Tuesday 13 October 2015

ಈ-ಮೇಲ್‍ನ ಜಾಡು ಹಿಡಿದು ವಿಶ್ಲೇಷಣೆ ನಡೆಸುವ ದೇಶದಲ್ಲಿ..

ಡಾ| ಅಥವಳೆ
       ಎಂ.ಎಂ. ಕಲಬುರ್ಗಿಯವರ ಹತ್ಯೆಯೊಂದಿಗೆ ‘ಸನಾತನ ಸಂಸ್ಥಾ' ಎಂಬ ಸಂಘಟನೆಯ ಸುತ್ತ ಚರ್ಚೆಯೊಂದು ಆರಂಭಗೊಂಡಿದೆ. ವಿಚಾರವಾದಿಗಳಾದ ಕಲಬುರ್ಗಿ ಮತ್ತು ಪನ್ಸಾರೆಯವರ ಹತ್ಯೆಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದುವು. ಮೋಟರ್ ಸೈಕಲ್‍ನಲ್ಲಿ ಬಂದ ಮುಸುಕುಧಾರಿಗಳು ಅವರಿಬ್ಬರನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ಪನ್ಸಾರೆಯವರ ಹತ್ಯೆಯ ಆರೋಪದಲ್ಲಿ ಸನಾತನ ಸಂಸ್ಥಾದ ಪೂರ್ಣಕಾಲಿಕ ಕಾರ್ಯಕರ್ತ ಸವಿೂರ್ ಗಾಯಕ್ವಾಡ್ ಸಹಿತ ಕೆಲವರನ್ನು ಬಂಧಿಸಲಾಗಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ‘ಸವಿೂರ್ ಗಾಯಕ್ವಾಡ್‍ನನ್ನು ಕಳೆದ ವಾರ ಥಾಣೆಯ ಕೋರ್ಟಿಗೆ ಹಾಜರುಪಡಿಸಿದಾಗ 31 ವಕೀಲರು ಆತನ ಪರ ವಾದಿಸಲು ಕೋರ್ಟಿನಲ್ಲಿ ಸೇರಿದ್ದರು. ಆತನಲ್ಲಿ 31 ಸಿಮ್ ಕಾರ್ಡ್‍ಗಳು ಲಭಿಸಿವೆ. ದಂಪತಿಗಳಾದ ಡಾ| ಜಯಂತ್ ಮತ್ತು ಕುಂದಾ ಅಥವಳೆಯವರು ಸ್ಥಾಪಿಸಿದ ಈ ಸಂಘಟನೆಯ ಗುರಿ ಹಿಂದೂ ರಾಷ್ಟ್ರದ ಸ್ಥಾಪನೆ. 2016ರಿಂದ 2018ರ ನಡುವೆ ಮೂರನೇ ವಿಶ್ವಯುದ್ಧ ನಡೆಯುತ್ತದೆ ಮತ್ತು ‘ಸಮಾಜ ವಿರೋಧಿಗಳ’ ಅಂತ್ಯಕ್ಕೆ ಇದು ಮುಹೂರ್ತವಾಗುತ್ತದೆ ಎಂದೆಲ್ಲಾ ಅದು ತನ್ನ ಮುಖವಾಣಿ ಸನಾತನ ಪ್ರಭಾತ್‍ನಲ್ಲಿ ಹೇಳಿಕೊಂಡದ್ದಿದೆ. 2019ರಿಂದ 2022ರ ವರೆಗೆ ದೇವರ ಆಡಳಿತ ಪ್ರಾರಂಭವಾಗಲಿದ್ದು, 2023ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದೂ ಅದು ನಿರೀಕ್ಷೆ ಇಟ್ಟುಕೊಂಡಿದೆ. ಅದರ ವೈರಿಗಳ ಪಟ್ಟಿ ಬಹಳ ದೊಡ್ಡದು. ಅದರಲ್ಲಿ ವಿಚಾರವಾದಿಗಳಿದ್ದಾರೆ, ರಾಜಕೀಯ ಪಕ್ಷಗಳಿವೆ. ಮುಸ್ಲಿಮರು, ಕ್ರೈಸ್ತರಿದ್ದಾರೆ. ಥಾಣೆ ಮತ್ತು ಮಾರ್ಗೋವಾದಲ್ಲಿ ಬಾಂಬ್ ಸ್ಫೋಟಿಸಿದ ಆರೋಪಗಳೂ ಈ ಸಂಘಟನೆಯ ಮೇಲಿದೆ’ (ದಿ ಹಿಂದೂ ಸೆ. 27). ಬಹುಶಃ, ಒಂದು ಸಂಘಟನೆಯ ಬಗ್ಗೆ ನಮ್ಮ ಸರಕಾರ ಮತ್ತು ಅಧಿಕಾರಿಗಳು ಕುತೂಹಲಗೊಳ್ಳುವುದಕ್ಕೆ ಈ ಸಂಘಟನೆ 1995ರಿಂದ ಸಾಗಿ ಬಂದ ಹಾದಿ ಹಾಗೂ ನಿಗೂಢ ಚಟುವಟಿಕೆಗಳು ಧಾರಾಳ ಸಾಕು. ಅದಕ್ಕೆ ಚುನಾವಣಾ ರಾಜಕೀಯದಲ್ಲಿ ವಿಶ್ವಾಸವಿಲ್ಲ. ಚುನಾವಣೆಯಲ್ಲಿ ಭಾಗವಹಿಸದೆಯೇ ಯುದ್ಧದ ಮೂಲಕ ಸಾಮ್ರಾಜ್ಯ ಕಟ್ಟಿದ ಶಿವಾಜಿಯಂತೆ ತನ್ನ ಕನಸಿನ ರಾಷ್ಟ್ರ ಸ್ಥಾಪನೆಯ ಉದ್ದೇಶ ಅದರದ್ದು. ನಿಜವಾಗಿ, ಬಾಂಬ್ ತಯಾರಿ, ಸ್ಫೋಟ, ಹತ್ಯೆ.. ಮುಂತಾದುವುಗಳೆಲ್ಲ ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರ ಅಸ್ತ್ರ. ಜನರ ವಿಶ್ವಾಸವನ್ನು ಗಳಿಸಿಕೊಂಡು ಪ್ರಜಾತಂತ್ರದ ಮೂಲಕ ತಮ್ಮ ಗುರಿಯೆಡೆಗೆ ಸಾಗುವುದನ್ನು ಒಪ್ಪಿಕೊಳ್ಳದವರೇ ಬಾಂಬ್ ಎತ್ತಿಕೊಳ್ಳುತ್ತಾರೆ. ಬಂದೂಕು ಬಳಸುತ್ತಾರೆ. ಅಂದಹಾಗೆ, ಈ ದೇಶದಲ್ಲಿ ಹತ್ತಾರು ಸ್ಫೋಟಗಳು ನಡೆದಿವೆ. ಹತ್ಯಾಕಾಂಡ, ವಿಧ್ವಂಸಕಾರಿ ಕೃತ್ಯಗಳು ಘಟಿಸಿವೆ. ಈ ಎಲ್ಲ ಸಂದರ್ಭಗಳಲ್ಲಿ ಈ ದೇಶದ ಮಾಧ್ಯಮಗಳು ಮತ್ತು ರಾಜಕಾರಣಿಗಳು ಮಾತಾಡಿದ್ದಾರೆ. ಅವರ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ, ಅನಾಮಿಕ ಮೂಲದಿಂದ ಬರುವ ಈಮೇಲ್‍ಗೂ ಅಪಾರ ಮಹತ್ವ ಲಭ್ಯವಾಗುತ್ತಿತ್ತು. ಆ ಈಮೇಲ್ ಅನ್ನು ಎತ್ತಿಕೊಂಡು ಅದನ್ನು ಕಳುಹಿಸಿರಬಹುದಾದ ವ್ಯಕ್ತಿ, ಸಂಘಟನೆ, ಕಂಪ್ಯೂಟರ್ ಮತ್ತಿತರ ಸರ್ವವನ್ನೂ ವಿಶ್ಲೇಷಿಸಲಾಗುತ್ತಿತ್ತು. ಆ ಈಮೇಲ್ ಅನ್ನು ಕಳುಹಿಸಿದವರ ಉದ್ದೇಶ, ಅದಕ್ಕೆ ಪ್ರಚೋದನೆ ನೀಡಿರುವ ಸಾಹಿತ್ಯ, ಅವರು ಪಡೆದಿರುವ ತರಬೇತಿ, ಅವರ ಸಂಖ್ಯೆ, ಹಣಕಾಸು ವಹಿವಾಟು.. ಸಹಿತ ಎಲ್ಲವನ್ನೂ ಮೂಲಗಳನ್ನು ಉದ್ಧರಿಸಿ ಈ ದೇಶದಲ್ಲಿ ಚರ್ಚಿಸಲಾಗುತ್ತಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತೂ ಭಯೋತ್ಪಾದನೆಯ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ಮಾತಾಡಿದೆ. ಭಯೋತ್ಪಾದನೆಯನ್ನು ನಿರ್ದಿಷ್ಟ ಧರ್ಮಕ್ಕೆ ಹೋಲಿಸಿ ಹೇಳಿಕೆ ಕೊಟ್ಟಿದೆ. ಜಾನುವಾರು ಮಾಂಸದ ಸೇವನೆಯು ಭಯೋತ್ಪಾದನೆಗೆ ಇಂಬು ನೀಡುತ್ತದೆ ಎಂಬ ರೀತಿಯಲ್ಲಿ ಅದರ ನಾಯಕರು ಮತ್ತು ಬೆಂಬಲಿಗರು ಮಾತಾಡಿದ್ದಾರೆ. ಆದರೆ ಸನಾತನ ಸಂಸ್ಥಾದ ಕುರಿತಂತೆ ಈ ಮಂದಿ ಈ ವರೆಗೆ ನೇರವಾಗಿ ಏನನ್ನೂ ಹೇಳಿಲ್ಲ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಬಲವಾದ ಅನುಮಾನಗಳಿದ್ದಾಗ್ಯೂ ಅದರ ನಿಷೇಧದ ಬಗ್ಗೆ ಮಾತಾಡುತ್ತಿಲ್ಲ. ಕೇಂದ್ರ ಸರಕಾರ ಈಗಾಗಲೇ ಸರಕಾರೇತರ ಸಂಸ್ಥೆಗಳಾದ ಗ್ರೀನ್‍ಪೀಸ್ ಮತ್ತು ತೀಸ್ತಾ ಸೆಟಲ್ವಾಡ್‍ರ ಸಂಸ್ಥೆಯ ಮೇಲೆ ಬಹುತೇಕ ನಿಷೇಧವನ್ನು ಹೇರಿದೆ. ಅವುಗಳ ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ. ಬಾಂಬ್ ಭಯೋತ್ಪಾದನೆಯಲ್ಲಿ ಭಾಗವಹಿಸದ ಈ ಸಂಸ್ಥೆಗಳ ಮೇಲೆ ಸರಕಾರಕ್ಕೆ ಈ ಮಟ್ಟದ ಭಯ ಇದೆಯೆಂದಾದರೆ, ಸನಾತನ ಸಂಸ್ಥಾದ ಕುರಿತಂತೆ ಯಾಕೆ ಯಾವ ಭಯವೂ ಆಗುತ್ತಿಲ್ಲ? ಅದರ ಉದ್ದೇಶದ ಬಗ್ಗೆ ಸರಕಾರದ ನಿಲುವೇನು?
   ಸಾಮಾನ್ಯವಾಗಿ ಭಯೋತ್ಪಾದನೆ ಅಥವಾ ದೇಶ ವಿರೋಧಿ ಚಟುವಟಿಕೆಗಳು ಎಂದ ಕೂಡಲೇ ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬ, ಐಸಿಸ್ ಮುಂತಾದ ಹೆಸರುಗಳೇ ಪ್ರತ್ಯಕ್ಷಗೊಳ್ಳುವಂತಹ ವಾತಾವರಣವೊಂದು ಈ ದೇಶದಲ್ಲಿದೆ. ಸಂವಿಧಾನ ವಿರೋಧಿಯಾಗಿ ಆಲೋಚಿಸುವುದಕ್ಕೆ ಇಂಥ ನಿರ್ದಿಷ್ಟ ತಂಡಗಳಿಗಷ್ಟೇ ಸಾಧ್ಯ ಎಂಬ ಭಾವನೆಯನ್ನು ಇಲ್ಲಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಲಾಗಿದೆ. ಅದರಲ್ಲಿ ರಾಜಕಾರಣಿಗಳ ಪಾತ್ರವಿದೆ. ಅಧಿಕಾರಿಗಳು ಮತ್ತು ಸಂಘಟನೆಗಳ ಪಾತ್ರವೂ ಇವೆ. ಈ ದೇಶದ ಎಲ್ಲಾದರೂ ಬಾಂಬ್ ಸ್ಫೋಟಗೊಂಡ ತಕ್ಷ

ಣ ಯಾವುದಾದರೂ ಪತ್ರಿಕಾ ಕಚೇರಿಗೆ ಈಮೇಲ್‍ಗಳು ಬರುತ್ತವೆ. ದೂರವಾಣಿ ಕರೆಗಳೂ ಬರುವುದಿದೆ. ಹಾಗೆ ಬಂದ ಕರೆಗಳೋ ಈಮೇಲ್‍ಗಳೋ ಅಥವಾ ಇನ್ನಿತರ ಯಾವುದಾದರೂ ಕುರುಹುಗಳ ಹೆಸರಲ್ಲೋ ನಿರ್ದಿಷ್ಟ ಮಂದಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತವೆ. ರಾಜಕಾರಣಿಗಳಿಂದ ಹೇಳಿಕೆಗಳ ಮಹಾಪೂರ ಹರಿಯತೊಡಗುತ್ತವೆ. ಆದರೆ, ಕಳೆದ 20 ವರ್ಷಗಳಿಂದ ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊಂದರ ಕುರಿತು ಮಾಧ್ಯಮಗಳು ಮಾತಾಡಿದ್ದು ಶೂನ್ಯ ಎಂಬಷ್ಟು ಕಡಿಮೆ. ಈ ಸಂಘಟನೆಯ ಬಗ್ಗೆ ತನಿಖಾ ಬರಹಗಳು ಈ ವರೆಗೂ ಸರಿಯಾದ ರೀತಿಯಲ್ಲಿ ಪ್ರಕಟವಾಗಿಲ್ಲ. ನಮ್ಮ ರಾಜಕಾರಣಿಗಳಂತೂ ಸನಾತನ ಸಂಸ್ಥಾ ಎಂಬ ಸಂಘಟನೆ ಅಸ್ತಿತ್ವದಲ್ಲಿ ಇದೆಯೆಂದೇ ಒಪ್ಪಿಕೊಳ್ಳದಷ್ಟು ಈ ವಿಷಯದಲ್ಲಿ ಮೌನ ಪಾಲಿಸಿದ್ದಾರೆ. ಯಾಕೆ ಹೀಗೆ? ಸಂವಿಧಾನ ವಿರೋಧಿ ಚಿಂತನೆ ಯಾರಿಂದಲೇ ಬರಲಿ, ಆ ಬಗ್ಗೆ ಪ್ರತಿಕ್ರಿಯಿಸಬೇಕಾದದ್ದು ಮತ್ತು ಅದನ್ನು ಬಲವಾಗಿ ಖಂಡಿಸಬೇಕಾದದ್ದು ಎಲ್ಲರ ಕರ್ತವ್ಯ. ಸನಾತನ ಸಂಸ್ಥಾದ ಆಲೋಚನೆಯೇ ಸಂವಿಧಾನ ವಿರೋಧಿ. ಅದು ಈ ದೇಶದ ಸಂವಿಧಾನವನ್ನು ರದ್ದುಗೊಳಿಸಬಯಸುತ್ತದೆ. ಪ್ರಜಾತಂತ್ರದ ಬದಲು ಚುನಾವಣೆಗಳೇ ಇಲ್ಲದ ಸರ್ವಾಧಿಕಾರ ಆಡಳಿತವನ್ನು ಪ್ರತಿಪಾದಿಸುತ್ತದೆ. ತನ್ನ ನಿಲುವನ್ನು ಪ್ರಶ್ನಿಸುವವರನ್ನು ಅದು ಸಮಾಜ ವಿರೋಧಿಗಳೆಂದು ವರ್ಗೀಕರಿಸುತ್ತದೆ. ಒಂದು ಬಗೆಯ ಭ್ರಮೆಯ ಸುತ್ತ ಅದರ ಕಾರ್ಯಚಟುವಟಿಕೆ ಕೇಂದ್ರೀಕೃತವಾಗಿರುವಂತೆ ಗೋಚರಿಸುತ್ತಿದೆ. ಹೀಗಿರುವಾಗ, 2023ರ ಗುರಿಯನ್ನು ಯಶಸ್ವಿಯಾಗಿ ತಲುಪುವುದಕ್ಕಾಗಿ ಅದು ಯೋಜನೆಗಳನ್ನು ಹಾಕಿಕೊಂಡಿರುವುದಂತೂ ಖಂಡಿತ. ಆ ಯೋಜನೆಗಳು ಯಾವುವು, ಅದರ ಜಾರಿಯ ಹಂತಗಳು ಹೇಗೆ, ಅದು ತನ್ನ ಗುರಿಯ ಈಡೇರಿಕೆಗಾಗಿ ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಯುದ್ಧ ಸಾರುತ್ತದೆ.. ಇವೆಲ್ಲ ಬಹಿರಂಗವಾಗಬೇಕಿದೆ. ಕಲಬುಗಿರ್ಯವರ ಹತ್ಯೆಯು ಆ 2023ರ ನೀಲನಕ್ಷೆಯ ಭಾಗವೇ ಎಂಬುದೂ ಸ್ಪಷ್ಟವಾಗಬೇಕಿದೆ.

No comments:

Post a Comment