Wednesday 10 December 2014

ಕಲ್ಲು, ಚೂರಿ, ಬೆಂಕಿ ಮತ್ತು ಧರ್ಮರಕ್ಷಣೆ

    ಒಂದು ಸಮಾಜದ ಸ್ವಾಸ್ಥ್ಯಕ್ಕೂ ಆ ಸಮಾಜದಲ್ಲಿರುವ ನಂಬಿಕೆ ಮತ್ತು ನಿರೀಕ್ಷೆಗಳಿಗೂ ಸಂಬಂಧ ಇರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಎಂಬುದು ಅಲ್ಲಿರುವ ಆಸ್ಪತ್ರೆಗಳನ್ನೋ ಪೊಲೀಸರನ್ನೋ ಹೊಂದಿಕೊಂಡಿಲ್ಲ. ಕೆಲವು ರಮ್ಯ ನಿರೀಕ್ಷೆಗಳು ಆ ಸಮಾಜದ ಸೌಖ್ಯವನ್ನು ನಿರ್ಧರಿಸುತ್ತದೆ. ಮಸೀದಿಯಿಂದ ಹಾನಿಯನ್ನು ನಿರೀಕ್ಷಿಸದ ಸಮಾಜ, ದೇವಾಲಯದಿಂದ ಒಳಿತನ್ನೇ ನಿರೀಕ್ಷಿಸುವ ಸಮಾಜ, ಹಿಂದೂ-ಮುಸ್ಲಿಮ್-ಕ್ರೈಸ್ತರಿಂದ ಭದ್ರತೆಯನ್ನೇ ನಿರೀಕ್ಷಿಸುವ ಸಮಾಜ.. ಹೀಗೆ ಇಂಥ ಒಳ್ಳೆಯ ನಿರೀಕ್ಷೆಗಳು ಒಂದು ಸಮಾಜವನ್ನು ಶಾಂತಿಯಿಂದ ಮತ್ತು ಖುಷಿಯಿಂದ ಇಡಬಲ್ಲುದು. ದುರಂತ ಏನೆಂದರೆ, ಈ ವಾಸ್ತವವನ್ನು ಅತ್ಯಂತ ಚೆನ್ನಾಗಿ ಅರಿತುಕೊಂಡಿರುವುದು ಶಾಂತಿಯ ವಿರೋಧಿಗಳು. ಆದ್ದರಿಂದಲೇ ಅವರ ಮೊದಲ ಗುರಿ ಮಸೀದಿಯೋ ಮಂದಿರವೋ ಆಗಿರುತ್ತದೆ. ಹಂದಿ ಮತ್ತು ಹಸುವಿನ ತಲೆಯನ್ನು ಈ ಎರಡು ಕೇಂದ್ರಗಳಿಗೆ ಎಸೆಯಲಾಗುತ್ತದೆ. ಕಲ್ಲು ತೂರಾಟ ನಡೆಯುತ್ತದೆ. ಮಸೀದಿ-ಮಂದಿರಗಳು ಎಲ್ಲಿಯ ವರೆಗೆ ಸಮಾಜದ ಶಾಂತಿಯ ನಿರೀಕ್ಷೆಗಳಿಗೆ ಪೂರಕವಾಗಿರುತ್ತದೋ ಅಥವಾ ಅಲ್ಲಿಂದ ಹೊರ ಬೀಳುವ ಸುದ್ದಿಗಳು ನೆಮ್ಮದಿದಾಯಕವಾಗಿರುತ್ತದೋ ಅಲ್ಲಿಯ ವರೆಗೆ ಕಲ್ಲುಗಳಿಗೆ, ಹಂದಿ-ಹಸುವಿನ ತಲೆಗಳಿಗೆಲ್ಲ ಜಯ ಸಿಗುವುದು ಕಡಿಮೆ. ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಅಹಿತಕರ ಘಟನೆಗಳಿಗೆ ಈ ಕೇಂದ್ರಗಳನ್ನೇ ಗುರಿ ಮಾಡಲಾಗಿದೆ. ಗಂಗೊಳ್ಳಿಯಲ್ಲಿ, ಉಳಾಯಿಬೆಟ್ಟು, ಬಜ್ಪೆ ಮತ್ತಿತರ ಪ್ರದೇಶಗಳಲ್ಲಿ ಕೋಮುಗಲಭೆಗೆ ಪೂರಕವಾದ ವಾತಾವರಣಗಳನ್ನು ನಿರ್ಮಿಸಲಾಗುತ್ತಿದೆ. ಕಲ್ಲು ತೂರಾಟ ನಡೆದಿದೆ. ಚೂರಿ ಇರಿತವಾಗಿದೆ. ಒಂದು ಸಮಾಜದ ನೆಮ್ಮದಿಯನ್ನು ಕೆಡಿಸುವುದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ದುಷ್ಕರ್ಮಿಗಳು ಯೋಜಿತವಾಗಿ ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಸಮಾಜ ಪ್ರಚೋದನೆಗೆ ಒಳಗಾಗಬಾರದು. ಮಸೀದಿಗೋ ಮಂದಿರಕ್ಕೋ  ಕಲ್ಲೆಸೆಯುವವರು, ಗಡ್ಡವನ್ನೋ ನಾಮವನ್ನೋ ನೋಡಿ ಚೂರಿ ಹಾಕುವವರೆಲ್ಲ ಧರ್ಮ ವಿರೋಧಿಗಳೇ ಹೊರತು ಅವರಿಂದ ಧರ್ಮಕ್ಕಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಗಡ್ಡಧಾರಿ ಅಥವಾ ನಾಮಧಾರಿ ವ್ಯಕ್ತಿಯನ್ನು ಚೂರಿ ಇರಿತಕ್ಕೆ ಒಳಪಡಿಸುವುದರಿಂದ ಗಾಯಗೊಳ್ಳುವುದು ಆ ವ್ಯಕ್ತಿಗಳಲ್ಲ, ಆಯಾ ಧರ್ಮಗಳು ಸಾರುವ ಮಾನವೀಯ ಮೌಲ್ಯಗಳು. ಚೂರಿಗೆ, ಬೆಂಕಿಗೆ ಅಥವಾ ಕಲ್ಲಿಗೆ ಸ್ವಯಂ ಬುದ್ಧಿಯಿಲ್ಲ. ಚೂರಿಯನ್ನು ತರಕಾರಿ ಕತ್ತರಿಸುವುದಕ್ಕೂ ಬಳಸಬಹುದು. ಓರ್ವನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಬಳಕೆದಾರನ ಉದ್ದೇಶವನ್ನು ಹೊಂದಿಕೊಂಡು ಅದು ಕೆಲಸ ಮಾಡುತ್ತದೆ. ಆದ್ದರಿಂದಲೇ, ಪೊಲೀಸರು ಚೂರಿಗಳ ಮೇಲೋ ಕಲ್ಲುಗಳ ಮೇಲೋ ಕೇಸು ದಾಖಲಿಸುವುದಿಲ್ಲ. ಯಾರು ಅದನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಯಸಿದರೋ ಅವರ ಮೇಲೆಯೇ ಕೇಸು ದಾಖಲಾಗುತ್ತದೆ. ಧರ್ಮಗಳೂ ಹೀಗೆಯೇ. ಅವು ಯಾರಿಗೂ ಕಲ್ಲೆಸೆಯುವುದಿಲ್ಲ. ಚೂರಿ ಹಾಕುವುದಿಲ್ಲ. ಹಸುವಿನದ್ದೋ ಹಂದಿಯದ್ದೋ ತಲೆಯನ್ನು ಎಸೆಯುವುದಿಲ್ಲ. ಅವು ಸ್ವಯಂ ಪವಿತ್ರ. ಈ ಪವಿತ್ರವನ್ನು ಅಪವಿತ್ರಗೊಳಿಸುವುದು ಅದರ ಅನುಯಾಯಿಗಳೆಂದು ಹೇಳಿಕೊಳ್ಳುವ ದುಷ್ಕರ್ಮಿಗಳು. ದುರಂತ ಏನೆಂದರೆ, ಅನೇಕ ಬಾರಿ ಈ ಅನುಯಾಯಿಗಳನ್ನು ದುಷ್ಕರ್ಮಿಗಳು ಎಂದು ಗುರುತಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗುವುದಿಲ್ಲ. ಅವರು ಹಬ್ಬಿಸುವ ಸುಳ್ಳು ಸುದ್ದಿಗಳನ್ನು ನಿಜವೆಂದೇ ನಂಬಿ ಅವರ ಬೆಂಬಲಕ್ಕೆ ಸಮಾಜ ನಿಲ್ಲುವುದಿದೆ. ಅವರು ಮಾಡುತ್ತಿರುವುದೇ ನಿಜವಾದ ಧರ್ಮ ಸೇವೆ ಎಂದು ಭಾವಿಸುವುದಿದೆ. ಇಂಥ ಮುಗ್ಧ ನಂಬಿಕೆಗಳೇ ಅನೇಕ ಬಾರಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ.
 ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್‍ಗಳು ಜನರ ದೈನಂದಿನ ಬದುಕಿನ ಅನಿವಾರ್ಯತೆಗಳಾಗಿ ಬದಲಾಗಿರುವ ಇಂದಿನ ದಿನಗಳಲ್ಲಿ ಒಂದು ಸ್ವಸ್ಥ ಸಮಾಜವನ್ನು ಅಸ್ವಸ್ಥಗೊಳಿಸುವುದಕ್ಕೆ ತುಂಬಾ ಕಷ್ಟವೇನೂ ಇಲ್ಲ. ವದಂತಿಗಳನ್ನು ಹೇಗೆ ಬೇಕಾದರೂ ಈ ಮಾಧ್ಯಮಗಳ ಮೂಲಕ ಬಿತ್ತರಿಸಬಹುದು. ವಾಟ್ಸಪ್ ಅಂತೂ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವುದಕ್ಕೆ ಧಾರಾಳ ಬಳಕೆಯಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಯ ಹೆಸರಲ್ಲಿ, ಧರ್ಮರಕ್ಷಣೆಯ ನೆಪದಲ್ಲಿ ವಿವಿಧ ರೀತಿಯ ಗುಂಪುಗಳು ಈ ತಾಣಗಳಲ್ಲಿ ಹುಟ್ಟು ಪಡೆಯುತ್ತಿವೆ. ಕೋಮುವಾದಿ ಪೇಜ್‍ಗಳು ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುವುದು ಸುಲಭ. ಸಾಮಾನ್ಯವಾಗಿ, ಸಮಾಜ ಎರಡು ವಿಷಯಗಳಲ್ಲಿ ತುಂಬಾ ಸೆನ್ಸಿಟಿವ್ ಆಗಿರುತ್ತದೆ. ಅವುಗಳ ಮೇಲೆ ದಾಳಿಯೋ ಘಾಸಿಯೋ ಆದಾಗ ಅದು ಪ್ರಚೋದನೆಗೊಳ್ಳುತ್ತದೆ. ಅವುಗಳಲ್ಲಿ ಒಂದು, ಧಾರ್ಮಿಕ ಕ್ಷೇತ್ರಗಳಾದರೆ ಇನ್ನೊಂದು ಹೆಣ್ಣು ಮಕ್ಕಳು. ಸದ್ಯ ದೇಶದಾದ್ಯಂತ ದುಷ್ಕರ್ಮಿಗಳು ಈ ಎರಡು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಲವ್ ಜಿಹಾದ್ ಎಂಬ ಹೆಸರಲ್ಲಿ ಈಗಾಗಲೇ ಸಮಾಜದಲ್ಲಿ ಒಂದು ವ್ಯವಸ್ಥಿತ ಅಪಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೋಮುಗಲಭೆಯ ವಾತಾವರಣಕ್ಕೂ ಎರಡ್ಮೂರು ತಿಂಗಳುಗಳಲ್ಲಿ ಇಲ್ಲಿ ಕಾಣಿಸಿಕೊಂಡಿರುವ ವಿಭಿನ್ನ ಧರ್ಮಗಳ ಯುವಕ-ಯುವತಿಯರ ಪ್ರೇಮ ಪ್ರಕರಣಕ್ಕೂ ಸಂಬಂಧ ಇದೆ. ಸಮಾಜ ಇಂಥ ಪ್ರಕರಣಗಳ ಸಂದರ್ಭದಲ್ಲಿ ಭಾವುಕವಾಗುತ್ತದೆ. ತನ್ನ ಮನೆಯ ಮಗಳು ಇನ್ನೊಂದು ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗುವುದನ್ನು ಸೀದಾ ಸಾದಾ ಒಪ್ಪಿಕೊಳ್ಳುವ ಮನಸ್ಥಿತಿಯಂತೂ ಇವತ್ತಿನ ಸಮಾಜದಲ್ಲಿಲ್ಲ. ಈ ವಾತಾವರಣವು ಧುಷ್ಕರ್ಮಿಗಳ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. ವಿವಿಧ ಬಗೆಯ ವದಂತಿಗಳನ್ನು ಹಬ್ಬಿಸುವುದಕ್ಕೆ ಇದು ದಾರಿ ತೆರೆದುಕೊಡುತ್ತದೆ. ಇಂಥ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆಯೆಂದೋ ಧರ್ಮದ ನಾಶಕ್ಕೆ ಹೆಣೆದ ತಂತ್ರವೆಂದೋ ಅಥವಾ ಇನ್ನೇನೋ ಆಗಿ ಆ ಪ್ರಕರಣವನ್ನು ಭಾವನಾತ್ಮಕ ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದ ವಿೂರತ್‍ನಿಂದ ಹಿಡಿದು ದಕ್ಷಿಣ ಕನ್ನಡದ ವರೆಗೆ ಸಮಾಜವನ್ನು ಉದ್ವಿಘ್ನಗೊಳಿಸುವಲ್ಲಿ ಇಂಥ ಪ್ರಕರಣಗಳೇ ಮುಖ್ಯ ಪಾತ್ರ ವಹಿಸುತ್ತಿವೆ. ಅಷ್ಟಕ್ಕೂ, ಹೆಣ್ಣು-ಗಂಡಿನ ನಡುವೆ ಪ್ರೇಮಾಂಕುರವಾಗುವುದಕ್ಕೂ ಷಡ್ಯಂತ್ರಕ್ಕೂ ಏನು ಸಂಬಂಧವಿದೆ? ಶಾಲೆಯಿಂದ ಹಿಡಿದು ಮಾರುಕಟ್ಟೆ, ಕಚೇರಿ ಸಹಿತ ಎಲ್ಲೆಡೆಯೂ ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವ ವಾತಾವರಣ ಈ ದೇಶದಲ್ಲಿರುವಾಗ ಪ್ರೇಮಾಂಕುರಕ್ಕೆ ಷಡ್ಯಂತ್ರವಾದರೂ ಯಾಕೆ ಬೇಕು? ಪ್ರೇಮ ಎಂಬುದು ಷಡ್ಯಂತ್ರದ ಮತ್ತು ಬಂದೂಕಿನ ಮೊನೆಯಲ್ಲಿ ಚಿಗುರುವಂಥ ಸಂಗತಿಯೇ? ಎರಡು ಹೃದಯಗಳ ವಿಶ್ವಾಸದ ಆಧಾರದಲ್ಲಿ ಚಿಗುರುವ ಸಂಬಂಧವನ್ನು ಧರ್ಮದ ಷಡ್ಯಂತ್ರವಾಗಿ ಯಾಕೆ ನೋಡಬೇಕು?
 ನೆಮ್ಮದಿ ಎಂಬುದು ಸರ್ವರ ಬಯಕೆ. ನಾಸ್ತಿಕನೂ ಆಸ್ತಿಕನೂ ನೆಮ್ಮದಿಯನ್ನು ಬಯಸುತ್ತಾನೆ. ಧರ್ಮಗಳಂತೂ ಸೌಖ್ಯ ಸಮಾಜದ ನಿರ್ಮಾಣದ ಉದ್ದೇಶದಿಂದಲೇ ಅಸ್ತಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೋರ್ವ ವ್ಯಕ್ತಿ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಧರ್ಮ ರಕ್ಷಣೆಯ ಹೆಸರಲ್ಲಿ ಎತ್ತಿಕೊಳ್ಳುವ ಪ್ರತಿ ಕಲ್ಲು, ಚೂರಿ, ಬೆಂಕಿಗಳು ಎತ್ತಿಕೊಂಡವರ ಧರ್ಮವನ್ನು ಅವಮಾನಿಸುತ್ತದೆಯೇ ಹೊರತು ಇನ್ನೊಂದು ಧರ್ಮವನ್ನೋ ಅದರ ಅನುಯಾಯಿಗಳನ್ನೋ ಅಲ್ಲ. ಚೂರಿ ಇರಿತದಿಂದ ಉದುರುವ ರಕ್ತ, ಬೆಂಕಿಯಿಂದ ಉರಿಯುವ ಕಟ್ಟಡ ಮತ್ತು ಕಲ್ಲಿನಿಂದ ಹಾನಿಗೀಡಾಗುವ ಗಾಜುಗಳೆಲ್ಲ ಪವಿತ್ರವಾದವುಗಳೇ. ಅವನ್ನು ತನ್ನ ಕಲ್ಲು, ಚೂರಿ, ಬೆಂಕಿ ನಾಶಪಡಿಸಿತೆಂದು ನಂಬಿದವರೇ ನಿಜವಾದ ಧರ್ಮದ್ರೋಹಿಗಳು.

No comments:

Post a Comment