Tuesday 20 June 2023

ಶಾದಿ ಭಾಗ್ಯ: ಸಿದ್ದರಾಮಯ್ಯ ತಪ್ಪಾದರೆ ಯೋಗಿ ಏಕೆ ಸರಿ?

 

20-10-2022

ಸ್ಪಂದನೆ ಮತ್ತು ಓಲೈಕೆ- ಇವೆರಡೂ ರಾಜಕೀಯವಾಗಿ ಸಾಕಷ್ಟು ದುರುಪಯೋಗವಾದ ಪದಗಳು. ಮುಸ್ಲಿಮರ ಅಭಿವೃದ್ಧಿಗಾಗಿ ಕಾಂಗ್ರೆಸ್ ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಬಿಜೆಪಿಗೆ ಓಲೈಕೆಯಾಗಿ ಕಾಣಿಸುತ್ತದೆ. ಓಟ್‌ಬ್ಯಾಂಕನ್ನು ಗಟ್ಟಿಗೊಳಿಸುವುದಕ್ಕಾಗಿ ತೆಗೆದುಕೊಂಡ ಅನೈತಿಕ ನಿರ್ಧಾರ ಎಂದು ಅದು ವ್ಯಾಖ್ಯಾನಿಸುತ್ತದೆ. ಇದೀಗ ಇದೇ ಬಿಜೆಪಿ ಉತ್ತರ ಪ್ರದೇಶದಲ್ಲಿ ತೆಗೆದುಕೊಂಡ ನಿರ್ಧಾರವು ರಾಷ್ಟçಮಟ್ಟದಲ್ಲಿ ಮುಖ್ಯ ಸುದ್ದಿಯಾಗಿದೆ. ಕಳೆದ ಎಪ್ರಿಲ್‌ನಿಂದ ಆಗಸ್ಟ್ ನಡುವೆ 1387ರಷ್ಟು ಬಡ ಮುಸ್ಲಿಮ್ ಜೋಡಿಗಳಿಗೆ ಯೋಗಿ ಸರಕಾರ ಶಾದಿಭಾಗ್ಯವನ್ನು ಕರುಣಿಸಿದೆ. ಪ್ರತಿ ವಧುವಿಗೂ 51 ಸಾವಿರ ರೂಪಾಯಿ ಮೊತ್ತವನ್ನು ವಿವಾಹಧನವಾಗಿಯೂ ನೀಡಿದೆ. ಈ ಸುದ್ದಿಯನ್ನು ಇಂಗ್ಲಿಷ್ ಮತ್ತು ಕನ್ನಡದ ಪ್ರಮುಖ ಪತ್ರಿಕೆಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿಯೂ ಇವೆ. ಮಾತ್ರವಲ್ಲ, ‘1300 ಮುಸ್ಲಿಮ್ ಜೋಡಿಗಳಿಗೆ ಮದುವೆ ಮಾಡಿಸಿದ ಯೋಗಿ ಆದಿತ್ಯನಾಥ್ ಸರ್ಕಾರ’ ಎಂಬಂತಹ ಶೀರ್ಷಿಕೆಯನ್ನೂ ಕೊಟ್ಟಿವೆ. ಹೀಗಿದ್ದೂ, ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಹಿಡಿದು ಪಂಚಾಯತ್ ಸದಸ್ಯರ ವರೆಗೆ ಒಬ್ಬರೇ ಒಬ್ಬರೂ ಈ ನಡೆಯನ್ನು ಪ್ರಶ್ನಿಸಿಲ್ಲ. ಓಲೈಕೆ ಎಂದು ಟೀಕಿಸಿಲ್ಲ. ಅಷ್ಟಕ್ಕೂ,

ಕಳೆದ ಎಪ್ರಿಲ್‌ನಿಂದ ಆಗಸ್ಟ್ ನಡುವೆ ಬಡತನ ರೇಖೆಗಿಂತ ಕೆಳಗಿರುವ 16,033ರಷ್ಟು ಜೋಡಿಗಳ ವಿವಾಹವನ್ನು ಯೋಗಿ ಸರ್ಕಾರ ನಡೆಸಿದೆಯಾದರೂ ಮತ್ತು ಅದರಲ್ಲಿ 9374ರಷ್ಟು ಜೋಡಿಗಳು ದಲಿತ ಸಮುದಾಯಕ್ಕೆ ಸೇರಿದವರಾದರೂ ಮಾಧ್ಯಮಗಳೇಕೆ ಬರೇ 1387ರಷ್ಟು ಸಂಖ್ಯೆಯನ್ನು ಮತ್ತು ಅವರ ಧರ್ಮವನ್ನು ಶೀರ್ಷಿಕೆಗೆ ಆಯ್ಕೆ ಮಾಡಿಕೊಂಡಿದೆ ಎಂಬ ಪ್ರಶ್ನೆಯೂ ಮಹತ್ವ ಪಡೆಯುತ್ತದೆ. ಅಲ್ಲದೇ, ಇತರೇ ಹಿಂದುಳಿತ ಸಮುದಾಯಕ್ಕೆ ಸೇರಿದ 4649ರಷ್ಟು ಜೋಡಿಗಳಿಗೂ ಸರ್ಕಾರ ಇದೇ ಅವಧಿಯಲ್ಲಿ ವಿವಾಹ ನೆರವೇರಿಸಿದೆ. ಈ ಒಟ್ಟು 16,033 ಜೋಡಿ ವಿವಾಹಗಳಿಗೆ ಸರ್ಕಾರ 81 ಕೋಟಿ 76 ಲಕ್ಷ ರೂಪಾಯಿಯನ್ನೂ ಖರ್ಚು ಮಾಡಿದೆ. ಒಂದುರೀತಿಯಲ್ಲಿ,

ಒಟ್ಟು 16033ರಷ್ಟು ಜೋಡಿಗಳಲ್ಲಿ ಬರೇ 1387ರಷ್ಟು ಜೋಡಿಗಳ ವಿವಾಹವನ್ನೇ ಮಾಧ್ಯಮಗಳು ಮುಖ್ಯ ಸುದ್ದಿಯಾಗಿ ಪ್ರಕಟಿಸಿರುವುದರಲ್ಲಿ ಒಂದು ಮಹತ್ವದ ಸೂಚನೆಯಿದೆ. ಬಿಜೆಪಿ ಮುಸ್ಲಿಮರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬುದೇ ಈ ಸೂಚನೆ. ಮುಸ್ಲಿಮ್ ವಿರೋಧಿ ನೀತಿಯನ್ನು ಹೊಂದಿರುವ ಬಿಜೆಪಿ ಇಂಥದ್ದೊಂದು ವಿವಾಹವನ್ನು ಮಾಡಿಸಿದೆ ಎಂಬ ಅಚ್ಚರಿಯೊಂದು ಮಾಧ್ಯಮಗಳ ಶೀರ್ಷಿಕೆಯಲ್ಲಿದೆ. ಈ ಶೀರ್ಷಿಕೆಗಳೇ ನಿಜವಾದ ಬಿಜೆಪಿ. 9347ರಷ್ಟು ದಲಿತ ಜೋಡಿಗಳ ವಿವಾಹ ನಡೆಸಿಯೂ ಬರೇ 1387ರಷ್ಟು ಮುಸ್ಲಿಮ್ ಜೋಡಿಗಳೇ ಮಾಧ್ಯಮಗಳ ಶೀರ್ಷಿಕೆಗೆ ವಸ್ತುವಾಗುತ್ತದೆಂದರೆ, ಅದಕ್ಕೆ ಬೇರೆ ಏನು ಕಾರಣವಿದೆ? ಇನ್ನೂ ಒಂದು ಪ್ರಶ್ನೆಯಿದೆ. ಅದು ನೈತಿಕತೆಯದ್ದು. ಮುಖ್ಯಮಂತ್ರಿ ಸಿದ್ಧರಾಮಯ್ಯರು ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡಿದಾಗ ಬೀದಿರಂಪ ಮಾಡಿದ್ದು ಇದೇ ಬಿಜೆಪಿ. ಓಲೈಕೆ ಎಂದು ಹಂಗಿಸಿದ್ದೂ ಇದೇ ಬಿಜೆಪಿ. ಇಂಥ ಪಕ್ಷವೊಂದು ಅದೇ ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡುವುದೆಂದರೆ ಅರ್ಥ ಏನು? ಶಾದಿಭಾಗ್ಯ ಯೋಜನೆಯು ಕರ್ನಾಟಕದಲ್ಲಿ ಮುಸ್ಲಿಮ್ ಓಲೈಕೆಯಾಗುತ್ತದೆಂದಾದರೆ ಉತ್ತರ ಪ್ರದೇಶದಲ್ಲಿ ಯಾಕಾಗದು?

ಬಿಜೆಪಿ ಎಷ್ಟೇ ಸಮರ್ಥನೆ ಮಾಡಿಕೊಳ್ಳಲಿ, ಅದು ಧರ್ಮಾಧಾರಿತ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬುದಕ್ಕೆ ಈ ಮಾಧ್ಯಮ ಶೀರ್ಷಿಕೆಗಳೇ ಗಟ್ಟಿ ಪುರಾವೆ. ಈ ವಿಷಯದಲ್ಲಿ ಬಿಜೆಪಿಯೊಂದನ್ನು ಬಿಟ್ಟು ಉಳಿದೆಲ್ಲ ರಾಷ್ಟ್ರೀಯ ಪಕ್ಷಗಳಲ್ಲೂ ಒಮ್ಮತವಿದೆ. ಬಿಜೆಪಿಯ ರಾಜಕೀಯ ಯಶಸ್ಸಿನ ಗುಟ್ಟೇ ಮುಸ್ಲಿಮರು. ಸ್ವಾತಂತ್ರ‍್ಯಪೂರ್ವದಲ್ಲಿ ಈ ಉಪಭೂಖಂಡವನ್ನು ಆಳಿದ ಮುಸ್ಲಿಮ್ ದೊರೆಗಳಿಂದ ಹಿಡಿದು ಈಗಿನ ಮುಸ್ಲಿಮ್ ಜನಸಾಮಾನ್ಯರ ವರೆಗೆ ಬಿಜೆಪಿ ರಾಜಕೀಯ ನೆಲೆ ನಿಂತಿರುವುದೇ ಅವರ ಮೇಲೆ. ಹಿಂದೂ-ಮುಸ್ಲಿಮರ ನಡುವೆ ನಡೆಯುವ ಯಾವುದೇ ವೈಯಕ್ತಿಕ ಜಗಳಕ್ಕೂ ಕೋಮು ಬಣ್ಣವನ್ನು ಲೇಪಿಸುವುದು ಬಿಜೆಪಿಯ ಖಯಾಲಿ. ಕಳೆದವಾರ ದೆಹಲಿಯಲ್ಲಿ ನಿತೇಶ್ ಮತ್ತು ಅಲೋಕ್ ಎಂಬವರ ಮೇಲೆ ಹಲ್ಲೆ ನಡೆಯಿತು. ನಿತೇಶ್ ಆಸ್ಪತ್ರೆಯಲ್ಲಿ ಅಸುನೀಗಿದ. ಆರೋಪಿಗಳು ಹಫೀಝ್, ಅಬ್ಬಾಸ್, ಅದ್ನಾನ್ ಎಂದು ತಿಳಿದದ್ದೇ ತಡ, ಬಿಜೆಪಿ ಇಡೀ ಘಟನೆಗೆ ಹಿಂದೂ-ಮುಸ್ಲಿಮ್ ಬಣ್ಣವನ್ನು ಬಳಿಯಿತು. ರಸ್ತೆ ತಡೆ ನಡೆಸಿತು. ಪಕ್ಕದ ಮಸೀದಿಯಿಂದ ಗುಂಪೊಂದು ಥಳಿಸಲು ಬಂದಿತ್ತು ಎಂಬ ಕತೆ ಕಟ್ಟಿತು. ನಿತೇಶ್ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದೇ ಆತ ಮಾಡಿದ ತಪ್ಪು ಎಂದು ಪ್ರತಿಪಾದಿಸಿತು. ಆದರೆ, ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿರುವ ದೆಹಲಿ ಪೊಲೀಸರೇ ಈ ವಾದವನ್ನು ತಿರಸ್ಕರಿಸಿದರು. ಕೋಮುದ್ವೇಷದ ಹತ್ಯೆ ಎಂಬುದನ್ನು ಅವರು ನಿರಾಕರಿಸಿದರಲ್ಲದೇ, ಸಾಮಾನ್ಯ ಜಗಳವೊಂದು ಹತ್ಯೆಯಲ್ಲಿ ಕೊನೆಗೊಂಡಿದೆ ಎಂದು ವಿವರಿಸಿದರು. ಅಲ್ಲದೇ ನಿತೇಶ್ ಮತ್ತು ಗೆಳೆಯ ಅಲೋಕ್ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಇವರೇ ಮೊದಲು ಆರೋಪಿಗಳ ಮೇಲೆ ಹಲ್ಲೆ ನಡೆಸಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ ಎಂದೂ ಹೇಳಿದರು. ಇದೊಂದೇ ಅಲ್ಲ,

ಹೊನ್ನಾವರ ಪರೇಶ್ ಮೇಸ್ತಾ ಹತ್ಯೆಯನ್ನು ಬಿಜೆಪಿ ಇದೇ ರೀತಿ ಕೋಮು ದ್ವೇಷಕ್ಕೆ ಬಳಸಿಕೊಂಡಿತ್ತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈ ಹತ್ಯೆಯ ಹಿಂದೆ ಮುಸ್ಲಿಮರಿದ್ದಾರೆ ಮತ್ತು ಹಿಂದೂ ಎಂಬ ಕಾರಣಕ್ಕಾಗಿಯೇ ಈ ಹತ್ಯೆ ನಡೆಸಲಾಗಿದೆ ಎಂಬ ರೀತಿಯಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಇದೀಗ ಕೇಂದ್ರದ ಅಧೀನದಲ್ಲಿರುವ ಸಿಬಿಐ ಈ ಹತ್ಯೆಯ ಬಗ್ಗೆ ತನಿಖಾ ವರದಿಯನ್ನು ಮಂಡಿಸಿದೆ. ಅದೊಂದು ಆಕಸ್ಮಿಕ ಸಾವು ಮತ್ತು ಅದರಲ್ಲಿ ಯಾರದೇ ಕೈವಾಡವಿಲ್ಲ ಎಂದು ಹೇಳಿದೆ. ಇದಕ್ಕಿಂತ ಮೊದಲು 2017ರಲ್ಲಿ ದ.ಕ. ಜಿಲ್ಲೆಯ ಕೊಣಾಜೆಯಲ್ಲಿ 27 ವರ್ಷದ ಕಾರ್ತಿಕ್ ರಾಜ್ ಎಂಬ ಯುವಕನ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ಜಿಹಾದಿ ಕೈವಾಡವಿದೆ ಎಂದು ಬಿಜೆಪಿ ಹೇಳಿತ್ತಲ್ಲದೇ, ಬಿಜೆಪಿಯ ಈಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರಿಂದ ಹಿಡಿದು ಸಾಮಾನ್ಯ ಸದಸ್ಯರ ವರೆಗೆ ಆ ಹತ್ಯೆಗೆ ಮುಸ್ಲಿಮರನ್ನೇ ಗುರಿಯಾಗಿಸಿ ಹೇಳಿಕೆಯನ್ನು ನೀಡಿದ್ದರು. ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ, ಆ ಹತ್ಯೆಗೂ ಮುಸ್ಲಿಮರಿಗೂ ಸಂಬಂಧವೇ ಇಲ್ಲ ಎಂಬುದನ್ನು ಅಂದಿನ ಪೊಲೀಸ್ ಕಮೀಷನರ್ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ ಹತ್ಯೆಯನ್ನು ಕಾರ್ತಿಕ್ ರಾಜ್‌ರ ತಂಗಿ ಕಾವ್ಯಶ್ರೀಯೇ ಪ್ರಾಯೋಜಿಸಿದ್ದಳು. ತನ್ನ ಗೆಳೆಯರಾದ ಗೌತಮ್ ಮತ್ತು ಆತನ ಸಹೋದರ ಗೌರವ್‌ರ ಮೂಲಕ ತನ್ನ ಅಣ್ಣನನ್ನೇ ಆಕೆ ಸುಪಾರಿ ನೀಡಿ ಕೊಲ್ಲಿಸಿದ್ದಳು. ಇದಾದ ಬಳಿಕ ಇತ್ತೀಚೆಗಷ್ಟೇ ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದುವು. ಆದರೆ ಈ ಹತ್ಯೆಗಳಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಗೆ ಮಾತ್ರ ಮಹತ್ವ ನೀಡಿದ ಬಿಜೆಪಿ ಮಸೂದ್ ಮತ್ತು ಫಾಝಿಲ್ ಹತ್ಯೆಗಳನ್ನು ಕಡೆಗಣಿಸಿತು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ 25ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದ್ದಲ್ಲದೇ ಪ್ರವೀಣ್ ಪತ್ನಿ ನೂತನ ಕುಮಾರಿಗೆ ಸರ್ಕಾರಿ ಉದ್ಯೋಗವನ್ನೂ ನೀಡಿದ ಮುಖ್ಯಮಂತ್ರಿಗಳು ಉಳಿದಿಬ್ಬರ ಮನೆಗೆ ಭೇಟಿ ಕೊಡುವುದಾಗಲಿ, ಪರಿಹಾರ ವಿತರಿಸುವುದಾಗಲಿ, ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಲಿ ಈವರೆಗೂ ಮಾಡಿಯೇ ಇಲ್ಲ.

ಬಿಜೆಪಿ ಇಂಥ ಬಹಿರಂಗ ತಾರತಮ್ಯವನ್ನು ತನ್ನ ಅಧಿಕೃತ ನೀತಿಯಾಗಿಯೇ ಸ್ವೀಕರಿಸಿಕೊಂಡಂತಿದೆ. ಹಿಂದೂ ಧ್ರುವೀಕರಣವಾಗಬೇಕಾದರೆ ಮುಸ್ಲಿಮರನ್ನು ಹೀಗೆ ನಡೆಸಿಕೊಳ್ಳುತ್ತಲೇ ಬರಬೇಕು ಎಂಬ ನೀತಿಯಲ್ಲಿ ಅದು ಬಲವಾದ ನಂಬಿಕೆ ಇರಿಸಿದಂತಿದೆ. ಈ ಕಾರಣ ದಿಂದಾಗಿಯೇ ಯೋಗಿ ಸರಕಾರದ ಶಾದಿಭಾಗ್ಯಕ್ಕೆ ಮಾಧ್ಯಮಗಳು ಉಳಿದೆಲ್ಲವುಗಳಿಗಿಂತ ಮಹತ್ವ ಕೊಟ್ಟಿದೆ. ಅಚ್ಚರಿ ಏನೆಂದರೆ, ಮುಸ್ಲಿಮರ ಅಭಿವೃದ್ಧಿಗೆಂದು ಬಿಜೆಪಿಯೇತರ ಸರಕಾರಗಳು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಓಲೈಕೆ ಎನ್ನುವ ಬಿಜೆಪಿಯೇ ಸ್ವತಃ ಶಾದಿಭಾಗ್ಯ ಯೋಜನೆಯನ್ನು ಜಾರಿ ಮಾಡುತ್ತಿರುವುದು. ಇದೇ ನೀತಿಯನ್ನು ಕಾಂಗ್ರೆಸ್ ಜಾರಿ ಮಾಡಿದಾಗ ಓಲೈಕೆ ಎಂದ ಪಕ್ಷವೇ ಈಗ ಬಾಯಿಯನ್ನು ಹೊಲಿದುಕೊಂಡು ಮೌನ್ಯವಾಗಿರುವುದು. ನಿಜವಾಗಿ, ಇದು ಕಾಪಟ್ಯ. ಅನೈತಿಕ. ನಿಜವಾಗಿ,

ಯಾವುದೇ ಒಂದು ಆಡಳಿತ ನಿರ್ದಿಷ್ಟ ಧರ್ಮ, ಜಾತಿ, ಸಮುದಾಯಗಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಕೈಗೊಂಡ ಯೋಜನೆ ಮೆಚ್ಚುವಂತದ್ದೆ. ಬಡತನ ರೇಖೆಗಿಂತ ಕೆಳಗಿರುವ ಮುಸ್ಲಿಮ್ ಸಮುದಾಯದ ಜೋಡಿಗಳನ್ನು ಗುರುತಿಸಿ, ವಧುವಿಗೆ ವಿವಾಹ ಧನವನ್ನು ಕೊಟ್ಟು ವಿವಾಹ ಮಾಡಿಸುವುದನ್ನು ಬೆಂಬಲಿಸಬೇಕು. ಆದರೆ, ಇದೇ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಕೈಗೊಂಡಾಗ ಮುಸ್ಲಿಮ್ ಓಲೈಕೆ ಅಂದರಲ್ಲ, ಪ್ರಶ್ನಿಸಬೇಕಾದದ್ದು ಅವರನ್ನು. ಅವರು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾಯಕಾರಿ.

No comments:

Post a Comment