Monday 23 June 2014

ಹಿರಾದ `ಓದ’ನ್ನು ಸಮಾಜಕ್ಕೂ ಕೇಳಿಸೋಣ

   ಹಿರಾ ಗುಹೆಯಲ್ಲಿ ತಂಗಿ ಮಾನವ ಸಂಸ್ಕರಣೆಯ ಮೊಟ್ಟ ಮೊದಲ ಪಾಠವನ್ನು ಕೇಳಿಸಿಕೊಂಡ ನಂತರ ಪ್ರವಾದಿ ಮುಹಮ್ಮದ್(ಸ) ಮತ್ತೆಂದೂ ‘ಹಿರಾ’ದಲ್ಲಿ ತಂಗಲಿಲ್ಲ. ಬಳಿಕ ಅವರು ಸಮಾಜದ ಕಡೆಗೆ ನಡೆದರು. ನಿಜವಾಗಿ, ಅಂದಿನ ಸಮಾಜದಲ್ಲಿದ್ದ ಗದ್ದಲ, ಗೊಂದಲ, ಹಿಂಸೆ, ಅಸಮಾನತೆ, ಅನ್ಯಾಯಗಳನ್ನು ಪರಿಗಣಿಸಿದರೆ, ಹಿರಾ ಗುಹೆಯು ಪ್ರವಾದಿಯವರಿಗೆ(ಸ) ಮತ್ತೆ ಮತ್ತೆ ತಂಗಲೇಬೇಕಾದ ಮತ್ತು ಶಾಶ್ವತ ವಾಸಸ್ಥಳವನ್ನಾಗಿ ಮಾಡಿಕೊಳ್ಳಲೇ ಬೇಕಾದಷ್ಟು ಯೋಗ್ಯ ನೆಲೆಯಾಗಿತ್ತು. ಯಾಕೆಂದರೆ, ಹಿರಾದಲ್ಲಿ ಅಶಾಂತಿ ಇರಲಿಲ್ಲ. ರಕ್ತದಾಹ ಇರಲಿಲ್ಲ. ಮನುಷ್ಯರಲ್ಲಿಯೇ ಕೆಲವರು ಉಚ್ಛರು, ಕೆಲವರು ಮ್ಲೇಚ್ಛರು; ಕೆಲವು ಯಜಮಾನರು, ಅಸಂಖ್ಯ ದಾಸರು; ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ... ಮುಂತಾದ ಪ್ರಕೃತಿ ವಿರೋಧಿ ವಿಭಜನೆಗಳಿರಲಿಲ್ಲ. ಆದರೂ ಪ್ರವಾದಿ(ಸ) ಸಮಾಜವನ್ನೇ ಆಯ್ಕೆ ಮಾಡಿಕೊಂಡರು. ಯಾಕೆಂದರೆ, ಅವರು ಗುಹೆಯಲ್ಲಿ ಯಾವ ಪಾಠಗಳನ್ನು ಕೇಳಿಸಿಕೊಂಡಿದ್ದರೋ ಅದು ಯಾವ ಕಾರಣಕ್ಕೂ ಅಲ್ಲಿಗೆ ಅಗತ್ಯವಿರಲಿಲ್ಲ, ಗಾಢ ಮೌನ, ನೀರವತೆ, ಏಕತಾನತೆಯ ಗುಹೆಯಲ್ಲಿ, ‘ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ..’ ಎಂದು ಹೇಳುವುದರಿಂದ ಆಗುವ ಪ್ರಯೋಜನವಾದರೂ ಏನು? ಅವರು `ಓದ'ಬೇಕಾದದ್ದು ಸಮಾಜದ ಮುಂದೆ. ಯಾಕೆಂದರೆ, ಆ ಸಮಾಜವು ನಿಜವಾದ `ಓದ'ನ್ನು, ಓದಿನ ಮರ್ಮವನ್ನು ಸಂಪೂರ್ಣ ಮರೆತಿತ್ತು. ಆದ್ದರಿಂದಲೇ, ಪ್ರವಾದಿಯವರು(ಸ) ಓದಲೇಬೇಕಾದ ಜಾಗಕ್ಕೆ ಹಿರಾ ಗುಹೆಯಿಂದ ಮರಳಿದರು. ಹಾಗೆ ಮರಳುವಾಗ ಆ ಮರಳುವ ಜಾಗ ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಖಂಡಿತ ಗೊತ್ತಿತ್ತು. ಅವರು ಏನನ್ನು ಓದಲು ಹೊರಟಿದ್ದರೋ ಅದನ್ನು ಆ ಸಮಾಜ ಒಕ್ಕೊರಳಿನಿಂದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತದೆ ಎಂದು ನಂಬುವಷ್ಟು ಮುಗ್ಧರೂ ಅವರಾಗಿರಲಿಲ್ಲ. ಒಂದು ವೇಳೆ ಹಿರಾದಲ್ಲಿ ಅವರು ಏನನ್ನು ಕೇಳಿಸಿಕೊಂಡಿದ್ದರೋ ಅದನ್ನು ಸಮಾಜದ ಮುಂದೆ ಹೇಳದೇ ಹಿರಾ ಗುಹೆಯಲ್ಲೇ ಬಿಟ್ಟು ಬರುತ್ತಿದ್ದರೆ ಆ ಸಮಾಜ ಪ್ರವಾದಿಯವರ(ಸ) ಮೇಲೆ ಕಲ್ಲೆಸೆಯುತ್ತಲೂ ಇರಲಿಲ್ಲ. ಯುದ್ಧಕ್ಕೆ ನಿಲ್ಲುತ್ತಲೂ ಇರಲಿಲ್ಲ. ಆದರೆ ಪ್ರವಾದಿ ಹಿರಾ ಎಂಬ ಸುರಕ್ಷಿತ ಪ್ರದೇಶಕ್ಕಿಂತ ಸಮಾಜ ಎಂಬ ಅಸುರಕ್ಷಿತ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡರು. ಸವಾಲಿಗೆ ಮುಖಾಮುಖಿಯಾದರು. ಅನ್ಯಾಯ, ಅಕ್ರಮ, ಗೊಂದಲ, ರಕ್ತಪಾತ, ಅಶಾಂತಿಗಳಿಗೆ ಈ `ಓದ'ನ್ನು ಪರಿಹಾರವಾಗಿ ಸೂಚಿಸಿದರು. ಅಂತಿಮವಾಗಿ ಆ `ಓದು' ಆ ಸಮಾಜದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಿತೆಂದರೆ, ಹೆಣ್ಣನ್ನು ದ್ವೇಷಿಸುತ್ತಿದ್ದ ಅದೇ ಮಂದಿ ಹೆಣ್ಣು ಮಗುವಿಗಾಗಿ ಪ್ರಾರ್ಥಿಸುವಷ್ಟು. ಶ್ರೇಣೀಕೃತ ವ್ಯವಸ್ಥೆಯನ್ನು ಸಹಜ ಧರ್ಮವಾಗಿ ಪ್ರತಿಪಾದಿಸುತ್ತಿದ್ದವರೇ ಮ್ಲೇಚ್ಛನ ಜೊತೆ ಒಂದೇ ಬಟ್ಟಲಲ್ಲಿ ಊಟ ಮಾಡುವಷ್ಟು.  
   ರಮಝಾನ್ ಎಂಬುದು ಅದೇ `ಓದಿನ' ಪುಟ್ಟದೊಂದು ಬೀಜ. ಈ ಬೀಜ ಪ್ರತಿಯೋರ್ವ ಉಪವಾಸಿಗನ ಅಂತರಂಗದಲ್ಲೂ ಮೊಳಕೆಯೊಡೆಯಬೇಕು. ಅಂದು `ಹಿರಾಗುಹೆ ಮತ್ತು ಆ ಸಮಾಜದ ಮಧ್ಯೆ' ಎಷ್ಟು ವ್ಯತ್ಯಾಸಗಳಿದ್ದುವೋ ಅಷ್ಟೇ ವ್ಯತ್ಯಾಸ ಆ ‘ಓದು’ ಮತ್ತು ಇವತ್ತಿನ ಸಮಾಜದ ಮಧ್ಯೆ ಇವತ್ತೂ ಇದೆ. ಆದ್ದರಿಂದಲೇ, ಆ ‘ಓದ’ನ್ನು ಮಸೀದಿ ಎಂಬ ಗುಹೆಯಿಂದ ಹೊರಗೆ ತರಬೇಕು. ಅದನ್ನು ಸಮಾಜದೊಂದಿಗೆ ಮುಖಾಮುಖಿಯಾಗಿಸಬೇಕು. ಅದು ಸಾಧ್ಯವಾದರೆ ಖಂಡಿತ ಮುಂದೆ ಈ ಸಮಾಜವೇ ಆ ‘ಓದನ್ನು’ ಪ್ರೀತಿಸಬಹುದು. ಬಹುಶಃ, ರಮಝಾನ್ ಇವತ್ತಿನ ದಿನಗಳಲ್ಲಿ ನೀಡುವ ಮತ್ತು ನೀಡಬೇಕಾದ ಪ್ರಬಲ ಸಂದೇಶ ಇದು. ರಮಝಾನ್ ಒಂದು ಭರವಸೆ. ಈ ಭರವಸೆ ಪ್ರತಿ ಉಪವಾಸಿಗರನ್ನೂ ಎಚ್ಚರಗೊಳಿಸಿದರೆ ಆ ಬಳಿಕ ಸಮಾಜದಲ್ಲಿ ‘ಅಸುರಕ್ಷಿತ’ ಪ್ರದೇಶ ಇರುವುದಕ್ಕೆ ಸಾಧ್ಯವೇ ಇಲ್ಲ. ನಾವು ಹಿರಾದ ಕಡೆಗಲ್ಲ, ಸಮಾಜದ ಕಡೆಗೆ ಮುಖ ಮಾಡೋಣ. ಭರವಸೆಯೆಂಬ ರಮಝಾನ್ ಸಸಿಯನ್ನು ಪ್ರತಿಯೋರ್ವರ ಅಂತರಂಗದಲ್ಲೂ ನೆಡೋಣ. ಹಿರಾದ ‘ಓದ’ನ್ನು ಸಮಾಜಕ್ಕೂ ಕೇಳಿಸೋಣ.

No comments:

Post a Comment