Monday 30 October 2023

ಧರ್ಮದ್ವೇಷದ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿರುವ ಸುಳ್ಳುಗಳು

 



ಕಳೆದವಾರ ಎರಡು ಸುದ್ದಿಗಳು ಸದ್ದು ಮಾಡಿದುವು. 

1. ಕೇರಳದ ಕೋಝಿಕೋಡ್‌ನಲ್ಲಿ ಫೆಲೆಸ್ತೀನ್ ಪರ ಮಾಡಲಾದ ರ‍್ಯಾಲಿ.
 2.  ಮಂದಿರದ ಅರ್ಚಕರಿಗೆ ಬ್ಯಾಟ್‌ನಿಂದ ಥಳಿಸಲಾದ ಘಟನೆ.

ಈ ಎರಡೂ ಘಟನೆಗಳಿಗೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಂಚಿಕೆಯಾದುವು. ಟ್ವೀಟರ್,  ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಲ್ಲಿ ಈ ವೀಡಿಯೋಗಳನ್ನು ಅದಕ್ಕೆ ನೀಡಲಾದ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ ಹಂಚಿಕೊಂಡರು.  ಮುಸ್ಲಿಮ್ ವಿರೋಧಿ ಮತ್ತು ಧರ್ಮದ್ವೇಷವನ್ನು ಕೆರಳಿಸುವುದಕ್ಕೆ ಈ ಎರಡೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಅಸಂಖ್ಯ ಮಂದಿ ಬಳಸಿಕೊಂಡರು. ನಿಜವಾಗಿ,

 ಈ ಎರಡೂ ವೀಡಿಯೋಗಳು ಮುಸ್ಲಿಮರಿಗೆ ಸಂಬಂಧಿಸಿದ್ದೇ  ಆಗಿರಲಿಲ್ಲ. ಫೆಲೆಸ್ತೀನ್  ಪರ ಕೋಝಿಕ್ಕೋಡ್‌ನಲ್ಲಿ ರ‍್ಯಾಲಿ ನಡೆಸಿದ್ದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಪಕ್ಷ. ಎಸ್.ಕ್ಯು.ಆರ್. ಇಲ್ಯಾಸ್  ಇದರ ರಾಷ್ಟ್ರೀಯ ಅಧ್ಯಕ್ಷರಾದರೆ, ರವಿಶಂಕರ್ ತ್ರಿಪಾಠಿ ರಾಷ್ಟ್ರೀಯ ಉಪಾಧ್ಯಕ್ಷ. ಕೇರಳ ಘಟಕದ ಅಧ್ಯಕ್ಷರಾಗಿ ರಝಾಕ್ ಮಲೇರಿ  ಎಂಬವರು ಕಾರ್ಯನಿರ್ವಹಿಸುತ್ತಿದ್ದರೆ, ಸುರೇಂದ್ರನ್ ಕರಿಪುಝ ಎಂಬವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಷಾ ಕುಮಾರಿ,  ಜ್ಯೋತಿವ್ಯಾಸ್, ಗಣೇಶ್, ಪ್ರೇಮ ಮುಂತಾದವರು ಕಾರ್ಯದರ್ಶಿಗಳಾಗಿ ಸಕ್ರಿಯವಾಗಿದ್ದಾರೆ. ಜಾನ್ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ,  ಖ್ಯಾತ ಸಾಹಿತ ಬಿ.ಟಿ. ಲಲಿತಾ ನಾಯಿಕ್ ಅವರು ಈ ಮೊದಲು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಆದರೆ,

ಈ ಎಲ್ಲವನ್ನೂ ಅಡಗಿಸಿಟ್ಟು ಈ ರಾಷ್ಟ್ರೀಯ ಪಕ್ಷದ ವಿರುದ್ಧವೇ ಸುಳ್ಳುಗಳನ್ನು ಹರಡಲಾಯಿತು. ಈ ಸುಳ್ಳಿಗೆ ಚಾಲನೆ ನೀಡಿದ್ದು ಬಿಜೆಪಿ  ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಬಗ್ಗಾ. ಕೇರಳದಲ್ಲಿ ಹಮಾಸ್ ಉಗ್ರರ ಪರ ರ‍್ಯಾಲಿ  ನಡೆಸಲಾಗಿದ್ದು, ಫೆಲೆಸ್ತೀನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಅವರು ಟ್ವೀಟರ್‌ನಲ್ಲಿ (ಎಕ್ಸ್)  ವೀಡಿಯೋವೊಂದನ್ನು ಹಂಚಿಕೊಂಡರು. ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆ್ಯಂಟನಿಯಂತೂ  ಇದೇ ವೀಡಿಯೋಗೆ ಇನ್ನಷ್ಟು ಉ ಪ್ಪು-ಖಾರ ಸೇರಿಸಿ ಟ್ವೀಟ್ ಮಾಡಿದರು. ಕೇರಳದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ತೀವ್ರಗಾಮಿ ನಿಲುವು ಗಂಭೀರ ಹಂತದಲ್ಲಿದೆ ಎಂಬಂತೆ  ಬರೆದು ಬಗ್ಗಾ ಅವರದೇ ವೀಡಿಯೋವನ್ನು ಹಂಚಿಕೊಂಡಿದ್ದರು. ಇವರು ಕೇರಳದ ಕಾಂಗ್ರೆಸ್ ಮುಖಂಡ ಎ.ಕೆ.  ಆ್ಯಂಟನಿಯವರ ಮಗ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಕೇರಳದವರಾದ ಇವರಿಗೆ ಕೇರಳದ ವೆಲ್‌ಫೇರ್  ಪಾರ್ಟಿಯ ಬಗ್ಗೆ ಮತ್ತು ಅದರ ಧ್ವಜದ ಬಗ್ಗೆ ತಿಳಿದಿಲ್ಲ ಎಂದು ಹೇಳುವಂತೆಯೂ ಇಲ್ಲ. ಆದರೂ ತೇಜಿಂದರ್ ಪಾಲ್ ಬಗ್ಗಾ ಹರಡಿದ  ಸುಳ್ಳನ್ನೇ ಇವರೂ ಹಿಂದು-ಮುಂದು  ನೋಡದೇ ಹಂಚಿಕೊಂಡರು. ನಿಜವಾಗಿ,

ಕೇರಳದಲ್ಲಿ ಹಮಾಸ್‌ನ ಪರ ಈ ರ‍್ಯಾಲಿ ನಡೆಸಲಾಗಿರಲಿಲ್ಲ ಮತ್ತು ಇಟಲಿಯ ಧ್ವಜವನ್ನೂ ಪ್ರದರ್ಶಿಸಲಾಗಿರಲಿಲ್ಲ. ಇಟಲಿ ಮತ್ತು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಧ್ವಜದ ನಡುವೆ ವ್ಯತ್ಯಾಸ ಇದೆ. ನೀಲಿ, ಬಿಳಿ ಮತ್ತು ಕೆಂಪು ಬಣ್ಣವು ಎರಡೂ ಧ್ವಜಗಳಲ್ಲಿದ್ದರೂ  ವೆಲ್‌ಫೇರ್ ಪಾರ್ಟಿಯ ಧ್ವಜದ ಮಧ್ಯಭಾಗದಲ್ಲಿರುವ ಬಿಳಿ ಬಣ್ಣದಲ್ಲಿ ಎರಡು ತೆನೆಗಳ ಚಿತ್ರ ಇದೆ. ಇಟಲಿಯ ರಾಷ್ಟ್ರೀಯ ಧ್ವಜದಲ್ಲಿ ಈ  ತೆನೆಗಳಿಲ್ಲ ಮತ್ತು ಅದರ ಮೂರೂ ಬಣ್ಣಗಳೂ ಸಮಪ್ರಮಾಣದಲ್ಲಿವೆ. ಆದರೆ, ಅನಿಲ್ ಆ್ಯಂಟನಿಯಾಗಲಿ ತೇಜಿಂದರ್ ಬಗ್ಗಾ ಆಗಲಿ  ಅಥವಾ ಇವರಿಬ್ಬರ ಟ್ವೀಟ್‌ಗಳನ್ನು ಹಂಚಿಕೊಂಡ ಅಸಂಖ್ಯಾತ ಬೆಂಬಲಿಗರಾಗಲಿ ಈ ವ್ಯತ್ಯಾಸವನ್ನು ಕಂಡೇ ಇಲ್ಲದಂತೆ ವರ್ತಿಸಿದ್ದಾರೆ.  ಮಾತ್ರವಲ್ಲ, ಫೆಲೆಸ್ತೀನ್ ಪರ ಮತ್ತು ಗಾಝಾದ ಸಂತ್ರಸ್ತರ ಪರ ರ‍್ಯಾಲಿ ಎಂದು ಬ್ಯಾನರ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದರೂ ಹಮಾಸ್  ಉಗ್ರರ ಪರ ರ‍್ಯಾಲಿ ಎಂಬ ಸುಳ್ಳನ್ನು ಹರಡಿದ್ದಾರೆ. ಅನಿಲ್ ಆ್ಯಂಟನಿಗಂತೂ  ಇದು ಇಸ್ಲಾಮಿಕ್ ಮೂಲಭೂತವಾಗಿ ಕಂಡಿದೆ.  ರಾಜಕೀಯ ಪಕ್ಷವೊಂದು ಮಾಡಿದ ರ‍್ಯಾಲಿಯನ್ನು ಮುಸ್ಲಿಮರ ರ‍್ಯಾಲಿಯಂತೆ ಮತ್ತು ಉಗ್ರರ ಪರ ರ‍್ಯಾಲಿಯಂತೆ ಅತ್ಯಂತ ಯೋಜನಾಬದ್ಧವಾಗಿ ಸುಳ್ಳನ್ನು ಉತ್ಪಾದಿಸಿ ಹಂಚಲಾಗಿದೆ. ಅಂದಹಾಗೆ,

2020 ನವೆಂಬರ್ 3ರಂದು ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಧಾಬಿಕಲಾನ್ ಗ್ರಾಮದಲ್ಲಿ ನಾಲ್ವರು ಯುವಕರು ಸೇರಿ ಅರ್ಚಕರಿಗೆ  ಬ್ಯಾಟ್‌ನಿಂದ ಥಳಿಸಿದ್ದರು. ಉತ್ತರ ಭಾರತದ ಪ್ರಮುಖ ಪತ್ರಿಕೆಗಳಾದ ದೈನಿಕ್ ಜಾಗರಣ್ ಮತ್ತು ದೈನಿಕ್ ಭಾಸ್ಕರ್ ಪತ್ರಿಕೆಗಳು ಈ ಬಗ್ಗೆ  ವರದಿಯನ್ನೂ ಮಾಡಿದ್ದುವು. ಮಠದ ಒಳಗೆ ಬ್ಯಾಟನ್ನು ಇರಿಸಲು ಒಪ್ಪದ ಅರ್ಚಕನ ವರ್ತನೆಗೆ ಸಿಟ್ಟಾದ ಅಮಿತ್, ಕೃಷ್ಣಾ, ಪ್ರದೀಪ್  ಮತ್ತು ರಾಕೇಶ್ ಎಂಬ ಯುವಕರು ಅರ್ಚಕರಿಗೆ ಥಳಿಸಿದ್ದು, ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯೂ ಆ ವರದಿಯಲ್ಲಿತ್ತು.  ಖಬ್ರೆ ಅಬೀ ತಕ್ ಎಂಬ ಯುಟ್ಯೂಬ್ ಚಾನೆಲ್ ಈ ಕುರಿತಂತೆ ಇನ್ನಷ್ಟು ವಿವರಗಳನ್ನು ನೀಡಿತ್ತು. ಯುವತಿಯೊಂದಿಗೆ ದೂರವಾಣಿಯಲ್ಲಿ  ಅಸಭ್ಯವಾಗಿ ಮಾತಾಡಿದ ಕಾರಣಕ್ಕಾಗಿ ಅವರನ್ನು ಥಳಿಸಲಾಗಿದೆ ಎಂದು ಅದು ಹೇಳಿತ್ತು. ಇವು ಏನೇ ಇದ್ದರೂ ಈ ಘಟನೆಗೂ  ಮುಸ್ಲಿಮರಿಗೂ ಯಾವ ಸಂಬಂಧವೂ ಇಲ್ಲ. ಆದರೆ, 

ಕಳೆದವಾರ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ  ಹಂಚಿಕೆಯಾಯಿತು. ಮಂದಿರದ ಅರ್ಚಕನನ್ನು ಥಳಿಸುತ್ತಿರುವ ಮುಸ್ಲಿಮ್ ಮತಾಂಧರು ಎಂಬ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ  ವೀಡಿಯೋ ಹಂಚಿಕೊಂಡರು. ಭಾರತೀಯ ಯುವ ಮೋರ್ಚಾದ ಸೋಶಿಯಲ್ ಮೀಡಿಯಾದ ದೆಹಲಿ ಸಹಸಂಯೋಜಕಿ ಆಕಾಂಕ್ಷಾ  ಈ ವೀಡಿಯೋವನ್ನು ಟ್ವೀಟ್ ಮಾಡಿದರು. ಆ ಬಳಿಕ ಸಾವಿರಾರು ಮಂದಿ ಇದನ್ನು ಮರುಟ್ವೀಟ್ ಮಾಡಿದರು. ನಿಜವಾಗಿ,

ಸುಳ್ಳು ಹೇಳುವುದು ಮತ್ತು ಸುಳ್ಳು ಹರಡುವುದನ್ನು ಧರ್ಮಗಳು ಅಪರಾಧವಾಗಿ ಕಾಣುತ್ತವೆ. ಆದರೆ, ಧರ್ಮವನ್ನು ರಕ್ಷಿಸುತ್ತೇವೆ ಎಂದು  ಹೇಳುವವರು ಸುಳ್ಳನ್ನೇ ಆಶ್ರಯಿಸಿಕೊಂಡಿದ್ದಾರೆ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಸುಳ್ಳುಗಳನ್ನು ಉತ್ಪಾದಿಸಲಾಗುತ್ತದೆ. ಬಳಿಕ ಅದನ್ನು  ವಿವಿಧ ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಲಾಗುತ್ತದೆ. ಹೀಗೆ ಉತ್ಪಾದನೆಯಾಗುವ ಸುಳ್ಳುಗಳಲ್ಲಿ 99% ಸುಳ್ಳುಗಳು ಕೂಡ  ಮುಸ್ಲಿಮ್ ದ್ವೇಷವನ್ನೇ ಕಾರುವಂಥವು. ಹಿಂದೂ-ಮುಸ್ಲಿಮ್ ವಿಭಜನೆಯನ್ನೇ ಗುರಿಯಾಗಿಸಿಕೊಂಡು ಉತ್ಪಾದನೆಯಾಗುವ ಸುಳ್ಳುಗಳನ್ನು  ಧರ್ಮರಕ್ಷಣೆಯ ಭ್ರಮೆಯಲ್ಲಿರುವವರು ಸತ್ಯವೆಂದೇ ನಂಬಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಮುಸ್ಲಿಮರನ್ನು ಮತಾಂಧರು, ಉಗ್ರರು,  ಹಿಂದೂ ಧರ್ಮ ದ್ವೇಷಿಗಳು ಎಂದೆಲ್ಲ ಬಿಂಬಿಸುವುದೇ ಹೆಚ್ಚಿನೆಲ್ಲ ವೀಡಿಯೋ, ಆಡಿಯೋ ಮತ್ತು ಸುದ್ದಿಗಳ ಉದ್ದೇಶ. ಅಷ್ಟಕ್ಕೂ,

ಯಾವುದೇ ಸುಳ್ಳು ಸುದ್ದಿಯನ್ನು ಉತ್ಪಾದನೆ ಮಾಡುವುದು ಸುಲಭ. ಆದರೆ ಅದನ್ನು ಪತ್ತೆ ಹಚ್ಚುವುದು ಸುಲಭ ಅಲ್ಲ. ಅದಕ್ಕೆ ಒಂದಷ್ಟು  ಶ್ರಮ ಬೇಕಾಗುತ್ತದೆ. ಎಲ್ಲರಿಗೂ ಸತ್ಯಶೋಧನೆ ಮಾಡುವುದಕ್ಕೂ ಬರುವುದಿಲ್ಲ. ಯಾರಾದರೂ ಶ್ರಮಪಟ್ಟು ಸತ್ಯಶೋಧನೆ ಮಾಡಿದರೂ  ಆ ವೇಳೆಗಾಗಲೇ ಸುಳ್ಳು ತಲುಪಬೇಕಾದಲ್ಲೆಲ್ಲ ತಲುಪಿರುತ್ತದೆ. ಆ ಬಳಿಕ ಹಂಚಿಕೆಯಾಗುವ ಈ ಸತ್ಯಸುದ್ದಿಯು ಈ ಮೊದಲಿನ ಸುಳ್ಳು  ಸುದ್ದಿ ತಲುಪಿದವರಿಗೆಲ್ಲ ತಲುಪುತ್ತದೆ ಎಂದು ಹೇಳುವುದಕ್ಕೂ ಬರುವುದಿಲ್ಲ. ದ್ವೇಷ ಮತ್ತು ನಕಾರಾತ್ಮಕ ಸುದ್ದಿಗಿರುವ ಮಾರುಕಟ್ಟೆ ಪ್ರೀತಿ  ಮತ್ತು ಸಕಾರಾತ್ಮಕ ಸುದ್ದಿಗೆ ಇರುವುದಿಲ್ಲ ವಾದ್ದರಿಂದ ಇಂಥ ಸತ್ಯಶೋಧಿತ ಸುದ್ದಿಗಳನ್ನು ಹಂಚಿಕೊಳ್ಳುವವರೂ ಕಡಿಮೆ. ಅಲ್ಲದೇ, ಸುದ್ದಿಯೊಂದರ ಮೂಲವನ್ನು ಹುಡುಕುತ್ತಾ ಸತ್ಯವೋ ಸುಳ್ಳೋ ಎಂಬುದನ್ನು ಪತ್ತೆ ಹಚ್ಚುವವರ ಸಂಖ್ಯೆಗೆ ಹೋಲಿಸಿದರೆ ಸುಳ್ಳು ಉತ್ಪಾದಿಸುವವರ ಸಂಖ್ಯೆ ಎಷ್ಟೋ ಸಾವಿರ ಪಟ್ಟು ಅಧಿಕವಿದೆ. ಆದ್ದರಿಂದ, ಒಂದು ಸುದ್ದಿಯ ಮೂಲವನ್ನು ಹುಡುಕುವಾಗ ಅಸಂಖ್ಯ ಸುಳ್ಳು  ಸುದ್ದಿಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಹಂಚಿಕೆಯಾಗುತ್ತಿರುತ್ತದೆ. ಇವನ್ನೆಲ್ಲ ಪತ್ತೆ ಹಚ್ಚುವುದು ಅಸಾಧ್ಯ ಅನ್ನುವಷ್ಟು ಕಷ್ಟ. ಆದ್ದರಿಂದ,

ಸರಕಾರ ಮನಸ್ಸು ಮಾಡದ ಹೊರತು ಸುಳ್ಳು ಸುದ್ದಿಗಳ ನಿಯಂತ್ರಣ ಸಾಧ್ಯವಿಲ್ಲ. ದುರಂತ ಏನೆಂದರೆ, ಇವತ್ತು ಪ್ರಭುತ್ವವೇ ಈ  ಸುಳ್ಳುಗಳನ್ನು ಆಶ್ರಯಿಸಿಕೊಂಡಿದೆ. ಸುಳ್ಳು ಹರಡುವವರಲ್ಲಿ ಪ್ರಭುತ್ವವನ್ನು ಬೆಂಬಲಿಸುವ ಮುಖಂಡರು, ಕಾರ್ಯಕರ್ತರು ಮತ್ತು  ಹೊಣೆಗಾರರೇ ಅಧಿಕವಿದ್ದಾರೆ. ವೆಲ್‌ಫೇರ್ ಪಾರ್ಟಿಯ ರ‍್ಯಾಲಿ ಮತ್ತು ಹರ್ಯಾಣದ ಅರ್ಚಕರ ಥಳಿತದ ವೀಡಿಯೋಗಳನ್ನು ಸುಳ್ಳು  ಒಕ್ಕಣೆಗಳೊಂದಿಗೆ ಪ್ರಭುತ್ವದ ಹೊಣೆಗಾರರೇ ಹಂಚಿಕೊಂಡಿರುವುದು ಇದಕ್ಕೆ ಅತೀ ಪ್ರಬಲ ಉದಾಹರಣೆ. ಅಂದಹಾಗೆ, ಧರ್ಮವೇ  ಖಂಡಿಸುವ ಸುಳ್ಳನ್ನು ಧರ್ಮ ರಕ್ಷಣೆಗೆಂದು ಉತ್ಪಾದಿಸುವವರಿರುವ ದೇಶದಲ್ಲಿ ಸುಳ್ಳು ರಾಜಗಾಂಭೀರ್ಯದಿಂದ ಸುತ್ತುವುದರಲ್ಲಿ ಆಶ್ಚರ್ಯವೂ ಇಲ್ಲ.

No comments:

Post a Comment