Saturday 18 August 2012

ಅವರೆಲ್ಲಾ ಮನುಷ್ಯರು,ಗುರುತು ಏನೇ ಆಗಿದ್ದರೂ..

ಈಶಾನ್ಯ ಭಾರತದ ಮಂದಿ ಈ ರಾಜ್ಯದಿಂದ ಸಾಮೂಹಿಕವಾಗಿ ವಲಸೆ ಹೋಗುವಾಗ ಕೆಲವು ಪ್ರಶ್ನೆಗಳನ್ನೂ ಬಿಟ್ಟು ಹೋಗಿದ್ದಾರೆ. ಅವರಾರೂ ಈ ರಾಜ್ಯದ ಯಾವುದಾದರೊಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪಾಗಿ ವಾಸಿಸುತ್ತಿರಲಿಲ್ಲ. ಎಲ್ಲೆಂದರಲ್ಲಿ ಚದುರಿ ಹೋಗಿದ್ದ ಇವರೆಲ್ಲಾ ಬೆಂಗಳೂರಿನಲ್ಲಿ ಒಮ್ಮೆಲೇ ಒಟ್ಟುಗೂಡಿದ್ದು ಹೇಗೆ? ರಾಜ್ಯದಲ್ಲಿ ಅವರದ್ದೇ ಆದ ಒಂದು ಸಂಘಟನೆಯೂ ಇಲ್ಲ. ಹೀಗಿರುವಾಗ ಅವರನ್ನು ಸಂಪರ್ಕಿಸುವ ಮತ್ತು ಸಂಘಟಿತಗೊಳಿಸುವ ಕೆಲಸವನ್ನು ಮಾಡಿದ್ದು ಯಾರು? ಅಷ್ಟಕ್ಕೂ ಅವರ ಮೇಲೆ ಅಧಿಕೃತವಾಗಿ ಒಂದೇ ಒಂದು ದಾಳಿ ಆಗುವುದಕ್ಕಿಂತ ಮೊದಲೇ ಅವರೆಲ್ಲಾ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಒಟ್ಟುಗೂಡಿದ್ದಾರೆ. ಹತ್ತಾರು ವರ್ಷಗಳಿಂದ ಈ ರಾಜ್ಯದಲ್ಲಿರುವ ಇವರನ್ನು ಒಂದು ಎಸ್ಸೆಮ್ಮೆಸ್ಸು, ಇಮೇಲು, ಅಥವಾ ಫೇಸ್‍ಬುಕ್‍ನ ಬರಹವು ಅಷ್ಟೊಂದು ಪ್ರಮಾಣದಲ್ಲಿ ಬೆದರಿಸಲು ಸಾಧ್ಯವೇ?
    ನಿಜವಾಗಿ, ಈ ದಿಢೀರ್ ಬೆಳವಣಿಗೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿರುವಂತೆ ಕಾಣಿಸುತ್ತಿದೆ. 80ರ ದಶಕದಲ್ಲಿ ವಿ.ಪಿ. ಸಿಂಗ್‍ರು ಮಂಡಲ್ ವರದಿಯ ಜಾರಿಗೆ ಮುಂದಾದಾಗ, ಇಂಥದ್ದೇ ಸಮೂಹ ಸನ್ನಿ ನಿರ್ಮಾಣವಾಗಿತ್ತು. ದಲಿತರ ವಿರುದ್ಧ ಸಂಘಪರಿವಾರ ಮೇಲ್ವರ್ಗವನ್ನು ಎತ್ತಿ ಕಟ್ಟಿತ್ತು. ಆತ್ಮಾಹುತಿ ಪ್ರಕರಣಗಳೂ ನಡೆದಿದ್ದುವು. ಮಂಡಲ್ ವರದಿ ಜಾರಿಯಾದರೆ ಮೇಲ್ವರ್ಗದ ಮಂದಿ ದಲಿತರ ಗುಲಾಮರಂತೆ ಬದುಕಬೇಕಾದೀತು ಅನ್ನುವ ಸುಳ್ಳು ಭ್ರಮೆಯನ್ನು ಎಲ್ಲೆಡೆ ಹರಡಲಾಗಿತ್ತು. ಅದೊಂದೇ ಅಲ್ಲ, ಬಾಬರೀ ಮಸೀದಿಯನ್ನು ಉರುಳಿಸುವುದಕ್ಕೂ ಸಂಘಪರಿವಾರ ಆಯ್ಕೆ ಮಾಡಿಕೊಂಡಿದ್ದು ಇಂಥದ್ದೇ ತಂತ್ರವನ್ನು. ಬಿಜೆಪಿ ನೇತೃತ್ವದಲ್ಲಿ ಒಂದು ವರ್ಷಕ್ಕಿಂತ ಮೊದಲೇ ಅದು ಜನರಲ್ಲಿ ಒಂದು ಬಗೆಯ ಪ್ರಚೋದಕ ಮನಸ್ಥಿತಿಯನ್ನು ಹುಟ್ಟುಹಾಕಲು ಪ್ರಯತ್ನಿಸಿತ್ತು. ಆ ಕುರಿತಂತೆ ದೇಶದೆಲ್ಲೆಡೆ ಸಭೆ, ಸಮಾರಂಭಗಳನ್ನು ನಡೆಸಿ ಜನರನ್ನು ಸಜ್ಜುಗೊಳಿಸಿತ್ತು. ಹಿಂದೂ ಧರ್ಮ, ಅದರ ಆರಾಧನಾಲಯಗಳು, ಸಂಸ್ಕøತಿ.. ಎಲ್ಲವೂ ಮುಸ್ಲಿಮರಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿವೆ ಅನ್ನುವ ಪ್ರಚಾರದೊಂದಿಗೆ ಇಟ್ಟಿಗೆ ಅಭಿಯಾನವನ್ನು ಹಮ್ಮಿಕೊಂಡಿತ್ತು. ಅಂದಹಾಗೆ, ಭಯದ ಸನ್ನಿವೇಶವನ್ನು ನಿರ್ಮಾಣ ಮಾಡಿ, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಕಲೆ ಸಂಘಪರಿವಾರಕ್ಕೆ ಚೆನ್ನಾಗಿಯೇ ಸಿದ್ದಿಸಿದೆ. ಹೀಗಿರುತ್ತಾ, ಈಶಾನ್ಯ ರಾಜ್ಯಗಳ ಮಂದಿಯ ವಲಸೆಯನ್ನು ನಾವು ಬರೇ ಭಾವನಾತ್ಮಕ ದೃಷ್ಟಿಯಿಂದ ನೋಡುವುದು ಎಷ್ಟು ಸರಿ? ಅಚ್ಚರಿ ಏನೆಂದರೆ, ಅಸ್ಸಾಮ್‍ನ ಘರ್ಷಣೆಗೆ ಅಕ್ರಮ ವಲಸಿಗರು ಕಾರಣ ಎಂದು ಹೇಳುತ್ತಾ ತಿರುಗಾಡುತ್ತಿರುವವರೇ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮಂದಿಯ ರಕ್ಷಕರಾಗಿ ಕಾಣಿಸಿಕೊಂಡಿರುವುದು. ರೈಲ್ವೆ ನಿಲ್ದಾಣದಲ್ಲಿ ಅವರ ರಕ್ಷಣೆಗೆ ಲಾಠಿ ಹಿಡಿದು, ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡಿರುವುದು.
        ಅಂದಹಾಗೆ, ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಗಲಭೆಯೇ ನಡೆಯದ ಪ್ರದೇಶದಿಂದ ವಲಸೆ ಹೋದುದು ಈ ದೇಶದಲ್ಲಿ ಇದೇ ಮೊದಲು. ಈ ರಾಜ್ಯದಿಂದ ಮಾತ್ರವಲ್ಲ, ಆಂಧ್ರ, ತಮಿಳ್ನಾಡು, ಮಹಾರಾಷ್ಟ್ರದಿಂದಲೂ ಇಂಥ ವಲಸೆಗಳು ನಡೆದಿವೆ. ಆದ್ದರಿಂದಲೇ  ಈ ಬೆಳವಣಿಗೆಯ ಕುರಿತಂತೆ ಅತ್ಯಂತ ಪರಿಣಾಮಕಾರಿ ತನಿಖೆ ನಡೆಯಬೇಕು. ಮನುಷ್ಯರ ನಡುವೆ ದ್ವೇಷವನ್ನು ಹುಟ್ಟು ಹಾಕುವ ಶಕ್ತಿಗಳು ಎಷ್ಟೇ ಬಲಿಷ್ಟವಾಗಿರಲಿ, ಅವರು ಮಾನವ ದ್ರೋಹಿಗಳು.
         ನಿಜವಾಗಿ, ಮನುಷ್ಯರನ್ನು ಅವರ ಚರ್ಮ, ಭಾಷೆ, ರಾಜ್ಯ, ದೇಶದ ಆಧಾರದಲ್ಲಿ ವಿಂಗಡಿಸುವುದೇ ದೊಡ್ಡ ಕ್ರೌರ್ಯ. ಕೊಕ್ರಾಜಾರ್‍ನಲ್ಲಿ ಬೋಡೋಗಳು ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದರೆ, ಅದಕ್ಕೆ ಈ ರಾಜ್ಯದಲ್ಲಿರುವ ಬೋಡೋಗಳೋ ಮುಸ್ಲಿಮರೋ ಹೊಣೆಗಾರರಾಗುವುದಾದರೂ ಹೇಗೆ? ಅಲ್ಲಿ ಮುಸ್ಲಿಮನೊಬ್ಬನಿಗೆ ಏಟು ಬಿದ್ದರೆ, ಇಲ್ಲಿರುವ ಬೋಡೋ ವ್ಯಕ್ತಿಗೆ ಹೊಡೆಯುವುದು ನ್ಯಾಯವಾಗುತ್ತದಾ? ಒಂದು ಅನ್ಯಾಯವನ್ನು ಇನ್ನೊಂದು ಅನ್ಯಾಯದ ಮೂಲಕ ಸಮರ್ಥಿಸಿಕೊಳ್ಳಲು ಸಾಧ್ಯವೇ? ನ್ಯಾಯ ನಿನ್ನ ಹೆತ್ತವರ ವಿರುದ್ಧವಾಗಿದ್ದರೂ ನೀನು ನ್ಯಾಯದ ಪರವಾಗಿಯೇ ನಿಲ್ಲಬೇಕು ಅನ್ನುತ್ತದೆ ಪವಿತ್ರ ಕುರ್‍ಆನ್ (4: 59). ಬಹುಶಃ ಅಸ್ಸಾಮ್‍ನ ಬೆಳವಣಿಗೆಯನ್ನು ಬಳಸಿಕೊಂಡು ಇಡೀ ದೇಶದಲ್ಲಿ `ಮುಸ್ಲಿಮ್ ಭೀತಿ’ಯ ವಾತಾವರಣವನ್ನು ಸೃಷ್ಟಿಸಲು ಖಂಡಿತ ಹುನ್ನಾರವೊಂದು ನಡೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಂದು ವರ್ಷದೊಳಗೆ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವುದಕ್ಕೆ ಇಶ್ಶೂ ಒಂದರ ಅಗತ್ಯ ಇತ್ತು . ಒಂದು ಕಡೆ ಬಾಬಾ ರಾಮ್‍ದೇವ್‍ರ ಮುಖಾಂತರ ಈ ಕೆಲಸ ನಡೆಯುತ್ತಿರುವಾಗ ಇನ್ನೊಂದು ಕಡೆಯಿಂದ ಇಂಥದ್ದೊಂದು ಸನ್ನಿವೇಶಕ್ಕೆ ಚಾಲನೆ ನೀಡಿರುವ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯುವುದು?
        ಸ್ವಾತಂತ್ರೋತ್ಸವದ ವೇಳೆ ಧ್ವಜಸ್ತಂಭದ ಕೆಳಗೆ ನಿಂತು ನಾವೆಲ್ಲಾ ಭಾರತೀಯರು, ನಾವೆಲ್ಲ ಒಂದು ಎಂದು ಎಷ್ಟೇ ಗಟ್ಟಿಯಾಗಿ ಹೇಳಿದರೂ ಈ ದೇಶದಲ್ಲಿ ಅಂಥ ಸನ್ನಿವೇಶ ನಿರ್ಮಾಣವಾಗಬಾರದೆಂದು ಬಯಸುವವರು ಇದ್ದಾರೆನ್ನುವುದು ಸ್ಪಷ್ಟ. ಮುಸ್ಲಿಮರನ್ನು ದೇಶದ ವೈರಿಗಳು, ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಪ್ರತಿನಿತ್ಯ ನಡೆಯುತ್ತಲೂ ಇದೆ. ಯಾವುದಾದರೂ ಬಿಡಿ ಪ್ರಕರಣವನ್ನು ಎತ್ತಿಕೊಂಡು ಇಡೀ ಸಮುದಾಯವನ್ನೇ ನಿಂದಿಸುವ, ಅವರ ದೇಶನಿಷ್ಠೆಯನ್ನು ಪ್ರಶ್ನಿಸುವ ಶ್ರಮ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಧಾರಾಳ ನಡೆಯುತ್ತಿವೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದಾಗಲೂ ಮೊದಲು ಶಂಕಿಸಿದ್ದು ಮುಸ್ಲಿಮರನ್ನೇ. ಆದ್ದರಿಂದ ಅಸ್ಸಾಮ್‍ನ ಘರ್ಷಣೆಯನ್ನು ನೆಪವಾಗಿಸಿಕೊಂಡು ಭೀತಿಯನ್ನು ಸೃಷ್ಟಿಸುವ ಯಾರೇ ಇರಲಿ, ಅವರನ್ನು ಮತ್ತು ಅವರ ಮೂಲವನ್ನು ಪತ್ತೆ ಹಚ್ಚಿ, ಶಿಕ್ಷೆಗೊಳಪಡಿಸಲೇಬೇಕು. ಅಂಥ ಎಸ್ಸೆಮ್ಮೆಸ್‍ಗೆ ಯಾರು ಪ್ರಾಯೋಜಕರು ಅನ್ನುವುದು ಬಹಿರಂಗವಾಗಬೇಕು. ಅಸ್ಸಾಮಿನಲ್ಲಿ ಬೋಡೋಗಳು ಮತ್ತು ಬೋಡೋಯೇತರರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಲ್ಲಿಯದ್ದೇ ಆದ ಕಾರಣ ಇದೆ. ಅದನ್ನು ಒಂದು ಎಸ್ಸೆಮ್ಮೆಸ್‍ನ ಮೂಲಕ ಪರಿಹರಿಸಬಹುದೆಂದು ನಂಬುವವರನ್ನು ಮೊದಲು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಆದ್ದರಿಂದ ಆ ನೆಪದಲ್ಲಿ ಈ ರಾಜ್ಯವನ್ನು ಅಸ್ಸಾಮ್ ಮಾಡುವವರ ಬಗ್ಗೆ ಜಾಗೃತರಾಗಿರೋಣ. ಈಶಾನ್ಯ ರಾಜ್ಯಕ್ಕೆ ಮರಳಿದವರು ಮತ್ತೆ ಇಲ್ಲಿಗೆ ಮರಳಿ ಬರುವಂಥ ವಾತಾವರಣವನ್ನು ನಿರ್ಮಿಸೋಣ. ಯಾಕೆಂದರೆ ಅವರೆಲ್ಲ ಮನುಷ್ಯರು, ಗುರುತು ಏನೇ ಆಗಿದ್ದರೂ.

3 comments:

  1. <>
    ಸ್ವಾಮೀ ನಿಮಗೆ ಈ ವಿಷಯನ ಯಾರು ಹೇಳಿದ್ದು?ನಾರ್ತ್ ಈಸ್ಟ್ ನವರಲ್ಲಿ ಅವರದೇ ಆದ ಸಂಘಟನೆ ಇದೆ. ನನ್ನ ಖಾಸಾ ದೋಸ್ತ್ ಮಣಿಪುರದವನು. ಹಾಗೆಯೇ ಅವರ ಸಂಘಟನೆಯ ಮೀಟಿಂಗ್ ಇದೆ ಎಂದೂ ಅದರ ತರುವಾಯ ಬೆಂಗಳೂರಿನಿಂದ ಹೊರಡುತ್ತೆನೆಂದೂ ಹೇಳಿದ್ದ. ಟ್ರೇನ್ ಟಿಕೆಟ್ reservation ಮಾಡಿಸಿದ್ದೇನೆ ಎಂದೂ ಆತ ನನಗೆ ಹೇಳಿದ್ದ. ಇನ್ನು ಈ sms ಕಳುಹಿಸಿದ ಬಗ್ಗೆ ಈಗಾಗಲೇ ಬಹಳಷ್ಟು ತನಿಕೆ ನಡೆದಿದೆ. ಅವರ್ಯಾರೂ RSS ಎಂದು ಖಚಿತ ಪಡಿಸಿಲ್ಲ. ಬದಲಾಗಿ ಇದರ ಹಿಂದೆ ಕೇರಳಾದ Popular Front of India ಹಾಗೂ ಬಾಂಗ್ಲಾದೇಶದ Harkat-ul-Jehad al Islami ಸಂಘಟನೆಯ ಕೈವಾಡ ಇದೆ ಎಂದು ಸೈಬರ್ ಸೆಕ್ಯೂರಿಟಿ ಏಜನ್ಸಿ ಹೇಳಿದೆ. ನೀವ್ಯಾಕೆ ಸತ್ಯವನ್ನು ಪೂರ್ತಿಯಾಗಿ ತಿಳಿದುಕೊಳ್ಳದೆ ನಿಮ್ಮದೇ ಸ್ವತಂತ್ರ ತನಿಖೆಯ ಮೂಲಕ ಬೇರೆಯವರ ಹಾದಿ ತಪ್ಪಿಸುತ್ತಿದ್ದೀರಿ ಎಂದು ಗೊತ್ತಾಗುತ್ತಿಲ್ಲ.
    http://indiawires.com/12732/news/national/keralas-popular-front-of-india-behind-rogue-sms-that-caused-ne-exodus/

    ReplyDelete
  2. popular front of india vannu nishedisalikkoskara sangaparivara hagu nammannu aalutthiruvavaru jotheyagi hoodida shadyanthravidu...popular front endare chaddigaligeke naduka? chaddigalige thamma karya sadisalu bharathadalle athyantha munchooniyalliruva popular front addagalagide..nijavada deshdrohigalendare sangaparivarigalu...swathanthriya dinada madya rathri thrivarna dwajavannu harisuva badalu bagavadwajavannu harisuva sangaparivarigalu deshdrohigalallave?

    ReplyDelete
  3. ಜಿಹಾದಿಯೊಬ್ಬ ಲೇಖನ ಬರೆಯಲು ಹೊರಟರೆ ಇ೦ಥ ಲೇಖನ ಬರದೆ, ಇನ್ನೇನು ಆದೀತು.....!!?? ಇವರಿಗೆಲ್ಲ, ಒಪ್ಪೊತ್ತಿನ ಗ೦ಜಿಗೆ, ಪದ್ಮ ಶ್ರೀ ಪಡೆಯಲು, ಭಾರತ ರತ್ನ ಪಡೆಯಲು ಅದೊ೦ದೇ ದಾರಿ. ಇರಲಿ ಬಿಡಿ. ಬೊಗಳುವವರು ಬೊಗಳುತ್ತಾ ಇರಲಿ. ಮಸಾಲೆ ದೋಸೆಯ ಪರಿಮಳಕ್ಕೂ, ಸತ್ತ ಹ೦ದಿಯ ವಾಸನೆಗೂ ವ್ಯತ್ಯಾಸ ಗೊತ್ತಿಲ್ಲದ ಜೀವಿಗಳು.

    ReplyDelete