Monday 23 July 2012

ಭಾರತೀಯರೆಂದರೆ ಯಾರು ಕಾಗೇರಿಯವರೆ?

ಭಾರತೀಯರು ಅಂದರೆ ಯಾರು, ಭಾರತೀಯರಾಗುವುದಕ್ಕೆ ಇರುವ ಅರ್ಹತೆಗಳು ಏನೆಲ್ಲ.. ಎಂಬೆಲ್ಲಾ ಪ್ರಶ್ನೆಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (DSERT) ಹೊರಡಿಸಿದ ಸುತ್ತೋಲೆಯೊಂದು ಹುಟ್ಟು ಹಾಕಿದೆ. `ಭಾರತೀಯರ ಹಬ್ಬ-ಹರಿದಿನಗಳು’ ಎಂಬ 640 ಪುಟಗಳ ಪುಸ್ತಕವನ್ನು ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಕಡ್ಡಾಯವಾಗಿ ಖರೀದಿಸಿ ತಮ್ಮ ಲೈಬ್ರರಿಗಳಲ್ಲಿ ಇಟ್ಟುಕೊಳ್ಳಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 500 ರೂ. ಬೆಲೆಯ ಈ ಪುಸ್ತಕವನ್ನು ಬರೆದಿರುವುದು ಬೆಂಗಳೂರಿಗೆ ಅಷ್ಟಂಗ ಯೋಗ ವಿಜ್ಞಾನ ಮಂದಿರಮ್ ನ  ನಿರ್ದೇಶಕ ಮತ್ತು ಸಂಸ್ಕøತ ತಜ್ಞ ಶ್ರೀ ಶ್ರೀ ರಂಗಪ್ರಿಯ. ವಿಶೇಷ ಏನೆಂದರೆ, ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ದೀಪಾವಳಿ, ಮಹಾ ಶಿವರಾತ್ರಿ, ಅಕ್ಷಯ ತೃತೀಯ.. ಎಂಬುದನ್ನೆಲ್ಲಾ ಬಿಡಿಬಿಡಿಯಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕೇವಲ ಉಪಕರ್ಮಗಳನ್ನು ವಿವರಿಸುವುದಕ್ಕೇ 30 ಪುಟಗಳನ್ನು ಮೀಸಲಿಡಲಾಗಿದೆ. ಅಲ್ಲದೇ ಮೇಲ್ವರ್ಗದ ಆಚರಣೆಗಳಾದ ಚಾತುರ್ಮಾಸ, ಉಪಕರ್ಮ, ಅನಂತ ಪದ್ಮನಾಭ ವ್ರತ, ನರಸಿಂಹ ಜಯಂತಿಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಹಾಗೆಯೇ, ದೇವಾಲಯದ ಗೋಪುರ, ಕಲಶ, ಋಷಿ, ದನಗಳ ಎದುರು ಭಕ್ತರಿಬ್ಬರು ಕೈ ಮುಗಿದು ಪ್ರಾರ್ಥಿಸುವ ಚಿತ್ರವನ್ನು ಮುಖಪುಟದಲ್ಲಿ ಬಳಸಲಾಗಿದೆ.. ಆದರೆ ಈ ಪುಸ್ತಕದಲ್ಲಿ ಮುಸ್ಲಿಮರ ಈದ್, ಕ್ರೈಸ್ತರ ಗುಡ್ ಫ್ರೈಡೇ, ಬೌದ್ಧರ ಬುದ್ಧ ಜಯಂತಿ, ಜೈನರ ಮಹಾವೀರ ಜಯಂತಿಯ ಬಗ್ಗೆ ಒಂದೇ ಒಂದು ಪದವೂ ಇಲ್ಲ. ಹೀಗಿರುವಾಗ ಇಂಥದ್ದೊಂದು ಪುಸ್ತಕವನ್ನು ಶಾಲೆಗಳು ಕಡ್ಡಾಯವಾಗಿ ಖರೀದಿಸಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದ್ದಾದರೂ ಏಕೆ? ಭಾರತೀಯರು ಅಂದರೆ ಹಿಂದೂಗಳು ಎಂದರ್ಥವೇ? ವಿದ್ಯಾರ್ಥಿಗಳನ್ನು ಭಾರತೀಯರು ಮತ್ತು ಅಭಾರತೀಯರು ಎಂದು ವಿಂಗಡಿಸಲು ಪ್ರಚೋದನೆ ಕೊಡುವ ಪುಸ್ತಕವೊಂದನ್ನು ಶಿಕ್ಷಣ ಇಲಾಖೆ ಶಾಲೆಗಳಿಗೆ ಕಡ್ಡಾಯಗೊಳಿಸಿದ್ದು ಎಷ್ಟು ಸರಿ?
ನಿಜವಾಗಿ, ಶಾಲೆಗಳ ಮುಖ್ಯ ಉದ್ದೇಶ ಒಳ್ಳೆಯ ಭಾರತೀಯರನ್ನು ತಯಾರುಗೊಳಿಸುವುದು. ಭಾರತದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರು ಎಂಬುದಾಗಿ ಶಾಲೆಗಳಲ್ಲಿ ಕಲಿಸಿಕೊಡಲಾಗುತ್ತದೆ. ಶಿಕ್ಷಣ ಮಂತ್ರಿ ಕಾಗೇರಿಯವರು ಬಿಡುವು ಸಿಕ್ಕಾಗಲೆಲ್ಲಾ ಶಾಲೆಗಳಿಗೆ ಭೇಟಿ ಕೊಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಪ್ರಚೋದಿಸುವುದೂ ನಡೆಯುತ್ತಿದೆ. ಇಷ್ಟಕ್ಕೂ, ಕ್ರೈಸ್ತ ಅಥವಾ ಮುಸ್ಲಿಮ್ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಾಲೆಗೇ ಪ್ರಥಮ ಸ್ಥಾನ ಪಡೆದರೆ ಅಥವಾ ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತಂದರೆ ಅವರನ್ನು ಅಭಾರತೀಯರು ಎಂದು ಯಾವ ಶಿಕ್ಷಕರೇ ಆಗಲಿ ಕರೆಯುತ್ತಾರಾ? ಝಹೀರ್ ಖಾನ್, ಇರ್ಫಾನ್ ಪಠಾಣ್ ರನ್ನು  ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ಎಂದೇ ಕರೆಯಲಾಗುತ್ತದಲ್ಲವೇ? ಎ.ಪಿ.ಜೆ. ಅಬ್ದುಲ್ ಕಲಾಮ್ ರು  ಭಾರತೀಯ ರಾಷ್ಟ್ರಪತಿ ಎಂದು ಕರೆಸಿ ಕೊಂಡಿರುತ್ತಾರೆಯೇ ಹೊರತು ಅಭಾರತೀಯ ಎಂದಲ್ಲವಲ್ಲ. ಇಷ್ಟಿದ್ದೂ `ಭಾರತೀಯರ ಹಬ್ಬ-ಹರಿದಿನಗಳಲ್ಲಿ’ ಮುಸ್ಲಿಮರು ಕಾಣೆಯಾದದ್ದೇಕೆ? ಕ್ರೈಸ್ತರು, ಇನ್ನಿತರರನ್ನು ಹೊರಗಿಟ್ಟದ್ದೇಕೆ? ಒಂದು ವೇಳೆ, ಅದು ರಂಗಪ್ರಿಯ ಅವರ ಖಾಸಗಿ ಪುಸ್ತಕವಷ್ಟೇ ಆಗಿದ್ದರೆ ಆ ಬಗ್ಗೆ ಚರ್ಚಿಸುವ ಅಗತ್ಯವೇ ಇರಲಿಲ್ಲ. ಆದರೆ ಆ ಪುಸ್ತಕವನ್ನು ಲೈಬ್ರರಿಯಲ್ಲಿ ಇಡಲು ಸರಕಾರವೇ ಆದೇಶಿಸಿದೆ. ಇದರರ್ಥವೇನು? ಹಿಂದೂಗಳು ಮಾತ್ರ ಭಾರತೀಯರು ಎಂಬ ನಿಲುವು ಈ ಸರಕಾರದ್ದೂ ಎಂದೇ ಅಲ್ಲವೇ? ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಹಿಂದೂಗಳ ಹಬ್ಬಗಳನ್ನು ಭಾರತೀಯರ ಹಬ್ಬಗಳು ಎಂಬುದಾಗಿ ವಿದ್ಯಾರ್ಥಿಗಳ ಮೆದುಳಿಗೆ ತುರುಕಿಸುವುದರ ಉದ್ದೇಶ ಏನು? ಇದು ಭಾರತೀಕರಣವೇ ಅಥವಾ ಹಿಂದೂಕರಣವೇ?
ಹಿಂದೂ ಧರ್ಮದ ಮೇಲೆ ಕಾಗೇರಿ ಅವರಿಗೆ ಅಥವಾ ರಾಜ್ಯ ಸರಕಾರದ ಇನ್ನಾವುದೇ ಸಚಿವರಿಗೆ ಒಲವು ಇರುವುದು ಅಪರಾಧ ಖಂಡಿತ ಅಲ್ಲ. ಅದು ಅಪರಾಧ ಆಗುವುದು, ಆ ಒಲವನ್ನು ಕಾನೂನಾಗಿಸಿ ಎಲ್ಲರ ಮೇಲೂ ಹೇರುವಾಗ. ನಿಜವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೆದುಳು ಕಾಗೇರಿಯವರಷ್ಟು ಬೆಳೆದಿರುವುದಿಲ್ಲ. ಅವು ಶಾಲೆಯಲ್ಲಿ ಏನನ್ನು ಹೇಳಿಕೊಡಲಾಗುತ್ತದೋ ಅವನ್ನೇ ಬಲವಾಗಿ ನಂಬುತ್ತವೆ. ಲೈಬ್ರರಿಗಳಲ್ಲಿ ಯಾವೆಲ್ಲ ಪುಸ್ತಕಗಳಿವೆಯೋ ಮತ್ತು ಅವುಗಳೊಳಗೆ ಏನೇನೆಲ್ಲ ಬರೆದಿವೆಯೋ ಅವೆಲ್ಲವನ್ನೂ ಸತ್ಯವೆಂದೇ ನಂಬುತ್ತವೆ. ಇಂಥ ಮಕ್ಕಳ ಕೈಗೆ ರಂಗಪ್ರಿಯರ ಪುಸ್ತಕ ಸಿಕ್ಕರೆ ಏನಾದೀತು? ಹಿಂದೂ ವಿದ್ಯಾರ್ಥಿಯೋರ್ವ ತನ್ನ ಮುಸ್ಲಿಮ್ ಸಹಪಾಠಿಯನ್ನು ವಿದೇಶೀಯನಂತೆ ನೋಡಲು ಪ್ರಾರಂಭಿಸಿದರೆ ಏನು ಮಾಡುವುದು? ಹೀಗೆ ಬೆಳೆಯುವ ಮಕ್ಕಳು ಭಾರತ ಅಂದರೆ ಅದು ಹಿಂದೂಗಳದ್ದು ಎಂದು ಪ್ರತಿಪಾದಿಸುವ ಸಾಧ್ಯತೆ ಇಲ್ಲವೇ?
         ಈ ದೇಶದ ಮುಸ್ಲಿಮರಿಗೆ ಭಾರತೀಯತೆ, ದೇಶಪ್ರೇಮವನ್ನು ಕಾಗೇರಿಯವರ ಪಕ್ಷ ಆಗಾಗ ಬೋಧಿಸುತ್ತಿರುತ್ತದೆ. ಭಾರತ-ಪಾಕ್ ಗಳ  ಮಧ್ಯೆ ಕ್ರಿಕೆಟ್ ಪಂದ್ಯಾಟ ನಡೆದಾಗಲೆಲ್ಲ ಅದು ಭಾರತೀಯ ಮತ್ತು ವಿದೇಶೀಯರನ್ನು ಹುಡುಕುವುದೂ ಇದೆ. ಇಂಥ ಪಕ್ಷವೊಂದು ವಿದ್ಯಾರ್ಥಿಗಳನ್ನು ಬೆಳೆಸಬೇಕಾದದ್ದು ಯಾವ ಮಾನಸಿಕತೆಯೊಂದಿಗೆ? ಹಿಂದೂಯೇತರರನ್ನು ಭಾರತೀಯರೆಂದು ಒಪ್ಪಿಕೊಳ್ಳಲೇ ಸಿದ್ಧರಿಲ್ಲದವರು, ಭಾರತೀಯತೆಯ ಪಾಠ ಹೇಳುವುದಕ್ಕೆ ಎಷ್ಟು ಅರ್ಹರು? ಅಂದಹಾಗೆ, ಹಿಂದೂ ಧರ್ಮದ ಬಗ್ಗೆ ಕಾಗೇರಿಯವರ ವೈಯಕ್ತಿಕ ನಿಲುವು ಏನೇ ಇರಲಿ, ಸಚಿವರಾಗಿ ಅದನ್ನು ಶಾಲೆಗಳ ಮೇಲೆ ಹೇರುವುದು ಖಂಡಿತ ತಪ್ಪು. ನಾಳೆ ಮುಸ್ಲಿಮ್ ಸಚಿವರೊಬ್ಬರು ಇಸ್ಲಾಮಿನ ಹಬ್ಬಗಳನ್ನಷ್ಟೇ ಪಟ್ಟಿ ಮಾಡಿ, `ಭಾರತೀಯರ ಹಬ್ಬಗಳು’ ಎಂಬ ಶೀರ್ಷಿಕೆಯಲ್ಲಿರುವ ಪುಸ್ತಕವನ್ನು ಶಾಲಾ ಲೈಬ್ರರಿಗೆ ಸರಬರಾಜು ಮಾಡಿದರೆ ಕಾಗೇರಿಯವರ ನಿಲುವು ಏನಿದ್ದೀತು? ಶಿಕ್ಷಣದ ಇಸ್ಲಾಮೀಕರಣ, ತಾಲಿಬಾನೀಕರಣ ಎಂದೆಲ್ಲಾ ಅವರು ಹೇಳಲಾರರೇ? ಶಿಕ್ಷಣ ಇಲಾಖೆಯು ಕಾಗೇರಿಯವರ ಸ್ವಂತ ಆಸ್ತಿಯಲ್ಲ. ಮಕ್ಕಳನ್ನು ಭಾರತೀಯ-ವಿದೇಶೀಯ ಎಂದು ವಿಭಜಿಸುವುದಕ್ಕೆ ಅವರಿಗೆ ಈ ಸಂವಿಧಾನ ಅವಕಾಶವನ್ನೂ ಕೊಟ್ಟಿಲ್ಲ. ಒಂದು ವೇಳೆ ಕಾಗೇರಿಯವರಿಗೆ ರಂಗಪ್ರಿಯರ ಪುಸ್ತಕದಲ್ಲಿ ಅಷ್ಟೊಂದು ಪ್ರೀತಿಯಿದ್ದರೆ ತನ್ನ ಮನೆಯ ಕಪಾಟಿನಲ್ಲಿ ಅದನ್ನು ಧಾರಾಳ ಇಟ್ಟುಕೊಳ್ಳಲಿ. ಆದರೆ ಶಾಲೆಗಳ ಲೈಬ್ರರಿಗಳಲ್ಲಿ ಅದರ ಅಗತ್ಯವಿಲ್ಲ.

No comments:

Post a Comment