Thursday 11 May 2017

ಕಾರ್ತಿಕ್ ರಾಜ್: ಜೆಹಾದಿಗಳು ಯಾರು?

       ಧರ್ಮಸ್ಥಳದ ಸೌಜನ್ಯ, ತೀರ್ಥಹಳ್ಳಿಯ ನಂದಿತಾ ಮತ್ತು ಮಂಗಳೂರು ಸಮೀಪದ ಕೊಣಾಜೆಯ ಕಾರ್ತಿಕ್ ರಾಜ್ - ಈ ಮೂರೂ ಸಾವುಗಳ ಬಗ್ಗೆ ರಾಜ್ಯ ಬಿಜೆಪಿ ಮಾತಾಡಿದ್ದು ಅತ್ಯಂತ ಏಕಮುಖವಾಗಿ. ಬಿಜೆಪಿ ಎಂಬುದು ಬಿಹಾರದ ನಿಷೇಧಿತ ರಣವೀರ ಸೇನೆಯಂತೆ ಖಾಸಗಿ ಗುಂಪಲ್ಲ ಅಥವಾ ಯಾವುದಾದರೂ ನಿರ್ದಿಷ್ಟ ಜಾತಿ, ಧರ್ಮ ಇಲ್ಲವೇ ಭಾಷೆಯ ಹಿತವನ್ನೇ ಗುರಿಯಾಗಿಟ್ಟುಕೊಂಡು ಕಾರ್ಯಪ್ರವೃತ್ತವಾಗಿರುವ ಸಂಘಟನೆಯೂ ಅಲ್ಲ. ಅದು ಅಧಿಕೃತ ರಾಜಕೀಯ ಪಕ್ಪ. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಅದರ ಘೋಷಣೆ. ಇಂಥದ್ದೊಂದು  ಪಕ್ಷ ರಣವೀರ ಸೇನೆಯ ಭಾಷೆಯಲ್ಲಿ ಮಾತಾಡುವುದೆಂದರೆ ಏನರ್ಥ? ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳ ಸಂದರ್ಭದಲ್ಲಿ ಬಿಜೆಪಿ ನೀಡಿದ ಹೇಳಿಕೆ ಮತ್ತು ಮಾಡಿದ ಪ್ರತಿಭಟನೆಗಳು ಸಾರ್ವಜನಿಕವಾಗಿ ಆ ಪಕ್ಷದ ವಿಶ್ವಾಸಾರ್ಹತೆಯನ್ನು ಶಂಕಿಸುವಂತೆ ಮಾಡಿದೆ. ಅದರಲ್ಲೂ 2016 ಅಕ್ಟೋಬರ್‍ನಲ್ಲಿ ನಡೆದ ಕಾರ್ತಿಕ್ ರಾಜ್ ಎಂಬವರ ಹತ್ಯೆಯನ್ನಂತೂ ಬಿಜೆಪಿ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿತ್ತು. ಯಡಿಯೂರಪ್ಪನವರು ಗೃಹಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರವನ್ನು ಪಕ್ಷದ ಮಾಧ್ಯಮ ಸಂಚಾಲಕ ಎಸ್. ಶಾಂತಾರಾಮ್ ಅವರು 2016 ಅಕ್ಟೋಬರ್ 24ರಂದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದರು. ಪಕ್ಷದ ಅಧಿಕೃತ ಲೆಟರ್‍ಹೆಡ್‍ನಲ್ಲಿ ಮುದ್ರಿಸಲಾದ ಆ ಹೇಳಿಕೆ ಹೀಗಿತ್ತು:
“ಮಂಗಳೂರಿನ ಕೊಣಾಜೆಯಲ್ಲಿ ಹಿಂದುತ್ವ ವಿಚಾರಕ್ಕೆ ಬದ್ಧವಾಗಿದ್ದ ಯುವಕ ಕಾರ್ತಿಕ್ ರಾಜ್ ಅವರ ಹತ್ಯೆಯು ಜೆಹಾದಿ ಶಕ್ತಿಗಳು ರಾಜ್ಯದಲ್ಲಿ ನಡೆಸುತ್ತಿರುವ ರಾಜಕೀಯ ಹತ್ಯಾ ಸರಣಿಯ ಇತ್ತೀಚಿನ ಘಟನೆಯಾಗಿದೆ.. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ವಿವಿಧ ಪ್ರಕರಣಗಳ ಹಿಂದೆ ವ್ಯವಸ್ಥಿತ ಸಂಚಿದೆ ಹಾಗೂ ಈ ಹತ್ಯೆಗಳೆಲ್ಲವೂ ಒಂದೇ ಮಾದರಿಯಲ್ಲಿ ಘಟಿಸುತ್ತಿವೆ. ಈ ಹಿಂದೆಯೂ ನಾನು ಈ ಕುರಿತಾಗಿ ಹೇಳಿದ್ದು ಇದೀಗ ಭಾನುವಾರ ಕಾರ್ತಿಕ್ ರಾಜ್ ಹತ್ಯೆಯು ನನ್ನ ಹೇಳಿಕೆಯನ್ನು ಮತ್ತಷ್ಟು ಪುಷ್ಟೀಕರಿಸಿದೆ. ಇತರ ಹತ್ಯೆಗಳಂತೆಯೇ ದುಷ್ಕರ್ಮಿಗಳು ಕಾರ್ತಿಕ್ ರಾಜ್ ಮೇಲೆ ಹಿಂದಿನಿಂದ ದಾಳಿ ನಡೆಸಿz್ದÁರೆ. ಅಲ್ಲದೇ ಇದಕ್ಕೆ ಖಡ್ಗ ಬಳಕೆಯಾಗಿದೆ. ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಇಬ್ಬರು ದುಷ್ಕರ್ಮಿಗಳೂ ಪತ್ತೆಯಾಗಬಾರದು ಎನ್ನುವ ಕಾರಣಕ್ಕೆ ಹೆಲ್ಮೆಟ್ ಮತ್ತು ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ನಡೆದ ರುದ್ರೇಶ್ ಅವರ ಹತ್ಯೆಯಲ್ಲೂ ಇದೇ ರೀತಿಯ ವ್ಯವಸ್ಥಿತ ಸಂಚು ಇತ್ತು. ಈ ಹಿಂದಿನ ಬಹುತೇಕ ಎಲ್ಲ ಕೃತ್ಯಗಳಲ್ಲೂ ಒಂದೇ ರೀತಿಯ ತಂತ್ರವನ್ನು ಅನುಸರಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಇವೆಲ್ಲದರ ಹಿಂದೆ ಒಂದೇ ಸಂಸ್ಥೆಗೆ ಸೇರಿದ ಶಕ್ತಿಗಳು ಶಾಮೀಲಾಗಿರುವಂತೆ ಕಾಣುತ್ತಿದೆ.. ರಾಜ್ಯದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರಿಗೆ ನನ್ನದೊಂದು ಪ್ರಶ್ನೆಯಿದೆ. ಜಿಹಾದಿ ಶಕ್ತಿಗಳ ಕೈಯಲ್ಲಿ ಇನ್ನೂ ಅದೆಷ್ಟು ಹತ್ಯೆಗಳಾಗುವ ವರೆಗೆ ನಿಮ್ಮ ಜಾಣ ಮೌನ ಮುಂದುವರಿಯುತ್ತದೆ ಹಾಗೂ ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಇನ್ನೂ ಎಷ್ಟು ಹತ್ಯೆಗಳಾಗುವ ವರೆಗೆ ಕಾಯುತ್ತೀರಿ..?”
ಕಾರ್ತಿಕ್ ರಾಜ್ ಹತ್ಯೆಗೆ ಸಂಬಂಧಿಸಿ ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ (BJP Karnataka ITCell)ಯಲ್ಲಿ ಹೀಗೆ ಪ್ರತಿಕ್ರಿಯೆ ನೀಡಲಾಗಿತ್ತು:
One more activist from konaje mangaluru shri Karthik Raj was killed by Jehadi forces @BJP4Karnataka condemns same &shri@BSYBJP statement : (ಜಿಹಾದಿ ಶಕ್ತಿಗಳಿಂದ ಮಂಗಳೂರಿನ ಕೊಣಾಜೆಯಲ್ಲಿ ಇನ್ನೋರ್ವ ಕಾರ್ಯಕರ್ತನ ಹತ್ಯೆಯಾಗಿದೆ.) ಅಲ್ಲದೇ, ಯಡಿಯೂರಪ್ಪ ಮತ್ತು ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ತಿಕ್ ರಾಜ್ ಅವರ ಮನೆಗೆ ಭೇಟಿ ಕೊಟ್ಟಿದ್ದರು. ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿಯಿಂದ ಪ್ರತಿಭಟನೆಯೂ ನಡೆದಿತ್ತು. ಪೆÇಲೀಸರಿಗೆ ಗಡುವನ್ನೂ ವಿಧಿಸಲಾಗಿತ್ತು. ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಭಟನೆಯಲ್ಲಿ ಮಾತಾಡುತ್ತಾ ಎಚ್ಚರಿಸಿದ್ದರು. ಮಾತ್ರವಲ್ಲ, ಈ ಬೆಂಕಿ ಮಾತು ರಾಜ್ಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಓರ್ವ ಸಂಸದ ಸಮಾಜ ಘಾತುಕರ ಭಾಷೆಯಲ್ಲಿ ಮಾತಾಡಬಹುದೇ? ಬೆಂಕಿ ಹಚ್ಚುವೆ, ಕೊಲ್ಲುವೆ, ಮಾನಭಂಗ ಮಾಡುವೆ.. ಮುಂತಾದುವುಗಳೆಲ್ಲ ಭೂಗತ ಜಗತ್ತಿನ ಭಾಷೆಗಳು. ನಾಗರಿಕ ಸಮಾಜ ಎಂದೂ ಇಂಥ ಭಾಷೆ ಮತ್ತು ಚಟುವಟಿಕೆಗಳನ್ನು ಒಪ್ಪುವುದಿಲ್ಲ. ಇದನ್ನು ಒಪ್ಪುವ ಸಮಾಜ ನಾಗರಿಕ ಸಮಾಜವಾಗಿ ಗುರುತಿಸಿಕೊಳ್ಳುವುದಕ್ಕೆ ಅರ್ಹವೂ ಅಲ್ಲ. ಆದ್ದರಿಂದಲೇ, ಸುಮಾರು 10 ಲಕ್ಷದಷ್ಟು ಮಂದಿಯನ್ನು ಸಂಸತ್‍ನಲ್ಲಿ ಪ್ರತಿನಿಧಿಸುವ ವ್ಯಕ್ತಿಯೋರ್ವ ಗೂಂಡಾ ಭಾಷೆಯಲ್ಲಿ ಮಾತಾಡಿರುವುದಕ್ಕೆ ಎಲ್ಲೆಡೆ ಅಚ್ಚರಿ ವ್ಯಕ್ತವಾಯಿತು. ಓರ್ವ ಸಂಸದ ತನ್ನದೇ ಕ್ಷೇತ್ರಕ್ಕೆ ಬೆಂಕಿ ಹಚ್ಚುವುದರಿಂದ ತೊಂದರೆಗೆ ಒಳಗಾಗುವವರು ಯಾರು? ಹತ್ಯೆಯನ್ನು ತಡೆಯುವುದಕ್ಕೆ ನಾಡಿಗೆ ಬೆಂಕಿ ಹಚ್ಚುವುದು ಪರಿಹಾರವೇ.. ಮುಂತಾದ ಪ್ರಶ್ನೆಗಳನ್ನು ಅವರು ಎದುರಿಸಿದರು. ಕೊನೆಗೆ ತನ್ನ ಮಾತಿಗೆ ವಿಷಾದವನ್ನೂ ಸೂಚಿಸಿದರು. ಆದರೆ ಈಗಲೂ ಸಂಸದರ ಆ ಭಾಷಾ ಪ್ರಯೋಗ ಜಿಲ್ಲೆಯಲ್ಲಿ ಆಗಾಗ ಪ್ರಸ್ತಾಪವಾಗುತ್ತಲೇ ಇದೆ. ಇಂಥ ಸಂದರ್ಭದಲ್ಲೇ  ಕಾರ್ತಿಕ್ ರಾಜ್‍ರನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಟುಂಬ ಕಲಹವೇ ಹತ್ಯೆಗೆ ಕಾರಣ ಎಂಬುದು ಪತ್ತೆಯಾಗಿದೆ. ಕಾರ್ತಿಕ್ ರಾಜ್‍ನ ತಂಗಿಯೇ ಹತ್ಯೆಗೆ ಸುಪಾರಿ ಕೊಟ್ಟಿದ್ದಳು. ಆಕೆಯ ಸಹೋದ್ಯೋಗಿ ಗೆಳೆಯ ಗೌತಮ್ ಮತ್ತು ಆತನ ತಮ್ಮ ಗೌರವ್ ಸೇರಿಕೊಂಡು ಈ ಹತ್ಯೆಯನ್ನು ನಡೆಸಿದ್ದರು. ಆದ್ದರಿಂದ, ಈಗ ಮಾತಾಡಬೇಕಾದದ್ದು ಬಿಜೆಪಿ, ಯಡಿಯೂರಪ್ಪ ಮತ್ತು ಸಂಸದ ನಳಿನ್ ಕುಮಾರ್. ಈ ಹಿಂದೆ ನೀಡಿದ ಹೇಳಿಕೆಯ ಬಗ್ಗೆ ಬಿಜೆಪಿಯು ನಿಲುವು ಏನು? ಜಿಹಾದಿ ಶಕ್ತಿಗಳು ಎಂದು ಅದು ಯಾವ ಅರ್ಥದಲ್ಲಿ ಹೇಳಿದೆ? ಆ ಹೇಳಿಕೆ ರಾಜ್ಯದ ಜನತೆಯ ಮೇಲೆ ಬೀರಿರಬಹುದಾದ ಪರಿಣಾಮಗಳು ಏನೇನು? ಒಂದು ನಿರ್ದಿಷ್ಟ ಧರ್ಮದ ಬಗ್ಗೆ ನಕಾರಾತ್ಮಕ ಸಂದೇಶವನ್ನು ಆ ಹೇಳಿಕೆ ರವಾನಿಸಿರುವ ಸಾಧ್ಯತೆ ಇಲ್ಲವೇ? ಅಷ್ಟಕ್ಕೂ, ಘಟನೆ ನಡೆದ ತಕ್ಷಣ ಇಂಥದ್ದೊಂದು ಹೇಳಿಕೆ ಕೊಡುವ ಅನಿವಾರ್ಯತೆ ಬಿಜೆಪಿಗೆ ಏನಿತ್ತು? ಜೆಹಾದಿ ಶಕ್ತಿಗಳ ಕೈವಾಡವನ್ನು ಶಂಕಿಸಿ ಬಿಜೆಪಿ ಹೇಳಿಕೆ ಬಿಡುಗಡೆಗೊಳಿಸುವಾಗ ತನಿಖೆ ಇನ್ನೂ ಆರಂಭಿಕ ಹಂತದಲ್ಲಷ್ಟೇ ಇತ್ತು. ಪೊಲೀಸರ ಮುಂದೆ ಹತ್ಯೆಯ ಸ್ಪಷ್ಟ ಚಿತ್ರಣ ಇನ್ನೂ ಬಂದಿರಲಿಲ್ಲ. ಹೀಗಿರುತ್ತಾ, ಬಿಜೆಪಿಯು ಜಿಹಾದಿ ಶಕ್ತಿಗಳು ಎಂದು ಕಣ್ಣಾರೆ ಕಂಡಂತೆ ಹೇಳಿಕೊಂಡದ್ದು ಯಾಕೆ? ಪ್ರಕರಣದ ದಿಕ್ಕು ತಪ್ಪಿಸುವ ಒಳ ಉದ್ದೇಶವೊಂದು ಆ ಹೇಳಿಕೆಯಲ್ಲಿತ್ತೇ?
ರಾಜ್ಯವನ್ನು ಆಳಿದ ಮತ್ತು ದೇಶವನ್ನು ಆಳುತ್ತಿರುವ ಜವಾಬ್ದಾರಿಯುತ ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ರಾಜ್ಯ ಬಿಜೆಪಿಯ ವರ್ತನೆ ಅತ್ಯಂತ ಖಂಡನಾರ್ಹವಾದುದು. ನಕ್ಸಲರಂತೆ ಮತ್ತು ಭೂಗತ ದೊರೆಗಳಂತೆ ಒಂದು ರಾಜಕೀಯ ಪಕ್ಷ ಮಾತಾಡುವುದು ಅತ್ಯಂತ ಅಪಾಯಕಾರಿ. ತನಿಖೆಗೆ ಮೊದಲೇ ಒಂದು ಘಟನೆಯನ್ನು ಇದಮಿತ್ಥಂ ಎಂದು ಖಚಿತವಾಗಿ ಹೇಳುವುದು ತನಿಖೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಮುಖ್ಯಮಂತ್ರಿಯಾಗಿ ಅನುಭವವಿರುವ ಯಡಿಯೂರಪ್ಪರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಯಡಿಯೂರಪ್ಪ ಮತ್ತು ಬಿಜೆಪಿಯು ರಾಜ್ಯ ಜನತೆಯೊಂದಿಗೆ ಕ್ಷಮೆ ಯಾಚಿಸಬೇಕು. ತನಿಖೆಯ ದಿಕ್ಕು ತಪ್ಪಿಸುವ ಯಾವ ದುರುದ್ದೇಶವೂ ತನ್ನ ಹೇಳಿಕೆಗಿರಲಿಲ್ಲ ಎಂಬುದನ್ನು ರಾಜ್ಯ ಜನತೆಗೆ ಮನವರಿಕೆ ಮಾಡಿಸಲು ಕ್ಷಮೆ ಯಾಚನೆಯು ಅತ್ಯಂತ ಅಗತ್ಯವಾಗಿದೆ. ಜೊತೆಗೇ ‘ಬೆಂಕಿ ಹಚ್ಚುವ’ ಸಂಸದರು ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಆದ ವಿಳಂಬಕ್ಕೆ ತನ್ನ ಮತ್ತು ತನ್ನ ಪಕ್ಷದ ವರ್ತನೆಗೂ ಪಾಲಿದೆ ಎಂಬುದನ್ನು ಪ್ರಾಮಾಣಿಕವಾಗಿ ಸಾರ್ವಜನಿಕರ ಮುಂದೆ ಅವರು ಒಪ್ಪಿಕೊಳ್ಳಬೇಕು. ಆದರೆ ಬಿಜೆಪಿಯ ಈ ವರೆಗಿನ ವರ್ತನೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಇಂಥದ್ದೊಂದು ಪಶ್ಚಾತ್ತಾಪ ಭಾವವನ್ನು ವ್ಯಕ್ತಪಡಿಸುವ ಸಾಧ್ಯತೆಯೇ ಇಲ್ಲ. ಇದರ ಬದಲು ಯಡಿಯೂರಪ್ಪ ಮತ್ತು ಈಶ್ವರಪ್ಪರ ನಡುವಿನ ಕಿತ್ತಾಟಕ್ಕೆ ಜಿಹಾದಿ ಶಕ್ತಿಗಳೇ ಕಾರಣ ಎಂದು ಅದು ಹೇಳಿಕೆ ಹೊರಡಿಸುವ ಸಾಧ್ಯತೆಯೇ ಹೆಚ್ಚು.

No comments:

Post a Comment