Tuesday 6 January 2015

ಪ್ರಜಾತಂತ್ರದ ಮೂಲಗುಣವನ್ನು ನಾಶಪಡಿಸುತ್ತಿರುವ ಮೋದಿ

   ಮನಮೋಹನ್ ಸಿಂಗ್‍ರನ್ನು ಮೌನಮೋಹನ ಎಂದು ಕರೆದು ಗೇಲಿ ಮಾಡಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಎಷ್ಟು ಮೌನವಾಗಿರುವರೆಂದರೆ, ಮೌನದಲ್ಲಿ ಮನಮೋಹನ್ ಸಿಂಗ್‍ರನ್ನೇ ವಿೂರಿಸಿದ್ದಾರೆ. ಅವರು ಪಾರ್ಲಿಮೆಂಟ್‍ನಲ್ಲಿದ್ದೂ ಮಾತಾಡುವುದಿಲ್ಲ. ಘರ್‍ವಾಪಸಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ವಾರಗಟ್ಟಲೆ ಪ್ರತಿಭಟನೆ ನಡೆಸಿಯೂ ಅವರು ಮೌನ ಮುರಿಯಲಿಲ್ಲ. ಯೋಗಿ ಆದಿತ್ಯನಾಥ್, ಸಾಧ್ವಿ ನಿರಂಜನ್, ಸಾಕ್ಷಿ ಮಹಾರಾಜ್, ಸುಶ್ಮಾ ಸ್ವರಾಜ್‍ರ ವಿವಾದಿತ ಹೇಳಿಕೆಗಳಿಗೂ ಅವರು ಪ್ರತಿಕ್ರಿಯಿಸಿಲ್ಲ. ಈ ನಡುವೆ ಇಡೀ ದೇಶವೇ ಗಂಭೀರ ಚರ್ಚೆಗೆ ಒಡ್ಡಬೇಕಾದ ಎರಡು ಮಸೂದೆಗಳನ್ನು ಮೋದಿಯವರು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದಾರೆ. 2013ರಲ್ಲಿ ಕಾಂಗ್ರೆಸ್ (ಯುಪಿಎ) ಸರಕಾರವು ರೈತರು ಮತ್ತು ಜವಿೂನು ಮಾಲಿಕರ ಹಿತಾಸಕ್ತಿ ಕಾಯುವ ಉದ್ದೇಶದಿಂದ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ, ಬಹುರಾಷ್ಟ್ರೀಯ ಕಂಪೆನಿಗಳೋ ಅಥವಾ ಇನ್ನಿತರ ಯಾವುದೇ ಉದ್ಯಮಿಗಳೋ ಭೂಸ್ವಾಧೀನವನ್ನು ಬಯಸುವುದಾದಲ್ಲಿ ರೈತನ ಅಥವಾ ಭೂಮಾಲಿಕನ ಒಪ್ಪಿಗೆ ಪಡೆಯಬೇಕಾಗಿತ್ತು. ಅಲ್ಲದೇ ಪರಿಹಾರ ನೀಡುವ ಸಂದರ್ಭದಲ್ಲಿ ಭೂಮಾಲಿಕರಿಗೆ ಮಾತ್ರವಲ್ಲ, ಅಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರು ಹಾಗೂ ಜವಿೂನನ್ನು ಆಶ್ರಯವನ್ನಾಗಿ ಮಾಡಿಕೊಂಡವರನ್ನೂ ಪರಿಗಣಿಸಬೇಕೆಂಬ ನಿಯಮ ಇತ್ತು. ಆದರೆ ಮೋದಿಯವರ ಹೊಸ ಕಾಯ್ದೆಯು ಈ ಎರಡೂ ಜನಪರ ನಿಯಮವನ್ನೇ ಕಿತ್ತು ಹಾಕಿದೆ. ಭೂಸ್ವಾಧೀನದ ಸಂದರ್ಭದಲ್ಲಿ ಮಾಲಿಕರು/ ರೈತರ ಒಪ್ಪಿಗೆಯ ಅಗತ್ಯವಿಲ್ಲ ಎಂದು ಮಾತ್ರವಲ್ಲ, ಅದು ಕೃಷಿ ಭೂಮಿಯಾಗಿದ್ದರೂ ಸ್ವಾಧೀನ ಪಡಿಸಬಹುದು ಎಂಬ ಜನವಿರೋಧಿ ವಿಧಿಯನ್ನು ಹೊಸ ಕಾಯ್ದೆಯಲ್ಲಿ ಸೇರಿಸಿಕೊಂಡಿದೆ. ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡುವ ನೆಪದಲ್ಲಿ ಕೃಷಿಕರನ್ನು ನಿರ್ಗತಿಕರನ್ನಾಗಿ ಮಾಡುವ ಈ ಹೊಸ ಕಾಯ್ದೆಯನ್ನು ಇನ್ನೂ ಪಾರ್ಲಿಮೆಂಟಿನಲ್ಲಿ ಮಂಡಿಸಿಯೇ ಇಲ್ಲ. ರೈತರನ್ನು ಬಲಿಕೊಟ್ಟು ಉದ್ಯಮಿಗಳನ್ನು ತೃಪ್ತಿಪಡಿಸುವ ಈ ಕಾಯ್ದೆಯು ಪಾರ್ಲಿಮೆಂಟಿನಲ್ಲಿ ಚರ್ಚೆಗೊಳಗಾಗದೇ ಮತ್ತು ಈ ಬಗ್ಗೆ ಮೋದಿಯವರಿಂದ ಯಾವ ವಿವರಣೆಯೂ ಪ್ರಕಟವಾಗದೆಯೇ ಜಾರಿಯಾಗಲು ಹೋಗುತ್ತಿರುವುದು ಸೂಚಿಸುವುದೇನನ್ನು? ಘರ್‍ವಾಪಸಿಯ ಕಾರಣದಿಂದ ಪಾರ್ಲಿಮೆಂಟ್ ಕಲಾಪ ನಡೆಯದಿರುವುದರಿಂದ ಸುಗ್ರೀವಾಜ್ಞೆಯ ಮೊರೆ ಹೋಗಬೇಕಾಯಿತು ಎಂದು ಬಿಜೆಪಿ ವಾದಿಸಬಹುದು. ಆದರೆ ಪಾರ್ಲಿಮೆಂಟ್ ಸ್ಥಗಿತಗೊಂಡದ್ದು ವಿರೋಧ ಪಕ್ಷಗಳ ಅಸಹಕಾರದಿಂದಲ್ಲ, ಮೋದಿಯವರ ಮೌನದಿಂದ. ಘರ್‍ವಾಪಸಿಯ ಹೆಸರಲ್ಲಿ ಸಂಘಫರಿವಾರವು ದೇಶದಾದ್ಯಂತ ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿರುವಾಗ ಮತ್ತು ಬಿಜೆಪಿಯ ಸಂಸದರೇ ಅದರ ಪರ ಬಹಿರಂಗ ಹೇಳಿಕೆ ಕೊಡುತ್ತಿದ್ದಾಗ ವಿರೋಧ ಪಕ್ಷಗಳು ಮೋದಿಯವರ ಸ್ಪಷ್ಟೀಕರಣವನ್ನು ಬಯಸುವುದು ಸಹಜವಾಗಿತ್ತು. ಆದರೆ ಆ ಇಡೀ ಪ್ರಕರಣದ ಸೂತ್ರದಾರ ಮೋದಿಯವರೇ ಏನೋ ಅನ್ನುವಷ್ಟರ ಮಟ್ಟಿಗೆ ಅವರು ಮೌನ ವಹಿಸಿದರು. ಪಾರ್ಲಿಮೆಂಟಿನ ಚಳಿಗಾಲದ ಅವಧಿ ಮುಗಿಯಲಿ ಎಂದು ಕಾಯುವಂತಿತ್ತು ಅವರ ನಡೆ. ಒಂದು ವೇಳೆ ಈ ಕಾಯ್ದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದರೆ ವಿವಾದಕ್ಕೀಡಾಗಬಹುದು ಮತ್ತು ಆ ಕಾರಣದಿಂದಾಗಿ ಮಾಧ್ಯಮಗಳಲ್ಲೂ ಚರ್ಚೆಗೀಡಾಗಿ ಸರಕಾರದ ವರ್ಚಸ್ಸು ಕುಂದಬಹುದು ಎಂಬ ಭಯವೂ ಅದರಲ್ಲಿ ಇದ್ದಂತಿತ್ತು. ಆದ್ದರಿಂದಲೇ, ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಬಲ್ಲ ಕಾಯ್ದೆಯೊಂದನ್ನು ಕದ್ದು ಮುಚ್ಚಿ ಜಾರಿಗೊಳಿಸಲು ಮುಂದಾಗಿದ್ದಾರೆ. ಸುಗ್ರೀವಾಜ್ಞೆ ಎಂಬುದು ತುರ್ತು ಸಂದರ್ಭದಲ್ಲಿ ಕಾಯ್ದೆಯೊಂದನ್ನು ಜಾರಿಗೊಳಿಸುವುದಕ್ಕಾಗಿ ಅಳವಡಿಸಿಕೊಂಡ ಪರ್ಯಾಯ ಮಾರ್ಗ. ಸಹಜ ಸಂದರ್ಭದಲ್ಲಿ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನೈತಿಕ ಮತ್ತು ಅಸಾಧುವಾಗುತ್ತದೆ.
 ಎಪ್ಪತ್ತರ ದಶಕದಲ್ಲಿ ಇಂದಿರಾಗಾಂಧಿಯವರು ತುರ್ತು ಸ್ಥಿತಿಯನ್ನು ಘೋಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಹೇಗೆ ನಡೆದುಕೊಂಡರೋ ಅದೇ ರೀತಿಯಲ್ಲಿ ಇವತ್ತು ಮೋದಿಯವರೂ ನಡಕೊಳ್ಳುತ್ತಿದ್ದಾರೆ. ಹೊರನೋಟಕ್ಕೆ ಅವರು ಮಾಧ್ಯಮ ಸ್ನೇಹಿಯಂತೆ ಕಾಣಬಹುದು. ಆದರೆ ಮಾಧ್ಯಮಗಳನ್ನು ಹತ್ತಿರಕ್ಕೂ ಅವರು ಬಿಟ್ಟುಕೊಳ್ಳುತ್ತಿಲ್ಲ. ಸರಕಾರದ ಕುರಿತಂತೆ ಮಾಧ್ಯಮಗಳಿಗೆ ಸಿಗಬಹುದಾದ ಎಲ್ಲ ಮಾಹಿತಿ ಒರತೆಗಳನ್ನೂ ಅವರು ಹತ್ತಿಕ್ಕುತ್ತಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ಅವರು ಮಾಧ್ಯಮಗಳನ್ನು ಹೊರಗಿಟ್ಟೆ ಬದುಕತೊಡಗಿದರು. ಮುಖ್ಯಮಂತ್ರಿಯಾಗಿ ಅವರು ನಡೆಸುತ್ತಿದ್ದ ಮತ್ತು ನಡೆಸಬೇಕಾಗಿದ್ದ ಪತ್ರಿಕಾಗೋಷ್ಠಿಗಳೇ ಬಳಿಕ ನಿಂತು ಹೋದುವು. ಅವರ ವಕ್ತಾರರಂತೂ ಬಾಯಿಪಾಠ ಮಾಡಿದವರಂತೆ ಮಾಧ್ಯಮಗಳಿಗೆ ಏನನ್ನು ಮತ್ತು ಎಷ್ಟನ್ನು ತಿಳಿಸಬೇಕೋ ಅಷ್ಟನ್ನೇ ಉಲಿದು ಎದ್ದು ಹೋಗತೊಡಗಿದರು. ಒಂದು ರೀತಿಯಲ್ಲಿ, ಅವರ ಮಾಧ್ಯಮ ಅಸ್ಪೃಶ್ಯ ನಿಲುವು ಅವರ ಸುತ್ತ ಕುತೂಹಲದ ಹುತ್ತವೊಂದನ್ನು ನಿಧಾನಕ್ಕೆ ನಿರ್ಮಿಸತೊಡಗಿತು. ಅವರ ಒಂದು ಸಂದರ್ಶನಕ್ಕೆ ಮಾಧ್ಯಮಗಳು ಹಾತೊರೆಯುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಿತು. ಇದೇ ವೇಳೆ, ತನ್ನ ವರ್ಚಸ್ಸನ್ನು ವೃದ್ಧಿಸುವುದಕ್ಕಾಗಿ ವಿದೇಶದ ದುಬಾರಿ ಜಾಹೀರಾತು ಸಂಸ್ಥೆಗಳನ್ನು ಅವರು ನೇಮಿಸಿಕೊಂಡರು. ಪ್ರಧಾನಿಯಾದ ಬಳಿಕವೂ ಮೋದಿ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟೇ ಮಣಿಸುವ ತಂತ್ರವನ್ನು ಅವರು ಅಳವಡಿಸಿಕೊಂಡಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆ ಮೂಲಕ ಮಾಧ್ಯಮ ವರ್ಗದಿಂದ ಎದುರಾಗಬಹುದಾದ ಇರಿಸು-ಮುರಿಸಿನ ಪ್ರಶ್ನೆಗಳಿಗೆ ಅವಕಾಶವನ್ನೇ ಕೊಡುತ್ತಿಲ್ಲ. ತನ್ನ ವಿಚಾರಗಳನ್ನು ಹೇಳಿಕೊಳ್ಳುವುದಕ್ಕೆ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಬಳಿ ಹೋಗದೇ ಟ್ವೀಟರ್, ಆಕಾಶವಾಣಿಯಂಥ ಪರ್ಯಾಯ ಮಾಧ್ಯಮಗಳನ್ನು ಅವರು ಬಳಸುತ್ತಿದ್ದಾರೆ. ನಿಜವಾಗಿ, ಪ್ರಧಾನಿ ಎಂದರೆ ಬಹುರಾಷ್ಟ್ರೀಯ ಕಂಪೆನಿಯ ಸಿಇಓ ಅಲ್ಲ. ಪ್ರಧಾನಿಗೆ ಉತ್ತರದಾಯಿತ್ವ ಇದೆ. ಜನಪ್ರತಿನಿಧಿಯೆಂಬ ನೆಲೆಯಲ್ಲಿ ಜನರ ಪ್ರಶ್ನೆ, ಅನುಮಾನಗಳಿಗೆ ಉತ್ತರಿಸಲೇಬೇಕಾದ ಹೊಣೆಗಾರಿಕೆಯಿದೆ. ಟ್ವಿಟರ್, ಆಕಾಶವಾಣಿ, ಸಾರ್ವಜನಿಕ ಕಾರ್ಯಕ್ರಮ ಮುಂತಾದುವುಗಳೆಲ್ಲ ಏಕಮುಖವಾದದ್ದು. ಕೇಳುಗರಿಗೆ ಅವರ ಅಭಿಪ್ರಾಯಗಳನ್ನು ಪ್ರಶ್ನಿಸುವ ಅವಕಾಶವೇ ಅಲ್ಲಿರುವುದಿಲ್ಲ. ಆದ್ದರಿಂದಲೇ, ಪತ್ರಿಕೆ ಮತ್ತು ಟಿ.ವಿ. ಮಾಧ್ಯಮ ಮುಖ್ಯವಾಗುವುದು. ಆದರೆ ಮೋದಿಯವರು ಈ ಮಾಧ್ಯಮಗಳ ಮುಖಾಮುಖಿಯನ್ನು ತಪ್ಪಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಮಾತ್ರವಲ್ಲ, ತನ್ನ ಸಚಿವರನ್ನೂ ಮಾಧ್ಯಮಗಳಿಂದ ಬಹುತೇಕ ದೂರವೇ ಇಟ್ಟಿದ್ದಾರೆ. ಭೂಸ್ವಾಧೀನದಂಥ ಬಹುಗಂಭೀರ ಕಾಯ್ದೆಯ ಜಾರಿಯ ಸಂದರ್ಭದಲ್ಲೂ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಿಲ್ಲ. ಇದೇ ರೀತಿಯ ವರ್ತನೆಗಾಗಿ ಮನಮೋಹನ್ ಸಿಂಗ್‍ರನ್ನು ಮೌನಮೋಹನ ಅನ್ನುತ್ತಿದ್ದ ಮೋದಿ ಇದೀಗ ಸ್ವಯಂ ಮೌನಿಯಾಗಿರುವುದು ಏನನ್ನು ಸೂಚಿಸುತ್ತದೆ? ಹಿಪಾಕ್ರಸಿಯನ್ನೇ, ಬೇಜವಾಬ್ದಾರಿಯನ್ನೇ, ಪಲಾಯನವಾದ, ಅಬದ್ಧತೆಯನ್ನೇ?
 ಸರಕಾರವೊಂದು ಸರ್ವಾಧಿಕಾರಿಯಂತೆ ವರ್ತಿಸುವುದಕ್ಕೆ ತುರ್ತು ಸ್ಥಿತಿಯ ಜಾರಿಯೇ ಆಗಬೇಕಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ಒಳಗಿದ್ದುಕೊಂಡೇ ಸರ್ವಾಧಿಕಾರಿಯಾಗಬಹುದು. ಜನರ ಪ್ರಶ್ನೆಗಳಿಗೆ ಉತ್ತರಿಸದೆಯೇ, ಜನವಿರೋಧಿ ಕಾಯ್ದೆಗಳನ್ನು ಬಲವಂತದಿಂದ ಜಾರಿಗೊಳಿಸುತ್ತಲೇ, ಮಾಧ್ಯಮ ಸಂವಾದಗಳನ್ನು ತಪ್ಪಿಸಿಕೊಳ್ಳುತ್ತಾ, ಇಡೀ ಸರಕಾರವನ್ನೇ ಗೃಹ ಬಂಧನದಲ್ಲಿಡುತ್ತಾ ಸಾಗುವುದು ಪ್ರಜಾತಂತ್ರದ ಲಕ್ಷಣವಲ್ಲ. ಪಾರದರ್ಶಕತೆ ಪ್ರಜಾತಂತ್ರದ ಜೀವಾಳ. ಇಲ್ಲಿ ಚರ್ಚೆ, ಸಂವಾದ, ಪ್ರಶ್ನೆ, ಟೀಕೆ, ಅನುಮಾನ, ಪ್ರತಿಭಟನೆ ಸಹಜವಾದುದು. ಆದರೆ ಮೋದಿ ಪ್ರಜಾತಂತ್ರದ ಈ ಮೂಲ ಗುಣವನ್ನೇ ನಿಧಾನವಾಗಿ ನಾಶ ಮಾಡುತ್ತಿದ್ದಾರೆ. ತಾನು ಹೇಳುವುದನ್ನು ಮಾತ್ರ ನೀವು ಆಲಿಸಬೇಕು, ಪ್ರಶ್ನಿಸಬಾರದು ಎಂಬ ದರ್ಪವನ್ನು ಪ್ರದರ್ಶಿಸುತ್ತಿದ್ದಾರೆ. ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯ ಮೂಲಕ ಒರಟಾಗಿ ಮಾಡಿದುದನ್ನು ಮೋದಿಯವರು ಬುದ್ಧಿವಂತಿಕೆಯಿಂದ ತುಸು ಮೃದುವಾಗಿ ಮಾಡುತ್ತಿದ್ದಾರಷ್ಟೇ. ಈ ವರ್ತನೆ ಆಕ್ಷೇಪಾರ್ಹ ಮತ್ತು ಜನವಿರೋಧಿಯಾದುದು. ಘೋಷಿತ ಸರ್ವಾಧಿಕಾರಿಗಿಂತ ಅಘೋಷಿತ ಸರ್ವಾಧಿಕಾರಿ ಹೆಚ್ಚು ಅಪಾಯಕಾರಿ.

No comments:

Post a Comment