Saturday 26 September 2015

ಪ್ರಧಾನಿಯವರೇ, ಆಂಡರ್ಸನ್‍ಗಾಗಿ ಮಾತೆತ್ತಿದ ನೀವು ರಾಯಭಾರಿಯನ್ನು ಕಳುಹಿಸಿಕೊಟ್ಟದ್ದೇಕೆ?

     ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್‍, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
  ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
  ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?

Tuesday 15 September 2015

ವರ್ತಮಾನದ ತಲ್ಲಣಗಳು ಮತ್ತು ಹಾಜಿ..

     ವರ್ತಮಾನದ ತಲ್ಲಣಗಳ ನಡುವಿನಿಂದ ಮಕ್ಕಾಕ್ಕೆ ಹೊರಟು ಹೋಗುವ ಹಾಜಿ ಅಲ್ಲಿ  ಮುಖಾಮುಖಿಗೊಳ್ಳುವುದು ಯಾರನ್ನು, ಯಾವುದನ್ನು ಮತ್ತು ಯಾತಕ್ಕಾಗಿ? ಸಫಾ-ಮರ್ವಾ, ಅರಫಾ, ಹಜರುಲ್ ಅಸ್ವದ್, ಜಮರಾತ್, ಮುಝ್ದಲಿಫಾ.. ಇತ್ಯಾದಿಗಳನ್ನು ಹಾಜಿ ಮಕ್ಕಾದಲ್ಲಿ ಮುಖಾಮುಖಿಯಾಗುತ್ತಾನೆ/ಳೆ. ಆತ ಅಲ್ಲಿ ಕಣ್ಣೀರಾಗಬಲ್ಲ, ಪ್ರಾರ್ಥಿಸಬಲ್ಲ, ತನ್ಮಯತೆಯಿಂದ ಜಗವನ್ನೇ ಮರೆಯಬಲ್ಲ. ಅಷ್ಟಕ್ಕೂ, ಈ ಬಗೆಯ ಭಾವತೀವ್ರತೆಯನ್ನು ಹಾಜಿಯೊಳಗೆ ಹುಟ್ಟುಹಾಕಲು ಈ ಸಂಕೇತಗಳಿಗೆ ಹೇಗೆ ಸಾಧ್ಯವಾಗುತ್ತದೆ? ಒಂದು ವೇಳೆ, ಈ ಸಂಕೇತಗಳಗೆ ಭೂತಕಾಲವೊಂದು ಇಲ್ಲ ಎಂದಿಟ್ಟುಕೊಳ್ಳಿ. ಹಾಗಾದರೆ, ಜಮರಾತ್ ಅನ್ನು, ಸಫಾ-ಮರ್ವಾವನ್ನು, ಮುಝ್ದಲಿಫಾವನ್ನು.. ಆತ/ಕೆ ಯಾವ ರೀತಿಯಲ್ಲಿ ಮುಖಾಮುಖಿಯಾಗಬಹುದು? ನಿಜವಾಗಿ, ಭೂತಕಾಲವೊಂದು ಇಲ್ಲದೇ ಇರುತ್ತಿದ್ದರೆ ಸಫಾ-ಮರ್ವಾಕ್ಕೆ ಈ ವರ್ತಮಾನ ಕಾಲದಲ್ಲಿ ಯಾವ ಮಹತ್ವವೂ ಲಭಿಸುತ್ತಿರಲಿಲ್ಲ. ಜಮಾರಾತ್‍ಗೂ ಮುಝ್ದಲಿಫಾಕ್ಕೂ ಅರಫಾ ಮೈದಾನಕ್ಕೂ ಒಂದು ಭೂತಕಾಲವಿದೆ. ಈ ಭೂತಕಾಲದಿಂದಾಗಿಯೇ ಈ ವರ್ತಮಾನದಲ್ಲೂ ಇವುಗಳು ಮತ್ತು ಇಬ್ರಾಹೀಮ್(ಅ), ಇಸ್ಮಾಈಲ್(ಅ), ಹಾಜಿರಾ.. ನಮ್ಮನ್ನು ಕಾಡುವುದು. ಗತ ಇತಿಹಾಸವನ್ನು ಪಕ್ಕಕ್ಕಿಟ್ಟು ನೋಡಿದರೆ ನಮ್ರೂದ್ ಎಂಬುದು ಈ ವರ್ತಮಾನದಲ್ಲಿ ಬರೇ ಒಂದು ಹೆಸರು ಮಾತ್ರ. ಆದರೆ ನಮ್ರೂದ್‍ಗೊಂದು ಇತಿಹಾಸವಿದೆ. ಆ ಇತಿಹಾಸವೇ ಇವತ್ತು ನಮ್ರೂದ್‍ನನ್ನು ಪ್ರಸ್ತುತಗೊಳಿಸುತ್ತದೆ. ಬಹುಶಃ, ಈ ಮೇಲೆ ಉಲ್ಲೇಖಿಸಲಾದ ಸಂಕೇತಗಳನ್ನು ಮುಖಾಮುಖಿಗೊಳ್ಳುವಾಗ ಹಾಜಿಯು ಭಾವುಕವಾಗುವುದಿದ್ದರೆ, ಅವುಗಳ ಗತ ಇತಿಹಾಸವನ್ನು ಸ್ಮರಿಸಿಯೇ ಹೊರತು ವರ್ತಮಾನದ ಬರೇ ಸ್ಥಳಗಳಾಗಿ ಅಲ್ಲ. ಇಂಥ ಬೆಟ್ಟಗಳು, ಮೈದಾನಗಳು ಜಗತ್ತಿನಲ್ಲಿ ನೂರಾರು ಇವೆ. ಇಬ್ರಾಹೀಮ್, ಇಸ್ಮಾಈಲ್, ಹಾಜಿರಾ.. ಮುಂತಾದ ಹೆಸರುಗಳು ಜಗತ್ತಿನಲ್ಲಿ ಕೋಟ್ಯಂತರ ಇರಬಹುದು. ಆದರೆ ಅವಾವುವೂ ಹಾಜಿಯನ್ನು ಭಾವುಕಗೊಳಿಸುವುದೋ ಉನ್ಮಾದಗೊಳಿಸುವುದೋ ಮಾಡುತ್ತಿಲ್ಲ. ನಿಜವಾಗಿ, ಹಾಜಿ ವರ್ತಮಾನದಲ್ಲಷ್ಟೇ ಬದುಕುತ್ತಿಲ್ಲ. ಆತನ ಎದುರು ಭೂತ(ಗತ)ಕಾಲವೊಂದಿದೆ. ಆ ಕಾಲದ ದಟ್ಟ ಪ್ರಭಾವವೇ ಈ ವರ್ತಮಾನದಲ್ಲೂ ಆತನನ್ನು ಹಾಜಿಯನ್ನಾಗಿಸುತ್ತದೆ. ಗತದ ಸ್ಮರಣೆಯು ಆತ/ಕೆಯನ್ನು ತಲ್ಲಣಗೊಳಿಸುತ್ತದೆ. ಜಮಾರಾತ್‍ನಲ್ಲಿ ಕಂಭಗಳಿಗೆ ಕಲ್ಲೆಸೆಯುವ ಹಾಜಿಯನ್ನು ಗತ ಇತಿಹಾಸ ಗೊತ್ತಿಲ್ಲದ ಪ್ರವಾಸಿಯೋರ್ವ ನೋಡಿದರೆ ಅಚ್ಚರಿ ಪಡಬಲ್ಲ. ಯಾಕೆಂದರೆ, ಬರೇ ವರ್ತಮಾನದಲ್ಲಷ್ಟೇ ಬದುಕುವ ವ್ಯಕ್ತಿಗೆ ಅದು ಬರೇ ಕಂಬ ಮಾತ್ರ. ಆದರೆ ಹಾಜಿ ಗತ ಕಾಲದಲ್ಲೂ ಬದುಕುತ್ತಾನೆ. ಆದ್ದರಿಂದಲೇ ಆತ ಎಸೆಯುವುದು ಕಲ್ಲುಗಳನ್ನಲ್ಲ, ಆತನ ಗುರಿಯಲ್ಲಿರುವುದು ಕಂಬಗಳೂ ಅಲ್ಲ. ಹೀಗೆ ಹಾಜಿಯು ವರ್ತಮಾನ ಮತ್ತು ಭೂತಕಾಲವನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಹಾಜಿ ಇಲ್ಲಿ ಉತ್ತರಿಸಬೇಕಾದ ಒಂದು ಪ್ರಶ್ನೆಯಿದೆ. ಈ ಸಮನ್ವಯತೆ ಕೇವಲ ಹಜ್ಜ್ ಗೆ ಮಾತ್ರ ಯಾಕೆ ಸೀಮಿತಗೊಳ್ಳಬೇಕು? ಬದುಕಿನ ಇತರ ಸಂದರ್ಭಗಳಲ್ಲೂ ಯಾಕೆ ಅದು ಕಾಣಿಸಿಕೊಳ್ಳಬಾರದು? ಅಂದಹಾಗೆ, ಹಾಜಿ ಬದುಕುವ ಈ ವರ್ತಮಾನ ಕಾಲದಲ್ಲಿ ನೂರಾರು ತಲ್ಲಣಗಳಿವೆ. ಬಡ್ಡಿಯಿದೆ, ವರದಕ್ಷಿಣೆಯಿದೆ, ವಂಚನೆಯಿದೆ, ಕೋಮುವಾದ, ಅನೈತಿಕತೆ, ಅಪನಂಬಿಕೆ, ಅನಾಚಾರ, ಅನೈಕ್ಯತೆ, ಶೋಷಣೆ.. ಇದೆ. ಹಸಿವು, ಕಣ್ಣೀರು ಇದೆ. ನಿಜವಾಗಿ, ಇವು ಮತ್ತು ಇನ್ನಿತರ ವರ್ತಮಾನದ ತಲ್ಲಣಗಳು ಹಾಜಿಯನ್ನು ತಟ್ಟಲೇ ಬೇಕು. ಸಫಾ-ಮರ್ವಾಗಳು ಅವುಗಳ ಗತ ಇತಿಹಾಸದಿಂದಾಗಿ ಹಾಜಿಯನ್ನು ಭಾವುಕಗೊಳಿಸುವುದಾದರೆ, ವರ್ತಮಾನದ ಈ ತಲ್ಲಣಗಳನ್ನು ಕೂಡ ಹಾಜಿಯು ಇತಿಹಾಸದ ಬೆಳಕಿನಲ್ಲಿ ಇಟ್ಟು ನೋಡಬೇಕು. ಹಾಗಾದಾಗ ಸಮಾಜದ ಬಡ್ಡಿಯಾಧಾರಿತ ಬದುಕು ಹಾಜಿಯೊಳಗೆ ತಲ್ಲಣಗಳನ್ನು ಹುಟ್ಟಿಸಬಹುದು. ಹಸಿವು, ಸೋರುವ ಮಾಡು, ವರದಕ್ಷಿಣೆ, ವಂಚನೆ.. ಎಲ್ಲವೂ ಹಾಜಿಯನ್ನು ಭಿನ್ನ ಭಾವದಲ್ಲಿ ತಟ್ಟಬಹುದು. ಇಬ್ರಾಹೀಮರ(ಅ) ಆಲೋಚನೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ಅವರು ಕಟ್ಟಬಯಸಿದ ಸಮಾಜವನ್ನು ಸ್ಥಾಪಿಸಲು ಹಾಜಿ ಪಣತೊಡಬಹುದು.
     ಓರ್ವ ವ್ಯಕ್ತಿ ಹಜ್ಜ್ ಗೆ ಕಡ್ಡಾಯವಾಗಿ ತೆರಳಬೇಕಾದುದು ಒಮ್ಮೆ ಮಾತ್ರ. ಹಾಗಂತ, ಆ ಬಳಿಕವೂ ಆತನಲ್ಲಿ ದುಡ್ಡು, ಆರೋಗ್ಯ, ಪ್ರತಿಭೆ ಎಲ್ಲವೂ ಇರಬಹುದು. ಆದರೂ ಆತ ಕಡ್ಡಾಯವಾಗಿ ಮತ್ತೊಮ್ಮೆ ಮಕ್ಕಾಕ್ಕೆ ತೆರಳಬೇಕಿಲ್ಲ. ಇದುವೇ ಓರ್ವ ಹಾಜಿಯ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ, ಆತನ ಊರು. ಆ ಊರನ್ನು ಮಕ್ಕಾ (ಶಾಂತಿಯ ಕೇಂದ್ರ) ಆಗಿಸುವುದೇ ಹಾಜಿಯ ಗುರಿ. ಅದಕ್ಕಾಗಿ ಪ್ರತಿಜ್ಞೆ ಕೈಗೊಳ್ಳುವ ಸಂದರ್ಭವೇ ಹಜ್ಜ್ ಯಾತ್ರೆ. ಒಂದು ವೇಳೆ, ಈ ಅರ್ಥದಲ್ಲಿ ನಮ್ಮ ಹಜ್ಜ್ ನಿರ್ವಹಣೆಯಾಗುವುದಾದರೆ ಒಂದು ದಿನ ಜಗತ್ತೇ `ಶಾಂತಿಯ ಕೇಂದ್ರ' ಆಗಬಹುದು. ಹಾಗಾಗಲಿ ಎಂದು ಹಾರೈಸೋಣ.

Tuesday 8 September 2015

‘ದೊಡ್ಡವರ’ ಹೃದಯ ಹೀನತೆಯನ್ನು ಪ್ರತಿಭಟಿಸಿ ಹೊರಟು ಹೋದ ಮಗು

ಅಯ್ಲಾನ್ ಕುರ್ದಿ
     ನಿಲೋಫರ್ ಡೆಮಿಕ್ ಎಂಬ ಪತ್ರಕರ್ತ ಕ್ಲಿಕ್ಕಿಸಿದ ಪೋಟೋವೊಂದು ಜಗತ್ತಿನ ಕಣ್ಣನ್ನೇ ಮಂಜಾಗಿಸಿದೆ. ಕೆಂಪು ಟೀ ಶರ್ಟ್, ನೀಲಿ ಚಡ್ಡಿ, ಶೂಸ್ ಧರಿಸಿರುವ 3 ವರ್ಷದ ಪುಟ್ಟ ಮಗುವೊಂದು ಟರ್ಕಿಯ ಬೋರ್ಡಮ್ ಸಮುದ್ರ ದಂಡೆಯಲ್ಲಿ ಬೋರಲಾಗಿ ಬಿದ್ದಿರುವ ಪೋಟೋವನ್ನು ನೋಡಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್‍ರು ಟರ್ಕಿಯ ಅಧ್ಯಕ್ಷ ಉರ್ದುಗಾನ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆ ಪೋಟೋವು ನಿರಾಶ್ರಿತರ ಬಗ್ಗೆ ಜಗತ್ತಿನ ಹೊಣೆಗಾರಿಕೆಯನ್ನು ನೆನಪಿಸಿತು ಎಂದು ಹೇಳಿದ್ದಾರೆ. ಬ್ರಿಟನ್ನಿನ ಪ್ರಧಾನಿ ಡೇವಿಡ್ ಕ್ಯಾಮರೂನ್, ಐರಿಶ್ ಪ್ರಧಾನಿ ಎಂಡಾ ಕೆನ್ನಿ ಸಹಿತ ಎಲ್ಲರೂ ಸಹಿತ ಆ ಪೋಟೋಗೆ ಮರುಗಿದ್ದಾರೆ. ನಿರಾಶ್ರಿತರಿಗಾಗಿ ತನ್ನ ಎರಡನೇ ಮನೆಯನ್ನೇ ಬಿಟ್ಟು ಕೊಡುವುದಾಗಿ ಐರಿಶ್ ಪ್ರಧಾನಿಯವರು ಹೇಳಿಕೊಂಡಿದ್ದಾರೆ. ದಿ ಸ್ಪೆಕ್ಟೇಟರ್, ದಿ ಗಾರ್ಡಿಯನ್ ಸಹಿತ ಜಗತ್ತಿನ ಪ್ರಸಿದ್ಧ ಪತ್ರಿಕೆಗಳಿಂದ ಹಿಡಿದು ಸ್ಥಳೀಯ ಪತ್ರಿಕೆಗಳ ವರೆಗೆ ಎಲ್ಲವೂ ಅಯ್ಲಾನ್ ಕುರ್ದಿ ಎಂಬ ಆ ಮಗುವಿನ ಬಗ್ಗೆ ಬರೆದಿವೆ. ‘ಮೈಗ್ರಾಂಟ್ ಆಫ್‍ಶೋರ್ ಏಡ್ ಸ್ಟೇಷನ್’ (Migrant Offshore Aid Station) ಎಂಬ ಹೆಸರಲ್ಲಿ ನಿರಾಶ್ರಿತರಿಗೆ ನೆರವು ಸಂಗ್ರಹಿಸುವ ಪ್ರಯತ್ನಕ್ಕೆ ಈ ಪೋಟೋ ಕಾರಣವಾಗಿದೆ. ಒಂದು ರೀತಿಯಲ್ಲಿ, 2014ರಲ್ಲಿ ಪ್ರಕಟವಾಗಿದ್ದ ಪುಟ್ಟ ಫೆಲೆಸ್ತೀನಿ ಬಾಲಕನ ಪೋಟೋದ ಬಳಿಕ ಜಗತ್ತನ್ನು ತೀವ್ರವಾಗಿ ಕಾಡಿದ ಪೋಟೋ ಇದು. ಗುಂಡಿನ ದಾಳಿಯಿಂದ ತೂತು ತೂತಾಗಿದ್ದ ಕಪ್ಪು ಬೋರ್ಡಿನಲ್ಲಿಫೆಲೆಸ್ತೀನಿನ ಆ ಬಾಲಕ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿದ್ದ ದೃಶ್ಯ ಅದು. ಇಸ್ರೇಲ್‍ನ ದಾಳಿಯಿಂದ ಜರ್ಝರಿತಗೊಂಡ ಗಾಝಾದ ಬಗ್ಗೆ ಜಗತ್ತಿನ ಗಮನ ಸೆಳೆಯುವುದಕ್ಕೆ ಅಂದು ಆ ಬಾಲಕ ಕಾರಣವಾಗಿದ್ದರೆ ಇಂದು ಈ ಮಗು ಸಿರಿಯನ್ ನಿರಾಶ್ರಿತರ ಬಗ್ಗೆ ಜಾಗತಿಕ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ವಲಸೆ ಸಮಸ್ಯೆ ಇದು. ತಮ್ಮ ಗಡಿಗಳಲ್ಲಿ ತುಂಬಿಕೊಂಡಿರುವ ನಿರಾಶ್ರಿತರನ್ನು ಒಳಗೆ ಸೇರಿಸಲು ನಿರಾಕರಿಸುತ್ತಿದ್ದ ಹಂಗರಿ, ಬ್ರಿಟನ್, ಇಟಲಿ, ಪೋರ್ಚುಗೀಸ್, ಸ್ಪೈನ್‍ಗಳು ಈ ಮಗುವನ್ನು ನೋಡಿ ಬೆಚ್ಚಿ ಬಿದ್ದಿವೆ. ಮಾತ್ರವಲ್ಲ, ಈ ಎಲ್ಲ ರಾಷ್ಟ್ರಗಳು ನಿರಾಶ್ರಿತರಿಗೆ ತಂತಮ್ಮ ಗಡಿಯನ್ನು ತೆರೆದು ಬಿಡುವಷ್ಟು ಆ ಪೋಟೋ ಒತ್ತಡವನ್ನು ಹೇರಿದೆ. ನಿಜವಾಗಿ, ನಮ್ಮ ಕಣ್ಣನ್ನು ಮಂಜಾಗಿಸಬೇಕಾದ ಮತ್ತು ಹೃದಯವನ್ನು ಗಾಢವಾಗಿ ತಟ್ಟಬೇಕಾದ ಪೋಟೋ ಅದು. ದೊಡ್ಡವರ ಅಹಂಕಾರ, ಸ್ವಾರ್ಥಗಳಿಗೆ ಎಂದೂ ಬಲಿಯಾಗುವುದು ಮಕ್ಕಳೇ. ಕತ್ತಿ, ಚೂರಿ, ಬಾಂಬು, ಬಂದೂಕು.. ಎಲ್ಲವೂ ದೊಡ್ಡವರ ಅಸ್ತ್ರಗಳು. ಅದನ್ನು ಮಕ್ಕಳು ತಯಾರಿಸಿರುವುದಿಲ್ಲ. ಬಳಸುವುದೂ ಇಲ್ಲ. ದುರಂತ ಏನೆಂದರೆ, ಅಧಿಕಾರಕ್ಕೋ ಸಂಪತ್ತಿಗೋ ಅಥವಾ ಇನ್ನಾವುದಾದರೂ ಸ್ವಾರ್ಥ ಉದ್ದೇಶಕ್ಕೋ 'ದೊಡ್ಡವರು' ಈ ಅಸ್ತ್ರಗಳನ್ನೆಲ್ಲ ಹಿಡಿದು ಕಾದಾಡುವಾಗ ಮಕ್ಕಳು ಅದರ ಎಲ್ಲ ನೋವುಗಳನ್ನೂ ಅನುಭವಿಸುತ್ತಾ ಬದುಕಬೇಕಾಗುತ್ತದೆ. ಏನೆನ್ನಬೇಕು ಇದಕ್ಕೆ? ದೊಡ್ಡವರ ಉದ್ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡುವುದು ಎಷ್ಟು ಸರಿ? ಮಕ್ಕಳಿಗೆ ಅಧಿಕಾರ ಬೇಕಿಲ್ಲ, ಸಂಪತ್ತು ಬೇಕಿಲ್ಲ, ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಅವುಗಳಿಗೆ ಬಾಲ್ಯವಷ್ಟೇ ಬೇಕು. ಅಮ್ಮ-ಅಪ್ಪನ ಬೆಚ್ಚನೆಯ ಪ್ರೀತಿ ಬೇಕು. ಶಾಲೆ ಬೇಕು, ಅಕ್ಷರ ಬೇಕು. ಅಪಾಯ ಮುಕ್ತ ಬಯಲು ಬೇಕು. ಆದರೆ ಇವೆಲ್ಲವನ್ನೂ ನಿರಾಕರಿಸಿದ ದೊಡ್ಡವರ ವರ್ತನೆಗೆ ಮುನಿಸಿಕೊಂಡು ಸಮುದ್ರ ದಂಡೆಯಲ್ಲಿ ಆ ಮಗು ಬೋರಲಾಗಿ ಮಲಗಿರುವಂತೆ ಅನಿಸುತ್ತಿದೆ. ಮರಳಿನಲ್ಲಿ ಆಟವಾಡಲು ಬಿಡದ ಹೆತ್ತವರೊಂದಿಗೆ ಮುನಿಸಿಕೊಳ್ಳುವಂತಹ ಹಠ. ಅಷ್ಟಕ್ಕೂ, ಪುಟ್ಟ ಅಯ್ಲಾನ್ ಕುರ್ದಿ ತನ್ನ ಹುಟ್ಟೂರು ಸಿರಿಯಾದಿಂದ ಟರ್ಕಿಗೆ ವಲಸೆ ಹೋಗಬೇಕೆಂದು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ‘ದೊಡ್ಡವರು’ ಸಿರಿಯಾದಲ್ಲಿ ಅಂಥದ್ದೊಂದು ವಾತಾವರಣವನ್ನು ನಿರ್ಮಿಸಿದ್ದರು. ಆದ್ದರಿಂದಲೇ, ಆತನ ತಂದೆ ಮತ್ತು ತಾಯಿ ಆತನನ್ನೂ ಆತನ ಅಣ್ಣ 5 ವರ್ಷದ ಗಾಲಿಬ್‍ನನ್ನೂ ಎತ್ತಿಕೊಂಡು ವರ್ಷಗಳ ಹಿಂದೆ ಸಿರಿಯದಿಂದ ಟರ್ಕಿಗೆ ಆಗಮಿಸಿದ್ದರು. ಅಲ್ಲಿ ಅಯ್ಲಾನ್ ಸುಖವಾಗಿರಲಿಲ್ಲ. ಎಲ್ಲೆಲ್ಲೂ ನಿರಾಶ್ರಿತರು. ಕೊನೆಗೆ ಅಲ್ಲಿಂದ 3 ಮೈಲುಗಳಷ್ಟು ದೂರ ಇರುವ ಗ್ರೀಸ್‍ಗೆ ತೆರಳಿ ಅಲ್ಲಿಂದ ಕೆನಡದಲ್ಲಿರುವ ಸಂಬಂಧಿಕರನ್ನು ಸೇರಲು  ಮಗುವಿನ ಹೆತ್ತವರು ತೀರ್ಮಾನಿಸಿದರು. ಪಾಸ್‍ಪೋರ್ಟ್, ನಿರ್ಗಮನ ವಿಸಾ ಮತ್ತು ದುಡ್ಡು ಇಲ್ಲದ ಕುಟುಂಬವು ವಿಮಾನ ಹತ್ತುವುದು ಸಾಧ್ಯವಿರಲಿಲ್ಲ. ಹಾಗಂತ, ಇದು ಕೇವಲ ಈ ಕುಟುಂಬವೊಂದರ ಸಮಸ್ಯೆ ಅಲ್ಲ, ಸಂಘರ್ಷ ಪೀಡಿತ ಪಶ್ಚಿಮೇಶ್ಯಾದ ಲಕ್ಷಾಂತರ ಕುಟುಂಬಗಳು ಇವೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದಲೇ, ಕಳೆದ ವಾರ ಅಯ್ಲಾನ್‍ನ ಹೆತ್ತವರು 3 ಮೈಲಿನ ಸಮುದ್ರ ಪ್ರಯಾಣಕ್ಕಾಗಿ ರಬ್ಬರ್ ದೋಣಿಯನ್ನು ಏರಿದರು. 8 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 15 ಮಂದಿ ಇದ್ದುದರಿಂದಲೇ ಏನೋ ಸಮುದ್ರದಲೆಗೆ ದೋಣಿ ಮಗುಚಿ ಬಿತ್ತು. ಅಯ್ಲಾನ್‍ನ ತಂದೆಯ ಹೊರತು ಉಳಿದವರೆಲ್ಲರೂ ಸಾವಿಗೀಡಾದರು. ಅದೇ ದಿನ ಆ ಮಗುವಿನ ಮೃತದೇಹ ಬೋರ್ಡಮ್ ಸಮುದ್ರ ಕಿನಾರೆಯಲ್ಲಿ ಬೋರಲಾಗಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಯಿತು.
ಫೆಲೆಸ್ತೀನಿನ  ಬಾಲಕ
    ಅಷ್ಟಕ್ಕೂ, ಸಂಘರ್ಷ ಪೀಡಿತ ಪಶ್ಚಿಮೇಶ್ಯಕ್ಕೆ ಈ ಸಾವು ಹೊಸತಲ್ಲ. ಹೀಗೆ ಅನಧಿಕೃತವಾಗಿ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದ 26 ಸಾವಿರಕ್ಕಿಂತಲೂ ಅಧಿಕ ನಿರಾಶ್ರಿತರು ಈಗಾಗಲೇ ಸಾವಿಗೀಡಾಗಿದ್ದಾರೆ. ಇದರಲ್ಲಿ ದೊಡ್ಡದೊಂದು ಭಾಗ ಮಕ್ಕಳದ್ದು. ಸಿರಿಯದಲ್ಲಿ ಪ್ರತಿ 4ರಲ್ಲಿ ಒಂದು ಶಾಲೆ ನಿರಾಶ್ರಿತರ ಶಿಬಿರವಾಗಿ ಮಾರ್ಪಟ್ಟಿವೆ. ಇರಾಕ್‍ನಲ್ಲಿ 3 ಮಿಲಿಯನ್ ಜನರು ಶಾಲೆಗಳಲ್ಲಿ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಸಿರಿಯ, ಇರಾಕ್, ಯಮನ್, ಲಿಬಿಯಗಳಲ್ಲಿ 13.4 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 8,850 ಶಾಲೆಗಳು ಉಪಯೋಗಶೂನ್ಯವಾಗಿ ಭಣಗುಟ್ಟುತ್ತಿದೆ. ಲಿಬಿಯದ ಶೇ. 73 ಶಾಲೆಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ. ಸಿರಿಯದ ಸುಮಾರು 56 ಸಾವಿರ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ತೊರೆದಿದ್ದಾರೆ... ಮಕ್ಕಳ ಜಗತ್ತಿನ ಪುಟ್ಟ ಚಿತ್ರಣ ಇದು. ದೊಡ್ಡವರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ? ಹೃದಯವೇ ಇಲ್ಲದಂತೆ ಮತ್ತು ಸಂವೇದನೆಯೇ ಸತ್ತಂತೆ ವರ್ತಿಸುತ್ತಿದ್ದಾರೆ? ಶಾಲೆ ಮಕ್ಕಳದ್ದು. ಬಯಲು ಮಕ್ಕಳದ್ದು. ಬಾಲ್ಯವೂ ಮಕ್ಕಳದ್ದೇ. ಅದನ್ನು ಆ ಮಕ್ಕಳಿಗೆ ಒದಗಿಸಬೇಕಾದ ದೊಡ್ಡವರು ಬಾಂಬು, ಬಂದೂಕುಗಳ ಮೂಲಕ ಅವನ್ನು ನಿರಾಕರಿಸುತ್ತಿರುವುದಕ್ಕೆ ಏನೆನ್ನಬೇಕು? ಅಂದಹಾಗೆ, ಜಗತ್ತಿನ ಸರ್ವ ಆಂತರಿಕ ಸಮಸ್ಯೆಗಳಲ್ಲೂ ಸುದ್ದಿಗೀಡಾಗದೇ ಇರುವುದು ಮಕ್ಕಳು ಮಾತ್ರ. ಯಾಕೆಂದರೆ, ಅವಕ್ಕೆ ಪ್ರತಿಭಟಿಸಲು ಬರುವುದಿಲ್ಲ. ಹುದುಗಿಸಿಟ್ಟ ಬಾಂಬುಗಳ ಪರಿಜ್ಞಾನ ಇರುವುದಿಲ್ಲ. ಐಸಿಸ್‍ನ ಉದ್ದೇಶ, ಅಮೇರಿಕದ ಗುರಿ, ಇಸ್ರೇಲ್ ಬಯಕೆ ಅಥವಾ ಇನ್ನಾರೋ ದೊಡ್ಡವರ ಹುನ್ನಾರಗಳು ಅರ್ಥವಾಗಿರುವುದಿಲ್ಲ. ಹೆತ್ತವರು ಓಡುವಾಗ ಅವೂ ಓಡುತ್ತವೆ. ಅವರು ಅಳುವಾಗ ಅವೂ ಅಳುತ್ತವೆ. ಹಸಿವಾದರೂ ಅಮ್ಮ ಯಾಕೆ ಊಟ ಕೊಡಲ್ಲ ಎಂದು ಕೊರಗುತ್ತವೆ. ಹೀಗೆ ಇತರರನ್ನೇ ಆಶ್ರಯಿಸಿ ಬದುಕುವ ಪೀಳಿಗೆ ಅದು. ಆದ್ದರಿಂದಲೇ, ಅಪ್ಪನೊಂದಿಗೆ ಅಯ್ಲಾನ್ ಕುರ್ದಿ ರಬ್ಬರ್ ದೋಣಿ ಏರಿದ್ದಾನೆ. ಒಂದು ರೀತಿಯಲ್ಲಿ, ದೊಡ್ಡವರೆಲ್ಲ ಸೇರಿ ಮಾಡಿದ ಅಮಾನುಷ ಹತ್ಯೆ ಇದು. ನಿರಾಶ್ರಿತರಾಗಿ ಬದುಕುವುದು, ದೋಣಿ ಏರುವುದು, ಗ್ರೀಸ್‍ಗೆ ತೆರಳುವುದೆಲ್ಲ ಆ ಮಗುವಿನ ಅನಿವಾರ್ಯತೆಗಳಲ್ಲವಲ್ಲ. ಅದನ್ನು ಅನಿವಾರ್ಯಗೊಳಿಸಿದ್ದು ಸಿರಿಯ, ಐಸಿಸ್, ಅಮೇರಿಕ... ಮುಂತಾದ ದೊಡ್ಡವರು. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರೆಲ್ಲ ಹೊತ್ತುಕೊಳ್ಳಲಿ. ಇನ್ನಾದರೂ ಈ ಜಗತ್ತನ್ನು ಮಕ್ಕಳಿಂದ  ಕಸಿಯದಿರಲಿ.

Tuesday 1 September 2015

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಳ್ಳುತ್ತಲೇ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸೋಣ

    ವೈಚಾರಿಕ ಭಿನ್ನಾಭಿಪ್ರಾಯಗಳ ನೆಲೆ-ಬೆಲೆ ಮತ್ತು ಭವಿಷ್ಯವನ್ನು ಡಾ| ಕಲಬುರ್ಗಿಯವರ ಸಾವು ಮತ್ತೊಮ್ಮೆ ಪ್ರಶ್ನಾರ್ಹಗೊಳಿಸಿದೆ. ಈ ಪ್ರಶ್ನೆ ಮೊದಲಾಗಿ ಕಾಣಿಸಿಕೊಂಡದ್ದು ಅನಂತಮೂರ್ತಿಯವರ ಸಾವಿನೊಂದಿಗೆ. ಅವರ ಸಾವನ್ನು ಇಲ್ಲಿಯ ಒಂದು ವರ್ಗ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಅವರ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲಾಗಿತ್ತು. ಇದೀಗ ಕಲಬುರ್ಗಿಯವರನ್ನೂ ಅದೇ ರೀತಿಯಲ್ಲಿ ಸ್ವಾಗತಿಸಲಾಗಿದೆ. ವಿಶೇಷ ಏನೆಂದರೆ, ಅನಂತಮೂರ್ತಿಯವರ ಸಾವು ಸಹಜವಾಗಿದ್ದರೆ ಕಲಬುರ್ಗಿಯವರದ್ದು ಅಸಹಜ ಮತ್ತು ಅಮಾನುಷ. ಅವರಿಗೆ ಗುಂಡಿಕ್ಕಿದವರು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಇನ್ನೂ ಗೊತ್ತಾಗುವ ಮೊದಲೇ ಈ ಸಂಭ್ರಮಾಚರಣೆ ನಡೆದಿದೆ. ಆದ್ದರಿಂದಲೇ ಈ ಬೆಳವಣಿಗೆಯನ್ನು ನಾವು ಆತಂಕದಿಂದಲೇ ನೋಡಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರಗತಿಪರ ಬ್ಲಾಗರುಗಳ (ಬರಹಗಾರರು) ಹತ್ಯೆ ನಡೆದಾಗ ‘ಶಂಕಿತ ಮುಸ್ಲಿಮ್ ಮೂಲಭೂತವಾದಿಗಳಿಂದ' ಎಂಬ ವಾಕ್ಯದ ಜೊತೆಗೇ ಆ ಸುದ್ದಿಯನ್ನು ಹೆಚ್ಚಿನ ಮಾಧ್ಯಮಗಳು ಪ್ರಕಟಿಸಿದ್ದುವು. ಕಲಬುರ್ಗಿಯವರ ಹತ್ಯೆಗೆ ಸಂಬಂಧಿಸಿ ಅಂತಹ ಯಾವ ‘ಶಂಕಿತ ಮೂಲಭೂತವಾದಿ’ ಪದಗಳೂ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಹತ್ಯೆಯನ್ನು ಬೆಂಬಲಿಸಿ ಬಹಿರಂಗವಾಗಿಯೇ ಸಂತಸ ಹಂಚಿಕೊಂಡ ಘಟನೆಗಳು ಜರುಗಿದ ಹೊರತಾಗಿಯೂ ಹೀಗಾಗಿದೆ ಎಂಬುದು ಸ್ಪಷ್ಟ. ಹಾಗಂತ, ಇದು ಆರೋಪ ಅಲ್ಲ. ಮಾಧ್ಯಮಗಳ ಈ ಸಹನೆಯನ್ನು ನಾವು ಸದುದ್ದೇಶದಿಂದಲೇ ಸ್ವೀಕರಿಸೋಣ. ಹತ್ಯೆಕೋರರನ್ನೂ ಮತ್ತು ಹತ್ಯೆಗೆ ಸಂತೋಷ ವ್ಯಕ್ತಪಡಿಸಿದವರನ್ನೂ ಪ್ರತ್ಯೇಕವಾಗಿಯೇ ನೋಡುವ ಮಾಧ್ಯಮ ಎಚ್ಚರವನ್ನು ಗೌರವಿಸೋಣ ಮತ್ತು ಈ ಎಚ್ಚರ ಸದಾ ಇರುತ್ತದೆ ಎಂದು ನಿರೀಕ್ಷಿಸೋಣ.
   ಅಷ್ಟಕ್ಕೂ, ಕಲಬುರ್ಗಿಯವರ ಸಾವು ಮತ್ತು ಬದುಕನ್ನು ನಾವು ಈ ವಿಘ್ನ ಸಂತೋಷಿಗಳ ಗುಂಪಿನಿಂದ ಹೊರಗಿಟ್ಟು ನೋಡಬೇಕಾಗಿದೆ. ಅವರು ಬದುಕಿರುವಷ್ಟೂ ದಿನ ಪ್ರಶ್ನೆಗಳೊಂದಿಗೇ ಬದುಕಿದರು. ಆ ಪ್ರಶ್ನೆಗಳು ಎಷ್ಟು ಪ್ರಖರವಾಗಿದ್ದುವು ಎಂಬುದನ್ನು ನೂರಕ್ಕಿಂತಲೂ ಅಧಿಕಾರವಾಗಿರುವ ಅವರ ಸಾಹಿತ್ಯ ಕೃತಿಗಳೇ ಹೇಳುತ್ತವೆ. ಈ ಸಾಹಿತ್ಯ ಭಂಡಾರದಲ್ಲಿ ಇರುವುದೆಲ್ಲ ಸಂಶೋಧನಾತ್ಮಕ ಬರಹಗಳು ಮತ್ತು ಸಂಪಾದನೆಗಳೇ. ಬಹುಶಃ, ಅವರು ಕಾದಂಬರಿಯನ್ನು ಬರೆದೇ ಇಲ್ಲ. ಒಂದು ಕವನ, ಒಂದು ನಾಟಕ, ಒಂದು ಸಣ್ಣಾಟವನ್ನು ಬಿಟ್ಟರೆ ಉಳಿದಂತೆ ಕಲಬುರ್ಗಿಯವರ ಜೋಳಿಗೆಯ ತುಂಬ ಸಂಶೋಧನಾತ್ಮಕ ಬರಹಗಳೇ ತುಂಬಿಕೊಂಡಿದ್ದುವು. ಅವರೋರ್ವ ಪ್ರಶ್ನೆಗಳ ಸರದಾರ. ಅವರು ಮೂರ್ತಿಪೂಜೆಯನ್ನು ಪ್ರಶ್ನಿಸಿದರು. ನಾಗರ ಕಲ್ಲಿನ ಸುತ್ತ ಹರಡಿರುವ ಭಯವನ್ನು ದುರ್ಬಲಗೊಳಿಸಿದರು. ಚನ್ನ ಬಸವಣ್ಣನ ಹುಟ್ಟಿನ ಬಗ್ಗೆ ಬರೆದು ವೀರಶೈವರಿಂದ ವಿರೋಧ ಕಟ್ಟಿಕೊಂಡರು. ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡಿದರು. ಭಗವದ್ಗೀತೆಯನ್ನು ಧರ್ಮಗ್ರಂಥವೇ ಅಲ್ಲ ಎಂದರು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಹೇಳಿದ ಅವರು, ವೀರಶೈವ ಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳಲೇ ಇಲ್ಲ. ಅದೊಂದು ಆಚರಣೆ ಎಂದರು. ಸ್ಪಷ್ಟ ಮತ್ತು ನಂಬಲರ್ಹ ಇತಿಹಾಸವಿಲ್ಲದ ರೇಣುಕಾಚಾರ್ಯರು ಅದರ ಸ್ಥಾಪಕರೆನ್ನುವುದಕ್ಕೆ ಪುರಾವೆಯಿಲ್ಲ ಎಂದರು. ಅವರು ಪ್ರಶ್ನೆಯೊಂದಿಗೆ ಬೆಳೆದರು. 80ರ ದಶಕದಲ್ಲೇ ಅವರ ಮೇಲೆ ದಾಳಿಗಳಾಗಿದ್ದುವು. ಬೆದರಿಕೆಗಳಿದ್ದುವು. ಪೊಲೀಸರ ರಕ್ಷಣೆಯಲ್ಲೇ ಅವರು ಪಾಠ ಮಾಡಿದ್ದಿದೆ. ಕಳೆದ ವರ್ಷ ಅವರು ತೀವ್ರ ವಿವಾದಕ್ಕೆ ಒಳಗಾಗಿದ್ದರು. ನಾಗರಕಲ್ಲಿಗೆ ಮೂತ್ರ ವಿಸರ್ಜಿಸುವ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಒಂದು ವರ್ಗದ ತೀವ್ರ ಸಿಟ್ಟಿಗೆ ಕಾರಣವಾಗಿತ್ತು. ಅವರಿಗೆ ಸರಕಾರ ರಕ್ಷಣೆಯನ್ನೂ ಒದಗಿಸಿತ್ತು. ಇತ್ತೀಚೆಗಷ್ಟೇ ಅವರ ಕೋರಿಕೆಯ ಮೇರೆಗೆ ಸರಕಾರ ಭದ್ರತೆಯನ್ನು ಹಿಂದಕ್ಕೆ ಪಡೆದಿತ್ತು. ಅವರು ಸ್ವತಂತ್ರವಾಗಿಯೇ ಬದುಕಿದರು. ಸ್ವತಂತ್ರವಾಗಿಯೇ ಆಲೋಚಿಸಿದರು. ಸ್ವತಂತ್ರವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೊರಟು ಹೋಗುವಾಗಲೂ ಭದ್ರತಾ ಪಡೆಗಳಿಂದ ಮುಕ್ತವಾಗಿ ಸ್ವಂತಿಕೆಯೊಂದಿಗೇ ಹೊರಟು ಹೋದರು.
  ನಿಜವಾಗಿ, ವೈಚಾರಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಘರ್ಷಣೆ ಮೊದಲಿನಿಂದಲೂ ನಡೆಯುತ್ತಲೇ ಇದೆ. ವೈಚಾರಿಕತೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಗೊಂದಲ ಇದೆ. ಸಹನೆ, ಅಸಹನೆ, ಸ್ಪಷ್ಟ-ಅಸ್ಪಷ್ಟ ಅಭಿಪ್ರಾಯಗಳಿವೆ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಹಿಂಸಾತ್ಮಕ ಪ್ರತಿಕ್ರಿಯೆಯೇ ಉತ್ತರವೆಂದು ವಾದಿಸುವ ಒಂದು ಗುಂಪೂ ಇವತ್ತಿನ ಸಮಾಜದಲ್ಲಿದೆ. ರುಶ್ದಿ, ತಸ್ಲೀಮಾ ಮುಂತಾದವರು ‘ಹೀರೋ'ಗಳಾದದ್ದು ಸಮಾಜದ ಈ ವೈಫಲ್ಯಗಳಿಂದಲೇ. ಕ್ರುದ್ಧಗೊಂಡ ಸಮಾಜದ ಅಪ್ರಬುದ್ಧ ಪ್ರತಿಕ್ರಿಯೆಗಳು ಅನೇಕ ಕೃತಿಗಳನ್ನು ವಿಶ್ವಮಾನ್ಯ ಮಾಡಿವೆ. ಅವುಗಳಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅಂದಹಾಗೆ, ವೈಚಾರಿಕತೆ, ಪ್ರಗತಿಪರ ಚಿಂತನೆ ಎಂಬುದೆಲ್ಲ ಯಾವ ಸಮಾಜದ ವೈರಿಯೂ ಅಲ್ಲ. ಸಮಾಜ ಎಂದ ಮೇಲೆ ಅಲ್ಲಿ ಒಂದಕ್ಕಿಂತ ಹೆಚ್ಚು ಅಭಿಪ್ರಾಯಗಳಿರಲೇಬೇಕು. ಹತ್ತು ಮಂದಿಯ ಗುಂಪನ್ನೇ ಎತ್ತಿಕೊಳ್ಳಿ. ಹತ್ತು ಮಂದಿಯೂ ಒಂದೇ ರೀತಿಯಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ರೂಪ, ಎತ್ತರ, ಉದ್ದ, ಅಗಲ, ಬಣ್ಣ, ನಗು, ಮಾತು, ಪ್ರತಿಭೆ, ಹವ್ಯಾಸ, ಅಭಿರುಚಿ.. ಎಲ್ಲದರಲ್ಲೂ ಹತ್ತು ಮಂದಿಯ ಮಧ್ಯೆಯೂ ವ್ಯತ್ಯಾಸ ಇರುತ್ತದೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಐಡೆಂಟಿಟಿಯಿರುತ್ತದೆ. ಅಂದಹಾಗೆ, ಒಂದೇ ಮನೆಯ ಒಂದೇ ರಕ್ತವನ್ನು ಹಂಚಿಕೊಂಡವರಲ್ಲೂ ಒಂದೇ ಅಭಿಪ್ರಾಯವನ್ನು ಕಾಣಲು ಸಾಧ್ಯವಿಲ್ಲದಿರುವಾಗ, ಸಮಾಜದಲ್ಲಿ ಅದು ಕಾಣಿಸಿಕೊಳ್ಳುವುದು ಹೇಗೆ? ಅನಂತಮೂರ್ತಿಯವರಿಗೆ ಧರ್ಮದ ಕುರಿತಂತೆ ಅವರದ್ದೇ ಆದ ಅಭಿಪ್ರಾಯಗಳಿವೆ. ನರೇಂದ್ರ ದಾಬೋಲ್ಕರ್‍ರಿಗೆ ಮೂಢನಂಬಿಕೆಗಳ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಕಲಬುರ್ಗಿಯವರಾಗಲಿ, ತಸ್ಲೀಮಾ ಆಗಲಿ ಎಲ್ಲರಿಗೂ ಧರ್ಮ, ಸಂಸ್ಕ್ರಿತಿ, ಪುರಾಣ, ಇತಿಹಾಸ.. ಎಲ್ಲವುಗಳ ಬಗ್ಗೆಯೂ ಅವರವರದೇ ಆದ ಅಭಿಪ್ರಾಯಗಳಿರುವುದಕ್ಕೆ ಖಂಡಿತ ಸಾಧ್ಯವಿದೆ. ಆ ಅಭಿಪ್ರಾಯವನ್ನು ಪ್ರಶ್ನಿಸುವುದಕ್ಕೆ ಸಂಪ್ರದಾಯವಾದಿ ಸಮಾಜ ಯಾವುದನ್ನು ಆಯುಧವಾಗಿ ಎತ್ತಿಕೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಬಂದೂಕಂತೂ ಮನುಷ್ಯ ವಿರೋಧಿ. ತಲವಾರು, ಬಾಂಬು, ಕತ್ತಿ, ದೊಣ್ಣೆ ಮುಂತಾದ ಹಿಂಸಾ ಪ್ರತೀಕಗಳೆಲ್ಲ ವೈಚಾರಿಕ ಹೋರಾಟಕ್ಕೆ ಸೂಕ್ತ ಅಸ್ತ್ರಗಳಲ್ಲ. ಅವು ಜೀವಭಂಜಕ, ಕ್ರೌರ್ಯದ ಪ್ರತೀಕ ಮಾತ್ರವಲ್ಲ, ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಲಾಗದವರ ಅಸ್ತ್ರ. ಪ್ರಶ್ನೆ ಪತ್ರಿಕೆಗೆ ಉತ್ತರ ಪತ್ರಿಕೆಗಳ ಮೂಲಕ ಹೇಗೆ ಉತ್ತರಿಸಲಾಗುವುದೋ ಹಾಗೆಯೇ ವೈಚಾರಿಕತೆಯನ್ನು ವಿಚಾರಗಳ ಮೂಲಕವೇ ಎದುರಿಸಬೇಕು. ಹಾಡಿಗೆ ಹಾಡುಗಳ ಮೂಲಕ, ಲೇಖನಕ್ಕೆ ಲೇಖನಗಳ ಮೂಲಕ, ಭಾಷಣಕ್ಕೆ ಭಾಷಣಗಳ ಮೂಲಕ, ಸಾಕ್ಷ್ಯ ಚಿತ್ರಕ್ಕೆ ಸಾಕ್ಷ್ಯ ಚಿತ್ರಗಳ ಮೂಲಕ, ಸಿನಿಮಾಕ್ಕೆ ಸಿನಿಮಾಗಳ ಮೂಲಕ.. ಹೀಗೆ ಪ್ರತಿಯೊಂದನ್ನೂ ಅತ್ಯಂತ ಸಭ್ಯ ಮತ್ತು ಕಾನೂನುಬದ್ಧ ದಾರಿಗಳ ಮೂಲಕ ಎದುರಿಸಬೇಕೇ ಹೊರತು ಅಸ್ತ್ರಗಳಿಂದ ಅಲ್ಲ. ಬಂದೂಕಿಗೆ ಆತ್ಮವಿಲ್ಲ. ಜೀವವೂ ಇಲ್ಲ. ಒಂದು ವೇಳೆ ಇಂಥ ಜೀವರಹಿತ ಅಸ್ತ್ರಗಳು ಜೀವಂತ ವ್ಯಕ್ತಿಯನ್ನು ಬಲಿ ಪಡೆಯಬಹುದಾದರೂ ಆತನ ಅಭಿಪ್ರಾಯವನ್ನು ಬಲಿ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿದವರು ಈ ಸತ್ಯವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕಾಗಿದೆ.
  ಏನೇ ಆಗಲಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಎಂದೂ ಉತ್ತರವಲ್ಲ, ಆಗಬಾರದು ಕೂಡ. ಆದ್ದರಿಂದಲೇ, ಕಲಬುರ್ಗಿಯವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತಲೇ ಅವರ ಹತ್ಯೆಯನ್ನು ಪ್ರಬಲ ದನಿಯಲ್ಲಿ ಖಂಡಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗಬೇಕಿದೆ.