ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯು ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ.
1. ತದ್ವಿರುದ್ಧ ವಿಚಾರಧಾರೆಯುಳ್ಳ ಪಕ್ಷಗಳು ಅಧಿಕಾರಕ್ಕಾಗಿ ಜೊತೆಗೂಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?
2. ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಸರಕಾರದ ಆಯುಷ್ಯ ಎಷ್ಟು ಸಮಯ?
ಅಜಿತ್ಮ ಪವಾರ್ ರನ್ನು ಸೆಳೆದು ಸರಕಾರ ರಚಿಸಿದ ಬಿಜೆಪಿ ನಡೆ ಎಷ್ಟು ನೈತಿಕ?
ಹಾರಾಷ್ಟ್ರದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ವಿಚಿತ್ರ ಮತ್ತು ನಂಬಲಸಾಧ್ಯವಾದದ್ದು. ಮಹಾರಾಷ್ಟ್ರ ವಿಧಾನಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯು ಎರಡು ಮೈತ್ರಿಕೂಟಗಳ ನಡುವಿನ ಹೋರಾಟವಾಗಿತ್ತು. ಬಿಜೆಪಿ ಮತ್ತು ಶಿವಸೇನೆಯದ್ದು ಒಂದು ಕೂಟವಾದರೆ ಕಾಂಗ್ರೆಸ್ ಮತ್ತು ಎನ್ಸಿಪಿಯದ್ದು ಇನ್ನೊಂದು ಕೂಟ. ನಿಜವಾಗಿ, ಇವೆರಡೂ ಬರೇ ಮೈತ್ರಿಕೂಟಗಳಷ್ಟೇ ಅಲ್ಲ, ಎರಡು ವಿಚಾರಧಾರೆ ಮತ್ತು ಸಿದ್ಧಾಂತದ ಪ್ರತಿನಿಧಿಗಳಾಗಿಯೂ ಗುರುತಿಸಿಕೊಂಡಿದ್ದುವು. ಬಿಜೆಪಿ ಮತ್ತು ಶಿವಸೇನೆಯು ಹಿಂದುತ್ವ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುವ ಮೈತ್ರಿಕೂಟವಾದರೆ, ಕಾಂಗ್ರೆಸ್-ಎನ್ಸಿಪಿಗಳು ಸೆಕ್ಯುಲರ್ ವಿಚಾರಧಾರೆಯನ್ನು ನೆಚ್ಚಿಕೊಂಡ ಮೈತ್ರಿಕೂಟ. ಈ ನಾಲ್ಕೂ ಪಕ್ಷಗಳು ಮೈತ್ರಿಕೂಟವನ್ನು ರಚಿಸಿಕೊಂಡೇ ಚುನಾವಣೆಯನ್ನು ಎದುರಿಸಿದ್ದುವು. ಮತದಾರರು ಶಿವಸೇನಾ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಿದರು. ಸೆಕ್ಯುಲರ್ ಮೈತ್ರಿಕೂಟವನ್ನು ತಿರಸ್ಕರಿಸಿದರು. ಇದು ಅತ್ಯಂತ ಸ್ಪಷ್ಟ. ಆದರೆ,
ಆ ಬಳಿಕ ಮಹಾರಾಷ್ಟ್ರದಲ್ಲಿ ನಡೆದಿರುವುದು ದಂಗುಬಡಿಸುವ ರಾಜಕೀಯ ಬೆಳವಣಿಗೆ. ಶಿವಸೇನೆಯು ತನ್ನ ಕಟು ಹಿಂದುತ್ವ ಸಿದ್ಧಾಂತವನ್ನು ತೊರೆಯದೆಯೇ ಮತ್ತು ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವ ಸೂಚನೆಯನ್ನು ನೀಡದೆಯೇ ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಜೊತೆಸೇರಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸಿತು. ಮಾತುಕತೆ ನಡೆಸಿತು ಮತ್ತು ಬಹುತೇಕ ಅದು ಕೈಗೂಡುವ ಸಾಧ್ಯತೆಯೂ ಇದೆ. ಹಾಗಂತ, ಬಿಜೆಪಿಯೊಂದಿಗಿನ ಸಂಬಂಧವನ್ನು ಶಿವಸೇನೆ ಕಡಿದುಕೊಂಡಿರುವುದಕ್ಕೆ ಸಿದ್ಧಾಂತ ಕಾರಣ ಅಲ್ಲ. ಬಿಜೆಪಿಗಿಂತಲೂ ಕಟುವಾದ ಹಿಂದುತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷ ಶಿವಸೇನೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದುದು ತನ್ನ ಕಾರ್ಯಕರ್ತರು ಎಂದು ಅದು ಹೆಮ್ಮೆಯಿಂದ ಹೇಳುತ್ತದೆ. ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರ ಅತ್ಯಂತ ಘಾತಕ ರೂಪದ್ದು ಅನ್ನುವುದನ್ನು ಶ್ರೀಕೃಷ್ಣ ಆಯೋಗ ಸ್ಪಷ್ಟಪಡಿಸಿದೆ. ಬಾಳಾಠಾಕ್ರೆಯನ್ನು ಅದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಮರಾಠಿ ಅಸ್ಮಿತೆಯನ್ನು ಎತ್ತಿ ಹಿಡಿದು ಮರಾಠೇತರರನ್ನು ಹೊರದಬ್ಬುವ ಅಭಿಯಾನ ಕೈಗೊಂಡ ಕರಾಳ ಇತಿಹಾಸವೂ ಶಿವಸೇನೆಗಿದೆ. ಹಾಗಂತ,
ಶಿವಸೇನೆಯ ಈ ರಾಜಕೀಯ ಸಿದ್ಧಾಂತ ಮತ್ತು ವಿಚಾರಧಾರೆಯ ಕುರಿತು ಬಿಜೆಪಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಎನ್ಸಿಪಿ ಮತ್ತು ಕಾಂಗ್ರೆಸ್ ಈ ಸಿದ್ಧಾಂತದ ಪ್ರಬಲ ವಿರೋಧಿಗಳು. ಆದ್ದರಿಂದಲೇ ಕಾಂಗ್ರೆಸ್-ಎನ್ಸಿಪಿ ಜೊತೆಸೇರಿ ಶಿವಸೇನೆಯು ರಚಿಸುವ ಸರಕಾರ ಎಷ್ಟು ನೈತಿಕ ಅನ್ನುವ ಪ್ರಶ್ನೆ ಮುಖ್ಯವಾಗುವುದು. ಸರಕಾರ ರಚಿಸದಂತೆ ಬಿಜೆಪಿಯನ್ನು ತಡೆಯುವ ಏಕೈಕ ಉದ್ದೇಶದಿಂದ ರಚಿತವಾಗಿರುವ ಈ ಮೈತ್ರಿಕೂಟ ಎಲ್ಲಿಯವರೆಗೆ ಸುರಕ್ಷಿತ? ಎನ್ಸಿಪಿ ಮತ್ತು ಕಾಂಗ್ರೆಸ್ ಎರಡೂ ಕೂಡ ಬಿಜೆಪಿ-ಶಿವಸೇನಾ ಸಿದ್ಧಾಂತವನ್ನು ವಿರೋಧಿಸುತ್ತಲೇ ರಾಜಕೀಯ ಅಖಾಡದಲ್ಲಿವೆ. ಹೀಗಿರುವಾಗ, ಈ ಮೈತ್ರಿಯಿಂದ ನಾಗರಿಕರ ಮೇಲೆ ಆಗುವ ಪರಿಣಾಮ ಏನು? ಈ ಪಕ್ಷಗಳ ಕಾರ್ಯಕರ್ತರು ಈ ಬೆಳವಣಿಗೆಯನ್ನು ಹೇಗೆ ಜೀರ್ಣಿಸಿಕೊಳ್ಳಬಹುದು? ‘ಸಮಾನ ಕನಿಷ್ಠ ಕಾರ್ಯಕ್ರಮವನ್ನು ರಚಿಸಿ ತಾವು ಅಧಿಕಾರ ಚಲಾಯಿಸುತ್ತೇವೆ’ ಎಂದು ಈ ಮೈತ್ರಿಕೂಟ ಹೇಳಿಕೊಂಡಿದ್ದರೂ ಅದು ಅಷ್ಟು ಸುಲಭ ಅಲ್ಲ. ಸಮಾನ ಕನಿಷ್ಠ ಕಾರ್ಯಕ್ರಮವಿದ್ದೂ ಸಮಾನ ವಿಚಾರಧಾರೆಯ ಪಕ್ಷಗಳೇ ಪರಸ್ಪರ ಕಚ್ಚಾಡಿಕೊಂಡು ಅಧಿಕಾರದಂದ ನಿರ್ಗಮಿಸಿರುವಾಗ ಈ ಅಸಮಾನ ವಿಚಾರಧಾರೆಯ ಕೂಡಾವಳಿಗೆ ದೀರ್ಘ ಆಯುಷ್ಯವನ್ನು ನಿರೀಕ್ಷಿಸುವುದು ಹೇಗೆ? ಈ ಮೈತ್ರಿಕೂಟವನ್ನು ಅಧಿಕಾರದಿಂದ ಹೊರದಬ್ಬುವುದಕ್ಕೆ ಬಿಜೆಪಿ ಸಹಜವಾಗಿಯೇ ತಂತ್ರಗಳನ್ನು ಹೆಣೆಯಬಹುದು. ಹಿಂದುತ್ವಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಶಿವಸೇನೆಯನ್ನು ಸೈದ್ಧಾಂತಿಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಳನ್ನು ಹೆಣೆಯಬಹುದು. ಆಗೆಲ್ಲ ಸಮಾನ ಕನಿಷ್ಠ ಕಾರ್ಯಕ್ರಮಕ್ಕೆ ಅಂಟಿಕೂರಲು ಶಿವಸೇನೆ ಪ್ರಯತ್ನಿಸಿದರೆ ಕಾರ್ಯಕರ್ತರನ್ನು ಕಳಕೊಳ್ಳಬೇಕಾಗುತ್ತದೆ. ಆಗ ಶಿವಸೇನೆಯನ್ನು ಅಧಿಕಾರ ದಾಹಿಯಂತೆ ಮತ್ತು ಹಿಂದುತ್ವ ವಿರೋಧಿಯಂತೆ ಬಿಂಬಿಸಲು ಬಿಜೆಪಿಗೆ ಸುಲಭವಾಗುತ್ತದೆ. ಇದೇವೇಳೆ, ಕಾಂಗ್ರೆಸ್-ಎನ್ಸಿಪಿಯನ್ನು ಮುಜುಗರಕ್ಕೆ ತಳ್ಳುವುದೂ ಕಷ್ಟ ಅಲ್ಲ. ಈ ಎರಡೂ ಪಕ್ಷಗಳ ಸೆಕ್ಯುಲರ್ ನೀತಿಗೆ ಸವಾಲಾಗಬಲ್ಲ ಬೆಳವಣಿಗೆಯನ್ನು ಮಹಾರಾಷ್ಟ್ರದಲ್ಲಿ ನಿರ್ಮಿಸುವುದು ಬಿಜೆಪಿಗೆ ಸುಲಭ. ಅತ್ತ ಶಿವಸೇನೆಯನ್ನು ಒತ್ತಡಕ್ಕೆ ಸಿಲುಕಿಸಿದಂತೆಯೇ ಇತ್ತ ಎನ್ಸಿಪಿ-ಕಾಂಗ್ರೆಸನ್ನು ಒತ್ತಡಕ್ಕೆ ಸಿಲುಕಿಸಿ ಅವುಗಳಿಗೆ ಇದ್ದ ಬದ್ಧ ಸಾರ್ವಜನಿಕ ಬೆಂಬಲವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡಬಹುದು. ಆದ್ದರಿಂದಲೇ,
ಶಿವಸೇನೆ, ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸುವುದರಿಂದ ಬಿಜೆಪಿಗೆ ಆರಂಭಿಕ ಹಿನ್ನಡೆ ಉಂಟಾಗಬಹುದೇ ಹೊರತು ಶಾಶ್ವತ ಅಲ್ಲ. ಅದು ಶಿವಸೇನೆಯನ್ನು ವಚನಭ್ರಷ್ಟವಾಗಿ ಮತ್ತು ಸಿದ್ಧಾಂತಕ್ಕೆ ಇರಿದ ಪಕ್ಷವಾಗಿ ಬಿಂಬಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಜೆಡಿಎಸ್ನೊಂದಿಗೆ ಸೇರಿ ಸರಕಾರ ರಚಿಸಿದ ಬಳಿಕ ಹೇಗೆ ಆ ಇಡೀ ಪ್ರಕ್ರಿಯೆಯನ್ನು ತನ್ನ ಪರವಾಗಿ ಬಿಜೆಪಿ ತಿರುಗಿಸಿಕೊಂಡಿತೋ ಅಂಥದ್ದೇ ಒಂದು ಸ್ಥಿತಿ ಮಹಾರಾಷ್ಟ್ರದಲ್ಲೂ ನಿರ್ಮಾಣವಾಗಬಹುದು. ಜೆಡಿಎಸ್ ಅನ್ನು ವಚನಭ್ರಷ್ಟ ಪಕ್ಷಎಂದು ಘೋಷಿಸಿಯೇ ಬಿಜೆಪಿ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ.
ಕಾಂಗ್ರೆಸ್-ಎನ್ಸಿಪಿಯೊಂದಿಗೆ ಶಿವಸೇನೆಯು ಮೈತಿ ಮಾಡಿಕೊಳ್ಳುವುದೆಂದರೆ, ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಂತೆ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ಗಳ ನಡುವೆ ಎತ್ತಿ ಹೇಳಬಹುದಾದ ಸೈದ್ಧಾಂತಿಕ ಭಿನ್ನತೆಗಳೇ ಇಲ್ಲ. ಎನ್ಸಿಪಿ ಮತ್ತು ಕಾಂಗ್ರೆಸ್ ನಡುವೆಯೂ ಇದೇ ಸ್ಥಿತಿ ಇದೆ. ರಾಜಕೀಯ ಮತ್ತು ಸ್ಥಳೀಯ ಕಾರಣಗಳು ಎನ್ಸಿಪಿ ಮತ್ತು ಜೆಡಿಎಸ್ಗಳ ಹುಟ್ಟಿಗೆ ಕಾರಣವೇ ಹೊರತು ಸೆಕ್ಯುಲರ್ ಸಿದ್ಧಾಂತದ ಮೇಲಿನ ದ್ವೇಷವಲ್ಲ. ಆದರೆ ಶಿವಸೇನೆ ಹಾಗಲ್ಲ. ಅದು ಹುಟ್ಟಿಕೊಂಡದ್ದೇ ಸೆಕ್ಯುಲರ್ ಸಿದ್ಧಾಂತವನ್ನು ವಿರೋಧಿಸಿಕೊಂಡು. ಸಂವಿಧಾನ ಪ್ರತಿಪಾದಿಸುವ ಬಹುತ್ವದ ಭಾರತದೊಂದಿಗೆ ಅದಕ್ಕೆ ತಕರಾರಿದೆ. ಅದು ಇವತ್ತು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದರೆ ಅದಕ್ಕೆ ಅದರ ಅಸ್ತಿತ್ವದ ಭಯ ಕಾರಣವೇ ಹೊರತು ಸಿದ್ಧಾಂತ ಅಲ್ಲ. ಬಿಜೆಪಿ ನಿಧಾನವಾಗಿ ತನ್ನನ್ನು ಆಪೋಶನ ಪಡಕೊಳ್ಳುತ್ತಿದೆ ಅನ್ನುವ ಭಯ ಅದನ್ನು ಆವರಿಸಿದೆ. ತನ್ನ ಪಕ್ಷದ ಭದ್ರ ಕೋಟೆಗಳನ್ನು ಮತ್ತು ಬೆಂಬಲಿಗರನ್ನು ಬಿಜೆಪಿ ನಿಧಾನಕ್ಕೆ ತನ್ನ ತೆಕ್ಕೆಗೆ ಪಡೆದುಕೊಳ್ಳುತ್ತಿದೆ ಅನ್ನುವ ಸಂಕಟ ಅದರದು. ಇದು ಹೀಗೆಯೇ ಮುಂದುವರಿದರೆ ಶಿವಸೇನೆಯ ಬದಲು ಜನರು ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಾರು ಎಂಬುದು ಅದಕ್ಕೆ ಅರಿವಾಗಿದೆ. ಅಲ್ಲದೇ, ತನ್ನ ಜೊತೆ ಮೈತ್ರಿ ಮಾಡಿಕೊಂಡ ಯಾವ ಸ್ಥಳೀಯ ಪಕ್ಷವನ್ನೂ ಬಿಜೆಪಿ ಬೆಳೆಯಲು ಬಿಟ್ಟಿಲ್ಲ. ಇದನ್ನು ಮನಗಂಡೇ ಶಿವಸೇನೆ ಬಿಜೆಪಿಯನ್ನು ತೊರೆದು ಹೊಸ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಇದು ಅನುಕೂಲ ಸಿಂಧು ಮೈತ್ರಿಯೇ ಹೊರತು ಇನ್ನೇನಲ್ಲ. ಕಾಂಗ್ರೆಸ್-ಎನ್ಸಿಪಿಗಳು ಶಿವಸೇನೆಯೊಂದಿಗೆ ಸೇರುವುದೆಂದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ. ಶಿವಸೇನೆಗೆ ಸರಕಾರ ರಚನೆಯ ಅನಿವಾರ್ಯತೆ ಇರಬಹುದು. ಆದರೆ ಎನ್ಸಿಪಿ-ಕಾಂಗ್ರೆಸ್ಗೆ ಆ ಅನಿವಾರ್ಯತೆ ಇಲ್ಲ. ಮತದಾರರು ಈ ಮೈತ್ರಿಕೂಟವನ್ನು ಬೆಂಬಲಿಸಿಯೂ ಇಲ್ಲ. ಅಂದಹಾಗೆ,
ಅಧಿಕಾರ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಎದುರಾದಾಗ ಸಿದ್ಧಾಂತ ಮುಖ್ಯವಾಗಬೇಕೇ ಹೊರತು ಅಧಿಕಾರ ಅಲ್ಲ. ಒಂದುವೇಳೆ, ಇವತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರತಳ್ಳುವುದಕ್ಕಾಗಿ ಶಿವಸೇನೆಯ ಜೊತೆ ಕಾಂಗ್ರೆಸ್-ಎನ್ಸಿಪಿಗಳು ಕೈಜೋಡಿಸಬಹುದಾದರೆ ನಾಳೆ ಶಿವಸೇನೆಯನ್ನು ಹೊರಗಿಡುವುದಕ್ಕಾಗಿ ಬಿಜೆಪಿ ಜೊತೆ ಕೈ ಜೋಡಿಸಲೂ ಕಾಂಗ್ರೆಸ್-ಎನ್ಸಿಪಿಗಳು ಒಂದಾಗಬಹುದು. ಹಾಗಿದ್ದ ಮೇಲೆ ಜನಸಾಮಾನ್ಯರ ಮುಂದಿರುವ ಆಯ್ಕೆಯಾದರೂ ಏನು? ಸಿದ್ಧಾಂತ, ವಿಚಾರಧಾರೆ ಇತ್ಯಾದಿಗಳೆಲ್ಲ ಮಣ್ಣು-ಮಸಿ ಆಗಲಾರದೇ?
No comments:
Post a Comment