Saturday 27 November 2021

ತಬ್ಲೀಗ್: ಮನಸ್ಸು ಮಾಡಿರುತ್ತಿದ್ದರೆ ನೂರಾರು ಮಾನನಷ್ಟ ಮೊಕದ್ದಮೆ ದಾಖಲಾಗಿರುತ್ತಿತ್ತು..




ತಬ್ಲೀಗಿ ಜಮಾಅತ್ ಕಾರ್ಯಕರ್ತರನ್ನು ಹೀನಾಯವಾಗಿ ನಿಂದಿಸಿದ ಮತ್ತು ಕೊರೋನಾ ವೈರಸ್ ವಾಹಕರೆಂದು ಕರೆದು ಅವಮಾ ನಿಸಿದವರನ್ನು ಆತ್ಮಾವಲೋಕನಕ್ಕೆ ತಳ್ಳುವ ಬೆಳವಣಿಗೆಯೊಂದು ಕಳೆದವಾರ ನಡೆದಿದೆ. ಇದಕ್ಕೆ ಕಾರಣವಾಗಿರುವುದು ದೆಹಲಿ  ಹೈಕೋರ್ಟಿನ ನ್ಯಾಯಾಧೀಶರಾದ ಮುಕ್ತಾ ಗುಪ್ತಾ.


ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಳೆದ 2020 ಮಾರ್ಚ್ 9 ಮತ್ತು 10ರಂದು ಸಮಾವೇಶಕ್ಕೆ  ವಿದೇಶಿಯರು ಆಗಮಿಸಿದ್ದರು. ಮಾರ್ಚ್ 25ರಂದು ಕೊರೋನಾ ತಡೆಯಲು ದೇಶದಾದ್ಯಂತ  ಲಾಕ್‌ಡೌನ್ ಘೋಷಿಸಲಾಯಿತು ಮತ್ತು  ಕೊರೋನಾ ಹರಡುವುದಕ್ಕೆ ಈ ವಿದೇಶೀಯರು ಕಾರಣ ಎಂದು ಬಳಿಕ ವ್ಯಾಪಕವಾಗಿ ಅಪಪ್ರಚಾರ ಮಾಡಲಾಯಿತು. ಇದರನ್ವಯ  ಪೊಲೀಸರು ವಿದೇಶಿಯರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಅವರಿಗೆ ಯಾರು ಆಶ್ರಯ ನೀಡಿದ್ದರೋ ಅವರ ಮೇಲೂ ಎ ಫ್‌ಐಆರ್ ದಾಖಲಿಸಿದ್ದರು. ಇದೀಗ ಹೈಕೋರ್ಟು ಪೊಲೀಸರ ಈ ಕ್ರಮವನ್ನೇ ತರಾಟೆಗೆ ತೆಗೆದುಕೊಂಡಿದೆ. ದೇಶದಾದ್ಯಂತ ಲಾಕ್‌ಡೌನ್  ಘೋಷಿಸಿರುವಾಗ ಇವರು ಹೋಗುವುದಾದರೆ ಹೇಗೆ? ಅವರಿಗೆ ಆಶ್ರಯ ಕೊಡದಿದ್ದರೆ ಅವರು ಇರುವುದಾದರೂ ಎಲ್ಲಿ? ಎಫ್‌ಐಆರ್  ದಾಖಲಿಸುವಂತಹ ಯಾವ ತಪ್ಪನ್ನು ಅವರು ಮಾಡಿದ್ದಾರೆ ಎಂದು ನ್ಯಾಯಾಧೀಶೆ ಪ್ರಶ್ನಿಸಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ  ಅಲ್ಲ.

2020 ಡಿಸೆಂಬರ್ 15ರಂದು ದೆಹಲಿ ಹೈಕೋರ್ಟು 36 ವಿದೇಶಿ ತಬ್ಲೀಗಿ ಸದಸ್ಯರನ್ನು ದೋಷಮುಕ್ತಗೊಳಿಸಿತ್ತು. ನಿಝಾಮುದ್ದೀನ್  ಮರ್ಕಝï ಸಭೆಯಲ್ಲಿ ಭಾಗವಹಿಸುವುದಕ್ಕಾಗಿ 14 ದೇಶಗಳಿಂದ ಭಾರತಕ್ಕೆ ಬಂದಿದ್ದ ಇವರ ಮೇಲೆ ಭಾರತೀಯ ದಂಡಸಂಹಿತೆಯ  188, 219, ವಿಪತ್ತು ನಿರ್ವಹಣಾ ಕಾಯ್ದೆ 2005ರ 51ನೇ ಸೆಕ್ಷನ್ ಅನ್ವಯ ಕೇಸು ದಾಖಲಿಸಲಾಗಿತ್ತು. ಜೊತೆಗೇ ಇನ್ನೂ 6 ರಾಷ್ಟ್ರಗಳ 8  ಮಂದಿ ತಬ್ಲೀಗಿಗಳ ವಿರುದ್ಧವೂ ಕೇಸು ದಾಖಲಿಸಲಾಗಿತ್ತು. ಈ ಎಲ್ಲ ಪ್ರಕರಣಗಳಿಂದಲೂ ಅರೆದು ನ್ಯಾಯಾಧೀಶ ಅರುಣ್ ಕುಮಾರ್  ಗಾರ್ಗ್ ಇವರನ್ನು ದೋಷಮುಕ್ತಗೊಳಿಸಿದ್ದರು. ಇದಕ್ಕಿಂತ ಮೊದಲು ಇನ್ನೊಂದು ತೀರ್ಪೂ ಬಂದಿತ್ತು. ಈ ತೀರ್ಪನ್ನು 2020 ಆಗಸ್ಟ್  22ರಂದು ನೀಡಲಾಗಿತ್ತು. ಬಾಂಬೆ ಹೈಕೋರ್ಟ್ ನ  ಔರಂಗಾಬಾದ್ ಪೀಠದ ಜಸ್ಟಿಸ್ ವಿ.ವಿ. ನಲಪಾಡ್ ಮತ್ತು ಎಂ.ಜಿ. ಸೇವಿಲಿಕಾರ್‌ರನ್ನೊಳಗೊಂಡ ಪೀಠವು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ‘ಸಾಂಕ್ರಾಮಿಕ ರೋಗಗಳು ಬಂದಾಗ ಮತ್ತು ಅದನ್ನು  ಸಮರ್ಪಕವಾಗಿ ನಿರ್ವಹಿಸಲು ವಿಫಲವಾದಾಗ ತಮ್ಮ ವೈಫಲ್ಯವನ್ನು ಮರೆಮಾಚುವುದಕ್ಕಾಗಿ ಸರ್ಕಾರ ಕುತ್ತಿಗೆಯನ್ನು ಹುಡುಕುತ್ತದೆ.  ವಿದೇಶಿ ತಬ್ಲೀಗಿಗಳು ಅಂಥ ಬಲಿಪಶುಗಳು...’ ಎಂದು ಖಾರವಾಗಿ ಹೇಳಿತ್ತು ಮತ್ತು 29 ವಿದೇಶಿ ತಬ್ಲೀಗಿಗಳ ಮೇಲಿನ ಎಫ್‌ಐಆರನ್ನು  ರದ್ದುಗೊಳಿಸಿತ್ತು. 58 ಪುಟಗಳಲ್ಲಿ ನೀಡಿದ ಆ ತೀರ್ಪು ಸರ್ವರ ಅಧ್ಯಯನಕ್ಕೆ ಯೋಗ್ಯವಾಗಿರುವಂಥದ್ದು. ಅಂದಹಾಗೆ,

ತಬ್ಲೀಗಿಗಳಿಗೆ ಸಂಬಂಧಿಸಿ ಕಳೆದವಾರ ದೆಹಲಿ ಹೈಕೋರ್ಟು ನೀಡಿದ ತೀರ್ಪು ಮತ್ತು ಈ ಹಿಂದಿನ ತೀರ್ಪುಗಳನ್ನು ನಾವು ಪೊಲೀಸರಿಗೆ  ಕೋರ್ಟಿನಿಂದ ಸಿಕ್ಕ ಚಾಟಿಯೇಟು ಎಂಬ ರೀತಿಯಲ್ಲಿ ಮಾತ್ರ ಚರ್ಚಿಸುವುದು ಸತ್ಯಕ್ಕೆ ಎಸಗುವ ಬಹುದೊಡ್ಡ ಅಪಚಾರವಾದೀತು.  ಸ್ವದೇಶಿ ಮತ್ತು ವಿದೇಶಿ ತಬ್ಲೀಗಿಗಳನ್ನು ಅಪರಾಧಿಗಳೆಂದು ಮೊಟ್ಟಮೊದಲು ಬಿಂಬಿಸಿದ್ದು ಟಿ.ವಿ. ಮಾಧ್ಯಮಗಳು ಮತ್ತು ಮುದ್ರಣ  ಮಾಧ್ಯಮಗಳು. ಜೊತೆಗೇ ರಾಜಕಾರಣಿಗಳು. ಈ ದೇಶದಲ್ಲಿ ಕೊರೋನಾ ಲಾಕ್‌ಡೌನ್ ಘೋಷಿಸುವುದಕ್ಕಿಂತ ಮೂರು ವಾರಗಳ  ಮೊದಲೇ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿತ್ತು. ವಿದೇಶಿಯರೂ ಸೇರಿದಂತೆ  ದೊಡ್ಡ ಸಂಖ್ಯೆಯಲ್ಲಿ ತಬ್ಲೀಗಿ ಕಾರ್ಯಕರ್ತರು ಅದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ ವಿದೇಶೀಯರಾಗಲಿ  ಸ್ವದೇಶೀಯರಾಗಲಿ ಯಾರೂ ಕೂಡಾ ಕಾನೂನು ಉಲ್ಲಂಘಿಸಿ ಅಲ್ಲಿಗೆ ತಲುಪಿರಲಿಲ್ಲ. ವಿಮಾನ ನಿಲ್ದಾಣಗಳ ಎಲ್ಲ ಕಾನೂನು  ಪ್ರಕ್ರಿಯೆಗಳನ್ನು ಮುಗಿಸಿಯೇ ಎಲ್ಲ ವಿದೇಶೀಯರೂ ನಿಝಾಮುದ್ದೀನ್ ಮರ್ಕಜ್ ಗೆ ತಲುಪಿದ್ದರು. ಅಲ್ಲದೇ, ಆಗ ಲಾಕ್‌ಡೌನ್  ಘೋಷಿಸುವ ಯಾವ ಸೂಚನೆಯನ್ನೂ ಕೇಂದ್ರ ಸರ್ಕಾರ ನೀಡಿಯೂ ಇರಲಿಲ್ಲ. ಕೊರೋನಾ ನಿಯಮಗಳೂ ಆ ಸಂದರ್ಭದಲ್ಲಿ  ಜಾರಿಯಲ್ಲಿರಲಿಲ್ಲ. ಹೀಗಿರುತ್ತಾ ಮಾರ್ಚ್ 25ರಂದು ಕೇಂದ್ರ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಿಸಿತು. ಈ ದಿಢೀರ್ ಕ್ರಮವು  ನಿಝಾಮುದ್ದೀನ್‌ನಲ್ಲಿ ಸೇರಿದ್ದ ಸಾವಿರಕ್ಕಿಂತಲೂ ಅಧಿಕ ತಬ್ಲೀಗಿಗಳಿಗಾಗಲಿ ಜಮ್ಮುವಿನ ವೈಷ್ಣೋವಿ ಮಂದಿರದಲ್ಲಿ ಸೇರಿಕೊಂಡಿದ್ದ  600ಕ್ಕಿಂತಲೂ ಅಧಿಕ ಭಕ್ತಾದಿಗಳಿಗಾಗಲಿ ಅಥವಾ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸೇರಿಕೊಂಡಿದ್ದ 3000ರಷ್ಟು ಯಾತ್ರಾರ್ಥಿಗಳಿಗಾಗಲಿ  ಆಘಾತಕಾರಿಯದ್ದಾಗಿತ್ತು. ನೆಲ, ಜಲ ಮತ್ತು ವಾಯು ಮಾರ್ಗಗಳನ್ನು ದಿಢೀರ್ ಸ್ಥಗಿತಗೊಳಿಸಿದುದರಿಂದ ಇವರಾರೂ ಇರುವಲ್ಲಿಂದ  ಬೇರೆಡೆಗೆ ಹೋಗುವಂತಿರಲಿಲ್ಲ. ಹಾಗೆಯೇ ಈ ಲಾಕ್‌ಡೌನ್‌ನ ಅಂತ್ಯ ಯಾವಾಗ ಎಂಬ ಖಚಿತತೆ ಯಾರಲ್ಲೂ ಇರಲಿಲ್ಲ. ಆದರೆ,

ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗತೊಡಗಿದಂತೆಯೇ ಮತ್ತು ದಿಢೀರ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಸಮಸ್ಯೆಗಳ  ಮಹಾಪೂರವೇ ಎದುರಾಗತೊಡಗಿದಂತೆಯೇ ಕೇಂದ್ರ ಸರ್ಕಾರದ ಬೆಂಬಲಿಗ ಟಿ.ವಿ. ಮಾಧ್ಯಮಗಳು ತಬ್ಲೀಗಿಗಳತ್ತ ದೃಷ್ಟಿ ನೆಟ್ಟವು.  ವೈಷ್ಣೋವಿ ಮಂದಿರ ಮತ್ತು ಗುರುದ್ವಾರಗಳಲ್ಲಿ ಸಿಲುಕಿಕೊಂಡ ಯಾತ್ರಾರ್ಥಿಗಳ ಬಗ್ಗೆ ಒಂದೇ ಒಂದು ಗೆರೆಯ ಫ್ಲ್ಯಾಶ್ ನ್ಯೂಸನ್ನೂ  ಪ್ರಸಾರ ಮಾಡದ ಇವು, ತಬ್ಲೀಗಿಗಳನ್ನು ಅವುಗಳಿಂದ ಪ್ರತ್ಯೇಕಿಸಿ ಬಡಿಯತೊಡಗಿದುವು. ಚಿತ್ರ-ವಿಚಿತ್ರ ಕತೆ ಕಟ್ಟತೊಡಗಿದುವು. ದಿನದ  ಹೆಚ್ಚಿನ ಸಮಯ ಟೊಪ್ಪಿ, ಗಡ್ಡ, ಪೈಜಾಮ-ಕುರ್ತಾವನ್ನು ತೋರಿಸುವುದಕ್ಕೆ ಮೀಸಲಿಟ್ಟವು. ದೇಶಕ್ಕೆ ಕೊರೋನಾ ಬಂದಿರುವುದೇ  ಇವರಿಂದ ಎಂಬಂತೆ  ಬಿಂಬಿಸಿ, ಅಸಹ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಯಾವ್ಯಾವುದೋ ರಾಷ್ಟ್ರದ ಮತ್ತು ಯಾವ್ಯಾವುದೋ  ಕಾರ್ಯಕ್ರಮದ ಏನೇನೋ ವೀಡಿಯೋ ತುಣುಕುಗಳನ್ನು ತಬ್ಲೀಗಿಗಳಿಗೆ ಜೋಡಿಸಿ ಅವು ಪ್ರಸಾರ ಮಾಡಿದುವು ಮತ್ತು ಸೋಷಿಯಲ್  ಮೀಡಿಯಾಗಳು ಇವನ್ನು ಎತ್ತಿಕೊಂಡು ಸಂಭ್ರಮಿಸಿದುವು. ವಿಷಾದ ಏನೆಂದರೆ,

ನ್ಯಾಯಾಲಯಗಳು ಒಂದರ ಮೇಲೆ ಒಂದರಂತೆ  ತೀರ್ಪು ನೀಡುತ್ತಿರುವಾಗಲೂ ಈ ಟಿ.ವಿ. ಚಾನೆಲ್‌ಗಳಾಗಲಿ, ಪತ್ರಿಕೆಗಳಾಗಲಿ ಅಥವಾ  ರಾಜಕಾರಣಿಗಳಾಗಲಿ ಎಲ್ಲೂ ಪಶ್ಚಾತ್ತಾಪದ ಭಾವನೆಯನ್ನು ವ್ಯಕ್ತಪಡಿಸಿಲ್ಲ. ತಬ್ಲೀಗಿಗಳನ್ನು ಖಳನಾಯಕರಾಗಿಸುವಲ್ಲಿ ರಾಜಕಾರಣಿಗಳ  ಪಾತ್ರವೇನೂ ಕಡಿಮೆಯಿರಲಿಲ್ಲ. ಪೈಪೋಟಿಗೆ ಬಿದ್ದು ಈ ರಾಜಕಾರಣಿಗಳು ತಬ್ಲೀಗಿಗಳ ವಿರುದ್ಧ ಹೇಳಿಕೆಯನ್ನು ಕೊಟ್ಟಿದ್ದರು. ಆದ್ದರಿಂದ,

ಜನಪ್ರತಿನಿಧಿಗಳೆಂಬ  ನೆಲೆಯಲ್ಲಿ ತಮ್ಮ ಈ ಹಿಂದಿನ ವರ್ತನೆಗೆ ಕ್ಷಮೆ ಯಾಚಿಸಬೇಕಾದುದು ಅವರ ಹೊಣೆಗಾರಿಕೆ. ಮಾಧ್ಯಮಗಳದ್ದೂ  ಅಷ್ಟೇ. ಜಿದ್ದಿಗೆ ಬಿದ್ದು ತಬ್ಲೀಗಿಗಳ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ ಯಾವ ಚಾನೆಲ್ಲೂ ಈ ವರೆಗೆ ತಮ್ಮ ಈ ವರ್ತನೆಗಾಗಿ  ವಿಷಾದ ಸೂಚಿಸಿಲ್ಲ. ಜನಪ್ರಿಯ ಸುದ್ದಿಗಳನ್ನು ಕೊಡುವ ತುರ್ತಿನಲ್ಲಿ ಸುದ್ದಿಯ ಸ್ಪಷ್ಟತೆಗೆ ಮಹತ್ವ ಕೊಡುವಲ್ಲಿ ನಾವು ಎಡವಿದ್ದೇವೆ ಎಂಬ  ಪುಟ್ಟ ಹೇಳಿಕೆಯನ್ನು ಅವು ಇನ್ನೂ ಕೊಟ್ಟಿಲ್ಲ. ಪತ್ರಿಕೆಗಳೂ ಇದರಲ್ಲಿ ಸಮಾನ ದೋಷಿ. ವಿಶೇಷ ಏನೆಂದರೆ,

ಅಂದಿನಿಂದ  ಇಂದಿನವರೆಗೆ ತಬ್ಲೀಗಿಗಳು ಕಾಯ್ದುಕೊಂಡು ಬಂದ ಸಂಯಮ. ಅವರು ಮನಸ್ಸು ಮಾಡಿರುತ್ತಿದ್ದರೆ ದೇಶದಾದ್ಯಂತ  ನೂರಾರು ಮಾನ ನಷ್ಟ ಮೊಕದ್ದಮೆಗಳನ್ನು ಮಾಧ್ಯಮಗಳು ಮತ್ತು ರಾಜಕಾರಣಿಗಳ ವಿರುದ್ಧ ದಾಖಲಿಸಬಹುದಿತ್ತು. ಪತ್ರಿಕಾಗೋಷ್ಠಿ  ಕರೆದು ತಮ್ಮ ಮೇಲಾದ ಅನ್ಯಾಯವನ್ನು ದಾಖಲೆ ಸಹಿತ ಸಮಾಜದ ಮುಂದಿಡಬಹುದಿತ್ತು. ಯಾವ ಟಿ.ವಿ., ಯಾವ ಪತ್ರಿಕೆ ಮತ್ತು  ಯಾವ ರಾಜಕಾರಣಿ ಯಾವ್ಯಾವ ಸಮಯದಲ್ಲಿ ಏನೇನು ಹೇಳಿಕೆ ಕೊಟ್ಟಿದ್ದಾರೆ, ಯಾವ್ಯಾವ ಕಾರ್ಯಕ್ರಮಗಳನ್ನು ಟಿ.ವಿ. ಚಾನೆಲ್‌ಗಳು  ಪ್ರಸಾರ ಮಾಡಿವೆ ಮತ್ತು ಪತ್ರಿಕೆಗಳಲ್ಲಿ ಏನೇನು ವರದಿಗಳು ಬಂದಿವೆ ಎಂಬುದನ್ನು ಇಂಚಿಂಚಾಗಿ ಹೇಳಿಕೊಳ್ಳಬಹುದಿತ್ತು. ಆದರೆ, ತಬ್ಲೀಗಿ  ಕಾರ್ಯಕರ್ತರು ಈ ಒಂದೂ ಮುಕ್ಕಾಲು ವರ್ಷಗಳಲ್ಲಿ ಸಂಯಮದಿಂದ  ವರ್ತಿಸಿದ್ದಾರೆ. ಸದ್ದಿಲ್ಲದೇ ಪ್ಲಾಸ್ಮಾ ದಾನ ಮಾಡಿದ್ದಾರೆ.  ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರೂ ಸೇರಿದಂತೆ ಎಲ್ಲರಿಗೂ ಆಹಾರ ಕಿಟ್‌ಗಳನ್ನು ಹಂಚಿದ್ದಾರೆ. ರಕ್ತದಾನ ಮಾಡಿದ್ದಾರೆ.  ನಿಜವಾಗಿ,

ಈ ದೇಶದ ಇತಿಹಾಸದಲ್ಲಿ ದಪ್ಪಕ್ಷರಗಳಿಂದ ಬರೆದಿಡಬೇಕಾದ ಬೆಳವಣಿಗೆ ಇದು. ಅವರು ಲಾಕ್‌ಡೌನ್ ಮೊದಲೂ ತಣ್ಣಗಿದ್ದರು. ಇಷ್ಟೆಲ್ಲಾ  ಅನ್ಯಾಯ, ನಿಂದನೆ, ಅವಮಾನಗಳ ಬಳಿಕವೂ ತಣ್ಣಗೇ ಇದ್ದಾರೆ.

No comments:

Post a Comment