Monday 14 August 2023

ಹರ್ಯಾಣ ಹಿಂಸೆ: ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು...



ಹರ್ಯಾಣದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಅವಳಿ-ಜವಳಿಗಳಂತೆ ಅಕ್ಕ-ಪಕ್ಕ ಇವೆ. ಗುರುಗ್ರಾಮ್ ಎಂಬುದು ದೇಶದಲ್ಲಿಯೇ  ಅತ್ಯಂತ ಮುಂದುವರಿದ ಜಿಲ್ಲೆ. ಬೆಂಗಳೂರು ಮತ್ತು ಮುಂಬೈ ಯನ್ನು ಬಿಟ್ಟರೆ ದೇಶಕ್ಕೆ ಅತ್ಯಧಿಕ ಆದಾಯವನ್ನು ತಂಡುಕೊಡುವ  ಮೂರನೇ ಜಿಲ್ಲೆ ಈ ಗುರುಗ್ರಾಮ್. ಇಲ್ಲಿ ಮಾಲ್‌ಗಳಿವೆ, ಆಸ್ಪತ್ರೆಗಳಿವೆ, ಯುನಿವರ್ಸಿಟಿಗಳಿವೆ, ಸಣ್ಣ-ಪುಟ್ಟ 500 ಕಂಪೆನಿಗಳಿವೆ. ಮೂಲಭೂತ ಸೌಲಭ್ಯಗಳು ವಿಫುಲವಾಗಿರುವ ಜಿಲ್ಲೆ ಇದು. ಆದರೆ, ನೂಹ್ ಜಿಲ್ಲೆ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಇಲ್ಲಿ ಒಂದೇ ಒಂದು ಯುನಿವರ್ಸಿಟಿಯಿಲ್ಲ. ರೈಲ್ವೆ ಸೌಲಭ್ಯವಿಲ್ಲ. ಕುಡಿಯುವ ನೀರಿಗೆ ತತ್ವಾರ. ನೀರಾವರಿ ಸೌಲಭ್ಯವಿಲ್ಲ. ಆರೋಗ್ಯ ಮತ್ತು ಶಿಕ್ಷಣಕ್ಕೆ ಬೇಕಾದ  ಸೌಲಭ್ಯವೂ ಇಲ್ಲ. 2018ರಲ್ಲಿ ನೀತಿ ಆಯೋಗವು ತಯಾರಿಸಿದ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಈ ನೂಹ್  ಕೂಡಾ ಸ್ಥಾನ ಪಡಕೊಂಡಿದೆ. ಇದೇ ನೂಹ್‌ನಲ್ಲಿ ಜುಲೈ 31ರಂದು ಹಿಂಸೆ ಸ್ಫೋಟಿಸಿದೆ. 

ಸಂಘಪರಿವಾರ ಹಮ್ಮಿಕೊಂಡ ಬ್ರಿಜ್‌ಮಂಡಲ್  ಜಲಾಭಿಷೇಕ್ ಯಾತ್ರೆಯು ಹಿಂಸಾಕೃತ್ಯಗಳಿಗೆ ಸಾಕ್ಷಿಯಾಯಿತಲ್ಲದೇ ಇಬ್ಬರು ಹೋಮ್ ಗಾರ್ಡ್ ಗಳು, ಓರ್ವ ಮಸೀದಿ ಇಮಾಮ್  ಸೇರಿದಂತೆ 6 ಮಂದಿ ಸಾವಿಗೀಡಾದರು. ಅನೇಕ ವಾಹನಗಳು ಬೆಂಕಿಗಾಹುತಿಯಾದುವು. ಸುಮಾರು 100ರಷ್ಟು ಮಂದಿ  ಗಾಯಗೊಂಡರು. 150ರಷ್ಟು ಎಫ್‌ಐಆರ್‌ಗಳು ದಾಖಲಾದುವು. 200ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಯಿತು.


ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಈ ಜಿಲ್ಲೆಯ ಮಂದಿ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿಕೊAಡಿದ್ದಾರೆ. ಸರಕಾರದ  ಅವಕೃಪೆಗೆ ಒಳಗಾಗಿರುವ ಕಾರಣ ಸೂಕ್ತ ನೀರಾವರಿ ಸೌಲಭ್ಯವೂ ಇಲ್ಲ. ಹೈನುಗಾರಿಕೆ, ಆಡು-ಕುರಿ ಸಾಕಾಣೆ ಮತ್ತು ಗುಜರಿ  ಅಂಗಡಿಗಳ ನಿರ್ವಹಣೆಯ ಮೂಲಕ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಸರಕಾರದ ತೀವ್ರ ನಿರ್ಲಕ್ಷ್ಯದ ಹೊರತಾಗಿಯೂ ತಮ್ಮ  ಪಾಡಿಗೆ ಹೊಟ್ಟೆ ತುಂಬಿಕೊಳ್ಳುತ್ತಿರುವ ನೂಹ್‌ನ ಜನರನ್ನು ಧಾರ್ಮಿಕವಾಗಿ ಪ್ರಚೋದಿಸುವ ಪ್ರಯತ್ನಗಳು ವರ್ಷಗಳಿಂದ ನಡೆಯುತ್ತಲೇ  ಬಂದಿದ್ದುವು. ಕೇವಲ ನೂಹ್ ಮಾತ್ರ ಅಲ್ಲ, ಅತ್ಯಂತ ಮುಂದುವರಿದ ಗುರುಗ್ರಾಮ್‌ನಲ್ಲೂ ಇಂಥದ್ದೇ  ಪ್ರಚೋದನಕಾರಿ ಭಾಷಣಗಳು  ನಡೆಯುತ್ತಿದ್ದುವು. ಶುಕ್ರವಾರದ ಜುಮಾ ನಮಾಝನ್ನು ನಗರದ ತೆರೆದ ಬಯಲಲ್ಲಿ ನಡೆಸದಂತೆ 2018ರಿಂದಲೂ ಸಂಘಪರಿವಾರ  ಸರಕಾರಕ್ಕೆ ತಾಕೀತು ಮಾಡುತ್ತಲೇ ಬಂದಿದೆ. ಇದರಿಂದಾಗಿ 116 ಸ್ಥಳಗಳಲ್ಲಿ ನಡೆಯುತ್ತಿದ್ದ ಜುಮಾ ನಮಾಝï ಇದೀಗ 6ಕ್ಕೆ ಇಳಿದಿದೆ. 

 ಗುರುಗ್ರಾಮ್‌ನಲ್ಲಿರುವ ಮಾಂಸದಂಗಡಿಗಳ ವಿರುದ್ಧ ಪದೇ ಪದೇ ದಾಳಿಯನ್ನೋ ಭೀತಿಯನ್ನೋ  ಹಬ್ಬಿಸಲಾಗುತ್ತಲೇ ಇದೆ. ಇಂಥ ಮಾಂಸ ದಂಗಡಿಗಳ ಮಾಲಿಕರು ಬಹುತೇಕ ಮುಸ್ಲಿಮರು. ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲ  ಮಾಂಸದಂಗಡಿಗಳನ್ನೂ ಮುಚ್ಚಿಸಲಾಗುತ್ತದೆ. 2021ರಲ್ಲಿ ಕ್ರಿಸ್‌ಮಸ್ ಸಂಭ್ರಮ ಕೂಟಕ್ಕೆ ಇದೇ ಸಂಘಪರಿವಾರ ದಾಳಿ ಮಾಡಿ  ದಾಂಧಲೆಗೈದಿತ್ತು. 2 ವರ್ಷಗಳ ಹಿಂದೆ ಗುರುಗ್ರಾಮ್‌ನ ಪಟೌಡಿ ಎಂಬ ಪ್ರದೇಶದಲ್ಲಿ ಮಹಾ ಪಂಚಾಯತನ್ನು ಏರ್ಪಡಿಸಲಾಗಿತ್ತಲ್ಲದೇ,  ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಬಹಿರಂಗ ಕರೆ ಕೊಡಲಾಗಿತ್ತು. ಮೊನ್ನೆ ಜುಲೈ 31ರಂದು ಸಂಘಪರಿವಾರ ಹಮ್ಮಿಕೊಂಡಿದ್ದ  ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಕೂಡಾ ಪ್ರಚೋದನಕಾರಿ ಭಾಷಣಗಳಿಂದ ಮುಕ್ತವಾಗಿರಲಿಲ್ಲ. ನೂಹ್ ಜಿಲ್ಲೆಯ ಮಂದಿರಗಳನ್ನು  ಮಹಾಭಾರತ ಕಾಲದ ವೈಭವಕ್ಕೆ ಮರಳಿ ತರಲಾಗುವುದು ಎಂದು ಯಾತ್ರೆಯಲ್ಲಿ ಘೋಷಿಸಲಾಗಿತ್ತು. ನೂಹ್ ಜಿಲ್ಲೆಯ ಪಕ್ಕದ ಅಲ್ವಾರ್ ನಲ್ಲಿ ಜುನೈದ್ ಮತ್ತು ನಾಸಿರ್ ಎಂಬಿಬ್ಬರನ್ನು ಸುಟ್ಟು ಕೊಂದ ಆರೋಪಿ ಮೋನು ಮನೆಸರ್ ಎಂಬವ ಈ ಯಾತ್ರೆಗೂ ಮುನ್ನ  ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದ. ತಾನು ಈ ಯಾತ್ರೆಯಲ್ಲಿ ಭಾಗಿಯಾಗುವೆ, ನೀವೂ ಬನ್ನಿ ಎಂದು  ಸಾರ್ವಜನಿಕರಲ್ಲಿ ವಿನಂತಿಸಿದ್ದ. ಆತ ಈ ಇಬ್ಬರ ಹತ್ಯೆಗೆ ಸಂಬಂಧಿಸಿದಂತೆ  ರಾಜಸ್ತಾನ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ. ಇಂಥವ ಈ  ಯಾತ್ರೆಯಲ್ಲಿ ಭಾಗಿಯಾಗುತ್ತಾನೆನ್ನುವುದೇ ಸಾರ್ವಜನಿಕ ಆಕ್ರೋಶ ವನ್ನು ಹುಟ್ಟು ಹಾಕಿದೆ. ಈತ ವೀಡಿಯೋ ಹಂಚಿಕೊಂಡ  ಬಳಿಕ  ಪರ-ವಿರುದ್ಧ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಧಾರಾಳ ಹಂಚಿಕೆಯಾಗಿವೆ. ಪ್ರಚೋದನಕಾರಿ ಬರಹ-ವೀಡಿಯೋಗಳೂ  ಹರಿದಾಡಿವೆ. ಆತನನ್ನು ತಡೆಯಬೇಕೆಂಬ ಆಕ್ರೋಶವೂ ಕೆಲವರಲ್ಲಿ ಕಾಣಿಸಿಕೊಂಡಿದೆ. ಇದೇವೇಳೆ,


ಅಭೂತಪೂರ್ವವೆಂಬಂತೆ  ಪಕ್ಕದ ರಾಜಸ್ತಾನ, ಉತ್ತರ ಪ್ರದೇಶಗಳಿಂದ ಭಾರೀ ಸಂಖ್ಯೆಯ ಜನರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.  15 ಸಾವಿರಕ್ಕಿಂತಲೂ ಅಧಿಕ ಮಂದಿಯ ಈ ಭಾರೀ ಪ್ರವಾಹವನ್ನು ಪೊಲೀಸರೂ ನಿರೀಕ್ಷಿಸಿರಲಿಲ್ಲ. ಗೋರಕ್ಷಕ್ ಎಂದು ಬರೆಯಲಾದ  ಹಲವು ಕಪ್ಪು ಬಣ್ಣದ ಕಾರುಗಳ ಪೈಕಿ ಒಂದರಲ್ಲಿ ಈ ಮನೆಸರ್ ಇದ್ದಾನೆ ಎಂಬ ವದಂತಿಗಳೂ ಹಬ್ಬಿವೆ. ಅಂದಹಾಗೆ,


ಹರ್ಯಾಣದಲ್ಲಿ ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಮತ್ತು ಕನ್ವಾಲ್ ಯಾತ್ರೆ ಪ್ರತಿ ವರ್ಷವೂ ನಡೆಯುತ್ತಿದೆ. ಹೀಗಿರುವಾಗ, ಇಷ್ಟು  ವರ್ಷಗಳಲ್ಲಿ ಕಾಣಿಸಿಕೊಳ್ಳದ ಹಿಂಸೆ ಈ ಬಾರಿ ಸ್ಫೋಟಗಳ್ಳಲು ಕಾರಣವೇನು? ನೂಹ್ ಎಂಬುದು ಸ್ವಾತಂತ್ರ‍್ಯಾ ನಂತರ ಹಿಂದೂ- ಮುಸ್ಲಿಮ್ ಹಿಂಸೆಗೆ ಸಾಕ್ಷಿಯಾಗದ ಜಿಲ್ಲೆ. ತಮ್ಮ ಪಕ್ಕದಲ್ಲೇ  ವೈಭವೋಪೇತವಾಗಿ ಗುರುಗ್ರಾಮ್ ಜಿಲ್ಲೆ ಬೆಳೆಯುತ್ತಿದ್ದರೂ ತಮಗಾದ ಅನ್ಯಾಯವನ್ನು ಪ್ರಶ್ನಿಸದೇ ತಮ್ಮ ಪಾಡಿಗಿದ್ದ ಜಿಲ್ಲೆ  ಈ ನೂಹ್. ಹೀಗಿದ್ದ ಮೇಲೆ ದಿಢೀರಿರ್ ಆಗಿ ಈ ಹಿಂಸೆ ಸ್ಫೋಟಗೊಂಡದ್ದೇಕೆ?  ಉದ್ದೇಶಪೂರ್ವಕವಾಗಿ ಇಂಥದ್ದೊಂದು ಹಿಂಸೆಯನ್ನು ಪ್ರಚೋದಿಸಲಾಯಿತೇ? ಲ್ಯಾಂಡ್ ಮಾಫಿಯಾದ ಕೈವಾಡ ಈ ಹಿಂಸಾಚಾರದ  ಹಿಂದಿರಬಹುದೇ? ಹಿಂಸಾಚಾರದ ಬಳಿಕದ ಬೆಳವಣಿಗೆಗಳನ್ನು ನೋಡಿದರೆ, ಹೌದು ಅನ್ನುವಂತಿದೆ. ಹಿಂಸಾಚಾರದ ಎರಡೇ ದಿನದೊಳಗೆ ಹರ್ಯಾಣ ಸರಕಾರವು ಈ ನೂಹ್ ಜಿಲ್ಲೆಯಲ್ಲಿ ಬುಲ್ಡೋಜರ್‌ನೊಂದಿಗೆ ಪ್ರತ್ಯಕ್ಷವಾಯಿತು. ಸುಮಾರು 300ಕ್ಕಿಂತಲೂ ಅಧಿಕ  ಬಡ ಗುಡಿಸಲುಗಳನ್ನು ಧ್ವಂಸ ಮಾಡಿತು. ಅಲ್ಲಿದ್ದವರನ್ನು ರೋಹಿಂಗ್ಯನ್ನರು, ಅಕ್ರಮ ವಲಸಿಗರು ಎಂದು ನಾಮಕರಣ ಮಾಡಿತು.  ಒಂದುವೇಳೆ, ಆ ಗುಡಿಸಲು ಅಕ್ರಮವೇ ಆಗಿದ್ದಿದ್ದರೆ,  ಇಷ್ಟು ವರ್ಷ ಸರಕಾರಕ್ಕೆ ಅದು ಗೊತ್ತಿರಲಿಲ್ಲವೇ? ಅವುಗಳನ್ನು ತೆರವುಗೊಳಿಸಲು  ಹಿಂಸಾಚಾರದ ವರೆಗೆ ಸರಕಾರ ವಿಳಂಬ ಮಾಡಿತೇಕೆ? ಅಷ್ಟಕ್ಕೂ, ಈ ಮನೆಗಳನ್ನು ಕೆಡಹುವ ಪೂರ್ವದಲ್ಲಿ ಸರಕಾರ ನೋಟೀಸು ಜಾರಿ  ಮಾಡಿದೆಯೇ? ಈ ಗುಡಿಸಲುಗಳಿಂದ ಉತ್ತರಗಳನ್ನು ಪಡಕೊಂಡಿದೆಯೇ?


ಬಹುಶಃ, ಹರ್ಯಾಣ ಹಿಂಸೆಯ ಹಿಂದೆ ಹಿಂದೂ-ಮುಸ್ಲಿಮ್ ಎಂಬ ಗೋಚರ ಕಾರಣಕ್ಕಿಂತ ಹೊರತಾದ ಪ್ರಬಲ ಅಗೋಚರ  ಕಾರಣಗಳು ಇದ್ದಿರುವಂತಿದೆ. ಬಡವರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ಈ ಹಿಂಸಾಚಾರಕ್ಕೆ ರೂಪು  ನೀಡಲಾಗಿದೆಯೇ ಎಂಬ ಅನುಮಾನವಿದೆ. ಭೂಮಾಫಿಯಾದ ಮಂದಿ ಈ ಧಾರ್ಮಿಕ ಯಾತ್ರೆಯನ್ನು ತಮ್ಮ ಉದ್ದೇಶ ಜಾರಿಗಾಗಿ  ಬಳಸಿಕೊಂಡಿರುವಂತಿದೆ ಅಥವಾ ಸಮಾಜ ಘಾತುಕರು ಮತ್ತು ಭೂಮಾಫಿಯಾದ ಮಂದಿ ಜೊತೆ ಸೇರಿಯೇ ಈ ಹಿಂಸಾಚಾರದ  ತಂತ್ರ ಹೆಣೆದಿರುವಂತಿದೆ. ಇದರ ಹೊಲಬರಿಯದ ಬಡಪಾಯಿಗಳು ಹಿಂಸೆಯ ಕುಲುಮೆಗೆ ಬಿದ್ದಿರುವಂತಿದೆ.

ಪ್ರಭುತ್ವವೊಂದು  ತನ್ನದೇ ನಾಗರಿಕರನ್ನು ತಾರತಮ್ಯದಿಂದ ನಡೆಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ನೂಹ್ ಮತ್ತು ಗುರುಗ್ರಾಮ್  ಜಿಲ್ಲೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ. ದೇಶದ 739 ಜಿಲ್ಲೆಗಳ ಪೈಕಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ನೂಹ್ ಗುರುತಿಸಿಕೊಳ್ಳಲು  ಕಾರಣವೇನು? ಅದರ ಪಕ್ಕವೇ ಇರುವ ಗುರುಗ್ರಾಮ್ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಗೌರವ ಗಿಟ್ಟಿಸಿಕೊಂಡದ್ದು ಹೇಗೆ?  ನೂಹ್ ಅನ್ನು ನಿರ್ಲಕ್ಷಿಸಿ ಗುರುಗ್ರಾಮ್ ಅನ್ನು ಮುದ್ದಿಸುವುದಕ್ಕೆ ಪ್ರಭುತ್ವಕ್ಕೆ ಇರುವ ಕಾರಣಗಳೇನು? ಅಲ್ಪಸಂಖ್ಯಾತರು ಹೆಚ್ಚಿರುವ  ಪ್ರದೇಶಗಳ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಸರಕಾರಿ ನೀತಿಯ ಭಾಗವೇ? ಒಂದುಕಡೆ ಅಲ್ಪಸಂಖ್ಯಾತರು  ಹೆಚ್ಚಿರುವ ಪ್ರದೇಶಗಳನ್ನು ಪಾಳು ಬಿಡುವುದು ಮತ್ತು ಇನ್ನೊಂದು ಕಡೆ ಅವರನ್ನು ಗುಜರಿ ಹೆಕ್ಕುವವರು, ಶಿಕ್ಷಣ ವಂಚಿತರು, ಒರಟರು,  ನಾಗರಿಕ ಬದುಕಿಗೆ ಅಸೂಕ್ತರು ಎಂದೆಲ್ಲಾ  ನಿಂದಿಸುವುದು ಎಷ್ಟು ಸರಿ? ಪ್ರಭುತ್ವದ ಅನ್ಯಾಯವನ್ನು ನಾಗರಿಕರ ಅಪರಾಧದಂತೆ  ಬಿಂಬಿಸುವುದು ಯಾಕೆ?

ಹರ್ಯಾಣದ ಹಿಂಸೆಯನ್ನು ಖಂಡಿಸುತ್ತಲೇ ಅದರ ಒಳ-ಹೊರಗನ್ನು ನಾಗರಿಕ ಸಮಾಜ ಗಂಭೀರ ವಿಶ್ಲೇಷಣೆಗೆ ಒಡ್ಡಬೇಕಾದ  ಅಗತ್ಯವೂ ಇದೆ. ಇದು ಧರ್ಮದ ಕಾರಣಕ್ಕಾಗಿ ನಡೆದ ಘರ್ಷಣೆಯಂತೆ ಕಾಣಿಸುತ್ತಿಲ್ಲ. ಪ್ರಭುತ್ವದ ಅನ್ಯಾಯ, ಭೂಮಾಫಿಯಾ,  ಪ್ರಚೋದನೆ..  ಇತ್ಯಾದಿಗಳ ಪಾತ್ರವೂ ಇದರ ಹಿಂದಿರುವಂತಿದೆ. ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು ಸಮಗ್ರ ಅಧ್ಯಯನ  ನಡೆಯಬೇಕಿದೆ.



No comments:

Post a Comment