Tuesday 20 June 2023

ಮದ್ರಸ ಪಠ್ಯ ಪರಿಷ್ಕರಣೆಗೆ ಸಚಿವರನ್ನು ಒತ್ತಾಯಿಸಿದ ಆ ಪೋಷಕರು ಯಾರು?

 ಪಠ್ಯಪುಸ್ತಕ ಪರಿಷ್ಕರಣೆ ವಿವಾದದಿಂದ ಇನ್ನೂ ಮುಕ್ತಿ ಹೊಂದಿಲ್ಲದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇದೀಗ ಮದರಸ ಪಠ್ಯಪುಸ್ತಕಗಳ ಪರಿಷ್ಕರಣೆಯ ಬಗ್ಗೆ ಮಾತಾಡಿದ್ದಾರೆ. ಹಾಗಂತ,

ಇಂಥದ್ದೊಂದು ಪರಿಷ್ಕರಣೆಯ ಬೇಡಿಕೆಯನ್ನು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಾಗಲಿ ಅಥವಾ ರಾಜ್ಯದ ಯಾವುದಾದರೂ ಮದ್ರಸಾವಾಗಲಿ ತಮ್ಮೆದುರು ಇಟ್ಟಿಲ್ಲ ಎಂದೂ ಅವರು ಹೇಳಿದ್ದಾರೆ. ಹಾಗಿದ್ದರೆ ಈ ದಿಢೀರ್ ಪರಿಷ್ಕರಣೆಯ ಚಿಂತನೆ ಮೂಡಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ‘ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ತಮ್ಮನ್ನು ಭೇಟಿ ಮಾಡಿ ಇಂಥ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ...’ ಎಂದವರು ಸಮರ್ಥಿಸಿಕೊಂಡಿದ್ದಾರೆ. ‘ಉಳಿದ ಸಮುದಾಯಗಳಿಗೆ ಸಿಗುವಂಥ ಶಿಕ್ಷಣ ತಮ್ಮ ಮಕ್ಕಳಿಗೂ ಸಿಗಬೇಕೆಂಬುದು ಅವರ ಬೇಡಿಕೆಯಾಗಿದ್ದು, ಇದಕ್ಕಾಗಿ ಮದ್ರಸ ಪಠ್ಯ ಪರಿಷ್ಕರಣೆ ಸಾಧ್ಯತೆಯನ್ನು ಸರ್ಕಾರ ಪರಿಗಣಿಸಲಿದೆ’ ಎಂದವರು ಹೇಳಿಕೊಂಡಿದ್ದಾರೆ. ತಮಾಷೆ ಏನೆಂದರೆ,

ಆ ಪೋಷಕರು ಯಾರು, ಮದ್ರಸಕ್ಕೂ ಅವರಿಗೂ ಏನು ಸಂಬಂಧ, ಅವರ ಮಕ್ಕಳು ಯಾವ ಮದ್ರಸದಲ್ಲಿ ಕಲಿಯುತ್ತಿದ್ದಾರೆ, ಮದ್ರಸದ ಯಾವ್ಯಾವ ಪಠ್ಯಗಳ ಬಗ್ಗೆ ಅವರಿಗೆ ತಕರಾರಿದೆ ಎಂಬಿತ್ಯಾದಿ ಸಂದೇಹಗಳಿಗೆ ಶಿಕ್ಷಣ ಸಚಿವರು ಯಾವ ಉತ್ತರವನ್ನೂ ನೀಡಿಲ್ಲ. ಆ ಪೋಷಕರ ಮಾತನ್ನು ಶಿಕ್ಷಣ ಸಚಿವರು ಇಷ್ಟು ಗಂಭೀರವಾಗಿ ಪರಿಗಣಿಸಲು ಕಾರಣವೇನು, ಅವರು ರಾಜ್ಯ ಮದ್ರಸ ಸಮಿತಿಗಳ ಅಧ್ಯಕ್ಷರಾಗಿರುವರೇ, ಇಲ್ಲ ಯಾವುದಾದರೊಂದು ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿರುವರೇ ಅಥವಾ ಕನಿಷ್ಠ ಯಾವುದಾದರೊಂದು ಪ್ರಮುಖ ಮದ್ರಸ ಸಂಸ್ಥೆಯ ಅಧ್ಯಕ್ಷರೇ ಎಂಬ ಬಗ್ಗೆಯೂ ಅವರು ವಿವರಣೆಯನ್ನು ನೀಡಿಲ್ಲ. ಅಲ್ಲದೇ, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮದ್ರಸ ಪಠ್ಯಪುಸ್ತಕ ಪರಿಷ್ಕರಣೆಗೆ ತಾವು ಮನವಿ ಮಾಡಿಕೊಂಡಿರುವುದಾಗಿ ಯಾವ ಪೋಷಕರೂ ಈವರೆಗೆ ಹೇಳಿಕೆಯನ್ನೂ ನೀಡಿಲ್ಲ. ಆದರೆ, ಮದ್ರಸ ಮತ್ತು ಮದ್ರಸ ಶಿಕ್ಷಣದ ಬಗ್ಗೆ ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಈಶ್ವರಪ್ಪ, ರೇಣುಕಾಚಾರ್ಯ, ಅನಂತಕುಮಾರ್ ಹೆಗ್ಡೆ ಮತ್ತಿತರರು ಆಗಾಗ ತಕರಾರೆತ್ತುತ್ತಲೇ ಬಂದಿದ್ದಾರೆ. ಆದ್ದರಿಂದ, ಇವರನ್ನೇ ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ಎಂದು ಬಿ.ಸಿ. ನಾಗೇಶ್ ಉಲ್ಲೇಖಿಸಿದ್ದಾರೋ ಎಂದು ಅನುಮಾನಿಸಬೇಕಾಗುತ್ತದೆ.

ದೇಶದ ಎಲ್ಲೆಡೆ ನಾಯಿಕೊಡೆಗಳಂತೆ ಮದ್ರಸಾಗಳು ತಲೆ ಎತ್ತುತ್ತಿವೆ, ಇವು ತಪ್ಪಾದ ಕ್ರಮದಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿವೆ, ಮಾತ್ರವಲ್ಲ, ಮದ್ರಸಾಗಳಿಂದ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ- ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ಹಿಂದೆ ಹೇಳಿದ್ದರು. ಹಾಗಂತ, ಇವರು ಯಾವ ಮದ್ರಸದ ವಿದ್ಯಾರ್ಥಿ ಅಥವಾ ಯಾವ ಮದ್ರಸದ ಪಠ್ಯಪುಸ್ತಕವನ್ನು ಅಧ್ಯಯನ ನಡೆಸಿದ್ದಾರೆ ಎಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ. ಇನ್ನೋರ್ವ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರಂತೂ ಮದರಸಗಳನ್ನೇ ಮುಚ್ಚಬೇಕೆಂದು ಕರೆಕೊಟ್ಟಿದ್ದರು.‘ಮದರಸಗಳಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಪೂರಕವಾದ ಬೋಧನೆಯನ್ನು ಮಾಡಲಾಗುತ್ತಿದೆ’ ಎಂದವರು ತಮ್ಮ ಬೇಡಿಕೆಗೆ ಸಮರ್ಥನೆಯನ್ನು ನೀಡಿದ್ದರು. ಆದರೆ, ದೇಶವಿರೋಧಿ ಚಟುವಟಿಕೆಗೆ ಪೂರಕವಾದ ಬೋಧನೆ ಯಾವುದು ಮತ್ತು ಯಾವ ಮದರಸದಲ್ಲಿ ಅದನ್ನು ಕಲಿಸಲಾಗುತ್ತಿದೆ ಎಂಬ ನಿರ್ದಿಷ್ಟ ಉಲ್ಲೇಖವನ್ನು ಅವರು ಮಾಡಿರಲಿಲ್ಲ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರೂ ಇಂಥದ್ದೇ ಆರೋಪವನ್ನು ಹೊರಿಸಿದ್ದರು. ಇವರಲ್ಲದೇ ಬಿಜೆಪಿಯ ಇನ್ನಷ್ಟು ಮುಖಂಡರೂ ಸಮಯ-ಸಂದರ್ಭವನ್ನು ನೋಡಿಕೊಂಡು ಇಂಥ ಹೇಳಿಕೆಗಳನ್ನು ನೀಡುತ್ತಲೂ ಬಂದಿದ್ದಾರೆ. ಆದ್ದರಿಂದ ಶಿಕ್ಷಣ ಸಚಿವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲೂ ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡುವ ಉದ್ದೇಶದಿಂದ ಅವರು ಈ ಹೇಳಿಕೆಯನ್ನು ಕೊಟ್ಟಿರಬಹುದು ಅಥವಾ ಬಿಜೆಪಿ ಮತದಾರರಲ್ಲಿ ಪುಳಕವನ್ನು ತುಂಬುವ ಉದ್ದೇಶವೂ ಅವರಿಗೆ ಇದ್ದೀತು.

ಮೊದಲನೆಯದಾಗಿ, ತಮ್ಮ ಮಕ್ಕಳಿಗೆ ಮದರಸ ಶಿಕ್ಷಣವನ್ನು ಕೊಡಿಸುವ ಅಥವಾ ಕೊಡಿಸದೇ ಇರುವ ಪೂರ್ಣ ಸ್ವಾತಂತ್ರ‍್ಯ ಈ ರಾಜ್ಯದ ಪ್ರತಿ ಮುಸ್ಲಿಮ್ ಪೋಷಕರಿಗೂ ಇದೆ. ಮುಸ್ಲಿಮ್ ಸಮುದಾಯದ ಪ್ರತಿ ಮಗುವೂ ಮದರಸ ಶಿಕ್ಷಣ ಪಡೆಯಲೇ ಬೇಕು ಎಂಬ ಕಾನೂ ನು ರಾಜ್ಯದಲ್ಲಿ ಇಲ್ಲ. ಆದ್ದರಿಂದ, ಶಿಕ್ಷಣ ಸಚಿವರನ್ನು ಭೇಟಿಯಾಗಿರುವ ಪೋಷಕರು, ‘ಉಳಿದ ಸಮುದಾಯಗಳಿಗೆ ದೊರೆಯುತ್ತಿರುವ ಶಿಕ್ಷಣವನ್ನು ತಮ್ಮ ಮಕ್ಕಳಿಗೂ ನೀಡುವಂತೆ’ ವ್ಯಕ್ತಪಡಿಸಿದ ಕಳಕಳಿಯ ಉದ್ದೇಶಶುದ್ಧಿಯೇ ಪ್ರಶ್ನಾರ್ಹವಾಗುತ್ತದೆ. ಶಾಲಾ ಶಿಕ್ಷಣದಂತೆ ಮದ್ರಸ ಶಿಕ್ಷಣ ಕಡ್ಡಾಯವೇ ಆಗಿಲ್ಲದಿರುವಾಗ, ಯಾರಿಗೇ ಆಗಲಿ ತೊಂದರೆ ಏನಿದೆ? ಹಾಗಂತ,

ಮದ್ರಸ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಯಲೇಬಾರದು ಎಂದು ಯಾರೂ ವಾದಿಸುತ್ತಿಲ್ಲ. ಅಲ್ಲದೇ, ಕಾಲಕಾಲಕ್ಕೂ ಮದ್ರಸ ಪಠ್ಯಪುಸ್ತಕ ಮಂಡಳಿಗಳು ಪುಸ್ತಕ ಪರಿಷ್ಕರಣೆ ಮಾಡುತ್ತಲೂ ಬಂದಿವೆ. ತಕರಾರು ಏನೆಂದರೆ, ಮದ್ರಸ ಪಠ್ಯಪುಸ್ತಕಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಸರಿಯೇ ಎಂಬುದು ಒಂದಾದರೆ ಮದ್ರಸ ಮತ್ತು ಅದರ ಪಠ್ಯಪುಸ್ತಕಗಳ ಬಗ್ಗೆ ವಿರೋಧದ ಮಾತನ್ನಾಡುತ್ತಲೇ ಬಂದಿರುವ ಬಿಜೆಪಿ ಮುಖಂಡರು ಮತ್ತು ಅವರ ನೇತೃತ್ವದ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಇಳಿದರೆ ಏನಾದೀತು ಎಂಬುದು ಇನ್ನೊಂದು.
ಈಗಾಗಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ತೀವ್ರ ಚರ್ಚೆಯಲ್ಲಿದೆ. ತಮ್ಮ ಪಕ್ಷದ ಅಜೆಂಡಾವನ್ನೇ ಪಠ್ಯಪುಸ್ತಕದಲ್ಲಿ ತುರುಕುವುದಕ್ಕೆ ಈ ಸರ್ಕಾರ ಪ್ರಯತ್ನಿಸಿದೆ ಎಂಬುದು ದಾಖಲೆ ಸಹಿತ ಬಹಿರಂಗವಾಗಿದೆ. ಪಠ್ಯಪುಸ್ತಕಗಳ ಪರಿಶೀಲನೆಗೆಂದು ರಚಿಸಲಾದ ಸಮಿತಿಯು ಈ ಹೊಣೆಗಾರಿಕೆಯನ್ನೂ ಮೀರಿ ಪರಿಷ್ಕರಣೆಯನ್ನೇ ಮಾಡಿರುವ ಕಳವಳಕಾರಿ ಸತ್ಯವೂ ಬಹಿರಂಗವಾಗಿದೆ. ಶಾಲಾ ಪಠ್ಯಪುಸ್ತಕಗಳ ಪರಿಸ್ಥಿತಿಯೇ ಹೀಗಾದರೆ ಇನ್ನು, ಈ ಸರ್ಕಾರ ಪರಿಷ್ಕರಣೆಗೊಳಿಸುವ ಮದ್ರಸ ಪಠ್ಯಪುಸ್ತಕಗಳು ಹೇಗಿದ್ದೀತು? ಪರಿಷ್ಕರಣೆಗೆ ರಚಿಸುವ ತಂಡ ಯಾವುದಿದ್ದೀತು? ನಿಜವಾಗಿ,

ಮದ್ರಸಗಳು ಈ ರಾಜ್ಯದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡದ್ದಲ್ಲ. ಸ್ವಾತಂತ್ರ‍್ಯಪೂರ್ವದಿಂದಲೇ ಮದರಸ ಪದ್ಧತಿ ಮುಸ್ಲಿಮರಲ್ಲಿ ರೂಢಿಯ ಲ್ಲಿದೆ. ಶಿಕ್ಷಣವನ್ನು ಧಾರ್ಮಿಕ ಮತ್ತು ಲೌಕಿಕ ಎಂದು ವಿಭಜಿಸಿದಂದಿನಿಂದ ಮದರಸಗಳು ಪ್ರತ್ಯೇಕ ಸಾಂಸ್ಥಿಕ ರೂಪವನ್ನು ಪಡಕೊಂಡವು. ಈ ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಅರಬಿ ಭಾಷೆಯನ್ನೋ ಅಥವಾ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳನ್ನೋ ಕಲಿಸುವ ವ್ಯವಸ್ಥೆಯಿಲ್ಲ. ಹಾಗಂತ, ಓರ್ವ ಮುಸ್ಲಿಮ್ ಆಗಬೇಕೆಂದಾದರೆ ಇಸ್ಲಾಮಿನ ಕಡ್ಡಾಯ ಕರ್ಮಗಳನ್ನು ನಿರ್ವಹಿಸಬೇಕಾದುದು ಬಹಳ ಅಗತ್ಯ. ಇದನ್ನು ಕಲಿತುಕೊಳ್ಳುವ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಇಲ್ಲ ಎಂದಾದರೆ ಮತ್ತೆ ಅವರು ಅವುಗಳನ್ನು ಎಲ್ಲಿಂದ ಕಲಿತುಕೊಳ್ಳಬೇಕು? ಈ ಅನಿವಾರ್ಯತೆಗಳೇ ಮದ್ರಸಗಳನ್ನು ಹುಟ್ಟು ಹಾಕಿದುವು. ಪವಿತ್ರ ಕುರ್‌ಆನನ್ನು ಕಲಿಸುವ, ನಮಾಝ್ ಇತ್ಯಾದಿ ಕರ್ಮಗಳನ್ನು ಅಭ್ಯಾಸಗೊಳಿಸುವ ಮತ್ತು ಇಸ್ಲಾಮಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದಲೇ ಮದ್ರಸಗಳು ತಲೆ ಎತ್ತಿದುವು. ಇವತ್ತೂ ಕೂಡ ಮದ್ರಸಾಗಳು ಕಲಿಸುತ್ತಿರುವುದು ಇವುಗಳನ್ನೇ. ಅಲ್ಲದೇ,


28-7-2022

ಮದ್ರಸಾ ಪಠ್ಯಗಳೇನೂ ರಹಸ್ಯವಾಗಿಲ್ಲ. ಯಾರಿಗೆ ಬೇಕಾದರೂ ಖರೀದಿಸುವಷ್ಟು ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ. ಸಚಿವರು ಪಠ್ಯಪುಸ್ತಕಗಳ ಮೇಲೆ ಆರೋಪ ಹೊರಿಸುವುದ ಕ್ಕಿಂತ ಮೊದಲು ಇವನ್ನೊಮ್ಮೆ ಪರಿಶೀಲಿಸಬೇಕಿತ್ತು. ಅಥವಾ ಯಾವ ತರಗತಿಯ ಪಠ್ಯಕ್ರಮದಲ್ಲಿ ಲೋಪದೋಷಗಳಿವೆ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬೇಕಿತ್ತು. ಆಗ ಅದು ಚರ್ಚೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತಲ್ಲದೇ, ಸಚಿವರ ಉದ್ದೇಶ ಶುದ್ಧಿಯು ಪ್ರಶ್ನಾರ್ಹಗೊಳ್ಳುವುದೂ ತಪ್ಪುತ್ತಿತ್ತು. ಅಷ್ಟಕ್ಕೂ,

ಮದ್ರಸ ಮತ್ತು ಅದರ ಸಾಂಸ್ಥಿಕ ರೂಪವನ್ನೇ ಪ್ರಶ್ನಿಸುವ ಹಾಗೂ ಅದನ್ನು ತಾಲಿಬಾನ್‌ಗಳನ್ನು ಸೃಷ್ಟಿಸುವ ಕೇಂದ್ರವೆಂದು ಜರೆಯುವ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರವು ಪಠ್ಯ ಪರಿಷ್ಕರಣೆಯ ಬಗ್ಗೆ ಮಾತಾಡುವುದೇ ಒಂದು ತಮಾಷೆ. ಅಜ್ಞಾತ ಪೋಷಕರ ಭುಜದಲ್ಲಿ ಬಂದೂಕು ಇಟ್ಟು ಮದ್ರಸದ ಮೇಲೆ ಸಿಡಿಸುವ ಈ ತಂತ್ರ ಕೆಟ್ಟದು. ಮದ್ರಸ ಎಂದರೆ, ಹೆಸರು, ಊರು, ಮುಖ ಪರಿಚಯ ಇಲ್ಲದ ಯಾವುದೋ ಪೋಷಕರು ಅಲ್ಲ. ಅದಕ್ಕೊಂದು ಸಮಿತಿ, ಹೊಣೆಗಾರರಿದ್ದಾರೆ. ಅಧಿಕೃತ ಪಠ್ಯಪುಸ್ತಕಗಳೂ ಇವೆ. ಈ ಹೊಣೆಗಾರರಲ್ಲಿ ಯಾರೂ ಸಚಿವರ ಮುಂದೆ ಪಠ್ಯಪರಿಷ್ಕರಣೆಯ ಬೇಡಿಕೆಯನ್ನು ಇಟ್ಟಿಲ್ಲ. ಸಚಿವರು ಅವರ ಜೊತೆ ಮಾತನ್ನೂ ಆಡಿಲ್ಲ. ಅದು ಬಿಟ್ಟು ಯಾರೋ ಪೋಷಕರನ್ನು ತೋರಿಸಿ ತನ್ನ ಪಕ್ಷದ ಅಜೆಂಡಾವನ್ನು ಮದ್ರಸಾಗಳ ಮೇಲೆ ಹೇರುವುದು ಸಲ್ಲ. ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡುವ ಯಾವ ಪರಿಷ್ಕರಣೆಯೂ ಖಂಡನಾರ್ಹ.

No comments:

Post a Comment