
ಮುಹಮ್ಮದ್ ಅಲಿ ಜಿನ್ನಾಗಿಂತ ಮೊದಲೇ ದ್ವಿ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಆರೆಸ್ಸೆಸ್. ಈ ಕುರಿತಂತೆ ದೇಶದಲ್ಲಿ ಧಾರಾಳ ಚರ್ಚೆಗಳು ಈಗಾಗಲೇ ನಡೆದಿವೆ. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಆರೋಪ ಸಾವರ್ಕರ್ ಮೇಲಿದೆ. ಹಿಟ್ಲರ್ ಮತ್ತು ಮುಸ್ಸೋಲಿನಿಯಿಂದ ಆರೆಸ್ಸೆಸ್ ಪ್ರಭಾವಿತವಾಗಿರುವುದನ್ನು ಮತ್ತು ಅವರದೇ ಜನಾಂಗೀಯ ಸಿದ್ಧಾಂತವನ್ನು ಅದು ಭಾರತಕ್ಕೆ ಹೊಂದಿಸಿಕೊಂಡು ಪ್ರತಿಪಾದಿಸುತ್ತಿರುವುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲದಷ್ಟು ಇವತ್ತು ಸ್ಪಷ್ಟವಾಗಿದೆ. ಇದರ ನಾಯಕರು ಇಟಲಿಗೆ ತೆರಲಿ ಮುಸೋಲಿನಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆತನ ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕಡ ತಂದು ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದಾರೆ. ಗಾಂಧೀಜಿಯವರನ್ನು ಕೊಂದ ಆರೋಪವನ್ನು ಹೊತ್ತುಕೊಂಡಿರುವುದೂ ಇದೇ ಆರೆಸ್ಸೆಸ್. ಆ ಕಾರಣಕ್ಕಾಗಿಯೇ ಅದು ನಿಷೇಧಕ್ಕೂ ಒಳಪಟ್ಟಿತು. ಆರೆಸ್ಸೆಸ್ನ ಸ್ವಾತಂತ್ರ್ಯಪೂರ್ವ ಇತಿಹಾಸವೇ ಇಷ್ಟು ಉಜ್ವಲವಾಗಿರುವಾಗ ಇನ್ನು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ವಿವರವಾಗಿ ಮಂಡಿಸಬೇಕಿಲ್ಲವಲ್ಲ. ಲಕ್ಷಕ್ಕಿಂತಲೂ ಅಧಿಕ ಶಾಖೆಗಳಿರುವ ಮತ್ತು 60ಕ್ಕಿಂತಲೂ ಅಧಿಕ ಉಪ ಸಂಘಟನೆಗಳನ್ನು ಹೊಂದಿರುವ ಆರೆಸ್ಸೆಸ್, ಹಿಂದೂ ರಾಷ್ಟ್ರ ಕಲ್ಪನೆಯೊಂದಿಗೆ ಹುಟ್ಟಿಕೊಂಡಿದೆ. ಈ ರಾಷ್ಟ್ರ ಕಲ್ಪನೆ ಎಷ್ಟು ಅಪಾಯಕಾರಿಯೆಂದರೆ, ಈ ಹಿಂದೂ ರಾಷ್ಟ್ರದಲ್ಲಿ ಸರ್ವರೂ ಸಮಾನರಲ್ಲ. ಮುಸ್ಲಿಮರು, ಕ್ರೈಸ್ತರೆಲ್ಲ ಇಲ್ಲಿ ದ್ವಿತೀಯ ದರ್ಜೆಯ ನಾಗರಿಕರು. ಆರ್ಯ ಜನಾಂಗೀಯ ಮೇಲ್ಮೆಯನ್ನು ಬಹಿರಂಗವಾಗಿ ಇವತ್ತು ಅದು ಪ್ರತಿಪಾದಿಸದಿದ್ದರೂ ಆಂತರಿಕವಾಗಿ ಅದರ ನಡೆ-ನುಡಿಗಳು ಅದನ್ನೇ ಬಿಂಬಿಸುತ್ತವೆ ಎಂದು ಹೇಳಲಾಗುತ್ತದೆ. ಈ ದೇಶದ ದಲಿತ, ಕೊರಗ, ದುರ್ಬಲ, ಆದಿವಾಸಿ ಜನಾಂಗಗಳ ಆರಾಧನಾ ಪದ್ಧತಿಯನ್ನು ಮತ್ತು ಆರಾಧ್ಯರನ್ನು ಅನಾಮತ್ತಾಗಿ ಆಪೋಶನ ಪಡಕೊಂಡ ಮತ್ತು ಪಡಕೊಳ್ಳುತ್ತಿರುವ ಆರೋಪವೂ ಆರೆಸ್ಸೆಸ್ನ ಮೇಲಿದೆ. ವರ್ಣಾಶ್ರಮವನ್ನು ವೃತ್ತಿಸೂಚಕವೆಂದು ವ್ಯಾಖ್ಯಾನಿಸುತ್ತಾ ಯಾರಿಗೆ ಬೇಕಾದರೂ ಬ್ರಾಹ್ಮಣನಾಗಬಹುದು ಎಂದು ಅದು ಸಮರ್ಥಿಸಿಕೊಳ್ಳುತ್ತದೆ. ಆದರೆ ಅದರ ಲಕ್ಷಾಂತರ ಶಾಖೆಗಳಲ್ಲಿ ಒಬ್ಬನೇ ಒಬ್ಬ ದಲಿತನನ್ನಾದರೂ ಬ್ರಾಹ್ಮಣನಾಗಿ ಪರಿವರ್ತಿಸಲಾಗಿದೆಯೇ ಎಂಬ ಪ್ರಗತಿಪರರ ಪ್ರಶ್ನೆಗೆ ಈ ವರೆಗೂ ಅದರಿಂದ ಸಮರ್ಪಕ ಉತ್ತರ ಬಂದೇ ಇಲ್ಲ. ನಾಲ್ಕೈದು ತಿಂಗಳ ಹಿಂದಷ್ಟೇ ಅದು ಮೀಸಲಾತಿಯ ವಿರುದ್ಧ ಮಾತಾಡಿತ್ತು. ದಲಿತ ಸಮುದಾಯದ ಆಹಾರ ಪದ್ಧತಿಯನ್ನು ದೈವವಿರೋಧಿಯಾಗಿ ಬಣ್ಣಿಸಿ ನಿಷೇಧ ಹೇರಲು ಒತ್ತಾಯಿಸುತ್ತಿರುವುದೂ ಈ ಸಂಘಟನೆಯೇ. ಈ ದೇಶದಲ್ಲಿ ನಡೆದ ಹೆಚ್ಚಿನೆಲ್ಲ ಹತ್ಯಾಕಾಂಡಗಳ ಕುರಿತಂತೆ ಆರೆಸ್ಸೆಸ್ಸನ್ನು ಆರೋಪಿ ದೃಷ್ಟಿಯಿಂದಲೇ ನೋಡಲಾಗುತ್ತಿದೆ. ಅದರ ಗರಡಿಯಲ್ಲಿ ಪಳಗಿದ ರಾಜಕೀಯ ಅಥವಾ ಸಾಮಾಜಿಕ ನಾಯಕರು ಪ್ರತಿ ಸಂದರ್ಭದಲ್ಲೂ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿಯೇ ಮಾತಾಡುತ್ತಾರೆ. ಮುಸ್ಲಿಮರನ್ನು ತುಚ್ಛೀಕರಿಸುತ್ತಾರೆ. ಸಮ್ಜೋತಾ ಎಕ್ಸ್ ಪ್ರೆಸ್, ಮಕ್ಕಾ, ಮಾಲೆಗಾಂವ್ ಮುಂತಾದ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೂ ಆರೆಸ್ಸೆಸ್ಗೂ ನಂಟಿದೆ ಎಂದು ಅನೇಕ ಬಾರಿ ಈ ದೇಶದ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಒಂದು ರೀತಿಯಲ್ಲಿ, ಆರೆಸ್ಸೆಸ್ ತನ್ನ ಹುಟ್ಟಿನಿಂದ ಈವತ್ತಿನವರೆಗೂ ಇಬ್ಬಗೆಯ ನೀತಿಯನ್ನು ಅಳವಡಿಸುತ್ತಲೇ ಬಂದಿದೆ. ಕನ್ಹಯ್ಯಾ ಕುಮಾರ್ನನ್ನು ದೇಶದ್ರೋಹಿ ಎಂದು ಕರೆದಿರುವ ಇದೇ ಸಂಘಟನೆ ಶ್ರೀಶ್ರೀ ರವಿಶಂಕರ್ ಅವರ 'ಪಾಕಿಸ್ತಾನ್ ಜಿಂದಾಬಾದ್'ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಅದು ನ್ಯಾಯವನ್ನು ಪ್ರತಿಪಾದಿಸುವ ಪ್ರತಿ ಸಂದರ್ಭದಲ್ಲೂ ತನ್ನವರು ಮತ್ತು ಇತರರು ಎಂಬ ಮಾನದಂಡವನ್ನು ಸದಾ ಪಾಲಿಸುತ್ತಲೇ ಬಂದಿವೆ.
ಅದು ಪ್ರತಿಪಾದಿಸುವ ದೇಶಪ್ರೇಮ, ಸಂಸ್ಕೃತಿ, ಧರ್ಮ, ನಾಗರಿಕತೆ, ಸ್ವಾತಂತ್ರ್ಯ ಮುಂತಾದ ಎಲ್ಲದಕ್ಕೂ ನಾವು ಕಲ್ಪಿಸಿಕೊಂಡಿರುವ ಮತ್ತು ಸಂವಿಧಾನ ಕೊಡಮಾಡಿರುವ ಅರ್ಥಕ್ಕಿಂತ ಭಿನ್ನವಾದದ್ದೊಂದು ಆಯಾಮವಿದೆ. ಬಾಹ್ಯನೋಟಕ್ಕೆ ಅದು ಭಾರತೀಯ ಸಂಸ್ಕೃತಿ ಎಂದು ಹೇಳುತ್ತಿದ್ದರೂ ಆಂತರಿಕವಾಗಿ ಆ ಸಂಸ್ಕೃತಿ ಪೂರ್ಣವಾಗಿ ಆರ್ಯನ್ ಸಂಸ್ಕೃತಿಯ ಕುರಿತಾಗಿರುವುದಾಗಿ ಅದರ ಒಳಹೊಕ್ಕು ಹೊರಬಂದ ನಾಯಕರು ಬಹಿರಂಗಪಡಿಸುತ್ತಿರುತ್ತಾರೆ. ಆರೆಸ್ಸೆಸ್ನ ಈ ಒಳಗೊಂದು ಹೊರಗೊಂದು ನೀತಿಯೇ ಅದರ ಮೇಲೆ ಸಾರ್ವಜನಿಕ ಗುಮಾನಿಯನ್ನು ಹೆಚ್ಚಿಸಿದೆಯೆಂದು ಖಂಡಿತ ಹೇಳಬಹುದು. ಆರೆಸ್ಸೆಸ್ ತೀರಾ ಸಾಧುವಲ್ಲ. ಅದು ಸರ್ವ ಸಮಾನತೆಯ ಪ್ರತಿಪಾದಕವೂ ಅಲ್ಲ. ಅದು ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಕಳೆದ 90 ವರ್ಷಗಳಲ್ಲಿ ಅದರ ಮೇಲೆ ಕೇಳಿ ಬಂದಿರುವ ದೂರು ಹಾಗೂ ಅದರ ಕಾರ್ಯಕರ್ತರು ಮತ್ತು ನಾಯಕರ ನಡವಳಿಕೆಗಳು ಅದು ಖಾಕಿ ಚಡ್ಡಿಯಿಂದ ಕಂದು ಬಣ್ಣಕ್ಕೆ ಸಮವಸ್ತ್ರ ಬದಲಿಸಿದಷ್ಟು ಅಹಿಂಸಾತ್ಮಕವಾದುದಲ್ಲ. ಪ್ರತಿ ಹೆಜ್ಜೆಯಲ್ಲೂ ಅದರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಗುರುತುಗಳಿವೆ. ಆದ್ದರಿಂದ ಆರೆಸ್ಸೆಸ್ ಖಾಕಿಯಿಂದ ಕಂದುಬಣ್ಣಕ್ಕೆ ತಿರುಗುವುದರಿಂದ ಈ ಎಲ್ಲ ಕಳಂಕಗಳು ಕಳೆದು ಹೋಗುವುದಿಲ್ಲ. ತನ್ನ ಧೋರಣೆ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕೈಬಿಡದ ಹೊರತು ಉಡುಪಿನ ಬಣ್ಣ ಮತ್ತು ಉದ್ದಳತೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಂಘಟನೆಯ ಧೋರಣೆ ಬದಲಾಗದಿದ್ದರೆ ಚಡ್ಡಿಯೋ ಪ್ಯಾಂಟೋ ಖಾಕಿಯೋ ಕಂದೋ ಯಾವ ಬಣ್ಣವಾದರೇನು? ಅದರಿಂದ ಈ ದೇಶಕ್ಕೆ ಆಗುವ ಲಾಭವೇನು? ಮೊದಲು ಅದರ ಧೋರಣೆ ಬದಲಾಗಲಿ. ಬಳಿಕ ‘ಬಣ್ಣ'ವನ್ನು ಬದಲಾಯಿಸಿಕೊಳ್ಳಲಿ.
No comments:
Post a Comment