Friday 19 May 2017

ಐಸಿಸ್ ಗೆ ಸೇರುವ ಮುಸ್ಲಿಂ ಯುವಕರು ಮತ್ತು ದಿಗ್ಗಿ ಬಾಂಬ್

 
    ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯೊಂದು (ಟ್ವೀಟ್) ತೀವ್ರ ಚರ್ಚೆಗೆ ಕಾರಣವಾಗಿದೆ. ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕರು ಈ ಟ್ವೀಟನ್ನು ವಿರೋಧಿಸಿದ್ದಾರೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಅವರು ಈ ಟ್ವೀಟ್ ಅನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನೊಂದೆಡೆ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಕೇಸೂ ದಾಖಲಾಗಿದೆ. ದಿಗ್ವಿಜಯ್ ಸಿಂಗ್ ಹೇಳಿದ್ದು ಇಷ್ಟೇ - “ಮುಸ್ಲಿಮ್ ಯುವಕರನ್ನು ಮೂಲಭೂತವಾದಿಗಳಾಗುವಂತೆ ಮತ್ತು ಐಸಿಸ್ ಗುಂಪನ್ನು ಸೇರಿಕೊಳ್ಳುವಂತೆ ಪ್ರಚೋದಿಸುವ ಸಲುವಾಗಿ ತೆಲಂಗಾಣ ಪೊಲೀಸರು ಐಸಿಸ್‍ನ ನಕಲಿ ವೆಬ್‍ಸೈಟನ್ನು ತೆರೆದಿದ್ದಾರೆ..”
     ನಿಜವಾಗಿ, ಈ ಬಗೆಯ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ ಮತ್ತು ಇಂಥ ಅಭಿಪ್ರಾಯಗಳು ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವುದೂ ರಹಸ್ಯವಲ್ಲ. ಭಯೋತ್ಪಾದನೆಯ ಆರೋಪದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಜಾವೇದ್ ಅಲಿ ಎಂಬವ ಈ ಹಿಂದೆ ಇಂಥದ್ದೇ ಆರೋಪವನ್ನು ಹೊರಿಸಿದ್ದ. ಆ ಕುರಿತಂತೆ ದೀರ್ಘ ಪತ್ರವನ್ನೂ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದ. ಪೊಲೀಸರ ಸೂಚನೆಯಂತೆ ತಾನು ಹೇಗೆ ಮುಸ್ಲಿಮ್ ಯುವಕರನ್ನು ಭಯೋತ್ಪಾದನಾ ಸಂಚಿನಲ್ಲಿ ಭಾಗಿಗೊಳಿಸಿದೆ ಎಂದಾತ ವಿವರಿಸಿದ್ದ. ಮಾಧ್ಯಮಗಳಲ್ಲಿ ಇದು ಸುದ್ದಿಗೂ ಒಳಗಾಗಿತ್ತು. ಅಲ್ಲದೇ, ಇಂಥದ್ದೊಂದು ಸಾಧ್ಯತೆಯನ್ನು ಸಾರಾಸಗಟಾಗಿ ತಿರಸ್ಕರಿಸುವ ಸಂದರ್ಭವೂ ಇವತ್ತಿನದ್ದಲ್ಲ. ಐಸಿಸ್ ಅನ್ನೇ ಎತ್ತಿಕೊಳ್ಳಿ ಅಥವಾ ತಾಲಿಬಾನ್, ಅಲ್‍ಕಾಯ್ದಾ ಮತ್ತಿತರ ವಿನಾಶಕ ಗುಂಪುಗಳನ್ನೇ ಪರಿಗಣಿಸಿ. ಅವುಗಳ ಹುಟ್ಟು ಮತ್ತು ಬೆಳವಣಿಗೆಯನ್ನು ಪರಿಶೀಲಿಸುತ್ತಾ ಹೋದಂತೆ ನಾವು ಅಮೇರಿಕಕ್ಕೋ ಯುರೋಪಿಯನ್ ರಾಷ್ಟ್ರಗಳಿಗೋ ಅಥವಾ ಇಸ್ರೇಲ್‍ಗೋ ತಲುಪಿಬಿಡುತ್ತೇವೆ. ತಾಲಿಬಾನನ್ನು ಬೆಳೆಸಿದ್ದೇ  ಅಮೇರಿಕ. ಹಾಗಂತ, ತಾಲಿಬಾನ್‍ಗಳಲ್ಲಿರುವವರೆಲ್ಲ ಮುಸ್ಲಿಮ್ ನಾಮಧಾರಿಗಳೇ ಎಂಬುದು ನಿಜ. ಆದರೆ, ಅವರ ಚಟುವಟಿಕೆಗಳಾದರೋ ನಾಗರಿಕ ಜಗತ್ತು ಒಪ್ಪಿಕೊಳ್ಳದಷ್ಟು ಶಿಲಾಯುಗಕ್ಕೆ ಸೇರಿದ್ದು. ಹೀಗಿದ್ದೂ, ವೈಚಾರಿಕವಾಗಿ ಅತ್ಯಂತ ಮುಂದುವರಿದ ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಮುಂಚೂಣಿಯಲ್ಲಿ ನಿಂತು ಮಾತಾಡುವ ರಾಷ್ಟ್ರವೊಂದು ಶಿಲಾಯುಗದ ಭಾಷೆಯಲ್ಲಿ ಮಾತಾಡುವ ಗುಂಪನ್ನು ಬೆಂಬಲಿಸುವುದಕ್ಕೆ ಹೇಗೆ ಸಾಧ್ಯವಾಯಿತು? ಅಮೇರಿಕವು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟ ರಾಷ್ಟ್ರ. ಮಹಿಳಾ ಹಕ್ಕುಗಳನ್ನು ಪ್ರಬಲವಾಗಿ ಪ್ರತಿಪಾದಿಸುವ ರಾಷ್ಟ್ರ. ಜಗತ್ತಿನ ಎಲ್ಲ ಸದ್‍ಮೌಲ್ಯಗಳೂ ತನ್ನ ಗಡಿಯೊಳಗಿವೆ ಎಂಬ ಹಮ್ಮು ತೋರುವ ರಾಷ್ಟ್ರ. ಇಂಥ ದೇಶವೊಂದು ಈ ಯಾವ ಕೆಟಗರಿಯೊಳಗೂ ಬರದ ಗುಂಪನ್ನು ಬೆಂಬಲಿಸುವುದಕ್ಕೆ ಏನು ಸಮರ್ಥನೆಯಿದೆ? ತನ್ನ ವಿಚಾರಧಾರೆಗೆ ಯಾವ ನೆಲೆಯಲ್ಲೂ ಒಗ್ಗದ ಗುಂಪನ್ನು ಬೆಂಬಲಿಸುವುದಕ್ಕೆ ಅಮೇರಿಕಕ್ಕೆ ಸಾಧ್ಯವೆಂದಾದರೆ ಅದು ಕೊಡುವ ಸಂದೇಶವೇನು? ತನ್ನ ಉದ್ದೇಶ ಸಾಧನೆಗಾಗಿ ಒಂದು ದೇಶ ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದನ್ನೇ ಅಲ್ಲವೇ? ಅಲ್‍ಕಾಯಿದಾ ಮತ್ತು ಐಸಿಸ್‍ನ ಹುಟ್ಟು ಮತ್ತು ಬೆಳವಣಿಗೆಯಲ್ಲೂ ಇಂಥದ್ದೊಂದು ಅನುಮಾನ ಆರಂಭದಿಂದಲೂ ಇದೆ. ಐಸಿಸ್‍ನ ನಾಯಕ ಅಬೂಬಕರ್ ಬಗ್ದಾದಿ ಎಂಬವ ಅಮೇರಿಕದ ಜೈಲಲ್ಲಿದ್ದು ಬಿಡುಗಡೆಗೊಂಡವ ಎಂಬುದು ಇದಕ್ಕಿರುವ ಹಲವು ಪುರಾವೆಗಳಲ್ಲಿ ಒಂದು ಮಾತ್ರ. ಅಲ್‍ಕಾಯ್ದಾ ಸುದ್ದಿಯಲ್ಲಿರುವ ವರೆಗೆ ಐಸಿಸ್‍ನ ಪತ್ತೆಯೇ ಇರಲಿಲ್ಲ. ಯಾವಾಗ ಐಸಿಸ್ ಹುಟ್ಟಿಕೊಂಡಿತೋ ಅಲ್‍ಕಾಯ್ದಾ ನಾಪತ್ತೆಯಾಯಿತು. ಅಂದಹಾಗೆ, ಇವುಗಳು ಮಾತಾಡುವ ಭಾಷೆ ಒಂದೇ - ಹಿಂಸೆಯದ್ದು. ಚಟುವಟಿಕೆಯೂ ಒಂದೇ - ಹಿಂಸೆ. ಅವುಗಳಲ್ಲಿರುವವರ ಹೆಸರುಗಳೂ ಒಂದೇ - ಮುಸ್ಲಿಮ್. ಇವರೇಕೆ ಹೀಗೆ, ಇವರ ತರಬೇತಿ ಎಲ್ಲಿ ನಡೆಯುತ್ತೆ, ಶಸ್ತ್ರಾಸ್ತ್ರಗಳು ಎಲ್ಲಿಂದ, ಆದಾಯ ಏನು, ಅವರು ಮಾರುತ್ತಿರುವರೆಂದು ಹೇಳಲಾಗುವ ಪೆಟ್ರೋಲ್‍ನ ಗ್ರಾಹಕರು ಯಾರು.. ಇಂಥ ಅಸಂಖ್ಯ ಪ್ರಶ್ನೆಗಳು ಆಗಾಗ ಮುನ್ನೆಲೆಗೆ ಬರುವುದೂ ಚರ್ಚೆಗೊಳಗಾಗುವದೂ ನಡೆಯುತ್ತಲೇ ಇರುತ್ತದೆ. ಅಂದಹಾಗೆ, ಇಂಥ ವಿನಾಶಕ ಗುಂಪುಗಳಲ್ಲಿರುವವರೆಲ್ಲ ಮುಸ್ಲಿಮರೇ. ಅವರು ವಿನಾಶ ಮಾಡುತ್ತಿರುವುದೂ ಮುಸ್ಲಿಮ್ ರಾಷ್ಟ್ರಗಳಲ್ಲೇ. ಆದರೆ ವಿನಾಶ ವಿರೋಧಿ ಹೋರಾಟ ಕೈಗೊಳ್ಳುವವರು ಮಾತ್ರ ಈ ವಿನಾಶದ ಅನುಭವ ತೀರಾ ತೀರಾ ಕಡಿಮೆ ಪ್ರಮಾಣದಲ್ಲಿ ಆಗಿರುವ ರಾಷ್ಟ್ರಗಳ ಮಂದಿ. ಭಯೋತ್ಪಾದನಾ ವಿರೋಧಿ ಹೋರಾಟದ ಹೆಸರಲ್ಲಿ ಅಮೆರಿಕ ಡಝನ್‍ಗಟ್ಟಲೆ ರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಅದು ವಿಶ್ವಸಂಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಾಲಿಬಾನನ್ನು ಪೋಷಿಸಿ ಬೆಳೆಸಿದ ಬಳಿಕವೇ ಅಮೆರಿಕದ ಅವಳಿ ಕಟ್ಟಡ ಉರುಳಿದ್ದು. ಆದ್ದರಿಂದ ತಾನು ಭಯೋತ್ಪಾದನಾ ವಿರೋಧಿ ಹೋರಾಟವನ್ನು ಕೈಗೊಳ್ಳಲು ಅವಳಿ ಕಟ್ಟಡದ ಧ್ವಂಸವೇ ಕಾರಣ ಎಂದು ಅದು ವಾದಿಸುವುದರಲ್ಲಿ ಯಾವ ನ್ಯಾಯವೂ ಇಲ್ಲ. ಬಹುಶಃ, ರಾಜಕೀಯ ಕಾರಣಗಳು ಇಂಥ ಗುಂಪುಗಳ ಹುಟ್ಟಿನ ಹಿಂದಿರಬಹುದು ಎಂದು ಬಲವಾಗಿ ಅನಿಸುವುದು ಇಂಥ ಕಾರಣಗಳಿಂದಲೇ. ಐಸಿಸ್‍ನಲ್ಲಿ ಯಾರಿದ್ದಾರೆ, ಅವರ ಹೆಸರುಗಳೇನು ಮತ್ತು ಅವರೆಷ್ಟು ಕರ್ಮಠ ಧರ್ಮಾನುಯಾಯಿಗಳು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಅವರನ್ನು ಹಾಗೆ ಒಂದುಗೂಡಿಸುವಲ್ಲಿ ತೆರೆಯ ಹಿಂದೆ ನಡೆದಿರುವ ತಂತ್ರಗಳೇನು, ಆ ಶಕ್ತಿಗಳು ಯಾರು ಎಂಬುದೇ ಮುಖ್ಯವಾಗುತ್ತದೆ. ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಯನ್ನು ನಾವು ಎತ್ತಿಕೊಳ್ಳಬೇಕಾದುದು ಈ ಎಲ್ಲ ಹಿನ್ನೆಲೆಯಲ್ಲಿ. ಈ ದೇಶದಲ್ಲಿ ಸ್ಫೋಟವಾಗುವ ಬಾಂಬುಗಳಿಗೆಲ್ಲ ಮುಸ್ಲಿಮರೇ ಕಾರಣ ಎಂಬುದು ಕರ್ನಲ್ ಪುರೋಹಿತ್, ಸಾದ್ವಿ ಪ್ರಜ್ಞಾಸಿಂಗ್, ಅಸೀಮಾನಂದ ಸಹಿತ ಹಲವರ ಬಂಧನವಾಗುವ ವರೆಗೆ ಚಾಲ್ತಿಯಲ್ಲಿತ್ತು. ಇವರ ಬಂಧನವಾಗುವರೆಗೆ ಮುಸ್ಲಿಮ್ ಆರೋಪಿಯ ಹೆಸರಿನ ಜಾಗದಲ್ಲಿ `ಅಸೀಮಾನಂದ’ ಎಂಬ ಗುರುತನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ. ಕರ್ಕರೆಯನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸುವಷ್ಟರ ಮಟ್ಟೆಗೆ ‘ಅಸೀಮಾನಂದ' ಪರಿವಾರವು ಪ್ರತಿರೋಧ ಒಡ್ಡಿತ್ತು. ಆದರೆ ಅದು ನಿಜ ಮತ್ತು ಅದು ಸಾಧ್ಯ ಎಂಬುದನ್ನು ಮಾಲೆಗಾಂವ್ ಸ್ಫೋಟದಲ್ಲಿ ಇತ್ತೀಚೆಗೆ ಹೈ ಕೋರ್ಟ್ ನೀಡಿದ ತೀರ್ಪು ಸ್ಪಷ್ಟ ಪಡಿಸಿದೆ. ಆದ್ದರಿಂದ, ಇಂದಿನ ದಿನಗಳಲ್ಲಿ ಯಾವುದೂ ಅಸಾಧ್ಯವಿಲ್ಲ. ನಮ್ಮ ಕಣ್ಣಿಗೆ ಸ್ಫೋಟ ಮತ್ತು ಅದರಿಂದಾಗುವ ನಾಶ-ನಷ್ಟಗಳಷ್ಟೇ ಕಾಣಿಸುತ್ತವೆ. ಆಡಳಿತಗಾರರು ಕೊಡುವ ಕಾರಣಗಳೇ ನಮ್ಮ ಪಾಲಿಗೆ ಅಂತಿಮವೂ ಆಗಿರುತ್ತದೆ. ಆದರೆ `ನಿಜ’ ಅಷ್ಟೇ ಆಗಿರಬೇಕಿಲ್ಲ ಅಥವಾ ಅದುವೇ ಆಗಿರಬೇಕೆಂದೂ ಇಲ್ಲ. ಮಕ್ಕಾ ಮಸೀದಿ, ಅಜ್ಮೀರ್, ಮಾಲೆಗಾಂವ್, ಸಂಜೋತಾ ಎಕ್ಸ್‍ಪ್ರೆಸ್ ಮುಂತಾದ ಸ್ಫೋಟ ಪ್ರಕರಣಗಳ ಆರೋಪದಲ್ಲಿ `ಅಸೀಮಾನಂದ’ ಬಳಗವನ್ನು ಬಂಧಿಸುವ ಮೊದಲು ಇದೇ ಪ್ರಕರಣಗಳ ಆರೋಪದಲ್ಲಿ ನೂರರಷ್ಟು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿತ್ತು. ವರ್ಷಗಳ ವರೆಗೆ ಜೈಲಲ್ಲಿ ಕೂಡಿಡಲಾಗಿತ್ತು. ತೀವ್ರ ಹಿಂಸೆಗೂ ಅವರು ಗುರಿಯಾಗಿದ್ದರು. ಅವರು ಜೈಲ್ಲಿನಲ್ಲಿರುವವರೆಗೆ  ಈ ದೇಶದ ಮಾಧ್ಯಮಗಳು ಅವರನ್ನು ಭಯೋತ್ಪಾದಕರೆಂದೇ ಬಣ್ಣಿಸಿದ್ದುವು. ಈ ದೇಶದ ಬಹುಸಂಖ್ಯಾತ ಮಂದಿ ಅವರನ್ನು ಅಪರಾಧಿಗಳೆಂದು ನಂಬಿಯೂ ಇದ್ದರು. ಆದರೆ `ಅಸೀಮಾನಂದ' ತಂಡದ ಬಂಧನದೊಂದಿಗೆ ಆ ನಂಬಿಕೆಯಲ್ಲಿ ದೊಡ್ಡದೊಂದು ಪಲ್ಲಟ ಉಂಟಾಯಿತು. ನಿಜವಾಗಿ, ಸಾರ್ವಜನಿಕ ಅಭಿಪ್ರಾಯಗಳು ಯಾವಾಗಲೂ ಇಷ್ಟೇ. ಆಡಳಿತಗಾರರು ಹೇಳಿದ್ದನ್ನು ಅಥವಾ ಬಾಹ್ಯವಾಗಿ ಕಾಣುವುದನ್ನಷ್ಟೇ ನಂಬುತ್ತಾರೆ. ಆದರೆ ಅದಕ್ಕೆ ಹೊರತಾದ ಕಾರಣಗಳೂ ಖಂಡಿತ ಇರುತ್ತವೆ. ಮಹಾರಾಷ್ಟ್ರದ ನಿವೃತ್ತ ಪೊಲೀಸ್ ಅಧಿಕಾರಿ ಮುಶ್ರಿಪ್ ಅವರು `ಕರ್ಕರೆಯನ್ನು ಕೊಂದದ್ದು ಯಾರು’ ಎಂಬ ಕೃತಿಯಲ್ಲಿ ಇಂಥ ಕಾಣದ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ರಾಜಕೀಯಕ್ಕೆ ಕೋಮುಗಲಭೆಗಳೂ ಬೇಕು, ಹತ್ಯಾಕಾಂಡಗಳೂ ಬೇಕು, ಜಾತ್ರೋತ್ಸವಗಳೂ ಬೇಕು. ಸಂದರ್ಭಕ್ಕೆ ತಕ್ಕಂತೆ ಎಲ್ಲವನ್ನೂ ಅದು ಸುದುಪಯೋಗ ಅಥವಾ ದುರುಪಯೋಗ ಮಾಡಿಕೊಳ್ಳುತ್ತಲೇ ಇರುತ್ತದೆ. ದಿಗ್ವಿಜಯ್ ಸಿಂಗ್ ಅವರ ಅಭಿಪ್ರಾಯವು ಮುಖ್ಯವಾಗುವುದು ಇಂಥ ಕಾರಣಗಳಿಂದ. ಅವರ ಅಭಿಪ್ರಾಯ ಸುಳ್ಳಾಗಲಿ ಎಂದಷ್ಟೇ ಹಾರೈಸಬೇಕಾಗಿದೆ.

No comments:

Post a Comment