Wednesday 15 January 2014

ಮುಂಜಿ, ಬುರ್ಖಾ ಮತ್ತು ರಾಜಕೀಯ ಭ್ರಮೆ

    ಒಂದು ದೇಶದ ಪಾಲಿಗೆ ಚುನಾವಣೆಯೊಂದು ಅತಿ ಮಹತ್ವದ ಮತ್ತು ಬಹುನಿರೀಕ್ಷೆಯ ವಿಷಯವಾಗಬೇಕಾದದ್ದು ಯಾವ ಕಾರಣದಿಂದ? ನಾವು ಬಯಸಿದರೂ ಬಯಸದಿದ್ದರೂ 5 ವರ್ಷಕ್ಕೊಮ್ಮೆ ಚುನಾವಣೆ ಬಂದೇ ಬರುತ್ತದೆ. ಮತದಾನದ ದಿನದಂದು ಸರಕಾರಿ ರಜೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲಾಗುತ್ತದೆ. ಮತದಾರರಿಗೆ ಸುಲಭವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದಲ್ಲದೇ ಮನೆ ಮನೆಗೆ ತೆರಳಿ 'ಮತದಾರ ಚೀಟಿ'ಯನ್ನೂ ವಿತರಿಸಲಾಗುತ್ತದೆ. ಹಾಗಂತ, ಓರ್ವ ಮತದಾರ ಮತದಾನವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಇವೆಲ್ಲ ಪ್ರಮುಖ ಕಾರಣಗಳಾಗಬೇಕೇ ಅಥವಾ ಆ ಚುನಾವಣೆಯಲ್ಲಿ ಚರ್ಚೆಗೀಡಾಗುವ ವಿಷಯಗಳು; ಅಭ್ಯರ್ಥಿ, ಪಕ್ಷ, ಪ್ರಣಾಳಿಕೆಗಳು ಮುಖ್ಯವಾಗಬೇಕೇ? ಇಂಥದ್ದೊಂದು ಅನುಮಾನ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಮತದಾರರಿಗೆ ಎದುರಾಗುತ್ತಲೇ ಇರುತ್ತವೆ.
   ದೇರಳಕಟ್ಟೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಮುಂದೆ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ರೌಡಿಗಳ ಪಟ್ಟಿಯಲ್ಲಿರುವ ಕೆಲವು ಕ್ರಿಮಿನಲ್‍ಗಳು ಮಾಡಿರುವ ಖಂಡನೀಯ ಕೃತ್ಯವೊಂದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಪ್ರಯೋಗಿಸುವ ಘಟನೆಗಳು ಇಲ್ಲಿ ನಡೆಯುತ್ತಿವೆ. ಮುಸ್ಲಿಮರ ಮುಂಜಿ ಕರ್ಮವನ್ನು, ಬುರ್ಖಾವನ್ನು ಬಹಿರಂಗ ವೇದಿಕೆಗಳಲ್ಲಿ ಹೀಯಾಳಿಸಲಾಗುತ್ತಿದೆ. ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿಯ ನಾಯಕರು ಮತ್ತು ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತ್ಯಕ್ಷ  ಬೆಂಬಲವನ್ನೂ ಸಾರುತ್ತಿದ್ದಾರೆ. ನಿಜವಾಗಿ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮುಸ್ಲಿಮರನ್ನು ನಿಂದಿಸಬೇಕು ಅನ್ನುವ ಭ್ರಮೆಯು ದಕ್ಷಿಣ ಕನ್ನಡದ ಬಿಜೆಪಿಯಲ್ಲಿ ಮತ್ತು ಅದರ ಬೆಂಬಲಿಗರಲ್ಲಿ ಮಾತ್ರ ಇರುವುದಲ್ಲ. ಅದೊಂದು ರಾಷ್ಟ್ರ ಮಟ್ಟದ ಭ್ರಮೆ. ಆ ಭ್ರಮೆ ಚುನಾವಣೆ ಹತ್ತಿರ ಬರುತ್ತಲೇ ಜಾಗೃತವಾಗುತ್ತದೆ. ಆಗ ಪ್ರತಿಯೊಂದು ಅಪರಾಧ ಕೃತ್ಯವನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ನಡೆದ ಚುನಾವಣೆಯ ಸಂದರ್ಭದಲ್ಲಿ ಮೆಹ್ಸಾನದಲ್ಲಿ ನಡೆದ ಸಭೆಯಲ್ಲಿ ಮೋದಿ ಭಾಷಣ ಆರಂಭಿಸಿದ್ದೇ, 'ಅಲೀಗಳು, ಮಲೀಗಳು, ಜಮಾಲಿಗಳು  ಮತ್ತು ಅವರ ಶಿಶು ಉತ್ಪಾದನಾ ಕಂಪೆನಿಗಳು..' (ದಿ ಹಿಂದೂ, 2013 ಡಿಸೆಂಬರ್ 31) ಎಂದೇ. ಉತ್ತರ ಪ್ರದೇಶದ ಮುಝಫ್ಫರ್ ನಗರದ ಗಲಭೆಯ ಆರೋಪಿಗಳಾಗಿರುವ ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕನ್ವರ್ ಸೋಮ್ ಮತ್ತು ಇತರ 34 ಮಂದಿಯನ್ನು, ‘ಬಿಜೆಪಿ ರಾಜ್ಯ ಮಾನವ ಹಕ್ಕು ಘಟಕವು’ ಸನ್ಮಾನಿಸಿತ್ತು. ಸನ್ಮಾನದ ಎರಡು ದಿನಗಳ ಬಳಿಕ ಮೋದಿಯವರ ರಾಲಿಯಲ್ಲೂ ಈ ಶಾಸಕರನ್ನು ಬಹಿರಂಗವಾಗಿಯೇ ಸನ್ಮಾನಿಸಲಾಯಿತು. ಅಲ್ಲದೇ, ಮುಝಫ್ಫರ್ ನಗರದ ಗಲಭೆಯ ಬಗ್ಗೆ ಈ ವರೆಗೆ ಯಾವೊಂದು ಮಾತನ್ನೂ ಆಡಿಲ್ಲದ ಮೋದಿ, ಕೇಂದ್ರ ಸರಕಾರ ತರಲುದ್ದೇಶಿಸಿರುವ ಕೋಮುಗಲಭೆ ತಡೆ ವಿಧೇಯಕದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿ ಕಳೆದ ತಿಂಗಳು ಪ್ರಧಾನಿಗೆ ಪತ್ರ (ದಿ ಹಿಂದೂ, 2013 ಡಿಸೆಂಬರ್ 27) ಬರೆದಿದ್ದರು. ಇವೆಲ್ಲ ಏನು? ಮುಸ್ಲಿಮರ ಕುರಿತಂತೆ ಅದು ಹೊಂದಿರುವ ದ್ವೇಷದ ಅಭಿಪ್ರಾಯಕ್ಕೆ ಸ್ಪಷ್ಟ ಪುರಾವೆಗಳಲ್ಲವೇ? ಒಂದು ದೇಶದ ಪ್ರಜೆಗಳ ಬಗ್ಗೆ ಈ ಮಟ್ಟದ ಅಭಿಪ್ರಾಯವಿರುವ ಪಕ್ಷವೊಂದು ದೇಶವನ್ನಾಳುವುದನ್ನು ಹೇಗೆ ಸಹಿಸಿಕೊಳ್ಳುವುದು?
   ನಿಜವಾಗಿ, ಧರ್ಮಕ್ಕೂ ಅಪರಾಧಕ್ಕೂ ಸಂಬಂಧವೇ ಇಲ್ಲ. ಆರೋಪಿಗಳ ಹೆಸರುಗಳು ಏನೇ ಆಗಿರಲಿ, ಅವರು ಬರೇ ಆರೋಪಿಗಳೇ ಹೊರತು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡಾ. ಅಷ್ಟಕ್ಕೂ, ಮುಸ್ಲಿಮರನ್ನು ನಿಂದಿಸುವವರಿಗೆ, ಮುಸ್ಲಿಮ್ ದ್ವೇಷದ ಕಾರ್ಯಾಚರಣೆಗಳಲ್ಲಿ ಪಾಲುಗೊಂಡವರನ್ನು ಸನ್ಮಾನಿಸುವವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ, ಗೊತ್ತಿದೆ. ಹಾಗಿದ್ದೂ, ಅವರು ಮತ್ತೆ ಮತ್ತೆ ಯಾಕೆ ತಪ್ಪು ಮಾಡುತ್ತಿದ್ದಾರೆಂದರೆ, ಜನರ ಮುಂದಿಡುವುದಕ್ಕೆ ಅವರಲ್ಲಿ ಬೇರೆ ಯಾವುದೇ ಜನಪರ ಇಶ್ಶೂ ಇಲ್ಲ. ಅಲ್ಲದಿದ್ದರೆ, ದೇರಳಕಟ್ಟೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಮತ್ತು ಅವರ ಆರಾಧನಾ ಕ್ರಮಗಳನ್ನು ನಿಂದಿಸುತ್ತಿರುವುದಾದರೂ ಯಾಕೆ? ಅಪರಾಧ ಕೃತ್ಯಗಳ ಹೊಣೆಯನ್ನು ಬಿಜೆಪಿ ಯಾಕೆ ಧರ್ಮದ ಮೇಲೆ ಹೊರಿಸುತ್ತಿದೆ? ಒಂದು ವೇಳೆ ಅಪರಾಧಗಳಿಗೆ ಧರ್ಮವೇ ಹೊಣೆ ಎಂದಾದರೆ, ಅದು ಮೊಟ್ಟಮೊದಲು ಹಿಂದೂ ಧರ್ಮವನ್ನೇ ದ್ವೇಷಿಸಬೇಕಾಗುತ್ತದೆ. ಯಾಕೆಂದರೆ, ಈ ದೇಶದಲ್ಲಿ ಪ್ರತಿನಿತ್ಯ ಹಿಂದೂ-ಮುಸ್ಲಿಮ್-ಜೈನ ಎಂಬ ಬೇಧವಿಲ್ಲದೇ ಎಲ್ಲ ಧರ್ಮಗಳ ಅನುಯಾಯಿಗಳೂ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಇವರಲ್ಲಿ ಮುಸ್ಲಿಮರನ್ನು ಮಾತ್ರ ಹೆಕ್ಕಿಕೊಂಡು ಅವರ ಅಪರಾಧವನ್ನು ಮಾತ್ರ ಅತಿ ಗಂಭೀರವೆಂಬಂತೆ ಬಿಜೆಪಿ ಬಿಂಬಿಸುತ್ತಿರುವುದೇಕೆ? ಪ್ರೀತಿ, ಪ್ರೇಮ, ಪ್ರಣಯ, ಮೋಸ, ವಂಚನೆಗಳೆಲ್ಲ ಯಾವುದಾದರೊಂದು ಧರ್ಮದೊಂದಿಗೆ ಗುರುತಿಸಿಕೊಂಡವರಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶಧ ಶೈಕ್ಷಣಿಕ ವ್ಯವಸ್ಥೆ, ಉದ್ಯೋಗ ರಂಗ, ಮಾರುಕಟ್ಟೆ, ಸಾಂಸ್ಕøತಿಕ ಕ್ಷೇತ್ರಗಳೆಲ್ಲ ಹಿಂದೂ-ಮುಸ್ಲಿಮ್ ಎಂದಾಗಲಿ ಹೆಣ್ಣು-ಗಂಡು ಎಂದಾಗಲಿ ವಿಭಜನೆಗೊಂಡಿಲ್ಲ. ಎಲ್ಲರೂ ಮುಕ್ತವಾಗಿ ಬೆರೆಯುವ ವಾತಾವರಣ ಇಲ್ಲಿದೆ. ಇಂಥ ಸಂದರ್ಭದಲ್ಲಿ ಹಿಂದೂ ಹುಡುಗಿ ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ಅಥವಾ ಮುಸ್ಲಿಮ್ ಹುಡುಗಿ ಹಿಂದೂ ಹುಡುಗನ ಬಗ್ಗೆ ಆಕರ್ಷಿತಳಾಗುವುದು ಅದ್ಭುತವೇನೂ ಅಲ್ಲ. ಅದಕ್ಕೆ ಪಿತೂರಿ, ಷಡ್ಯಂತ್ರಗಳ ಅಗತ್ಯವೂ ಇಲ್ಲ. ಈ ದೇಶದ ಸಾಮಾಜಿಕ, ಶೈಕ್ಷಣಿಕ ವಾತಾವರಣವು ಹೆಣ್ಣು-ಗಂಡು ಪರಸ್ಪರ ಮಾತಾಡುವಷ್ಟು, ಬೆರೆಯುವಷ್ಟು ಮುಕ್ತವಾಗಿರುವಾಗ ವಯೋಸಹಜ ಆಕರ್ಷಣೆಗೆ ಧರ್ಮದ ಲೇಪ ಕೊಡಬೇಕಾದ ಅಗತ್ಯವೂ ಇಲ್ಲ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಸಹಜ ಪ್ರಕ್ರಿಯೆಗಳಿಗೆ ಅಸಹಜ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಪಟ್ಟಿಯನ್ನು ಎತ್ತಿ ಹೇಳಿ, ಹೆತ್ತವರನ್ನು ಭೀತಿಗೆ ಒಳಪಡಿಸುತ್ತಿದ್ದಾರೆ. ಲವ್ ಜಿಹಾದ್.. ಮುಂತಾದ ಪದಗಳನ್ನು ಹರಿಯ ಬಿಡುತ್ತಿದ್ದಾರೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಒಡ್ಡಿ, ಅವರನ್ನು ಮತಾಂತರಗೊಳಿಸಿ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಆದೇಶವನ್ನು ಇಸ್ಲಾಮ್ ಎಂದೂ ನೀಡಿಲ್ಲ. ಧರ್ಮ ಅನ್ನುವುದು ಹೇಗಾದರೂ ಮಾಡಿ ಸಂಖ್ಯೆಯನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿ ಇರುವುದಲ್ಲ. ಮೋಸ, ವಂಚನೆಯಿಂದ ಯಾವ ಧರ್ಮವನ್ನೇ ಆಗಲಿ ಬಲಾಢ್ಯಗೊಳಿಸಲು ಸಾಧ್ಯವೇ? ಅಂಥದ್ದೊಂದು ಕಲ್ಪನೆಯನ್ನು ಇಸ್ಲಾಮ್ ಎಂದೂ ಪ್ರಸ್ತುತಪಡಿಸಿಯೇ ಇಲ್ಲ. ಆದರೆ, ಬಿಜೆಪಿ ಮತ್ತು ಬೆಂಬಲಿಗರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಮತ್ತೆ ಮತ್ತೆ ಸುಳ್ಳನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಮುಸ್ಲಿಮರನ್ನು ನಿಂದಿಸುವುದಕ್ಕೆ ಅಪರಾಧ ಕೃತ್ಯಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಿದ್ದಾರೆ. ಜನರ ಮಧ್ಯೆ ಭಾವನಾತ್ಮಕ ಗಡಿಗಳನ್ನು ನಿರ್ಮಿಸುತ್ತಿದ್ದಾರೆ.
   ಏನೇ ಆಗಲಿ, ಈ ದೇಶದ ಚುನಾವಣೆಗಳು ಬ್ಲ್ಯಾಕ್‍ಮೇಲ್ ರಾಜಕೀಯಕ್ಕಿಂತ ಹೊರತಾದ ಕಾರಣಕ್ಕಾಗಿ ಚರ್ಚೆಯಲ್ಲಿರಬೇಕು. ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಸಿಗುತ್ತದೆ ಎಂಬ ನಂಬುಗೆಯನ್ನು ಮತದಾರರು ಯಾವ ಕಾರಣಕ್ಕೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಶೂಗಳ ಆಧಾರದಲ್ಲಿ ನಡೆಯಲಿ. ಉತ್ತಮ ಪ್ರಣಾಳಿಕೆ, ಉತ್ತಮ ಅಭ್ಯರ್ಥಿ
ಗಳು, ಮನುಷ್ಯ ಪ್ರೇಮಿ ವಿಚಾರಧಾರೆಗಳನ್ನು ಬೆಂಬಲಿಸುವ ರಾಜಕೀಯ ಮುತ್ಸದ್ದಿತನವು ಮತದಾರರಲ್ಲಿ ಬೆಳೆದು ಬರಲಿ. ಅಪರಾಧ ಕೃತ್ಯಗಳನ್ನು ಕೇವಲ ಅಪರಾಧ ಕೃತ್ಯಗಳಾಗಿಯೇ ನೋಡುವ ಮತ್ತು ಧರ್ಮವನ್ನು ಧರ್ಮವಾಗಿಯೇ ನೋಡುವ ವಾತಾವರಣ ದೇಶದೆಲ್ಲೆಡೆ ಕಾಣಿಸಿಕೊಳ್ಳಲಿ.

1 comment:

  1. ಭಾರತ ದೇಶದಲ್ಲಿ ಹಿಂದೂಗಳು ಮುಸ್ಲಮಾನರು ಕ್ರೈಸ್ತರು ಸಿಖರು ಎಲ್ಲರೂ ಅನ್ನ್ಯೊನ್ಯವಾಗಿರಲು ಒಂದು ದಾರಿಯನ್ನು ಹುಡುಕಬೇಕಾದ ಸಂಧರ್ಬ ಬಂದೊಗಿದೆ.
    ಬಿ ಜೆ ಪಿ ಯು ಇಸ್ಲಾಂ ದ್ವೇಷ ಮತ್ತು ಮುಸ್ಲಿಂ ದ್ವೇಷದಲ್ಲಿ ಮುಸ್ಲಿಮರೆಂದರೆ ದೇಶ ದ್ರೋಹಿಗಳೇ ಎಂದು ಸಾರುತ್ತಿದೆ,
    ಅದನ್ನು ನಂಬುವ ಒಂದು ದೊಡ್ಡ ಸಮಾಜವನ್ನೇ ಕಟ್ಟಿಕೊಂಡಿದೆ, ಪ್ರಭಾಕರ ಭಟ್ಟ ನಂಥವರು ಈ ದ್ವೇಷ ದ ಬೆಂಕಿಗೆ ಆಗಾಗ ಪೆಟ್ರೋಲ್ ಸುರಿಸುತ್ತ ಇರುತ್ತಾರೆ.
    ಇಂತಹ ದ್ವೇಷ ತುಂಬಿದ ಜನರು ಎ ಕೆ ಕುಕ್ಕಿಲರು ಬರೆದ ಈ ಮಾತನ್ನು ಅರ್ಥ ಮಾಡಲಿಕ್ಕೆ ಸಾಧ್ಯವೇ ಇಲ್ಲ.
    ಬಾಲ್ಯದಿಂದ ಅನ್ನದ ತುತ್ತಿನೊಂದಿಗೆ ಸೇರಿಸಿ ಉಪ್ಪಿನಕಾಯಿಯಂತೆ ಸವಿಸಿ ತುಂಬಿಸಿದಂತಹ ದ್ವೇಷ ಇದು ಉರಿದು ಉರಿಸಿಯೂ ಶಾಂತವಾಗುವಂತಿಲ್ಲ.

    ಯಾಸ್ಸೀನ್ ಭಟ್ಕಲ್ ಎಂಬ ಒಂದು ವ್ಯಕ್ತಿ ಭಾರತದಲ್ಲಿ ಹುಟ್ಟಲಿಲ್ಲ ಆದರೆ ಮೊಹಮ್ಮೆದ್ ಅಹ್ಮೆದ್ ಸಿದ್ದಿಬಾಪ ಎಂಬುವನನ್ನು ಯಾಸೀನ್ ಭಟ್ಕಲ್ ಎಂದು ಯಾರು ಮಾಡಿದರು ಯಾಕೆ ಮಾಡಿದರು ಉತ್ತರಿಸುವವರಿಲ್ಲ. ಅವನು ದೆಶದ್ರೊಹಿಯಾಗಿದ್ದರೆ ಅವನನ್ನು ಅತ್ಯಂತ ಕಟ್ಹೊರ ಶಿಕ್ಷೆ ನೀಡಿ ಕೊಲ್ಲಬೆಕು. ಆದರೆ ಎಷ್ಟರವರೆಗೆ ಅವನ ತಪ್ಪು ಸಾಬೀತು ಪಡಿಸಲಾಗುವುಡಿಲ್ಲವೇ ಅಷ್ಟರವರೆಗೆ ನಾವು ದೂಷಿಸುವಂತಿಲ್ಲ. ಇದು ನ್ಯಾಯದ ಬೇಡಿಕೆ.
    ಲವ್ ಜಿಹಾದು ಕೂಡ ಒಂದು ಹೊಸ ಅನ್ವೇಷಣೆ. ಲೋಕ ಬಯಸಿ ಬೆಳೆಸಿದ ಈ ಸಂಸ್ಕೃತಿಯಲ್ಲಿ ಇದಕ್ಕಿಂತ ಉತ್ತಮ ಸಮಾಜ ನಿರ್ಮಾಣ ವಾಗುವಂತಿಲ್ಲ ''ದಿಲ್ ಆಯ ಗಧಿ ಪರ ತೊ ಪರಿ ಕ್ಯಾ ಚೀಜ್ ಹಾಯ್'' ಎಂಬ ಗಾದೆಯ ಎದುರು
    ಧರ್ಮ ಜಾತಿ ಗಳಿಗೆ ಯಾವ ಬೆಲೆ. ಇದಕ್ಕೂ ಮುಸ್ಲಿಮರನ್ನು ಟೀಕಿಸುವುದು ಸರಿಯಲ್ಲ.
    ಆದುದರಿಂದ ಎಲ್ಲರೂ ಸೇರಿ ದ್ವೇಷವನ್ನು ಬಿಟ್ಟು ಪ್ರೀತಿಯಿಂದ ಮತ್ತೊಮ್ಮೆ ಆದರ್ಶ ಸಮಾಜದ ರಚನೆಗಾಗಿ ಮುಂದಾಗಬೇಕಲ್ಲದೆ, ಪರಸ್ಪರ ವಿಷ ಕಾರುತ್ತ, ನಂಜು ಉಗುಳುತ್ತ, ಲೇವಡಿ ಮಾಡುತ್ತಾ ಹೊಡೆದಾಟ ಬಡಿದಾಟಕ್ಕೆ ರಂಗ ರಚಿಸುವಂತಾಗಬಾರದು

    ReplyDelete