Thursday 29 September 2016

ದಲಿತ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಹುಟ್ಟಿಕೊಂಡಿತೇ ಗೋಮಾತೆ?

       ಸತ್ತ ಹಸುವಿನ ಕಳೇಬರವನ್ನು ಎತ್ತಲು ನಿರಾಕರಿಸಿದುದಕ್ಕೆ ಗುಜರಾತ್‍ನ ಅಹ್ಮದಾಬಾದ್ ಸಮೀಪದ ಕರ್ಜಾ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ ನಡೆಸಲಾದ ಹಲ್ಲೆಯು ಸಾರುವ ಸಂದೇಶ ಏನು? ಹಸು ಸತ್ತಿರುವುದು ದಲಿತರ ಮನೆಯಲ್ಲಲ್ಲ. ಆ ಹಸುವಿನ ಸಾವಿಗೂ ಈ ದಲಿತ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ. ಆ ಹಸುವನ್ನು ಅವಮಾನಿಸಿದ್ದೊ, ಅದನ್ನು ಕಳ್ಳತನ ಮಾಡಿದ್ದೋ ಅಥವಾ ಆ ಹಸುವಿನ ಮಾಲಕರೊಂದಿಗೆ ಹಸು ಸಂಬಂಧಿ ಜಗಳ ನಡೆಸಿದ್ದೋ ಯಾವುದೂ ಈ ದಲಿತ ಕುಟುಂಬದಿಂದ ನಡೆದಿಲ್ಲ. ಸತ್ತ ಹಸುವಿಗೂ ಅದು ಇರುವ ಪ್ರದೇಶಕ್ಕೂ ಮತ್ತು ಈ ದಲಿತ ಕುಟುಂಬಕ್ಕೂ ಏನೇನೂ ಸಂಬಂಧ ಇಲ್ಲದಿದ್ದರೂ ಗರ್ಭಿಣಿಯ ಹೊಟ್ಟೆಗೆ ತುಳಿಯಲು ಹಾಗೂ ಗಂಟೆಗಳ ಕಾಲ ಆ ಕುಟುಂಬದ ಸದಸ್ಯರನ್ನು ಥಳಿಸಲು ಹಲ್ಲೆಕೋರರನ್ನು ಪ್ರಚೋದಿಸಿದ್ದು ಯಾವುದು? ತಾವು ಮೇಲ್ಜಾತಿಯಾದ ಠಾಕೂರರು ಎಂಬುದೇ ಮತ್ತು ಅವರು ದಲಿತರು ಎಂಬುದೇ? ನಿಜವಾಗಿ, ಗೋವಿನ ವಿಷಯದಲ್ಲಿ ಠಾಕೂರ್ ಸಮುದಾಯಕ್ಕೂ ದಲಿತ ಸಮುದಾಯಕ್ಕೂ ನಡುವೆ ವೈಚಾರಿಕ ಭಿನ್ನತೆಗಳಿವೆ. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂಬ ಧ್ವನಿಯು ಠಾಕೂರ್‍ರಂಥ ಮೇಲ್ಜಾತಿ ಸಮುದಾಯವನ್ನು ಪ್ರತಿನಿಧಿಸುತ್ತದೆ. ಗೋವಿನ ವೈಭವೀಕರಣದಲ್ಲಿ ಈ ಗುಂಪಿನ ಪಾತ್ರ ಬಹಳ ದೊಡ್ಡದು. ಗೋವಿನ ಹೆಸರಲ್ಲಿ ಆಗುತ್ತಿರುವ ಥಳಿತ, ಹಲ್ಲೆ, ಹತ್ಯೆಗಳನ್ನೆಲ್ಲ ‘ಗೋಮಾತೆ’ ಎಂಬ ಏಕೈಕ ಭಾವುಕ ಚೌಕಟ್ಟಿನೊಳಗಿಟ್ಟು ಬಹಿರಂಗವಾಗಿಯೋ ಆಂತರಿಕವಾಗಿಯೋ ಸಮರ್ಥಿಸುತ್ತಾ ಬಂದಿರುವುದು ಇದೇ ಗುಂಪು.ಗೋವಿನ ದೇಹದಲ್ಲಿ ಎಷ್ಟು ಕೋಟಿ ದೇವತೆಗಳಿವೆ, ಅದರ ಹಾಲು, ಸೆಗಣಿ, ಮೂತ್ರ ಮುಂತಾದುವುಗಳು ಹೇಗೆ ಜನೋಪಯೋಗಿ ಎಂಬುದನ್ನೆಲ್ಲ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತಿರುವ ಶ್ರೇಯವೂ ಈ ಗುಂಪಿಗೇ ಸಲ್ಲುತ್ತದೆ. ಒಂದು ರೀತಿಯಲ್ಲಿ, ಈ ಗುಂಪು ಗೋವನ್ನು ಪೂಜಾರ್ಹವಾಗಿ ಬಿಂಬಿಸಿದೆ. ಆರಾಧ್ಯವನ್ನಾಗಿ ಮಾಡಿದೆ. ತಾಯಿಗೆ ಸಮನಾರ್ಥದಲ್ಲಿ ವ್ಯಾಖ್ಯಾನಿಸಿದೆ. ಇದಕ್ಕೆ ಹೋಲಿಸಿದರೆ, ದಲಿತರು ಈ ನಂಬಿಕೆಯ ಸನಿಹಕ್ಕೂ ಬರುವುದಿಲ್ಲ. ಅವರಿಗದು ಆಹಾರ. ಹಾಗೆಯೇ ಸತ್ತ ದನದ ಚರ್ಮ ಸುಲಿಯುವುದು, ಅದರ ಕಳೇಬರವನ್ನು ವಿಲೇವಾರಿ ಮಾಡುವುದೆಲ್ಲ ಅವರ ಪಾಲಿಗೆ ಬರೇ ಒಂದು ಉದ್ಯೋಗ. ನಿಜವಾಗಿ, ಗೋವನ್ನು ತಾಯಿಯೆಂದು ಪರಿಗಣಿಸುವವರಿಗೆ ಸ್ವತಃ ಅದರ ಚರ್ಮ ಸುಲಿಯುವಾಗ ಆಗಬಹುದಾದ ಅನುಭವಕ್ಕೂ ಹಣಕ್ಕಾಗಿ ಚರ್ಮ ಸುಲಿಯುವವರಿಗೆ ಆಗಬಹುದಾದ ಅನುಭವಕ್ಕೂ ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ಆಧ್ಯಾತ್ಮಿಕ ಅಂತರ ಇದೆ. ದಲಿತನೋರ್ವ ಭಾವನೆಗಳಿಲ್ಲದೇ ಅದರ ಚರ್ಮವನ್ನು ಸುಲಿಯಬಲ್ಲ. ಮಣ್ಣು ಮಾಡಬಲ್ಲ. ಆದರೆ ಗೋವನ್ನು ಮಾತೆಯಾಗಿ ಪರಿಗಣಿಸುವವರಿಗೆ ಅದು ಅಷ್ಟು ಸುಲಭ ಅಲ್ಲ. ಅವರು ಚರ್ಮ ಸುಲಿಯುವ ಮತ್ತು ಮಣ್ಣು ಮಾಡುವ ಪ್ರತಿ ಸಂದರ್ಭವನ್ನೂ ಪೂರ್ಣ ಆಧ್ಯಾತ್ಮಿಕ ತೃಪ್ತಿಯೊಂದಿಗೆ ಅನುಭವಿಸಬಲ್ಲರು. ಇಷ್ಟಿದ್ದೂ, ಸಾವಿಗೀಡಾಗುವ ಮಾತೆ(ಗೋವು)ಯನ್ನು ಈ ಗುಂಪು ದಲಿತರ ಕೈಗೆ ಒಪ್ಪಿಸುವುದೇಕೆ? ಅವರ ಕೈಯಲ್ಲಿ ಚರ್ಮ ಸುಲಿಸುವುದೇಕೆ? ಅವರಿಂದಲೇ ಮಣ್ಣು ಮಾಡಿಸುವುದೇಕೆ? ಜೀವಂತ ಇರುವಾಗ ಗೋವಿನ ಮೇಲೆ ತೋರಲಾಗುವ ಗೌರವ ಮತ್ತು ಆದರವು ಸತ್ತ ಕೂಡಲೇ ಅನಾದರವಾಗಿ ಪಲ್ಲಟವಾಗುವುದು ಯಾಕಾಗಿ? ಗೋವನ್ನು ಮಾತೆಯಾಗಿ ಗೌರವಿಸುವವರು ಅದನ್ನು ಅಷ್ಟೇ ಗೌರವದಿಂದ ಮಣ್ಣು ಮಾಡುವುದರಿಂದ ಯಾಕೆ ತಪ್ಪಿಸಿಕೊಳ್ಳುತ್ತಾರೆ?
       ನಿಜವಾಗಿ, ದುರಂಹಕಾರ ಮತ್ತು ಮೇಲರಿಮೆ ಎಂಬೆರಡು ಮನುಷ್ಯ ವಿರೋಧಿ ದುರ್ಗುಣಗಳೇ ಈ ನಿಲುವುಗಳಿಗೆ ಮೂಲ ಕಾರಣ. ಈ ದೇಶದಲ್ಲಿ ಯಾರು ಯಾವ ವೃತ್ತಿಯನ್ನು ಮಾಡಬೇಕು, ಯಾರು ಯಾವ ಆಹಾರವನ್ನು ಸೇವಿಸಬೇಕು, ಯಾವುದು ಸಂಸ್ಕೃತಿ, ಯಾವುದು ಇತಿಹಾಸ, ಯಾವುದು ದೇಶಪ್ರೇಮ.. ಮುಂತಾದುವುಗಳನ್ನೆಲ್ಲ ನಿರ್ಧರಿಸುವುದೂ ಈ ಚಿಂತನೆಗಳೇ. ಈ ದೇಶದಲ್ಲಿ ದಲಿತರ ಪಾಲಿಗೆ ಗೋಮಾಂಸ ಪರಂಪರಾಗತ ಆಹಾರ. ಸತ್ತ ಗೋವಿನ ಚರ್ಮ ಸುಲಿಯುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ಕೂಡ ಅವರು ಪರಂಪರಾಗತ ವೃತ್ತಿಯಂತೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೊಂದು ದೀರ್ಘ ಇತಿಹಾಸವಿದೆ. ಆದರೆ ಕಳೆದ ಶತಮಾನದಿಂದ ಈಚೆಗೆ ಈ ಮೇಲ್ಜಾತಿ ಗುಂಪು ಗೋವನ್ನು ತಮ್ಮ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಯುಧವಾಗಿ ಬಳಸುವ ತಂತ್ರಕ್ಕೆ ಇಳಿಯಿತು. ಈ ತಂತ್ರಕ್ಕೆ ದಲಿತ ಸಮುದಾಯದಲ್ಲಿ ಜಾಗೃತವಾಗುತ್ತಿರುವ ಸ್ವಾಭಿಮಾನ ಪ್ರಜ್ಞೆಯೂ ಒಂದು ಕಾರಣವಾಗಿರಬಹುದು. ಮಂಡಲ್ ವರದಿ ಮತ್ತಿತರ ದಲಿತ ಕೇಂದ್ರಿತ ಸಬಲೀಕರಣ ಚಳವಳಿಗಳಿಗೂ ಪಾತ್ರ ಇರಬಹುದು. ಇಂಥ ಸ್ಥಿತಿಯಲ್ಲಿ, ದಲಿತರ ಈ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಈ ಗುಂಪು ಗೋವನ್ನು ಅಖಾಡಕ್ಕೆ ಇಳಿಸಿತು. ದಲಿತ ಸಮೂಹದಲ್ಲಿ ಬೆಳೆಯುತ್ತಿರುವ ಜಾಗೃತಿಯನ್ನು ಪರಿಗಣಿಸಿದರೆ, ಇಂಥದ್ದೊಂದು ನಿರ್ಧಾರ ಈ ಗುಂಪಿನ ಪಾಲಿಗೆ ಅನಿವಾರ್ಯವಾಯಿತು ಎಂದೂ ಹೇಳಬಹುದು. ತಲೆತಲಾಂತರದಿಂದ ದಲಿತ ಸಮುದಾಯವನ್ನು ರಸ್ತೆಯಿಂದ, ದೇವಾಲಯದಿಂದ, ಸಾರ್ವಜನಿಕ ಬಾವಿಯಿಂದ ಮತ್ತು ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬಹುದಾದ ಸರ್ವ ಸಂದರ್ಭಗಳಿಂದಲೂ ತಡೆದ ಈ ಗುಂಪು ಕ್ರಮೇಣ ತಮ್ಮ ಈ ಕ್ರೌರ್ಯಕ್ಕೆ ಪ್ರಬಲ ಪ್ರತಿರೋಧ ಎದುರಾಗತೊಡಗಿದಾಗ ಪ್ರತಿಯಾಗಿ ಆವಿಷ್ಕರಿಸಿಕೊಂಡ ಆಯುಧವೇ ಗೋವು. ವಿಶೇಷ ಏನೆಂದರೆ, ಗೋವನ್ನು ಮಾತೆಯಾಗಿ ಪ್ರತಿಷ್ಠಾಪಿಸುವ ಮೂಲಕ ಆ ಗುಂಪು ದಲಿತರ ಮೇಲಷ್ಟೇ ಅಧಿಕಾರ ಸ್ಥಾಪಿಸುವ ಸಾಮರ್ಥ್ಯವನ್ನು ಪಡಕೊಂಡದ್ದಲ್ಲ, ಗೋಮಾಂಸವನ್ನು ಸೇವಿಸುವ ಸಮಾಜದ ಬಡವರು, ದಮನಿತರು ಮತ್ತು ಇತರ ಧರ್ಮೀಯರ ಮೇಲೂ ದಮನಕಾರಿ ನೀತಿಯನ್ನು ಪ್ರಯೋಗಿಸುವ ಪರವಾನಿಗೆಯನ್ನು ಪಡಕೊಂಡಿತು. ಒಂದು ವೇಳೆ, ಗೋವಿನ ಮೇಲೆ ಅವರಿಗೆ ಆದರ ಇರುವುದೇ ಆಗಿರುತ್ತಿದ್ದರೆ, ಕನಿಷ್ಠ ಅದನ್ನು ಚರ್ಮ ಸುಲಿಯದೆಯೇ ಸ್ವತಃ ಮಣ್ಣು ಮಾಡುವುದನ್ನು ಪುಣ್ಯ ಕಾರ್ಯ ಎಂದು ಪರಿಗಣಿಸಬೇಕಿತ್ತು. ಎಲ್ಲೇ ಗೋವು ಸತ್ತರೂ ಅಲ್ಲಿಗೆ ಧಾವಿಸಿ ಬಂದು ಅದರ ಮಣ್ಣು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಈ ಗುಂಪಿಗೆ ತಮ್ಮ ದಮನ ನೀತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಒಂದು ಪ್ರಾಣಿಯಾಗಿ ಗೋವು ಬೇಕಿತ್ತೇ ಹೊರತು ‘ಮಾತೆ’ಯಾಗಿ ಅಲ್ಲ. ಆದ್ದರಿಂದಲೇ, ಅದರ ಚರ್ಮ ಸುಲಿಯುವುದನ್ನು ಅವರು ವಿರೋಧಿಸಲಿಲ್ಲ. ಸ್ವತಃ ಮಣ್ಣು ಮಾಡುವುದಕ್ಕೂ ಮುಂದಾಗಲಿಲ್ಲ. ಇವೆರಡನ್ನೂ ಪರಂಪರಾಗತ ದಲಿತ ವೃತ್ತಿಗಳಾಗಿಯೇ ಇರಗೊಟ್ಟರು. ಆದರೆ ದಲಿತರ ಮೆನುವಿನಲ್ಲಿ ಗೋಮಾಂಸ ಇರಬಾರದು ಎಂದು ಆದೇಶಿಸಿದರು. ಈ ಹಿಂದೆ ದಲಿತರನ್ನು ಹೇಗೆ ಪರಾವಲಂಬಿಗಳಾಗಿ ನಡೆಸಿಕೊಂಡು ಬರಲಾಗಿತ್ತೋ ಅದರದ್ದೇ ಮುಂದುವರಿಕೆ ಇದು. ತಾವು ಏನನ್ನು ತಿನ್ನಬಾರದೆಂದು ಆದೇಶಿಸುತ್ತೇವೋ ಅದನ್ನು ಅನುಸರಿಸಬೇಕು. ಯಾವ ವೃತ್ತಿಯಲ್ಲಿ ಮುಂದುವರಿಯಬೇಕೆಂದು ಹೇಳುತ್ತೇವೋ ಅದಕ್ಕೆ ವಿರುದ್ಧ ನಡೆಯಬಾರದು. ಶತಮಾನಗಳ ಹಿಂದೆಯೂ ಮತ್ತು ಈಗಲೂ ದಲಿತರಿಗೆ ಸ್ವತಃ ತೀರ್ಮಾನಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಧಾರ್ಷ್ಟ್ಯ ಇದು. ಗುಜರಾತ್‍ನ ಕರ್ಜಾ ಗ್ರಾಮದ ಘಟನೆ ನೀಡುತ್ತಿರುವ ಸಂದೇಶವೂ ಇದುವೇ. ಉನಾ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತು ಅದನ್ನು ಕೇಂದ್ರೀಕರಿಸಿ ಚಳವಳಿಗಳು ಹುಟ್ಟಿಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಅದೇ ಉನಾ ಇರುವ ಗುಜರಾತ್‍ನಲ್ಲೇ ಇಂಥ ಘಟನೆ ನಡೆದಿರುವುದು ಆ ಮನಃಸ್ಥಿತಿಯು ಎಷ್ಟು ಕ್ರೂರ, ಎಷ್ಟು ನಿರ್ಭಯ ಮತ್ತು ಎಷ್ಟು ಅಪಾಯಕಾರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸದ್ಯದ ತುರ್ತು ಏನೆಂದರೆ, ಗೋವನ್ನು ಅವರ ಒತ್ತೆಯಿಂದ ಬಿಡಿಸಿಕೊಂಡು ಸಮಾಜಕ್ಕೆ ಅರ್ಪಿಸುವುದು. ಗೋವಿನ ಪೇಟೆಂಟನ್ನು ಯಾವೊಬ್ಬ ಖಾಸಗಿ ವ್ಯಕ್ತಿಗೂ ಗುಂಪಿಗೂ ಸಂಘಟನೆಗೂ ನೀಡಲಾಗಿಲ್ಲ ಎಂಬುದಾಗಿ ಸಮಾಜಕ್ಕೆ ಸ್ಪಷ್ಟಪಡಿಸುವುದು. ಅದಕ್ಕಾಗಿ ಪರಿಣಾಮಕಾರಿ ಚಳವಳಿ, ರಾಲಿ, ಪ್ರದರ್ಶನಗಳನ್ನು ಏರ್ಪಡಿಸುವುದು. ಅಂದಹಾಗೆ,
        ಗೋವು ಸ್ವತಂತ್ರಗೊಳ್ಳುವುದೆಂದರೆ, ದಲಿತರೂ ಸ್ವತಂತ್ರಗೊಂಡಂತೆ. ಉನಾ ಮತ್ತು ಕರ್ಜಾಗಳು ಸಾರುತ್ತಿರುವುದೂ ಇದನ್ನೇ.

No comments:

Post a Comment