Tuesday 20 June 2023

ಕುಕ್ಕರ್ ಬಾಂಬನ್ನೂ ಮೀರಿಸುವ ಪೇಪರ್ ಬಾಂಬ್

29-11-2022

 ಕುಕ್ಕರ್ ಬಾಂಬ್ ಘಟನೆಯ ಬಳಿಕ ಕನ್ನಡ ಪತ್ರಿಕೆಗಳು ಬಹುತೇಕ ಒಂದೂವರೆ ವಾರಗಳ ತನಕ ಪ್ರಕಟಿಸಿದ ವರದಿ-ಸುದ್ದಿಗಳ ಮೂಲ ಯಾವುದು? ಆರೋಪಿ ಶಾರಿಕ್ ಅಂತೂ ಈ ಮಾಹಿತಿಗಳನ್ನು ಒದಗಿಸಿಯೇ ಇಲ್ಲ. ‘ಬಾಂಬ್ ಸ್ಫೋಟದಿಂದಾದ ಗಾಯಗಳಿಂದ ಆತ ಇನ್ನೂ ಚೇತರಿಸಿಕೊಂಡಿಲ್ಲ’ ಎಂದು ಒಂದೂವರೆ ವಾರಗಳ ಬಳಿಕ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಎಲ್ಲಿಯವರೆಗೆಂದರೆ, ‘ವೈದ್ಯರ ಹೊರತು ಇನ್ನಾರಿಗೂ ಆತ ಚಿಕಿತ್ಸೆ ಪಡೆಯುತ್ತಿರುವ ಐಸಿಯು ಕೋಣೆಗೆ ಪ್ರವೇಶ ಇಲ್ಲ’ ಎಂದೂ ಹೇಳಿದ್ದಾರೆ. ಆದ್ದರಿಂದ, ಆತನ ಹೆಸರಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳೆಲ್ಲ ಕಲ್ಪಿತ, ಊಹಾಪೋಹ ಮತ್ತು ವದಂತಿ ಎಂಬುದಾಗಿ ನೇರವಾಗಿಯೇ ಅವರು ಸಾರಿದಂತಾಗಿದೆ. ಹಾಗಿದ್ದರೆ,

ಮಂಗಳೂರಿನ ಕದ್ರಿ ದೇಗುಲ, ಧರ್ಮಸ್ಥಳ ಮಂಜುನಾಥ ಕ್ಷೇತ್ರ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಉಡುಪಿಯ ಕೃಷ್ಣ ಮಠ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ.. ಇವೆಲ್ಲ ಆರೋಪಿ ಶಾರಿಕ್‌ನ ಟಾರ್ಗೆಟ್ ಆಗಿತ್ತು ಎಂದು ಕನ್ನಡ ಪತ್ರಿಕೆಗಳು ಮುಖ ಪುಟದಲ್ಲಿ ಸುದ್ದಿ ಪ್ರಕಟಿಸಿದುವಲ್ಲ, ಆ ಮಾಹಿತಿಯನ್ನು ಒದಗಿಸಿದವರು ಯಾರು? ಝಾಕಿರ್ ನಾಯಕ್‌ನಿಂದ ಈತ ಪ್ರಚೋದನೆ ಪಡೆದಿದ್ದ ಎಂಬ ಸುದ್ದಿಯನ್ನು ಪ್ರಕಟಿಸಿದ್ದು ಯಾವ ಆಧಾರದಲ್ಲಿ? ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕಾಣಿಸಿಕೊಂಡಿದೆ ಎನ್ನಲಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್‌ಸಿ) ಎಂಬ ಹೆಸರಿನಲ್ಲಿರುವ ಪತ್ರದ ಮೇಲೆ ಕನ್ನಡ ಮಾಧ್ಯಮಗಳು ನೂರು ಶೇಕಡಾ ವಿಶ್ವಾಸ ತಾಳಿದುದು ಯಾವ ಆಧಾರದಲ್ಲಿ? ಗುರುತು-ವಿಳಾಸ ಇಲ್ಲದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಪತ್ರವೊಂದಕ್ಕೆ ಮುಖಪುಟದಲ್ಲಿಟ್ಟು ಕನ್ನಡ ಪತ್ರಿಕೆಗಳು ಗೌರವ ಸೂಚಿಸಿದ್ದು ಯಾವ ಕಾರಣಕ್ಕೆ? ಒಂದೋ ಆ ಪತ್ರವನ್ನು ತನಿಖಾ ಸಂಸ್ಥೆಗಳು ದೃಢಪಡಿಸಬೇಕಿತ್ತು ಅಥವಾ ಅದರ ಮೂಲವನ್ನು ಸ್ವತಃ ಪತ್ರಿಕೆಗಳು ತನಿಖಾ ಪತ್ರಿಕೋದ್ಯಮದ ಮೂಲಕ ಕಂಡುಕೊಳ್ಳಬೇಕಿತ್ತು. ಇವಾವುದನ್ನೂ ಮಾಡದೇ ‘ಐಆರ್‌ಸಿ’ ಎಂಬ ಗುಮ್ಮವನ್ನು ತೋರಿಸಿ ಇಡೀ ದ.ಕ. ಜಿಲ್ಲೆಗೆ ಭಯ ಹಬ್ಬಿಸಿ ಬಿಟ್ಟದ್ದು ಯಾಕೆ? ಅಲ್ಲದೇ, ಆ ಪತ್ರದಲ್ಲಿ ಕುಕ್ಕರ್ ಬಾಂಬ್‌ನ ಹೊಣೆಗಾರಿಕೆಯನ್ನು ವಹಿಸಲಾಗಿತ್ತೇ ವಿನಃ ದೇಗುಲದ ಟಾರ್ಗೆಟ್‌ನ ಬಗ್ಗೆ ಮಾಹಿತಿ ಇರುವುದನ್ನು ಈ ಮಾಧ್ಯಮಗಳೇ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹೆಸರು-ವಿಳಾಸವಿಲ್ಲದ ಬರಹವೊಂದನ್ನು ಈವರೆಗೆ ಯಾವುದೇ ಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದು ಇದೆಯೇ? ಪತ್ರದ ಮೂಲವನ್ನು ಒಂದೋ ಪೊಲೀಸರಿಂದ ಅಥವಾ ಸ್ವಮೂಲದಿಂದ ಖಚಿತಪಡಿಸಿಕೊಳ್ಳದೇ ಹಾಗೇ ಬೇಕಾಬಿಟ್ಟಿಯಾಗಿ ಮುಖಪುಟದಲ್ಲಿ ಪ್ರಕಟಿಸುವುದು ಪತ್ರಿಕೋದ್ಯಮವೇ? ಅಷ್ಟಕ್ಕೂ,

ಇನ್ನೂ ಚೇತರಿಸಿಕೊಳ್ಳದ ಮತ್ತು ಮಾತನಾಡಲು ಶಕ್ತನಲ್ಲದ ಶಾರಿಕ್‌ನ ಬಗ್ಗೆ ಒಂದೂವರೆ ವಾರಗಳ ತನಕ ವಿವಿಧ ಸುದ್ದಿಗಳನ್ನು ಮಾಧ್ಯಮಗಳಿಗೆ ನೀಡಿದವರು ಯಾರು? ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ, ರೈಲ್ವೇ ನಿಲ್ದಾಣಗಳು ಆತನ ಟಾರ್ಗೆಟ್ ಆಗಿತ್ತು ಎಂದು ಈ ಮಾಧ್ಯಮಗಳಿಗೆ ತಿಳಿಸಿದವರು ಯಾರು? ದೇವಸ್ಥಾನಗಳಿಗೆ ಆತ ಬಾಂಬಿಡುವ ಯೋಜನೆ ರೂಪಿಸಿದ್ದ ಎಂದು ಮಾಹಿತಿ ಕೊಟ್ಟವರು ಯಾರು? ಶಾರಿಕ್ ಅಲ್ಲ ಎಂದು ಸ್ವತಃ ಕಮಿಷನರ್ ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಮತ್ತ್ಯಾರು? ಪತ್ರಕರ್ತರೇ, ಸಂಪಾದಕರೇ, ಮಾಲಿಕರೇ? ಯಾಕೆ ಈ ಕತೆಗಳಲ್ಲಿ ದೇವಸ್ಥಾನಗಳೇ ಟಾರ್ಗೆಟ್ ಆಗಿವೆ? ಮಸೀದಿಗಳನ್ನು, ಚರ್ಚ್‌ಗಳನ್ನು, ಬಸದಿ, ಬೌದ್ಧ ಸ್ತೂಪಗಳನ್ನೂ ಟಾರ್ಗೆಟ್ ಎಂದು ಯಾಕೆ ಬಿಂಬಿಸಲಾಗಿಲ್ಲ? ಮಂಗಳೂರಿನ ಪ್ರಸಿದ್ಧ ಪಂಪ್‌ವೆಲ್ ಮಸೀದಿ, ಬಂದರ್ ಮಸೀದಿ, ಮಂಗಳೂರಿನ ಚರ್ಚ್, ಕಾರ್ಕಳದ ಜೈನ ಬಸದಿ ಇತ್ಯಾದಿಗಳನ್ನು ಆತನ ಟಾರ್ಗೆಟ್ ಪಟ್ಟಿಯಲ್ಲಿಟ್ಟು ಸುದ್ದಿ ಮಾಡಬಹುದಿತ್ತಲ್ಲವೇ? ಶಾರಿಕ್ ಎಂಬುದು ಮುಸ್ಲಿಮ್ ಹೆಸರು, ಆದ್ದರಿಂದ ಆತನಿಗೆ ಹಿಂದೂಗಳಲ್ಲಿ ದ್ವೇಷವಿದೆ ಎಂಬ ಸಂದೇಶವನ್ನು ರವಾನಿಸುವುದು ಈ ಸುದ್ದಿ ತಯಾರಕರ ಉದ್ದೇಶವೇ? ಮುಸ್ಲಿಮ್ ಏಕೆ ದೇವಸ್ಥಾನಗಳಿಗೆ ಬಾಂಬ್ ಇಡಬೇಕು? ದೇವಸ್ಥಾನದಿಂದ ಮುಸ್ಲಿಮರಿಗೆ ಆಗುವ ತೊಂದರೆಗಳೇನು? ಈ ದೇಶದಲ್ಲಿ ಮಸೀದಿ ಪಕ್ಕವೇ ದೇವಸ್ಥಾನವಿದೆ, ಚರ್ಚ್ ಇದೆ. ಯಾವ ಮುಸ್ಲಿಮರು ದೇವಸ್ಥಾನದ ವಿರುದ್ಧ ಪ್ರತಿಭಟಿಸಿದ್ದಾರೆ ಎಲ್ಲಿ ದೇವಸ್ಥಾನಗಳಿಗೆ ಬಾಂಬ್ ಇಟ್ಟಿದ್ದಾರೆ? ದೇಶದ ಮಣ್ಣಿನೊಂದಿಗೆ ಮುಸ್ಲಿಮರಿಗೆ ಸಾವಿರ ವರ್ಷಗಳ ನಂಟಿದೆ. ಸ್ವಾತಂತ್ರ‍್ಯಾ ನಂತರದ 75 ವರ್ಷಗಳ ಮುಸ್ಲಿಮರ ಬದುಕನ್ನೂ ಈ ದೇಶ ಕಂಡಿದೆ. ಹಿಂದೂ-ಮುಸ್ಲಿಮರು ತಮ್ಮ ಪಾಡಿಗೆ ಅನ್ಯೋ ನ್ಯವಾಗಿ ಬದುಕುತ್ತಿರುವಾಗ, ಇನ್ನೂ ಬಾಯಿ ತೆರೆಯದ ವ್ಯಕ್ತಿಯ ಭುಜದಲ್ಲಿ ಬಂದೂಕಿಟ್ಟು ಮಾಧ್ಯಮಗಳು ಸಿಡಿಸುತ್ತಿರುವ ಗುಂಡುಗಳ ಉದ್ದೇಶವೇನು? ದೇವಸ್ಥಾನಗಳು ಶಾರಿಕ್‌ನ ಟಾರ್ಗೆಟ್ ಎಂದು ಹೇಳಿದ ಅದೇ ವೇಗದಲ್ಲಿ ಮಸೀದಿಗಳೂ ಆತನ ಟಾರ್ಗೆಟ್ ಎಂದೂ ಹೇಳಬಹುದಿತ್ತಲ್ಲ? ಹೀಗೆ ಹೇಳುವುದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಲಾಭವಿತ್ತಲ್ಲವೇ? ಕತೆ ಬರೆಯುವಾಗ ಕನಿಷ್ಠ ಸಮಾಜದ ಸ್ವಾಸ್ಥ್ಯವನ್ನಾದರೂ ಕಾಪಾಡುವಷ್ಟು ಕಾಳಜಿ ಯಾಕೆ ಈ ಮಾಧ್ಯಮಗಳು ತೋರಿಸಲಿಲ್ಲ?

ಭಯೋತ್ಪಾದನಾ ಕೃತ್ಯವು ದರೋಡೆ, ಹಲ್ಲೆ, ವಂಚನೆಯಂಥ ಪ್ರಕರಣವಲ್ಲ. ಬಾಂಬ್‌ನ ಗುಣವೇ ಸ್ಫೋಟಗೊಳ್ಳುವುದು. ಅದಕ್ಕೆ ಧರ್ಮ-ಬೇಧ ಇಲ್ಲ. ಅದನ್ನು ಎಲ್ಲಿ ಇಡಲಾಗುತ್ತೋ ಅಲ್ಲಿ ಸ್ಫೋಟಗೊಳ್ಳುತ್ತದೆ. ಮಸೀದಿಯಲ್ಲಿಟ್ಟರೂ ದೇವಸ್ಥಾನದಲ್ಲಿಟ್ಟರೂ ಸೇತುವೆಯಲ್ಲಿಟ್ಟರೂ ಅದು ತನ್ನ ಸ್ಫೋಟ ಗುಣವನ್ನು ಕಳಕೊಳ್ಳುವುದಿಲ್ಲ. ಅನಾಹುತವಷ್ಟೇ ಅದರ ಗುರಿ. ಇಂಥ ಅನಾಹುತವನ್ನು ಮಾಡಹೊರಟವ ಹಿಂದೂಗಳದ್ದೋ ಮುಸ್ಲಿಮರದ್ದೋ ಹಿತಾಕಾಂಕ್ಷಿಯಾಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆತನ ಹೆಸರು ಮತ್ತು ಬಾಹ್ಯ ಚಹರೆಯನ್ನು ನೋಡಿ ಆತ ಇಂತಿಂಥ ಧರ್ಮೀಯರನ್ನೇ ಟಾರ್ಗೆಟ್ ಮಾಡಿದ್ದಾನೆ ಅಥವಾ ನಿರ್ದಿಷ್ಟ ಧರ್ಮೀಯರ ಧಾರ್ಮಿಕ ಕ್ಷೇತ್ರವನ್ನೇ ಉಡಾಯಿಸಲು ಸಂಚು ರೂಪಿಸಿದ್ದಾನೆ ಎಂದು ಆತ ಬಾಯಿ ಬಿಡದೇ ಖಚಿತವಾಗಿ ಹೇಳುವುದು ಅನಾಹುತಕಾರಿ.

ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವುದಕ್ಕಾಗಿ ಮುಸ್ಲಿಮ್ ಹೆಸರಿನ ವ್ಯಕ್ತಿಯೇ ಮಸೀದಿಗಳನ್ನು ಟಾರ್ಗೆಟ್ ಮಾಡಬಹುದು, ಹಿಂದೂ ಹೆಸರಿನ ವ್ಯಕ್ತಿಯಿಂದಲೂ ಇಂಥದ್ದೇ ತಂತ್ರ ನಡೆಯಬಹುದು. ಕ್ರೌರ್ಯಕ್ಕೆ ಧರ್ಮವಿಲ್ಲ. ಇದು ಎಲ್ಲರಿಗೂ ಗೊತ್ತು. ಶ್ರದ್ಧಾ ವಾಲ್ಕರ್‌ಳನ್ನು 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಅಫ್ತಾಬ್ ಪೂನಾವಾಲನನ್ನು ಕಳೆದವಾರ ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ವ್ಯಕ್ತಿಯೋರ್ವ ಸಮರ್ಥಿಸಿಕೊಂಡಿದ್ದ. ತನ್ನನ್ನು ರಶೀದ್ ಖಾನ್ ಎಂದೂ ಪರಿಚಯಿಸಿಕೊಂಡಿದ್ದ. ಆದರೆ, ಆತನ ನಿಜನಾಮ ವಿಕಾಸ್ ಕುಮಾರ್ ಎಂದಾಗಿತ್ತು. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯವ. ಆತನನ್ನು ಪೊಲೀಸರು ಪತ್ತೆ ಹಚ್ಚುವವರೆಗೆ ಜನರು ಆತನನ್ನು ಮುಸ್ಲಿಮ್ ಎಂದೇ ಭಾವಿಸಿದ್ದರು. ಇಂಥ ಉದಾಹರಣೆಗಳು ನೂರಾರು ಇವೆ. ಮುಸ್ಲಿಮ್ ಹೆಸರು ಹೇಳಿಕೊಂಡು ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಮುಸ್ಲಿಮೇತರ ವ್ಯಕ್ತಿಗಳಿಗೆ ಇಲ್ಲಿ ಕೊರತೆಯಿಲ್ಲ. ಕ್ರೌರ್ಯ ಒಂದು ಮನಃಸ್ಥಿತಿ. ಅದು ಯಾರಲ್ಲೂ ಇದ್ದೀತು. ಅಂದಹಾಗೆ,

ಕುಕ್ಕರ್ ಬಾಂಬ್‌ನ ಹಿಂದೆ ಯಾರಿದ್ದಾರೆ, ಶಾರಿಕ್‌ನನ್ನು ಈ ಬಾಂಬ್‌ಗೆ ನಿಯೋಜಿಸಿದ್ದು ಯಾರು, ಅವರ ಗುರಿ ಯಾವುದು, ಏನವರ ಉದ್ದೇಶ, ಯುಎಪಿಎ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿ ಜಾಮೀನು ಪಡೆದ ಬಳಿಕ ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಂಡದ್ದು ಹೇಗೆ, ಆತನಿಗೆ ಈ ಕುಕ್ಕರ್ ಬಾಂಬ್‌ನಿಂದ ಏನು ಲಭಿಸುತ್ತದೆ... ಇತ್ಯಾದಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಉತ್ತರ ಸಿಗಬೇಕಾದರೆ ತ ನಿಖೆ ಪ್ರಾರಂಭವಾಗಬೇಕು. ತನಿಖೆ ಸಾಧ್ಯವಾಗಬೇಕಾದರೆ ಮೊದಲು ಆತ ಗಾಯಗಳಿಂದ ಚೇತರಿಸಿಕೊಳ್ಳಬೇಕು. ಇವಾವುವೂ ಆಗಿಲ್ಲದೇ ಇರುವಾಗ ಮಾಧ್ಯಮಗಳು ಊಹಾಪೋಹವನ್ನು ಬಿತ್ತುವುದು ಎಷ್ಟು ಸರಿ? ಅದರಲ್ಲೂ ಆತನ ಬಾಂಬನ್ನು ಇಸ್ಲಾಮೀಕರಿಸಿ, ದೇವಸ್ಥಾನಗಳನ್ನು ಟಾರ್ಗೆಟ್ ಪಟ್ಟಿಯಲ್ಲಿಟ್ಟು ಸುದ್ದಿ ಹೆಣೆಯುವುದರಿಂದ ರವಾನೆಯಾಗುವ ಸಂದೇಶವೇನು? ಇಂಥ ಸುದ್ದಿಗಳು ಹಿಂದೂ- ಮುಸ್ಲಿಮರ ನಡುವೆ ಅಗೋಚರ ವಿಭಜನೆಗೆ ಕಾಣಿಕೆ ನೀಡುತ್ತವೆ. ಮುಸ್ಲಿಮರನ್ನು ಹಿಂದೂಗಳು ಅನುಮಾನದಿಂದ ನೋಡುವುದಕ್ಕೆ ಕಾರಣಗಳನ್ನು ಒದಗಿಸಿಕೊಡುತ್ತದೆ. ಸಮಾಜದ ಸೌಹಾರ್ದ ಸಂಬಂಧಕ್ಕೆ ತಡೆಯನ್ನು ಒಡ್ಡುತ್ತದೆ. ಅಷ್ಟಕ್ಕೂ,

ಪೊಲೀಸ್ ತನಿಖಾ ವರದಿ ಬರುವವರೆಗೆ ಬಾಂಬ್ ಭಯೋತ್ಪಾದನೆಯಂಥ ಕೃತ್ಯಗಳ ವಿಷಯದಲ್ಲಿ ಮಾಧ್ಯಮಗಳು ಸಂಯಮ ಕಾಯ್ದುಕೊಳ್ಳುವುದಕ್ಕೆ ಏನು ತೊಂದರೆಯಿದೆ? ಊಹೆಯಾಧಾರಿತ ಕಲ್ಪಿತ ಕತೆಗಳನ್ನು ಪ್ರಕಟಿಸುವ ಅಗತ್ಯ ಏನಿದೆ? ಇದು ಪತ್ರಿಕೋದ್ಯಮವಲ್ಲ, ಹಿಂಸೋದ್ಯಮ.

No comments:

Post a Comment