Friday 25 August 2017

ಕಾವ್ಯ: ಪ್ರತಿಭಟನಾಕಾರರ ಗುರಿ ಯಾರು?

     ಸಾವು ಆಘಾತಕಾರಿ. ಅದರಲ್ಲೂ ಹದಿಹರೆಯದ ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪುವುದು ಈ ಆಘಾತದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆ ಇಂಥದ್ದೊಂದು ಆಘಾತದಲ್ಲಿದೆ. ಕಾವ್ಯ ಪೂಜಾರಿ ಎಂಬ 10ನೇ ತರಗತಿಯ ವಿದ್ಯಾರ್ಥಿನಿ ಈ ಆಘಾತದ ಕೇಂದ್ರ ಬಿಂದು. ಪ್ರತಿಷ್ಠಿತ ಆಳ್ವಾಸ್ ಶಿಕ್ಪಣ ಸಂಸ್ಥೆಯ ಹಾಸ್ಟೆಲ್‍ನಲ್ಲಿ ಈ ಮಗು ಶವವಾಗಿ ದೊರೆತಿದೆ. ಇದಕ್ಕಿಂತ ಒಂದು ದಿನ ಮೊದಲು ಈ ಮಗು ತನ್ನ ತಾಯಿಯೊಂದಿಗೆ ಆಡಿರುವ ಮಾತುಗಳು, ಆ ಮಾತುಗಳಲ್ಲಿದ್ದ ಲವಲವಿಕೆ, ನೆಮ್ಮದಿ ಭಾವವನ್ನು ಪರಿಗಣಿಸುವಾಗ ಮರುದಿನ ಶವವಾಗುವ ಮಗು ಇದು ಎಂದು ನಂಬುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ದೂರವಾಣಿಯಲ್ಲಿ ಮಗು ಆಡಿರುವ ಮಾತುಗಳು ಸಹಜವಾಗಿತ್ತು. ಓರ್ವ ತಾಯಿ ಮತ್ತು ಮಗು ಸಹಜ ಸನ್ನಿವೇಶಗಳಲ್ಲಿ ಹೇಗೆ ಮಾತಾಡಬಹುದೋ ಹಾಗೆ ಅವರಿಬ್ಬರೂ ಮಾತಾಡಿಕೊಂಡಿದ್ದರು. ಆದ್ದರಿಂದಲೇ, ಈ ಮಾತುಕತೆಯ ಮರುದಿನ ಆ ಮಗು ಶವವಾಗಿರುವುದನ್ನು ಸಹಜ ಆತ್ಮಹತ್ಯೆ ಎಂದು ಒಪ್ಪಲು ಆ ಹೆತ್ತವರು ಮಾತ್ರವಲ್ಲ, ಸಾಮಾನ್ಯ ಮಂದಿಯೂ ಸಿದ್ಧವಾಗುತ್ತಿಲ್ಲ. ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಮೋಹನ್ ಆಳ್ವರನ್ನು ಬೆಂಬಲಿಸಿ ಒಂದಕ್ಕಿಂತ ಹೆಚ್ಚು ಸಭೆಗಳಾಗಿವೆ. ಪತ್ರಿಕಾಗೋಷ್ಠಿಗಳು ನಡೆದಿವೆ. ಇಡೀ ಪ್ರಕರಣ ತಿರುವು ಪಡಕೊಳ್ಳುವುದೇ ಇಲ್ಲಿ. ಎರಡ್ಮೂರು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಯುವತಿಯ ಹತ್ಯೆ ನಡೆದಿತ್ತು. ಅದೂ ಅನೇಕಾರು ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿತ್ತು. ಪ್ರತಿಭಟನೆಗಳೂ ನಡೆದುವು. ಅದೇ ವೇಳೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಪರವೂ ಸಭೆಗಳು ನಡೆದುವು. ಸದ್ಯ ಸೌಜನ್ಯ ಪ್ರಕರಣ ಬಹುತೇಕ ಮುಚ್ಚಿ ಹೋದ ಸ್ಥಿತಿಯಲ್ಲಿದೆ. ಸೌಜನ್ಯಳ ಹೆತ್ತವರೇ ನ್ಯಾಯ ನಿರಾಕರಣೆಯ ಭಾವದಲ್ಲಿz್ದÁರೆ. ಈ ಮಗುವಿನ ಸ್ಥಿತಿಯೂ ಇದುವೇ ಆಗಬಹುದೇ?
     ಅಷ್ಟಕ್ಕೂ, ಕಾವ್ಯ ಮತ್ತು ಸೌಜನ್ಯ ಪ್ರಕರಣಗಳಲ್ಲಿ ಪರ ಮತ್ತು ವಿರುದ್ಧ ಸಭೆಗಳೇಕೆ ನಡೆದುವು? ಇವು ಈ ಪ್ರಕರಣಗಳ ಮೇಲೆ ಬೀರಿದ ಮತ್ತು ಬೀರಬಹುದಾದ ಪರಿಣಾಮಗಳೇನು? ಈ ಮೊದಲು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ಮಗುವಿನ ಸಾವು ಸಂಭವಿಸಿತ್ತು. ಆ ಇಡೀ ಪ್ರಕರಣವನ್ನು ಬಿಜೆಪಿ ನಿಭಾಯಿಸಿದ್ದು ಅತ್ಯಂತ ಉನ್ಮಾದದ ರೀತಿಯಲ್ಲಿ. ಇಡೀ ಶಿವಮೊಗ್ಗವನ್ನೇ ಅದು ಭೀತಿಯಲ್ಲಿ ಕೆಡವಿತು. ತಪ್ಪಿತಸ್ಥರಾರು ಎಂಬುದನ್ನು ಅದು ತನಿಖೆಗೆ ಮೊದಲೇ ಪತ್ತೆಹಚ್ಚಿ, ತೀರ್ಥಹಳ್ಳಿಗೆ ಬೆಂಕಿ ಹಚ್ಚುವ ಶ್ರಮ ನಡೆಸಿತು. ಕರ್ಫ್ಯೂ, ಲಾಠಿ ಏಟು ಎಲ್ಲವೂ ನಡೆದುವು. ಆದರೆ, ಸೌಜನ್ಯ ಮತ್ತು ಕಾವ್ಯ ಪೂಜಾರಿ ಪ್ರಕರಣದಲ್ಲಿ ಇದೇ ಬಿಜೆಪಿ ಯಾವ ಉತ್ಸಾಹವನ್ನೂ ತೋರಿಸುತ್ತಿಲ್ಲ. ಅದರ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಲೂ ಇಲ್ಲ. ಇದಕ್ಕೆ ಕಾರಣಗಳೇನು? ಅದರ ಪ್ರತಿಭಟನೆಗಳೇಕೆ ಸೆಲೆಕ್ಟಿವ್ ಆಗುತ್ತಿದೆ?
      ಸೌಜನ್ಯ ಮತ್ತು ಕಾವ್ಯ ಪ್ರಕರಣವು ನಾಗರಿಕರ ಪ್ರಜ್ಞೆಯನ್ನು ತಿವಿದ ಎರಡು ಘಟನೆಗಳಾಗಿಯಷ್ಟೇ ನಾವು ಗುರುತಿಸಬೇಕಾದುದಲ್ಲ. ಬಿಜೆಪಿಯ ಹಿಪಾಕ್ರಸಿಯನ್ನು ಬಹಿರಂಗಕ್ಕೆ ತಂದ ಪ್ರಕರಣವಾಗಿಯೂ ನಾವು ಗುರುತಿಸಬೇಕಾಗಿದೆ. ಅದೇವೇಳೆ, ಯಾವ ರೀತಿಯ ಪ್ರತಿಭಟನೆಗಳು ನ್ಯಾಯವನ್ನು ತಂದುಕೊಡಬಹುದು ಎಂಬ ಅವಲೋಕನಕ್ಕೆ ಕಾರಣವಾಗಬೇಕಾದ ಪ್ರಕರಣವಾಗಿಯೂ ನಾವು ಎತ್ತಿಕೊಳ್ಳಬೇಕಾಗಿದೆ. ಸೌಜನ್ಯ ಮತ್ತು ಕಾವ್ಯರಿಗಾಗಿ ನಡೆದ ಪ್ರತಿಭಟನೆಗಳ ಕೇಂದ್ರ ಬಿಂದು ಅವರಿಬ್ಬರು ಆಗುವ ಬದಲು ಉದ್ದೇಶಪೂರ್ವಕವೋ ಅನುದ್ದೇಶಪೂರ್ವಕವೋ ವೀರೇಂದ್ರ ಹೆಗಡೆ ಮತ್ತು ಮೋಹನ್ ಆಳ್ವ ಆದದ್ದನ್ನೂ ನಾವಿಲ್ಲಿ ಗುರುತಿಸಬೇಕು. ಆಳ್ವಾಸ್ ಶಿಕ್ಪಣ ಸಂಸ್ಥೆಯ 26 ಸಾವಿರ ವಿದ್ಯಾರ್ಥಿಗಳಲ್ಲಿ ಕಾವ್ಯ ಒಬ್ಬಳು. ಈ ಬೃಹತ್ ಶಿಕ್ಪಣ ಸಂಸ್ಥೆಗೆ ಮೋಹನ್ ಆಳ್ವ ಹೊಣೆಗಾರರು ಎಂಬ ಕಾರಣಕ್ಕಾಗಿ ಕಾವ್ಯಳ ಸಾವಿಗೆ ಅವರು ಉತ್ತರದಾಯಿಯಾಗುತ್ತಾರೆಯೇ ಹೊರತು ಇನ್ನಾವ ಕಾರಣಕ್ಕಾಗಿಯೂ ಅಲ್ಲ. ಇಷ್ಟು ಬೃಹತ್ ಸಂಖ್ಯೆಯ ವಿದ್ಯಾರ್ಥಿ ಸಮೂಹದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿಕೊಂಡು ಹೋಗುವುದಕ್ಕೆ ಅವರಿಂದ ಸಾಧ್ಯವೂ ಇಲ್ಲ. ಅದು ಪ್ರಾಯೋಗಿಕವೂ ಅಲ್ಲ. ಇದು ಕಾವ್ಯಳ ಸಾವಿಗೆ ನ್ಯಾಯವನ್ನು ಕೋರಿ ಪ್ರತಿಭಟಿಸುವ ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಆದರೆ ಕಾವ್ಯಳ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಮತ್ತು ಪ್ರತಿಭಟನಾ ನಿರತರ ಭಾಷಣಗಳು ಈ ವಾಸ್ತವವನ್ನು ಕಡೆಗಣಿಸುವ ರೀತಿಯಲ್ಲಿತ್ತು ಮತ್ತು ಇವೆ ಎಂಬುದು ವಿಷಾದಕರ. ಈ ಹಿಂದೆ ಸೌಜನ್ಯ ಪ್ರಕರಣದಲ್ಲಿಯೂ ಇವೇ ತಪ್ಪುಗಳಾಗಿದ್ದುವು. ಪ್ರತಿಭಟನಾಕಾರರ ಗುರಿ ನ್ಯಾಯ ಆಗಿರಬೇಕೇ ಹೊರತು ಮೋಹನ್ ಆಳ್ವ ಅಥವಾ ವೀರೇಂದ್ರ ಹೆಗ್ಗಡೆ ಆಗಿರಬಾರದು. ಯಾವಾಗ ಈ ಗುರಿ ನಿರ್ಣಯದಲ್ಲಿ ಪ್ರತಿಭಟನಾಕಾರರು ಎಡವಿದರೋ ಕಾವ್ಯ ಮತ್ತು ಸೌಜನ್ಯ ಮರೆಗೆ ಸರಿದು ವೀರೇಂದ್ರ ಹೆಗಡೆ ಮತ್ತು ಮೋಹನ್ ಆಳ್ವರೇ ಇಡೀ ಪ್ರತಿಭಟನೆಯ ಕೇಂದ್ರ ಬಿಂದುವಾದರು. ಇದು ಅನಪೇಕ್ಷಿತ. ತಪ್ಪಿತಸ್ಥರು ಯಾರು ಅನ್ನುವುದು ಪತ್ತೆಯಾಗುವ ಮೊದಲೇ ಇಂತಿಂಥವರೇ ತಪ್ಪಿತಸ್ಥರು ಎಂದು ಹೇಳುವುದು ಅನೇಕ ಬಾರಿ ನಿಜವಾದ ತಪ್ಪಿತಸ್ಥರು ತಪ್ಪಿಸಿಕೊಳ್ಳುವುದಕ್ಕಷ್ಟೇ ನೆರವಾಗುತ್ತದೆ. ಸೌಜನ್ಯ ಪ್ರಕರಣವು ಅಂಥದ್ದೊಂದು ಸನ್ನಿವೇಶಕ್ಕೆ ಕಾರಣವಾಯಿತೋ ಎಂಬ ಅನುಮಾನ ಹುಟ್ಟಿಕೊಳ್ಳುವುದೂ ಈ ಕಾರಣದಿಂದಲೇ. ಕಾವ್ಯಳ ಸಾವು ಸಹಜವೋ ಅಸಹಜವೋ ಅದನ್ನು ನಿರ್ಣಯಿಸಬೇಕಾದದ್ದು ತನಿಖಾ ಸಂಸ್ಥೆಗಳು. ಸಾರ್ವಜನಿಕರಾಗಿ ನಮ್ಮ ಜವಾಬ್ದಾರಿ ಏನೆಂದರೆ, ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರುವುದು. ಸೂಕ್ತ ರೀತಿಯಲ್ಲಿ ತನಿಖೆಯಾಗುವಂತೆ ನೋಡಿಕೊಳ್ಳುವುದು. ಇದರ ಹೊರತಾಗಿ ನಮಗೆ ನಾವೇ ನ್ಯಾಯಾಧೀಶರಾದರೆ ಅದು ಇಡೀ ಪ್ರಕರಣಕ್ಕೆ ಬೇರೆಯದೇ ಆದ ತಿರುವನ್ನು ಕೊಡಬಹುದು. ಅದರಿಂದಾಗಿ ಚರ್ಚಾ ವೇದಿಕೆಯಿಂದ ಕಾವ್ಯ ಮರೆಯಾಗಿ ಅಲ್ಲಿ ಇನ್ನಾರೋ ವಿರಾಜಮಾನರಾಗಬಹುದು. ವೈಯಕ್ತಿಕ ದ್ವೇಷಗಳನ್ನು ತೀರಿಸುವ ವೇದಿಕೆಯಾಗಿ ಪ್ರತಿಭಟನಾ ಸಭೆಗಳು ಮಾರ್ಪಾಟು ಹೊಂದಬಹುದು. ಸೌಜನ್ಯ ಬಹುತೇಕ ಈ ಬಗೆಯ ಚರ್ಚೆಗಳಲ್ಲಿ ಕಳೆದು ಹೋಗಿದ್ದಾಳೆ. ಪ್ರತಿಭಟನೆ ಮತ್ತು ಮಾಧ್ಯಮ ಚರ್ಚೆಗಳ ಕೇಂದ್ರ ಬಿಂದು ಆಕೆ ಆಗುವ ಬದಲು ಇನ್ನಾರೋ ಆಗಿ ಇಡೀ ಸನ್ನಿವೇಶವೇ ಗೊಂದಲಪೂರ್ಣವಾದದ್ದು ನಮಗೆ ಗೊತ್ತಿದೆ. ಕಾವ್ಯ ಹಾಗಾಗಬಾರದು. ಕಾವ್ಯ ಯಾವ ಶಿಕ್ಪಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಳು ಮತ್ತು ಆ ಶಿಕ್ಪಣ ಸಂಸ್ಥೆಯ ಮುಖ್ಯಸ್ಥರು ಯಾರು ಅನ್ನುವುದು ಮುಖ್ಯವಲ್ಲ. ಯಾವಾಗ ಇದು ಪ್ರಾಮುಖ್ಯತೆ ಪಡೆಯುತ್ತದೋ ಆವಾಗ ಕಾವ್ಯ ಬದಿಗೆ ಸರಿಯುತ್ತಾಳೆ. ನಮಗೆ ಕಾವ್ಯಳ ಸಾವಿಗೆ ಕಾರಣವೇನು ಅನ್ನುವುದು ಮುಖ್ಯವಾಗಬೇಕು. ಪ್ರತಿಭಟನಾ ಸಭೆಗಳು ಈ ಮುಖ್ಯ ವಿಷಯದ ಮೇಲೆಯೇ ಗಮನ ಹರಿಸಬೇಕು. ಬಿಜೆಪಿಯ ಮಟ್ಟಿಗೆ ಕಾವ್ಯ ಮುಖ್ಯ ಅಲ್ಲ. ಆಕೆ ಯಾವ ಶಿಕ್ಪಣ ಸಂಸ್ಥೆಯಲ್ಲಿ ಕಲಿಯುತ್ತಿದ್ದಾಳೆ ಅನ್ನುವುದೇ ಮುಖ್ಯ. ಸೌಜನ್ಯ ಪ್ರಕರಣದಲ್ಲೂ ಅದು ಈ ನೀತಿಯನ್ನೇ ಅನುಸರಿಸಿತ್ತು. ಕಾವ್ಯ ಪರ ಪ್ರತಿಭಟನೆ ಹಾಗಾಗದಿರಲಿ. ಕಾವ್ಯಳೇ ಮುಖ್ಯವಾಗಲಿ.

No comments:

Post a Comment