Monday 26 August 2013

ಮನ ಕದಡುವ ಮನರಂಜನೆ ಮತ್ತು ಅತ್ಯಾಚಾರ

   ಅತ್ಯಾಚಾರ ಪ್ರಕರಣಗಳನ್ನು ಪ್ರಮುಖ ಟಿ.ವಿ. ಮತ್ತು ಪತ್ರಿಕೆಗಳು ಗಂಭೀರ ಚರ್ಚೆಗೆ ಎತ್ತಿಕೊಳ್ಳ ಬೇಕಾದರೆ ಅತ್ಯಾಚಾರಕ್ಕೀಡಾದವರು ‘ಉನ್ನತ ವಲಯಕ್ಕೆ’ ಸೇರಬೇಕಾದುದು ಕಡ್ಡಾಯವೇ ಎಂಬ ಪ್ರಶ್ನೆಯು ದೆಹಲಿಯ ‘ನಿರ್ಭಯ' ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡಿದ್ದರೂ ಅತ್ಯಾಚಾರವೆಂಬ ಕ್ರೌರ್ಯವನ್ನು ಚರ್ಚೆಗೆತ್ತಿಕೊಳ್ಳುವುದನ್ನೇ ತಡೆಯುವಷ್ಟು ಇಂಥ ಪ್ರಶ್ನೆಗಳು ಮಹತ್ವಪೂರ್ಣ ಆಗಬಾರದು. ದೆಹಲಿಯಲ್ಲಿ ‘ನಿರ್ಭಯ'ಳ ಮೇಲೆ ನಡೆದ ಅತ್ಯಾಚಾರ ಘಟನೆಯು ದೇಶದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಮಾಧ್ಯಮಗಳು ವಾರಗಟ್ಟಲೆ ಚರ್ಚಿಸಿದುವು. ಪ್ರಕರಣದ ವಿರುದ್ಧ ಈ ದೇಶದಲ್ಲಿ ಕಾಣಿಸಿಕೊಂಡ ಆಕ್ರೋಶ ಎಷ್ಟು ಪ್ರಬಲವಾಗಿತ್ತೆಂದರೆ ಸರಕಾರ ಹೊಸ ಕಾನೂನನ್ನೇ ರೂಪಿಸಲು ಮುಂದಾಯಿತು. 'ನಿರ್ಭಯ' ನಿಧಿಯನ್ನು ಸ್ಥಾಪಿಸಿತು. ಹಾಗಂತ, ಅತ್ಯಾಚಾರವನ್ನು ತಡೆಗಟ್ಟುವುದಕ್ಕೆ ಇಂಥ ಕ್ರಮಗಳು ಸಂಪೂರ್ಣ ಯಶಸ್ವಿಯಾದವು ಎಂದಲ್ಲ. ಆ ಬಳಿಕವೂ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದ್ದುವು. ಆದರೆ, ಹೀಗೆ ಅತ್ಯಾಚಾರಕ್ಕೀಡಾಗುವ ಯುವತಿಯರು 'ನಿರ್ಭಯ'ಳಂತೆ 'ಉನ್ನತ ವಲಯದಲ್ಲಿ' ಗುರುತಿಸಿಕೊಳ್ಳದ ಮತ್ತು ದೆಹಲಿ, ಮುಂಬೈ, ಕೊಲ್ಕತ್ತಾ.. ಮುಂತಾದ ಮಹಾ ನಗರಗಳಲ್ಲಿ ವಾಸಿಸದವರಾಗಿದ್ದುದರಿಂದಲೋ ಏನೋ ಮಾಧ್ಯಮಗಳ ಅವಕೃಪೆಗಳು ಒಳಗಾದರು. ಸಾರ್ವಜನಿಕವಾಗಿ ಒಂದು ಬಗೆಯ ಅಸಹನೆ, ಅನುಮಾನ ಸೃಷ್ಟಿಯಾದದ್ದೇ ಇಲ್ಲಿ. ಅತ್ಯಾಚಾರಕ್ಕೀಡಾದವರ ಹುದ್ದೆ, ಕಲಿಕೆ, ವಾಸಸ್ಥಳವನ್ನು ನೋಡಿಕೊಂಡು ಘಟನೆಯನ್ನು ಗಂಭೀರ ಅಥವಾ ಸಾಮಾನ್ಯ ಎಂದು ವಿಭಜಿಸುವುದು ಸರಿಯೇ, ಅತ್ಯಾಚಾರ ಎಲ್ಲಿ ನಡೆದರೂ, ಯಾರ ಮೇಲೆ ನಡೆದರೂ ಗಂಭೀರವೇ. ಮತ್ತೇಕೆ ಮಾಧ್ಯಮಗಳು ಅತ್ಯಾಚಾರ ಪ್ರಕರಣಗಳನ್ನು ಚರ್ಚೆಗೊಳಪಡಿಸುವಾಗ ಈ ಸೂಕ್ಷ್ಮ ತೆಯನ್ನು ಪಾಲಿಸುತ್ತಿಲ್ಲ.. ಎಂದು ಮುಂತಾಗಿ ಅನೇಕಾರು ಪ್ರಶ್ನೆಗಳು ಸಾರ್ವಜನಿಕವಾಗಿ ಕೇಳಿ ಬಂದುವು. ಇದೀಗ ಮುಂಬೈಯಲ್ಲಿ ಪತ್ರಕರ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮಾಧ್ಯಮಗಳು ಅದಕ್ಕೆ ಕೊಟ್ಟ ಮಹತ್ವವು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
   ಅತ್ಯಾಚಾರ ಎಂಬ ನಾಲ್ಕಕ್ಷ ರಕ್ಕೆ ಓರ್ವ ಹೆಣ್ಣು ಮಗಳ ಇಡೀ ಬದುಕಿನೊಂದಿಗೆ ಸಂಬಂಧ ಇದೆ. ಅತ್ಯಾಚಾರಿಗಳು ತಪ್ಪಿಸಿಕೊಳ್ಳುವಷ್ಟು ಸುಲಭವಾಗಿ ಓರ್ವ ಹೆಣ್ಣು ಮಗಳು ಆ ಆಘಾತದ ಗಾಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೈಹಿಕ ಗಾಯ ಒಂದೆಡೆಯಾದರೆ ಮಾನಸಿಕ ಗಾಯ ಇನ್ನೊಂದೆಡೆ. ಬದುಕನ್ನು ಮತ್ತೆ ಮೊದಲಿನಂತೆ ಅನುಭವಿಸಲು ಹೊರಡುವಾಗ ಹತ್ತು-ಹಲವು ಸಮಸ್ಯೆಗಳು ಆಕೆಗೆ ಎದುರಾಗುತ್ತವೆ. ಅತ್ಯಾಚಾರಿಗಳ ಕಡೆಯಿಂದ ಬೆದರಿಕೆ, ಒತ್ತಡಗಳು ಬರುತ್ತವೆ. ಸಮಾಜ ವಿಚಿತ್ರವಾಗಿ ನೋಡುವುದಕ್ಕೂ ಅವಕಾಶ ಒದಗುತ್ತದೆ. ಬಹುಶಃ ಹೆಸರನ್ನು ಗೌಪ್ಯವಾಗಿಟ್ಟುಕೊಂಡು ಘಟನೆಯನ್ನು ಮಾತ್ರ ಬಹಿರಂಗಪಡಿಸುವ ಅಪರೂಪದ ಪ್ರಕರಣಗಳಲ್ಲಿ ಅತ್ಯಾಚಾರವೂ ಒಂದು. ಯಾಕೆ ಹೀಗೆ ಅಂದರೆ, ಅತ್ಯಾಚಾರ ಎಂಬುದು ಕೇವಲ ಒಂದು ಅಪರಾಧವಷ್ಟೇ ಅಲ್ಲ, ಅದರೊಂದಿಗೆ ಹೆಣ್ಣಿನ ಗೌರವ, ಮಾನ, ಪ್ರತಿಷ್ಠೆ.. ಎಲ್ಲವೂ ಒಳಗೊಂಡಿದೆ. ನಿಜವಾಗಿ, ‘ನಿರ್ಭಯ' ಪ್ರಕರಣದ ಬಳಿಕ ದೇಶದಲ್ಲಿ ಕಾಣಿಸಿಕೊಂಡ ಪ್ರತಿಭಟನೆ, ಆಕ್ರೋಶವನ್ನು ಪರಿಗಣಿಸಿದರೆ, ಖಂಡಿತ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಕುಸಿತ ಉಂಟಾಗಬೇಕಿತ್ತು. ಅತ್ಯಾಚಾರಿಗಳನ್ನು ಕಠಿಣವಾಗಿ ದಂಡಿಸುವ ಕಾಯ್ದೆಯನ್ನು ನೋಡಿಯಾದರೂ ಅತ್ಯಾಚಾರಿ ಮನಸ್ಥಿತಿಯ ಮಂದಿಯಲ್ಲಿ ಭೀತಿ ಮೂಡಬೇಕಿತ್ತು. ಆದರೆ ಇಂಥ ಸುಳಿವುಗಳೇನೂ ಕಾಣಿಸುತ್ತಿಲ್ಲ. ಪತ್ರಕರ್ತೆಯ ಮೇಲೆ ಅತ್ಯಾಚಾರ ನಡೆದ ಮರುದಿನವೇ ಜಾರ್ಖಂಡ್‍ನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರವಾಗಿದೆ. ಇವೆಲ್ಲ ಕೊಡುವ ಸಂದೇಶವೇನು? ಶಿಕ್ಷೆಯ ಭೀತಿ ಸಮಾಜದಿಂದ ಹೊರಟು ಹೋಗಿದೆ ಎಂಬುದನ್ನೇ ಅಲ್ಲವೇ?
   ನಿಜವಾಗಿ, ಅತ್ಯಾಚಾರ ಪ್ರಕರಣಗಳನ್ನು ಗಂಭೀರ ಚರ್ಚಾ ವಸ್ತುವಾಗಿ ಎತ್ತಿಕೊಳ್ಳುವ ಮಾಧ್ಯಮಗಳಲ್ಲಿ ಹೆಣ್ಣು ಭಾರೀ ಗೌರವಯುತವಾಗಿಯೇನೂ ಕಾಣಿಸಿಕೊಳ್ಳುತ್ತಿಲ್ಲ. ಆಕೆಯ ಉಡುಪು, ವರ್ತನೆ, ಆಂಗಿಕ ಭಾಷೆ.. ಎಲ್ಲವೂ ಸಭ್ಯತನದ ಮೇರೆಯೊಳಗಿದೆ ಎಂದು ಧೈರ್ಯದಿಂದ ಹೇಳುವ ವಾತಾವರಣವೂ ಇಲ್ಲ. ಮನರಂಜನೆಯ ಹೆಸರಲ್ಲಿ ಸಿನಿಮಾಗಳನ್ನು ಸಮರ್ಥಿಸಿಕೊಳ್ಳುವುದು ಸುಲಭ. ಹಾಗಂತ ವೀಕ್ಷಕರು ಕೇವಲ ಮನರಂಜನೆಯಾಗಿಯಷ್ಟೇ ಸಿನಿಮಾ, ಟಿ.ವಿ. ಕಾರ್ಯಕ್ರಮಗಳನ್ನು ಪರಿಗಣಿಸಬೇಕೆಂದಿಲ್ಲವಲ್ಲ. ಎಲ್ಲರೂ ಒಂದು ದೃಶ್ಯವನ್ನು ಒಂದೇ ಬಗೆಯಲ್ಲಿ ಅನುಭವಿಸುತ್ತಾರಾ? ಬೇರೆ ಬೇರೆ ವೀಕ್ಷಕರ ಮೇಲೆ ಅದು ಭಿನ್ನ ಭಿನ್ನ ಪ್ರಭಾವಗಳನ್ನು ಬೀರುವುದಕ್ಕೂ  ಅವಕಾಶ ಇದೆಯಲ್ಲವೇ? ವೀಕ್ಷಕನು ಬೆಳೆದು ಬಂದ ಪರಿಸರ, ಸಂಸ್ಕøತಿ ,ಜ್ಞಾನವನ್ನು ಹೊಂದಿಕೊಂಡು ಒಂದು ದೃಶ್ಯವೋ ಒಂದು ಡಯಲಾಗೋ ವ್ಯಾಖ್ಯಾನವನ್ನು ಪಡೆಯುತ್ತದೆ. ಹೀಗಿರುವಾಗ, ಸಿನಿಮಾ ಕ್ಷೇತ್ರವೂ ಸೇರಿದಂತೆ ಮಾಧ್ಯಮ ರಂಗವು ತನ್ನ ಕಾರ್ಯಕ್ರಮಗಳನ್ನು ಕೇವಲ ಮನರಂಜನೆಯೆಂದು ಸಮರ್ಥಿಸಿಕೊಳ್ಳುತ್ತಾ ಲೈಂಗಿಕ ದೌರ್ಜನ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುವುದನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಬಹುದು?
   ಆಧುನಿಕ ಜೀವನ ಶೈಲಿಯು ಸ್ವಚ್ಛಂದತೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುತ್ತಿದೆ. ಈ ಹಿಂದೆ ಯಾವುದೆಲ್ಲ ಕಪ್ಪು ಪಟ್ಟಿಯಲ್ಲಿದ್ದುವೋ ಅವೆಲ್ಲ ನಿಧಾನಕ್ಕೆ ಬಿಳಿ ಪಟ್ಟಿಯಲ್ಲಿ ಜಾಗ ಪಡಕೊಳ್ಳುತ್ತಿದೆ. ಮದ್ಯಪಾನವು ಇವತ್ತು ವ್ಯಕ್ತಿಯ ಸ್ಥಾನಮಾನವನ್ನು ಹೇಳುವ ಮಾನದಂಡವಾಗಿ ಪರಿವರ್ತನೆಯಾಗಿದೆ. ನೈತಿಕತೆ, ಪ್ರಾಮಾಣಿಕತೆ ಮುಂತಾದ ಪದಗಳಿಗಿದ್ದ ‘ತೂಕ' ಕಡಿಮೆಯಾಗುತ್ತಿದೆ. ಬದುಕನ್ನು ಅನುಭವಿಸುವ, ನಿಯಂತ್ರಣಗಳನ್ನೆಲ್ಲ ದಾಟಿ ಬದುಕುವ ಮುಕ್ತ ಜೀವನ ಕ್ರಮಗಳು ಆಧುನಿಕ ತಲೆಮಾರನ್ನು ತೀವ್ರವಾಗಿ ಆಕರ್ಷಿಸುತ್ತಿವೆ. ಇಂಥ ಹೊತ್ತಲ್ಲಿ, ಉನ್ನತ ಶಿಕ್ಷಣ ಪಡೆಯದ, ಗೆಳತಿಯರನ್ನು ಹೊಂದಲು ವಿಫಲವಾದ ಸಾಮಾನ್ಯ ವರ್ಗದಲ್ಲಿ ಅಸಹನೆ ಮಡುಗಟ್ಟುವುದಕ್ಕೆ ಅವಕಾಶ ಇದೆ. ತಮಗೆ ಅಸಾಧ್ಯವಾದದ್ದನ್ನು ಇತರರು ಅನುಭವಿಸುತ್ತಿದ್ದಾರೆಂಬ ಅಸೂಯೆಯು ಅಂತಿಮವಾಗಿ ಅವರನ್ನು ತಪ್ಪು ಕೃತ್ಯಕ್ಕೆ ಪ್ರೇರೇಪಿಸುತ್ತಿರಲಾರದು ಎಂದು ಹೇಳಲು ಸಾಧ್ಯವಿಲ್ಲ. ಬಹುಶಃ ಮದ್ಯಪಾನವು ಇಂಥ ಅಪಾಯಕಾರಿ ಸಾಹಸಕ್ಕೆ ಧೈರ್ಯ ಕೊಡುತ್ತಿರಲೂ ಬಹುದು.
   ಅತ್ಯಾಚಾರ ರಹಿತ ಸಮಾಜವೊಂದನ್ನು ಕಟ್ಟಬೇಕಾದರೆ ಮೊಟ್ಟಮೊದಲು ಅತ್ಯಾಚಾರಕ್ಕೆ ಪ್ರಚೋ
ದಕವಾಗುವ ಸರ್ವ ಚಟುವಟಿಕೆಗಳನ್ನೂ ನಿಯಂತ್ರಿಸಬೇಕಾದ ಅಗತ್ಯವಿದೆ. ಮನುಷ್ಯನನ್ನು ಅಮಲಲ್ಲಿ ತೇಲಿಸುವ ಮದ್ಯಪಾನಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕಾಗಿದೆ. ಅತ್ಯಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವುದಕ್ಕಾಗಿ ಪ್ರತ್ಯೇಕ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿ, ಪ್ರತಿದಿನ ವಿಚಾರಣೆ ನಡೆಯುವಂತೆ ಮತ್ತು ಅತಿ ಶೀಘ್ರವಾಗಿ ತನಿಖೆ, ಆರೋಪ ಪಟ್ಟಿ, ಸಾಕ್ಷಿಗಳ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡುವಂತೆ ನೋಡಿಕೊಳ್ಳಬೇಕಾಗಿದೆ. ಯಾಕೆಂದರೆ ಅತ್ಯಾಚಾರವೆಂಬುದು ಕಳ್ಳತನ, ಕೊಲೆಯಂತೆ ಖಂಡಿತ ಅಲ್ಲ. ಒಂದು ಸಮಾಜದ ಆರೋಗ್ಯವನ್ನು ಅಳೆಯುವ ಮಾನದಂಡವೇ ಅಲ್ಲಿಯ ಮಹಿಳೆಯರು. ಅವರ ಆರೋಗ್ಯ ಅಪಾಯಕಾರಿ ಮಟ್ಟದಲ್ಲಿದ್ದರೆ ಆ ಸಮಾಜ ಪತನದ ಹಾದಿಯಲ್ಲಿದೆಯೆಂದೇ ಅರ್ಥ. ಆದ್ದರಿಂದ ಮಹಿಳೆಯರನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

No comments:

Post a Comment