Wednesday 5 March 2014

ಮೋದಿ ಎಂಬ ಆರೋಪಿಯೂ ಸಲ್ಮಾನ್ ಎಂಬ ಅಸಭ್ಯರೂ

    ‘ಏನಿಲ್ಲದಿದ್ದರೂ ರಾಜಕಾರಣಿಗಳ ಕೈ ಮತ್ತು ಬಾಯಿ ಶುದ್ಧವಾಗಿರುತ್ತದೆ..' ಎಂದು ಯಾರಾದರೂ ಹೇಳಿದರೆ, ಅದನ್ನೇ ಜನರು ದಿನದ ಜೋಕ್ ಆಗಿ ಪರಿಗಣಿಸುವಷ್ಟು ಅವರ ಈ ಎರಡು ಅಂಗಗಳು ಇವತ್ತು ವಿಶ್ವಾಸಾರ್ಹತೆಯನ್ನು ಕಳಕೊಂಡು ಬಿಟ್ಟಿವೆ. ಹಾಗಂತ, ರಾಜಕಾರಣಿ ಎಂಬುದು ಮನುಷ್ಯ ವರ್ಗಕ್ಕಿಂತ ಭಿನ್ನವಾದ ಜೀವಿಯೇನೂ ಅಲ್ಲ. ಮನುಷ್ಯರನ್ನು ಹೊರತುಪಡಿಸಿದ ‘ಶೂನ್ಯ' ಪ್ರದೇಶದಲ್ಲಿ ಅವರು  ಬದುಕುತ್ತಲೂ ಇಲ್ಲ. ರಾಜಕಾರಣಿಯಾಗುವುದಕ್ಕಿಂತ ಮೊದಲು ಪ್ರತಿಯೊಬ್ಬರೂ ಸಾಮಾನ್ಯ ಮನುಷ್ಯರೇ ಆಗಿರುತ್ತಾರೆ. ಅವರಲ್ಲಿ ಜನಸಾಮಾನ್ಯರಂತೆ ರೇಶನ್ ಅಂಗಡಿಗಳಲ್ಲಿ ಕ್ಯೂ ನಿಂತವರಿರಬಹುದು. ಮಣ್ಣು ಹೊತ್ತವರು, ಬಾವಿಯಿಂದ ನೀರು ಸೇದಿದವರು, ಕಾರಿನಲ್ಲೇ ಓಡಾಡಿದವರು.. ಎಲ್ಲರೂ ಇರಬಹುದು. ಆಗೆಲ್ಲಾ ಶುದ್ಧವಾಗಿಯೇ ಇರುವ ಇವರ ಕೈ ಮತ್ತು ಬಾಯಿಗಳು ರಾಜಕಾರಣಿಯಾದ ಮೇಲೆ ಅಶುದ್ಧವಾಗುವುದೇಕೆ? ಆಡಬಾರದ ಮಾತನ್ನು ಆಡುವಷ್ಟು, ಮಾಡಬಾರದ ಕೆಲಸವನ್ನು ಮಾಡುವಷ್ಟು ಅವು ಲಜ್ಜೆರಹಿತವಾಗುವುದೇಕೆ? ಲಕ್ಷಾಂತರ ಮಂದಿಯನ್ನು ಪ್ರತಿನಿಧಿಸುವ ರಾಜಕಾರಣಿಯೊಬ್ಬ ಹೊಲಸು ಮಾತಾಡುತ್ತಾರೆಂದರೆ ಅದು ಲಕ್ಷಾಂತರ ಮಂದಿಗೆ ಮಾಡುವ ಅವಮಾನ. ಆದ್ದರಿಂದಲೇ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್‍ರನ್ನು ನಾವು ಖಂಡಿಸಬೇಕಾಗಿದೆ. ಕಳೆದವಾರ ತಮ್ಮ ಅಸಂಸ್ಕ್ರ ತ ನಾಲಗೆಯನ್ನು ಅವರು ದೇಶದ ಮುಂದೆ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿಯನ್ನು ಷಂಡ, ನಪುಂಸಕ ಎಂದು ಕರೆದು ತನ್ನ ಯೋಗ್ಯತೆ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ಈ ಪದ ಪ್ರಯೋಗವನ್ನು ಯಾವ ನೆಲೆಯಲ್ಲೂ ಸ್ವೀಕರಿಸಲು ಸಾಧ್ಯವಿಲ್ಲ.
 ನಿಜವಾಗಿ, ನರೇಂದ್ರ ಮೋದಿಯ ಬಗ್ಗೆ, ಅವರ ರಾಜಕೀಯ ವಿಚಾರಧಾರೆಗಳ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಲ್ಮಾನ್ ಖುರ್ಷಿದ್‍ರಿಗೆ ಎಲ್ಲ ರೀತಿಯಲ್ಲೂ ಅರ್ಹತೆಯಿದೆ. ಗುಜರಾತ್ ಗಲಭೆಗೆ ಸಂಬಂಧಿಸಿ ಮೋದಿಯ ಪ್ರಾಮಾಣಿಕತೆಯನ್ನು ಅವರು ಪ್ರಶ್ನಿಸುವುದಾದರೆ, ಅದನ್ನಾರೂ ತಪ್ಪೂ ಅನ್ನುತ್ತಿಲ್ಲ. ಈ ದೇಶದಲ್ಲಿ ಯಾವ ರಾಜಕಾರಣಿಯೂ ಪ್ರಶ್ನಾತೀತರಲ್ಲ. ಮೋದಿಯೂ ಕೂಡ. ಆದರೆ ಓರ್ವ ಮನುಷ್ಯರಾಗಿ ಮೋದಿಗೂ ಕೆಲವು ಅರ್ಹತೆಗಳಿವೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಶಂಕಿತ ಪಾತ್ರದ ಬಗ್ಗೆ ಎಷ್ಟೇ ಅನುಮಾನಗಳಿದ್ದರೂ ಓರ್ವ ಮನುಷ್ಯರಾಗಿ ಅವರಿಗೆ ಸಲ್ಲತಕ್ಕ ಗೌರವಗಳನ್ನು ನಿರಾಕರಿಸುವುದು ಸಭ್ಯತನವಲ್ಲ.  1984 ಸಿಕ್ಖ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರನ್ನು ಸಲ್ಮಾನ್‍ರದ್ದೇ ಭಾಷೆಯಲ್ಲಿ ಖಂಡಿಸುವುದಕ್ಕೆ ಮೋದಿಗೂ ಅವಕಾಶ ಇದೆಯಲ್ಲವೇ? ಹತ್ಯಾಕಾಂಡಗಳಂಥ ಭೀಕರ ಕ್ರೌರ್ಯಗಳನ್ನು ಖಂಡಿಸುವುದಕ್ಕಾಗಿ ಇಂಥ ಪದಗಳ ಬಳಕೆಯನ್ನು ನಾವು ಸಹಿಸುವುದಾದರೆ ಅದು ನಮ್ಮನ್ನು ಎತ್ತ ಕೊಂಡೊಯ್ದೀತು? ಮೋದಿಯನ್ನು ಖಂಡಿಸುವುದಕ್ಕೆ ಈ ನಾಗರಿಕ ಜಗತ್ತಿನಲ್ಲಿ ಧಾರಾಳ ಸಭ್ಯ ಪದಗಳಿವೆ. ಕ್ರೌರ್ಯವೊಂದರ ಸಕಲ ಗಂಭೀರತೆಯನ್ನೂ ಪ್ರತಿನಿಧಿಸಬಲ್ಲಷ್ಟು ಅವು ಪ್ರಭಾವಶಾಲಿಯೂ ಆಗಿವೆ. ಅವನ್ನು ಬಿಟ್ಟು ಅಸಭ್ಯ ಪದಗಳನ್ನು ಬಳಸುವುದು ನಿಜವಾಗಿ ಸಭ್ಯ ಪದಗಳಿಗೆ ಮಾಡುವ ಅವಮಾನವಾಗಿದೆ. ಮಾತ್ರವಲ್ಲ, ಅಸಭ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಅಸಭ್ಯರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಮತ್ತು ಸಾರ್ವಜನಿಕರಿಂದ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೂ ಅವಕಾಶ ಒದಗಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲೂ ಖುರ್ಷಿದ್‍ರ ಪದಪ್ರಯೋಗವನ್ನು ವಿರೋಧಿಸಬೇಕಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ಶಂಕಿತರಾಗಿರಬಹುದು. ಆದರೆ ಅದರ ಹೆಸರಲ್ಲಿ ಖುರ್ಷಿದ್‍ರ ಅಸಭ್ಯ ಪದಪ್ರಯೋಗವನ್ನು ಸಮರ್ಥಿಸಲು ಸಾಧ್ಯವಿಲ್ಲ. ನ್ಯಾಯ ಮೋದಿಗಾದರೂ ಸಲ್ಮಾನ್‍ರಿಗಾದರೂ ಏಕಪ್ರಕಾರ ಇರಬೇಕೆಂಬುದೇ ಖುರ್ಷಿದ್ ಪ್ರತಿನಿಧಿಸುವ ಧರ್ಮದ ನಿಯಮ. ಅದನ್ನು ಯಾರು ವಿೂರಿದರೂ ಖಂಡನಾರ್ಹವೇ.
 ಹಾಗಿದ್ದರೂ ಈ ಪದಪ್ರಯೋಗಕ್ಕೆ ಕಾರಣವಾದ ಅಂಶಗಳ ಬಗ್ಗೆ ಮೋದಿ ಮತ್ತು ಅವರ ಬೆಂಬಲಿಗರು ಆತ್ಮಾವಲೋಕನ ನಡೆಸಬೇಕಾದ ಅಗತ್ಯವಿದೆ. ಮೋದಿ ಖಂಡನೆಗೆ ಒಳಗಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಈ ದೇಶದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಎಂದಷ್ಟೇ ಅಲ್ಲ, ಸ್ವತಃ ಅಮೇರಿಕವೇ ಮೋದಿಯವರನ್ನು ಶಂಕಿತರಂತೆ ನೋಡುತ್ತಿದೆ. ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗಿರುವ ಮತ್ತು ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೊಬ್ಬರನ್ನು ಹತ್ತಿರ ಸೇರಿಸುವುದಕ್ಕೆ ಅಮೇರಿಕ ಸಿದ್ಧವಾಗುತ್ತಿಲ್ಲವೆಂದರೆ ಅದನ್ನು ಪಿತೂರಿ ಎಂದೋ ದುರುದ್ದೇಶ ಎಂದೋ ಸಾಮನ್ರ್ಯೀಕರಿಸಲು ಸಾಧ್ಯವಿಲ್ಲ. ಅಲ್ಲದೇ ಮೋದಿ ಇತರೆಲ್ಲ ಪಕ್ಷಗಳಿಗಿಂತಲೂ ಹೆಚ್ಚು ಕಾರ್ಪೋರೇಟ್ ಪ್ರಿಯರು. ಅಮೇರಿಕ ಸಹಿತ ಬೃಹತ್ ರಾಷ್ಟ್ರಗಳಿಂದ ಬಂಡವಾಳ ಹರಿದು ಬರುವುದನ್ನು ಇಷ್ಟಪಡುವವರು. ಅಮೇರಿಕದ ಭಯೋತ್ಪಾದನಾ ವಿರೋಧಿ ಹೋರಾಟವನ್ನಾಗಲಿ, ಆರ್ಥಿಕ ಸಿದ್ಧಾಂತವನ್ನಾಗಲಿ ಮೋದಿ ಎಂದೂ ವಿಮರ್ಶಿಸಿಲ್ಲ. ಒಂದು ರೀತಿಯಲ್ಲಿ ಅಮೇರಿಕಕ್ಕೆ ಸರ್ವರೀತಿಯಿಂದಲೂ ಮೆಚ್ಚುಗೆಯವರಾಗಬೇಕಾದ ಮೋದಿಯನ್ನು ಅಮೆರಿಕ ಅಸ್ಪೃಶ್ಯರಂತೆ ಕಾಣಬೇಕಾದರೆ ಮೋದಿಯವರೊಳಗೊಬ್ಬ ಶಂಕಿತ ಇದ್ದಾನೆಂಬ ಅನುಮಾನವೇ ಇದಕ್ಕೆ ಕಾರಣವೆನ್ನಬೇಕಾಗಿದೆ. ಈ ಸತ್ಯವನ್ನು ಮೋದಿ ಬೆಂಬಲಿಗರು ಜೋರುದನಿಯಿಂದ ಅಡಗಿಸಲು ಯತ್ನಿಸಿದಷ್ಟೂ ಅದು ಮತ್ತೆ ಮತ್ತೆ ಚಿಮ್ಮುತ್ತಲೇ ಇರುತ್ತದೆ.
   ಈ ದೇಶದ 120 ಕೋಟಿಯಷ್ಟು ಬೃಹತ್ ಜನಸಂಖ್ಯೆಯನ್ನು ಲೋಕಸಭೆಯಲ್ಲಿ ನೇರವಾಗಿ ಪ್ರತಿನಿಧಿಸುವುದು ಕೇವಲ 543ರಷ್ಟು ಸಂಸದರು ಮಾತ್ರ. ಅಂದರೆ ಪ್ರತಿಯೊಬ್ಬ ಸಂಸದನೂ ಲಕ್ಷಾಂತರ ಮಂದಿಯ ಮಾತು-ಕೃತಿ, ಭಾವನೆ, ಸಂಸ್ಕøತಿ, ಧರ್ಮ, ನಡೆ, ನುಡಿಗಳನ್ನು ಪ್ರತಿನಿಧಿಸುತ್ತಾನೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಮಾತುಗಾರಿಕೆ ಮತ್ತು ಗ್ರಹಿಕೆಗಳು ಉತ್ತರ ಪ್ರದೇಶದ್ದೋ ಒಡಿಸ್ಸಾದ್ದೋ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಭಾಷೆ, ಗ್ರಹಿಕೆಗಳಂತೆ ಇರಬೇಕಾಗಿಲ್ಲ. ಇವರಿಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳೂ ಭಿನ್ನ ಭಿನ್ನ ಆಗಿರಬಹುದು. ಇವರಿಬ್ಬರ ಧಾರ್ಮಿಕ ಚಿಂತನೆಗಳಲ್ಲೂ ವ್ಯತ್ಯಾಸ ಇರಬಹುದು. ಹಾಗಂತ, ಇವರಿಬ್ಬರ ಮಧ್ಯೆ ಸತ್ಯ, ನ್ಯಾಯ, ಮೌಲ್ಯ, ಸಭ್ಯತೆ, ನೈತಿಕತೆ.. ಮುಂತಾದ ಗುಣಗಳ ಬಗ್ಗೆ ಭಿನ್ನಾಭಿಪ್ರಾಯ ಇರುವುದಕ್ಕೆ ಸಾಧ್ಯವಿಲ್ಲ. ನಾನು ಸುಳ್ಳು ಹೇಳುತ್ತೇನೆ, ನಾನು ಹತ್ಯಾಕಾಂಡ ನಡೆಸುತ್ತೇನೆ, ನಾನು ಅನೈತಿಕತೆಯಲ್ಲೇ ನಂಬಿಕೆ ಇರಿಸಿದ್ದೇನೆ.. ಎಂದು ಯಾವ ಜನಪ್ರತಿನಿಧಿಯೂ ಬಹಿರಂಗವಾಗಿ ಘೋಷಿಸುವುದಿಲ್ಲ. ಯಾಕೆಂದರೆ, ಇವೆಲ್ಲ ಎಲ್ಲ ಜನರ ಪಾಲಿಗೂ ಸಮಾನ. ಭಿನ್ನ ಭಿನ್ನ ದೇಶ, ಭಾಷೆ, ಧರ್ಮ, ಸಂಸ್ಕøತಿಗಳುಳ್ಳವರೆಲ್ಲರಿಗೂ ಮೌಲ್ಯಗಳು ಬಹುತೇಕ ಒಂದೇ ಆಗಿರುತ್ತವೆ. ಆದ್ದರಿಂದಲೇ, ಸಲ್ಮಾ ನ್ ಖುರ್ಷಿದ್‍ರ ಪದಬಳಕೆಯನ್ನು ನಾವು ಪ್ರತಿಭಟಿಸಬೇಕಾದದ್ದು. ಅವರು ಮುಸ್ಲಿಮರೆಂಬ ಕಾರಣಕ್ಕಾಗಿ ಮತ್ತು ಅವರು ಆ ಪದ ಬಳಸಿದ್ದು ಓರ್ವ ಹತ್ಯಾಕಾಂಡದ ಆರೋಪಿಯ ವಿರುದ್ಧ ಎಂಬುದಕ್ಕಾಗಿ ಅದೆಂದೂ ಸಹ್ಯ ಆಗುವುದಕ್ಕೆ ಸಾಧ್ಯವಿಲ್ಲ. ಆಗಬಾರದು ಕೂಡಾ. ಮೋದಿ ಈ ಸಮಾಜದ ಸಭ್ಯತನಕ್ಕೆ ತಮ್ಮ ಕೃತ್ಯಗಳ ಮೂಲಕ ಅಪಚಾರ ಎಸಗಿದ್ದಾರೆಂದಾದರೆ ಅದನ್ನು ಅಸಭ್ಯ ಪದಗಳ ಮೂಲಕ ಪ್ರಶ್ನಿಸುವುದು ಉತ್ತರ ಆಗುವುದಿಲ್ಲ. ಬದಲು ಅದು ಇನ್ನೊಂದು ತಪ್ಪಷ್ಟೇ ಆಗುತ್ತದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಪಾತ್ರ ಏನು ಎಂಬುದನ್ನು ನ್ಯಾಯಾಲಯ ಇಂದಲ್ಲ ನಾಳೆ ಖಂಡಿತ ನಿರ್ಧರಿಸುತ್ತದೆ. ಅದನ್ನು ಸಲ್ಮಾನ್ ಖುರ್ಷಿದ್‍ರು ಅಸಭ್ಯ ಪದಗಳ ಮೂಲಕ ನಿರ್ಧರಿಸುವ ಅಗತ್ಯವಿಲ್ಲ.

No comments:

Post a Comment