Monday 23 September 2013

ಕಾಂಕ್ರೀಟು ಕಟ್ಟಡಗಳಿಂದ ಹೊರಬೀಳುತ್ತಿರುವ ಬ್ರೇಕಿಂಗ್ ನ್ಯೂಸ್ ಗಳು

   ಯುವತಿ ನಾಪತ್ತೆ, ಯುವಕ ಆತ್ಮಹತ್ಯೆ, ನವವಿವಾಹಿತೆ ಪರಾರಿ, ಪತ್ನಿಯ ಕೊಲೆ, ಬೀದಿ ಪಾಲಾದ ಹೆತ್ತವರು.. ಮುಂತಾದ ಶೀರ್ಷಿಕೆಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ದೌರ್ಬಲ್ಯ ಏನೆಂದರೆ, ಇಂಥವರಿಗೆ ನರೇಂದ್ರ ಮೋದಿ, ಕರೀನಾ ಕಪೂರ್, ತೆಂಡುಲ್ಕರ್, ವಿಜಯ್.. ಮುಂತಾದ ಹೆಸರುಗಳಿಲ್ಲ ಅನ್ನುವುದು. ನರೇಂದ್ರ ಮೋದಿ ಕೈ ಬೀಸಿದರೂ ಮಾಧ್ಯಮಗಳು ಮುಖಪುಟದಲ್ಲಿ ಬರೆಯುತ್ತವೆ. ಪತ್ನಿಯೊಂದಿಗೆ ವಿಜಯ್ ಜಗಳಾಡಿದುದನ್ನು ವಾರಗಟ್ಟಲೆ ಟಿ.ವಿ. ಮಾಧ್ಯಮಗಳು ಚರ್ಚಿಸುತ್ತವೆ. ದೇವೇಗೌಡರ ನಿದ್ದೆ, ಯಡಿಯೂರಪ್ಪರ ಜಾಗಿಂಗ್, ಸೆಲೆಬ್ರಿಟಿಗಳ ಗಾಸಿಪ್‍ಗಳನ್ನೆಲ್ಲ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುತ್ತವೆ. ಹಾಗಂತ, ಈ ನಿದ್ದೆ, ಜಾಗಿಂಗ್, ಕೈ ಬೀಸುವಿಕೆಗಿಂತ ‘ಆತ್ಮಹತ್ಯೆ’ಯು ಕಡಿಮೆ ಮಹತ್ವದ್ದು ಎಂದಲ್ಲ. ಆದರೆ ಆತ್ಮಹತ್ಯೆ ಎಂಬುದು ಮಾಮೂಲಿ ಘಟನೆಯಾಗಿರುವಾಗ ಅದನ್ನು ಪ್ರತಿದಿನ ಪತ್ರಿಕೆಗಳು ಮುಖಪುಟದಲ್ಲಿಟ್ಟು ಕೊಟ್ಟರೆ ಏನು ಆಕರ್ಷಣೆಯಿದೆ, ಕೌಟುಂಬಿಕ ನೆಲೆಗಟ್ಟು ಕುಸಿದು ಹೋಗಿರುವ ಇಂದಿನ ದಿನಗಳಲ್ಲಿ ಯುವತಿ ಪರಾರಿಯಾಗಿರುವುದನ್ನು ಬ್ರೇಕಿಂಗ್ ನ್ಯೂಸ್ ಆಗಿಸಿದರೆ ಯಾರು ಓದುತ್ತಾರೆ.. ಅನ್ನುವ ವಾತಾವರಣವು ಮಾಧ್ಯಮ ಕಚೇರಿಗಳಿಂದ ಹಿಡಿದು ಸಾರ್ವಜನಿಕವಾಗಿಯೂ ನೆಲೆಗೊಂಡಿದೆ.
   ಇವತ್ತು, ನರೇಂದ್ರ ಮೋದಿಯವರು ಪ್ರಧಾನಿ ಪದಕ್ಕೆ ಅರ್ಹರೋ ಅಲ್ಲವೋ ಅನ್ನುವ ಚರ್ಚೆಯೊಂದು ದೇಶಾದ್ಯಂತ ಚಾಲ್ತಿಯಲ್ಲಿದೆ. ಅವರ ಭಾಷಣ, ಭಾಷೆ, ಮ್ಯಾನರಿಸಂ.. ಎಲ್ಲವೂ ಸುದ್ದಿ ಮಾಧ್ಯಮಗಳ ಪ್ರಮುಖ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ‘ನನಗೆ ದೇಶ ಪ್ರಥಮ’ ಎಂದು ಹೇಳುವ ನರೇಂದ್ರ ಮೋದಿ ಮತ್ತು ಅವರ ದೇಶದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಮುಂತಾದ ಬೃಹತ್ ಕಾರ್ಪೊರೇಟ್‍ಗಳಿಗೆ ಮಾತ್ರ ಜಾಗ ಇರುತ್ತದೆ ಎಂದು ಹೇಳುವ ವಿರೋಧಿಗಳು ಮಾಧ್ಯಮಗಳನ್ನಿಡೀ ಆವರಿಸಿಕೊಂಡಿದ್ದಾರೆ. ಮೋದಿ ಎಂದಲ್ಲ, ಮಾಧ್ಯಮಗಳ ಮುಖಪುಟದಲ್ಲೋ ಪ್ರಮುಖ ಪುಟಗಳಲ್ಲೋ ಪ್ರಕಟವಾಗುವ ಎಷ್ಟು ಸುದ್ದಿಗಳು ಸಾಮಾಜಿಕ ನೆಲೆಗಟ್ಟನ್ನು ಪ್ರತಿನಿಧಿಸುತ್ತವೆ? ನೈತಿಕತೆಯ ಬಗ್ಗೆ, ಕುಸಿಯುತ್ತಿರುವ ಕೌಟುಂಬಿಕ ಪಾವಿತ್ರ್ಯತೆಯ ಬಗ್ಗೆ ಚರ್ಚಿಸುವುದಕ್ಕೆ ಮಾಧ್ಯಮಗಳು ಎಷ್ಟಂಶ ಉತ್ಸುಕವಾಗಿವೆ? ಅಷ್ಟಕ್ಕೂ, ಅಭಿವೃದ್ಧಿ ಎಂದರೆ, ರೂಪಾಯಿಯ ಮೌಲ್ಯ ಹೆಚ್ಚಾಗುವುದು, ರಸ್ತೆಗಳೆಲ್ಲಾ ಕಾಂಕ್ರೀಟೀಕರಣಗೊಳ್ಳುವುದು, ಬೃಹತ್ ಕಟ್ಟಡಗಳು ತಲೆ ಎತ್ತುವುದಷ್ಟೇ ಅಲ್ಲವಲ್ಲ. ಆ ಕಟ್ಟಡಗಳ ತುಂಬ ಅಭದ್ರ ಕುಟುಂಬಗಳು ವಾಸಿಸುತ್ತಿದ್ದರೆ, ಆ ಕಟ್ಟಡಗಳಿಗಾಗಿ ಹೆಮ್ಮೆ ಪಡುವುದಾದರೂ ಹೇಗೆ? ಕಾಂಕ್ರೀಟು ರಸ್ತೆಗಳಿಗಾಗಿ ಒಂದು ದೇಶ ಹೆಮ್ಮೆ ಪಡಬೇಕಾದರೆ ಆ ರಸ್ತೆಯಲ್ಲಿ ಸಾಗುವವರ ನೈತಿಕ ಆಲೋಚನೆಗಳು ಅಷ್ಟೇ ಪಾರದರ್ಶಕವಿರಬೇಕಲ್ಲವೇ? ಸದ್ಯದ ದಿನಗಳು ಹೇಗಿವೆ ಎಂದರೆ, ದೇಶವನ್ನು ಮುನ್ನಡೆಸುವವರು ಮತ್ತು ಅದರ ಕನಸು ಕಾಣುವವರೆಲ್ಲ ಜನಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಅವರ ಮಾತುಗಳು ಸಮಾಜದ ಮೂಲ ಸಂರಚನೆಯನ್ನು ಪ್ರತಿನಿಧಿಸುವುದೇ ಇಲ್ಲ. ರೂಪಾಯಿ ಅಪಮೌಲ್ಯ, ಹಗರಣ, ಪಾಕಿಸ್ತಾನ, ಅದೂ-ಇದೂಗಳ ಸುತ್ತವೇ ರಾಜಕಾರಣಿಗಳು ಸುತ್ತುತ್ತಿದ್ದಾರೆ. ಮಾಧ್ಯಮಗಳು ಅದನ್ನೇ ಪ್ರತಿದಿನ ಮೆಲ್ಲುತ್ತಿವೆ. ಹಾಗಂತ, ಇವು ಗಂಭೀರ ಸಮಸ್ಯೆಗಳು ಅಲ್ಲ ಎಂದಲ್ಲ. ಆದರೆ ಸಮಾಜದ ತಳಮಟ್ಟದ ಸಮಸ್ಯೆಗಳಿಗೆ ನಮ್ಮ ಚರ್ಚೆಯಲ್ಲಿ ಯಾವ ಪಾತ್ರವೂ ಸಿಗದೇ ಹೋದರೆ, ಬಲಿಷ್ಠ ಭಾರತವನ್ನು ಕಟ್ಟುವುದಾದರೂ ಹೇಗೆ? ಯಾವ ದೇಶದಲ್ಲಿ ಕೌಟುಂಬಿಕ ವಾತಾವರಣ ಚೆನ್ನಾಗಿರುವುದಿಲ್ಲವೋ ಆ ದೇಶದಲ್ಲಿ ಎಷ್ಟೇ ಬಲಿಷ್ಠ ಕಟ್ಟಡಗಳು ನಿರ್ಮಾಣಗೊಂಡರೂ ಯಾವ ಪ್ರಯೋಜನವೂ ಇಲ್ಲ. ನಿಜವಾಗಿ, ಕಟ್ಟಡವನ್ನು ಬಲಿಷ್ಠಗೊಳಿಸುವುದು ಅದರೊಳಗೆ ವಾಸಿಸುವ ಕುಟುಂಬಗಳು. ಸಿಮೆಂಟು, ಹೊೈಗೆ, ಕಲ್ಲು, ಕಬ್ಬಿಣ.. ಮುಂತಾದುವುಗಳೆಲ್ಲ ಒಂದು ಕಟ್ಟಡವನ್ನು ಬಲಿಷ್ಠಗೊಳಿಸಬಲ್ಲುದೇ ಹೊರತು ಕುಟುಂಬಗಳನ್ನಲ್ಲ ಅಥವಾ ಜನರ ಆಲೋಚನೆಗಳನ್ನಲ್ಲ. ಇವತ್ತು ಪ್ರತಿದಿನವೂ ಹೊಸ ಹೊಸ ವಿಚಾರಗಳ ಬಗ್ಗೆ ಸಂಶೋಧನೆಗಳಾಗುತ್ತಿವೆ. 10 ವರ್ಷಗಳ ಹಿಂದೆ ಒಂದು ಸೇತುವೆಯನ್ನು ಕಟ್ಟಲು ಎಷ್ಟು ಸಮಯ ಮತ್ತು ಶ್ರಮ ವ್ಯಯಿಸಲಾಗುತ್ತಿತ್ತೋ ಅಷ್ಟು ಶ್ರಮ ಮತ್ತು ಸಮಯ ಇವತ್ತು ವ್ಯಯಿಸಬೇಕಿಲ್ಲ. 20 ಮಂದಿ ಮಾಡುವ ಕೆಲಸವನ್ನು ಇವತ್ತು ಒಂದು ಮೆಷೀನು ಮಾಡುತ್ತದೆ. ಕೇವಲ ಸೇತುವೆ ಎಂದಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮಾರ್ಪಾಟುಗಳಾಗಿವೆ. ದುರಂತ ಏನೆಂದರೆ, ಈ ಆಧುನಿಕತೆಯ ಬಗ್ಗೆ ಚರ್ಚೆಗಳಾಗುವಷ್ಟು ಇವು ನಮ್ಮ ಆಲೋಚನೆ, ಜೀವನ ವಿಧಾನದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಚರ್ಚೆಗಳೇ ಆಗುತ್ತಿಲ್ಲ.
   ನಿಜವಾಗಿ, ರಾಜಕಾರಣಿಗಳು ಎತ್ತಿಕೊಂಡಿರುವ ವಿಷಯಗಳ ಸುತ್ತ ಮಾತ್ರ ಇವತ್ತು ಚರ್ಚೆ ನಡೆಯಬೇಕಾದ್ದಲ್ಲ. ರೂಪಾಯಿ ಅಪಮೌಲ್ಯಕ್ಕಿಂತಲೂ ವೇಗವಾಗಿ ದೇಶದ ನೈತಿಕ ನೆಲೆಗಟ್ಟು ಕುಸಿಯುತ್ತಿದೆ. ಆಧುನಿಕ ಜೀವನ ಕ್ರಮಗಳು ಪ್ರತಿ ಮನೆಯ ಮೇಲೂ ದಾಳಿ ಮಾಡುತ್ತಿವೆ. ವಿಚ್ಛೇದನ ಕೋರಿ ಸಲ್ಲಿಕೆಯಾಗುವ ದೂರುಗಳಲ್ಲಿ ವರ್ಷಂಪ್ರತಿ ಹೆಚ್ಚಳವಾಗುತ್ತಿದೆ. ಪರಾರಿಯಾಗುವ ಹೆಣ್ಮಕ್ಕಳು, ಆತ್ಮಹತ್ಯೆ ಮಾಡಿಕೊಳ್ಳುವ ಯುವಕರು, ಬೀದಿಪಾಲಾಗುವ ಹಿರಿಯರ ಸಂಖ್ಯೆ ದಿನೇದಿನೇ ಹೆಚ್ಚಾಗು ತ್ತಿದೆ. ಆದ್ದರಿಂದ ಪತ್ರಿಕೆಗಳ ತೀರಾ ಒಳಪುಟಗಳಲ್ಲಿ ಒಂದು ಕಾಲಮ್‍ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಈ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ವಾರದ ಏಳೂ ದಿನಗಳನ್ನು ರಾಜಕಾರಣಿಗಳಿಗೆ ವಿೂಸಲಿಡುವ ಬದಲು ಒಂದು ದಿನವನ್ನಾದರೂ ಪತ್ರಿಕೆಗಳು ತಮ್ಮ ಮುಖಪುಟವನ್ನು ಇಂಥ ಸುದ್ದಿಗಳಿಗೆ ವಿೂಸಲಿಡಬೇಕು. ಯಾಕೆಂದರೆ, ಮಾಧ್ಯಮ ಏನನ್ನು ಚರ್ಚಿಸುತ್ತದೋ ಅದನ್ನೇ ಸಮಾಜವೂ ಚರ್ಚಿಸುತ್ತದೆ. ಯಾವುದನ್ನು ಗಂಭೀರ ಸಮಸ್ಯೆ ಅನ್ನುತ್ತದೋ ಜನತೆಯೂ ಅದನ್ನೇ ಒಪ್ಪುತ್ತದೆ. ಆದ್ದರಿಂದಲೇ ಹೊಟೇಲು, ಗೂಡಂಗಡಿಗಳಲ್ಲಿ ಕುಳಿತ ಮಂದಿ ಪಕ್ಕದಲ್ಲಿ ನಡೆದ ಆತ್ಮಹತ್ಯೆಯ ಬದಲು ದೂರದ ಮೋದಿ, ಶಾರುಖ್ ಖಾನ್‍ಗಳ ಬಗ್ಗೆ ಚರ್ಚಿಸುವುದು.
   ಒಂದು ಸಮಾಜದ ಆರೋಗ್ಯವು ಆ ಸಮಾಜ ಕೌಟುಂಬಿಕ ವಾತಾವರಣವನ್ನು ಅವಲಂಬಿಸಿಕೊಂಡಿದೆ. ಕೊಲೆ, ಅತ್ಯಾಚಾರ, ಆತ್ಮಹತ್ಯೆ, ಪರಾರಿ..ಗಳು ಒಂದು ಸಮಾಜದಲ್ಲಿ ಮಾಮೂಲಿಯಾಗುತ್ತಿದೆಯೆಂದರೆ, ಆ ದೇಶ ದುರ್ಬಲವಾಗುತ್ತಿದೆ ಎಂದೇ ಅರ್ಥ. ಅಂಥ ದೇಶದಲ್ಲಿ ಮೋದಿ ಪ್ರಧಾನಿಯಾದರೂ ರಾಹುಲ್ ಪ್ರಧಾನಿಯಾದರೂ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಕೌಟುಂಬಿಕ ಭದ್ರತೆ, ನೈತಿಕ ಮೌಲ್ಯಗಳನ್ನು ಪಾಲಿಸುವ ಒಂದು ಸಮಾಜವನ್ನು ಕಟ್ಟುವಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಭ್ರಷ್ಟಾಚಾರ ಮುಕ್ತ ಭಾರತದಂತೆಯೇ ಅನೈತಿಕ ಮುಕ್ತ ಭಾರತದ ಘೋಷಣೆಯೂ ನಡೆಯಬೇಕಿದೆ. ಇಲ್ಲದಿದ್ದರೆ ಕಾಂಕ್ರೀಟು ಕಟ್ಟಡ ಮತ್ತು ರಸ್ತೆಗಳಲ್ಲಿ ಮಾತ್ರ ಭಾರತ ಬಲಿಷ್ಠವಾದೀತು, ನೈತಿಕವಾಗಿ ಅಲ್ಲ.

No comments:

Post a Comment