ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಸಲಹಾ ಸಮಿತಿಯ ಸದಸ್ಯರಾಗಿ, ಸನ್ಮಾರ್ಗ, ಅನುಪಮ ಮತ್ತು ಶಾಂತಿ ಪ್ರಕಾಶನಗಳ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿ, ಹಿರಾ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ, ಜಮಾಅತ್ ಮಂಗಳೂರು ಸ್ಥಾನೀಯ ಘಟಕವನ್ನು 2 ದಶಕಗಳ ಕಾಲ ಮುನ್ನಡೆಸಿ, ಬಡ್ಡಿರಹಿತ ಬ್ಯಾಂಕಿಂಗ್ ವ್ಯವಸ್ಥೆಯಾದ ಕಾರುಣ್ಯದ ಬೆನ್ನೆಲುಬಾಗಿ ಮತ್ತು ಹತ್ತು ಹಲವು ಬಡವರು ಮತ್ತು ದುರ್ಬಲರಿಗೆ ಆಸರೆಯಾಗಿದ್ದ ಶರೀಫ್ ಸಾಬ್ ಅವರು ಪತ್ರಕರ್ತರೂ ಆಗಿರಲಿಲ್ಲ. ಪದವಿಗಳ ಮೇಲೆ ಪದವಿಗಳನ್ನು ಪಡೆದ ಶಿಕ್ಷಣ ತಜ್ಞರೂ ಆಗಿರಲಿಲ್ಲ. ಹಲವು ಕೃತಿಗಳನ್ನು ರಚಿಸಿದ ಸಾಹಿತಿಯೂ ಆಗಿರಲಿಲ್ಲ. ಬಿರುದಾಂಕಿತ ಆರ್ಥಿಕ ತಜ್ಞರೂ ಆಗಿರಲಿಲ್ಲ. ಆದ್ದರಿಂದಲೇ ಅವರ ಸಾಧನೆ ಮಹತ್ವದ್ದಾಗುತ್ತದೆ. 85 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಇಹಲೋಕಕ್ಕೆ ವಿದಾಯ ಕೋರಿ ಹೊರಟು ಹೋಗುವಾಗ ಈ ಮೇಲೆ ಉಲ್ಲೇಖಿತವಾದವುಗಳ ಹೊರತಾಗಿ ಅವರ ಖಾತೆಗೆ ಸೇರಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.
ಒಮ್ಮೆ ಅವರು ಸನ್ಮಾರ್ಗ ಕಚೇರಿಯಾದ ಹಿದಾಯತ್ ಸೆಂಟರ್ನ ಕೂಗಳತೆಯ ದೂರದಲ್ಲಿರುವ ಕಚ್ಚೀ ಮೇಮನ್ ಮಸೀದಿಯಲ್ಲಿ ನಮಾಜ್ ನಿರ್ವಹಿಸಿ ಕಚೇರಿಗೆ ಬಂದು ಸಿಬಂದಿಯನ್ನು ಕರೆದರು. ನಾನು ಮಸೀದಿ ಪಕ್ಕದ ಬಾಂಬೆ ಹೊಟೇಲ್ಗೆ ಹೋಗಿದ್ದೆ. ಹೊರ ಬರುವಾಗ ಒಬ್ಬರು ಹೊಟೇಲ್ ಹೊರಗಡೆ ನಿಂತಿದ್ರು. ಹಸಿವಾಗ್ತಾ ಇದೆ ಎಂದರು. ನಾನು ಅನುಮಾನದಿಂದ ಸೀದಾ ಬಂದೆ. ಆದರೆ, ನನಗೀಗ ಆ ವ್ಯಕ್ತಿಯ ಹಸಿವು ನಿಜವೂ ಆಗಿರಬಹುದು ಎಂದು ಅನಿಸ್ತಾ ಇದೆ. ಆದ್ದರಿಂದ ನೀವೊಂದು ಕೆಲಸ ಮಾಡಬೇಕು. ಆ ವ್ಯಕ್ತಿಗೆ ಊಟ ಕೊಟ್ಟು ಮತ್ತು ಕಿಸೆಗೊಂದಿಷ್ಟು ಹಣ ಹಾಕಿ ಬರಬೇಕು ಎಂದು ಹೇಳಿ ದುಡ್ಡು ಕೊಟ್ಟರು. ವ್ಯಕ್ತಿ ಇಂತಿಂಥ ಬಣ್ಣದ ಶರ್ಟ್ ಮತ್ತು ಲುಂಗಿ ಉಟ್ಟಿದ್ದಾರೆ ಎಂದೂ ಹೇಳಿದರು. ನಿಜವಾಗಿ,
ಹಸಿದವರಿಗೆ ಉಣಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ಹಸಿದವನನ್ನು ಆ ಹೊಟೇಲ್ನಿಂದ ಕಚೇರಿಯವರೆಗೆ ಮನಸೊಳಗೆ ತುಂಬಿಕೊಂಡು ಪಾಪಭಾವದಿಂದ ತಳಮಳಗೊಳ್ಳುವವರು ಕಡಿಮೆ. ಇದಕ್ಕೆ ತಾಯಿ ಹೃದಯ ಅನ್ನುತ್ತೇವೆ. ಆ ವ್ಯಕ್ತಿಗೆ ಇವರು ಉಣಿಸದೇ ಇರುತ್ತಿದ್ದರೆ ಅಪರಾಧಿಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಹೀಗೆ ಹಸಿವು ಎಂದು ಹೇಳಿ ಯಾಮಾರಿಸುವವರೇ ಇವತ್ತು ಹೆಚ್ಚಿದ್ದಾರೆ ಮತ್ತು ಆ ವ್ಯಕ್ತಿ ಶರೀಫ್ ಸಾಬ್ರಿಗೆ ಪರಿಚಿತರೂ ಅಲ್ಲ. ಕುಟುಂಬಸ್ತರೂ ಅಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಅಲ್ಲೇ ಮರೆತು ಮುಂದೆ ಹೋಗಬಹುದಿತ್ತು. ಆದರೆ ತಾಯಿ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಅಂದಹಾಗೆ,
ಸನ್ಮಾರ್ಗ ಟ್ರಸ್ಟ್ ಗೆ ದೀರ್ಘಕಾಲ ಚೇರ್ಮನ್ ಆಗಿದ್ದವರು ಶರೀಫ್ ಸಾಬ್. 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಇಬ್ರಾಹೀಮ್ ಸಈದ್ ಸಂಪಾದಕರಾಗಿದ್ದರೆ, ಈ ಶರೀಫ್ ಸಾಬ್ ಅದರ ಬೆವರಾಗಿದ್ದರು. ಮುಸ್ಲಿಮರಲ್ಲಿ ಮುಖ್ಯವಾಗಿ ಕರಾವಳಿಯ ಮುಸ್ಲಿಮರಲ್ಲಿ ಕನ್ನಡ ಎಂಬುದು ‘ಅನ್ಯ’ ಭಾಷೆಯಾಗಿ ಮತ್ತು ಒಂದು ರೀತಿಯಲ್ಲಿ ಅಲಿಖಿತ ಬಹಿಷ್ಕಾರಕ್ಕೆ ಒಳಗಾದ ಭಾಷೆಯಾಗಿ ಮಾರ್ಪಟ್ಟಿದ್ದ ವೇಳೆ ಅದೇ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವುದೆಂದರೆ ಆಕಾಶಕ್ಕೆ ಏಣಿ ಇಟ್ಟಷ್ಟೇ ಸವಾಲಿನದ್ದು. ಒಂದು ಕಡೆ ಆರ್ಥಿಕ ಸವಾಲು ಎದುರಿದ್ದರೆ, ಕನ್ನಡದ ಬಗ್ಗೆ ಮುಸ್ಲಿಮರಲ್ಲಿರುವ ನಕಾರಾತ್ಮಕ ಭಾವ ಇನ್ನೊಂದು ಕಡೆಯಿತ್ತು. ಇದರ ಜೊತೆಗೆ ಕರಾವಳಿಯಿಂದ ಹೊರಬಂದು ರಾಜ್ಯದಾದ್ಯಂತ ಕನ್ನಡಿಗರಿಗೆ ಈ ಪತ್ರಿಕೆಯನ್ನು ತಲುಪಿಸಬೇಕಿತ್ತು. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಜನರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸುವುದು ಪತ್ರಿಕೆಯ ಗುರಿಯಾಗಿತ್ತು. ಇದರ ಜೊತೆಗೇ ಇಸ್ಲಾಮ್ನ ಹೆಸರಲ್ಲಿ ನಡೆಯುತ್ತಿದ್ದ ಹತ್ತು-ಹಲವು ತಪ್ಪು ಆಚರಣೆಗಳನ್ನು ತಿದ್ದುವುದೂ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ,
ಶರೀಫ್ ಸಾಬ್ರ ನೇತೃತ್ವದಲ್ಲಿದ್ದ ಉತ್ಸಾಹಿ ತಂಡ ಬರಹದ ಹೊಣೆಯನ್ನು ಸಂಪಾದಕೀಯ ಮಂಡಳಿಗೆ ವಹಿಸಿಕೊಟ್ಟು ಪತ್ರಿಕೆಯ ಪ್ರಸಾರ ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಸ್ವಯಂ ವಹಿಸಿಕೊಂಡಿತು. ಈ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವುದಕ್ಕಾಗಿ ಊರೂರು ಸುತ್ತಿತು. ಒಂದು ಕಡೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮತ್ತು ಇನ್ನೊಂದು ಕಡೆ ಪತ್ರಿಕೆ ನಿರಂತರ ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದ್ದರೆ ಅದರ ಹಿಂದೆ ಶರೀಫ್ ಸಾಬ್ರ ದೂರದೃಷ್ಟಿ, ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಪ್ರಾಮಾಣಿಕತೆಗೆ ಬಹುದೊಡ್ಡ ಪಾತ್ರವಿದೆ. ಅವರು ಹಿದಾಯತ್ ಸೆಂಟರನ್ನು ಅತಿಯಾಗಿ ಪ್ರೀತಿಸಿದ್ದರು. ವೇತನ ಆಗಿದೆಯೇ ಎಂದು ಸಿಬಂದಿಗಳಲ್ಲಿ ವಿಚಾರಿಸುವುದು ರೂಢಿಯಾಗಿತ್ತು. ಯಾವುದೇ ಸಂಸ್ಥೆ ನಿಂತ ನೀರಾಗಬಾರದು ಎಂಬುದು ಅವರ ನೀತಿಯಾಗಿತ್ತು. ಆದ್ದರಿಂದಲೇ,
ಆಧುನಿಕ ತಂತ್ರಜ್ಞಾನಗಳನ್ನು ಬಳಸುವಲ್ಲೂ ಮತ್ತು ಅದರ ಉಪಯೋಗದಿಂದ ಸಂಸ್ಥೆಯನ್ನು ವಿಸ್ತರಿಸುವಲ್ಲೂ ಅವರು ಮುಂಚೂಣಿ ವಕ್ತಾರರಾದರು. ಶಾಂತಿ ಪ್ರಕಾಶನದ ಪುಸ್ತಕಗಳನ್ನು ಊರೂರು ತಲುಪಿಸುವುದಕ್ಕಾಗಿ ಮೊಬೈಲ್ ಪುಸ್ತಕಾಲಯದ ಪರ ನಿಂತರು. ಸಣ್ಣದೊಂದು ಕಚೇರಿಗೆ ಸೀಮಿತಗೊಂಡಿದ್ದ ಬಡ್ಡಿರಹಿತ ಬ್ಯಾಂಕಿಂಗ್ ವ್ಯವಸ್ಥೆಗೆ ವಿಸ್ಟ್ರತ ರೂಪವನ್ನು ಕೊಟ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದರ ಪರ ನಿಂತರು. ಸಣ್ಣ ಕಟ್ಟಡದಲ್ಲಿ ಆರಂಭವಾಗಿದ್ದ ಹಿರಾ ಕಾಲೇಜನ್ನು ದ.ಕ. ಜಿಲ್ಲೆಯಲ್ಲೇ ಮಹತ್ವದ ಹಿರಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವಲ್ಲಿ ಅವರ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಪಾತ್ರ ಬಹಳ ಹಿರಿದು.
2019ರವರೆಗೆ ಬರೇ ಮುದ್ರಣ ಮಾಧ್ಯಮವಾಗಿಯಷ್ಟೇ ಗುರುತಿಸಿಕೊಂಡಿದ್ದ ಸನ್ಮಾರ್ಗವನ್ನು ಡಿಜಿಟಲ್ ಯುಗಕ್ಕೆ ಪರಿವರ್ತಿಸುವಲ್ಲೂ ಶರೀಫ್ ಸಾಬ್ ಮುಂಚೂಣಿ ಪಾತ್ರ ನಿರ್ವಹಿಸಿದರು. 2019ರಲ್ಲಿ ಸನ್ಮಾರ್ಗ ವೆಬ್ಪೋರ್ಟಲ್ ಪ್ರಾರಂಭಿಸಿದ್ದಲ್ಲದೇ, 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಲಾಯಿತು. ಎರಡು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಈ ಎರಡು ಮಹತ್ವದ ನಿರ್ಧಾರಗಳ ಹಿಂದೆ ಶರೀಫ್ ಸಾಬ್ ಇದ್ದರು. ನಿರಂತರ ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ಈ ಎರಡನ್ನೂ ಬೆಳೆಸುವಲ್ಲಿ ಅವರು ಕೊಡುಗೆಯನ್ನು ನೀಡಿದರು. ಇದರ ಜೊತೆಗೇ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಅಧಿಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೂ ಮತ್ತು ಯಶಸ್ವಿ ನಿರ್ವಹಣೆಗೂ ಮಾರ್ಗದರ್ಶಕರಾದರು. ಅಂದಹಾಗೆ,
ಮುಹಮ್ಮದ್ ಷರೀಫ್ ಎಂಬ ಸಾಮಾನ್ಯ ವ್ಯಕ್ತಿ ಈ ಮಟ್ಟದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ಓದಿನ ಪಾತ್ರ ಇದೆ. ಬಡತನ ಕಲಿಸಿದ ಪಾಠ ಇದೆ. ಉದ್ಯಮಕ್ಕೆ ಕೈ ಹಾಕುವ ಮೂಲಕ ಪಡೆದ ಸಾಹಸ ಪ್ರವೃತ್ತಿಯ ಅನುಭವವಿದೆ. ಮಗನನ್ನೇ ಕಳೆದುಕೊಳ್ಳುವಷ್ಟು ಅತೀವ ದುಃಖದ ಮತ್ತು ಮಕ್ಕಳು ಸ್ಥಿತಿವಂತರಾಗಿ ಪಡೆದ ಸುಖದ ಅನುಭವವೂ ಇದೆ. ಅವರು ಬಡತನದಲ್ಲಿ ಪಡೆದ ಪಾಠ ಅವರನ್ನು ಎಷ್ಟು ಉದಾರಿಯಾಗಿಸಿತೆಂದರೆ, ಬಳಿಕ ಅವರಿಂದ ಆರ್ಥಿಕ ಲಾಭ ಪಡೆದವರ ಸಂಖ್ಯೆ ಸಾಕಷ್ಟಿದೆ. ಅವರು ಕಿರಿಯರೊಂದಿಗೆ ಕಿರಿಯರಾಗಿ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ಹಿರಿಯ ಗುಂಪಿನಲ್ಲಿ ಅಷ್ಟೇ ಗಂಭೀರವಾಗಿಯೂ ನಡಕೊಳ್ಳುತ್ತಿದ್ದರು ಮತ್ತು ವ್ಯಕ್ತವಾದ ಅಭಿಪ್ರಾಯಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿಕೊಳ್ಳುವ ಮತ್ತು ಅದರ ಜಾರಿಗಾಗಿ ಕೊನೆತನಕವೂ ಶ್ರಮಪಡುವ ವಿಶೇಷ ಪ್ರತಿಭೆ ಅವರಲ್ಲಿತ್ತು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ ಚೇರ್ಮನ್ ಆಗಿದ್ದ ಕಾಲದಲ್ಲೂ ಮತ್ತು ಆ ಬಳಿಕವೂ ತನ್ನ ನಿಲುವನ್ನು ಸಂಪಾದಕೀಯ ಮಂಡಳಿಯ ಮೇಲೆ ಹೇರಿದವರಲ್ಲ. ಅದೇವೇಳೆ, ಸನ್ಮಾರ್ಗದ ಮೇಲೆ ಪ್ರಕರಣಗಳು ದಾಖಲಾದಾಗ ವಕೀಲರನ್ನು ನಿಯುಕ್ತಿಗೊಳಿಸುವುದರಿಂದ ಹಿಡಿದು ನ್ಯಾಯಾಲಯದ ವರೆಗೆ ಪ್ರತಿ ಹಂತದಲ್ಲೂ ಸಂಪಾದಕೀಯ ಮಂಡಳಿಯ ಜೊತೆಗೇ ಇದ್ದರು.
ಅವರೋರ್ವ ಅತ್ಯುತ್ತಮ ನಾಯಕ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಪ್ರತಿಭಾ ಪೋಷಕರಾಗಿದ್ದರು. 85 ವರ್ಷಗಳ ತುಂಬು ಜೀವನವನ್ನು ನಡೆಸಿ ವಿದಾಯ ಕೋರಿದಾಗ ನೆನಪಿಸಿಕೊಳ್ಳುವುದಕ್ಕೆ ಅವರು ಧಾರಾಳ ಒಳಿತುಗಳನ್ನು ಉಳಿಸಿ ಹೋಗಿದ್ದಾರೆ. ಅಲ್ಲಾಹನು ಶರೀಫ್ ಸಾಬ್ರಿಗೆ ಸ್ವರ್ಗವನ್ನು ದಯಪಾಲಿಸಲಿ. ಆಮೀನ್.
No comments:
Post a Comment