Thursday 19 December 2013

ಮಕ್ಕಳಿಲ್ಲದ, ಹೆತ್ತವರೂ ಆಗದ ಅವರು..

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು.   

No comments:

Post a Comment