
ನಿಜವಾಗಿ, ದುರಂಹಕಾರ ಮತ್ತು ಮೇಲರಿಮೆ ಎಂಬೆರಡು ಮನುಷ್ಯ ವಿರೋಧಿ ದುರ್ಗುಣಗಳೇ ಈ ನಿಲುವುಗಳಿಗೆ ಮೂಲ ಕಾರಣ. ಈ ದೇಶದಲ್ಲಿ ಯಾರು ಯಾವ ವೃತ್ತಿಯನ್ನು ಮಾಡಬೇಕು, ಯಾರು ಯಾವ ಆಹಾರವನ್ನು ಸೇವಿಸಬೇಕು, ಯಾವುದು ಸಂಸ್ಕೃತಿ, ಯಾವುದು ಇತಿಹಾಸ, ಯಾವುದು ದೇಶಪ್ರೇಮ.. ಮುಂತಾದುವುಗಳನ್ನೆಲ್ಲ ನಿರ್ಧರಿಸುವುದೂ ಈ ಚಿಂತನೆಗಳೇ. ಈ ದೇಶದಲ್ಲಿ ದಲಿತರ ಪಾಲಿಗೆ ಗೋಮಾಂಸ ಪರಂಪರಾಗತ ಆಹಾರ. ಸತ್ತ ಗೋವಿನ ಚರ್ಮ ಸುಲಿಯುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ಕೂಡ ಅವರು ಪರಂಪರಾಗತ ವೃತ್ತಿಯಂತೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೊಂದು ದೀರ್ಘ ಇತಿಹಾಸವಿದೆ. ಆದರೆ ಕಳೆದ ಶತಮಾನದಿಂದ ಈಚೆಗೆ ಈ ಮೇಲ್ಜಾತಿ ಗುಂಪು ಗೋವನ್ನು ತಮ್ಮ ಸಾಮಾಜಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಯುಧವಾಗಿ ಬಳಸುವ ತಂತ್ರಕ್ಕೆ ಇಳಿಯಿತು. ಈ ತಂತ್ರಕ್ಕೆ ದಲಿತ ಸಮುದಾಯದಲ್ಲಿ ಜಾಗೃತವಾಗುತ್ತಿರುವ ಸ್ವಾಭಿಮಾನ ಪ್ರಜ್ಞೆಯೂ ಒಂದು ಕಾರಣವಾಗಿರಬಹುದು. ಮಂಡಲ್ ವರದಿ ಮತ್ತಿತರ ದಲಿತ ಕೇಂದ್ರಿತ ಸಬಲೀಕರಣ ಚಳವಳಿಗಳಿಗೂ ಪಾತ್ರ ಇರಬಹುದು. ಇಂಥ ಸ್ಥಿತಿಯಲ್ಲಿ, ದಲಿತರ ಈ ಸ್ವಾಭಿಮಾನದ ಪ್ರಜ್ಞೆಗೆ ಪ್ರತಿಯಾಗಿ ಈ ಗುಂಪು ಗೋವನ್ನು ಅಖಾಡಕ್ಕೆ ಇಳಿಸಿತು. ದಲಿತ ಸಮೂಹದಲ್ಲಿ ಬೆಳೆಯುತ್ತಿರುವ ಜಾಗೃತಿಯನ್ನು ಪರಿಗಣಿಸಿದರೆ, ಇಂಥದ್ದೊಂದು ನಿರ್ಧಾರ ಈ ಗುಂಪಿನ ಪಾಲಿಗೆ ಅನಿವಾರ್ಯವಾಯಿತು ಎಂದೂ ಹೇಳಬಹುದು. ತಲೆತಲಾಂತರದಿಂದ ದಲಿತ ಸಮುದಾಯವನ್ನು ರಸ್ತೆಯಿಂದ, ದೇವಾಲಯದಿಂದ, ಸಾರ್ವಜನಿಕ ಬಾವಿಯಿಂದ ಮತ್ತು ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬಹುದಾದ ಸರ್ವ ಸಂದರ್ಭಗಳಿಂದಲೂ ತಡೆದ ಈ ಗುಂಪು ಕ್ರಮೇಣ ತಮ್ಮ ಈ ಕ್ರೌರ್ಯಕ್ಕೆ ಪ್ರಬಲ ಪ್ರತಿರೋಧ ಎದುರಾಗತೊಡಗಿದಾಗ ಪ್ರತಿಯಾಗಿ ಆವಿಷ್ಕರಿಸಿಕೊಂಡ ಆಯುಧವೇ ಗೋವು. ವಿಶೇಷ ಏನೆಂದರೆ, ಗೋವನ್ನು ಮಾತೆಯಾಗಿ ಪ್ರತಿಷ್ಠಾಪಿಸುವ ಮೂಲಕ ಆ ಗುಂಪು ದಲಿತರ ಮೇಲಷ್ಟೇ ಅಧಿಕಾರ ಸ್ಥಾಪಿಸುವ ಸಾಮರ್ಥ್ಯವನ್ನು ಪಡಕೊಂಡದ್ದಲ್ಲ, ಗೋಮಾಂಸವನ್ನು ಸೇವಿಸುವ ಸಮಾಜದ ಬಡವರು, ದಮನಿತರು ಮತ್ತು ಇತರ ಧರ್ಮೀಯರ ಮೇಲೂ ದಮನಕಾರಿ ನೀತಿಯನ್ನು ಪ್ರಯೋಗಿಸುವ ಪರವಾನಿಗೆಯನ್ನು ಪಡಕೊಂಡಿತು. ಒಂದು ವೇಳೆ, ಗೋವಿನ ಮೇಲೆ ಅವರಿಗೆ ಆದರ ಇರುವುದೇ ಆಗಿರುತ್ತಿದ್ದರೆ, ಕನಿಷ್ಠ ಅದನ್ನು ಚರ್ಮ ಸುಲಿಯದೆಯೇ ಸ್ವತಃ ಮಣ್ಣು ಮಾಡುವುದನ್ನು ಪುಣ್ಯ ಕಾರ್ಯ ಎಂದು ಪರಿಗಣಿಸಬೇಕಿತ್ತು. ಎಲ್ಲೇ ಗೋವು ಸತ್ತರೂ ಅಲ್ಲಿಗೆ ಧಾವಿಸಿ ಬಂದು ಅದರ ಮಣ್ಣು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಈ ಗುಂಪಿಗೆ ತಮ್ಮ ದಮನ ನೀತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಒಂದು ಪ್ರಾಣಿಯಾಗಿ ಗೋವು ಬೇಕಿತ್ತೇ ಹೊರತು ‘ಮಾತೆ’ಯಾಗಿ ಅಲ್ಲ. ಆದ್ದರಿಂದಲೇ, ಅದರ ಚರ್ಮ ಸುಲಿಯುವುದನ್ನು ಅವರು ವಿರೋಧಿಸಲಿಲ್ಲ. ಸ್ವತಃ ಮಣ್ಣು ಮಾಡುವುದಕ್ಕೂ ಮುಂದಾಗಲಿಲ್ಲ. ಇವೆರಡನ್ನೂ ಪರಂಪರಾಗತ ದಲಿತ ವೃತ್ತಿಗಳಾಗಿಯೇ ಇರಗೊಟ್ಟರು. ಆದರೆ ದಲಿತರ ಮೆನುವಿನಲ್ಲಿ ಗೋಮಾಂಸ ಇರಬಾರದು ಎಂದು ಆದೇಶಿಸಿದರು. ಈ ಹಿಂದೆ ದಲಿತರನ್ನು ಹೇಗೆ ಪರಾವಲಂಬಿಗಳಾಗಿ ನಡೆಸಿಕೊಂಡು ಬರಲಾಗಿತ್ತೋ ಅದರದ್ದೇ ಮುಂದುವರಿಕೆ ಇದು. ತಾವು ಏನನ್ನು ತಿನ್ನಬಾರದೆಂದು ಆದೇಶಿಸುತ್ತೇವೋ ಅದನ್ನು ಅನುಸರಿಸಬೇಕು. ಯಾವ ವೃತ್ತಿಯಲ್ಲಿ ಮುಂದುವರಿಯಬೇಕೆಂದು ಹೇಳುತ್ತೇವೋ ಅದಕ್ಕೆ ವಿರುದ್ಧ ನಡೆಯಬಾರದು. ಶತಮಾನಗಳ ಹಿಂದೆಯೂ ಮತ್ತು ಈಗಲೂ ದಲಿತರಿಗೆ ಸ್ವತಃ ತೀರ್ಮಾನಿಸಿಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಧಾರ್ಷ್ಟ್ಯ ಇದು. ಗುಜರಾತ್ನ ಕರ್ಜಾ ಗ್ರಾಮದ ಘಟನೆ ನೀಡುತ್ತಿರುವ ಸಂದೇಶವೂ ಇದುವೇ. ಉನಾ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತು ಅದನ್ನು ಕೇಂದ್ರೀಕರಿಸಿ ಚಳವಳಿಗಳು ಹುಟ್ಟಿಕೊಳ್ಳುತ್ತಿರುವ ಈ ಸಂದರ್ಭದಲ್ಲೂ ಅದೇ ಉನಾ ಇರುವ ಗುಜರಾತ್ನಲ್ಲೇ ಇಂಥ ಘಟನೆ ನಡೆದಿರುವುದು ಆ ಮನಃಸ್ಥಿತಿಯು ಎಷ್ಟು ಕ್ರೂರ, ಎಷ್ಟು ನಿರ್ಭಯ ಮತ್ತು ಎಷ್ಟು ಅಪಾಯಕಾರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸದ್ಯದ ತುರ್ತು ಏನೆಂದರೆ, ಗೋವನ್ನು ಅವರ ಒತ್ತೆಯಿಂದ ಬಿಡಿಸಿಕೊಂಡು ಸಮಾಜಕ್ಕೆ ಅರ್ಪಿಸುವುದು. ಗೋವಿನ ಪೇಟೆಂಟನ್ನು ಯಾವೊಬ್ಬ ಖಾಸಗಿ ವ್ಯಕ್ತಿಗೂ ಗುಂಪಿಗೂ ಸಂಘಟನೆಗೂ ನೀಡಲಾಗಿಲ್ಲ ಎಂಬುದಾಗಿ ಸಮಾಜಕ್ಕೆ ಸ್ಪಷ್ಟಪಡಿಸುವುದು. ಅದಕ್ಕಾಗಿ ಪರಿಣಾಮಕಾರಿ ಚಳವಳಿ, ರಾಲಿ, ಪ್ರದರ್ಶನಗಳನ್ನು ಏರ್ಪಡಿಸುವುದು. ಅಂದಹಾಗೆ,
ಗೋವು ಸ್ವತಂತ್ರಗೊಳ್ಳುವುದೆಂದರೆ, ದಲಿತರೂ ಸ್ವತಂತ್ರಗೊಂಡಂತೆ. ಉನಾ ಮತ್ತು ಕರ್ಜಾಗಳು ಸಾರುತ್ತಿರುವುದೂ ಇದನ್ನೇ.