆ ಬಡವ ಅಸೂಯೆ ಪಡುವುದರ ಬದಲು ಆತನ ಶ್ರೀಮಂತಿಕೆಯು ತನ್ನ ಅಭಿವೃದ್ಧಿಗೆ ಕೊಡುಗೆಯಾಗಲಿದೆ ಎಂಬ ಆಶಾವಾದವನ್ನು ಸೃಷ್ಟಿಸುತ್ತದೆ. ಹಾಗೆಯೇ, ಈ ಝಕಾತ್ ಶ್ರೀಮಂತನನ್ನೂ ದೇವನಿಗೆ ವಿನೀತಗೊಳಿಸುತ್ತದೆ. ತನ್ನ ಸಂಪತ್ತು ದೇವನ ಅನುಗ್ರಹವಾಗಿದೆ ಎಂಬ ಭಾವವನ್ನು ಮೂಡಿಸುತ್ತದೆ. 2.5%ದಿಂದ ಆರಂಭವಾಗುವ ಈ ಝಕಾತ್ ನಿಯಮವು ನೀರಾವರಿ ಕೃಷಿ, ಮಳೆ ನೀರಿನ ಕೃಷಿ, ವಿವಿಧ ವ್ಯಾಪಾರ ವಹಿವಾಟುಗಳಿಗೆ ಬೇರೆ ಬೇರೆ ಶೇಕಡಾವಾರನ್ನು ನಿರ್ಣಯಿಸಿದೆ. ಇವತ್ತು ಜಾಗತಿಕವಾಗಿ ಝಕಾತ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತದೆ ಮತ್ತು ಅವು ಬಡರಾಷ್ಟ್ರಗಳ ಪಾಲಿನ ಭರವಸೆಯಾಗಿಯೂ ಉಳಿದಿದೆ. ಆಫ್ರಿಕಾ ಖಂಡದ ಬಡರಾಷ್ಟ್ರಗಳ ಜನರ ಶ್ರೇಯೋಭಿವೃದ್ಧಿಗೆಂದೇ ಅರಬ್ ರಾಷ್ಟ್ರಗಳ ಕೋಟ್ಯಂತರ ಹಣವು ಪ್ರತಿವರ್ಷ ವಿನಿಯೋಗವಾಗುತ್ತದೆ. ಒಂದುವೇಳೆ,

ಝಕಾತ್‌ನ ಮೊತ್ತ ಸಮರ್ಪಕವಾಗಿ ಸಂಗ್ರಹವಾದರೆ ಮತ್ತು ಯೋಜನಾಬದ್ಧವಾಗಿ ವಿನಿಯೋಗವಾದರೆ, ಸರಕಾರವನ್ನು ಅವಲಂಬಿಸದೆಯೇ ಸಮುದಾಯದ ಏಳಿಗೆ ಸಾಧ್ಯವಾದೀತು ಎಂಬ ಅಭಿಪ್ರಾಯವೂ ಇದೆ. ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಝಕಾತ್ ಪಾವತಿಸಲು ಅರ್ಹವಾದ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರ ಝಕಾತ್ ಆಯಾ ಮಸೀದಿ ವ್ಯಾಪ್ತಿಯ ಬಡವರು, ನಿರ್ಗತಿಕರು ಮತ್ತು ಇನ್ನಿತರ ವ್ಯಕ್ತಿಗಳನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ವ್ಯಯವಾಗುವಂತೆ ನೋಡಿಕೊಳ್ಳುವ ಕ್ರಿಯಾ ಯೋಜನೆ ತಯಾರಾಗಬೇಕು. ಅದಕ್ಕಿಂತ ಮೊದಲು ಪ್ರತಿ ಮಸೀದಿಯೂ ತನ್ನ ಜಮಾಅತ್‌ಗೊಳಪಟ್ಟ ಪ್ರತಿ ಮನೆಯ ಡೇಟಾವನ್ನು ಸಂಗ್ರಹಿಸಬೇಕು. ಮನೆಯಲ್ಲಿ ಎಷ್ಟು ಮಂದಿಯಿದ್ದಾರೆ, ಅವರಲ್ಲಿ ದುಡಿಯುವವರು ಎಷ್ಟು, ರೋಗಿಗಳು, ಮದುವೆ ಪ್ರಾಯಕ್ಕೆ ಬಂದ ಗಂಡು ಮತ್ತು ಹೆಣ್ಣು ಎಷ್ಟು, ವಿದ್ಯಾರ್ಥಿಗಳು, ವಿಧವೆ ಮತ್ತು ವಿಚ್ಛೇದಿತೆಯರು, ನಿರುದ್ಯೋಗಿಗಳು ಎಷ್ಟು, ಕೈದಿಗಳಿದ್ದಾರಾ... ಎಂಬೆಲ್ಲಾ ಪಕ್ಕಾ ಮಾಹಿತಿಗಳು ಮಸೀದಿ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರಬೇಕು. ಇದಕ್ಕಾಗಿ ಮಸೀದಿ ಆಡಳಿತ ಸಮಿತಿಯು ಉತ್ಸಾಹಿ ಯುವಕರನ್ನು ಸಂಘಟಿಸಿ ಸಮೀಕ್ಷೆ ನಡೆಸಬೇಕು. ಪ್ರತಿ ಮಸೀದಿಯೂ ಒಂದಕ್ಕಿಂತ  ಹೆಚ್ಚು ಯುವಕರ ಸಂಘಟನೆಯನ್ನು ಹೊಂದಿರುವುದರಿಂದ ಈ ಸಮೀಕ್ಷಾ ಕಾರ್ಯ ಕಷ್ಟವಲ್ಲ. ಈ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡಕೊಂಡು ಹೊಣೆಗಾರಿಕೆಯನ್ನು ವಿಭಜಿಸಿಕೊಟ್ಟರೆ ಕ್ರಾಂತಿಕಾರಿ ಬದಲಾವಣೆಗೆ ಬಹುದೊಡ್ಡ ಅಡಿಗಲ್ಲು ಹಾಕಿದಂತಾದೀತು.

ಏನೇ ಇದ್ದರೂ ತೆಲಂಗಾಣದ ಮೂವ್‌ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟೀಸ್ ಸಂಸ್ಥೆಯು ಭಿನ್ನ ಆಲೋಚನೆಯ ಮೂಲಕ ಸಾರ್ವಜನಿಕ ಗಮನ ಸೆಳೆದಿದೆ. ಝಕಾತ್ ಎಂಬ ಅಪ್ಪಟ ಧರ್ಮಾಧಾರಿತ ಯೋಜನೆಯು ಹೇಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಪಾಲಿಗೆ ಆಶಾಕಿರಣವಾಗಿ ಮಾರ್ಪಡಬಲ್ಲುದು ಎಂಬುದನ್ನು ಅದು ಎತ್ತಿ ತೋರಿಸಿದೆ. ದಶಕದ ಹಿಂದೆಯೇ  ಚಟುವಟಿಕೆಯಲ್ಲಿ ತೊಡಗಿರುವ ಈ ಸಂಸ್ಥೆಯನ್ನು ಇದೀಗ ಇಲ್ಲಿನ ಮುಂಚೂಣಿ ಮಾಧ್ಯಮವೂ ಗುರುತಿಸಿದೆ. ಒಂದು ರೀತಿಯಲ್ಲಿ ಇದು ಝಕಾತ್‌ನ ಗೆಲುವು. ಇಸ್ಲಾಮ್‌ನ ಕಡ್ಡಾಯ ಕರ್ಮವೊಂದು ನಾಗರಿಕ ಸ್ನೇಹಿಯಾಗಿ ಬಳಕೆಯಾದಾಗ ಹೇಗೆ ಸಾರ್ವತ್ರಿಕ ಮನ್ನಣೆಗೆ ಪಾತ್ರವಾಗುತ್ತದೆ ಎಂಬುದಕ್ಕೆ ಈ ಎಂಪಿಜೆ ಚಟುವಟಿಕೆಯೇ ಸಾಕ್ಷಿ.

Monday 1 April 2024

ಹಿಂದೂ ಧಾರ್ಮಿಕ ಮುಖಂಡರೇಕೆ ಮೌನವಾಗಿದ್ದಾರೆ?




ನಿಜಕ್ಕೂ ಧರ್ಮ ಅಸಹಿಷ್ಣುಗಳು ಯಾರು ಎಂಬುದನ್ನು ಉತ್ತರ ಪ್ರದೇಶ ಮತ್ತೊಮ್ಮೆ ದೇಶದ ಮುಂದೆ ಬಹಿರಂಗವಾಗಿ ಸಾರಿ ಹೇಳಿದೆ.  ಬರೇಲ್ವಿ ಜಿಲ್ಲೆಯ ಮುಸ್ಲಿಮ್ ಧರ್ಮಗುರುಗಳ ಸಭೆ ನಡೆಸಿರುವ ಬರೇಲ್ವಿಯ ಹಿರಿಯ ಪೊಲೀಸ್ ಅಧೀಕ್ಷಕ ಗುಲೆ ಸುಶೀಲ್ ಚಂದ್ರಬಾನ್,  ಮಸೀದಿಗಳಿಗೆ
ಹೊದಿಕೆ ಹಾಕುವಂತೆ ಹೇಳಿದ್ದಾರೆ. ಹಾಗಂತ, ಹೀಗೆ ಹೊದಿಕೆ ಹಾಕುವುದು ದೂಳಿನಿಂದಲೋ ಬಿಸಿಲಿನಿಂದಲೋ ರಕ್ಷಣೆ  ಹೊಂದುವುದಕ್ಕಲ್ಲ. ಬರೇಲ್ವಿಯ ನರಸಿಂಹ ದೇವಾಲಯ, ಶಹಜಾನ್‌ಪುರದ ಪೂಲ್ಮತಿ ದೇವಾಲಯದಿಂದ ಹೋಳಿ ಹಬ್ಬದ ಹಿನ್ನೆಲೆಯಲ್ಲಿ  ಮೆರವಣಿಗೆ ನಡೆಯಲಿದ್ದು, ಕಿಡಿಗೇಡಿಗಳು ಮಸೀದಿಗಳಿಗೆ ಬಣ್ಣ ಎರಚದಂತೆ ತಡೆಯುವುದೇ ಇದರ ಉದ್ದೇಶ. ಪೊಲೀಸ್ ಅಧಿಕಾರಿಗಳ ಈ  ಸೂಚನೆಯನ್ನು ಮುಸ್ಲಿಮ್ ಸಮುದಾಯ ಪಾಲಿಸಿದ್ದು, ಮೆರವಣಿಗೆ ಸಾಗುವ ದಾರಿಯಲ್ಲಿನ ಮಸೀದಿಗಳಿಗೆ ಹೊದಿಕೆ ಹಾಸಿರುವ ಚಿತ್ರಗಳು  ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆಗೇ ಇನ್ನಷ್ಟು ವೀಡಿಯೋಗಳೂ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಗುತ್ತಿದ್ದು, ವಾಹನದಲ್ಲಿ ಸಾಗುತ್ತಿರುವ ಮುಸ್ಲಿಮ್ ಸಮುದಾಯದ ವ್ಯಕ್ತಿಗಳ ಮೇಲೆ ಬಲವಂತದಿಂದ ಬಣ್ಣ ಎರಚಿ ಧಾರ್ಮಿಕ  ಘೋಷಣೆಯೊಂದಿಗೆ ಸಂಭ್ರಮಪಡುತ್ತಿರುವುದೂ ಕಾಣಿಸಿದೆ. ಅಂದಹಾಗೆ,

ಈದ್‌ನ ಸಮಯದಲ್ಲಿ ಅಥವಾ ಪೈಗಂಬರರ ದಿನದ ಹೆಸರಲ್ಲಿ ನಡೆಯುವ ಮೆರವಣಿಗೆಗಳ ವೇಳೆ ದೇವಾಲಯಗಳಿಗೆ ಹೊದಿಕೆ ಹಾಸುವಂತೆ  ಕೋರಲಾಗಿರುತ್ತಿದ್ದರೆ ಏ
ನಾಗುತ್ತಿತ್ತು? ಟಿ.ವಿ. ಚಾನೆಲ್‌ಗಳಲ್ಲಿ ಯಾವೆಲ್ಲ ರೀತಿಯ ಚರ್ಚೆಗಳು ನಡೆಯುತ್ತಿತ್ತು? ಸೋಶಿಯಲ್ ಮೀಡಿಯಾದ  ಅಬ್ಬರ ಹೇಗಿರುತ್ತಿತ್ತು? ಮುಸ್ಲಿಮರನ್ನು ಅಸಹಿಷ್ಣುಗಳು, ಕಾನೂನು ಭಂಜಕರು, ಹಿಂದೂ ವಿರೋಧಿಗಳು ಎಂದೆಲ್ಲಾ ಮಾಧ್ಯಮಗಳ ಮುಂದೆ  ಘೋಷಿಸುವ ರಾಜಕಾರಣಿಗಳು ಮತ್ತು ಅವರ ಬೆಂಬಲಿಗರು ಎಷ್ಟಿರುತ್ತಿದ್ದರು?
ಈ ದೇಶದಲ್ಲಿ ಹೋಳಿಯಂತೆಯೇ ಈದ್ ಅನ್ನೂ  ಆಚರಿಸಲಾಗುತ್ತದೆ. ಆದರೆ, ಈ ದೇಶದ ಯಾವ ದೇವಾಲಯವೂ ಈದ್‌ನಿಂದಾಗಿ ಗಾಂಬರಿಗೊಂಡದ್ದಿಲ್ಲ. ಟಾರ್ಪಲಿನ್ ಹೊದಿಸಲಾದದ್ದೂ  ಇಲ್ಲ.

ಹಬ್ಬ ಎಂಬುದು ಆಯಾ ಧರ್ಮದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೊಗಡಿನ ಪ್ರತೀಕವೇ ಹೊರತು ಅನ್ಯಧರ್ಮ ಅಸಹಿಷ್ಣುತೆಯ ಆಯುಧ  ಅಲ್ಲ. ಹೋಳಿ ಹಬ್ಬಕ್ಕೊಂದು ಹಿನ್ನೆಲೆಯಿದೆ. ಆ ಹಿನ್ನೆಲೆಯ ಯಾವ ಭಾಗದಲ್ಲೂ ಮತ್ತು ಯಾವ ಪುಟದಲ್ಲೂ ಮುಸ್ಲಿಮರ ಪ್ರಸ್ತಾಪವೇ ಇಲ್ಲ.  ಮುಸ್ಲಿಮರನ್ನು ವಿರೋಧಿಸುವುದಕ್ಕಾಗಿಯೋ ಅಥವಾ ಅವರ ಮಸೀದಿಗೆ ಬಣ್ಣ ಎರಚುವುದಕ್ಕಾಗಿಯೋ ಹೋಳಿ ಆಚರಿಸಬೇಕೆಂಬ ಒಂದು ಸಣ್ಣ  ಗೆರೆಯ ಉಲ್ಲೇಖವೂ ಇಲ್ಲ. ಅದು ಪೂರ್ತಿಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಖುಷಿಯ ಪ್ರದರ್ಶನ. ಹಬ್ಬಗಳೆಲ್ಲ ಸಾಮಾನ್ಯವಾಗಿ ಹೀಗೆಯೇ  ಇವೆ. ಗಣೇಶ ಚತುರ್ಥಿಯಾಗಲಿ, ದೀಪಾವಳಿಯಾಗಲಿ ಅಥವಾ ಮುಸ್ಲಿಮರ ಈದ್, ಕ್ರೈಸ್ತರ ಕ್ರಿಸ್ಮಸ್‌ಗಳಾಗಲಿ.. ಯಾವುವೂ ಇನ್ನೊಂದು  ಧರ್ಮವನ್ನು ದ್ವೇಷಿಸಿಕೊಂಡೋ ಕೆರಳಿಸಿಕೊಂಡೋ ಹುಟ್ಟಿದ್ದಲ್ಲ. ಆಯಾ ಧರ್ಮಗಳ ಅನುಯಾಯಿಗಳು ಸಂತಸಪಡುವ ಸಂದರ್ಭಗಳಾಗಿ  ಅವು ಉಳಿದುಕೊಂಡಿವೆ. ಹೀಗಿರುವಾಗ, ಹೋಳಿ ಹಬ್ಬ ಆಚರಿಸುವವರು ಅದನ್ನಾಚರಿಸದವರ ಮೇಲೆ ಬಣ್ಣವನ್ನೇಕೆ ಎರಚಬೇಕು? ಮಸೀದಿಗಳನ್ನೇಕೆ ಗುರಿಯಾಗಿಸಬೇಕು? ಹೋಳಿಗೂ ಮಸೀದಿಗೂ ಏನು ಸಂಬಂಧ? ತಮಾಷೆ ಏನೆಂದರೆ,

ಮಸೀದಿಗೆ ಬಣ್ಣ ಎರಚುವ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕಾದ ಪೊಲೀಸ್ ಇಲಾಖೆಯು ಅದರ ಬದಲು ಮಸೀದಿಯನ್ನೇ ಹೊದಿಕೆಯಿಂದ  ಮುಚ್ಚುವಂತೆ ಆದೇಶಿಸಿರುವುದು. ಬರೇಲ್ವಿಯಲ್ಲಾಗಲಿ, ಶಹಜಹಾನ್‌ಪುರದಲ್ಲಾಗಲಿ ಯಾವ ಮಸೀದಿಯೂ ಹೋಳಿ ಹಬ್ಬದ ವಿರುದ್ಧ ಮಾತಾಡಿಲ್ಲ.  ಅಥವಾ ಹೋಳಿ ಹಬ್ಬದ ಮೆರಣಿಗೆಯ ದಿನದಂದು ತನ್ನದೇ ಕಾರ್ಯಕ್ರಮದ ಮೆರವಣಿಗೆಯನ್ನೂ ಇಟ್ಟುಕೊಂಡಿಲ್ಲ. ಹೀಗಿರುವಾಗ  ಕಿಡಿಗೇಡಿಗಳನ್ನು ಮಟ್ಟ ಹಾಕುವ ಬದಲು ಮಸೀದಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಕ್ಕೆ ಏನರ್ಥವಿದೆ? ಮೆರವಣಿಗೆಯಲ್ಲಿ ಕಿಡಿಗೇಡಿಗಳು  ನುಸುಳುತ್ತಾರೆಂಬುದು ಪೊಲೀಸರ ಸಂದೇಹವಾದರೆ ಅದಕ್ಕಾಗಿ ದಂಡಿಸಬೇಕಾದದ್ದು ಮಸೀದಿಯನ್ನೋ ಅಲ್ಲ ಕಿಡಿಗೇಡಿಗಳನ್ನೋ? ಯಾವುದೇ  ಮಸೀದಿಯಾಗಲಿ ಮಂದಿರವಾಗಲಿ ಮೆರವಣಿಗೆಗಳನ್ನು ಆಯೋಜಿಸುತ್ತದೆಂದಾದರೆ, ಅದು ಶಾಂತಿಪೂರ್ಣ ಮತ್ತು ದ್ವೇಷರಹಿತವಾಗಿರುವಂತೆ  ನೋಡಿಕೊಳ್ಳಬೇಕಾದುದು ಮೆರವಣಿಗೆ ಆಯೋಚಿಸಿದವರ ಕರ್ತವ್ಯ. ಸಾಮಾನ್ಯವಾಗಿ ಪೊಲೀಸರು ಆಯೋಜಕರಿಂದ ಈ ಬಗ್ಗೆ ಮುಚ್ಚಳಿಕೆಯನ್ನು ಪಡಕೊಳ್ಳುವುದೂ ಇದೆ. ಅದು ಬಿಟ್ಟು ಮಸೀದಿಗಳನ್ನೇ ಅಪರಾಧಿಯಂತೆ ಕಾಣುವುದಕ್ಕೆ ಏನೆನ್ನಬೇಕು? ನಿಜವಾಗಿ,

ಮಸೀದಿಗಳನ್ನು ಹೊದಿಕೆಯಿಂದ ಮುಚ್ಚಿ ಎಂದು ಪೊಲೀಸರು ಮುಸ್ಲಿಮರಿಗೆ ಸೂಚಿಸುವುದರಲ್ಲಿ ಒಂದು ಸಂದೇಶವಂತೂ  ಸ್ಪಷ್ಟವಾಗಿ ರವಾನೆಯಾಗಿದೆ. ಹೋಳಿಯು ಬರೇ ಹಬ್ಬವಾಗಿ ಉಳಿದಿಲ್ಲ. ಅದು ಮುಸ್ಲಿಮ್ ದ್ವೇಷವನ್ನು ಕಾರುವುದಕ್ಕಿರುವ ಒಂದು ಸಂದರ್ಭವೂ ಆಗುತ್ತಿದೆ.  ಮಾತ್ರವಲ್ಲ, ವ್ಯವಸ್ಥೆಯೇ ಇದನ್ನು ಒಪ್ಪಿಕೊಳ್ಳುತ್ತಲೂ ಇದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಹೋಳಿ ಮೆರವಣಿಗೆಯಲ್ಲಿ ತೆರಳುವವರು  ಮಸೀದಿಯನ್ನೇಕೆ ದ್ವೇಷಿಸುತ್ತಾರೆ? ಅವರೇಕೆ ಮಸೀದಿಗಳಿಗೆ ಬಣ್ಣ ಎರಚುತ್ತಾರೆ? ಹಿಂದೂ ಧರ್ಮ ಅನ್ಯ ಧರ್ಮ ಅಸಹಿಷ್ಣುವೇ? ಅಲ್ಲ  ಎಂದಾದರೆ, ಮಸೀದಿಗೆ ಹೊದಿಸುವಂತೆ ವ್ಯವಸ್ಥೆಯೇ ಕರೆಕೊಡುವ ಸನ್ನಿವೇಶ ಉಂಟಾಗಿಯೂ ಯಾಕೆ ಹಿಂದೂ ಧರ್ಮದ ಯಾರೂ  ಮಾತಾಡುತ್ತಿಲ್ಲ? ತೀರಾ ತೀರಾ ಸಣ್ಣ ಸಣ್ಣ ವಿಷಯಗಳಿಗೂ ಮುಸ್ಲಿಮ್ ಧರ್ಮಗುರುಗಳ ಫತ್ವಾವನ್ನೋ ಸ್ಪಷ್ಟೀಕರಣವನ್ನೋ ಕೇಳಲಾಗುವ ಈ  ದೇಶದಲ್ಲಿ ಮಸೀದಿಗಳನ್ನೇ ಹೊದಿಕೆಯಿಂದ ಮುಚ್ಚಿದ ಘಟನೆಗಳು ನಡೆದ ಬಳಿಕವೂ ಯಾಕೆ ಯಾವ ವಿರೋಧವೂ ವ್ಯಕ್ತವಾಗುತ್ತಿಲ್ಲ?  ಒಂದುವೇಳೆ, ಮೆರವಣಿಗೆ ಆಯೋಜಿಸಿದವರು ಈ ಬೆಳವಣಿಗೆಯ ವಿರೋಧಿಗಳೆಂದಾದರೆ, ಅವರಾದರೂ ಹೇಳಿಕೆ ಕೊಡಬೇಕಿತ್ತಲ್ಲ? ಅಥವಾ  ಮಸೀದಿಗಳಿಗೆ ಟಾರ್ಪಲಿನ್ ಹೊದಿಸುವ ಸನ್ನಿವೇಶಕ್ಕೆ ವಿಷಾದ ಸೂಚಿಸಿ ಮೆರವಣಿಗೆಯನ್ನೇ ರದ್ದುಗೊಳಿಸಬಹುದಿತ್ತಲ್ಲ? ಹಾಗೆ ಮಾಡಿರುತ್ತಿದ್ದರೆ  ಅದು ಈ ಹೋಳಿ ಮೆರವಣಿಗೆ ಆಯೋಚಿಸಿದವರ ಕುರಿತಂತೆ ಗೌರವ ಹೆಚ್ಚಿಸುತ್ತಿತ್ತಲ್ಲವೇ? ದುರಂತ ಏನೆಂದರೆ,

ಹಿಂದೂ  ಧರ್ಮವನ್ನು ಮುಸ್ಲಿಮರ ವೈರಿಯಂತೆ ಬಿಂಬಿಸುವವರ ಕೈ ನಿಧಾನಕ್ಕೆ ಬಲ ಪಡೆಯುತ್ತಿರುವಂತೆ ಕಾಣಿಸುತ್ತಿದೆ. ಮುಸ್ಲಿಮರನ್ನು ನಿಂದಿಸುವ, ಹಿಂಸಿಸುವ ಮತ್ತು ಅವರ ಆರಾಧನೆಗಳಿಗೆ ಅಡ್ಡಿಪಡಿಸುವ ಘಟನೆಗಳೂ ಹೆಚ್ಚಾಗುತ್ತಿವೆ. ಮಾತ್ರವಲ್ಲ, ಈ ಎಲ್ಲವನ್ನೂ ಧಾರ್ಮಿಕ  ಘೋಷಣೆಯ ಜೊತೆಗೇ ಮಾಡಲಾಗುತ್ತಿದೆ. ಆದರೆ, ಇದು ಧರ್ಮವಲ್ಲ, ಅಧರ್ಮ ಎಂದು ಘಂಟಾಘೋಷವಾಗಿ ಹೇಳಬೇಕಾದವರು ಮೌ ನವಾಗಿದ್ದಾರೆ. ಈ ಮೌನವೇ ಈ ಅಧರ್ಮಿಗಳ ಧೈರ್ಯವನ್ನು ಹೆಚ್ಚಿಸುತ್ತಲೂ ಇದೆ. ಮಾತ್ರವಲ್ಲ, ಅವರ ಕೃತ್ಯಗಳು ಮತ್ತು ಘೋಷಣೆಗಳು  ಅವರು ಪ್ರತಿನಿಧಿಸುವ ಧರ್ಮಕ್ಕೆ ಮಸಿ ಬಳಿಯುತ್ತಲೂ ಇವೆ. ಸದ್ಯದ ಅಗತ್ಯ ಏನೆಂದರೆ, ಧಾರ್ಮಿಕ ಘೋಷಣೆಗಳೊಂದಿಗೆ ಧರ್ಮಬಾಹಿರ  ಕೃತ್ಯಗಳನ್ನು ನಡೆಸುವವರ ವಿರುದ್ಧ ಹಿಂದೂ ಧರ್ಮದ ಮುಖಂಡರು ಧ್ವನಿ ಎತ್ತಬೇಕು. ಮುಸ್ಲಿಮರನ್ನು ದ್ವೇಷಿಸುವುದರಿಂದ ಹಿಂದೂ ಧರ್ಮದ  ಉದ್ಧಾರವಾಗದು ಎಂದು ಬಲವಾಗಿ ಸಾರಬೇಕು. ಯಾವುದೇ ಧರ್ಮವು ಇನ್ನೊಂದು ಧರ್ಮವನ್ನು ದ್ವೇಷಿಸುವುದರಿಂದ ಬೆಳೆಯಲಾರದು.  ಆದರೆ ಧರ್ಮದ ಮೌಲ್ಯಗಳನ್ನು ಪಾಲಿಸುವುದರಿಂದ ಬೆಳೆಯಬಲ್ಲುದು. ಹಬ್ಬವಾಗಲಿ ಅದಕ್ಕೆ ಸಂಬಂಧಿಸಿ ಏರ್ಪಡಿಸುವ ಮೆರವಣಿಗೆಗಳಾಗಲಿ  ಧರ್ಮದ ಮೌಲ್ಯಗಳನ್ನು ಬಿತ್ತುವಂತಿರಬೇಕು. ಆ ಮೆರವಣಿಗೆಯು ಆ ಧರ್ಮದ ಅನುಯಾಯಿಗಳಲ್ಲದವರನ್ನೂ ಆಕರ್ಷಿಸಬೇಕು.  ಧರ್ಮವೊಂದು ತನ್ನ ಚೌಕಟ್ಟನ್ನೂ ಮೀರಿ ಬೆಳೆಯುವುದು ಹೀಗೆ. ಹೀಗೆ ಧರ್ಮವೊಂದು ಬೆಳೆಯಬೇಕಾದರೆ ಅದರ ಅನುಯಾಯಿಗಳು ಆ  ಧರ್ಮದ ನಿಜ ರಾಯಭಾರಿಗಳಾಗಬೇಕು. ಬದುಕಿನಲ್ಲಿ ಧರ್ಮದ ಮೌಲ್ಯಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆಗ ಅನ್ಯಧರ್ಮದ  ನೋಡುಗರ ಮೇಲೂ ಕೇಳುಗರ ಮೇಲೂ ಪ್ರಭಾವವನ್ನು ಬೀರುತ್ತದೆ. ಇದನ್ನು ಬಿಟ್ಟು ಅನುಯಾಯಿಗಳು ಅನ್ಯಧರ್ಮ ದ್ವೇಷವನ್ನೇ  ಮುಖ್ಯವಾಗಿಸಿಕೊಂಡಾಗ ಧರ್ಮ ಎಷ್ಟೇ ಒಳ್ಳೆಯದಿದ್ದರೂ ಪ್ರಾಯೋಗಿಕವಾಗಿ ಅದು ಸೋಲುತ್ತದೆ. ಹಿಂಸೆಯನ್ನು ಅಸ್ತ್ರವಾಗಿಸಿಕೊಳ್ಳುವ ಎಲ್ಲ  ಧರ್ಮೀಯರಲ್ಲೂ ಈ ಎಚ್ಚರಿಕೆ ಇರಬೇಕು.