Monday 7 August 2023

ದ್ರೌಪದಿಯನ್ನು ಅವಮಾನಿಸಿದ ದುಶ್ಶಾಸನನೇ ಈ ವರ್ತಮಾನದ ಹೀರೋ

ಸನ್ಮಾರ್ಗ ಸಂಪಾದಕೀಯ 

ವಿಷವನ್ನು ಯಾರು ಕುಡಿದರೂ ಫಲಿತಾಂಶ ಒಂದೇ. ಅದು ಲಿಂಗಭೇದ ಮಾಡುವುದಿಲ್ಲ. ಧರ್ಮದ್ವೇಷವೆಂಬ ವಿಷ ಸೇವಿಸಿರುವವರಲ್ಲೂ  ಇದೇ ಬಗೆಯ ಫಲಿತಾಂಶ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಮಹಿಳೆಯರಲ್ಲಿ ಈ ವಿಷದ ತೀವ್ರತೆ ಹೆಚ್ಚಿರುತ್ತದೋ ಎಂಬ ಸಂದೇಹವೂ  ಉಂಟಾಗುತ್ತಿದೆ. ಉದಾಹರಣೆಗೆ, ಮಣಿಪುರ.

ಕುಕಿ ಸಮುದಾಯದ ವಿರುದ್ಧ ನಡೆಸಲಾಗುತ್ತಿರುವ ಸಂಘಟಿತ ಕ್ರೌರ್ಯಗಳ ಹಿಂದೆ ಮಹಿಳೆಯರ ಬಹುದೊಡ್ಡ ಪಾತ್ರ ಇದೆ ಎಂಬುದಾಗಿ  ವಿವಿಧ ವರದಿಗಳು ಹೇಳುತ್ತಿವೆ. ಮೈತಿ ಸಮುದಾಯದ ಪುರುಷರು ಕುಕಿ ಗ್ರಾಮಗಳಿಗೆ ನುಗ್ಗಿ ಹತ್ಯೆ-ಅತ್ಯಾಚಾರ-ದರೋಡೆಗಳನ್ನು  ನಡೆಸುತ್ತಿರುವಾಗ ಮಹಿಳೆಯರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ರಕ್ಷಣಾ ಪಡೆ ಆ ಗ್ರಾಮಗಳಿಗೆ ಹೋಗಿ ದುಷ್ಕರ್ಮಿಗಳನ್ನು  ಬಂಧಿಸದಂತೆ  ತಡೆಯುವುದಕ್ಕಾಗಿ ಮಹಿಳೆಯರು ರಸ್ತೆ ತಡೆ ನಡೆಸುತ್ತಿದ್ದಾರೆ. ಕಂದಕಗಳನ್ನು ತೋಡುತ್ತಿ ದ್ದಾರೆ ಮತ್ತು ಟೈರ್‌ಗಳನ್ನು  ಸುಟ್ಟು ಅಡ್ಡಿಪಡಿಸುತ್ತಿದ್ದಾರೆ. ಕ್ರೌರ್ಯದಲ್ಲಿ ತೊಡಗಿರುವ ಪುರುಷರು ಆ ಗ್ರಾಮದಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಇವರ ಉದ್ದೇಶ  ಎಂದು ರಕ್ಷಣಾ ಪಡೆಯೇ ಮಾಧ್ಯಮಗಳೊಂದಿಗೆ ಹೇಳಿಕೊಂಡಿದೆ. ಅವರನ್ನು ಬಲವಂತದಿಂದ  ಚದುರಿಸಲು ಹೊರಟರೆ ಬೆತ್ತಲಾಗುವ  ಬೆದರಿಕೆಯನ್ನೂ ಹಾಕುತ್ತಿದ್ದಾರೆ. ರಕ್ಷಣಾ ಪಡೆಯಲ್ಲಿ ಮಹಿಳಾ ಸಿಬಂದಿಯ ಕೊರತೆಯಿಂದಾಗಿ ಈ ಮಹಿಳೆಯರ ಸಂಚು ಸಫಲವೂ ಆಗುತ್ತಿದೆ. ಎಲ್ಲಿಯವರೆಗೆಂದರೆ, ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಲಾದ ಘಟನೆಯ ಆರೋಪಿಯನ್ನು ಬಂಧಿಸಲು  ಹೋದ ರಕ್ಷಣಾ ಪಡೆಯನ್ನೂ ಈ ಮಹಿಳೆಯರು ತಡೆದಿದ್ದಾರೆ. ಟೈರ್‌ಗೆ ಬೆಂಕಿ ಕೊಟ್ಟು ರಸ್ತೆ ತಡೆ ನಿರ್ಮಿಸಿದ್ದಾರೆ. ಕೊನೆಗೆ ಅಶ್ರುವಾಯು ಸಿಡಿಸಿ ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರೇ ಹೇಳಿದ್ದಾರೆ.

ಸಾಮಾನ್ಯವಾಗಿ ಹೆಣ್ಣನ್ನು ಗಂಡಿಗಿಂತ  ಭಿನ್ನವಾಗಿ ಬಿಂಬಿಸಲಾಗುತ್ತದೆ. ಕತೆ, ಕಾದಂಬರಿ, ನಾಟಕ, ಸಿನಿಮಾ ಎಲ್ಲದರಲ್ಲೂ ಪುರುಷರೇ  ವಿಲನ್. ದ್ವೇಷ ಸಾಧಿಸುವ, ಹತ್ಯೆ ನಡೆಸುವ, ಅತ್ಯಾಚಾರ ಮತ್ತು ಹಿಂಸಾ ಕೃತ್ಯಗಳಲ್ಲಿ ತೊಡಗುವ ಪಾತ್ರಗಳೆಲ್ಲ ಬಹುತೇಕ ಪುರುಷರಿಗೇ ಮೀಸಲು.  ಈ ಪುರುಷರ  ಮಹಿಳೆಯರು ಇದ್ದೂ ಇಲ್ಲದಂತೆ ಅಥವಾ ಇಂಥ ಕೃತ್ಯಗಳಿಂದ ಅಂತರ ಕಾಯ್ದುಕೊಂಡಂತೆ  ಬದುಕುತ್ತಿರುತ್ತಾರೆ. ಕತೆ- ಕಾದಂಬರಿಗಳಲ್ಲಂತೂ  ಹೆಣ್ಣು ಕರುಣಾಮಯಿಯಾಗಿರುವುದೇ ಹೆಚ್ಚು. ಇತರರಿಗೆ ಮಿಡಿಯುವ ಮತ್ತು ಪುರುಷರಲ್ಲಿ ಮನುಷ್ಯತ್ವವನ್ನು  ಪ್ರೇರೇಪಿಸುವ ಪಾತ್ರವಾಗಿಯೇ ಹೆಣ್ಣು ಗುರುತಿಸಿಕೊಳ್ಳುತ್ತಾಳೆ. ಮಹಾಭಾರತ, ರಾಮಾಯಣದ ಎರಡು ಕೇಂದ್ರ ಬಿಂದುಗಳಾದ ದ್ರೌಪದಿ  ಮತ್ತು ಸೀತೆಯಲ್ಲಿ ದರ್ಶಿಸಬಹುದಾದ ಗುಣಗಳೂ ಇವುಗಳೇ.

ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಬೆತ್ತಲೆ ಮಾಡಲು ಹೊರಟ ದುರ್ಯೋಧನ ಮತ್ತು ದುಶ್ಶಾಸನರಿಗೆ ಅವರ ಪತ್ನಿಯರು  ಬೆಂಬಲವಾಗಿ ನಿಂತ ಉಲ್ಲೇಖಗಳು ಎಲ್ಲೂ ಇಲ್ಲ. ದುರ್ಯೋಧ ನನ ಪತ್ನಿ ಭಾನುಮತಿ ಮತ್ತು ದುಶ್ಶಾಸನನ ಪತ್ನಿ ನಿರ್ಜರ ಇಬ್ಬರೂ  ಈ ಹೀನ ಕೃತ್ಯದಲ್ಲಿ ಯಾವ ಪಾಲನ್ನೂ ಪಡಕೊಳ್ಳಲಿಲ್ಲ. ಹಾಗೆಯೇ, ಸೀತೆಯನ್ನು ರಾವಣ ಅಪಹರಿಸಿದ್ದರೂ ಆತನ ಪತ್ನಿ  ಮಂಡೋದರಿ ಅದಕ್ಕೆ ಬೆಂಬಲವಾಗಿ ನಿಲ್ಲಲಿಲ್ಲ. ಅಲ್ಲದೇ ಸೀತೆಗೆ ಯಾವ ಅನ್ಯಾಯವೂ ಆಗದಂತೆ ಬೆಂಗಾವಲಾಗಿ ನಿಂತಳು ಎಂಬ  ವಿವರಗಳೂ ಇವೆ. ಪೌರಾಣಿಕ ಕತೆಗಳಾಗಲಿ, ಇತಿಹಾಸವಾಗಲಿ ಉದ್ದಕ್ಕೂ ಹೆಣ್ಣನ್ನು ಬಿಂಬಿಸಿಕೊಂಡು  ಬಂದದ್ದು ಹೀಗೆಯೇ. ಆದರೆ ಈ  ವರ್ತಮಾನ ಹೀಗೇಕೆ?

ಮಣಿಪುರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದವರ ಧರ್ಮ ಯಾವುದು? ಅವರಿಗೆ ಯಾರು ಮಾದರಿ?  ದುರ್ಯೋಧನ ಮತ್ತು ದುಶ್ಶಾಸನರ ದುರ್ಗುಣವು ಹಿಂದೂ ಧರ್ಮವನ್ನು ಪ್ರೀತಿಸುವ ವ್ಯಕ್ತಿಯಲ್ಲಿರಲು ಸಾಧ್ಯವೇ? ದ್ರೌಪದಿಯ ವಸ್ತ್ರಾ ಪಹರಣ ಮಾಡಿರುವುದಕ್ಕಾಗಿ ಒಂದು ಕಡೆ ದುರ್ಯೋಧನ ಮತ್ತು ದುಶ್ಶಾಸನರನ್ನು ವಿಲನ್‌ಗಳಾಗಿ ನೋಡುವುದು ಮತ್ತು ಇನ್ನೊಂದು  ಕಡೆ ಅವರಿಬ್ಬರೂ ನಾಚುವಂತೆ ನಡಕೊಳ್ಳುವುದು ಇವೆರಡೂ ಒಬ್ಬರಲ್ಲೇ  ವ್ಯಕ್ತವಾಗುವುದು ಹೇಗೆ? ದ್ರೌಪದಿಯನ್ನು ಮಾದರಿ ಎಂದು  ಆರಾಧಿಸುವ ಮಹಿಳೆಯರು ಬೆತ್ತಲೆ ಮಾಡಿದವರಿಗೆ ಬೆಂಬಲವಾಗಿ ನಿಲ್ಲುವುದು ಹೇಗೆ? ಹಿಂದೂ ಧರ್ಮ ಎಂದೂ ದುರ್ಯೋಧನನನ್ನೋ ದುಶ್ಶಾನನನ್ನೋ ಶಕುನಿಯನ್ನೋ ಮಾದರಿ ಎಂದು ಹೇಳಿಲ್ಲ. ಹಿಂದೂ ಧರ್ಮವನ್ನು  ಪ್ರೀತಿಸುವುದೆಂದರೆ, ಇವರ ಕೃತ್ಯಗಳನ್ನು ಪ್ರೀತಿಸದಿರುವುದು ಮತ್ತು ಇವರ ಆಲೋಚನೆಗಳನ್ನು ಧರ್ಮವಿರೋಧಿ ಎಂದು ಮನಸಾರೆ  ನಂಬುವುದು. ಇಂಥ ಧರ್ಮವಿರೋಧಿ ಕೃತ್ಯಗಳು ಮತ್ತು ಆಲೋಚನೆಗಳು ಎಲ್ಲೆಲ್ಲಾ  ವ್ಯಕ್ತಗೊಳ್ಳುತ್ತವೋ ಅಲ್ಲೆಲ್ಲಾ  ಧರ್ಮಕ್ಕೆ ನಿಷ್ಠೆಯನ್ನು  ತೋರುವುದು ಮತ್ತು ಅಧರ್ಮವನ್ನು ವಿರೋಧಿಸುವುದು. ಅಂದಹಾಗೆ,

ದ್ರೌಪದಿ, ಸೀತೆ, ಮಂಡೋದರಿ, ದುರ್ಯೋಧನ, ದುಶ್ಶಾಸನ, ಶಕುನಿ... ಮುಂತಾದವರೆಲ್ಲ ಬರೇ ಪುರಾಣಕ್ಕೆ ಸೀಮಿತವಾದ ಪಾತ್ರಗಳಲ್ಲ.  ಅಲ್ಲದೇ, ಈ ಪಾತ್ರಗಳು ರೋಮಾಂಚನಗೊಳ್ಳುವುದಕ್ಕೋ  ಸಂಕಟಪಡುವುದಕ್ಕೋ ಮೀಸಲಾದ ವ್ಯಕ್ತಿತ್ವಗಳೂ ಅಲ್ಲ. ಈ ವರ್ತಮಾನದಲ್ಲಿ  ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಬದುಕುವುದಕ್ಕೆ ಈ ಪಾತ್ರಗಳು ಒರೆಗಲ್ಲು ಆಗಬೇಕು. ಹೆಣ್ಣು  ಬೆತ್ತಲೆಗೊಳ್ಳುವಾಗ, ದ್ರೌಪದಿಯ ಸಂಕಟ ಸಮಾಜದಲ್ಲಿ ಕಾಣಿಸಿಕೊಳ್ಳಬೇಕು. ಬೆತ್ತಲೆಗೊಳಿಸಿದವರು ನನ್ನ ಧರ್ಮದವರೋ, ನನ್ನ  ಪಕ್ಷದವರೋ ಎಂಬ ಆಲೋಚನೆಯ ಆಚೆಗೆ ಅವರು ದುರ್ಯೋಧನರು, ದುಶ್ಶಾಸನರು ಎಂಬ ಭಾವವೇ ಮೇಲುಗೈ ಪಡೆಯಬೇಕು.  ಹಾಗಂತ, ಕೇವಲ ಮಣಿಪುರಕ್ಕೆ ಸಂಬಂಧಿಸಿ ಮಾತ್ರ ಹೀಗೆ ಹೇಳಬೇಕಾದುದೂ ಅಲ್ಲ.

ಧರ್ಮದ್ವೇಷ ಸಾಂಕ್ರಾಮಿಕವೆಂಬಂತೆ  ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ತನ್ನ ಧರ್ಮದವ ಹೆಣ್ಣನ್ನು ಬೆತ್ತಲೆ ಮಾಡಿದರೂ ಅತ್ಯಾಚಾರಕ್ಕೆ  ಒಳಪಡಿಸಿದರೂ ಹತ್ಯೆ ಮಾಡಿದರೂ ವಂಚನೆ-ದರೋಡೆಯಲ್ಲಿ ಭಾಗಿಯಾದಾಗಲೂ  ಮೌನವಾಗುವುದು ಮತ್ತು ಬೇರೆ ಧರ್ಮದವರು  ಇಂಥದ್ದನ್ನೇ ಮಾಡಿದರೆ ಬೀದಿಗಿಳಿದು ದ್ವೇಷ ಸಾಧಿಸುವುದು ಎಲ್ಲೆಡೆ ಕಂಡುಬರುತ್ತಿದೆ. ಧರ್ಮ ಪ್ರೇಮ ಎಂದರೆ ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎಂಬಂತಾಗಿದೆ. ಈ ಪ್ರಜ್ಞೆ ಹುಟ್ಟಿಕೊಂಡದ್ದು ಹೇಗೆ? ಯಾವ ಧರ್ಮವೂ ಇಂಥದ್ದೊಂದು  ಮೌಲ್ಯವನ್ನು ಪ್ರತಿಪಾದಿಸಿಲ್ಲ.  ದ್ರೌಪದಿಯ ವಸ್ತ್ರಾಪಹರಣವನ್ನು ಶ್ರೀಕೃಷ್ಣ ತಡೆದನೇ ಹೊರತು ಭಾನುಮತಿಯದ್ದೋ  ನಿರ್ಜರಳದ್ದೋ  ವಸ್ತ್ರಾಪಹರಣಕ್ಕೆ ಆದೇಶಿಸಲಿಲ್ಲ.  ಅಷ್ಟಕ್ಕೂ, ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯಬಲ್ಲ ಶಕ್ತಿವಂತ ಶ್ರೀಕೃಷ್ಣನಿಗೆ ಭಾನುಮತಿಯ ವಸ್ತ್ರಾಪಹರಣ ಮಾಡಬಲ್ಲ ಸಾಮರ್ಥ್ಯ  ಇರಲಿಲ್ಲ ಎಂದು ಇದರರ್ಥವಲ್ಲ. ಅದು ಧರ್ಮವಲ್ಲ ಎಂಬುದೇ ಅದಕ್ಕೆ ಕಾರಣ. ಧರ್ಮ ಅಂದರೆ ಇದುವೇ. ಆದರೆ, ಈ ಮೌಲ್ಯವೇ  ಇವತ್ತು ಸಮಾಜದಿಂದ ಕಣ್ಮರೆಯಾಗತೊಡಗಿದೆ. ಹೆಣ್ಣು ಬೆತ್ತಲೆಗೊಳ್ಳುತ್ತಿದ್ದಾಳೆ. ಆಕೆಯನ್ನು ರಕ್ಷಿಸುವ ಹೊಣೆ ಹೊರ ಬೇಕಾಗಿದ್ದ  ಸಮಾಜವೇ ಅದರ ಬೆಂಬಲಕ್ಕೆ ನಿಲ್ಲುತ್ತಿದೆ. ಅದರಲ್ಲೂ, ಬೆತ್ತಲೆಯ ಆಘಾತವನ್ನು ಚೆನ್ನಾಗಿ ಗ್ರಹಿಸಬಲ್ಲ ಮಹಿಳೆಯರೇ ಬೆತ್ತಲೆ  ಮಾಡಿದವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. ನಿಜವಾಗಿ, 

ಇನ್ನೊಂದು, ಧರ್ಮವನ್ನು ದ್ವೇಷಿಸುವುದೇ ಸ್ವಧರ್ಮ ಪ್ರೇಮ ಎಂದು ನಂಬಿಕೊಂಡಿರುವುದರ ಫಲಿತಾಂಶ ಇದು. ಯಾವುದೇ ಧರ್ಮ  ಇನ್ನೊಂದು ಧರ್ಮವನ್ನು ದ್ವೇಷಿಸಿಕೊಂಡು ಬೆಳೆಯಲು ಸಾಧ್ಯವೇ ಇಲ್ಲ. ದ್ವೇಷ ಧರ್ಮದ ಅಗತ್ಯವೂ ಅಲ್ಲ. ಅಗತ್ಯ ಎಂದಾಗಿದ್ದರೆ  ಪುರಾಣ ಕತೆಗಳ ತುಂಬಾ ಇಂಥ ದ್ವೇಷಗಳೇ ತುಂಬಿಕೊಂಡಿರುತ್ತಿತ್ತು. ಅಲ್ಲೋರ್ವ  ಮಂಡೋದರಿ ಕಾಣಸಿಗುವುದಕ್ಕೆ ಸಾಧ್ಯವೂ ಇರಲಿಲ್ಲ.  ಧರ್ಮ ಯಾವಾಗಲೂ ಪರಿಶುದ್ಧ. ಆದರೆ, ಅಧಿಕಾರ ಹಾಗಲ್ಲ. ಶುದ್ಧ-ಅಶುದ್ಧ ಎಂಬ ಭೇದವನ್ನೇ ಅದು ಮಾಡುವುದಿಲ್ಲ. ಅಧಿಕಾರ  ಪಡೆಯುವುದಕ್ಕಾಗಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಅದು ಹೇಸುವುದಿಲ್ಲ. ಜನರನ್ನು ಕಚ್ಚಾಡಿಸುವುದರಿಂದ ಅಧಿಕಾರ  ಲಭ್ಯವಾಗುತ್ತದೆ ಎಂದಾದರೆ, ಅದು ಆ ಆಯ್ಕೆಯನ್ನೂ ಬಳಸಿಕೊಳ್ಳುತ್ತದೆ. ಧರ್ಮವನ್ನು ವಿಕೃತವಾಗಿ ವ್ಯಾಖ್ಯಾನಿಸುವುದರಿಂದ ಲಾಭ ಇದೆ  ಎಂದಾದರೆ ಅದಕ್ಕೂ ಕೈ ಹಾಕುತ್ತದೆ. ಕರುಣಾಮಯಿ ಹೆಣ್ಣಿನೊಳಗೂ ತೀರದ ದ್ವೇಷವನ್ನು ಅದು ಹುಟ್ಟು ಹಾಕುತ್ತದೆ. ಗಂಡನ್ನು  ಕ್ರೌರ್ಯದ ವಕ್ತಾರರಾಗಿ ಮಾರ್ಪ ಡಿಸುತ್ತದೆ. ತನ್ನ ಧರ್ಮದವರಲ್ಲದ ಎಲ್ಲರನ್ನೂ ವೈರಿಗಳಂತೆ ಮತ್ತು ತನ್ನ ಧರ್ಮವನ್ನು ನಾಶ  ಮಾಡಲು ಸಂಚು ಹೂಡುತ್ತಿರುವವರಂತೆ ಬಿಂಬಿಸುತ್ತದೆ. ಅಂತಿಮವಾಗಿ ಸ್ವಧರ್ಮ ಪ್ರೇಮವೆಂದರೆ, ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎನ್ನುವಲ್ಲಿಗೆ ತಂದು ಮುಟ್ಟಿಸುತ್ತದೆ. 

ಮಣಿಪುರದಿಂದ ಹಿಡಿದು ದೇಶದಾದ್ಯಂತ ಇವತ್ತು ಕಾಣಿಸಿಕೊಂಡಿರುವುದು ಇದೇ ಸಿದ್ಧಾಂತ. ಇದು ಧರ್ಮ ಅಲ್ಲ, ಅಧರ್ಮ. ದುಶ್ಶಾಸನನ ಕೃತ್ಯಕ್ಕೆ ಹೆಣ್ಣು ಬೆಂಬಲವಾಗಿ ನಿಲ್ಲುವುದು ಧರ್ಮವಾಗಲು ಸಾಧ್ಯವೇ ಇಲ್ಲ.

No comments:

Post a Comment