Thursday 20 March 2014

ನಮ್ಮ ಸಂಶೋಧನೆಯ ಮಿತಿಯನ್ನು ಸ್ಪಷ್ಟಪಡಿಸಿದ ವಿಮಾನ

   ಕಣ್ಮರೆಯಾದ ಮಲೇಶ್ಯಾದ ವಿಮಾನವು, ಅಮೇರಿಕದ ಕಾದಂಬರಿಕಾರ ವಿನ್ಸೆಂಟ್ ಗಡ್ಡೀಸ್ ಎಂಬವರು 1964ರಲ್ಲಿ ಬರೆದ, 'ದಿ ಡೆಡ್ಲಿ ಬರ್ಮುಡಾ ಟ್ರಯಾಂಗಲ್' ಎಂಬ ಕಾದಂಬರಿಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯಲ್ಲಿರುವ ಈ ದ್ವೀಪದ ಬಗ್ಗೆ ಸಾಕಷ್ಟು ಊಹಾಪೋಹಗಳು ಈಗಲೂ ಇವೆ. 1945 ಡಿ. 5ರಂದು ಅಮೇರಿಗ ಎಫ್ 19 ಮಾದರಿಯ ವಿಮಾನವೊಂದು ಅಲ್ಲಿ ಕಣ್ಮರೆಯಾದ ಬಳಿಕ ಹತ್ತಾರು ಕಣ್ಮರೆ ಪ್ರಕರಣಗಳು ಈ ದ್ವೀಪದಲ್ಲಿ ನಡೆದಿವೆ. ಹಡಗುಗಳು ಮತ್ತು ವಿಮಾನಗಳನ್ನು ನುಂಗುವ ದ್ವೀಪವೆಂಬ ನೆಲೆಯಲ್ಲಿ ಅದರ ಬಗ್ಗೆ ಸಂಶೋಧನೆಗಳು ನಡೆದಿವೆ. ‘ದಿ ಬರ್ಮುಡಾ ಟ್ರಯಾಂಗಲ್ ಮಿಸ್ಟರಿ: ಸಾಲ್ವಡ್’ ಎಂಬ ಕಾದಂಬರಿಯನ್ನು 1975ರಲ್ಲಿ ಬರೆದ ಲಾರೆನ್ಸ್ ಕ್ರುಶ್ಚೇವ್ ಎನ್ನುವವರು, ಈ ದ್ವೀಪದ ಬಗೆಗಿರುವ ಊಹಾಪೋಹಗಳನ್ನು ಸುಳ್ಳು ಎಂದಿದ್ದಾರೆ. ಆದರೂ ಈ ದ್ವೀಪದ ಕುರಿತಾದ ಕುತೂಹಲ ತಣಿದಿಲ್ಲ. ಬ್ರಿಟನ್ನಿನ ಪ್ರಮುಖ ಟಿ.ವಿ. ಚಾನೆಲ್ ಆದ ‘ಚಾನೆಲ್ 4’ ಅಂತೂ 1992ರಲ್ಲಿ ಈ ಬಗ್ಗೆ ‘ಬರ್ಮುಡಾ ಟ್ರಯಾಂಗಲ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಮತ್ತೊಮ್ಮೆ ಚರ್ಚೆಗೆ ಒಳಪಡಿಸಿತ್ತು. ಒಂದು ರೀತಿಯಲ್ಲಿ, ಆಧುನಿಕ ಸಂಶೋಧನೆಗಳ ಬಗ್ಗೆ ನಾವೆಷ್ಟೇ ಜಂಭ ಕೊಚ್ಚಿಕೊಂಡರೂ ಭೂಮಿಯಲ್ಲಿ ನಾವು ತಲುಪದ ಮತ್ತು ಬೇಧಿಸಲು ಆಗದ ಸ್ಥಳಗಳಿರಲು ಸಾಧ್ಯ ಎಂಬುದನ್ನು ಇಂಥ ಸುದ್ದಿಗಳು ಆಗಾಗ ಮನದಟ್ಟು ಮಾಡುತ್ತಿರುತ್ತದೆ. ಇದೀಗ, ಮಲೇಶ್ಯಾದ ಈ ವಿಮಾನವನ್ನು ಈ ದ್ವೀಪ ನುಂಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದು ಇಂಥ ಅನುಮಾನಗಳಿಗೆ ಮತ್ತೊಮ್ಮೆ ಜೀವ ಒದಗಿಸಿದೆ.
 ಜಗತ್ತಿನಲ್ಲಿ ಸಾಮಾನ್ಯವಾಗಿ ಎರಡು ವಿಧದ ವಿಚಾರಧಾರೆಗಳಿವೆ. ಒಂದು ಕಣ್ಣಿಗೆ ಕಾಣುವಂಥದ್ದನ್ನು ಮಾತ್ರ ನಂಬುವ ವಿಚಾರಧಾರೆ. ಇನ್ನೊಂದು, ಕಣ್ಣಿಗೆ ಕಾಣದೇ ಇರುವ ಆದರೆ, ಇದೆ ಎಂದು ಧರ್ಮಗ್ರಂಥಗಳು ಪ್ರತಿಪಾದಿಸಿರುವ ವಿಷಯಗಳನ್ನು ನಂಬುವ ವಿಚಾರಧಾರೆ. ಜಗತ್ತಿನಲ್ಲಿ ಈ ಎರಡು ವಿಚಾರಧಾರೆಗಳು ಎಲ್ಲ ಕಾಲಗಳಲ್ಲೂ ಸದಾ ಮುಖಾಮುಖಿಯಾಗುತ್ತಲೇ ಬಂದಿವೆ. ದೇವನು ಇದ್ದಾನೆ ಎಂದು ಒಂದು ವರ್ಗ ಹೇಳುವಾಗ ಆತನನ್ನು ತೋರಿಸು ಎಂದು ಇನ್ನೊಂದು ವರ್ಗ ಹೇಳುತ್ತದೆ. ಸ್ವರ್ಗ ಮತ್ತು ನರಕ ಎಂಬ ಎರಡು ವಸ್ತುಗಳನ್ನು ದೇವನು ಸೃಷ್ಟಿಸಿದ್ದಾನೆ ಎಂದು ಹೇಳುವವರೂ ಭೂಮಿಯೇ ಸ್ವರ್ಗ ಮತ್ತು ನರಕ ಎಂದು ವಾದಿಸುವವರೂ ಧಾರಾಳ ಇದ್ದಾರೆ. ಭೂಮಿಯ ಸೃಷ್ಟಿ ರಹಸ್ಯವನ್ನು ಕಂಡುಕೊಳ್ಳುವ ಒಂದು ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಬಿಗ್ ಬ್ಯಾಂಗ್ಸ್ ಎಂಬ ಸಂಶೋಧನೆಯನ್ನು ಕೈಗೊಳ್ಳಲಾಯಿತು. ವಿವಿಧ ದೇಶಗಳ ಅನೇಕಾರು ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಭಾಗವಹಿಸಿ ಸೃಷ್ಟಿ ರಹಸ್ಯದ ಸತ್ಯಗಳನ್ನು ಕಂಡುಕೊಳ್ಳಲು ಯತ್ನಿಸಿದರು. ಆರ್ಕಿಮಿಡೀಸ್, ಗೆಲಿಲಿಯೋ, ನ್ಯೂಟನ್‍ರಿಂದ ಹಿಡಿದು ಈ ಕಾಲದ ಅದ್ಭುತವಾದ ಸ್ಟೀಫನ್ ಹಾಕಿಂಗ್ಸ್‍ರ ವರೆಗೆ ವಿಜ್ಞಾನಿಗಳ ದಂಡೇ ಈ ಜಗತ್ತಿನ ರಹಸ್ಯವನ್ನು ಹುಡುಕುವ ಪ್ರಯತ್ನ ನಡೆಸುತ್ತಲೇ ಇವೆ. ಮನುಷ್ಯ ಹೇಗಾದ, ಪ್ರಾಣಿಗಳು ಹೇಗಾದುವು, ಸೂರ್ಯ, ಚಂದ್ರ, ನಕ್ಷತ್ರ, ಆಕಾಶ, ನೀರು.. ಎಲ್ಲವುಗಳ ಬಗೆಗೂ ಈ ವಿಜ್ಞಾನಿಗಳು ಕುತೂಹಲಗೊಂಡು ಸಂಶೋಧನೆಗೊಳಪಡಿಸುತ್ತಲೇ ಬಂದಿದ್ದಾರೆ. ವಿಕಾಸವಾದದ ಸಿದ್ಧಾಂತವನ್ನು ಡಾರ್ವಿನ್ ಮುಂದಿಟ್ಟಾಗ ಅಂದಿನಿಂದ ಇಂದಿನ ವರೆಗಿನ ಸಮಾಜ ಅದನ್ನು ಅನುಮಾನಿಸುತ್ತಲೇ ಬಂದಿತು. ಮಂಗ ವಿಕಾಸ ಹೊಂದುತ್ತಾ ಮನುಷ್ಯ ರೂಪ ತಾಳಿದುದಾದರೆ, ಆ ಬಳಿಕ ಈ ವಿಕಸನವು ಸ್ಥಬ್ಧಗೊಂಡಿತೇಕೆ ಎಂಬ ಪ್ರಶ್ನೆ ಇವತ್ತೂ ಪ್ರಸ್ತುತವಾಗಿಯೇ ಉಳಿದಿದೆ. ಮನುಷ್ಯನ ಹೃದಯಕ್ಕೆ ಬದಲಿ ಹೃದಯವನ್ನು, ರಕ್ತಕ್ಕೆ ಬದಲಿ ರಕ್ತವನ್ನು, ಕಿಡ್ನಿಗೆ ಬದಲಿ ಕಿಡ್ನಿಯನ್ನು, ಕಣ್ಣಿಗೆ ಬದಲಿ ಕಣ್ಣನ್ನು.. ಹೀಗೆ ಮಾನವ ದೇಹದ ವಿವಿಧ ಅಂಗಗಳಿಗೆ ಪ್ರಯೋಗಾಲಯದಲ್ಲಿ ಬದಲಿ ಅಂಗಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಯಾವ ವಿಜ್ಞಾನಿಗಳು ಈ ವರೆಗೂ ಯಶಸ್ಸು ಕಂಡಿಲ್ಲ. ಮನುಷ್ಯನ ದೇಹದಿಂದ ಒಂದಂಶವನ್ನು ತೆಗೆದು ಒಂದು ಜೀವವನ್ನು ಸೃಷ್ಟಿಸುವ ಕ್ಲೋನಿಂಗ್‍ನಂಥ ಪ್ರಯತ್ನಗಳು ಸಫಲಗೊಂಡಿವೆಯೇ ಹೊರತು ಕೇವಲ ಪ್ರಯೋಗಾಲಯವೇ ಓರ್ವ ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನ ಈ ವರೆಗೂ ಯಶಸ್ಸು ಕಂಡಿಲ್ಲ. ಧಾರ್ಮಿಕ ಚಿಂತನೆಗಳಿಗೆ ಬಲ ಬರುವುದು ಇಂಥ ಸ್ಥಿತಿಯಲ್ಲೇ. ವಿಜ್ಞಾನ ಹೇಳದ ಅಥವಾ ಹೇಳಿಯೂ ಹತ್ತಾರು ಅನುಮಾನಗಳಿಗೆ ಉತ್ತರ ಸಿಗದ ಅನೇಕಾರು ವಿಷಯಗಳ ಬಗ್ಗೆ ಧರ್ಮಗ್ರಂಥಗಳು ಸ್ಪಷ್ಟವಾಗಿ ಉತ್ತರಿಸುತ್ತವೆ. ಮನುಷ್ಯ ಹೇಗೆ ಮತ್ತು ಯಾಕೆ ಸೃಷ್ಟಿಯಾಗಿದ್ದಾನೆ, ಮೊತ್ತಮೊದಲ ಮಾನವನ ಹೆಸರೇನು, ಆ ಬಳಿಕ ಹೇಗೆ ಅವರ ಸಂತಾನಗಳು ವಿಕಸನ ಹೊಂದಿದುವು, ಮೊತ್ತಮೊದಲ ಮರಣ ಹೇಗಾಯಿತು, ಮೃತಪಟ್ಟವರು ಮತ್ತು ಅದಕ್ಕೆ ಕಾರಣರಾದವರ ಹೆಸರುಗಳು ಏನೇನು, ಮೃತ ಶರೀರವನ್ನು ದಫನ ಮಾಡುವ ಕಲೆ ಹೇಗೆ ಅವರಿಗೆ ಸಿದ್ಧಿಸಿತು, ಅದನ್ನು ಹೇಳಿಕೊಟ್ಟದ್ದು ಯಾವುದು.. ಮುಂತಾದುವುಗಳಿಂದ ಹಿಡಿದು, ಒಂಭತ್ತು ತಿಂಗಳ ನಡುವೆ ಒಂದು ಶಿಶು ತಾಯಿಯ ಉದರದಲ್ಲಿ ವಿಕಸನಗೊಳ್ಳುವ ವಿವಿಧ ಹಂತಗಳ ವರೆಗೆ, ಭೂಮಿಯ ರಚನೆಯಿಂದ ಹಿಡಿದು ಪ್ರಳಯದ ವಿವಿಧ ಕುರುಹುಗಳ ವರೆಗೆ.. ಎಲ್ಲವನ್ನೂ ಅತ್ಯಂತ ಸ್ಪಷ್ಟವಾಗಿ ಪವಿತ್ರ ಕುರ್‍ಆನ್ (23:14, 49: 13, 5: 27-31, 46:15...)ವಿವರಿಸಿದೆ. ದೇವನನ್ನು ಗುರುತಿಸುವುದಕ್ಕೆ ಈ ಭೂಮಿಯಲ್ಲಿ ಹತ್ತು-ಹಲವು ದೃಷ್ಟಾಂತಗಳನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳುತ್ತದೆ. ಬರ್ಮುಡಾ ಟ್ರಯಾಂಗಲ್ ಎಂಬುದು ಆ ಕುರುಹು ಹೌದೋ ಅಲ್ಲವೋ ಆದರೆ ಮಾನವ ಜಗತ್ತನ್ನು ಅದು ಕುತೂಹಲದ ಮೊಟ್ಟೆಯಾಗಿಸಿ ಬಿಟ್ಟಿದೆ. ಸಂಶೋಧನೆಗೆ ಸವಾಲನ್ನು ಒಡ್ಡುತ್ತಲೇ, ಭೂಮಿಯಲ್ಲಿ ಇಂಥದ್ದೊಂದು ಅಚ್ಚರಿಯ ದ್ವೀಪವನ್ನು ಯಾರು ಮತ್ತು ಯಾಕೆ ಸೃಷ್ಟಿಸಿದರು ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಇದೆ.
 ನಿಜವಾಗಿ, ವಿಮಾನ ಎಂಬುದು ಕಾರಿನಂತೆಯೋ, ಬಸ್ಸು, ಬೈಕ್‍ನಂತೆಯೋ ಅಲ್ಲ. ಈ ಭೂಮಿಯಲ್ಲಿ ತಾಂತ್ರಿಕವಾಗಿ ಅತ್ಯಂತ ಹೆಚ್ಚು ನಿಖರವಾಗಿರುವ ಮತ್ತು ಅನೇಕಾರು ತಪಾಸಣೆ, ಪ್ರಯೋಗಗಳ ಬಳಿಕ ಚಾಲನೆಗೆ ಬರುವ ವಾಹನ ಅದು. ಪ್ರಯಾಣಿಕರೂ ಅಷ್ಟೇ. ಬಸ್ಸಿಗೋ, ಟ್ಯಾಕ್ಸಿಗೋ ಹತ್ತಿದಂತೆ ವಿಮಾನವನ್ನು ಹತ್ತುವಂತಿಲ್ಲ. ಬಿಗಿಯಾದ ತಪಾಸಣೆಯ ಬಳಿಕವೇ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಓರ್ವ ಪ್ರಯಾಣಿಕ ಏನೇನಲ್ಲ ಕೊಂಡೊಯ್ಯಬಹುದು ಮತ್ತು ಅವು ಎಷ್ಟು ಕೆ.ಜಿ. ಮಿತಿಯಲ್ಲಿರಬೇಕು ಎಂಬ ನಿಯಮವೂ ಇದೆ. ಹೀಗೆ ಸಾಮಾನ್ಯ ಪ್ರಯಾಣಕ್ಕಿಂತ ಭಿನ್ನವಾಗಿ ಬಿಗಿ ನಿಯಮ, ತಪಾಸಣೆಗೊಳಪಟ್ಟು ಹಾರುವ ವಿಮಾನವು ಆಕಾಶದ ಮತ್ತು ಭೂಮಿಯ ಮೇಲೆ ಎಲ್ಲೇ ಇದ್ದರೂ ಸತತ ಮೂಲ ಕೇಂದ್ರದೊಂದಿಗೆ ಅದು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ವಿಮಾನದ ಪ್ರತಿ ಚಲನೆಯ ಮೇಲೂ ರಾಡಾರ್ ಕಣ್ಣಿಟ್ಟಿರುತ್ತದೆ. ಹೀಗೆ ಇತರೆಲ್ಲ ವಾಹನಗಳಿಗಿಂತ ಹೆಚ್ಚು ಸೌಕರ್ಯವಿರುವ ಮತ್ತು ನಿಖರವಾಗಿರುವ ಆನೆಗಾತ್ರದ ವಿಮಾನವೇ ಎಲ್ಲ ಮಾನವ ನಿರ್ಮಿತ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿ ಕಣ್ಮರೆಯಾಗಲು ಸಾಧ್ಯವೆಂದರೆ ಅದು ರವಾನಿಸುವ ಸಂದೇಶವೇನು? ಭೂಮಿಯಲ್ಲಿ ತಾನು ಮುಟ್ಟದ ಜಾಗವೇ ಇಲ್ಲ ಎಂದು ವಿಜ್ಞಾನ ಹೇಳುವಾಗ ಮತ್ತು ಮಂಗಳನಲ್ಲಿ ನೀರು ಹುಡುಕುತ್ತಿರುವಾಗ ನಡೆದ ಈ ಘಟನೆ ಏನನ್ನು ಸೂಚಿಸುತ್ತದೆ? ಭೂಮಿಯಲ್ಲಿ ವಿಜ್ಞಾನ ತಲುಪದ ಮತ್ತು ಅದರ ತಂತ್ರಜ್ಞಾನಗಳಿಗೂ ನಿಲುಕದ ಜಾಗಗಳಿವೆಯೇ? ಯಾರು ಅದರ ಸೃಷ್ಟಿಕರ್ತ? ಏನದರ ಉದ್ದೇಶ?
   ಕಣ್ಮರೆಯಾದ ವಿಮಾನವನ್ನು ಎದುರಿಟ್ಟುಕೊಂಡು ಜಗತ್ತು ಈ ಬಗ್ಗೆ ಚರ್ಚಿಸಬೇಕಾಗಿದೆ. ಒಂದು ವೇಳೆ ಅದು ಪತ್ತೆಯಾದರೂ ಕೂಡ.

No comments:

Post a Comment