Saturday 3 February 2024

ವಾಯಿಲ್ ದಹ್ ದಾಹ್, ಹಕೀಮ್ ಮತ್ತು ಕ್ರೌರ್ಯದ 100 ದಿನಗಳು





ಫೆಲೆಸ್ತೀನ್ ಮೇಲೆ ಇಸ್ರೇಲ್‌ನ ಮುತ್ತಿಗೆ 100 ದಿನಗಳನ್ನೂ ದಾಟಿ ಮುಂದುವರಿದಿದೆ. ಫೆಲೆಸ್ತೀನಿನ 85% ಮಂದಿ ಕೂಡಾ ತಮ್ಮ ಮನೆಮಾರುಗಳನ್ನು ತೊರೆದು ನಿರಾಶ್ರಿತರಾಗಿ ಅಲೆಯುತ್ತಿದ್ದಾರೆ. ಗಾಝಾದ ಬಹುತೇಕ ಎಲ್ಲ ಆಸ್ಪತ್ರೆಗಳೂ ಸ್ಥಗಿತಗೊಂಡಿವೆ. ಶಾಲೆ,  ಕಾಲೇಜುಗಳು ಧರಾಶಾಹಿಯಾಗಿವೆ. ಯಾವ ಕ್ಷಣದಲ್ಲೂ ತಾವು ಹತ್ಯೆಗೀಡಾಗಬಹುದು ಎಂಬ ನಿರೀಕ್ಷೆಯಿಂದಲೇ ಫೆಲೆಸ್ತೀನಿಯರು ದಿನ  ದೂಡುತ್ತಿದ್ದಾರೆ. ರೋಗಿಗಳು, ಗಾಯಾಳುಗಳು, ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ದಾಳಿಯಿಂದ ತೀವ್ರ ಸಂಕಷ್ಟಕ್ಕೆ  ಒಳಗಾಗಿದ್ದಾರೆ. ಜನನಿಬಿಡ ಅಪಾರ್ಟ್ಮೆಂಟ್‌ಗಳ ಮೇಲೆ ಇಸ್ರೇಲ್ ಬಾಂಬ್ ಹಾಕುತ್ತಿರುವುದನ್ನು ನೋಡಿದರೆ, ನರಮೇಧವೇ ಅದರ  ಉದ್ದೇಶ ಅನ್ನುವುದನ್ನು ಸ್ಪಷ್ಟಪಡಿಸುತ್ತಿದೆ. ಹಮಾಸ್‌ನ ನೆಪದಲ್ಲಿ ಇಡೀ ಫೆಲೆಸ್ತೀನನ್ನು ನಿರ್ವೀರ್ಯಗೊಳಿಸುವುದು ಮತ್ತು ಸಂಪೂರ್ಣ  ಪರಾವಲಂಬಿಯಾಗಿಸುವುದು ಅದರ ರಣತಂತ್ರವೆಂಬುದು ದಿನೇದಿನೇ ನಿಚ್ಚಲವಾಗುತ್ತಿದೆ.


ಈಗಾಗಲೇ ಹತ್ಯೆಗೀಡಾದ 23 ಸಾವಿರ ಮಂದಿ ಫೆಲೆಸ್ತೀನಿಯರ ಪೈಕಿ 10 ಸಾವಿರಕ್ಕಿಂತಲೂ ಅಧಿಕ ಮಕ್ಕಳೇ ಇದ್ದಾರೆ. 7  ಸಾವಿರಕ್ಕಿಂತಲೂ ಅಧಿಕ ಮಹಿಳೆಯರಿದ್ದಾರೆ. ಹಮಾಸನ್ನು ನಾಶ ಮಾಡುತ್ತೇವೆ ಎಂದು ಹೊರಟ ಇಸ್ರೇಲ್ ಎಲ್ಲವನ್ನೂ ನಾಶಮಾಡುತ್ತಿದೆ.  ಈ ಕ್ರೌರ್ಯದ ಭೀಕರತೆಯನ್ನು ಪ್ರತಿದಿನ ಅಲ್ ಜಝೀರಾ, ಮಿಡ್ಲ್ ಈಸ್ಟ್ ಐಯಂಥ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು  ಬಿತ್ತರಿಸುತ್ತಲೂ ಇವೆ. ಇಸ್ರೇಲ್‌ನ ಕ್ರೌರ್ಯದ ತೀವ್ರತೆಯನ್ನು ಅಂದಾಜಿಸುವುದಕ್ಕೆ ಗಾಝಾದ 30 ವರ್ಷದ ಹಕೀಮ್ ಮತ್ತು 56  ವರ್ಷದ ವಾಯಿಲ್ ದಹ್ ದಾಹ್ ರ ಅನುಭವಗಳೇ ಧಾರಾಳ ಸಾಕು. ನಿಜವಾಗಿ, ಈ ಹಕೀಮ್- ಗಾಝಾ ಪರಿಸ್ಥಿತಿಯ ಒಂದು ತುದಿಯಾದರೆ ವಾಯಿಲ್ ದಹ್ ದಾಹ್ ರು ಇನ್ನೊಂದು ತುದಿ.


ಗಾಝಾದ ಕೆಲವು ಯುವಕರನ್ನು ಇಸ್ರೇಲ್ ಸೇನೆ ಬಂಧಿಸಿ ಕೊಂಡೊಯ್ಯುತ್ತಿರುವ ವೀಡಿಯೋ ಮತ್ತು ಚಿತ್ರಗಳು ಡಿಸೆಂಬರ್  ಮಧ್ಯಭಾಗದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಯುವಕರ ಮೈಮೇಲೆ ಒಳವಸ್ತ್ರವೊಂದನ್ನು ಬಿಟ್ಟು ಇನ್ನೇನೂ ಇರಲಿಲ್ಲ. ಮಂಡಿಯೂರಿ  ಕುಳಿತಿದ್ದ ಈ ಗುಂಪಿನಲ್ಲಿ ಈ ಹಕೀಮ್ ಕೂಡಾ ಇದ್ದ. ಹಮಾಸ್‌ನ ಭೂಗತ ಸುರಂಗ ಮಾರ್ಗದ ಪತ್ತೆ ಕಾರ್ಯದಲ್ಲಿ ಇಸ್ರೇಲ್  ಯೋಧರು ಈ ಹಕೀಮ್‌ನನ್ನು ಮಾನವ ಬಾಂಬ್ ಆಗಿ ಪರಿವರ್ತಿಸುವ ತಂತ್ರ ಹೆಣೆದರು. ತಾವು ಪತ್ತೆ ಹಚ್ಚಿದ ಗಾಝಾದ  ಸುರಂಗದೊಳಗೆ ಹಮಾಸ್ ಯೋಧರು ಇದ್ದಾರೋ ಇಲ್ಲವೋ ಎಂಬುದಾಗಿ ಈ ಯೋಧರಿಗೆ ಪರೀಕ್ಷಿಸಬೇಕಾಗಿತ್ತು. ಅದಕ್ಕಾಗಿ ಈ  ಹಕೀಮ್‌ನನ್ನು ಬಳಸಿಕೊಳ್ಳಲು ಅವರು ನಿರ್ಧರಿಸಿದರು. ಈತನ ದೇಹಕ್ಕೆ ಬಾಂಬ್ ಬೆಲ್ಟನ್ನು ಕಟ್ಟಲಾಯಿತಲ್ಲದೇ, ತಲೆಗೊಂದು  ಕ್ಯಾಮರಾವನ್ನೂ ಅಳವಡಿಸಲಾಯಿತು. ಬಳಿಕ ಸುರಂಗದೊಳಗೆ ಕಳುಹಿಸಿಕೊಡಲಾಯಿತು. ಸುರಂಗದೊಳಗಿನ ಪ್ರತಿಯೊಂದೂ ಆ  ಕ್ಯಾಮರಾದ ಮೂಲಕ ಹೊರಗಿರುವ ಯೋಧರಿಗೆ ಸ್ಪಷ್ಟವಾಗಿ ಕಾಣಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದುವೇಳೆ,


ಸುರಂಗದೊಳಗೆ ಹಮಾಸ್ ಯೋಧರು ಅಡಗಿದ್ದರೆ ತಕ್ಷಣ ಈತನ ದೇಹಕ್ಕೆ ಕಟ್ಟಲಾಗಿದ್ದ ಬಾಂಬನ್ನು ಉಡಾಯಿಸುವುದು ಯೋಧರ  ತಂತ್ರವಾಗಿತ್ತು. ಹಕೀಮ್‌ಗೂ ಅದು ಗೊತ್ತಿತ್ತು. ನಿನ್ನನ್ನು ದೇವನಲ್ಲಿಗೆ ಕಳುಹಿಸುತ್ತಿದ್ದೇವೆ ಎಂದೇ ಆತನನ್ನು ಕಳುಹಿಸುವ ಮೊದಲು  ಯೋಧರು ತಿಳಿಸಿದ್ದರು. ಆದರೆ, ಸುರಂಗದೊಳಗೆ ಹಮಾಸ್ ಯೋಧರು ಪತ್ತೆಯಾಗದ ಕಾರಣ ಆತ ಜೀವಸಮೇತ ಹೊರಬಂದ  ಮತ್ತು ಆತನನ್ನು ಯೋಧರು ಬಿಡುಗಡೆಗೊಳಿಸಿದರು. ಈ ಇಡೀ ಘಟನೆಯನ್ನು ಈ ಹಕೀಮ್ ಆ ಬಳಿಕ ಮಾಧ್ಯಮಗಳ ಜೊತೆ  ಹಂಚಿಕೊಂಡ. ಈತನೊಬ್ಬನೇ ಅಲ್ಲ, 15 ವರ್ಷದ ಬಾಲಕನೂ ಸೇರಿದಂತೆ ಹಲವು ಮಂದಿ ಇಂಥ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದೂ  ವರದಿ ಇದೆ ಮತ್ತು ಅದರಲ್ಲಿ ಸ್ಫೋಟಕ್ಕೆ ಒಳಗಾದವರು ಎಷ್ಟು ಮಂದಿ ಅನ್ನುವುದು ಸ್ಪಷ್ಟವಾಗಿಲ್ಲ. ಹಾಗೆಯೇ,


ವಾಯಿಲ್ ದಹ್ ದಾಹ್ ರದ್ದು ಇನ್ನೊಂದು ತುದಿ. ಅಲ್ ಜಝೀರಾ ಚಾನೆಲ್‌ನ ಪತ್ರಕರ್ತ ಮತ್ತು ಫೆಲೆಸ್ತೀನ್ ಚೀಫ್ ಬ್ಯೂರೋ ಕೂಡ  ಆಗಿರುವ ಇವರು ಈ ವೃತ್ತಿಗಾಗಿ ತೆತ್ತಿರುವ ಬೆಲೆ ಅಪಾರವಾದದ್ದು. ಗಾಝಾದಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಇಸ್ರೇಲ್ ಬಾಂಬ್  ಹಾಕಿ ಸಾಯಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗಾಗಲೇ ೧೦೦ರಷ್ಟು ಪತ್ರಕರ್ತರನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿದೆ.  ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಲ್ಲಿ ಇಸ್ರೇಲ್ ಈ ಕಾರಣಕ್ಕಾಗಿಯೇ ವಿಚಾರಣೆಗೂ ಒಳಗಾಗಿದೆ. ಈ ವಾಯಿಲ್  ದಹ್ ದಾಹ್ ರು ಕಳೆದ ಅಕ್ಟೋಬರ್‌ನಲ್ಲಿ ಅಲ್ ಜಝೀರಾ ಚಾನೆಲ್‌ಗಾಗಿ ಲೈವ್ ವರದಿ ನೀಡುತ್ತಿದ್ದಾಗಲೇ ಅವರ ಪತ್ನಿ, 15 ವರ್ಷದ  ಮಗಳು, 7 ವರ್ಷದ ಮಗ ಮತ್ತು ಮೊಮ್ಮಗಳನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿತ್ತು. ಅಲ್ ಜಝೀರಾ ಫೋಟೋಗ್ರಾಫರ್ ಆಗಿದ್ದ  27 ವರ್ಷದ ಇವರ ಮಗ ಹಂಝ ಮತ್ತು ಮಗಳು ಬದುಕುಳಿದಿದ್ದರು. ಕಳೆದ ಜನವರಿ 7ರಂದು ಈ ಮಗನನ್ನೂ ಇಸ್ರೇಲ್ ಬಾಂಬ್  ಹಾಕಿ ಸಾಯಿಸಿದೆ. ಹೀಗೆ ಈ ದಹ್ ದಾಹ್ ತನ್ನ ಇಡೀ ಕುಟುಂಬವನ್ನೇ ಕಳಕೊಂಡು ಗಾಝಾದಲ್ಲಿ ಒಣ ಮರದಂತೆ ಅನಾಥವಾಗಿ  ನಿಂತಿದ್ದಾರೆ. ನಿಜವಾಗಿ,

ಗಾಝಾದಲ್ಲಿ ತಾನು ನಡೆಸುತ್ತಿರುವ ನರಮೇಧವನ್ನು ಇಸ್ರೇಲ್ ಬಚ್ಚಿಡಲು ಪ್ರಯತ್ನಿಸುತ್ತಿದೆ. ಗಾಝಾ ಪ್ರವೇಶಕ್ಕೆ ಅಂತಾರಾಷ್ಟ್ರೀಯ  ಮಾಧ್ಯಮ ಸಂಸ್ಥೆಗಳಿಗೆ ಇಸ್ರೇಲ್ ಅನುಮತಿಯನ್ನೂ ನೀಡುತ್ತಿಲ್ಲ. ಆದ್ದರಿಂದ, ಫೆಲೆಸ್ತೀನ್ ಕುರಿತು ಅಲ್ಲಿನ ನಾಗರಿಕರೇ ಸೆರೆ ಹಿಡಿದಿರುವ  ಸಣ್ಣ ಪುಟ್ಟ ವೀಡಿಯೋಗಳು, ಚಿತ್ರಗಳು ಮತ್ತು ವರದಿಗಳನ್ನೇ ಜಾಗತಿಕ ಮಾಧ್ಯಮಗಳು ಇವತ್ತು ಆಶ್ರಯಿಸುವಂತಾಗಿದೆ. ಫೆಲೆಸ್ತೀನಿ  ಪತ್ರಕರ್ತರು ಜೀವ ಕೈಯಲ್ಲಿ ಹಿಡಿದು ವೃತ್ತಿನಿರತರಾಗಬೇಕಾದ ಭಯಾನಕ ಸ್ಥಿತಿಯಿದೆ. ಅಂದಹಾಗೆ, ಯಾವುದೇ ವೃತ್ತಿನಿರತ  ಪತ್ರಕರ್ತರಿಗೂ ನಾಗರಿಕ ಪತ್ರಕರ್ತರಿಗೂ ಸಾಕಷ್ಟು ವ್ಯತ್ಯಾಸ ಇದೆ. ವೃತ್ತಿನಿರತ ಪತ್ರಕರ್ತರಲ್ಲಿ ಕೌಶಲ್ಯ ಇರುತ್ತದೆ. ಯಾವುದನ್ನು ಹೇಗೆ,  ಯಾವ ಕೋನದಲ್ಲಿ ಚಿತ್ರಿಸಬೇಕು ಮತ್ತು ಹೇಗೆ ವರದಿ ಮಾಡಬೇಕು ಎಂಬ ತಿಳುವಳಿಕೆ ಇರುತ್ತದೆ. ಆದರೆ ಕಂಡದ್ದನ್ನು ಮೊಬೈಲ್‌ನಲ್ಲಿ  ಸೆರೆ ಹಿಡಿಯುವ ಸಾಮಾನ್ಯ ನಾಗರಿಕರಿಗೆ ಈ ತಿಳುವಳಿಕೆ ಮತ್ತು ಕೌಶಲ್ಯ ಇರುವುದಿಲ್ಲ. ಇವತ್ತು ಜಗತ್ತಿಗೆ ಲಭ್ಯವಾಗುತ್ತಿರುವುದು ಈ  ಬಡಪಾಯಿ ನಾಗರಿಕರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳು ಹಾಗೂ ಅವರು ತಮಗೆ ತಿಳಿದಷ್ಟು ಬರೆದಿರುವ ವರ ದಿಗಳು. ಹಾಗಂತ, ಪತ್ರಕರ್ತರೇ ಅಲ್ಲದ ಇವರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳೇ ಇಷ್ಟು ಭಯಾನಕವಾಗಿದೆ ಮತ್ತು  ಜಗತ್ತಿನ ಎದೆಗೂಡನ್ನು ನಡುಗಿಸುವಂತಾಗಿದೆ ಎಂದಮೇಲೆ, ವೃತ್ತಿನಿರತ ಪತ್ರಕರ್ತರು ಮುಕ್ತವಾಗಿ ತಿರುಗಿ ವರದಿ ಮಾಡುವಂತಿದ್ದರೆ ಆ  ವರದಿ, ವೀಡಿಯೋ ಮತ್ತು ಚಿತ್ರಗಳು ಇನ್ನೆಷ್ಟು ಭಯಾನಕವಿದ್ದೀತು? ಬಹುಶಃ, ಈ ವಾಸ್ತವವನ್ನು ಇತರೆಲ್ಲರಿಗಿಂತ ಹೆಚ್ಚಾಗಿ ಇಸ್ರೇಲ್  ಅರಿತುಕೊಂಡಿದೆ. ಒಂದುವೇಳೆ,


ಸ್ವತಂತ್ರ  ಪತ್ರಕರ್ತರು ಗಾಝಾ ಪ್ರವೇಶಿಸಿದರೆ, ಅವರ ವರದಿಗಾರಿಕೆಯಿಂದಾಗಿ ಈಗ ತನ್ನ ಪರ ಇರುವವರಲ್ಲಿ ಹೆಚ್ಚಿನ ಮಂದಿಯನ್ನೂ  ತಾನು ಕಳಕೊಳ್ಳಬೇಕಾದೀತು ಎಂಬ ಭಯ ಅದಕ್ಕಿದೆ. ತನ್ನನ್ನು ಬೆಂಬಲಿಸುವ ರಾಷ್ಟ್ರಗಳಲ್ಲೇ  ತನ್ನ ವಿರುದ್ಧ ಪ್ರತಿಭಟನೆಗಳು  ಕಾಣಿಸಿಕೊಂಡೀತು ಮತ್ತು ಆಯಾ ರಾಷ್ಟ್ರಗಳು ತನ್ನನ್ನು ಕೈಬಿಟ್ಟೀತು ಎಂಬ ಆತಂಕ ಅದನ್ನು ಕಾಡುತ್ತಿದೆ. ಆ ಕಾರಣದಿಂದಲೇ ಫೆಲೆಸ್ತೀನ್‌ನಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಅದು ಹುಡುಕಿ ಹುಡುಕಿ ಸಾಯಿಸುತ್ತಿದೆ ಮತ್ತು ವಿದೇಶಿ ಪತ್ರಕರ್ತರನ್ನು ಗಾಝಾ  ಪ್ರವೇಶಿಸದಂತೆ ತಡೆಯುತ್ತಿದೆ. ಅಷ್ಟಕ್ಕೂ,


ಅಣುಬಾಂಬೂ ಸೇರಿದಂತೆ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಹೊಂದಿರುವ ದೇಶವೊಂದು ಅತ್ತ ದೇಶವೇ ಅಲ್ಲದ ಮತ್ತು ತನ್ನದೇ ಮಿಲಿಟರಿ  ವ್ಯವಸ್ಥೆಯನ್ನೂ ಹೊಂದಿಲ್ಲದ ಭೂಪ್ರದೇಶದ ಮೇಲೆ 100 ದಿನಗಳಿಗಿಂತಲೂ ಅಧಿಕ ಸಮಯದಿಂದ ಸತತ ಬಾಂಬ್ ದಾಳಿ ನಡೆಸುತ್ತಿದೆ  ಎಂಬುದು ಮಾನವ ಇತಿಹಾಸದಲ್ಲೇ  ಮೊಟ್ಟಮೊದಲನೆಯದಾದ ಮತ್ತು ಅತ್ಯಂತ ಭೀಭತ್ಸಕರವಾದ ಕ್ರೌರ್ಯವಾಗಿದೆ. ಆಯುಧ  ಬಲವಿಲ್ಲದ ಜನತೆಯೊಂದರ ಮೇಲೆ ಬಲಶಾಲಿ ರಾಷ್ಟ್ರವೊಂದು ನಡೆಸುತ್ತಿರುವ ಈ ಏಕಮುಖ ದಾಳಿಯನ್ನು ‘ಆತ್ಮರಕ್ಷಣೆ’ ಎಂಬ ಹೆಸರಲ್ಲಿ  ಜಗತ್ತಿನ ಬಲಾಢ್ಯ ಶಕ್ತಿಗಳು ಸಮರ್ಥಿಸಿಕೊಳ್ಳುತ್ತಿರುವುದು ಮನುಷ್ಯತ್ವದ ಅಣಕವಾಗಿದೆ. ನಿಜವಾಗಿ, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕ್ರಿಮಿನಲ್  ನ್ಯಾಯಾಲಯ ಇತ್ಯಾದಿಗಳು ಬಡರಾಷ್ಟ್ರಗಳ ಮೇಲೆ ಸವಾರಿ ಮಾಡಲು ಬಲಾಢ್ಯರು ರೂಪಿಸಿಕೊಂಡಿರುವ ಆಯುಧಗಳೇ ಹೊರತು ಇ ನ್ನೇನಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

No comments:

Post a Comment