Tuesday 20 June 2023

ಸಂಸತ್ ಉದ್ಘಾಟನೆ ಹುಟ್ಟು ಹಾಕಿರುವ ಕೆಲವು ಪ್ರಶ್ನೆಗಳು..

 

29-5- 2023

ಪ್ರಧಾನಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನದ ಒಳಗೆ ಚೋಳ ರಾಜಪ್ರಭುತ್ವದ ಸಂಕೇತವಾದ ಸೆಂಗೋಲನ್ನು ಎತ್ತಿ ಹಿಡಿದು ನಡೆಯುತ್ತಿದ್ದಾಗ ಹೊರಗೆ ರಾಷ್ಟ್ರ ಧ್ವಜವನ್ನು ಎತ್ತಿ ಹಿಡಿದು ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳನ್ನು ನೆಲಕ್ಕೆ ಕೆಡಹುವಲ್ಲಿ ಪೊಲೀಸರು ನಿರತರಾಗಿದ್ದರು. ಸಂಸತ್ ಭವನದಲ್ಲಿ ಸೆಂಗೋಲ್‌ಗೆ ಮಾನ-ಸಮ್ಮಾನಗಳು ದೊರೆಯುತ್ತಿದ್ದಾಗ ಅದಕ್ಕಿಂತ ತುಸು ದೂರದಲ್ಲಿ ರಾಷ್ಟ್ರಧ್ವಜ ನೆಲಕ್ಕೆ ಬಿದ್ದು ಒದ್ದಾಡುತ್ತಿತ್ತು. ಅದನ್ನು ಎತ್ತಿ ಹಿಡಿದಿದ್ದ ಕುಸ್ತಿಪಟುಗಳನ್ನು ಬಲವಂತವಾಗಿ ಎತ್ತಿ ಒಯ್ಯಲಾಗುತ್ತಿತ್ತು. ನಿಜವಾಗಿ,

ಇದೊಂದು ರೂಪಕ. ಪ್ರಜಾತಂತ್ರದ ಮೇಲೆ ರಾಜಪ್ರಭುತ್ವ ಹಿಡಿತ ಸಾಧಿಸುತ್ತಿರುವುದರ ಸಂಕೇತ. ಈ ದೇಶದ ಪ್ರಜಾತಂತ್ರಕ್ಕೆ 75 ವರ್ಷಗಳಷ್ಟೇ ತುಂಬಿವೆ. ಆದರೆ, ಈ ದೇಶದ ರಾಜಪ್ರಭುತ್ವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆ ಇತಿಸಾಹದಲ್ಲಿ ಪ್ರಜೆಗಳಿಗೆ ಪ್ರಭುತ್ವ ಇರಲಿಲ್ಲ. ರಾಜ ಮಾಡಿದ್ದೇ ಕಾನೂನು, ಹೇಳಿದ್ದೇ ನ್ಯಾಯ. ಆ ಇತಿಹಾಸ ಮರುಕಳಿಸಬಾರದು ಎಂಬ ಕಾರಣಕ್ಕಾಗಿಯೇ ಪ್ರಜಾತಂತ್ರವನ್ನು ಈ ದೇಶ ಒಪ್ಪಿಕೊಂಡಿತು. ಜನರೇ ಜನರನ್ನು ಆಳಬೇಕು ಮತ್ತು ಆಳುವವ ಪ್ರಶ್ನಾರ್ಹನಾಗಬೇಕು ಎಂಬ ಪ್ರಮುಖ ತತ್ವವೊಂದು ಪ್ರಜಾತಂತ್ರದಲ್ಲಿದೆ. ಪ್ರಜಾತಂತ್ರದ 75 ವರ್ಷಗಳ ಬಳಿಕ ಮರಳಿ ಈ ದೇಶವನ್ನು ರಾಜಪ್ರಭುತ್ವದ ಕಡೆಗೆ ಒಯ್ಯಲಾಗುತ್ತಿದೆಯೇನೋ ಎಂಬ ಸಂದೇಹವನ್ನು ಹೊಸ ಸಂಸತ್ ಭವನದ ಉದ್ಘಾಟನೆ ಮೂಡಿಸಿದೆ. ಅಷ್ಟಕ್ಕೂ,

ಡಿಸೆಂಬರ್ 10, 2020ರಂದು ಶಿಲಾನ್ಯಾಸಗೊಂಡ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಇದಕ್ಕಿಂತ ಉತ್ತಮವಾಗಿ ಮತ್ತು ಸರ್ವರನ್ನೂ ಒಳಗೊಳಿಸಿಕೊಂಡು ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆ ಬಹು ಮಹತ್ವದ್ದು. ಸಾವಿರಾರು ಕಾರ್ಮಿಕರು ಬೆವರು ಸುರಿಸಿ ನಿರ್ಮಿಸಿದ ಕಟ್ಟಡವನ್ನು ಇಷ್ಟೊಂದು ಏಕಮುಖವಾಗಿ ಉದ್ಘಾಟಿಸಬೇಕಿತ್ತೇ? ಪ್ರಮುಖ 20 ರಾಜಕೀಯ ಪಕ್ಷಗಳು ಈ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದುವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇ ಆಹ್ವಾನವನ್ನು ನೀಡಲಿಲ್ಲ. ಯಾಕೆ ಆಹ್ವಾನ ನೀಡಲಿಲ್ಲ ಎಂಬ ಸಹಜ ಪ್ರಶ್ನೆಗೆ ಕೇಂದ್ರದಿಂದ ಈವರೆಗೂ ಸಮರ್ಪಕ ಉತ್ತರ ಲಭ್ಯವಾಗಿಯೂ ಇಲ್ಲ. ರಾಷ್ಟ್ರಪತಿಯನ್ನೇ ಹೊರಗಿಟ್ಟು ಸಂಸತ್ ಭವನದ ಉದ್ಘಾಟನೆ ಮಾಡಬೇಕಾದ ಅಗತ್ಯ ಏನಿತ್ತು? ಅದರಲ್ಲೂ ಮುರ್ಮು ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ ಅಪರೂಪದ ಮಹಿಳೆ. ಸೆಂಗೋಲ್ ಅನ್ನು ಪ್ರಧಾನಿಗೆ ಹಸ್ತಾಂತರಿಸಿದ ತಮಿಳುನಾಡಿನ ಅಧೀನಮ್ ಪೀಠದ ಅರ್ಚಕರು ಮುರ್ಮು ಉಪಸ್ಥಿತಿಯ ಬಗ್ಗೆ ಆಕ್ಷೇಪ ಎತ್ತಿದ್ದರೆ ಅಥವಾ ಕೇಂದ್ರ ಸರಕಾರವೇ ಸ್ವಯಂಪ್ರೇರಿತವಾಗಿ ಇಂಥದ್ದೊಂದು ನಿರ್ಧಾರ ತಳೆಯಿತೇ ಅಥವಾ ಮುರ್ಮು ಅವರೇ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರೇ ಅಥವಾ ವಿಪಕ್ಷಗಳ ಬೇಡಿಕೆಗೆ ಮಣಿಯಲ್ಲ ಎಂಬ ಕೇಂದ್ರದ ಹಠಮಾರಿ ಧೋರಣೆಯೇ ಇವೆಲ್ಲದಕ್ಕೂ ಕಾರಣವಾಯಿತೇ… ಎಂಬೆಲ್ಲಾ ಪ್ರಶ್ನೆಗಳಿಗೆ ಮೋದಿಯವರ ಮೌನ ಅವಕಾಶ ಮಾಡಿಕೊಟ್ಟಿದೆ. ಅಷ್ಟಕ್ಕೂ,

ಆಧುನಿಕ ಆಲೋಚನೆ, ವಿನ್ಯಾಸ ಮತ್ತು ಸವಲತ್ತುಗಳನ್ನು ಒಳಗೊಂಡ ಕಟ್ಟಡವೊಂದರ ಉದ್ಘಾಟನೆಯನ್ನು ಇಷ್ಟೊಂದು ವಿವಾದ ಪೂರ್ಣವಾಗಿ ಮಾಡಲು ಕಾರಣ ಏನು? ಅದೇನೂ ಪ್ರಧಾನಿಯ ಖಾಸಗಿ ಕಟ್ಟಡವಲ್ಲ. ಇಂದು ಅಧಿಕಾರ ಅವರ ಕೈಯಲ್ಲಿದ್ದರೆ ನಾಳೆ ವಿಪಕ್ಷಗಳ ಕೈಗೂ ಹೋಗಬಹುದು. ಹೀಗಿರುವಾಗ ವಿಪಕ್ಷಗಳನ್ನೇ ನಿರಾಕರಿಸಿಕೊಂಡು ಸಂಸತ್ ಉದ್ಘಾಟನೆ ಮಾಡುವುದರ ಹಿಂದೆ ಬೇರೇನೋ ಉದ್ದೇಶಗಳಿದ್ದುವೇ? ಸಂಸತ್‌ನ ಸಂಪೂರ್ಣ ಕ್ರೆಡಿಟ್ಟು ತನಗೊಬ್ಬನಿಗೇ ಸಲ್ಲಬೇಕು ಎಂಬ ಉದ್ದೇಶವೇ ಈ ಎಲ್ಲಕ್ಕೂ ಕಾರಣವೇ? ಈ ಸಂಸತ್‌ನ ಮೂಲಕ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವ ತಂತ್ರವೂ ಅದರ ಹಿಂದಿತ್ತೇ? ಇಂಥ ಪ್ರಶ್ನೆಗಳಿಗೆ ಪೂರಕ ಉತ್ತರವನ್ನೇ ಉದ್ಘಾಟನಾ ಸಮಾರಂಭ ದೃಶ್ಯಗಳು ಸಾಕ್ಷಿ ಹೇಳುತ್ತಿವೆ.

ಉದ್ಘಾಟನೆ ಮತ್ತು ಆ ಬಳಿಕದ ಅಷ್ಟೂ ಸಮಯ ಕೇವಲ ಪ್ರಧಾನಿಯವರೇ ಎಲ್ಲೆಲ್ಲೂ ಕಾಣಿಸಿಕೊಂಡಿದ್ದರು. ಅವರನ್ನು ಕೇಂದ್ರೀಕರಿಸಿ ಮಾಧ್ಯಮಗಳು ದೃಶ್ಯಪ್ರಸಾರ ಮಾಡಿದ್ದುವು. ಅಧೀನಮ್ ಪೀಠದ ಅರ್ಚಕರ ಜೊತೆಗಿನ ದೃಶ್ಯ, ಸೆಂಗೋಲ್ ಹಿಡಿದು ನಡೆದಾಡಿದ ದೃಶ್ಯಗಳು, ಸೆಂಗೋಲ್‌ಗೆ ನಮಸ್ಕರಿಸುತ್ತಿರುವ ದೃಶ್ಯಗಳು, ಮಾತುಗಳು, ನಡವಳಿಕೆಗಳು, ಗೌರವಾರ್ಪಣೆ… ಹೀಗೆ ಪ್ರತಿಯೊಂದೂ ಮೋದಿಮಯವಾಗಿತ್ತು. ದೃಶ್ಯ ಮಾಧ್ಯಮಗಳಲ್ಲಂತೂ ಮೋದಿ ಇಲ್ಲದ ಸಂಸತ್ ಭವನವೇ ಇಲ್ಲ ಎಂಬಷ್ಟು ದೃಶ್ಯ ವೈಭವೀಕರಣ ನಡೆದಿತ್ತು. ಇವೆಲ್ಲ ಸಹಜವೇ ಅಥವಾ ಯೋಜನಾಬದ್ಧವಾಗಿ ಮತ್ತು ಕೇಂದ್ರದ ಸೂಚನೆಯ ಪ್ರಕಾರವೇ ನಡೆಯಿತೇ? ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸಿಕೊಂಡು ಅವುಗಳ ಮಾತುಗಳಿಗೂ ಬೆಲೆಕೊಟ್ಟು ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರೆ ಈ ಬಗೆಯ ವ್ಯಕ್ತಿ ವೈಭವಕ್ಕೆ ತೊಂದರೆಯಾಗಬಹುದು ಎಂಬ ಭೀತಿ ಪ್ರಧಾನಿಗಿತ್ತೇ? ಆದರೆ,

ಸಂಸತ್ ಭವನದ ಉದ್ಘಾಟನೆಯನ್ನು ಸಂಪೂರ್ಣವಾಗಿ ಮಸುಕುಗೊಳಿಸಿದ್ದು ಕುಸ್ತಿಪಟುಗಳ ಪ್ರತಿಭಟನೆ. ಈ ಪ್ರತಿಭಟನೆ ಸಂಸತ್ ಭವನ ಉದ್ಘಾಟನೆಯ ಸಡಗರವನ್ನೇ ಮಸುಕುಗೊಳಿಸಬಹುದು ಎಂದು ಪ್ರಧಾನಿ ನಿರೀಕ್ಷಿಸಿರುವ ಸಾಧ್ಯತೆ ಇಲ್ಲ. ಸಂಸತ್ ಉದ್ಘಾಟನೆ ಇಡೀ ದೇಶದ ಗಮನ ಸೆಳೆಯಬೇಕು ಮತ್ತು ಕೆಲವು ಸಮಯ ದೇಶದಲ್ಲಿ ಇದರ ಸುತ್ತಲೇ ಚರ್ಚೆಗಳಾಗಬೇಕು ಎಂದು ಪ್ರಧಾನಿ ಬಯಸಿರುವ ಸಾಧ್ಯತೆ ಇದೆ. ಅಂಥ ವಾತಾವರಣ ಸೃಷ್ಟಿಗಾಗಿ ವರ್ಷಗಳಿಂದ ತಯಾರಿ ನಡೆಸಿರುವುದಕ್ಕೂ ಅವಕಾಶ ಇದೆ. ಈ ನಡುವೆ ತಿಂಗಳ ಹಿಂದೆ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಿಳಿದರು. ತನ್ನನ್ನು ಪ್ರಶ್ನಿಸುವ ಯಾವುದೇ ಧ್ವನಿಯನ್ನೂ ತನ್ನ ವಿರೋಧಿ ಧ್ವನಿ ಎಂದು ಪರಿಗಣಿಸುವ ಪ್ರಧಾನಿ, ಇಲ್ಲೂ ಅದೇ ಧೋರಣೆ ತಳೆದರು. ಇದು ಅವರ ಮೊದಲ ತಪ್ಪು. ತನ್ನ ಸಂಸದ ಬೃಜ್‌ಭೂಷಣ್‌ರನ್ನು ರಾಷ್ಟ್ರೀಯ ಕುಸ್ತಿ ಫೆಡರೇಶನ್‌ಗೆ ರಾಜೀನಾಮೆ ಕೊಡಿಸಿ ತನಿಖೆ ಮುಗಿಯುವವರೆಗೆ ಪಕ್ಷದ ಚಟುವಟಿಕೆಯಿಂದ ದೂರ ಇಡುವುದು ಪ್ರಧಾನಿಗೆ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಹಾಗಂತ,

ಈ ಪ್ರತಿಭಟನೆಯೂ ದಿಢೀರ್ ಆಗಿರಲಿಲ್ಲ. ಮೂರು ತಿಂಗಳ ಹಿಂದೆ ಈ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದಿದ್ದರು. ಆಗ ಅವರಿಗೆ ಬೆಂಬಲವಾಗಿ ಕಮ್ಯುನಿಸ್ಟ್ ಪಕ್ಷದ ಬೃಂದಾ ಕಾರಾಟ್ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದರು. ಆದರೆ, ಈ ಕುಸ್ತಿಪಟುಗಳಿಗೆ ಪ್ರಧಾನಿ ಮೇಲೆ ಎಷ್ಟು ನಂಬಿಕೆ ಇತ್ತೆಂದರೆ, ಅವರನ್ನು ವೇದಿಕೆ ಹತ್ತದಂತೆ ತಡೆದಿದ್ದರು. ಇದು ರಾಜಕೀಯೇತರ ಪ್ರತಿಭಟನೆ ಎಂದು ಮುಲಾಜಿಲ್ಲದೇ ಹೇಳಿದ್ದರು. ಆ ಬಳಿಕ ಕೇಂದ್ರದ ಭರವಸೆಯೊಂದಿಗೆ ಅವರು ಪ್ರತಿಭಟನೆಯನ್ನೂ ಹಿಂಪಡೆದುಕೊಂಡಿದ್ದರು. ಆದರೆ, ಭರವಸೆಯಂತೆ ಕೇಂದ್ರ ನಡೆದುಕೊಂಡಿಲ್ಲ ಎಂಬ ಅಸಮಾಧಾನದಿಂದ ಅವರು ಮರಳಿ ಪ್ರತಿಭಟನೆಗಿಳಿದರು. ಆದ್ದರಿಂದ ಪ್ರಧಾನಿ ಇವರ ಮಾತುಗಳಿಗೆ ಕಿವಿಯಾಗಿ ಬೃಜ್‌ಭೂಷಣ್ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಅದರ ಬದಲು ಅವರ ಪಕ್ಷದ ಬೆಂಬಲಿಗರು ವಿವಿಧ ಸುಳ್ಳುಗಳನ್ನು ಈ ಪ್ರತಿಭಟನಾಕಾರರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹರಡತೊಡಗಿದರು. ಇದು ವಿಪರೀತ ಮಟ್ಟಕ್ಕೆ ತಲುಪಿದಾಗ ಸಂಸತ್ ಭವನದ ಎದುರು ಪ್ರತಿಭಟನೆ ಮಾಡುವುದಾಗಿ ಕುಸ್ತಿಪಟುಗಳು ಘೋಷಿಸಿದರು. ಒಂದುವೇಳೆ,

ಈ ಪ್ರತಿಭಟನೆಯಾಗಲಿ, ಪ್ರತಿಪಕ್ಷಗಳ ಬಹಿಷ್ಕಾರವಾಗಲಿ ನಡೆಯದೇ ಇರುತ್ತಿದ್ದರೆ ಸಂಸತ್ ಭವನದ ಉದ್ಘಾಟನೆ ಚಾರಿತ್ರಿಕವಾಗಿರುತ್ತಿತ್ತು. ಉದ್ಘಾಟನೆಗಿಂತ ಕುಸ್ತಿಪಟುಗಳೇ ಸೋಶಿಯಲ್ ಮೀಡಿಯಾದಲ್ಲಿ ತುಂಬಿಕೊಳ್ಳುವುದಕ್ಕೆ ಸಾಧ್ಯವೂ ಇರಲಿಲ್ಲ. ಸದ್ಯದ ಸ್ಥಿತಿ ಏನಾಗಿದೆಯೆಂದರೆ, ಸಂಸತ್ ಭವನದ ಚರ್ಚೆ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾಗಳಿಂದ ನಾ ಪತ್ತೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕುಸ್ತಿಪಟುಗಳಿಗೆ ಎಷ್ಟು ಅಮೋಘ ಬೆಂಬಲ ವ್ಯಕ್ತವಾಗಿದೆಯೆಂದರೆ, ಕುಸ್ತಿಪಟುಗಳ ಮೇ ಲಿನ ಹಲ್ಲೆ, ಅವರನ್ನು ಅಮಾನುಷವಾಗಿ ನಡೆಸಿಕೊಂಡ ಪೊಲೀಸರ ನಡೆ ಮತ್ತು ಇವೆಲ್ಲಕ್ಕೂ ಕಾರಣವಾಗಿರುವ ಮೋದಿ ಸರಕಾರದ ವೈ ಫಲ್ಯವನ್ನು ಟಿವಿ ಚಾನೆಲ್‌ಗಳೂ ಚರ್ಚಿಸಲೇಬೇಕಾದ ಒತ್ತಡಕ್ಕೆ ಒಳಗಾದುವು. ಕುಸ್ತಿಪಟುಗಳು ನೆಲದಲ್ಲಿ ಬಿದ್ದುಕೊಂಡಿರುವುದು ಮತ್ತು ಅವರ ಚೀರಾಟ, ರಾಷ್ಟ್ರಧ್ವಜ ಅನಾಥವಾಗಿರುವುದು ಎಲ್ಲವನ್ನೂ ಮುಖ್ಯವಾಹಿನಿಯ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿದುವು. ಸೋಶಿಯಲ್ ಮೀಡಿಯವಂತೂ ಕುಸ್ತಿಪಟುಗಳ ಪ್ರತಿಭಟನೆಯಿಂದಲೇ ತುಂಬಿಕೊಂಡವು.

ಅಂದ ಹಾಗೆ, ಪ್ರಧಾನಿ ಯಾವ ಉದ್ದೇಶದೊಂದಿಗೆ ಮತ್ತು ತಯಾರಿಯೊಂದಿಗೆ ಸಂಸತ್ ಭವನದ ಉದ್ಘಾಟನೆಗೆ ಸಿದ್ಧರಾಗಿದ್ದರೋ ಆ ಎಲ್ಲವನ್ನೂ ಕುಸ್ತಿಪಟುಗಳ ಪ್ರತಿಭಟನೆ ಧರಾಶಾಹಿಗೊಳಿಸಿದೆ. ಲೈಂಗಿಕ ಕಿರುಕುಳಕ್ಕೊಳಗಾದವರು ಸಂಸತ್‌ನ ಹೊರಗೆ ಮತ್ತು ಕಿರುಕುಳ ಕೊಟ್ಟ ಆರೋಪಿ ಸಂಸತ್‌ನ ಒಳಗೆ ಇದ್ದ ದಾರುಣ ಸಂದರ್ಭವಾಗಿ ಸಂಸತ್ ಉದ್ಘಾಟನೆ ಗುರುತಿಸುವಂತಾಗಿದೆ. ಇದನ್ನು ಖಂಡಿತ ತಪ್ಪಿಸಬಹುದಾಗಿತ್ತು.

No comments:

Post a Comment