Friday 26 August 2016

ಕಾಶ್ಮೀರಕ್ಕೆ ಬಲೂಚಿಸ್ತಾನ ಉತ್ತರವೇ?

       ಆಗಸ್ಟ್  15ರಂದು ಕೆಂಪು ಕೋಟೆಯಿಂದ ನೀಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಪ್ರಬಲ ಎದಿರೇಟನ್ನು ನೀಡಿದ್ದಾರೆ ಎಂದು ಅವರ ಬೆಂಬಲಿಗರು ಮತ್ತು ಮಾಧ್ಯಮದ ಒಂದು ವಿಭಾಗವು ಕೊಂಡಾಡುತ್ತಿರುವುದು ಪರ ವಿರುದ್ಧ ಅಭಿಪ್ರಾಯಕ್ಕೆ ಕಾರಣವಾಗಿದೆ. ಕಾಶ್ಮೀರ ಮತ್ತು ಬಲೂಚಿಸ್ತಾನ ಪರಸ್ಪರ ಹೋಲಿಕೆಗೆ ಅರ್ಹವೇ? ಎರಡೂ ಕಡೆಯ ವಾತಾವರಣ ಒಂದೇ ರೀತಿಯದೇ? ಇಂಥದ್ದೊಂದು ಹೋಲಿಕೆಯಿಂದ ಆಗಬಹುದಾದ ದೂರಗಾಮಿ ಪರಿಣಾಮಗಳೇನು? ಕಳೆದ 65-70 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗಳಿಸಿಕೊಂಡು ಬಂದ ವಿಶ್ವಾಸ ಮತ್ತು ವರ್ಚಸ್ಸಿನ ಮೇಲೆ ಮೋದಿಯವರ `ಬಲೂಚಿಸ್ತಾನ’ ಯಾವ ಬಗೆಯ ಪರಿಣಾಮ ಬೀರಬಹುದು?
     ನಾವು ಈ ಹೋಲಿಕೆಯ ಲಾಭ-ನಷ್ಟಗಳನ್ನು ಲೆಕ್ಕ ಹಾಕುವುದಕ್ಕೆ ನೆಹರೂ, ಇಂದಿರಾ, ವಾಜಪೇಯಿ ಮತ್ತು ಮನಮೋಹನ್ ಸಿಂಗ್‍ರ ಆಡಳಿತ ಕಾಲದಲ್ಲಿ ಕಾಶ್ಮೀರಿ ಸಮಸ್ಯೆಯನ್ನು ಪರಿಹರಿಸಲು ನೀಡಲಾದ ಒತ್ತು ಮತ್ತು ಪ್ರಯತ್ನದ ವಿವರಗಳನ್ನು ಇಲ್ಲಿ ಕಲೆ ಹಾಕಬೇಕಾಗಿಲ್ಲ ಅಥವಾ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟದ ರಕ್ತ ಸಿಕ್ತ ಅಧ್ಯಾಯವನ್ನು ಎಣಿಸಿ ಎಣಿಸಿ ಹೇಳಬೇಕಾಗಿಯೂ ಇಲ್ಲ. ಕೇವಲ ಕಳೆದ ಎರಡು ತಿಂಗಳಲ್ಲಿ ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಗೆ ಪಾಕಿಸ್ತಾನವು ಬರೆದಿರುವ ಕಾಶ್ಮೀರ ಸಂಬಂಧಿ ಪತ್ರಗಳೇ ಇದಕ್ಕೆ ಧಾರಾಳ ಸಾಕು. ಪಾಕಿಸ್ತಾನದ ಈ ಪತ್ರಗಳಿಗೆ ಜಗತ್ತಿನ ಯಾವ ರಾಷ್ಟ್ರವೂ ತನ್ನ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡಿದ ಈ ಹೊತ್ತಿನ ವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀರಾ ತೀರಾ ಒಂಟಿ. ಇದು ಸಾಧ್ಯವಾಗಿರುವುದು ನರೇಂದ್ರ ಮೋದಿಯವರಿಂದಲ್ಲ. ಈ ದೇಶವನ್ನು ಈ ಮೊದಲು ಆಳಿದ ಪ್ರಧಾನಿಗಳ ದೂರದೃಷ್ಟಿ ಮತ್ತು ಚತುರ ವಿದೇಶ ನೀತಿಯಿಂದ. ಕಾಶ್ಮೀರವನ್ನು ಭಾರತದ ಭಾಗವಾಗಿ ಜಗತ್ತಿಗೆ ಮನದಟ್ಟು ಮಾಡುವುದಕ್ಕೆ ಅವರೆಲ್ಲ ಅತ್ಯಂತ ಯಶಸ್ವಿಯಾಗಿದ್ದರು. ಅಪರೂಪಕ್ಕೆ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಪ್ರಸ್ತಾಪ ಎತ್ತುತ್ತಿದ್ದರೂ ಜಗತ್ತು ಅದಕ್ಕೆ ಕಿವಿಗೊಡದಷ್ಟು ಭಾರತದ ವಿದೇಶಾಂಗ ನೀತಿ ಪ್ರಭಾವಶಾಲಿಯಾಗಿತ್ತು. ಸದ್ಯ ನರೇಂದ್ರ ಮೋದಿಯವರು ಈ ಪರಂಪರೆಯಿಂದ ಹೊರಬಂದಿದ್ದಾರೆ. ಪಾಕಿಸ್ತಾನದ ಕಾಶ್ಮೀರ ಮಂತ್ರಕ್ಕೆ ಪ್ರತಿಮಂತ್ರವಾಗಿ ಅವರು ಬಲೂಚಿಸ್ತಾನವನ್ನು ಜಪಿಸಿದ್ದಾರೆ. ಬಹುಶಃ ಸ್ವಾತಂತ್ರ್ಯದ 70 ವರ್ಷಗಳಲ್ಲೇ ಭಾರತೀಯ ವಿದೇಶಾಂಗ ನೀತಿಯಲ್ಲಾದ ಬಹುದೊಡ್ಡ ಪಲ್ಲಟ ಇದು. ಇದನ್ನು ಅವರ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಪಾಕ್‍ನಿಂದ ದೇಶಭ್ರಷ್ಟರಾಗಿ ಬದುಕುತ್ತಿರುವ ಬಲೂಚಿಗಳು ಮೋದಿಯವರನ್ನು ಅಭಿನಂದಿಸಿರುವುದನ್ನು ವೈಭವೀಕರಿಸಿ ಪ್ರಸಾರ ಮಾಡುತ್ತಿದ್ದಾರೆ. ಇದಕ್ಕೆ ಹೊರತಾಗಿ ಬಲೂಚಿಸ್ತಾನಕ್ಕೂ ಕಾಶ್ಮೀರಕ್ಕೂ ನಡುವೆ ಹೋಲಿಕೆ ಸಿಂಧುವೇ ಎಂಬ ಮುಖ್ಯ ಪ್ರಶ್ನೆಯನ್ನು ಯಾರೂ ಮುನ್ನೆಲೆಗೆ ತರುತ್ತಿಲ್ಲ. ಇವತ್ತು ನರೇಂದ್ರ ಮೋದಿಯವರನ್ನು ಅಭಿನಂದಿಸಿ ಹೊರಬರುತ್ತಿರುವ ವೀಡಿಯೋ ಕ್ಲಿಪ್ಪಿಂಗ್‍ಗಳು ಮತ್ತು ಹೇಳಿಕೆಗಳೆಲ್ಲ ಪಾಕ್‍ನಲ್ಲಿ ನಿಷೇಧಕ್ಕೆ ಒಳಗಾಗಿರುವ ಬಲೂಚಿಸ್ತಾನದ ಬಲೂಚ್ ರಿಪಬ್ಲಿಕನ್ ಪಾರ್ಟಿಯ ನಾಯಕರದ್ದು ಅಥವಾ ಬೆಂಬಲಿಗರದ್ದು. ಭಯೋತ್ಪಾದನಾ ಚಟುವಟಿಕೆಯ ಆರೋಪದಲ್ಲಿ ಈ ಪಕ್ಷವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಅದರ ನಾಯಕರು ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ, ಅವರ ಮೋದಿ ಗುಣಗಾನಕ್ಕೆ ನಾವು ಹಿಗ್ಗುವುದು ಮತ್ತು ಮೋದಿಯವರ ವಿದೇಶ ನೀತಿಗೆ ಸಿಕ್ಕ ಮಾನ್ಯತೆ ಇದು ಎಂದು ಬಿಂಬಿಸಿಕೊಳ್ಳುವುದು ಎಷ್ಟು ಅಪ್ರಬುದ್ಧ ಮತ್ತು ಅಪಾಯಕಾರಿ ನಿಲುವು ಎಂದರೆ, ಇದು ಈಶಾನ್ಯ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ನಿಷೇಧಿತ ಸಂಘಟನೆಗಳ ನಾಯಕರ ಹೇಳಿಕೆಗಳನ್ನು ಪಾಕಿಸ್ತಾನ ಮೆಚ್ಚಿಕೊಂಡಂತೆ. ಮಣಿಪುರ, ಮೇಘಾಲಯ ಅಥವಾ ಒಟ್ಟು ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆಗಾಗಿ ಸಶಸ್ತ್ರ ಹೋರಾಟಗಳು ನಡೆಯುತ್ತಿವೆ. ಒಂದಕ್ಕಿಂತ ಹೆಚ್ಚು ಸಂಘಟನೆಗಳು ನಿಷೇಧಕ್ಕೆ ಒಳಗಾಗಿವೆ. ಅದರ ನಾಯಕರು ದೇಶಭ್ರಷ್ಟರಾಗಿ ಬರ್ಮಾ, ಚೀನಾ, ಬಂಗ್ಲಾದೊಳಗೆ ಬದುಕುತ್ತಿದ್ದಾರೆ. ಬಲೂಚಿಸ್ತಾನದ ಪರಿಸ್ಥಿತಿ ಬಹುತೇಕ ಹೀಗೆಯೇ. ಆದ್ದರಿಂದ, ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪಿಸುವ ಮೂಲಕ ಪಾಕ್‍ನ ಕಾಶ್ಮೀರವೆಂಬ ದುರ್ಬಲ ಅಸ್ತ್ರಕ್ಕೆ ಈಶಾನ್ಯ ರಾಜ್ಯಗಳನ್ನು ಕೊಟ್ಟುಬಿಟ್ಟು ಅವರ ಅಸ್ತ್ರವನ್ನು ಪ್ರಬಲಗೊಳಿಸುವ ಪ್ರಯತ್ನ ನಡೆಸಿದಂತಾಗಿದೆ. ನಾಳೆ ವಿಶ್ವಸಂಸ್ಥೆಯಲ್ಲಿ, ಕಾಶ್ಮೀರದ ಜೊತೆಗೇ ಈಶಾನ್ಯ ಭಾರತದಲ್ಲಾಗುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಪಾಕ್ ಧ್ವನಿ ಎತ್ತಬಹುದು. ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಅದು ಉಲ್ಲೇಖಿಸಬಹುದು. ಆಗ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿ ಸಂಘಟನೆಗಳು ಪಾಕಿಸ್ತಾನವನ್ನು ಅಭಿನಂದಿಸಿ ವೀಡಿಯೋ ಕ್ಲಿಪ್ಪಿಂಗ್‍ಗಳನ್ನು ಕಳುಹಿಸಬಹುದು. ಪಾಕ್‍ನ ಮಾಧ್ಯಮಗಳು ಅದನ್ನು ಪಾಕ್‍ನ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಿಂಬಿಸಬಹುದು. ಇದರಿಂದ ಭಾರತ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ಕಾಶ್ಮೀರವನ್ನು ಹಿಡಿದು ಒದ್ದಾಡುತ್ತಿರುವ ಪಾಕ್‍ನ ಕೈಗೆ ಪುಕ್ಕಟೆಯಾಗಿ ಈಶಾನ್ಯ ಭಾರತವನ್ನೇ ಕೊಡುವ ದೂರದೃಷ್ಟಿ ರಹಿತ ಉದ್ವೇಗದ ನಿಲುವು ಇದು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಲು ಮೋದಿಯವರ ಪಕ್ಷ ಚಿಂತಿಸುತ್ತಿರುವಾಗ ಪಾಕಿಸ್ತಾನವು 2009ರಲ್ಲೇ ಬಲೂಚಿಸ್ತಾನಕ್ಕೆ ಸ್ವಯಮಾಡಳಿತದ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ, ಬಲೂಚ್‍ನಲ್ಲಿರುವಂತೆ ಕಾಶ್ಮೀರದಲ್ಲೂ ಸ್ವಯಮಾಡಳಿತಕ್ಕೆ ಅವಕಾಶ ಮಾಡಿಕೊಡಿ ಎಂದು ಕಾಶ್ಮೀರೀಗಳು ಮುಂದಿನ ದಿನಗಳಲ್ಲಿ ಒತ್ತಾಯಿಸಿದರೆ ಮೋದಿಯವರು ಏನು ಮಾಡಬಲ್ಲರು? 370ನೇ ವಿಧಿಯನ್ನೇ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಪಕ್ಷವೊಂದು ಸ್ವಯಮಾಡಳಿತ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಾಗುತ್ತದೆಯೇ? ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಪರಿಗಣಿಸಿ ಬಲೂಚಿಸ್ತಾನದಲ್ಲಾಗುತ್ತಿರುವ  ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ವಿಶ್ವರಾಷ್ಟ್ರಗಳು ಅಧ್ಯಯನಕ್ಕೆ ಮುಂದಾದರೆ ಅದರ ಪರಿಣಾಮ ಭಾರತದ ಮೇಲೂ ಆಗದೇ? ಭಾರತವೂ ಅಂಥದ್ದೊಂದು ವಿದೇಶಿ ಹಸ್ತಕ್ಷೇಪಕ್ಕೆ ಬಾಗಿಲು ತೆರೆದು ಕೊಡಬೇಕಾದ ಅನಿವಾರ್ಯತೆಗೆ ಒಳಗಾಗದೇ? ಹಾಗಂತ,
        ಕಳೆದೆರಡು ವರ್ಷಗಳಲ್ಲಿ ನರೇಂದ್ರ ಮೋದಿಯವರು ಭಾರತ ಮತ್ತು ಪಾಕ್‍ಗಳ ನಡುವೆ ಸಂಬಂಧ ಸುಧಾರಣೆಗೆ ಪ್ರಯತ್ನಿಸಿರುವುದನ್ನು ನಾವು ತೃಣೀಕರಿಸಬೇಕಿಲ್ಲ. ತನ್ನ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೇ ಅವರು ಪಾಕ್ ಪ್ರಧಾನಿ ನವಾಝ ಶರೀಫ್‍ರನ್ನು ಆಹ್ವಾನಿಸಿದರು. ಮಾತುಕತೆಗೂ ಆಹ್ವಾನ ನೀಡಿದರು. ಪಠಾಣ್‍ಕೋಟ್ ದಾಳಿಯ ತರುವಾಯ ಪಾಕ್‍ನ ಭಯೋತ್ಪಾದನಾ ತನಿಖಾ ತಂಡಕ್ಕೆ ಪಠಾಣ್‍ಕೋಟ್‍ಗೆ ಬಂದು ತನಿಖಿಸಲು ಅವಕಾಶ ಮಾಡಿಕೊಟ್ಟರು. ಶರೀಫ್‍ರ ಹುಟ್ಟು ಹಬ್ಬದಲ್ಲಿ ದಿಢೀರ್ ಭಾಗಿಯಾದರು.. ಆದರೂ ಪಾಕ್‍ನಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಆಕ್ರೋಶ ಅವರಲ್ಲಿದ್ದರೆ ಅದನ್ನು ಅಸಾಧು ಎನ್ನುವಂತಿಲ್ಲ. ಆದರೆ, ವಿದೇಶಾಂಗ ನೀತಿಯೆಂಬುದು ಎರಡೂವರೆ ಗಂಟೆಗಳಲ್ಲಿ ಎಲ್ಲವೂ ಮುಗಿದು ಹೋಗುವ ಸಿನಿಮಾದಂತೆ ಅಲ್ಲವಲ್ಲ. ಅದು  ಆಕ್ರೋಶಕ್ಕಿಂತ ಹೊರತಾದುದು.  ಅದು ಬುದ್ಧಿವಂತಿಕೆ, ಜಾಣತನ, ಸಂಯಮ, ಚತುರತೆಯನ್ನು ಬಯಸುತ್ತದೆ. ದೂರಗಾಮಿ ಗುರಿಯನ್ನು ಇಟ್ಟುಕೊಂಡು ಅತ್ಯಂತ ನಾಜೂಕಿನಿಂದ ನಡೆಯಬೇಕಾದ ಕ್ಷೇತ್ರ ಇದು.  ಭವಿಷ್ಯದ ಅಸಂಖ್ಯ ಗಂಟೆಗಳನ್ನು ಗಮನದಲ್ಲಿಟ್ಟು ಚಿತ್ರಕತೆ ಹೆಣೆಯಬೇಕಾದ ಕ್ಷೇತ್ರ. ಇಲ್ಲಿನ ಪ್ರತಿ ಡಯಲಾಗಿಗೂ ಎಷ್ಟು ವರ್ಷಗಳು ಕಳೆದರೂ ಪ್ರಸ್ತುತ ಅನಿಸಿಕೊಳ್ಳಬೇಕಾದ ಚರಿಷ್ಮಾ ಇರಬೇಕಾಗುತ್ತದೆ. ಹೀರೋನ (ನಾಯಕ) ಮಾತು, ಕೃತಿ, ವರ್ತನೆಗಳೂ ಅಷ್ಟೇ ಪ್ರೌಢವಾಗಿರಬೇಕಾಗುತ್ತದೆ. ವಿಷಾದ ಏನೆಂದರೆ, ನರೇಂದ್ರ ಮೋದಿಯವರಲ್ಲಿ ಆ ಹೀರೋಯಿಸಂ ಕಾಣಿಸುತ್ತಿಲ್ಲ. ಅವರಲ್ಲೀಗ ಎರಡೂವರೆ ಗಂಟೆಗಳಲ್ಲಿ ಮುಗಿಯುವ ಸಿನಿಮಾದ ಹೀರೋತನವಷ್ಟೇ ಇದೆ.

No comments:

Post a Comment