Monday 11 February 2013

ನಮ್ಮ ನಮ್ಮ ತಲೆಗಳನ್ನು ರಕ್ಷಿಸಿಕೊಳ್ಳೋಣ

ಸರಬ್ಜಿತ್ ಸಿಂಗ್‍

   ಕಾಶ್ಮೀರಿಗಳನ್ನು ದೇಶದ್ರೋಹಿಗಳು, ಉಗ್ರವಾದಿಗಳೆಂದು ಕರೆಯುವುದಕ್ಕಾಗಿ ನೆಪಗಳನ್ನು ಹುಡುಕುತ್ತಾ ತಿರುಗಾಡುತ್ತಿರುವವರಿಗೆ ತೀವ್ರ ನಿರಾಶೆಯಾಗುವ ಸುದ್ದಿಯೊಂದು ಕಾಶ್ಮೀರದಿಂದ ಹೊರಬಿದ್ದಿದೆ. ‘ಅಫ್ಝಲ್ ಗುರುವಿಗೆ ನೇಣಾದುದನ್ನು ಪರಿಗಣಿಸಿ ಸರಬ್ಜಿತ್ ಸಿಂಗ್‍ಗೆ ನೇಣು ವಿಧಿಸಬಾರದು..' ಎಂದು ಜಮ್ಮು-ಕಾಶ್ಮೀರ್ ಲಿಬರೇಶನ್ ಫ್ರಂಟ್(ಜೆ.ಕೆ.ಎಲ್.ಎಫ್.)ನ ನಾಯಕ ಯಾಸಿನ್ ಮಲಿಕ್ ಪಾಕ್ ಸರಕಾರದೊಂದಿಗೆ ವಿನಂತಿಸಿದ್ದಾರೆ. ‘ಹಾಗೇನಾದರೂ ಮಾಡಿದರೆ, ಅದು ಒಂದು ಕೊಲೆ ಆಗಬಹುದೇ ಹೊರತು ಶಿಕ್ಷೆಯಲ್ಲ’ ಎಂದೂ ಅವರು ಹೇಳಿದ್ದಾರೆ. ಅಫ್ಝಲ್ ಗುರುವನ್ನು ನೇಣಿ ಗೇರಿಸಿದುದನ್ನು ಪ್ರತಿಭಟಿಸಿ 24 ಗಂಟೆ ಸತ್ಯಾಗ್ರಹ ನಡೆಸಿದ ಈ ವ್ಯಕ್ತಿಯಿಂದ ಇಂಥದ್ದೊಂದು ಹೇಳಿಕೆಯನ್ನು, 'ಲಡ್ಡು ತಿಂದು ಅಫ್ಝಲ್‍ನ ನೇಣಿಗೆ ಸಂತೋಷಪಟ್ಟ’ ಬಿಜೆಪಿ-ಸಂಘಪರಿವಾರವು ನಿರೀಕ್ಷಿಸಿರುವ ಸಾಧ್ಯತೆ ಖಂಡಿತ ಇಲ್ಲ.
   ನಿಜವಾಗಿ, ಅಫ್ಝಲ್ ಗುರುವಿಗೆ ಗಲ್ಲಾಗಿರುವುದರಿಂದ ಅತ್ಯಂತ ಆತಂಕಕ್ಕೆ ಒಳಗಾಗಿರುವುದು ಸರಬ್ಜಿತ್ ಸಿಂಗ್‍ನ ಕುಟುಂಬ. ಹರ್ಯಾಣದ ಈ ವ್ಯಕ್ತಿಗೆ ಪಾಕ್ ನ್ಯಾಯಾಲಯ ಈಗಾಗಲೇ ಮರಣ ದಂಡನೆ ವಿಧಿಸಿದೆ. ಪಾಕ್ ನೆಲದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಸರಬ್ಜಿತ್‍ನ ಮೇಲಿದೆ. ಅಫ್ಝಲ್ ಗುರುವಿಗೆ ಗಲ್ಲಾಗಲಿ ಎಂದು ಈ ದೇಶದಲ್ಲಿ ಯಾವಾಗೆಲ್ಲ ಕೂಗು ಕೇಳಿ ಬರುತ್ತದೋ ಆವಾಗೆಲ್ಲಾ ಸರಬ್ಜಿತ್ ಕುಟುಂಬದಲ್ಲಿ ಭೀತಿ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ, ಸರಬ್ಜಿತ್‍ನ ಗಲ್ಲು ಒಂದು ಹಂತದ ವರೆಗೆ ಅಫ್ಝಲ್ ಗುರುವಿನ ಗಲ್ಲಿನೊಂದಿಗೆ ತಳಕು ಹಾಕಿ ಕೊಂಡಿದೆ. ಅಫ್ಝಲ್‍ನನ್ನು ಭಾರತವು ನೇಣಿಗೇರಿಸಿದರೆ ಪಾಕಿಸ್ತಾನವು ಸರಬ್ಜಿತ್‍ನನ್ನು ನೇಣಿಗೇರಿಸಲಿದೆ ಎಂಬೊಂದು ಸುದ್ದಿಯು ಅನೇಕ ಬಾರಿ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ಸುದ್ದಿಯನ್ನು ‘ವಿಳಾಸ ಇಲ್ಲದ ಸುದ್ದಿ' ಎಂದು ತಳ್ಳಿ ಹಾಕಿ ಬಿಡಬಹುದಾದರೂ ಆಳದಲ್ಲಿ, ‘ಇದ್ದರೂ ಇದ್ದೀತು' ಅನ್ನುವ ಅನುಮಾನ ಆ ಕುಟುಂಬ ದಲ್ಲಷ್ಟೇ ಅಲ್ಲ, ಜನಸಾಮಾನ್ಯರಲ್ಲೂ ಇದೆ. ಬಹುಶಃ ಸರಬ್ಜಿತ್ ಸಿಂಗ್ ಈ ವರೆಗೆ ಬದುಕುಳಿದಿರುವುದು ಅಫ್ಝಲ್ ಗುರುವಿನ ಕಾರಣದಿಂದಲೋ ಏನೋ. ಆದರೆ ‘ಲಡ್ಡು ತಿಂದು ಸಾವನ್ನು ಸಂಭ್ರಮಿಸುವ ವರ್ಗಕ್ಕೆ' ಇವೆಲ್ಲ ಮುಖ್ಯವಾಗುವ ಸಾಧ್ಯತೆಯೇ ಇಲ್ಲ. ಅಫ್ಝಲ್ ಗುರುವನ್ನು ಮುಂದಿಟ್ಟುಕೊಂಡು ಈ ವರ್ಗ ಈ ದೇಶದಲ್ಲಿ ಓಟು ಕೇಳಿದೆ. ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸುವುದಕ್ಕೆ ಗುರುವನ್ನು ಪರೋಕ್ಷವಾಗಿ ಬಳಸಿಕೊಂಡಿದೆ. ಮಾತ್ರವಲ್ಲ, ಕಸಬ್ ಮತ್ತು ಗುರು ಇನ್ನೂ ಜೀವಂತವಿರುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ಅವರನ್ನು ದುರುಪಯೋಗಿಸುವ ಎಲ್ಲ ಸಾಧ್ಯತೆಯೂ ಇತ್ತು. ಈ ಅವಕಾಶವನ್ನು ಸದ್ಯ ಕಾಂಗ್ರೆಸ್ ಕಸಿದುಕೊಂಡಿರುವುದರಿಂದ ಈ ವರ್ಗವು ಇದೀಗ ಕಾಶ್ಮೀರದಲ್ಲಾಗುವ ಪ್ರತಿಭಟನೆಯನ್ನು ಭಾರೀ ಕುತೂಹಲದಿಂದ ವೀಕ್ಷಿಸುತ್ತಿದೆ. ಯಾಕೆಂದರೆ, ಮುಂದಿನ ಚುನಾವಣೆಯಲ್ಲಿ ದೇಶಭಕ್ತಿಯ ಭಾಷಣ ಬಿಗಿಯಲು ಒಂದಷ್ಟು ದೇಶದ್ರೋಹಿ ಕತೆಗಳ ಅಗತ್ಯವಿದೆ. ಒಂದು ವೇಳೆ ಸರಬ್ಜಿತ್‍ಗೆ ಗಲ್ಲಾಗಿ ಬಿಟ್ಟರೆ ಅದಕ್ಕಾಗಿ ಸಂಭ್ರಮಿಸುವ ಸಾಧ್ಯತೆಯಿರುವುದು ಈ ವರ್ಗ ಮಾತ್ರ. ಆ ಮೊಲಕ ಪಾಕಿಸ್ತಾನವನ್ನು ನಿಂದಿಸುವುದಕ್ಕೆ ಮತ್ತು ಸಾವನ್ನು ಓಟಾಗಿ ಪರಿವರ್ತಿಸುವುದಕ್ಕೆ ಅವಕಾಶವಿದೆಯಲ್ಲವೇ?
   ಅಂದಹಾಗೆ, ಕಸಬ್‍ನ ಬಳಿಕ ಇದೀಗ ಅಫ್ಝಲ್ ಗುರುವನ್ನು ನೇಣಿಗೇರಿಸುವ ಮೂಲಕ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗೆ ಒಳ್ಳೆಯ ತಯಾರಿ ನಡೆಸಿದೆ. ಹತ್ಯಾಕಾಂಡದ ಆರೋಪಿಯೊಬ್ಬ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತಗೊಳ್ಳುತ್ತಿರುವಾಗ ಕೆಲವೊಂದು ತಲೆಗಳನ್ನು ಉರುಳಿಸದೇ ಆತನನ್ನು ಎದುರಿಸುವುದಕ್ಕೆ ಸಾಧ್ಯವಾಗಲಾರದು ಎಂದು ಕಾಂಗ್ರೆಸ್ ಭಾವಿಸಿರುವಂತಿದೆ. ಆದ್ದರಿಂದಲೇ ರಾಹುಲ್ ಗಾಂಧಿಯ ಕೈಯಲ್ಲಿ ಎರಡು ತಲೆಗಳನ್ನು ಕೊಟ್ಟು ಮೋದಿಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಲ್ಲಿಸಿದೆ. ಇಷ್ಟಕ್ಕೂ, ಅಫ್ಝಲ್ ಮತ್ತು ಕಸಬ್ ಎಂಬ ಪ್ರಭಾವಿ ಅಸ್ತ್ರಗಳನ್ನು ಕಳಕೊಂಡು ಕುಸಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ರಾಮ ಮಂದಿರವನ್ನು ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಇನ್ನೊಂದು ಹೆಜ್ಜೆ ಮುಂದಿಡಲೂ ಬಹುದು. ಬಿಜೆಪಿಗಿಂತ ಮೊದಲೇ ರಾಮಮಂದಿರಕ್ಕೆ ಅಡಿಗಲ್ಲನ್ನು ಹಾಕಿ ಬಿಜೆಪಿಯ ಬಾಯಿ ಮುಚ್ಚಿಸುವುದಕ್ಕೂ ಪ್ರಯತ್ನಿಸ ಬಹುದು. ಕಾಂಗ್ರೆಸ್‍ನ ಸದ್ಯದ ಧಾವಂತವನ್ನು ನೋಡಿದರೆ ಅದು ಯಾವುದಕ್ಕೂ ಹೇಸುವ ಸ್ಥಿತಿಯಲ್ಲಿಲ್ಲ. ಬಿಜೆಪಿಗೆ ಸದ್ಯ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಅರ್ಹತೆಯಿಲ್ಲ ಅನ್ನುವುದು ಕಾಂಗ್ರೆಸ್‍ಗೆ ಗೊತ್ತು. ಅಭಿವೃದ್ಧಿಯ ಮಾತಾಡಿದರೆ ಜನ ನಂಬುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಬಿಜೆಪಿ ಭಯೋತ್ಪಾದನೆ ಮತ್ತು ರಾಮಮಂದಿರವನ್ನು ಮುಂದಿಟ್ಟುಕೊಂಡೇ ಮುಂದಿನ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಿಜೆಪಿಯಿಂದ ಆ ಎರಡೂ ಅಸ್ತ್ರಗಳನ್ನು ಕಸಿದುಕೊಳ್ಳುವುದಕ್ಕೆ ಕಾಂಗ್ರೆಸ್ ತೀರ್ಮಾನಿಸಿರುವ ಸಾಧ್ಯತೆಯಿದೆ. ಅದರ ಭಾಗವಾಗಿಯೇ ಎರಡು ತಲೆಗಳನ್ನು ಉರುಳಿಸಲಾಗಿದೆ. ಒಂದು ವೇಳೆ ಬಿಜೆಪಿಯು ರಾಮಮಂದಿರದ ಬಗ್ಗೆ ಆಂದೋಲನ ನಡೆಸಿದರೆ ಆ ಅಸ್ತ್ರವನ್ನೂ ಕಸಿಯುವುದಕ್ಕೆ ತಂತ್ರ ರೂಪಿಸಬಹುದು.
   ದುರಂತ ಏನೆಂದರೆ, ಅಕ್ಕಿ, ಗೋಧಿ, ಸಕ್ಕರೆ ಸಹಿತ ದಿನ ನಿತ್ಯದ ಆಹಾರ ಪದಾರ್ಥಗಳು ಬೆಲೆ ಏರಿಸಿಕೊಂಡು ಜನಸಾಮಾನ್ಯರ ಕೊರಳು ಹಿಂಡುತ್ತಿರುವಾಗ ಈ ದೇಶದ ಪ್ರಮುಖ ಎರಡು ರಾಜಕೀಯ ಪಕ್ಷಗಳು ತಲೆಗಳನ್ನು ಉರುಳಿಸುವ ಲೆಕ್ಕಾಚಾರದಲ್ಲಿ ತೊಡಗಿವೆ ಅನ್ನುವುದು. ಒಂದು ಪಕ್ಷ ತಲೆ ಹಾರಿಸುವಾಗ ಇನ್ನೊಂದು ಪಕ್ಷ ಲಡ್ಡು ಹಂಚುತ್ತದೆ. ಇಂಥ ಪಕ್ಷಗಳು ಈ ದೇಶವನ್ನು ಎಲ್ಲಿಗೆ ಕೊಂಡೊಯ್ದಾವು? ತಲೆಗಳ ಹೊರತು ಜನರ ಮುಂದೆ ಹೇಳಿಕೊಳ್ಳುವುದಕ್ಕೆ ಅವುಗಳ ಬಳಿ ಬೇರೇನೂ ಇಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
   ಏನೇ ಆಗಲಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ಮೋದಿಗೆ ಪ್ರತಿ ಸವಾಲು ಎಸೆಯಲು ಕಾಂಗ್ರೆಸ್ ಗರಿಷ್ಠ ಶ್ರಮಿಸುತ್ತಾ ಇದೆ. ಮೋದಿಯ ಕೈಯಲ್ಲಿರುವ 2 ಸಾವಿರ ತಲೆಗಳಿಗಿಂತ ಪ್ರಭಾವಶಾಲಿಯಾದ ಎರಡು ತಲೆಗಳನ್ನು ಅದು ಈಗಾಗಲೇ ತನ್ನ ಬತ್ತಳಿಕೆಯಲ್ಲಿ ಪೇರಿಸಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಇನ್ನಷ್ಟು ತಲೆಗಳ ಅಗತ್ಯ ಬೀಳಲೂ ಬಹುದು. ಅಗತ್ಯ ಬಿದ್ದರೆ ಸರಬ್ಜಿತ್ ಸಿಂಗ್‍ನನ್ನು ಶೀಘ್ರ ಗಲ್ಲಿಗೇರಿಸುವಂತೆ ಒಳಗಿಂದೊಳಗೇ ಪಾಕ್‍ಗೆ ಒತ್ತಡ ಹೇರಲೂ ಬಹುದು. ಆದ್ದರಿಂದ ಓಟು ಮುಗಿಯುವ ವರೆಗೆ ನಮ್ಮ ನಮ್ಮ ತಲೆಗಳನ್ನು ಉರುಳದಂತೆ ಕಾಪಾಡಿಕೊಳ್ಳೋಣ.

3 comments:

  1. afjal gintaloo modaloo ee sampaadakeeya bareda desha drohigalannu gallirisabekittu.

    ReplyDelete
  2. sampadakeeya vastvik anshvannu marmilwagi uttam reetiyalli moodibandide.Votigagi talegalu urulisuv nimma maatu niz.

    ReplyDelete
  3. Aparaadhigalige shikshe aadare muslim ennuva kaaranakke adannu raajakiya ennuvudu eshtu samnjasa..? yaavude religion iddaru desha drohige shikshe annu samarthisade iruvudu nimmalina sanna thanavannu thorisuthade... afsal galligerisidare sarabjith galligerisutheve enuva vaada nyayave..? nimmaprakara afsal annu galligerisabaaradu endu thane..aaropige gallagiruvudannu Raajakiya endu dweshada beeja bithuthiruva nimmindale indu dwesha huttuthiruvudu..

    ReplyDelete