Monday, 23 December 2024

ವಕ್ಫ್: ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಲು ಹೋಗಿ ಸ್ವಯಂ ಕಟಕಟೆಗೇರಿದವರ ಕತೆ





ಎರಡ್ಮೂರು ತಿಂಗಳ ಹಿಂದೆ ಭಾರೀ ವಿಜೃಂಭಣೆಯಿಂದ  ಉದ್ಘಾಟನೆಗೊಂಡ ‘ವಕ್ಫ್’ ವಿಷಯ ನಿಧಾನಕ್ಕೆ ತನ್ನೆಲ್ಲಾ  ಆಕರ್ಷಣೆಯನ್ನು ಕಳಕೊಂಡು ಮುಗಿದ ಅಧ್ಯಾಯವಾಗುವ ಹಂತಕ್ಕೆ ಬಂದು ನಿಂತಿದೆ.

ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಬ್ಯಾಂಡು-ಮದ್ದಳೆಯೊಂದಿಗೆ ಘೋಷಿಸಿದ ಕೇಂದ್ರ ಸರಕಾರ,  ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲೂ ಮಂಡಿಸಿತು. ಆ ಕ್ಷಣದಿಂದ ಮಾಧ್ಯಮಗಳಲ್ಲಿ ಕಟ್ಟುಕತೆಗಳ ಕಂತೆ  ಕಂತೆ ಸುಳ್ಳುಗಳು ಪ್ರಸಾರವಾಗತೊಡಗಿದುವು. ಸ್ವಾತಂತ್ರ‍್ಯ ಲಭಿಸಿ 75 ವರ್ಷಗಳ ವರೆಗೆ ವಿವಾದವೇ ಆಗದಿದ್ದ ಮತ್ತು  ಹಿಂದೂಗಳ ಆಸ್ತಿಗಳಿಗೆ ಸಂಚಕಾರವೆಂದು  ಗುರುತಿಸಿಕೊಳ್ಳದಿದ್ದ ವಕ್ಫ್ ಕಾಯ್ದೆಯು ದಿಢೀರ್ ಆಗಿ ಕೋರೆ ಹಲ್ಲುಗಳುಳ್ಳ,  ಚೂಪು ಉಗುರುಗಳು ಮತ್ತು ರಾಕ್ಷಸ ಗುಣಗಳುಳ್ಳ ಹಿಂದೂ ವಿರೋಧಿ ಕಾಯ್ದೆಯಾಗಿ ಗುರುತಿಸಿಕೊಂಡಿತು. ಟಿವಿ ಚಾನೆಲ್‌ಗಳ ಆ್ಯಂಕರ್‌ಗಳು ಎಲ್ಲಿಯವರೆಗೆ ಭೀತಿಯನ್ನು ಹುಟ್ಟಿಸಿದರೆಂದರೆ, ‘ಓರ್ವ ಮುಸ್ಲಿಮ್ ವ್ಯಕ್ತಿ ಹಿಂದೂ ವ್ಯಕ್ತಿಯ ಮನೆಯ ಅಂಗಳದಲ್ಲಿ ನಿಂತು, ‘ಇದು ವಕ್ಫ್ ಭೂಮಿ’ ಎಂದು ಹೇಳಿದರೆ ಸಾಕು, ಅದು ವಕ್ಫ್ ಆಸ್ತಿಯಾಗಿ ಮಾರ್ಪಡುತ್ತದೆ..’  ಎಂದು ಹೇಳಿದರು. ಇದನ್ನೇ ರಾಜಕಾರಣಿಗಳೂ ಹೇಳತೊಡಗಿದರು. ವಕ್ಫ್ ಟ್ರಿಬ್ಯೂನಲ್ ಅನ್ನು ‘ಖಾಝಿ  ನ್ಯಾಯಾಲಯದಂತೆ’ ಬಿಂಬಿಸಿದರು. ಮುಸ್ಲಿಮರಿಂದ ಮುಸ್ಲಿಮರಿಗೆ ಮತ್ತು ಮುಸ್ಲಿಮರಿಗೋಸ್ಕರ ಇರುವ ನ್ಯಾಯಾಲಯ  ಎಂದು ವಕ್ಫ್ ಟ್ರಿಬ್ಯೂನಲ್ ಅನ್ನು ವ್ಯಾಖ್ಯಾನಿಸಿದರು. ಈ ದೇಶದಲ್ಲಿ ಅತೀ ಹೆಚ್ಚು ಭೂಮಿ ರೈಲ್ವೆ ಇಲಾಖೆಯಲ್ಲಿದ್ದರೆ  ನಂತರದ ಸ್ಥಾನ ವಕ್ಫ್ ಇಲಾಖೆಯದ್ದು ಎಂದೂ ಪ್ರಚಾರ ಮಾಡಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಕೇಂದ್ರ ಸರಕಾರದ ಹಿಂದಿನ ಉದ್ದೇಶವೂ ಇಂಥ  ಚರ್ಚೆಗಳನ್ನು ಹುಟ್ಟು ಹಾಕುವುದೇ ಇದ್ದಿರಬೇಕು. ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಮತ್ತು ಈ ದೇಶದ ಯಾವ  ಕಾನೂನೂ ಅನ್ವಯವಾಗದ ವಿಶೇಷ ದರ್ಜೆಯ ಸಮುದಾಯದಂತೆ ಬಿಂಬಿಸುವುದನ್ನು ಕೇಂದ್ರ ಬಯಸಿರಬೇಕು.  ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸುವ ಮೂಲಕ ಕೇಂದ್ರ ಸರಕಾರ ಈ ತಂತ್ರದಲ್ಲಿ ಯಶಸ್ಸನ್ನೂ ಪಡೆಯಿತು.  

ಮುಸ್ಲಿಮ್ ಸಮುದಾಯದ ಪಾಲಿಗೆ ಇದು ದಿಢೀರ್ ಸವಾಲಾಗಿತ್ತು. ಮಾಧ್ಯಮಗಳು ಮತ್ತು ರಾಜಕಾರಣಿಗಳು  ಹರಿಯಬಿಡುತ್ತಿರುವ ಮಾಹಿತಿಗಳು ಮತ್ತು ವ್ಯಾಖ್ಯಾನಗಳಿಗೆ ತರ್ಕಬದ್ಧ ಮತ್ತು ಆಧಾರರಹಿತ ಉತ್ತರ ನೀಡುವುದಕ್ಕೆ  ಮಾಹಿತಿಗಳನ್ನು ಕಲೆ ಹಾಕಬೇಕಿತ್ತು. ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯಲ್ಲಿ ಏನೇನಿದೆ ಮತ್ತು ತಿದ್ದುಪಡಿ ಕಾಯ್ದೆಯಲ್ಲಿ ಏನೇನು  ಇದೆ ಎಂಬುದನ್ನು ಅಧ್ಯಯನ ನಡೆಸಬೇಕಿತ್ತು. ಸೋಶಿಯಲ್ ಮೀಡಿಯಾವೂ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಭಾರೀ  ಬಿರುಸಿನಿಂದ ಹಂಚಿಕೆಯಾಗುತ್ತಿರುವ ಸುದ್ದಿಗಳಲ್ಲಿ ಸತ್ಯವೆಷ್ಟು ಮತ್ತು ಸುಳ್ಳೆಷ್ಟು ಎಂಬುದನ್ನು ಜರಡಿ ಹಿಡಿದು  ವಿಭಜಿಸಬೇಕಿತ್ತು. ಮುಸ್ಲಿಮ್ ಸಮುದಾಯದ ಮುಂದಿದ್ದ ಈ ಸವಾಲಿನ ಸಣ್ಣ ಅವಧಿಯನ್ನು ಮುಸ್ಲಿಮ್ ದ್ವೇಷಿಗಳು ಚೆನ್ನಾಗಿ  ಬಳಸಿಕೊಂಡರು. ಇದೇವೇಳೆ,

ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನೆಗಾಗಿ ಜಂಟಿ ಪಾರ್ಲಿಮೆಂಟರಿ ಸಮಿತಿ(ಜೆಪಿಸಿ)ಯನ್ನು  ರಚಿಸಿತು. ನಿಜವಾಗಿ, ಕೇಂದ್ರ ಸರಕಾರಕ್ಕೆ ಈ ಜೆಪಿಸಿ ರಚನೆ ಇಷ್ಟವಿರಲಿಲ್ಲ. ತರಾತುರಿಯಿಂದ ಕಾಯ್ದೆಯನ್ನು ಅಂಗೀಕರಿಸಿ  ಮುಸ್ಲಿಮ್ ಸಮುದಾಯವನ್ನು ಕೆರಳಿಸುವ ಉದ್ದೇಶ ಇತ್ತೋ ಏನೋ? ಆದರೆ ವಿರೋಧ ಪಕ್ಷಗಳ ಒತ್ತಡ ಮತ್ತು ಮೈತ್ರಿ  ಪಕ್ಷಗಳ ಪರೋಕ್ಷ ಒತ್ತಡಗಳಿಗೆ ಮಣಿದು ಜೆಪಿಸಿಯನ್ನು ರಚಿಸಿತು. ಇದು ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯನ್ನು ಮತ್ತು  ಮಾಧ್ಯಮಗಳು ಹಾಗೂ ರಾಜಕಾರಣಿಗಳು ಹರಡುತ್ತಿರುವ ಸುಳ್ಳುಗಳನ್ನು ಜನರ ಮುಂದಿಡುವುದಕ್ಕೆ ಮುಸ್ಲಿಮರಿಗೆ ಅವಕಾಶವನ್ನು ಒದಗಿಸಿತು. ಒಂದು ಕಡೆ,
ಜೆಪಿಸಿಯ ಸದಸ್ಯರು ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿರುವ ಲೋಪಗಳನ್ನು ಬಹಿರಂಗಕ್ಕೆ ತಂದರೆ ಇನ್ನೊಂದು ಕಡೆ ವಿವಿಧ  ಮುಸ್ಲಿಮ್ ಸಂಘಟನೆಗಳು ವಕ್ಫ್ ನ  ಹಿನ್ನೆಲೆ ಮತ್ತು ಅದರ ಮಹತ್ವವನ್ನು ಸಾರ್ವಜನಿಕವಾಗಿ ವಿವರಿಸತೊಡಗಿದರು. ಈ  ದೇಶದ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾದ ಮೂಲಕ ವಕ್ಫ್ ನ  ಸುತ್ತ ಅಧ್ಯಯನ ಆಧಾರಿತ ಮಾಹಿತಿಗಳನ್ನು  ಹಂಚಿಕೊಳ್ಳತೊಡಗಿದರು. ಹೀಗೆ ಸುಳ್ಳಿಗೆ ಸತ್ಯದ ಮೂಲಕ ಒಂದೊಂದೇ  ಏಟುಗಳು ಬೀಳತೊಡಗಿದಂತೆಯೇ ಚರ್ಚೆಯನ್ನು ಹುಟ್ಟು ಹಾಕಿದವರೇ ಮುಕ್ತಾಯಕ್ಕೆ ಅವಸರಿಸತೊಡಗಿದರು. ನಿಜವಾಗಿ,

ವಕ್ಫ್ ಟ್ರಿಬ್ಯೂನಲ್ ಎಂಬುದು ಕುಟುಂಬ ನ್ಯಾಯಾಲಯದಂತೆ ಶೀಘ್ರ ನ್ಯಾಯ ವಿತರಣೆಗಾಗಿ ಮಾಡಿಕೊಂಡ ವ್ಯವಸ್ಥೆಯೇ  ಹೊರತು ಅವೇನೂ ಮುಸ್ಲಿಮರ ನ್ಯಾಯಾಲಯವಲ್ಲ. ಈ ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಹೈಕೋರ್ಟ್ ನ  ಮುಖ್ಯ  ನ್ಯಾಯಾಧೀಶರೇ ನೇಮಿಸುತ್ತಾರೆ. ಬೆಂಗಳೂರಿನಲ್ಲಿರುವ ವಕ್ಫ್ ಟ್ರಿಬ್ಯೂನಲ್‌ನ ನ್ಯಾಯಾಧೀಶರಾಗಿ ಸುಧಾ ಸೀತಾರಾಂ  ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಕ್ಫ್ ಟ್ರಿಬ್ಯೂನಲ್‌ನ ಗುಲ್ಬರ್ಗಾ ಪೀಠದ ನ್ಯಾಯಾಧೀಶರಾಗಿ ಶ್ರೀನಿವಾಸನ್  ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಕಠಿಯಾಣಿಯವರು ಬೆಂಗಳೂರು ಪೀಠದ ನ್ಯಾಯಾಧೀಶರಾಗಿದ್ದಾರೆ. ಗುರುರಾಜ್  ಅವರು ಮೈಸೂರು ಟ್ರಿಬ್ಯೂನಲ್ ಪೀಠದ ನ್ಯಾಯಾಧೀಶರಾಗಿದ್ದಾರೆ. ಇವರೆಲ್ಲ ಆಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಹಾಗೆ,

ಈ ದೇಶದಲ್ಲಿ ಎಲ್ಲೆಲ್ಲ ವಕ್ಫ್ ಭೂಮಿ ಇದೆ ಎಂಬುದನ್ನು ತೀರ್ಮಾನಿಸಿದ್ದು ಮುಸ್ಲಿಮರಲ್ಲ ಅಥವಾ ಯಾವುದೇ ಸಚಿವರೋ  ಶಾಸಕರೋ ಅಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್ ಬಂದ  ಬಳಿಕ ಅದು ದಾಖಲೀಕರಣಗೊಂಡು ಆಗಿರುವ ಬೆಳವಣಿಗೆ ಇದು. ಈ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮರ ಪಾತ್ರ ಶೂನ್ಯಾತಿಶೂನ್ಯ. ಹೀಗೆ ಸರಕಾರವೇ ಜಾರಿ ಮಾಡಿದ ಗಜೆಟೆಡ್ ನೋಟಿಫಿಕೇಶನ್‌ನ ಆಧಾರದಲ್ಲಿ ಕಂದಾಯ ಇಲಾಖೆ  ನೋಟೀಸು ಜಾರಿ ಮಾಡುತ್ತದೆಯೇ ಹೊರತು ಯಾವುದೇ ಸಚಿವರು ಅಥವಾ ಶಾಸಕರಿಗೆ ಹಾಗೆ ಮಾಡುವುದಕ್ಕೆ ಅವಕಾಶವೂ ಇಲ್ಲ. ಯಾವ ಭೂಮಿಯನ್ನು ಕಂದಾಯ ಇಲಾಖೆ ವಕ್ಫ್ ಎಂದು ನೋಟೀಸು ಮಾಡಿದೆಯೋ ಅದನ್ನು ರಕ್ಷಿಸುವ  ಜವಾಬ್ದಾರಿ ಮಾತ್ರ ವಕ್ಫ್ ಇಲಾಖೆಯದ್ದು. ಅದರಾಚೆಗೆ ಅದಕ್ಕೆ ಸ್ವಯಂ ನೋಟೀಸು ಕಳುಹಿಸುವ ಅಥವಾ ಆಸ್ತಿ ಕಬಳಿಸುವ  ಯಾವ ಅಧಿಕಾರವೂ ಇಲ್ಲ. ನಮ್ಮದೇ ರಾಜ್ಯದಲ್ಲಿ ಸರಕಾರಿ ಗಜೆಟೆಡ್ ನೋಟಿಫಿಕೇಶನ್‌ನ ಪ್ರಕಾರ ಒಂದು ಲಕ್ಷದ 80  ಸಾವಿರ ಎಕ್ರೆ ವಕ್ಫ್ ಆಸ್ತಿಯಿದೆ. ಆದರೆ, ಈಗ ವಕ್ಫ್ ಬೋರ್ಡಿನ ಅಧೀನದಲ್ಲಿರುವುದು ಕೇವಲ 20 ಸಾವಿರದ 400 ಎಕ್ರೆ  ಆಸ್ತಿ ಮಾತ್ರ. ಉಳಿದ ಅಷ್ಟೂ ಆಸ್ತಿಗಳು ಇನಾಮ್ ಅಬಾಲಿಷನ್ ಕಾಯ್ದೆ, ಭೂ  ಸುಧಾರಣಾ ಕಾಯ್ದೆ, ಸರಕಾರಿ ಒತ್ತುವರಿ  ಮತ್ತು ಖಾಸಗಿ ವ್ಯಕ್ತಿಗಳ ಒತ್ತುವರಿಯಿಂದಾಗಿ ಕಣ್ಮರೆಯಾಗಿದೆ. ಹಾಗಂತ,

ವಕ್ಫ್ ಇಲಾಖೆಯು ಸರಕಾರಿ ಒತ್ತುವರಿಯ ಭೂಮಿಯನ್ನಾಗಲಿ, ಭೂಸುಧಾರಣೆಯಿಂದಾಗಿ ಕಳಕೊಂಡ ಭೂಮಿಯನ್ನಾಗಲಿ  ಅಥವಾ ಇನಾಮ್ ಅಬಾಲಿಷನ್ ಕಾಯ್ದೆಯಿಂದ ಕಳಕೊಂಡ ಭೂಮಿಯನ್ನಾಗಲಿ ಈವರೆಗೂ ಕೇಳಿಲ್ಲ. ಅದು ಈಗ  ನೋಟೀಸು ಕಳುಹಿಸಿರುವುದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮಾತ್ರ. ಅದರಲ್ಲೂ ಹೀಗೆ  ಕಂದಾಯ ಇಲಾಖೆ ನೋಟೀಸು ಕಳುಹಿಸುವ ಮೊದಲು ವಕ್ಫ್ ಅದಲಾತ್ ಅನ್ನು ನಡೆಸಲಾಗುತ್ತದೆ. ಈ ಅದಾಲತ್‌ನಲ್ಲಿ  ರಾಜ್ಯದ ಅಲ್ಪಸಂಖ್ಯಾತ ಸಚಿವರು ಮಾತ್ರ ಇರುವುದಲ್ಲ. ಉಪ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಆಯಾ ಜಿಲ್ಲೆಯ ಎಲ್ಲ  ಶಾಸಕರೂ ಇರುತ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಅದಾಲತ್ ನಡೆಸಿದ ಬಳಿಕ ವಕ್ಫ್ ಭೂಮಿಯನ್ನು ಒತ್ತುವರಿ  ಮಾಡಿಕೊಂಡವರಿಗೆ ನೋಟೀಸು ಕಳುಹಿಸಲಾಗುತ್ತದೆ. ಇದರಲ್ಲೂ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ.  ಬಸವರಾಜ್ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ನಡೆಸಲಾದ ವಕ್ಫ್ ಅದಾಲತ್‌ನ ನೇತೃತ್ವವನ್ನು ಸಚಿವೆ ಶಶಿಕಲಾ ಜೊಲ್ಲೆ  ನಿರ್ವಹಿಸಿದ್ದರು. ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಂಡವರಿಗೆ 2 ಸಾವಿರಕ್ಕಿಂತಲೂ ಅಧಿಕ ನೋಟೀಸುಗಳನ್ನು ಆ  ಸಮಯದಲ್ಲಿ ಕಳುಹಿಸಲಾಗಿತ್ತು. ಹಾಗಂತ, ಈ ನೋಟೀಸೇ ಅಂತಿಮವಲ್ಲ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ತೀರ್ಪು ತಮ್ಮ ಪರ  ಬರದೇ ಇದ್ದರೆ ಅದನ್ನು ಪ್ರಶ್ನಿಸಿ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿಗೆ ಹೋಗುವ ಎಲ್ಲ ಅವಕಾಶಗಳೂ  ಕಕ್ಷಿದಾರರಿಗೆ ಮುಕ್ತವಾಗಿರುತ್ತದೆ. ಒಂದುರೀತಿಯಲ್ಲಿ,


ಜನಸಾಮಾನ್ಯರ ಪಾಲಿಗೆ ಅಪರಿಚಿತವಾಗಿದ್ದ ವಕ್ಫ್ ವಿಷಯವನ್ನು ಪರಿಚಿತಗೊಳಿಸುವುದಕ್ಕೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸಬೇಕೆಂದು ತಂತ್ರ  ಹೆಣೆದವರು ನಿಧಾನಕ್ಕೆ ಸ್ವಯಂ ಕಟಕಟೆಯಲ್ಲಿ ನಿಲ್ಲ ತೊಡಗಿದ್ದಾರೆ.

Wednesday, 18 December 2024

ಬಲಿಷ್ಠ ಅಸದ್‌ರನ್ನೇ ಪದಚ್ಯುತಗೊಳಿಸಿದ ಈ ಜುಲಾನಿ ಯಾರು?




ಕಳೆದ 24 ವರ್ಷಗಳಿಂದ ಅಧ್ಯಕ್ಷರಾಗಿದ್ದ ಸಿರಿಯದ ಬಶ್ಶಾರುಲ್ ಅಸದ್ ಅವರ ಯುಗ ಕೊನೆಗೊಂಡಿದೆ. ಇರಾಕ್‌ನ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ಕ್ಯಾಂಪ್ ಬುಕ್, ಕ್ಯಾಂಪ್ ಕ್ರೋಪ್ಟರ್, ಅಲ್ ತಜ್ಜಿ ಮುಂತಾದ ಅತಿಕ್ರೂರ ಜೈಲುಗಳಲ್ಲಿ 5 ವರ್ಷಗಳ ಕಾಲ ಇದ್ದು, ತನ್ನ ತಲೆಗೆ ಅಮೆರಿಕದಿಂದ 10 ಬಿಲಿಯನ್ ಡಾಲರ್ ಘೋಷಿಸಲ್ಪಟ್ಟ ಅಬೂ ಮುಹಮ್ಮದ್ ಅಲ್ ಜುಲಾನಿ ಎಂಬ ಮಧ್ಯ ವಯಸ್ಸಿನ ವ್ಯಕ್ತಿ ಇದೀಗ ಸಿರಿಯದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಜುಲಾನಿ ನೇತೃತ್ವದ ಹಯಾತ್ ತಹ್ರೀರ್ ಅಲ್ ಶಾಂ (HTS) ಎಂಬ ಸಶಸ್ತ್ರ  ಹೋರಾಟಗಾರರ ಗುಂಪು ಸಿರಿಯಾದಲ್ಲಿ ವಿಜಯ ಪತಾಕೆ ಹಾರಿಸಿದೆ. ಅಸದ್‌ರಿಂದ ಸಿರಿಯಾವನ್ನು ವಿಮೋಚನೆಗೊಳಿಸಿದೆ. ಈ ಜುಲಾನಿಯನ್ನು ತಾನು ಹತ್ಯೆ ಮಾಡಿರುವುದಾಗಿ ಈ ವಿಮೋಚನೆಗಿಂತ ಎರಡು ವಾರಗಳ ಮೊದಲು ರಷ್ಯಾ ಘೋಷಿಸಿತ್ತು. ಜುಲಾನಿಯ ಚಿತ್ರವನ್ನೂ ಬಿಡುಗಡೆಗೊಳಿಸಿತ್ತು. ಆದರೆ, ಇಂಥ ಹತ್ತು ಹಲವು ಅಡೆತಡೆಗಳು ಮತ್ತು ಸುಳ್ಳುಗಳನ್ನು ದಾಟಿ ಜುಲಾನಿ ಇದೀಗ ಕ್ರಾಂತಿಯೊಂದಕ್ಕೆ ಯಶಸ್ವಿ ನೇತೃತ್ವ ನೀಡಿದ ದಂಡನಾಯಕನಾಗಿ ಗುರುತಿಸಿಕೊಂಡಿದ್ದಾರೆ.

2011ರಲ್ಲಿ ಟುನೀಷ್ಯಾದಲ್ಲಿ ಅರಬ್ ಕ್ರಾಂತಿ ಪ್ರಾರಂಭವಾಯಿತು. ಬಹು ಬೇಗನೇ ಅದು ಈಜಿಪ್ಟಿಗೂ ಕಾಲಿಟ್ಟಿತು. ಸ್ವೇಚ್ಛಾಧಿಪತಿಗಳಿಂದ ತಮ್ಮ ನಾಡನ್ನು ವಿಮೋಚನೆಗೊಳಿಸುವುದು ಈ ಕ್ರಾಂತಿಯ ಗುರಿಯಾಗಿತ್ತು. 23 ವರ್ಷಗಳಿಂದ ಅಧಿಕಾರದಲ್ಲಿದ್ದ ಝೈನುಲ್ ಆಬಿದೀನ್ ವಿರುದ್ಧ ಟುನೀಷ್ಯಾದಲ್ಲಿ 2010 ಡಿ. 17 ರಂದು ಪ್ರತಿಭಟನೆ ಆರಂಭವಾಯಿತು. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನರು ತೀವ್ರವಾಗಿ ಕಂಗೆಟ್ಟಿದ್ದರು. ಇದೇವೇಳೆ, ರಸ್ತೆ ಬದಿ ಹಣ್ಣು-ಹಂಪಲು ಮಾರುತ್ತಿದ್ದ ಅಬ್ದುಲ್ ಅಝೀಝ್ ಎಂಬ ಪದವೀಧರ ಯುವಕನನ್ನು ಪೊಲೀಸರು ಥಳಿಸಿದರು. ಈ ಥಳಿತವೇ ಪ್ರಭುತ್ವ ವಿರೋಧಿ ಹೋರಾಟಕ್ಕೆ ಕಿಚ್ಚನ್ನು ಹಚ್ಚಿತು. ಕೇವಲ 27 ದಿನಗಳೊಳಗೆ ಅಧ್ಯಕ್ಷ ಝೈನುಲ್ ಆಬಿದೀನ್ ಟುನೀಷ್ಯಾದಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದರು. ಇದೇ ಸಂದರ್ಭದಲ್ಲಿ,

ಸಿರಿಯಾದಲ್ಲಿ 14 ವರ್ಷದ ಮೌವಲಿಯ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿ ತೀವ್ರವಾಗಿ ಹಿಂಸಿಸಿದರು. ಈ ಹುಡುಗರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ಹೆತ್ತವರು ಮತ್ತು ಬಂಧುಗಳ ವಿರುದ್ಧ ಪೊಲೀಸರು ಲಾಠಿಚಾರ್ಚ್, ರಬ್ಬರ್ ಗುಂಡು ಮತ್ತು ಅಶ್ರುವಾಯು ಪ್ರಯೋಗಿಸಿದರು. ಹೀಗೆ ಪ್ರತಿಭಟನೆಯನ್ನು ಮಟ್ಟಹಾಕಿದ ಪೊಲೀಸರು ಬಂಧನದ 26 ದಿನಗಳ ಬಳಿಕ ಹುಡುಗರನ್ನು ಬಿಡುಗಡೆಗೊಳಿಸಿದರು. ಈ ಘಟನೆ ನಡೆದಿರುವುದು ಪಶ್ಚಿಮ ಸಿರಿಯದ ದಾರಾ ನಗರದಲ್ಲಿ. ಬಿಡುಗಡೆಗೊಂಡ ಬಳಿಕ ಅಧ್ಯಕ್ಷ ಅಸದ್‌ರನ್ನು ಗುರಿಯಾಗಿಸಿ ದಾರಾ ನಗರದ ಮುಖ್ಯ ಗೋಡೆಯಲ್ಲಿ ಈ ಮೌವಲಿಯ, `ಇದು ನಮ್ಮ ವಿಶ್ವಾಸ (ಈಮಾನ್) ಡಾಕ್ಟರ್...' ಎಂಬ ಬರಹವನ್ನು ಬರೆದ. ಅಧ್ಯಕ್ಷ ಬಶ್ಶಾರುಲ್ ಅಸದ್ ಕಣ್ಣಿನ ವೈದ್ಯರಾಗಿದ್ದರು. `ನಾವು ಹೆದರಲ್ಲ, ಬಗ್ಗಲ್ಲ' ಎಂಬ ಅರ್ಥದ ಈ ಬರಹ ಕ್ಷಣ ಮಾತ್ರದಲ್ಲಿ ವೈರಲ್ ಆಯಿತು. ಮಾಧ್ಯಮಗಳು ಅದನ್ನು ಎತ್ತಿಕೊಂಡವು. ಸೋಶಿಯಲ್ ಮೀಡಿಯದಲ್ಲೂ ಹಂಚಿಕೆಯಾಯಿತು. ಇದುವೇ ಅಸದ್ ರಾಜೀನಾಮೆಯನ್ನು ಒತ್ತಾಯಿಸಿ 2011 ಮಾರ್ಚ್ ನಲ್ಲಿ  ನಡೆದ ಪ್ರಥಮ ಪ್ರತಿಭಟನೆಗೆ ಕಾರಣವೂ ಆಯಿತು. 2011ರ ಜುಲೈಯಲ್ಲಿ `ಫ್ರೀ ಸಿರಿಯನ್ ಆರ್ಮಿ' ಎಂಬ ವಿಮೋಚನಾ ಗುಂಪು ರಚನೆಗೊಂಡಿತು. ಇದೇ ಸಂದರ್ಭದಲ್ಲಿ 5 ವರ್ಷಗಳ ಕಾಲ ಅಮೆರಿಕದ ಜೈಲಲ್ಲಿದ್ದು ಬಿಡುಗಡೆಗೊಂಡು ಇರಾಕ್‌ನಲ್ಲಿದ್ದ ಜುಲಾನಿ ನೇರ ಸಿರಿಯಕ್ಕೆ ಬಂದು ವಿಮೋಚನಾ ಪ್ರತಿಭಟನೆಯಲ್ಲಿ ಸೇರಿಕೊಂಡ.

ಈ ಜುಲಾನಿಗೆ ಒಂದು ಕ್ರಾಂತಿಕಾರಿ ಹಿನ್ನೆಲೆಯಿದೆ. ಈ ಜುಲಾನಿ ಹುಟ್ಟಿದ್ದು 1982ರಲ್ಲಿ, ಸೌದಿ ಅರೇಬಿಯಾದಲ್ಲಿ. ಹಾಗಂತ, ಈತ ಸೌದಿ ಅರೇಬಿಯದವರಲ್ಲ. ಈ ಜುಲಾನಿಯ ತಂದೆಯ ಕುಟುಂಬ ಸಿರಿಯದ ಗೋಲಾನ್ ಬೆಟ್ಟದಲ್ಲಿ ವಾಸವಾಗಿತ್ತು. 1967ರಲ್ಲಿ ಇಸ್ರೇಲ್ ಜೊತೆ ನಡೆದ 6 ದಿನಗಳ ಯುದ್ಧದಲ್ಲಿ ಗೋಲಾನ್ ಬೆಟ್ಟ ಇಸ್ರೇಲ್‌ನ ವಶವಾಯಿತು. ಜುಲಾನಿಯ ತಂದೆಯ ಹೆತ್ತವರು ಈ ಗೋಲಾನ್ಸಿ ಬೆಟ್ಟದಿಂದ ಸಿರಿಯದ ಇತರ ಭಾಗಕ್ಕೆ ವಲಸೆ ಬಂದರು. ಬಳಿಕ ಸರಕಾರದ ವಿರುದ್ಧ ಪ್ರತಿಕ್ರಾಂತಿಗೆ ಪ್ರಚೋದಿಸಿದರೆಂದು ಹೇಳಿ ಆಗಿನ ಬಾತಿಸ್ಟ್ ಪಕ್ಷದ ಆಡಳಿತ ಜುಲಾನಿಯ ತಂದೆ ಅಹ್ಮದ್ ಹುಸೈನ್ ಅಲ್ ಶರಾಂರನ್ನು ಬಂಧಿಸಿತು. ಜೈಲಿನಿಂದ ತಪ್ಪಿಸಿಕೊಂಡ ಅವರು ನೇರ ಇರಾಕಿಗೆ ತೆರಳಿ ಅಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ಆಗ ಇಸ್ರೇಲ್ ವಿರುದ್ಧ ಯಾಸಿರ್ ಅರಫಾತ್ ನೇತೃತ್ವದ ಪಿಎಲ್‌ಓ ಹೋರಾಟದಲ್ಲಿ ಸಕ್ರಿಯವಾಗಿತ್ತು. ಅದಕ್ಕೆ ಬೆಂಬಲ ಸಾರಿ ಅವರು ಜೋರ್ಡಾನ್‌ಗೆ ಹೋದರು. 1970ರಲ್ಲಿ ಮರಳಿ ಸಿರಿಯಕ್ಕೆ ಬಂದರು. ಇದೀಗ ಪದಚ್ಯುತಗೊಂಡ ಬಶ್ಶಾರುಲ್ ಅಸದ್ ಅವರ ತಂದೆ ಹಾಫಿಝ್ ಅಸದ್‌ರು ಆಗ ಸಿರಿಯದ ಅಧ್ಯಕ್ಷರಾಗಿದ್ದರು. ಅವರ ಆಡಳಿತದ ವಿರುದ್ಧ ಹೋರಾಟ ಸಂಘಟಿಸಿದ ಕಾರಣಕ್ಕಾಗಿ ಬಂಧನಕ್ಕೀಡಾದರು. ಬಿಡುಗಡೆಯ ಬಳಿಕ ನೇರ ಸೌದಿಗೆ ಹೋಗಿ ಅಲ್ಲಿನ ತೈಲ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದ ವೇಳೆ 1982ರಲ್ಲಿ ಈ ಜುಲಾನಿಯ ಜನನವಾಯಿತು. 1989ರಲ್ಲಿ ಈ ಕುಟುಂಬ ಸಿರಿಯಾಕ್ಕೆ ಮರಳಿತು.

`ಇಸ್ರೇಲ್ ವಿರುದ್ಧ ಹಮಾಸ್ ಕೈಗೊಂಡ ಎರಡನೇ ಇಂತಿಫಾದ ಹೋರಾಟದ ವೇಳೆ ತನಗೆ 18 ವರ್ಷವಾಗಿತ್ತು ಮತ್ತು ಫೆಲೆಸ್ತೀನಿನ ಸಂತ್ರಸ್ತರಿಗೆ ತಾನೇನು ಮಾಡಬಲ್ಲೆ ಎಂಬ ಯೋಚನೆ ತನ್ನಲ್ಲಿ ಹುಟ್ಟಿಕೊಂಡಿತ್ತು...' ಎಂದು ಇದೇ ಜುಲಾನಿ ಅಮೆರಿಕ `ಫ್ರಂಟ್ ಲೈನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದಿದೆ. ಅಮೆರಿಕದ ವಿರುದ್ಧ ಹೋರಾಟ ನಡೆಸುವುದಕ್ಕಾಗಿ 2003ರಲ್ಲಿ ಇರಾಕ್‌ಗೆ ಹೋದ ಈ ಜುಲಾನಿ ಅಲ್ ಕಾಯಿದಾ ಸೇರಿದ. 2006ರಲ್ಲಿ ಅಮೆರಿಕನ್ ಸೇನೆ ಈ ಜುಲಾನಿಯನ್ನು ಬಂಧಿಸಿತಲ್ಲದೇ ಕುಪ್ರಸಿದ್ಧ ಅಬೂ ಗುರೈಬ್ ಸೇರಿದಂತೆ ವಿವಿಧ ಜೈಲಲ್ಲಿಟ್ಟು ಹಿಂಸಿಸಿತು. 2011ರಲ್ಲಿ ಬಿಡುಗಡೆಗೊಂಡಾಗ ಸಿರಿಯದಲ್ಲಿ ಅಸದ್ ಆಡಳಿತದ ವಿರುದ್ಧ ಪ್ರತಿಭಟನೆ ಪ್ರಾರಂಭವಾಗಿತ್ತು. ಇರಾಕ್‌ನಿಂದ ನೇರ ಸಿರಿಯಾದ ಇದ್ಲಿಬ್ ನಗರಕ್ಕೆ ಬಂದ ಈ ಜುಲಾನಿ, ಅಲ್ಲಿ ಅಲ್ ಕಾಯಿದಾವನ್ನು ಗಟ್ಟಿಗೊಳಿಸಿದ. ಐಸಿಸ್‌ನ ಅಬೂಬಕರ್ ಅಲ್ ಬಗ್ದಾದಿ ಜೊತೆ ಸೇರಿ ಕೆಲಸ ಪ್ರಾರಂಭಿಸಿದ. 2013ರಲ್ಲಿ ಅಲ್ ಕಾಯಿದಾದ ಜೊತೆ ಸಂಬಂಧ ಕಡಿದುಕೊಂಡ ಅಲ್ ಬಗ್ದಾದಿಯು ಇನ್ನು  ತನ್ನ ಗಮನ ಕೇವಲ ಸಿರಿಯಕ್ಕೆ ಮಾತ್ರ ಎಂದು ಘೋಷಿಸಿದ. ಐಎಸ್‌ಐಎಲ್ ಎಂಬ ಹೊಸ ಸಂಘಟನೆಯನ್ನೂ  ಸ್ಥಾಪಿಸಿದ. ಜುಲಾನಿ ಇದನ್ನು ಒಪ್ಪಲಿಲ್ಲ. ಬಗ್ದಾದಿಯಿಂದ ದೂರ ನಿಂತ. 

2016ರಲ್ಲಿ ಸಿರಿಯ ಅಧ್ಯಕ್ಷ ಅಸದ್‌ರ ಸೇನೆಯು ಪ್ರಮುಖ ಅಲೆಪ್ಪೋ ನಗರವನ್ನು ಬಂಡಕೋರರಿಂದ  ವಶಪಡಿಸಿಕೊಂಡಿತು. ಆಗ ಅಲ್ಲಿದ್ದ ವಿವಿಧ ಸಂಘಟನೆಗಳ ಸಾವಿರಾರು ಬಂಡುಕೋರರು ಇದ್ಲಿಬ್‌ಗೆ ಪಲಾಯನ ಮಾಡಿದರು. ಇಲ್ಲಿ ಅದಾಗಲೇ ಇದ್ದ ಜುಲಾನಿ ಈ ಎಲ್ಲಾ ಬಂಡುಕೋರ ಗುಂಪುಗಳ ಹೋರಾಟಗಾರರನ್ನು ಒಟ್ಟು ಸೇರಿಸಿ `ಹಯಾತ್ ಅಲ್ ತಹ್ರೀರ್ ಅಲ್ ಶಾಂ' (HTS) ಎಂಬ ಏಕ ಗುಂಪನ್ನು ರಚಿಸಿದ ಮತ್ತು  ಅಲ್ ಕಾಯಿದಾದಿಂದ ಸಂಪೂರ್ಣ ಅಂತರವನ್ನು ಕಾಯ್ದುಕೊಂಡ. 2017ರಲ್ಲಿ ಈ ಇದ್ಲಿಬ್ ನಗರವನ್ನು ಸಂಪೂರ್ಣ ವಶಪಡಿಸಿಕೊಂಡ ಜುಲಾನಿ ಇಲ್ಲಿ ಶಿಕ್ಷಣ, ಆರೋಗ್ಯ, ನಾಗರಿಕ ಸೇವೆ, ನ್ಯಾಯಾಂಗ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ. ಈ HTS ನಿಧಾನಕ್ಕೆ ಬೆಳೆಯುತ್ತಾ ಹೋಯಿತಲ್ಲದೇ, ಅಲ್ ಕಾಯಿದಾವನ್ನು ಮೂಲೆಗುಂಪು ಮಾಡುತ್ತಾ ಸಿರಿಯನ್ ಜನರ ವಿಶ್ವಾಸವನ್ನೂ ಗಳಿಸಿತು. ಇದ್ಲಿಬ್‌ನಲ್ಲಿ ನಡೆಸುತ್ತಿರುವ ಆಡಳಿತವೂ ಜನರ ಗಮನ ಸೆಳೆಯಿತು. 

`ಅಲ್ ಕಾಯಿದಾದ ಜೊತೆಗಿದ್ದ ಕಾಲದಲ್ಲಿಯ ನನ್ನ ನಿಲುವುಗಳಿಂದ ತಾನು ಹಿಂದಕ್ಕೆ ಬಂದಿದ್ದರೂ ಮತ್ತು ತಾನು ಸಿರಿಯಾದ ವಿಮೋಚನೆಯನ್ನಷ್ಟೇ ಗುರಿಯಾಗಿಸಿಕೊಂಡಿದ್ದರೂ ತನ್ನನ್ನು ವಿದೇಶಿ ರಾಷ್ಟ್ರಗಳು ಭಯೋತ್ಪಾದಕ ಎಂದು ಕರೆಯುತ್ತಿರುವುದಕ್ಕೆ ವಿಷಾದವಾಗುತ್ತಿದೆ...' ಎಂದು ಜುಲಾನಿ ಈ ಹಿಂದೆ ಹೇಳಿದ್ದ. ಈ ಜುಲಾನಿಗೆ ಅಮೆರಿಕ, ವಿಶ್ವಸಂಸ್ಥೆ, ಟರ್ಕಿ, ಯುರೋಪ್ಯನ್ ರಾಷ್ಟ್ರಗಳೂ ಸೇರಿ ಹಲವು ದೇಶಗಳು ಭಯೋತ್ಪಾದಕ ಎಂಬ ಹಣೆಪಟ್ಟಿಯನ್ನು ಹಚ್ಚಿವೆ. ಇಂಥ ಜುಲಾನಿ ಕೇವಲ ಎರಡೇ ಎರಡು ವಾರಗಳೊಳಗೆ ಅಸದ್‌ರನ್ನು ಹೇಗೆ ಪದಚ್ಯುತಗೊಳಿಸಿದ ಎಂಬ ಪ್ರಶ್ನೆಯಿದೆ. ನಿಜವಾಗಿ,

ಅಸದ್‌ರ ಶಕ್ತಿಯೇ ಇರಾನ್, ಹಿಝ್ಬುಲ್ಲಾ ಮತ್ತು ರಷ್ಯಾವಾಗಿತ್ತು. ಈ ವರೆಗೆ ಬಂಡುಕೋರ ಪಡೆಗಳನ್ನು ಮಟ್ಟ ಹಾಕಿದ್ದೇ ಈ ಮೂರು ರಾಷ್ಟ್ರಗಳು. ಆದರೆ, ಇದೀಗ ಹಿಝ್ಬುಲ್ಲಾ ಮತ್ತು ಇರಾನ್‌ಗಳು ಇಸ್ರೇಲ್‌ನತ್ತ ಗಮನ ಹರಿಸಿರುವುದು ಮತ್ತು ಯುಕ್ರೇನ್‌ನತ್ತ ರಷ್ಯಾ ಗಂಭೀರವಾಗಿರುವುದು ಈ ಜುಲಾನಿ ಪಡೆಗೆ ವರವಾಗಿ ಪರಿಣಮಿಸಿತು. ತಕ್ಷಣ ನೆರವು ಒದಗಿಸಲು ಈ ಮೂರೂ ಶಕ್ತಿಗಳಿಗೆ ಸಾಧ್ಯವಾಗದಿರುವುದೇ ಜುಲಾನಿಯ ಯಶಸ್ವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಅಂತೂ, ಅಸದ್ ಕುಟುಂಬದ 53 ವರ್ಷಗಳ ಆಡಳಿತ ಕೊನೆಗೊಂಡಿದೆ. 24 ವರ್ಷಗಳ ಕಾಲ ಈ ಬಶ್ಶಾರುಲ್ ಅಸದ್ ಸಿರಿಯವನ್ನು ಆಳಿದರೆ ಇವರ ತಂದೆ ಹಾಫಿಝ್ ಅಸದ್‌ರು 29 ವರ್ಷಗಳ ಕಾಲ ಆಳಿದ್ದರು. ಬಶ್ಶಾರುಲ್ ಅಸದ್ ಅಂತೂ ಪ್ರತಿಭಟನಾಕಾರರ ವಿರುದ್ಧ ಎಷ್ಟು ಬರ್ಬರವಾಗಿ ನಡಕೊಂಡರೆಂದರೆ, ಐದೂವರೆ ಲಕ್ಷ ಸಿರಿಯನ್ನರು ಪ್ರಾಣತೆತ್ತರು. ಒಂದು ಕೋಟಿ 30 ಲಕ್ಷ ಮಂದಿ ಸಿರಿಯ ಬಿಟ್ಟು ಪಲಾಯನ ಮಾಡಿದರು. ಸಾವಿರಾರು ಮಂದಿಯನ್ನು ಜೈಲಲ್ಲಿಟ್ಟು ಪೀಡಿಸಿದರು. ಇದೀಗ ಅಸದ್ ಯುಗ ಕೊನೆಗೊಂಡಿದೆ. ಆದರೆ ಜುಲಾನಿ ಯುಗ ಹೇಗಿರುತ್ತದೆ ಎಂಬ ಬಗ್ಗೆ ಜಗತ್ತು ಕುತೂಹಲದಲ್ಲಿದೆ.

Monday, 9 December 2024

ದುಶ್ಯಂತ್ ದವೆ ಕಣ್ಣೀರಲ್ಲಿ ಪ್ರತಿಫಲಿಸಿದ ಭಾರತೀಯ ಮುಸ್ಲಿಮರ ನೋವು





ಮುಸ್ಲಿಮರ ಮೇಲಿನ ದಾಳಿ, ಅಪಪ್ರಚಾರ ಮತ್ತು ವ್ಯವಸ್ಥಿತ ದಬ್ಬಾಳಿಕೆಗೆ ಮರುಗಿ ಈ ದೇಶದ ಪ್ರಸಿದ್ಧ ನ್ಯಾಯವಾದಿ ದುಶ್ಯಂತ್ ದವೆ ಕಣ್ಣೀರು ಹಾಕಿದ್ದಾರೆ. ‘ದ ವಯರ್’ ಡಿಜಿಟಲ್ ಚಾನೆಲ್‌ನಲ್ಲಿ ಕರಣ್ ಥಾಪರ್ ನಡೆಸಿಕೊಡುವ  ಕಾರ್ಯಕ್ರಮದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಹೀಗೆ ಭಾವುಕರಾಗಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಐವರು  ಮುಸ್ಲಿಮರ ಸಾವಿಗೆ ಕಾರಣವಾದ ಮಸೀದಿ ಸಮೀಕ್ಷೆಯ ಒಳ-ಹೊರಗನ್ನು ವಿಶ್ಲೇಷಿಸುತ್ತಾ ಇಡೀ ಪ್ರಕ್ರಿಯೆಗೆ ನಿವೃತ್ತ  ಸುಪ್ರೀಮ್ ಮುಖ್ಯ ನ್ಯಾಯಾ ಧೀಶ ಚಂದ್ರಚೂಡ್ ಹೇಗೆ ಹೊಣೆಗಾರರಾಗಿದ್ದಾರೆ ಎಂಬುದನ್ನೂ ವಿವರಿಸಿದ್ದಾರೆ. ಇದೇ  ಸಮಯದಲ್ಲಿ ಇನ್ನೆರಡು ಘಟನೆಗಳೂ ನಡೆದಿವೆ. ಮಾಂಸವನ್ನು ಕೊಂಡೊಯ್ಯುತ್ತಿದ್ದಾರೆಂದು  ಹೇಳಿ ಸುಮಾರು 70  ವರ್ಷದ ಮುಸ್ಲಿಮ್ ವೃದ್ಧರನ್ನು ಮಹಾರಾಷ್ಟ್ರದಲ್ಲಿ ಗುಂಪೊಂದು ಯದ್ವಾತದ್ವಾ ಥಳಿಸಿದೆ. ಇದರ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಪುಟ್ಟ ಬ್ಯಾಗ್‌ನಲ್ಲಿರುವ ಮಾಂಸವನ್ನೂ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಘಟನೆಗಿಂತ ದಿನಗಳ ಮೊದಲು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿಯೋರ್ವರು, ‘ಮುಸ್ಲಿಮರಿಂದ ಮತದಾನದ ಹಕ್ಕ ನ್ನು ಕಸಿದುಕೊಳ್ಳಬೇಕೆಂದು’ ಆಗ್ರಹಿಸಿದ್ದಾರೆ. ಹೀಗೆ ಆಗ್ರಹಿಸಿದ 24 ಗಂಟೆಗಳ ಬಳಿಕ ಅವರು ತಮ್ಮ ಮಾತಿಗೆ ವಿಷಾದ  ಸೂಚಿಸಿದ್ದಾ ರಾದರೂ ಅವರು ಆಡಿರುವ ಮಾತಿನ ವೀಡಿಯೋ ಈ ವಿಷಾದದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ  ಧಾರಾಳ ಹಂಚಿಕೆಯಾಗುತ್ತಿವೆ.

ನಿಜವಾಗಿ, ದುಶ್ಯಂತ್ ದವೆ ಅವರ ಕಣ್ಣೀರು ಈ ದೇಶದ ಕೋಟ್ಯಂತರ ಮುಸ್ಲಿಮರ ಸಂಕಟವನ್ನು ಪ್ರತಿನಿಧಿಸುತ್ತದೆ ಎಂಬ  ಕಾರಣಕ್ಕಾಗಿಯೇ ಮುಖ್ಯವಾಗುತ್ತದೆ. ದವೆ ಅವರು ಮುಸ್ಲಿಮ್ ಸಮುದಾಯದ ವ್ಯಕ್ತಿಯಲ್ಲ, ರಾಜಕಾರಣಿಯಲ್ಲ ಅಥವಾ  ಪ್ರಭುತ್ವ ವಿರೋಧಿ ಸಂಸ್ಥೆಗಳ ಫಲಾನುಭವಿಯೂ ಅಲ್ಲ. ಅವರೇಕೆ ಮಾತಾಡುತ್ತಾ ಭಾವುಕರಾದರು ಅನ್ನುವುದನ್ನು ಸಮಾಜ  ವಿಶ್ಲೇಷಣೆಗೆ ಒಳಪಡಿಸಬೇಕು.

ಮುಸ್ಲಿಮರ ಮೇಲೆ ದಾಳಿ ಮಾಡುವುದನ್ನೇ ಹಿಂದೂ ಧರ್ಮದ ರಕ್ಪಣೆ ಎಂದು ಅಂದುಕೊಂಡಿರುವ ಒಂದು ಗುಂಪು ಮತ್ತು  ಆ ಗುಂಪನ್ನು ರಕ್ಷಿಸುವ ರಾಜಕೀಯ ಪಕ್ಷ ಇವತ್ತು ಅಧಿಕಾರದಲ್ಲಿದೆ. ದೇಶದಾದ್ಯಂತ ಈ ಗುಂಪು ನಡೆಸುತ್ತಿರುವ ಮುಸ್ಲಿಮ್  ದ್ವೇಷಿ ಚಟುವಟಿಕೆಗಳನ್ನು ಈ ರಾಜಕೀಯ ಪಕ್ಷದ ನೇತಾರರು ವಿವಿಧ ನೆಪಗಳನ್ನೊಡ್ಡಿ ಸಮರ್ಥಿಸುತ್ತಿದ್ದಾರೆ. ಇನ್ನೊಂದು  ಕಡೆ ಇದೇ ಗುಂಪಿನ ಜನರು ನ್ಯಾಯಾಲಯಗಳಿಗೆ ಅರ್ಜಿ ಹಾಕಿ ಮಸೀದಿಗಳ ವೈಜ್ಞಾನಿಕ ಸಮೀಕ್ಷೆಗೆ ಮನವಿ  ಮಾಡುತ್ತಿದ್ದಾರೆ. ಎಲ್ಲ ಅರ್ಜಿಗಳಲ್ಲೂ ಒಂದು ಸಾಮಾನ್ಯ ಉಲ್ಲೇಖ ಇರುತ್ತದೆ. ಅದೇನೆಂದರೆ, ಮಂದಿರವನ್ನು ಒಡೆದು  ಮಸೀದಿಯನ್ನು ನಿರ್ಮಿಸಲಾಗಿದೆ ಎಂದು. ಇದರ ಹೊಚ್ಚ ಹೊಸ ಅವತಾರವಾಗಿ ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್  ಚಿಶ್ತಿ ದರ್ಗಾ ಗುರುತಿಸಿಕೊಂಡಿದೆ. ಅದು ಪೂರ್ವದಲ್ಲಿ ಶಿವಮಂದಿರವಾಗಿತ್ತು ಮತ್ತು ಅದನ್ನು ಒಡೆದು ದರ್ಗಾ  ಮಾಡಲಾಗಿದೆ ಎಂದು ವಿಷ್ಣುಗುಪ್ತ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಹಾಗಂತ,

ಇಂಥ ಅರ್ಜಿಗಳ ಕಾನೂನು ಬದ್ಧತೆಯ ಬಗ್ಗೆ ಈ ದೇಶದ ಅಸಂಖ್ಯ ಜನರಲ್ಲಿ ಹಲವು ಗೊಂದಲಗಳಿವೆ. ಬಾಬರಿ ಮಸೀದಿ  ಧ್ವಂಸವಾಗುವುದಕ್ಕಿಂತ  ಎರಡು ತಿಂಗಳ ಮೊದಲು, ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ 1991’ ಎಂಬ ಕಾನೂನನ್ನು  ಈ ದೇಶದ ಪಾರ್ಲಿಮೆಂಟು ಅಂಗೀಕರಿಸಿತ್ತು. ‘1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್  ಸೇರಿದಂತೆ ಆರಾಧನಾ ಕೇಂದ್ರಗಳು ಯಾವ ಸ್ವರೂಪದಲ್ಲಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಮತ್ತು  ಅದರಲ್ಲಿ ಯಾವುದೇ ಮಾರ್ಪಾಡು ಸಲ್ಲ..’ ಎಂಬುದನ್ನು ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಬಾಬರಿ  ಮಸೀದಿಯನ್ನು ಈ ಕಾಯ್ದೆಯ ವ್ಯಾಪ್ತಿಂಯಿಂದ  ಹೊರಗಿಡಲಾಗಿತ್ತು. ಹಾಗಂತ, ಈ ಕಾನೂನು ಊರ್ಜಿತದಲ್ಲಿದ್ದಾಗ್ಯೂ  2023ರಲ್ಲಿ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಸಮೀಕ್ಷೆ ನಡೆಯಿತು. ಆ ಬಳಿಕ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು  ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ, ಸಂಭಾಲ್‌ನ ಜಾಮಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಗಳೂ ನಡೆದುವು. ಇದು  ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರವೇ ನಿವೃತ್ತ ಮುಖ್ಯ ನ್ಯಾಯಾಧೀಶ ಚಂದ್ರಚೂಡ್.

ಮಂದಿರವನ್ನು ಒಡೆದು ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಲಾಗಿದೆ ಮತ್ತು ಅದರ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕು  ಎಂಬ ಅರ್ಜಿಯನ್ನು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಲಾ ಗಿತ್ತು. ಆ ಬಳಿಕ ಅದು ಸುಪ್ರೀಮ್  ಕೋರ್ಟ್ ಗೆ  ಬಂತು. ಅದನ್ನು ವಿಚಾರಣೆಗೆ ಎತ್ತಿಕೊಂಡದ್ದೇ  ಚಂದ್ರಚೂಡ್ ನೇತೃತ್ವದ ವಿಚಾರಣಾ ಪೀಠ. ಅವರು, ‘1991ರ  ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಗೆ ವಿಚಿತ್ರ ವ್ಯಾಖ್ಯಾನ ಬರೆದರು. 'ಈ ಕಾಯ್ದೆಯು 1947 ಆಗಸ್ಟ್ 15ರಂದು ಇದ್ದ  ಆರಾಧನಾ ಕೇಂದ್ರಗಳನ್ನು ಯಥಾಸ್ಥಿತಿಯನ್ನು ಕಾಪಾಡಬೇಕು, ಕಟ್ಟಡಗಳ ಸ್ವರೂಪವನ್ನು ಬದಲಿಸಬಾರದೆಂದು ಹೇಳಿದೆಯೇ  ಹೊರತು ಕಟ್ಟಡದ ಸರ್ವೇ ನಡೆಸಬಾರದೆಂದು ಹೇಳಿಲ್ಲ..’ ಎಂದು ತೀರ್ಪಿತ್ತರು. ಆ ಒಂದು ತೀರ್ಪೇ ಆ ಬಳಿಕ ಸರ್ವೇ  ಬಯಸಿ ಸರಣಿ ಅರ್ಜಿಗಳನ್ನು ಸಲ್ಲಿಸುವುದು ಕಾರಣವಾಯಿತು. ನಿಜವಾಗಿ,

ಚಂದ್ರಚೂಡ್ ಅವರು 1991ರ ಕಾಯ್ದೆಯನ್ನು ಅಕ್ಷರಗಳಲ್ಲಿ ಓದಿದ್ದಾರೆ ಎಂದು ಹೇಳಿದರೇನೇ ಸರಿ. ಅಷ್ಟಕ್ಕೂ, ಆರಾಧನಾ  ಕೇಂದ್ರಗಳ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು, ಬದಲಿಸಬಾರದು ಎಂದು ಹೇಳುವುದರ ಉದ್ದೇಶವೇನು? ಬಾಬರಿ  ಮಸೀದಿಯಂತೆ ಇನ್ನಾವುದೇ ಆರಾಧನಾ ಕೇಂದ್ರವನ್ನೂ ವಿವಾದವನ್ನಾಗಿ ಮಾಡಬಾರದು ಎಂದೇ ಅಲ್ಲವೇ? ಹಾಗಿದ್ದ  ಮೇಲೆ ಸರ್ವೇ ಮಾಡುವುದರ ಅಗತ್ಯವೇನಿದೆ? ಪೂರ್ವ ಕಾಲದಲ್ಲಿ ಒಂದು ಆರಾಧನಾ ಕೇಂದ್ರ ಮಸೀದಿಯಾಗಿತ್ತೋ  ಮಂದಿರವಾಗಿತ್ತೋ ಎಂದು ಖಚಿತಪಡಿಸಿಕೊಂಡು ಆಗುವುದಕ್ಕೇನಿದೆ? ಅದರಿಂದ ಲಾಭ ಏನು? ಆರಾಧನಾ ಕೇಂದ್ರಗಳ  ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಿರುವ ಸರಿಯಾದ ವಿಧಾನ ಏನೆಂದರೆ, ಅವುಗಳ ಸರ್ವೇ ನಡೆಸದೇ ಇರುವುದು.  ಸರ್ವೇಗೆ ಅವಕಾಶ ಕೊಡುವುದೆಂದರೆ, ವಿವಾದಕ್ಕೆ ಅವಕಾಶ ಮಾಡಿಕೊಡುವುದು ಎಂದೇ ಅರ್ಥ. ‘1991ರ ಆರಾಧನಾ  ಕೇಂದ್ರಗಳ ಕಾಯ್ದೆ’ಯ ಆಶಯ ಇದುವೇ ಆಗಿತ್ತು ಅನ್ನುವುದು ಅದನ್ನು ಓದಿದವರಿಗೆ ಖಂಡಿತ ಗೊತ್ತಾಗುತ್ತದೆ. ಆದರೆ  ಅದರ ಮೇಲೆ ಸೂಕ್ಷ್ಮದರ್ಶಕವನ್ನು ಹಿಡಿದು, ಅದರಲ್ಲಿರುವ ಲೋಪವನ್ನು ಹುಡುಕುವುದೇ ಉದ್ದೇಶವಾದರೆ ಏನಾದರೊಂದು  ಲೋಪ ಸಿಕ್ಕೇ ಸಿಗುತ್ತದೆ. ಚಂದ್ರಚೂಡ್ ಅವರು ಕಾನೂನಿನಲ್ಲಿರುವ ಇಂಥ ಲೋಪಗಳನ್ನೇ ಎತ್ತಿಕೊಂಡು ಮಸೀದಿ  ಸಮೀಕ್ಷೆಗೆ ಅನುಮತಿ ನೀಡಿದ್ದಾರೆ. ಗ್ಯಾನ್‌ವಾಪಿಗೆ ಸಂಬಂಧಿಸಿ ಅವರು ನೀಡಿರುವ ಆ ಒಂದು ಆದೇಶವು ಕಂಡ ಕಂಡ  ಮಸೀದಿಯನ್ನು ಮಂದಿರ ಎಂದು ವಾದಿಸುವ ಮತ್ತು ಸರ್ವೇಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ ಲ್ಲಿವರೆಗೆ ತಲುಪಿದೆ. ಅಷ್ಟಕ್ಕೂ,

ಈ ಅರ್ಜಿ ಹಾಕುವ ಪ್ರಕ್ರಿಯೆಯ ಹಿಂದೆ ಒಂದು ನಿರ್ದಿಷ್ಟ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಅನ್ನುವುದಕ್ಕೆ ಗ್ಯಾ ನ್‌ವಾಪಿಯಿಂದ ಸಂಭಾಲ್ ಜಾಮಾ ಮಸೀದಿಯ ವರೆಗೆ ಅರ್ಜಿ ಹಾಕಿದವರ ವಿವರವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.  ಹರಿಶಂಕರ್ ಜೈನ್ ಮತ್ತು ಅವರ ಮಗ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಎಂಬವರೇ ಈ ಎಲ್ಲ ಮಸೀದಿಗಳ  ಸಮೀಕ್ಷೆಯನ್ನು ಕೋರಿ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ಹಾಕಿದವರಾಗಿದ್ದಾರೆ. ಈ ಎಲ್ಲ ಮಸೀದಿಗಳ  ಪೂರ್ವಾಪರಗಳ ಬಗ್ಗೆ ಈ ಇಬ್ಬರಲ್ಲಿ ಇಷ್ಟೊಂದು ಆಸಕ್ತಿ ಹುಟ್ಟಿದ್ದು ಹೇಗೆ? ಯಾವುದೇ ಕಾನೂನು ಪ್ರಕ್ರಿಯೆಗೂ ದುಬಾರಿ  ಹಣದ ಅಗತ್ಯ ಇರುತ್ತದೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರಕರಣ ಒಂದು ವೇಳೆ ಸುಪ್ರೀಮ್  ಕೋರ್ಟ್ ವರೆಗೆ ಸಾಗಿದರೆ ಅಲ್ಲಿಯವರೆಗೆ ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಈ ಇಬ್ಬರು ಇಷ್ಟೊಂದು ಹಣವನ್ನು ಖರ್ಚು ಮಾಡುವುದಕ್ಕೆ ಯಾವ ಕಾರಣಕ್ಕಾಗಿ ಸಿದ್ಧವಾಗಿದ್ದಾರೆ? ಇವರಿಗೆ ಈ ಹಣವನ್ನು ಒದಗಿಸುವ ಬೇರೆ  ಶಕ್ತಿಗಳಿವೆಯೇ? ಅವರು ಯಾರು? ಅವರ ಉದ್ದೇಶ ಏನು? ಅವರೇಕೆ ಮಸೀದಿಗಳ ಹಿಂದೆ ಬಿದ್ದಿದ್ದಾರೆ?... ಇಂಥ ಅನೇಕ  ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಅಂದಹಾಗೆ,

ದುಶ್ಯಂತ್  ದವೆ ಅವರ ಕಣ್ಣೀರು ಚಂದ್ರಚೂಡ್ ಅವರನ್ನು ತಲುಪಿದೆಯೋ ಗೊತ್ತಿಲ್ಲ. ಒಂದುವೇಳೆ ತಲುಪಿದ್ದರೂ ಅವರಲ್ಲಿ  ತಮ್ಮ ತೀರ್ಪಿಗಾಗಿ ಪಶ್ಚಾತ್ತಾಪ ಭಾವ ಮೂಡಿಸಿದೆಯೋ, ಅದೂ ಗೊತ್ತಿಲ್ಲ. ಆದರೆ, ಈ ದೇಶದ ಮುಸ್ಲಿಮರ ಸಹಿತ ಶಾಂತಿ,  ಸಾಮರಸ್ಯವನ್ನು ಬಯಸುವ ದೊಡ್ಡದೊಂದು ಜನಸಮೂಹ ಅವರ ಈ ತೀರ್ಪನ್ನು ಎಂದೂ ಮರೆಯಲಾರದು ಎಂಬುದು  ನಿಜ. ಹಿಂದೂ ಮುಸ್ಲಿಮರನ್ನು ವಿಭಜಿಸಿ, ಧರ್ಮ ದ್ವೇಷವನ್ನು ಸದಾ ಜೀವಂತದಲ್ಲಿಡ ಬಯಸಿರುವ ಗುಂಪಿಗೆ ಅತ್ಯುತ್ತಮ  ಅಸ್ತ್ರವನ್ನು ನೀಡಿದ ಅವರನ್ನು ಇತಿಹಾಸ ಎಂದೂ ಕ್ಷಮಿಸದು.

Monday, 2 December 2024

ಕಡುಕೋಳ: ಮತಾಂಧರ ವಿರುದ್ಧ ಯುಎಪಿಎ ದಾಖಲಿಸಿ



ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡುಕೋಳ ಗ್ರಾಮದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಮಾಧ್ಯಮಗಳು  ಬೆಳಕು ಚೆಲ್ಲಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಲ್ಲೇನು ನಡೆದಿದೆ ಎಂಬುದು ಕಡುಕೋಳವನ್ನು ಬಿಟ್ಟರೆ ರಾಜ್ಯದ ಉಳಿದ  ಭಾಗಗಳಿಗೆ ಬಹಳ ಕಡಿಮೆಯಷ್ಟೇ ಗೊತ್ತಿದೆ. ಇಲ್ಲಿಯ ಸುಮಾರು 70ರಷ್ಟು ಮುಸ್ಲಿಮ್ ಕುಟುಂಬಗಳು ಊರು ತೊರೆದಿವೆ.  ಘಟನೆ ನಡೆದು ಎರಡು ವಾರಗಳು ಕಳೆದರೂ ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ಮರಳಲು ಹೆದರುತ್ತಿವೆ.  ಎರಡು ವಾರಗಳ ಹಿಂದೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಥಳಿಸಿದವರು, ದಾಂಧಲೆ ನಡೆಸಿದವರು ಮತ್ತು ಸೊತ್ತುಗಳನ್ನು  ನಾಶ ಮಾಡಿದವರು ಮರಳಿ ಬಂದು ಅದನ್ನೇ ಪುನರಾವರ್ತಿಸಲಾರರು ಎಂದು ಹೇಳುವುದು ಹೇಗೆ ಎಂಬ ಭಯ ಅವರಲ್ಲಿ  ಆವರಿಸಿದೆ. ಸನ್ಮಾರ್ಗ ತಂಡ ಆ ಇಡೀ ಪ್ರದೇಶಕ್ಕೆ ಭೇಟಿ ಕೊಟ್ಟು ಸಂತ್ರಸ್ತರನ್ನು ಮಾತನಾಡಿಸಿದಾಗ ಸಿಕ್ಕ ಮಾಹಿತಿಗಳು  ಆಘಾತಕಾರಿಯಾಗಿವೆ. ತಾವೇಕೆ ದಾಳಿಗೊಳಗಾಗಿದ್ದೇವೆ ಎಂಬ ಸ್ಪಷ್ಟ ತಿಳುವಳಿಕೆಯೇ ಸಂತ್ರಸ್ತರಿಗಿಲ್ಲ. ಯಾವ ತಪ್ಪೂ  ಮಾಡದೇ ದಾಳಿಗೊಳಗಾಗುವುದೆಂದರೆ, ಭವಿಷ್ಯವೇನು ಎಂಬ ಆತಂಕ ಅವರೆಲ್ಲರನ್ನೂ ಕಾಡತೊಡಗಿದೆ. ಮುಸ್ಲಿಮ್  ದ್ವೇಷವನ್ನು ಅಮಲಾಗಿ ಏರಿಸಿಕೊಂಡವರನ್ನು ಮಟ್ಟ ಹಾಕದಿದ್ದರೆ ರಾಜ್ಯ ಎಂಥ ಅನಾಹುತಕಾರಿ ಪರಿಸ್ಥಿತಿಗೆ  ಸಾಕ್ಷಿಯಾಗಬೇಕಾದೀತು ಎಂಬುದಕ್ಕೆ ಈ ಕಡುಕೋಳ ಒಂದು ಪುರಾವೆ ಅನ್ನಬಹುದು.

ವಕ್ಫ್ ಹೆಸರಲ್ಲಿ ರಾಜ್ಯದಲ್ಲಿ ಮೊದಲ ಹಿಂಸಾಚಾರ ನಡೆದ ಗ್ರಾಮ ಕಡುಕೋಳ. ಹಾಗಂತ, ಈ ಗ್ರಾಮದ ರೈತರಿಗಾಗಲಿ  ಜಮೀನುದಾರರಿಗಾಗಲಿ ಕಂದಾಯ ಇಲಾಖೆಯಿಂದ ನೋಟೀಸೇ ಬಂದಿಲ್ಲ. ನಿಮ್ಮ ಜಮೀನು ವಕ್ಫ್ ಗೆ  ಸೇರಿದ್ದಾಗಿದೆ ಎಂದು  ಯಾವ ಮುಸ್ಲಿಂ ರಾಜಕಾರಣಿಯೂ ಕಡುಕೋಳ ಗ್ರಾಮದ ರೈತರಲ್ಲಿ ಹೇಳಿಲ್ಲ. ಯಾವ ಅಧಿಕಾರಿಯೂ ಅಲ್ಲಿ ಸರ್ವೇ ನಡೆಸಿಲ್ಲ.  ನಿಮ್ಮನ್ನು ಒಕ್ಕಲೆಬ್ಬಿಸುವುದಾಗಿ ಯಾವ ಮುಸ್ಲಿಮರೂ ರೈತರಿಗೆ ಹೇಳಿಲ್ಲ. ಮಸೀದಿಯಿಂದ ಅಂಥದ್ದೊಂದು  ಘೋಷಣೆಯೂ  ನಡೆದಿಲ್ಲ. ಹೀಗಿದ್ದ ಮೇಲೂ ಏಕಾಏಕಿ ಮುಸ್ಲಿಮ್ ಮನೆಗಳಿಗೆ ದಾಳಿಯಾಗಲು ಕಾರಣವೇನು? ಬಿಜೆಪಿ ಪ್ರಣೀತ  ವಿಚಾರಧಾರೆ ಎಷ್ಟು ಮನುಷ್ಯ ವಿರೋಧಿ ಅನ್ನುವುದನ್ನೇ ಇಲ್ಲಿಯ ಹಿಂಸಾಚಾರ ಹೇಳುತ್ತದೆ. ನಿಮ್ಮ ಭೂಮಿ ವಕ್ಫ್  ಇಲಾಖೆಯ ಪಾಲಾಗುತ್ತದೆ ಎಂಬ ಭಯವನ್ನು ಬಿಜೆಪಿ ಈ ಕಡುಕೋಳದ ಹಿಂದೂಗಳಲ್ಲಿ ಮೂಡಿಸಿದೆ. ಮುಸ್ಲಿಮರನ್ನು  ಹಿಂದೂಗಳ ವೈರಿಗಳಂತೆ ನಿರಂತರ ಬಿಂಬಿಸತೊಡಗಿದೆ. ವಿಜಯಪುರದಲ್ಲಿ ರೈತರಿಗೆ ನೀಡಲಾದ ನೋಟೀಸನ್ನು  ಎತ್ತಿಕೊಂಡು ಹಿಂದೂಗಳಲ್ಲಿ ಅಸ್ತಿತ್ವದ ಭಯವನ್ನು ಹುಟ್ಟು ಹಾಕಿದೆ. ಮುಸ್ಲಿಮರು ನಿಮ್ಮ ಜಮೀನು ಕಸಿಯಲು ಹೊಂಚು  ಹಾಕುತ್ತಿರುವ ವೈರಿಗಳು ಎಂಬಂತೆ  ಬಿಂಬಿಸಿದೆ. ಈ ಎಲ್ಲದರ ಒಟ್ಟು ಪರಿಣಾಮವೇ ಈ ದಾಳಿ ಎಂಬುದು ಅಲ್ಲಿಯ ಒಟ್ಟು  ಪರಿಸ್ಥಿತಿಯನ್ನು ಅವಲೋಕಿಸಿದಾಗ ಅರಿವಾಗುತ್ತದೆ. ಅಲ್ಲಿನ ಮಸೀದಿಯ ಅಧ್ಯಕ್ಷ ಮೌಲಾಸಾಬ್ ನದಾಫ್ ಎಂಬ ಸರಿಯಾಗಿ  ದೃಷ್ಟಿಯೂ ಕಾಣಿಸದ ವಯೋ ವೃದ್ಧರನ್ನೂ ಅವರ ಮನೆಯ ಮಹಿಳೆಯರು, ಮಕ್ಕಳನ್ನೂ ಕ್ರೂರಿಗಳು ಥಳಿಸಿದ್ದಾರೆ. ಅಪ್ಪಟ  ಕೃಷಿಕರಾದ ಮತ್ತು ಮನೆಯಲ್ಲಿ ಗೋವುಗಳನ್ನು ಸಾಕುತ್ತಿರುವ ಅವರಿಗೆ ಈ ಗಾಯ ಬದುಕನ್ನಿಡೀ ಕಾಡಲಿದೆ ಎಂಬುದಕ್ಕೆ  ಅವರ ನೋವುಭರಿತ ಮಾತುಗಳೇ ಸಾಕ್ಷಿ. ಹಲವು ಮನೆಗಳ ಮೇಲೆ ದಾಳಿಯಾಗಿವೆ. ಧರ್ಮದ್ವೇಷಿ ಅಮಲನ್ನು  ಏರಿಸಿಕೊಂಡವರ ದಾಳಿಗೆ ಒಂದಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮನೆ, ಪೀಠೋಪಕರಣಗಳು ನಾಶವಾಗಿವೆ. ಎರಡು  ವಾರಗಳಿಂದ ಇಲ್ಲಿನ ಮಸೀದಿ ಬಾಗಿಲು ಮುಚ್ಚಿದೆ. ಈ ಎಲ್ಲವೂ ಯಾಕೆ ನಡೆಯಿತು ಎಂಬ ಪ್ರಶ್ನೆಗೆ ವಕ್ಫ್ ಅನ್ನು  ತೋರಿಸಲಾಗುತ್ತದೆ. ಅಂದಹಾಗೆ,

ಈ ವಕ್ಫ್ ವಿಷಯಕ್ಕೂ ಮುಸ್ಲಿಮರಿಗೂ ಏನು ಸಂಬಂಧ? ವಿಜಯಪುರದ ರೈತರಿಗಾಗಲಿ ಇತರರಿಗಾಗಲಿ ಮುಸ್ಲಿಮರು  ನೋಟೀಸು ಕಳುಹಿಸಿದ್ದಾರಾ? ಅಥವಾ ನೋಟೀಸು ಕಳುಹಿಸುವಂತೆ ಪ್ರತಿಭಟನೆ ನಡೆಸಿದ್ದಾರಾ? ರೈತರ ಜಮೀನಿನಲ್ಲಿ  ನಿಂತು ಇದು ನಮ್ಮದು ಎಂದು ಹಕ್ಕು ಮಂಡಿಸಿದ್ದಾರಾ? ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತಿರುವಾಗ ವಕ್ಫ್ನ  ಹೆಸರಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಿರುವುದೇಕೆ? ಇದನ್ನು ವಕ್ಫ್ ಪ್ರೇರಿತ ದಾಳಿ ಎನ್ನುವುದು ಎಷ್ಟು ಸರಿ? ಇದು  ಶುದ್ಧ ರಾಜಕೀಯ ಪ್ರೇರಿತ ಧರ್ಮದ್ವೇಷದ ದಾಳಿಯಲ್ಲವೇ? ಮುಸ್ಲಿಮರನ್ನು ಹೇಗೆ ನಡೆಸಿಕೊಂಡರೂ ನಡೆಯುತ್ತದೆ ಎಂಬ  ಭಂಡ ಧೈರ್ಯದ ಕೃತ್ಯವಲ್ಲವೇ? ರಾಜ್ಯ ಸರಕಾರ ಯಾಕೆ ಈ ಘಟನೆಯನ್ನು ಕ್ಷುಲ್ಲಕವಾಗಿ ಕಂಡಿದೆ? ದೂರು ಕೊಡಲೂ  ಹಿಂಜರಿಯುವ ಈ ಸಂತ್ರಸ್ತರ ಬೆನ್ನಿಗೆ ನಿಂತು ಮತಾಂಧರನ್ನು ಮಟ್ಟ ಹಾಕಬೇಕಾದ ಸರಕಾರ ಯಾಕೆ ತೇಪೆ ಹಚ್ಚುವ  ಪ್ರಯತ್ನಕ್ಕಿಳಿದಿದೆ? ಸಂತ್ರಸ್ತರಿಗೆ, ಒಮ್ಮೆ ಮನೆಗೆ ಮರಳಿದರೆ ಸಾಕು ಎಂಬ ಅನಿವಾರ್ಯತೆಯಿದೆ. ಯಾಕೆಂದರೆ, ಅವರೆಲ್ಲ  ದುಡಿದು ತಿನ್ನುವ ಬಡಪಾಯಿಗಳು. ಆದರೆ, ಇಂಥ ಅನಿವಾರ್ಯತೆಗಳನ್ನೇ ಮತಾಂಧರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.  ರಾಜಿ ಮಾತುಕತೆಯಲ್ಲಿ ಮುಗಿಸುವ ಒತ್ತಡ ಹೇರತೊಡಗುತ್ತಾರೆ. ನಿರ್ದಿಷ್ಟ ರಾಜಕೀಯ ಚಿಂತನೆಯೇ ಇಂಥ ಕ್ರೌರ್ಯಗಳ  ಹಿಂದಿರುವುದರಿAದ ರಾಜಕೀಯ ಒತ್ತಡಗಳೂ ಬೀಳುತ್ತವೆ. ಅಂತಿಮವಾಗಿ,

ದೂರು ದಾಖಲಾಗಿಲ್ಲ ಎಂಬ ಪಿಳ್ಳೆ ನೆಪ ಇಟ್ಟುಕೊಂಡು ಸರಕಾರ ತಪ್ಪಿಸಿಕೊಂಡರೆ, ಊರಿಗೆ ಮರಳಬೇಕಾದರೆ ದೂರು  ದಾಖಲಿಸಬೇಡಿ ಎಂಬ ಒತ್ತಡ ಹಾಕಿ ಈ ದುರುಳರು ತಪ್ಪಿಸಿಕೊಳ್ಳುತ್ತಾರೆ. ಇದೇ ಧೈರ್ಯದಿಂದ ಮತ್ತೊಂದು ಮತಾಂಧ  ಕೃತ್ಯಕ್ಕೆ ಸಂಚು ನಡೆಸುತ್ತಾರೆ. ಕಾಂಗ್ರೆಸ್ ಬಂದರೂ ಬಿಜೆಪಿ ಬಂದರೂ ಮುಸ್ಲಿಮರ ಕುರಿತಾದ ಧೋರಣೆಯಲ್ಲಿ ಅಂಥ  ವ್ಯತ್ಯಾಸವೇನಿಲ್ಲ ಎಂಬ ಆರೋಪಕ್ಕೆ ಪೂರಕವಾಗಿಯೇ ಸರಕಾರ ನಡಕೊಳ್ಳುತ್ತಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ರೈತರಿಗೆ ನೋಟೀಸು ಕಳುಹಿಸಿರುವುದು ಸರಕಾರದ ಅಧೀನದಲ್ಲಿರುವ ಕಂದಾಯ ಇಲಾಖೆ. ವಕ್ಫ್ ಸಚಿವಾಲಯ  ಇರುವುದು ಸರಕಾರದ ಅಧೀನದಲ್ಲಿ. ವಕ್ಫ್ ಸಚಿವರ ನೇಮಕದಿಂದ ಹಿಡಿದು ವಕ್ಫ್ ಇಲಾಖೆ, ಕಂದಾಯ ಇಲಾಖೆ ಸಹಿತ  ಈ ಇಡೀ ಪ್ರಕ್ರಿಯೆ ನಡೆಯುವುದೂ ಸರಕಾರದ ಅಧೀನದಲ್ಲೇ. ವಕ್ಫ್ ಇಲಾಖೆಯಲ್ಲಿ ವಕ್ಫ್ ಟ್ರಿಬ್ಯೂನಲ್ ಎಂಬ  ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿರುವುದೂ ಈ ದೇಶದ್ದೇ  ಸರಕಾರಗಳು. ಹೈಕೋರ್ಟು ನ್ಯಾಯಾಧೀಶರೇ ಈ  ಟ್ರಿಬ್ಯೂನಲ್‌ಗೆ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ. ಈ ಟ್ರಿಬ್ಯೂನಲ್ ಕೂಡಾ ಸಂವಿಧಾನದ ಅಡಿಯಲ್ಲೇ  ಇದೆ. ಈ  ದೇಶದಲ್ಲಿ ವಕ್ಫ್ ನಿಯಮಾವಳಿಯನ್ನು ಮುಸ್ಲಿಮರು ರಚಿಸಿಲ್ಲ. ಅದನ್ನು ರಚಿಸಿದ್ದು ಮತ್ತು ಪಾರ್ಲಿಮೆಂಟ್‌ನಲ್ಲಿ  ಅಂಗೀಕರಿಸಿಕೊಂಡದ್ದೂ ಇಲ್ಲಿನ ಸರಕಾರಗಳೇ. ಈವರೆಗಿನ ಕಾಂಗ್ರೆಸ್ ಸರಕಾರ, ಬಿಜೆಪಿ ಸರಕಾರ, ಜನತಾ ಸರಕಾರ ಮತ್ತು  ಇನ್ನಿತರ ಸರಕಾರಗಳು ಈ ವಕ್ಫ್ ನಿಯಮಾವಳಿಗಳನ್ನು ಒಪ್ಪಿಕೊಳ್ಳುತ್ತಾ ಅಗತ್ಯ ಕಂಡಾಗ ತಿದ್ದುಪಡಿ ಮಾಡಿಕೊಳ್ಳುತ್ತಾ ಮತ್ತು  ಜಾರಿಮಾಡಿಕೊಳ್ಳುತ್ತಾ ಬಂದಿವೆ. ಈ ಎಲ್ಲದರಲ್ಲೂ ಮುಸ್ಲಿಮರ ಪಾತ್ರ ತೀರಾತೀರಾ ಅತ್ಯಲ್ಪ. ಶಾಸಕಾಂಗ, ನ್ಯಾಯಾಂಗ  ಮತ್ತು ಕಾರ್ಯಾಂಗಗಳಲ್ಲಿ ಜುಜುಬಿ ಅನ್ನುವಷ್ಟೇ ಪ್ರಾತಿನಿಧ್ಯವಿರುವ ಮತ್ತು ಏನೇನೂ ಪ್ರಭಾವಿಯಾಗಿಲ್ಲದ ಮುಸ್ಲಿಮ್  ಸಮುದಾಯಕ್ಕೆ ಈ ಎಲ್ಲ ಪ್ರಕ್ರಿಯೆಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯವೂ ಇಲ್ಲ. ಇಷ್ಟೆಲ್ಲಾ ಇದ್ದೂ ವಕ್ಫ್ ಹೆಸರಲ್ಲಿ ಬಿಜೆಪಿ  ಮತ್ತು ಅವರ ಬೆಂಬಲಿಗರು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ ದಿನಾ ಪ್ರಚೋದನೆ ಮಾಡುತ್ತಿ ರುವುದೆಂದರೆ ಏನರ್ಥ?  ಮುಸ್ಲಿಮರನ್ನು ತೋರಿಸಿ ಹೊಟ್ಟೆ ಹೊರೆಯುವುದಕ್ಕೆ ಇವರಿಗೆ ನಾಚಿಕೆಯೂ ಆಗುವುದಿಲ್ಲವೇ? ಈ ದರಿದ್ರ ರಾಜಕೀಯಕ್ಕೆ  ಸಾಮಾನ್ಯ ಜನರು ಯಾಕೆ ಇನ್ನೂ ಮರುಳಾಗುತ್ತಿದ್ದಾರೆ?

ಕಡುಕೋಳದಲ್ಲಿ ಏನು ನಡೆದಿದೆಯೋ ಅದು ಈ ರಾಜ್ಯದಲ್ಲಿ ಧರ್ಮದ್ವೇಷಕ್ಕೆ ಇನ್ನೂ ಮಾರುಕಟ್ಟೆಯಿದೆ ಎಂಬುದನ್ನು ಸಾರಿ  ಹೇಳಿದ ಪ್ರಸಂಗವಾಗಿದೆ. ಮುಸ್ಲಿಮರ ಮೇಲೆ ದಾಳಿ ಮಾಡುವುದಕ್ಕೆ ಕಾರಣಗಳೇ ಬೇಕಿಲ್ಲ ಎಂದು ಘಂಟಾಘೋಷವಾಗಿ  ಸಾರಿದ ಸಂದರ್ಭವಾಗಿದೆ. ಮುಸ್ಲಿಮರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆವು, ಅಗತ್ಯ ಕಂಡರೆ ಊರಿಂದಲೇ  ಓಡಿಸಬಲ್ಲೆವು ಎಂಬ ಕಾಡು ನ್ಯಾಯವನ್ನು ಪ್ರಾಮಾಣಿಕವಾಗಿ ಜಾರಿ ಮಾಡಿ ತೋರಿಸಿದ ಘಟನೆಯಾಗಿದೆ. ಇದು  ಮುಂದುವರಿಯಬಾರದು. ಕಡುಕೋಳದ ಸಂತ್ರಸ್ತರು ದೂರು ಕೊಟ್ಟಿದ್ದಾರೋ ಇಲ್ಲವೋ, ಆದರೆ ಮುಸ್ಲಿಮರನ್ನು ಊರಿ ನಿಂದ ಪಲಾಯನ ಮಾಡುವಂತೆ ದಾಳಿ ನಡೆಸಲಾದದ್ದು ನಿಜ. ಅವರು ಸಂತ್ರಸ್ತ ರಾಗಿ ಪಕ್ಕದ ಊರಲ್ಲಿ ನೆಲೆಸಿರುವುದೂ  ನಿಜ. ಆದ್ದರಿಂದ, ಇಂಥ ಸ್ಥಿತಿಗೆ ಕಾರಣರಾದ ಮತಾಂಧರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಬೇಕು. ದೇಶದಲ್ಲಿ ಗಲಭೆ ಎಬ್ಬಿಸಲು  ಪ್ರಚೋದಿಸುವ ಯುಎಪಿಎ ಕಾನೂನಿನಡಿ ಕೇಸು ದಾಖಲಿಸಿ ಪಾಠ ಕಲಿಸಬೇಕು.