Monday 6 September 2021

ತಾಲಿಬಾನ್ ಪ್ರಶ್ನೆ: ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು

 



ಉಡುಪಿಯ ಕೋಟೇಶ್ವರ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟುವಿನ ಹರೀಶ್ ಬಂಗೇರ ಅವರು ಕಳೆದವಾರ ಮಾಧ್ಯಮಗಳಲ್ಲಿ ಸು ದ್ದಿಗೊಳಗಾಗಿದ್ದಾರೆ. ಅಫಘಾನಿಸ್ತಾನದಿಂದ ಮರಳಿದ ಭಾರತೀಯರ ಅನುಭವಗಳ ಜೊತೆಜೊತೆಗೇ ಈ ಹರೀಶ್ ಬಂಗೇರರ ಅ ನುಭವಗಳನ್ನೂ ಮುದ್ರಣ ಮಾಧ್ಯಮಗಳು ಪ್ರಕಟಿಸಿವೆ. ಚಾನೆಲ್‌ಗಳು ಬಿತ್ತರಿಸಿವೆ. ಉಡುಪಿಗೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯನ್ನೂ  ನಡೆಸಿದ್ದಾರೆ. ಹಾಗಂತ,

ಅವರು ಆಗಮಿಸಿರುವುದು ಅಫಘಾನಿಸ್ತಾನದಿಂದ ಅಲ್ಲ, ಸೌದಿ ಅರೇಬಿಯಾದಿಂದ. ಒಂದು ವರ್ಷ ಎಂಟು ತಿಂಗಳ ಕಾಲ ಸೌದಿ  ಅರೇಬಿಯಾದ ಜೈಲಲ್ಲಿದ್ದು ಮರಳಿದ ಅವರಿಗೆ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಒಡಲಿನ ಬೇಗುದಿಯನ್ನು ಇಳಿಸಿಕೊಳ್ಳುವುದಕ್ಕೆ ಸಾಕಷ್ಟು  ಸಂಗತಿಗಳಿದ್ದುವು. ಅವರು ಜೈಲು ಪಾಲಾಗಿರುವುದಕ್ಕೆ ಇಬ್ಬರು ಮುಸ್ಲಿಮ್ ಯುವಕರು ಕಾರಣವಾಗಿದ್ದರೆ, ಅವರು ಜೈಲಿನಿಂದ  ಬಿಡುಗಡೆಗೊಂಡು ಭಾರತಕ್ಕೆ ತಲುಪುವುದಕ್ಕೂ ಇಬ್ಬರು ಮುಸ್ಲಿಮ್ ಗೆಳೆಯರು ಕಾರಣರಾಗಿದ್ದರು. ಇವನ್ನು ಹೇಳಿಕೊಂಡದ್ದೂ ಅವರೇ.  ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಆವೇಶದಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮತ್ತು ಇತರರ ಅಭಿಪ್ರಾಯಗಳಿಗೆ ಲೈಕ್  ಮತ್ತು ಕಮೆಂಟ್ ಮಾಡುವ ಬಿಸಿ ರಕ್ತದ ಯುವಕರಿಗೆ ಹರೀಶ್ ಬಂಗೇರ ಪ್ರಕರಣದಲ್ಲಿ ಸಾಕಷ್ಟು ಪಾಠಗಳಿವೆ.

2019 ಡಿಸೆಂಬರ್ 19ರಂದು ಹರೀಶ್ ಬಂಗೇರ ತನ್ನ ಫೇಸ್‌ಬುಕ್ ಪುಟದಲ್ಲಿ ಒಂದು ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾರೆ.  ಸಿಎಎ-ಎನ್‌ಆರ್‌ಸಿ ಕಾಯ್ದೆಯ ಪರ ಮತ್ತು ವಿರುದ್ಧ ದೇಶದಲ್ಲಿ ಚರ್ಚೆಗಳಾಗುತ್ತಿದ್ದ ದಿನಗಳವು. ಇನ್ನಾರದೋ ವೀಡಿಯೋವನ್ನು ಶೇರ್  ಮಾಡಿದ ಹರೀಶ್ ಬಂಗೇರರಿಗೆ ಬೆದರಿಕೆಯ ಕರೆಗಳು ಬರುತ್ತವೆ. ಅವರಿಗೂ ತಪ್ಪಿನ ಮನವರಿಕೆಯಾಗುತ್ತದೆ. ಆದ್ದರಿಂದ ತಕ್ಷಣ ಅವರು  ಆ ವೀಡಿಯೋವನ್ನು ತನ್ನ ಪುಟದಿಂದ ಡಿಲೀಟ್ ಮಾಡುತ್ತಾರಲ್ಲದೇ, ಕ್ಷಮೆ ಯಾಚಿಸುವ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್  ಮಾಡುತ್ತಾರೆ. ಮಾತ್ರವಲ್ಲ, ಅದೇ ದಿನ ರಾತ್ರಿ ತನ್ನ ಫೇಸ್‌ಬುಕ್ ಖಾತೆಯನ್ನೇ ನಿಷ್ಕ್ರಿಯಗೊಳಿಸುತ್ತಾರೆ. ಇದನ್ನು ಹೇಳಿದ್ದೂ ಅವರೇ.  ಆದರೆ ಮರುದಿನ ಅವರದೇ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಸೌದಿ ದೊರೆ ಮತ್ತು ಮಕ್ಕಾದ ಮಸ್ಜಿದುಲ್  ಹರಮ್‌ನ ಬಗ್ಗೆ ಅವಹೇಳನಕಾರಿಯಾಗಿರುವ ಪೋಸ್ಟ್ ಹಾಕಲಾಗುತ್ತದೆ. ಅದಕ್ಕಾಗಿ ಅವರ ಮೇಲೆ ಕೇಸು ದಾಖಲಾಗುತ್ತದಲ್ಲದೇ, ಬಂಧ ನವಾಗುತ್ತದೆ. ಇದನ್ನು ಹೇಳಿದ್ದೂ ಅವರೇ. ಅಂದಹಾಗೆ,

ಮಾಡದ ತಪ್ಪಿಗೆ ತಾನು ಅನ್ಯಾಯವಾಗಿ ಜೈಲು ಪಾಲಾದೆ ಎಂಬ ನೋವು ಅವರ ಮಾತಿನಲ್ಲಿದೆ. ಅದರ ಜೊತೆಗೇ ತಾನು ಕೆಲಸ  ಮಾಡುತ್ತಿದ್ದ ಸಂಸ್ಥೆಯ ಇಬ್ಬರು ಮುಸ್ಲಿಮ್ ಗೆಳೆಯರು ಮತ್ತು ಇತರರು ತನ್ನ ನೆರವಿಗೆ ಬರದೇ ಇರುತ್ತಿದ್ದರೆ ತಾನು ಜೀವಂತ  ಉಳಿಯುತ್ತಿರಲಿಲ್ಲ ಎಂಬ ಕೃತಜ್ಞತಾ ಭಾವವೂ ಅವರಲ್ಲಿದೆ. ಅವರ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅವರನ್ನು ಜೈಲು  ಪಾಲಾಗುವಂತೆ ನೋಡಿಕೊಂಡ ಆರೋಪಿಗಳು ಅವರದೇ ಊರಿನ ಇಬ್ಬರು ಮುಸ್ಲಿಮ್ ಯುವಕರಾಗಿದ್ದರೆ, ಸೌದಿಯಲ್ಲಿ ಅವರು ಕೆಲಸ  ಮಾಡುತ್ತಿದ್ದ ಕಂಪೆನಿಗೆ ನುಗ್ಗಿ ಅವರ ಮೇಲೆ ದಾಳಿ ನಡೆಸಲು ಮುಂದಾದ 50ರಷ್ಟಿದ್ದ ಗುಂಪಿನಿಂದ  ರಕ್ಷಿಸಿದ್ದೂ ಇಬ್ಬರು ಮುಸ್ಲಿಮ್  ಯುವಕರೇ ಆಗಿದ್ದಾರೆ. ಒಂದು ರೀತಿಯಲ್ಲಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಬಯಸುವ ಪ್ರತಿಯೊಬ್ಬರೂ ಕ್ಷಣ ಹೊತ್ತು ಆಲೋಚಿಸಬೇಕಾದ ಸಂಗತಿ ಇದು.  ಆರೋಪಿ ಮುಸ್ಲಿಮ್ ಯುವಕರನ್ನು ಮತ್ತು ಆಪದ್ಭಾಂಧವರಾದ ಮುಸ್ಲಿಮ್ ಯುವಕರನ್ನು ಪರಸ್ಪರ ಮುಖಾಮುಖಿಯಾಗಿಸಿದಾಗ  ಸಿಗುವ ಫಲಿತಾಂಶವೇನು? ಒಳಿತು ಮತ್ತು ಕೆಡುಕಿಗೆ ಧರ್ಮದ ಭೇದ ಇಲ್ಲ. ಒಳಿತು ಒಂದು ಸಾರ್ವತ್ರಿಕ ಮೌಲ್ಯ. ಕೆಡುಕು ಕೂಡ  ಸಾರ್ವತ್ರಿಕ ಅಪಮೌಲ್ಯ. ಗಾಳಿ, ಬೆಳಕು, ನೀರು ಹೇಗೆ ಸರ್ವರಿಗೂ ಮುಕ್ತವಾಗಿ ಲಭ್ಯವಿದೆಯೋ ಮತ್ತು ಆಯ್ಕೆ ಸ್ವಾತಂತ್ರ‍್ಯವೂ  ಮುಕ್ತವಾಗಿದೆಯೋ ಹಾಗೆಯೇ ಒಳಿತು ಮತ್ತು ಕೆಡುಕುಗಳೂ ಮುಕ್ತ. ಯಾರಿಗೂ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಹರೀಶ್  ಬಂಗೇರರಿಗೆ ಸಂಬಂಧಿಸಿ, ಇಬ್ಬರು ಮುಸ್ಲಿಮ್ ಯುವಕರು ಕೆಡುಕನ್ನು ಆಯ್ಕೆ ಮಾಡಿಕೊಂಡ ಆರೋಪವನ್ನು ಹೊತ್ತುಕೊಂಡರೆ,  ಮುದಸ್ಸಿರ್ ಮತ್ತು ಜಲಾಲ್ ಎಂಬವರು ಒಳಿತನ್ನು ಆಯ್ಕೆ ಮಾಡಿಕೊಂಡರು. ದುರಂತ ಏನೆಂದರೆ, ಕೆಡುಕನ್ನು ಆಯ್ಕೆ ಮಾಡಿಕೊಂಡ ಆ  ಯುವಕರನ್ನು ತರಾಟೆಗೆತ್ತಿಕೊಂಡವರು ಮತ್ತು ಕಟು ಭಾಷೆಗಳಲ್ಲಿ ಟೀಕಿಸಿದವರಲ್ಲಿ ಒಂದು ಶೇಕಡಾ ಮಂದಿಯೂ ಒಳಿತನ್ನು ಆಯ್ಕೆ  ಮಾಡಿಕೊಂಡ ಮುಸ್ಲಿಮ್ ಯುವಕರನ್ನು ಶ್ಲಾಘಿಸಲಿಲ್ಲ. ಕೆಡುಕು ಮಾಡುವುದಕ್ಕೆ ಆ ಯುವಕರ ಧರ್ಮ ಕಾರಣವೆಂದಾದರೆ, ಒಳಿತು  ಮಾಡಿರುವುದಕ್ಕೂ ಆ ಮುಸ್ಲಿಮ್ ಯುವಕರ ಧರ್ಮ ಕಾರಣವಾಗಿರಬೇಕಲ್ಲವೇ? ಈ ಬಗೆಯ ವಿಶ್ಲೇಷಣೆ ನಡೆದಾಗಲೇ ಮನುಷ್ಯ ಪರಿ ಪೂರ್ಣತೆಯತ್ತ ಸಾಗುತ್ತಾನೆ. ನಮ್ಮೊಳಗೆ ಎಲ್ಲೆಲ್ಲಿಂದಲೋ ಹೇಗೇಗೋ ಯಾವ್ಯಾವ ಕಾರಣದಿಂದಲೋ ಸೇರಿಕೊಂಡ ಧರ್ಮದ್ವೇಷ,  ಅಸಹನೆ, ದ್ವೇಷಭಾವಗಳು ಇಂಥ ವಿಶ್ಲೇಷಣೆಗಳಿಂದ ಕರಗಲು ಪ್ರಾರಂಭಿಸುತ್ತದೆ. ನಿಜವಾಗಿ,

ಮುಸ್ಲಿಮ್ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಒಳಿತು ಮಾಡುವುದಿಲ್ಲ. ಹಿಂದೂ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಕೆಡುಕೂ  ಮಾಡುವುದಿಲ್ಲ. ಅವೆರಡೂ ಮನುಷ್ಯನ ಆಯ್ಕೆ. ಧರ್ಮ ಹೇಗೆ ಆಯ್ಕೆಯೋ ಹಾಗೆಯೇ ಇದು. ಆದ್ದರಿಂದ ಕೆಡುಕನ್ನು ಕೆಡುಕಾಗಿ  ನೋಡಬೇಕೇ ಹೊರತು ಅದನ್ನು ಹಿಂದೂ ಕೆಡುಕು, ಮುಸ್ಲಿಮ್ ಕೆಡುಕು ಎಂದು ವಿಭಜಿಸುವುದೇ ಕ್ರೌರ್ಯ. ನಿಜವಾಗಿ, ಕೆಡುಕ ನ್ನೆಸಗಿದವರು ಹಿಂದುವೋ ಮುಸ್ಲಿಮೋ ಧರ್ಮದಲ್ಲಿರುವುದು ಆ ಧರ್ಮದ ಪಾಲಿಗೇ ಕೆಡುಕು. ಯಾಕೆಂದರೆ, ಕೆಡುಕನ್ನು ಬಯಸುವುದು  ಧರ್ಮವಾಗಲು ಸಾಧ್ಯವಿಲ್ಲ. ಅಂದಹಾಗೆ,

ತಾಲಿಬಾನನ್ನು ಉಲ್ಲೇಖಿಸುತ್ತಾ ಇಸ್ಲಾಮನ್ನು ಮತ್ತು ಷರಿಯಾವನ್ನು ಪ್ರಶ್ನಿಸುವ ಮತ್ತು ಅತ್ಯಂತ ಅವಹೇಳನಕಾರಿಯಾಗಿ ಟೀಕಿಸುವವರು  ನಮ್ಮ ನಡುವೆಯಿದ್ದಾರೆ. ಪ್ರಶ್ನೆ ತಪ್ಪಲ್ಲ. ಆದರೆ ಇಸ್ಲಾಮ್ ಅಂದರೆ ತಾಲಿಬಾನ್ ಎಂದು ಷರಾ ಬರೆಯುವುದು ತಪ್ಪು. ಜಗತ್ತಿನಲ್ಲಿ  ಇಂಡೋನೇಷ್ಯಾದಿAದ ಹಿಡಿದು ಟರ್ಕಿಯ ವರೆಗೆ 60ಕ್ಕಿಂತಲೂ ಅಧಿಕ ಮುಸ್ಲಿಮ್ ಬಹುಸಂಖ್ಯಾತ ರಾಷ್ಟçಗಳಿವೆ. ಇವುಗಳಲ್ಲಿ ಹೆಚ್ಚಿನವು  ಇಸ್ಲಾಮಿಕ್ ರಾಷ್ಟçಗಳೆಂದು ಘೋಷಿಸಿಕೊಂಡಿವೆ. ಷರಿಯಾವನ್ನು ತಮ್ಮ ಆಡಳಿತ ನೀತಿಯೆಂದು ಹೇಳಿಕೊಳ್ಳುತ್ತಿವೆ. ತಾಲಿಬಾನ್  ಎಸಗುತ್ತಿರುವ ಅನಾಹುತಕ್ಕೆ ಷರಿಯಾವೇ ಕಾರಣ ಎಂದು ತೀರ್ಪು ನೀಡುವವರು ತಾಲಿಬಾನ್ ಮತ್ತು ಈ 60ಕ್ಕಿಂತಲೂ ಅಧಿಕ  ರಾಷ್ಟçಗಳನ್ನು ಯಾಕೆ ಮುಖಾಮುಖಿಯಾಗಿಟ್ಟು ವಿಶ್ಲೇಷಿಸುವುದಿಲ್ಲ? ತಾಲಿಬಾನ್‌ನದ್ದು ಷರಿಯಾ ಎಂದಾದರೆ ಮತ್ತು ಇಸ್ಲಾಮ್ ಅವರನ್ನು  ಬೆಂಬಲಿಸುತ್ತದೆಯೆAದಾದರೆ, ಉಳಿದ ರಾಷ್ಟçಗಳದ್ದು ಏನು?

ಓರ್ವನು ತನ್ನನ್ನು ಮುಹಮ್ಮದ್ ಎಂದೋ ರಘುರಾಮ ಎಂದೋ ಗುರುತಿಸಿಕೊಂಡಾಕ್ಷಣ ಆತ ಅಪ್ಪಟ ಮುಸ್ಲಿಮೋ ಅಪ್ಪಟ ಹಿಂದುವೋ  ಆಗುವುದಿಲ್ಲ. ಹೆಸರು ಒಂದು ಗುರುತು ಮಾತ್ರ. ಆತ ಅಪ್ಪಟ ಹಿಂದುವೋ ಮುಸ್ಲಿಮೋ ಆಗುವುದು ಆತನ ಕರ್ಮದಿಂದ. ಬದುಕುವ  ವಿಧಾನದಿಂದ. ದುರಂತ ಏನೆಂದರೆ, ಈ ದೇಶದ ಸುಮಾರು 15 ಕೋಟಿಯಷ್ಟಿರುವ ಮುಸ್ಲಿಮರನ್ನು ಕೆಡುಕು ಮಾಡುವ ಬೆರಳೆಣಿಕೆಯ  ಮುಸ್ಲಿಮರಿಂದ ಅಳೆಯಲಾಗುತ್ತದೆ. ಅತ್ಯಾಚಾರಿ ಮುಸ್ಲಿಮ್ ಹೆಸರಿನವರಾದರೆ, ದರೋಡೆ, ಕಳ್ಳತನ, ಹತ್ಯೆ, ವಂಚನೆ ಪ್ರಕರಣಗಳಲ್ಲಿ  ಮುಸ್ಲಿಮ್ ಹೆಸರು ಕಾಣಿಸಿಕೊಂಡರೆ ಅದರ ಹೊಣೆಯನ್ನು 15 ಕೋಟಿ ಮುಸ್ಲಿಮರ ತಲೆಗೆ ಕಟ್ಟಲಾಗುತ್ತದೆ. ಅವರ ಧರ್ಮವೇ ಹಾಗೆ,  ಅದುವೇ ಅದಕ್ಕೆ ಕಾರಣ...  ಎನ್ನುತ್ತಾರೆ. ಇದೇವೇಳೆ, ಇಂಥವರ ಮನೆಯ ಅಕ್ಕ-ಪಕ್ಕ ಮತ್ತು ಪರಿಸರ ಪ್ರದೇಶಗಳಲ್ಲಿ ನೂರಾರು ಮುಸ್ಲಿಮ್  ಮನೆಗಳಿರುತ್ತವೆ. ಮುಸ್ಲಿಮ್ ಗೆಳೆಯರೂ ಇಂಥವರಿಗೆ ಇರುತ್ತಾರೆ. ಅವರಾರೂ ಕೆಟ್ಟವರಲ್ಲ ಎಂಬುದೂ ಅವರಿಗೆ ಗೊತ್ತಿರುತ್ತದೆ. ಮತ್ತೇಕೆ  ಇಂಥ ಸಾರ್ವತ್ರಿಕ ಟೀಕೆ ಮಾಡುತ್ತಾರೆಂದಾದರೆ, ಅದರ ಹಿಂದೆ ಒಂದು ಸಂಚಿದೆ. ರಾಜಕೀಯ ಬಿತ್ತಿದ ಈ ಸಂಚಿನಲ್ಲಿ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾಗಿಯಾಗಿದ್ದಾರೆ. ತನಗೆ ಗೊತ್ತಿರುವ ಮತ್ತು ತನ್ನ ಪರಿಚಯದಲ್ಲಿರುವ ಮುಸ್ಲಿಮರೆಲ್ಲ ಒಳ್ಳೆಯವರೇ.  ಆದರೆ ತನಗೆ ಗೊತ್ತಿಲ್ಲದ ಇನ್ನೆಲ್ಲೋ  ಇರುವ ಮುಸ್ಲಿಮರು ಕೆಟ್ಟವರು ಎಂಬ ಈ ಭಾವನೆಯ ಮೂಲ ಅವರಲ್ಲ. ಅವರೊಳಗೆ  ಇಂಥದ್ದೊಂದು  ಭಾವವನ್ನು ಇನ್ನಾರೋ ತುಂಬಿದ್ದಾರೆ ಅಥವಾ ಇನ್ನಾವುದೋ ರೂಪದಲ್ಲಿ ಅವರೊಳಗೆ ಅದು ತುಂಬಿಕೊಂಡಿದೆ. ‘ತಾಲಿಬಾನ್‌ನ ಬಗ್ಗೆ ಏನು ಹೇಳುತ್ತೀರೀ ...’ ಎಂದು ಇಲ್ಲಿನ ಮುಸ್ಲಿಮರಲ್ಲಿ ಪ್ರಶ್ನಿಸುವವರ ಪೈಕಿ ಹೆಚ್ಚಿನವರೊಳಗೂ ಇಂಥದ್ದೊಂದು  ಭಾವವಿದೆ.  ತಾಲಿಬಾನನ್ನು ತೋರಿಸಿ ಇಲ್ಲಿನ ಮುಸ್ಲಿಮರನ್ನು ತಿವಿಯುವುದು ಅವರ ಉದ್ದೇಶ. ಇಂಥ ಕಾಯಿಲೆಗೆ ಹರೀಶ್ ಬಂಗೇರ ಪ್ರಕರಣದಲ್ಲಿ  ಒಳ್ಳೆಯ ಔಷಧವಿದೆ.

ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು.

No comments:

Post a Comment