Tuesday 20 June 2023

ಇಬ್ಬರು ಶೇಖ್‌ಗಳ ಮುಂದೆ ತಲೆ ತಗ್ಗಿಸಿದ ದ್ವೇಷ

 18-11-2022

ಗುಜರಾತ್‌ನಲ್ಲಿ ತೂಗುಸೇತುವೆಯೊಂದು ಕಡಿದು ಉಂಟಾದ ದುರಂತದ ಬಳಿಕ ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್ ಎಂಬಿಬ್ಬರು ವಲಸೆ ಕಾರ್ಮಿಕರು ಸುದ್ದಿಯಲ್ಲಿದ್ದಾರೆ. ಮೊರ್ಬಿ ಸೇತುವೆ ದುರಂತಕ್ಕೀಡಾಗಿ ನೂರಾರು ಮಂದಿ ನದಿಗೆ ಬಿದ್ದಾಗ ಅವರ ರಕ್ಷಣೆಗಾಗಿ ನದಿಗೆ ಧುಮುಕಿದ ಆರು ಮಂದಿಯ ತಂಡದಲ್ಲಿ ಈ ಇಬ್ಬರು ಯುವಕರೂ ಇದ್ದರು. ಹೀಗೆ ಮುಳುಗುತ್ತಿದ್ದವರನ್ನು ನೀರಿ ನಿಂದೆತ್ತಲು ಜೀವದ ಹಂಗು ತೊರೆದು ನದಿಗಿಳಿದ ಈ ಆರು ಮಂದಿಯಲ್ಲಿ ಓರ್ವ ನೀರು ಪಾಲಾಗಿದ್ದಾನೆ. ಈ ಇಬ್ಬರೂ ಸಾಕಷ್ಟು ನೀರು ಕುಡಿದಿದ್ದಾರೆ. ಹೊಟ್ಟೆಪಾಡಿಗಾಗಿ ಕೊಲ್ಕತ್ತಾದಿಂದ ಗುಜರಾತ್‌ಗೆ ಬಂದು ಬಂಗಾರದ ಕೆಲಸಕ್ಕೆ ಸೇರಿಕೊಂಡಿದ್ದ ಈ ಇಬ್ಬರು ಯುವಕರಿಗೆ ನೀರಿಗೆ ಧುಮುಕಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾದ ಯಾವ ಅನಿವಾರ್ಯತೆಯೂ ಇರಲಿಲ್ಲ. ಹಾಗೆಯೇ, ನೀರಿಗಿಳಿದು ಮುಳುಗುತ್ತಿದ್ದವರನ್ನು ರಕ್ಷಿಸುವಂತೆ ಅವರ ಮೇಲೆ ಸರ್ಕಾರವಾಗಲಿ, ಸಾರ್ವಜನಿಕರಾಗಲಿ ಒತ್ತಡ ಹಾಕುವುದಕ್ಕೆ ಸಾಧ್ಯವೂ ಇಲ್ಲ. ಇವರು ಸರ್ಕಾರಿ ನೌಕರರಲ್ಲ. ಮುಳುಗುತಜ್ಞರಾಗಿ ಗುರುತಿಸಿಕೊಂಡವರೂ ಅಲ್ಲ. ಅಲ್ಲದೇ,

ಮುಳುಗುತ್ತಿದ್ದವರನ್ನು ರಕ್ಷಿಸುವುದೆಂದರೆ, ಅದು ಅತೀವ ಅಪಾಯಕಾರಿ ಸಾಹಸ. ಮುಳುಗುತ್ತಿರುವವರನ್ನು ರಕ್ಷಿಸಲು ಹೊರಡುವ ವ್ಯಕ್ತಿ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ರಕ್ಷಿಸಲು ಬಂದವರನ್ನು ಮುಳುಗುತ್ತಿರುವವರು ಅತ್ಯಂತ ಬಲಿಷ್ಠವಾಗಿ ಹಿಡಿದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಅವರ ಹಿಡಿತದ ಕಾರಣದಿಂದಾಗಿ ರಕ್ಷಣೆಗಿಳಿದವರೇ ಮುಳುಗುವ ಅಪಾಯವೂ ಇರುತ್ತದೆ. ಈ ಹಬೀಬುಲ್ಲಾ ಮತ್ತು ನಈಮ್ ಶೇಖ್ ಗಳಿಬ್ಬರೂ ಮುಳುಗುತಜ್ಞರಲ್ಲ. ಹವ್ಯಾಸಿ ಜೀವರಕ್ಷಕರಲ್ಲ ಮತ್ತು ಸೇತುವೆಯಿಂದ ಉರುಳಿ ಬಿದ್ದವರಿಗೂ ಇವರಿಗೂ ಕರುಳಬಳ್ಳಿ ಸಂಬಂಧವೂ ಇಲ್ಲ. ಮಾತ್ರವಲ್ಲ, ಅದು ಅವರ ರಾಜ್ಯವೇ ಅಲ್ಲ. ಹಾಗಿದ್ದೂ ಅವರಿಬ್ಬರೂ ನೀರಿಗೆ ಧುಮುಕುತ್ತಾರೆ. ಜೀವ ಪಣಕ್ಕಿಟ್ಟು ಅನೇಕರ ಪ್ರಾಣ ಕಾಪಾಡುತ್ತಾರೆ. ಅಂದಹಾಗೆ,

ರಕ್ತದಾನ ಮಾಡುವುದು, ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ದಾಖಲಿಸುವುದು, ಬಡವರಿಗೆ ನೆರವಾಗುವುದು ಇತ್ಯಾದಿಗಳಿಗೂ ಇಂಥ ಸಾಹಸ ಪ್ರವೃತ್ತಿಗೂ ವ್ಯತ್ಯಾಸ ಇದೆ. ರಕ್ತದಾನ ಮಾಡುವುದೋ ಬಡವರಿಗೆ ನೆರವಾಗುವುದೋ ಅಥವಾ ಇನ್ನಿತರ ಸೇವಾಕಾರ್ಯಗಳೆಲ್ಲ ಸಾಹಸ ಪ್ರವೃತ್ತಿಗಳಲ್ಲ. ಅವುಗಳಲ್ಲಿ ಅಪಾಯ ಸಾಧ್ಯತೆ ಇಲ್ಲ. ವಿಶಾಲ ಮನಸ್ಸು ಮತ್ತು ಮಾನವೀಯ ಗುಣಗಳಷ್ಟೇ ಇವುಗಳಿಗೆ ಸಾಕಾಗುತ್ತದೆ. ಆದರೆ, ಸ್ವತಃ ತನ್ನ ಜೀವವನ್ನೇ ಪಣಕ್ಕಿಟ್ಟು ಇತರರ ನೆರವಿಗೆ ಧಾವಿಸುವುದು ಸುಲಭ ಅಲ್ಲ. ಅದಕ್ಕೆ ಎಂಟೆದೆ ಬೇಕು. ತನ್ನ ನ್ನೂ, ತನ್ನ ತಂದೆ-ತಾಯಿ, ಪತ್ನಿ-ಮಕ್ಕಳು, ಸ್ನೇಹಿತರು ಎಲ್ಲರನ್ನೂ ಕ್ಷಣ ಮರೆತು ಪ್ರಾಣಸಂಕಟದಲ್ಲಿರುವವರ ಬಗ್ಗೆ ಮಾತ್ರ ಆಲೋಚಿ ಸುವುದು ಸುಲಭ ಅಲ್ಲ. ಎರಡು ವರ್ಷಗಳ ಮೊದಲು ಈ ದೇಶ ಕೊರೋನಾದ ಹೆಸರಲ್ಲಿ ಬಾಗಿಲು ಹಾಕಿ ಕುಳಿತುಕೊಂಡಿದ್ದಾಗ ಮುಸ್ಲಿಮ್ ಸಮುದಾಯದ ಸಂಘಟನೆಗಳು ಮತ್ತು ಯುವಕರು ಬೀದಿಯಲ್ಲಿದ್ದರು. ಹಠಾತ್ ಲಾಕ್‌ಡೌನ್ ಘೋಷಿಸಿದ ಕಾರಣ ಅನ್ನ- ಆಹಾರ ಮತ್ತು ಭದ್ರತೆ ಇಲ್ಲದೇ ನಲುಗಿ ಹೋಗಿದ್ದ ವಲಸೆ ಕಾರ್ಮಿಕರನ್ನು ಹುಡುಕಿ ಹುಡುಕಿ ಈ ಯುವಕರು ಆಹಾರ ಹಂಚಿದರು. ಶ್ರೀಮಂತರು ತಮ್ಮಲ್ಲಿರುವ ಹಣವನ್ನು ಈ ಸೇವಾ ಕಾರ್ಯಕ್ಕೆ ಕೈಬಿಚ್ಚಿ ನೀಡಿದರೆ, ಯುವಕರು ಕೊರೊನಾದ ಅಪಾಯವನ್ನು ಲೆಕ್ಕಿಸದೆಯೇ ಜೀವರಕ್ಷಣೆಗೆ ಮುಂದಾದರು. ಜನಪ್ರತಿನಿಧಿಗಳು, ಅಧಿಕಾರಿ ಗಳು, ಪೊಲೀಸರು ಮಾಸ್ಕ್ನಿಂದ ಮೂಗು ಬಾಯಿ ಮುಚ್ಚಿಕೊಂಡು, ಕೈಗೆ ಗ್ಲೌಸ್ ಹಾಕಿಕೊಂಡು, ಆಗಾಗ ಕೈ ಸ್ವಚ್ಛಗೊಳಿಸುತ್ತಾ ಇದ್ದಾಗ ಮತ್ತು ನಾಗರಿಕರು ಅಕ್ಕ-ಪಕ್ಕದವರನ್ನು ಮಾತಾಡಿಸದೇ ಮುಚ್ಚಿದ ಮನೆಯೊಳಗೆ ಕೊರೋನಾ ಭೀತಿಯಲ್ಲಿ ದಿನಗಳೆಣಿಸುತ್ತಿದ್ದಾಗ ಈ ಯುವಕರು ಕೊರೋನಾಕ್ಕೆ ಸವಾಲಾದರು. ಈ ಯುವಕರಿಗೆ ಈ ಸೇವಾಕಾರ್ಯವು ಕೊರೋನಾವನ್ನು ಉಡುಗೊರೆಯಾಗಿ ನೀಡಿತು. ಆಸ್ಪತ್ರೆಗೂ ದಾಖಲಾದರು. ಜೀವನ್ಮರಣ ಸ್ಥಿತಿಯನ್ನೂ ಎದುರಿಸಿದರು.

ಎರಡು ವರ್ಷಗಳ ಹಿಂದೆ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಗೆ ಅಪ್ಪಳಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಮುಸ್ಲಿಮ್ ಸಂಘಟನೆಗಳು ಮತ್ತು ಕಾರ್ಯಕರ್ತರ ಸೇವಾ ಮನೋಭಾವವು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗೀಡಾಗಿತ್ತು. ಇಲೆಲ್ಲಾ ಅಪಾಯವನ್ನು ನಿರೀಕ್ಷಿಸಿಯೇ ಸೇವಾಕಾರ್ಯಕ್ಕೆ ಧುಮುಕಬೇಕಾಗುತ್ತದೆ. ರಸ್ತೆ ಮತ್ತು ಮನೆ ದುರಸ್ತಿ ಕಾರ್ಯದಲ್ಲಿ ಮಗ್ನವಾಗಿರುವಾಗಲೇ ಅನಿರೀಕ್ಷಿತವಾಗಿ ಗುಡ್ಡ ಕುಸಿಯುವ ಸಾಧ್ಯತೆ ಇರುತ್ತದೆ. ಭೂಮಿ ಒಡೆದು ಧುಮ್ಮೆಂದು ನೀರು ಮೇಲೇಳುವ ಸಂದರ್ಭ ಬರುತ್ತದೆ. ಸಾಹಸ ಪ್ರವೃತ್ತಿಯ ಹೊರತು ಇಂಥ ಸನ್ನಿವೇಶವಗಳಲ್ಲಿ ಕೆಲಸ ಮಾಡುವುದು ಸುಲಭ ಅಲ್ಲ. ನಿಜವಾಗಿ,

ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್ ಎಂಬಿಬ್ಬರು ಯುವಕರು ನಮ್ಮೊಳಗನ್ನು ತಟ್ಟಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ. ಮುಳುಗುತ್ತಿರುವವರಲ್ಲಿ ತಾವೂ ಒಬ್ಬರಾಗುವ ಸಾಧ್ಯತೆ ಇದೆ ಎಂಬ ಅರಿವಿದ್ದೇ ಅವರಿಬ್ಬರೂ ನೀರಿಗೆ ಧುಮುಕಿದ್ದಾರೆ. ಅಂಥ ಅ ಪಾಯವನ್ನು ಅವರು ನೀರಿನಲ್ಲಿರುವಾಗ ಎದುರಿಸಿದ್ದಾರೆ.
ಒಂದುವೇಳೆ, ಅವರಿಬ್ಬರೂ ಮುಳುಗಿರುತ್ತಿದ್ದರೆ ಲೆಕ್ಕಕ್ಕೆ ಸಿಗುತ್ತಿದ್ದರೋ, ಗೊತ್ತಿಲ್ಲ. ಸಿಕ್ಕರೂ ಅವರಿಗೆ ಪರಿಹಾರ ಸಿಗುತ್ತಿತ್ತೋ, ಹೇಳಕ್ಕಾಗದು. ಅವರಿಬ್ಬರೂ ಪಶ್ಚಿಮ ಬಂಗಾಳದವರು. ಮೇಲಾಗಿ ಮುಸ್ಲಿಮರು. ವಲಸೆ ಕಾರ್ಮಿಕರು. ಪರಿಹಾರ ನೀಡುವ ವಿಷಯದಲ್ಲಿ ಕರ್ನಾಟಕ ಸರ್ಕಾರದ ಮಾನದಂಡವನ್ನು ಅಳವಡಿಸುವುದಾದರೆ, ಅವರಿಬ್ಬರಿಗೂ ಪರಿಹಾರ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ಪ್ರಾಣ ತೆತ್ತಿದ್ದಾರೆ ಎಂಬುದು ಮುಖ್ಯ ಅಲ್ಲ, ಪ್ರಾಣ ತೆತ್ತವರು ಯಾವ ಧರ್ಮದವರು ಎಂಬುದೇ ಬೊಮ್ಮಾಯಿ ಸರ್ಕಾರದ ಪರಿಹಾರ ಮಾ ನದಂಡ. ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಲ್ಲದೇ, ಅವರ ಪತ್ನಿಗೆ ಸರ್ಕಾರಿ ಹುದ್ದೆಯನ್ನೂ ಕೊಟ್ಟು ಪ್ರಕರಣವನ್ನು ಎನ್‌ಐಎಗೆ ವಹಿಸಿಕೊಟ್ಟ ಮುಖ್ಯಮಂತ್ರಿ ಬೊಮ್ಮಾಯಿಯವರು ಮಸೂದ್ ಮತ್ತು ಫಾಝಿಲ್ ಹತ್ಯೆಗೆ ಯಾವ ಸ್ಪಂದನೆಯನ್ನೂ ವ್ಯಕ್ತಪಡಿಸಿಲ್ಲ. ಪರಿಹಾರವೂ ಇಲ್ಲ, ಉದ್ಯೋಗವೂ ಇಲ್ಲ. ಎನ್‌ಐಎ ತನಿಖೆಯೂ ಇಲ್ಲ. ಸಂತ್ರಸ್ತರ ಮನೆಗೆ ಮುಖ್ಯಮಂತ್ರಿಯವರ ಭೇಟಿಯೋ ಸಾಂತ್ವನವೋ ಏನೂ ಇಲ್ಲ. ಅಷ್ಟಕ್ಕೂ,

ಗುಜರಾತ್‌ನ ಇತಿಹಾಸ ಇದಕ್ಕಿಂತಲೂ ಶೋಚನೀಯವಾದುದು. ಈ ಇಬ್ಬರು ಶೇಖ್‌ಗಳು ನೀರಿಗೆ ಧುಮುಕುವುದಕ್ಕಿಂತ ತಿಂಗಳ ಮೊದಲಷ್ಟೇ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಅದೇ ಗುಜರಾತ್ ಸರ್ಕಾರ ಸನ್ನಡತೆಯ ಹೆಸರಲ್ಲಿ ಬಿಡುಗಡೆಗೊಳಿಸಿತ್ತು. ಅತ್ಯಾಚಾರಕ್ಕೆ ಒಳಗಾದವರ ಹೆಸರು ಬಿಲ್ಕಿಸ್ ಬಾನು. ಅತ್ಯಾಚಾರದ ವೇಳೆ ಆಕೆ 21 ವರ್ಷದ ಗರ್ಭಿಣಿ ತರುಣಿ. ಆಕೆಯ 3 ವರ್ಷದ ಮಗಳನ್ನು ಕಣ್ಣೆದುರೇ ಈ ದುರುಳರು ತಲೆ ಒಡೆದು ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಒಟ್ಟು 14 ಮಂದಿಯ ಹತ್ಯೆ ನಡೆದಿತ್ತು. ಆ ಕರಾಳ ಘಟನೆ ನಡೆದುದು 2002ರಲ್ಲಿ. ಸಾಬರ್ಮತಿ ರೈಲು ಬೆಂಕಿಗಾಹುತಿಯಾಗಿ 59 ಕರಸೇವಕರು ಜೀವಂತ ದಹನವಾದ ಬಳಿಕ ಮುಸ್ಲಿಮರ ಸಾಮೂಹಿಕ ನರಮೇಧ ನಡೆಯಿತು. ಹಾಗಂತ, ರೈಲು ದಹನಕ್ಕೂ ಬಿಲ್ಕಿಸ್‌ನಂಥ ನೂರಾರು ಮಹಿಳೆಯರಿಗೂ ಯಾವ ಸಂಬಂಧವೂ ಇರಲಿಲ್ಲ. ವಾರದ ತನಕ ರಾಜಾರೋಷವಾಗಿ ನಡೆದ ಹಿಂಸಾಚಾರದಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿ ಹತ್ಯೆಗೀಡಾದರು. ಈ ಹತ್ಯೆಗೆ ಅವರು ಮುಸ್ಲಿಮರು ಎಂಬ ಕಾರಣದ ಹೊರತು ಇನ್ನಾವ ಕಾರಣವೂ ಇರಲಿಲ್ಲ. ಹಿಂಸಾಚಾರದಿಂದ ಸಾವಿರಾರು ಮಂದಿ ನಿರ್ವಸಿತರಾದರು. ಅವರದಲ್ಲದ ತಪ್ಪಿಗೆ ಉದ್ಯೋಗ, ವ್ಯಾಪಾರ, ಮನೆ, ಮಠ, ಕೃಷಿ, ಬದುಕು ಎಲ್ಲವನ್ನೂ ಅವರು ಕಳಕೊಂಡರು. ಸರ್ಕಾರವೂ ಅವರೊಂದಿಗೆ ಮುನಿಸಿಕೊಂಡಿತು. ನ್ಯಾಯಾಲಯ ಬಲವೊಂದು ಇಲ್ಲದೇ ಇರುತ್ತಿದ್ದರೆ, ಸನ್ನಡತೆಯ ಹೆಸರಲ್ಲಿ ಬಿಡುಗಡೆಗೊಂಡ ಆ 11 ಮಂದಿ ಅಪರಾಧಿಗಳು ಜೈಲಿಗೆ ಹೋಗುತ್ತಲೇ ಇರಲಿಲ್ಲ. ಅಂದಹಾಗೆ,

ರಾಜಕೀಯ ಅಧಿಕಾರಕ್ಕಾಗಿ ಮುಸ್ಲಿಮರನ್ನು ಎಷ್ಟೇ ಅಂಚಿಗೆ ತಳ್ಳಲು ಯತ್ನಿಸಿದರೂ ಅವರು ತಮ್ಮ ಜೀವಪರ ಚಟುವಟಿಕೆಗಳಿಂದಾಗಿ ಸಮಾಜದ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ ಮತ್ತು ಅಪಪ್ರಚಾರದಲ್ಲಿ ತೊಡಗಿದವರು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಈ ಇಬ್ಬರು ಶೇಖ್‌ಗಳೇ ಸಾಕ್ಷಿ. ಮುಸ್ಲಿಮರನ್ನು ಹೊರಗಿಟ್ಟು ಈ ದೇಶವನ್ನು ಕಲ್ಪಿಸುವುದು ಸಾಧ್ಯವೇ ಇಲ್ಲ. ಅವರಿಗೆ ಈ ಮಣ್ಣಿನೊಂದಿಗೆ ಸಾವಿರಕ್ಕಿಂತಲೂ ಅಧಿಕ ವರ್ಷಗಳ ಸಂಬಂಧ ಇದೆ. ಆದರೆ ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮತ ಕೇಳುವ ರಾಜಕೀಯಕ್ಕೆ ಈ ದೀರ್ಘ ಇತಿಹಾಸವಿಲ್ಲ. ಇದು ನಿನ್ನೆ-ಮೊನ್ನೆ ಹುಟ್ಟಿಕೊಂಡ ಕೂಸು. ಈ ಕೂಸಿನ ಮೇಲಿನ ಆಕರ್ಷಣೆ ಕ್ಷಣಿಕ. ಈಗಾಗಲೇ ಈ ಕೂಸು ಈ ದೇಶದಲ್ಲಿ ಆಕರ್ಷಣೆಯನ್ನು ಕಳಕೊಳ್ಳಲು ಪ್ರಾರಂಭಿಸಿದೆ. ಈ ಮಣ್ಣಿಗೆ ಈ ಕೂಸು ಹೊಂದಿಕೊಳ್ಳುವುದಿಲ್ಲ ಎಂಬುದನ್ನು ಜನರು ಅರಿತುಕೊಳ್ಳತೊಡಗಿದ್ದಾರೆ.

ಹಬೀಬುಲ್ಲಾ ಶೇಖ್ ಮತ್ತು ನಈಮ್ ಶೇಖ್‌ರಂಥವರ ಸಂಖ್ಯೆ ಹೆಚ್ಚಲಿ. ದ್ವೇಷಿಸುವವರಿಗೆ ಸದ್ವಿವೇಕ ಮೂಡಲಿ.

No comments:

Post a Comment