Thursday 17 July 2014

ಸರೋಜ, ಮುರುಗೇಸನ್, ಸೆಲ್ವಿ ಮತ್ತು ನಾವು

    ಕಳೆದ ಜೂನ್ 28ರಂದು ಚೆನ್ನೈನ ವಡಗಿರಿಯಲ್ಲಿ 11 ಅಂತಸ್ತುಗಳ ನಿರ್ಮಾಣ ಕಟ್ಟಡವೊಂದು ಕುಸಿದು ಬಿದ್ದು 61 ಮಂದಿ ಸಾವಿಗೀಡಾದ ಘಟನೆಯ ಸುತ್ತ ತಮಿಳುನಾಡು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾಗಲೇ ಬೇಬಿ ಸರೋಜ ಅನ್ನುವ 75 ವರ್ಷದ ಅಜ್ಜಿ ಆ ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ನಿಜವಾಗಿ, ವಡಗಿರಿಯಲ್ಲಿ ಕಟ್ಟದ ಕುಸಿದ ಅದೇ ಸಂದರ್ಭದಲ್ಲೇ ದೆಹಲಿಯಲ್ಲೂ 4 ಅಂತಸ್ತುಗಳ ಕಟ್ಟಡ ಕುಸಿದಿತ್ತು. 11 ಮಂದಿ ಸಾವಿಗೀಡಾಗಿದ್ದರು. ಆದ್ದರಿಂದಲೇ, ಈ ಎರಡು ದುರಂತಗಳು ಮತ್ತು ಆಯಾ ಸರಕಾರಗಳು ಕೈಗೊಂಡ ಕ್ರಮಗಳನ್ನು ತುಲನೆ ಮಾಡಿ ಮಾಧ್ಯಮಗಳು ಚರ್ಚಿಸಿದುವು. ದೆಹಲಿಯಲ್ಲಿ ಜನರು ಪ್ರತಿಭಟನೆ ನಡೆಸುವವರೆಗೆ ವ್ಯವಸ್ಥೆ ಮೌನವಾಗಿತ್ತು. ಆ ಬಳಿಕ ಮುಖ್ಯ ಇಂಜಿನಿಯರ್‍ನನ್ನು ಅಮಾನತು ಮಾಡಿತು. ಆದರೆ, ತಮಿಳುನಾಡು ಶೀಘ್ರ ಎಚ್ಚೆತ್ತುಕೊಂಡಿತು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ತನಿಖೆಗೆ ಆದೇಶಿಸಿತು. ಕಟ್ಟಡದ ಮಾಲಕ, ಇಂಜಿನಿಯರ್, ವಿನ್ಯಾಸಕಾರರೂ ಸೇರಿ 6 ಮಂದಿಯನ್ನು ಬಂಧಿಸಿತು. ಆದರೆ ಅಜ್ಜಿ ಯಾವಾಗ ಚರ್ಚೆಯ ವ್ಯಾಪ್ತಿಯೊಳಗೆ ಪ್ರವೇಶಿಸಿದರೋ ದುರಂತಗಳಿಗಿರುವ ಇನ್ನಷ್ಟು ಮುಖಗಳೂ ಅನಾವರಣಗೊಂಡವು. ಸಾವಿಗೀಡಾದವರಲ್ಲಿ ಅಜ್ಜಿಯ ಮಗ ಮುರುಗೇಸನ್ ಕೂಡ ಒಬ್ಬನಾಗಿದ್ದ. ಸೊಸೆ ಸೆಲ್ವಿಯಂತೂ ಗಂಡನನ್ನೂ ಅತ್ತೆಯನ್ನೂ ತ್ಯಜಿಸಿ 6 ವರ್ಷಗಳ ಹಿಂದೆಯೇ ತವರು ಮನೆ ಸೇರಿದ್ದಳು. ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದುದು ಮಗನೇ. ಆದರೆ ದುರಂತವು ಅಜ್ಜಿಯನ್ನು ಒಂಟಿಯಾಗಿಸಿತು. ಆದ್ದರಿಂದ ತನ್ನ ಸೊಸೆಗೆ ರಾಜ್ಯ ಸರಕಾರವು ಕೊಟ್ಟಿರುವ 7 ಲಕ್ಷ  ರೂಪಾಯಿ ಪರಿಹಾರ ಧನವನ್ನು ತನಗೆ ನೀಡುವಂತೆ ಆದೇಶಿಸಬೇಕೆಂದು ಆಕೆ ಹೈಕೋರ್ಟ್ ಮೆಟ್ಟಲೇರಿದ್ದರು.
 ನಿಜವಾಗಿ, ಸರೋಜ, ಸೆಲ್ವಿ ಮತ್ತು ಮುರುಗೇಸನ್ ಎಂಬುದು ಮೂರು ವ್ಯಕ್ತಿತ್ವಗಳಷ್ಟೇ ಅಲ್ಲ, ಈ ಸಮಾಜದ ದುರಂತ ಕಥನಗಳ ವಿವಿಧ ಪಾತ್ರಧಾರಿಗಳು ಕೂಡ. ಈ ಸಮಾಜದಲ್ಲಿ ಮುರುಗೇಸನ್‍ರಂತಹ ಮಕ್ಕಳು ಇರುವಂತೆಯೇ ಸೆಲ್ವಿಯಂಥ ಸೊಸೆಯಂದಿರೂ ಇದ್ದಾರೆ. ಇಳಿ ಪ್ರಾಯದಲ್ಲಿ ಆಸರೆಗಾಗಿ ಅಲೆಯುವ ಸರೋಜರಂಥ ತಾಯಂದಿರೂ ಇದ್ದಾರೆ. ಇದಕ್ಕೆ ವ್ಯತಿರಿಕ್ತ ಪಾತ್ರಗಳೂ ಇವೆ. ಒಳ್ಳೆಯ ಸೆಲ್ವಿ, ನೆಮ್ಮದಿಯಿಂದಿರುವ ಸರೋಜ ಮತ್ತು ಪೀಡಿಸುವ ಮುರುಗೇಸನ್‍ರೂ ಸಮಾಜದಲ್ಲಿದ್ದಾರೆ. ಒಂದು ರೀತಿಯಲ್ಲಿ, ಚೆನ್ನೈನಲ್ಲಿ ಕುಸಿದು ಬಿದ್ದದ್ದು ಒಂದು ಕಟ್ಟವಾದರೂ ಅವರ ಅವಶೇಷಗಳಡಿಯಲ್ಲಿ ದೊರಕಿರುವುದು 61 ಶವಗಳಷ್ಟೇ ಅಲ್ಲ, ಅನೇಕಾರು ಮಂದಿಯ ಜೀವನ ಕಥನಗಳೂ ಕೂಡ. ಬಿರುಕು ಬಿಡುತ್ತಿರುವ ಕೌಟುಂಬಿಕ ಸಂಬಂಧಗಳ ದೊಡ್ಡದೊಂದು ಕತೆಯೇ ಆ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರಬಹುದು. ನೆಮ್ಮದಿಯಿಂದಿದ್ದ ಕುಟುಂಬವೊಂದರ ಸುಂದರ ಕತೆ ಸಮಾಧಿಯಾಗಿರಬಹುದು. ಸಂಜೆ ಚಾಕಲೇಟು ತರುವ ಅಪ್ಪನನ್ನು ಕಾದು ಕುಳಿತ ಮಗಳ ಹೃದಯ ವಿದ್ರಾವಕ ಕಣ್ಣೀರು ಸಮಾಧಿಯಾಗಿರಬಹುದು. ಅಂದಹಾಗೆ, ದುರಂತದ ತೀವ್ರತೆ ಕೇವಲ ಮೃತದೇಹಗಳನ್ನು ಎಣಿಸುವುದರಲ್ಲಷ್ಟೇ ಇರುವುದಲ್ಲ. ಮೃತದೇಹಗಳೆಂಬುದು ಒಂದು ಸಂಕೇತ ಮಾತ್ರ. ಆ ಸಂಕೇತದ ಹಿಂದೆ ಕತೆ, ಉಪಕತೆಗಳಿರುತ್ತವೆ. ಆ  ದುರಂತವನ್ನೂ ವಿೂರಿದ ದುರಂತ ಸಂಗತಿಗಳು ಆ ಸಂಕೇತಗಳ ಜೊತೆಗಿರುತ್ತವೆ. ಆದ್ದರಿಂದಲೇ, ದುರಂತಗಳು ಸಮಾಜವನ್ನು ಭಾವುಕಗೊಳಿಸುವುದು. ಮೃತಪಟ್ಟವರಿಗಾಗಿ ದುಃಖಿಸುತ್ತಲೇ ಅವರನ್ನು ಆಶ್ರಯಿಸಿದವರಿಗಾಗಿ ಕಣ್ಣೀರಾಗುವುದು.  
   ಇವತ್ತಿನ ಆಧುನಿಕ ಸಮಾಜದಲ್ಲಿ  ಸರೋಜ ಒಂಟಿಯಲ್ಲ. ಇಂಥ ಅಸಂಖ್ಯ ಸರೋಜರೂ ಸಮಾಜದ ಭಾಗವಾಗಿ ಬದುಕುತ್ತಿದ್ದಾರೆ. ದುಡಿದೂ ದುಡಿದೂ ತಾಯಿಯನ್ನು ಸಾಕುವ ಮಗ ಮತ್ತು ಮಗನ ಆಶ್ರಯದಲ್ಲಿ ನೆಮ್ಮದಿಯಾಗಿರುವ ತಾಯಿ ಇಂಥ ಸುಂದರ ದೃಶ್ಯಗಳು ಕಡಿಮೆಯಾಗತೊಡಗಿವೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ ಪ್ರಕರಣಗಳು ಸಾಮಾನ್ಯ ಅನ್ನಿಸುವಷ್ಟು ವ್ಯಾಪಕಗೊಳ್ಳುತ್ತಿವೆ. ದಪ್ಪಗಿರುವ ಪತ್ನಿಗೆ ವಿಚ್ಛೇದನ ಕೋರುವ ಪತಿ, ಒಡವೆಗಾಗಿ ಅಜ್ಜಿಯನ್ನೇ ಕೊಲೆಗೈಯುವ ಮೊಮ್ಮಕ್ಕಳು, ಆಸ್ತಿಯ ಜಗಳದಲ್ಲಿ ಹೆತ್ತವರನ್ನೇ ಕಡೆಗಣಿಸುವ ಮಕ್ಕಳು... ಇಂಥವು ನಿತ್ಯ ಎಂಬಂತೆ ವರದಿಯಾಗುತ್ತಿವೆ. ಆಧುನಿಕ ಜೀವನ ಪದ್ಧತಿಗಳು, ಸೌಲಭ್ಯಗಳು ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನೂ ಬೀರುತ್ತಿವೆ. ಅವಿಭಕ್ತ ಕುಟುಂಬಗಳು ವಿಭಜನೆಗೊಂಡು ಅಣು ಕುಟುಂಬಗಳು ಆದದ್ದಷ್ಟೇ ಅಲ್ಲ, ಅಣು ಕುಟುಂಬಗಳೂ ನಿದ್ದೆ, ನೆಮ್ಮದಿ, ಸುಖ ಇಲ್ಲದ ತಾಣಗಳಾಗಿ ಬದಲಾಗುತ್ತಿವೆ. ವಿಚ್ಛೇದನವನ್ನು ಪಾಪ ಎಂದು ಬಲವಾಗಿ ನಂಬಿಕೊಂಡಿದ್ದ ಕಾಲ ಬದಲಾಗಿ ದೈಹಿಕ ಆಕಾರವೂ ವಿಚ್ಛೇದನಕ್ಕೆ ಕಾರಣ ಆಗುವಷ್ಟು ಸಹಜ ಅನ್ನಿಸಿಕೊಂಡುಬಿಟ್ಟಿದೆ. ಪತಿ-ಪತ್ನಿ ಸಂಬಂಧ ದೈಹಿಕ ಆಕರ್ಷಣೆಗಿಂತ ಅಚೆ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳಾಗಿ ಮಾರ್ಪಡುತ್ತಿಲ್ಲ. ಆಧುನಿಕ ಜಗತ್ತಿನಲ್ಲಿ ಭ್ರಮೆಗಳ ಹಿಂದೆ ನಾವೆಷ್ಟು ವೇಗವಾಗಿ ಸಾಗುತ್ತಿದ್ದೇವೆ ಎಂದರೆ ಆ ವೇಗಕ್ಕೆ ಹೊಂದಿಕೊಳ್ಳಲು ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ. ಪತಿ, ಪತ್ನಿ ಮತ್ತು ಮಕ್ಕಳು ಮಾತ್ರ ಹೊಂದಿಕೊಳ್ಳಬಲ್ಲ ವೇಗದೊಂದಿಗೆ ಆಧುನಿಕ ಜಗತ್ತಿನ ಯುವ ಪೀಳಿಗೆಗಳು ಬದುಕುನ್ನು ಸಾಗಿಸುತ್ತಿವೆ. ಈ ವೇಗ ಅಥವಾ ಜೀವನ ಕ್ರಮಗಳು ಹೆತ್ತವರನ್ನು ನಿರಾಶೆಗೆ ತಳ್ಳಬಹುದು  ಅನ್ನುವ ಆಲೋಚನೆಯನ್ನೂ ಅವರು ಮಾಡುತ್ತಿಲ್ಲ. ಅತ್ತ ತಾನು, ಪತ್ನಿ, ಮಕ್ಕಳು ಎಂಬ ಪುಟ್ಟ ದೋಣಿಯಲ್ಲಿ ಜೀವನದ ಖುಷಿಯನ್ನು ಹುಡುಕುತ್ತಾ ಸಾಗುವಾಗ, ಇತ್ತ ಸರೋಜರಂಥ ಹೆತ್ತವರು ಆ ದೋಣಿಯಲ್ಲಿ ಜಾಗ ಸಿಗಬಹುದೇ ಎಂದು ಆತಂಕದಿಂದ ಕಾಯುತ್ತಿರುತ್ತಾರೆ. ಆದ್ದರಿಂದ, ಚೆನ್ನೈನ ದುರಂತವು ಕೇವಲ ಮೃತಪಟ್ಟವರ ಸಂಖ್ಯೆ, ಕಟ್ಟಡ ನಿರ್ಮಾಣದಲ್ಲಾದ ಲೋಪ-ದೋಷಗಳು ಮತ್ತು ಕಾರ್ಮಿಕರ ಜೀವದ ಬಗ್ಗೆ ತೋರಲಾದ ನಿರ್ಲಕ್ಷ್ಯತೆಯ ಸುತ್ತ ಚರ್ಚಿಸುವುದಕ್ಕಷ್ಟೇ ಸೀಮಿತವಾಗಬಾರದು. ಆ ಚರ್ಚೆಯಲ್ಲಿ ಸರೋಜ, ಸೆಲ್ವಿ ಮತ್ತು ಮುರುಗೇಸನ್‍ರೂ ಒಳಗೊಳ್ಳಬೇಕು. ಆ ಮುಖಾಂತರ ಈ ಸಮಾಜದಲ್ಲಿರುವ ಇಂತಹ ಅಸಂಖ್ಯ  ಮಂದಿಯ ಬಗ್ಗೆ ಕಣ್ಣು ತೆರೆಸುವ ಗಂಭೀರ ಸಂವಾದಗಳು ನಡೆಯಬೇಕು. 75ರ ಅಜ್ಜಿ ಪರಿಹಾರದ ಹಣವನ್ನು ಯಾಚಿಸಿ ಕೋರ್ಟಿಗೆ ಅಲೆಯುವುದು ಬರೇ ಸುದ್ದಿಯಷ್ಟೇ ಅಲ್ಲ, ಅದು ದುರಂತ ಪ್ರಕರಣದ ಇನ್ನೊಂದು ದುರಂತ ಮುಖ. ಇಂಥ ಮುಖಗಳು ಮತ್ತು ಅವು ಸಾರುವ ದುಃಖದಾಯಕ ಕತೆಗಳು ಈ ದೇಶದ ಮನೆಗಳಲ್ಲಿ ಧಾರಾಳ ಸಂಖ್ಯೆಯಲ್ಲಿವೆ. ಅವುಗಳಲ್ಲಿ ಸರೋಜಾರಿಗಿಂತ ಕ್ರೂರವಾದ ಕತೆಗಳೂ ಅಸಂಖ್ಯ ಇರಬಹುದು. ಅಂಥ ಕತೆಗಳು ಧಾರಾವಾಹಿಗಳಂತೆ ಇನ್ನಷ್ಟು ಬೆಳೆಯಬಾರದು. ಕೌಟುಂಬಿಕ ಸಂಬಂಧಗಳು ಸುದೃಢಗೊಳ್ಳುವ ಮತ್ತು ಹೆಚ್ಚು ಮಾನವೀಯಗೊಳ್ಳಬೇಕಾದ ತುರ್ತು ಸಂದರ್ಭದಲ್ಲಿ ನಾವಿದ್ದೇವೆ. ದುಡ್ಡು, ಸಂಪತ್ತು, ಸೌಲಭ್ಯಗಳೆಲ್ಲ ನೆಮ್ಮದಿಯ ಸಂಕೇತಗಳೇನೂ ಅಲ್ಲ. ನೆಮ್ಮದಿಯು ಈ ಎಲ್ಲ ಸೌಲಭ್ಯಗಳಾಚೆಗೆ ಮಾನವೀಯ ಸಂಬಂಧಗಳಲ್ಲಿದೆ. ಆ ಸಂಬಂಧಗಳನ್ನು ಬಲಪಡಿಸದ ಹೊರತು ಕಟ್ಟಡಗಳನ್ನು ಬಲಪಡಿಸುವುದರಿಂದ ಸರೋಜರಂಥ ತಾಯಂದಿರ ನೋವುಗಳಿಗೆ ಮುಲಾಮು ಹಚ್ಚಲು ಸಾಧ್ಯವಿಲ್ಲ. ಮಾತ್ರವಲ್ಲ, ಅವರಂಥವರ ಗಾಯ ಒಣಗದ ಹೊರತು ಕಟ್ಟಡಗಳು ಎಷ್ಟೇ ಗಟ್ಟಿಯಾದರೂ ಅವು ನೆಮ್ಮದಿ ನೀಡಲು ಸಾಧ್ಯವಿಲ್ಲ.

No comments:

Post a Comment