Tuesday 20 June 2023

ಮುಸ್ಲಿಮ್ ಸಮುದಾಯದ ಮೇಲಿನ ಆರೋಪವನ್ನು ಸುಳ್ಳು ಮಾಡಿದ ನೂಪುರ್ ಶರ್ಮಾ

 


7-7-2022

ನೂಪುರ್ ಶರ್ಮಾರ ಬಗ್ಗೆ ಸುಪ್ರೀಮ್ ಕೋರ್ಟ್‌ನ ಪೀಠವೊಂದು ವ್ಯಕ್ತಪಡಿಸಿದ ಅಭಿಪ್ರಾಯವು ಮುಸ್ಲಿಮರಿಗೆ ನ್ಯಾಯಾಂಗ ನಿಷ್ಠೆಯ ಬಗ್ಗೆ ಪಾಠ ಮಾಡುತ್ತಿದ್ದವರ ಬಣ್ಣವನ್ನು ಮತ್ತೊಮ್ಮೆ ಬಯಲುಗೊಳಿಸಿದೆ.‘ನೂಪುರ್ ಶರ್ಮಾರ ಹೇಳಿಕೆಯೇ ಸಮಸ್ಯೆಯ ಮೂಲ, ಅವರು ದೇಶದ ಕ್ಷಮೆ ಯಾಚಿಸಬೇಕು...’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಂಗ ಪೀಠವನ್ನೇ ಈ ಗುಂಪು ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸಿದೆ. ಹಿಜಾಬ್ ಪ್ರಕರಣದಲ್ಲಿ ಮುಸ್ಲಿಮರು ನ್ಯಾಯಾಂಗಕ್ಕೆ ಗೌರವವನ್ನು ನೀಡಬೇಕು ಎಂದು ಬೋಧನೆ ಮಾಡುತ್ತಿದ್ದವರೇ ಇದೀಗ, ‘ಇದೇನು ಷರಿಯಾ ಕೋರ್ಟಾ...’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಬಾಬರಿ ಮಸೀದಿ ತೀರ್ಪನ್ನು ಐತಿಹಾಸಿಕ ಎಂದು ಸಂಭ್ರಮಿಸಿದ್ದು ಇದೇ ಗುಂಪು. ಈ ತೀರ್ಪಿಗೆ ಮುಸ್ಲಿಮರು ಎಲ್ಲಾದರೂ ಅಸಮಾಧಾನ ಸೂಚಿಸುತ್ತಾರಾ ಎಂದು ದುರ್ಬೀನು ಹಿಡಿದು ಹುಡುಕುತ್ತಿದ್ದುದು ಇದೇ ಗುಂಪು. ಮುಲ್ಲಾ, ಮೌಲಾನಾಗಳ ಬಾಯಿಗೆ ಮೈಕ್ ಇಟ್ಟು ನ್ಯಾಯಾಂಗದ ತೀರ್ಪನ್ನು ಖಂಡಿಸುವ ಸಣ್ಣ ಹೇಳಿಕೆಯಾದರೂ ಹೊರಬೀಳಲಿ... ಎಂದು ಪೀಡಿಸುತ್ತಿದ್ದ ಮಾಧ್ಯಮ ಗುಂಪನ್ನು ಅಭಿಮಾನದಿಂದ ನೋಡುತ್ತಿದ್ದುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗಗಳ ಮೇಲೆಲ್ಲ ನಂಬಿಕೆ ಇಡಬೇಕಾದ ಮತ್ತು ನಿಷ್ಠೆ ವ್ಯಕ್ತಪಡಿಸಬೇಕಾದ ಹೊಣೆಗಾರಿಕೆ ಮುಸ್ಲಿಮರ ಮೇಲಿದೆಯೇ ಹೊರತು ತಮಗಲ್ಲ ಎಂದು ಈ ಗುಂಪು ಸಾರುತ್ತಿದೆ. ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ನೀಡಿದ ತೀರ್ಪನ್ನು ಇದೇ ಗುಂಪು ಬಲವಾಗಿ ವಿರೋಧಿಸಿತ್ತು. ವಿರೋಧಿಸಿದ್ದು ಮಾತ್ರವಲ್ಲ, ಕೇರಳದಲ್ಲಿ 7 ಹರತಾಳಗಳು ನಡೆದಿದ್ದುವು. ಒಂದು ರಾಜ್ಯ ಬಂದ್ ಕೂಡಾ ನಡೆದಿತ್ತು. ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಸುಮಾರು 10ರಷ್ಟು ಮಹಿಳೆಯರನ್ನು ಥಳಿಸಿ ಹಿಂದಕ್ಕೆ ಕಳುಹಿಸಲಾಗಿತ್ತು. ಹರತಾಳ ಎಷ್ಟು ಕಾನೂನು ಬಾಹಿರವಾಗಿತ್ತೆಂದರೆ, ಕೇರಳ ರಸ್ತೆ ಸಾರಿಗೆ ಸಂಸ್ಥೆಯ ನೂರಕ್ಕಿಂತಲೂ ಅಧಿಕ ಬಸ್‌ಗಳಿಗೆ ಹಾನಿ ಎಸಗಲಾಗಿತ್ತು. ಸರ್ಕಾರಿ ಲೈಬ್ರರಿ ಮತ್ತು ಕಟ್ಟಡಗಳನ್ನು ಪುಡಿಗೈಯಲಾಗಿತ್ತು. ಸುಮಾರು 500ರಷ್ಟು ಪ್ರಕರಣಗಳು ದಾಖಲಾಗಿದ್ದುವು. ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ನಿಜವಾಗಿ,

ಈ ದೇಶದ ಕಾನೂನಿಗೆ ಅತ್ಯಂತ ಹೆಚ್ಚು ನಿಷ್ಠವಾಗಿರುವುದು ಮುಸ್ಲಿಮ್ ಸಮುದಾಯ. ಈ ಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿದ ಹಲವು ತೀರ್ಪುಗಳು ಸುಪ್ರೀಮ್‌ನಿಂದ ಬಂದಿದ್ದರೂ ಶಬರಿಮಲೆಯಂಥ ವಿರೋಧವನ್ನು ಅದು ವ್ಯಕ್ತಪಡಿಸಿಯೇ ಇಲ್ಲ. ಶಬಾನೋ ಪ್ರಕರಣವೊಂದನ್ನು ಬಿಟ್ಟರೆ ಉಳಿದಂತೆ ಅತ್ಯಂತ ಸಂಯಮದ ಪ್ರತಿಕ್ರಿಯೆಯನ್ನಷ್ಟೇ ಈ ಸಮುದಾಯ ವ್ಯಕ್ತಪಡಿಸಿದೆ. ಬಾಬರಿ ಮಸೀದಿ ಜಮೀನು ವಿವಾದದ ಬಗ್ಗೆ ಸುಪ್ರೀಮ್ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ನೀಡಿದ ತೀರ್ಪಿನ ಬಗ್ಗೆ ಖ್ಯಾತ ನ್ಯಾಯವಾದಿಗಳೇ ಅಸಮಾಧಾನ ಸೂಚಿಸಿದಾಗಲೂ ಈ ಸಮುದಾಯ ಎಲ್ಲೂ ಕಾನೂನು ಕೈಗೆತ್ತಿಕೊಳ್ಳುವ ಸಾಹಸಕ್ಕೆ ಇಳಿಯಲಿಲ್ಲ. ಹರತಾಳ ನಡೆಸಲಿಲ್ಲ. ಅಷ್ಟಕ್ಕೂ, ಬಾಬರಿ ಮಸೀದಿಯ ಬಗ್ಗೆ ತಕರಾರು ಎತ್ತಿದವರು ಅದನ್ನು ವ್ಯಕ್ತಪಡಿಸುವುದಕ್ಕೆ ಆಯ್ಕೆ ಮಾಡಿಕೊಂಡ ರೀತಿಯೇ ಕಾನೂನು ವಿರೋಧಿಯಾಗಿತ್ತು. ಅವರು ಕಾನೂನನ್ನೇ ಕೈಗೆತ್ತಿಕೊಂಡರು. ಬಾಬರಿ ಮಸೀದಿಗೆ ಯಾವುದೇ ಹಾನಿ ಮಾಡುವು ದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆದುಕೊಟ್ಟು, ನ್ಯಾಯಾಂಗವನ್ನೇ ವಂಚಿಸಿದರು. ಬಾಬರಿ ಮಸೀದಿಯನ್ನು ಹಾಡುಹಗಲೇ ಬೀಳಿಸಿದರು. ಮಾತ್ರವಲ್ಲ,

ಈ ಕ್ರಿಮಿನಲ್ ಕೃತ್ಯಕ್ಕೆ 30 ವರ್ಷಗಳೇ ಸಂದಿದ್ದರೂ ಇವತ್ತಿಗೂ ಆ ಪ್ರಕರಣ ಸ್ಥಳೀಯ ನ್ಯಾಯಾಲಯದಿಂದ ಮೇಲೆ ಬಂದಿಲ್ಲ. ಆ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರಲ್ಲಿ ಹಲವರು ಈಗಾಗಲೇ ಯಾವ ಶಿಕ್ಷೆಯನ್ನೂ ಎದುರಿಸದೇ ಸಹಜ ಸಾವಿಗೆ ಒಳಗಾಗಿದ್ದಾರೆ. ಇನ್ನು, ಜೀವಂತ ಇರುವವರೂ ಆ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ಹಾಗಿಲ್ಲ. ಯಾಕೆಂದರೆ, ಆ ಪ್ರಕರಣ ಹಳ್ಳ ಹಿಡಿದಂತಿದೆ. ಈ ದೇಶದ ಮತ್ತು ಜಗತ್ತಿನ ಸರ್ವ ಮಾಧ್ಯಮಗಳ ಮುಂದೆಯೇ ನಡೆದ ಕೃತ್ಯವೊಂದು 30 ವರ್ಷಗಳ ಬಳಿಕವೂ ಸ್ಥಳೀಯ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ ಎಂದರೆ, ಅದರರ್ಥವೇನು? ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗುವುದು ಬೇಗ. ಸಿವಿಲ್ ವ್ಯಾಜ್ಯಗಳ ವಿಚಾರಣೆ ತೆವಳಿಕೊಂಡ ರೀತಿಯಲ್ಲಾಗುವಾಗ, ಕ್ರಿಮಿನಲ್ ಪ್ರಕರಣಗಳ ವಿಚಾರಣೆಯು ಕನಿಷ್ಠ ನಡೆಯುವ ವೇಗದಲ್ಲಾದರೂ ಸಾಗುತ್ತದೆ ಎಂಬುದು ಸಾಮಾನ್ಯ ಹೇಳಿಕೆ. ಆದರೆ,

ಬಾಬರಿ ಮಸೀದಿ ಪ್ರಕರಣದಲ್ಲಿ ಈ ನಂಬಿಕೆಯೇ ಹುಸಿಯಾಗಿದೆ. ಆದರೂ ಮುಸ್ಲಿಮರು ಈ ದೇಶದ ನ್ಯಾಯಾಂಗವನ್ನು ಖಂಡಿಸಿ ವಾಹನಗಳಿಗೆ ಬೆಂಕಿ ಹಚ್ಚಿಲ್ಲ. ದುರಂತ ಏನೆಂದರೆ,

ನ್ಯಾಯಾಲಯದ ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ಸ್ವೀಕಾರ, ಇಲ್ಲದಿದ್ದರೆ ತಿರಸ್ಕಾರ ಎಂದು ತಮ್ಮ ಮಾತು-ಕೃತಿಗಳಿಂದ ಪದೇ ಪದೇ ಸಾಬೀತುಪಡಿಸುತ್ತಿರುವ ಅದೇ ಗುಂಪು, ಕಾನೂನು ಪಾಲನೆಯ ಹೆಸರಲ್ಲಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ಹಿಜಾಬ್ ಪ್ರಕರಣದಲ್ಲಿ ಹೈ ಕೋರ್ಟ್ ನೀಡಿದ ತೀರ್ಪಿಗೆ ಮುಸ್ಲಿಮ್ ಸಮುದಾಯ ಅಸಮಾಧಾನ ಸೂಚಿಸಿದ್ದನ್ನು ಇದೇ ಗುಂಪು ಪರ್ವತ ಮಾಡಿತ್ತು. ಬೆಳಗ್ಗಿನಿಂದ ಸಂಜೆವರೆಗೆ ಮುಸ್ಲಿಮ್ ಸಮುದಾಯದ ಮಂದಿ ಸ್ವಯಂ ಪ್ರೇರಿತ ವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಅಸಮಾಧಾನ ಸೂಚಿಸಿದ್ದನ್ನು ನ್ಯಾಯಾಂಗಕ್ಕೆ ಅಗೌರವ ಎಂದು ಈ ಗುಂಪು ಪ್ರಚಾರ ಮಾಡಿತ್ತು. ಆ ಬಳಿಕ ಜಾತ್ರೋತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರುವುದಕ್ಕೆ ಇದನ್ನೇ ಕಾರಣವಾಗಿಯೂ ನೀಡಿತ್ತು. ತಮಾಷೆ ಏನೆಂದರೆ, ಕೋರ್ಟು ತೀರ್ಪಿಗೆ ಮುಸ್ಲಿಮರು ಕನಿಷ್ಠ ಅಸಮಾಧಾನವನ್ನೂ ಸೂಚಿಸಬಾರದು ಎಂದು ಹೇಳುವ ಇದೇ ಗುಂಪು, 2018ರ ಶಬರಿಮಲೆ ತೀರ್ಪಿಗೆ ವ್ಯಕ್ತ ಪಡಿಸಿದ ಹಿಂಸಾತ್ಮಕ ವಿರೋಧವನ್ನೂ ಸಮರ್ಥಿಸುತ್ತಿತ್ತು. ನಿಜವಾಗಿ,

ಈ ಗುಂಪು ನ್ಯಾಯಾಂಗಕ್ಕೂ ನಿಷ್ಠವಾಗಿಲ್ಲ, ಸಂವಿಧಾನಕ್ಕೂ ನಿಷ್ಠವಾಗಿಲ್ಲ. ಅದರ ನಿಷ್ಠಾನಿಷ್ಠ ಎಲ್ಲವೂ ಷರತ್ತಿಗೆ ಒಳಪಟ್ಟಿರುತ್ತದೆ. ನಿರ್ದಿಷ್ಟ ರಾಜಕೀಯ ಪಕ್ಷದ ಹಿತವೇ ಈ ಷರತ್ತು. ಒಂದುವೇಳೆ, ನೂಪುರ್ ಶರ್ಮಾ ಕಾಂಗ್ರೆಸ್‌ನಲ್ಲಿದ್ದು ಈ ಹೇಳಿಕೆ ನೀಡಿರುತ್ತಿದ್ದರೆ ಮತ್ತು ಕಾಂಗ್ರೆಸ್ ಆಕೆಯನ್ನು ಪಕ್ಷದಿಂದ ಅಮಾನತುಗೊಳಿಸಿರುತ್ತಿದ್ದರೆ ಈ ಗುಂಪಿನ ಪ್ರತಿಕ್ರಿಯೆ ಹೇಗಿರುತ್ತಿತ್ತು ಯೋಚಿಸಿ. ಆ ಕ್ರಮವನ್ನು ಮುಸ್ಲಿಮ್ ಓಲೈಕೆ ಎಂದು ಈ ಗುಂಪು ಹಂಗಿಸುತ್ತಿತ್ತು. ಕಾಂಗ್ರೆಸನ್ನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಲಾಗುತ್ತಿತ್ತು. ಕಾಂಗ್ರೆಸ್‌ನ ಉನ್ನತ ನಾಯಕರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಪ್ರತಿಯೊಬ್ಬರನ್ನೂ ಉಲ್ಲೇಖಿಸಿ ಮಾನ ಹರಾಜು ಹಾಕುವ ಪೋಸ್ಟ್‌ಗಳು ಸೋಷಿ ಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕಿರುತ್ತಿತ್ತು. ಆದರೆ, ನೂಪುರ್ ಶರ್ಮಾ ಬಿಜೆಪಿಯವರಾದ್ದರಿಂದ ಮತ್ತು ಅಮಾ ನತುಗೊಳಿಸಿದ್ದೂ ಬಿಜೆಪಿಯಾದುದರಿಂದ ಈ ಗುಂಪು ಮೌನವಾಗಿದೆ. ಮಾತ್ರವಲ್ಲ, ಪ್ರವಾದಿಯನ್ನು ನಿಂದಿಸಿರುವ ಏಕೈಕ ಕಾರಣಕ್ಕಾಗಿಯೇ ಆಕೆಯನ್ನು ಬೆಂಬಲಿಸುತ್ತಿದೆ. ಒಂದುವೇಳೆ, ಹಿಂದೂ ದೇವ-ದೇವಿಯರ ವಿರುದ್ಧ ಈಕೆ ಇಂಥದ್ದೇ ಹೇಳಿಕೆ ನೀಡಿರುತ್ತಿದ್ದರೆ ಇದೇ ಗುಂಪು ಇಂಥದ್ದೇ ಧೋರಣೆಯನ್ನು ತಳೆಯುತ್ತಿತ್ತೇ? ಕೆಲವು ಸಮಯಗಳ ಹಿಂದೆ ಸಾಹಿತಿ ಭಗವಾನ್ ಅವರಿಗೆ ನ್ಯಾಯವಾದಿಯೊಬ್ಬರು ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದರು. ಆಗ ಇದೇ ಗುಂಪು ಆ ಮಸಿಯನ್ನು ಸಮರ್ಥಿಸಿತ್ತು. ಭಗವಾನ್ ಹಿಂದೂ ಧರ್ಮವನ್ನು ಮತ್ತು ಶ್ರೀರಾಮರನ್ನು ಅವಮಾನಿಸಿದ್ದಾರೆ ಎಂಬುದೇ ಈ ಮಸಿಗೆ ಕಾರಣವಾಗಿತ್ತು. ಈ ಹಿಂದೆ ಕಲಾವಿದ ಎಂ.ಎಫ್. ಹುಸೇನ್ ಅವರು ದೇವ-ದೇವಿಯರ ನಗ್ನ ಚಿತ್ರವನ್ನು ಬಿಡಿಸಿದಾಗ, ಅದನ್ನು ಖಂಡಿಸಿ ಅವರ ಮೇಲೆ ದೇಶದ ವಿವಿಧ ಕಡೆ ಪ್ರಕರಣ ದಾಖಲಿಸಿದ್ದನ್ನು ಬೆಂಬಲಿಸುತ್ತಿರುವುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಮುಂದೆ ಈಗಾಗಲೇ ಸಾಬೀತಾಗಿರುವ ಸತ್ಯವೊಂದನ್ನು ನೂಪುರ್ ಹೇಳಿಕೆ ಮತ್ತೊಮ್ಮೆ ದೃಢಪಡಿಸಿದೆ. ಈ ದೇಶದ ಕಾನೂ ನು ಪಾಲಿಸುವವರಲ್ಲಿ ಮುಂದಿರುವುದು ಮುಸ್ಲಿಮರೇ. ಈ ದೇಶದ ಪ್ರಜಾತಂತ್ರಕ್ಕೆ ಗೌರವ ವ್ಯಕ್ತಪಡಿಸುವವರಲ್ಲಿ ಮುಂಚೂಣಿಯ ಲ್ಲಿರುವುದೂ ಮುಸ್ಲಿಮರೇ. ಮುಸ್ಲಿಮರು ಈ ದೇಶದ ನ್ಯಾಯಾಂಗಕ್ಕೆ ನಿಷ್ಠರಾಗಿದ್ದಾರೆ. ಆದರೆ ಅವರನ್ನು ಯಾರು ಸದಾ ಆರೋಪಿ ಸ್ಥಾ ನದಲ್ಲಿ ನಿಲ್ಲಿಸುತ್ತಿದ್ದರೋ ಅವರ ನ್ಯಾಯಾಂಗ ನಿಷ್ಠೆ ಶಂಕಾಸ್ಪದವಾಗಿದೆ. ಅವರು ನ್ಯಾಯಾಂಗದ ಬದಲು ರಾಜಕೀಯ ಪಕ್ಷಕ್ಕೆ ನಿಷ್ಠವಾಗಿದ್ದಾರೆ. ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ನ್ಯಾಯಾಂಗವನ್ನು ಗೌರವಿಸುತ್ತಾರೆ. ಇಲ್ಲದಿದ್ದರೆ ನ್ಯಾಯಾಲಯವನ್ನೇ ಕಟಕಿಯಾಡುತ್ತಾರೆ. ನೂಪುರ್ ಶರ್ಮಾರ ಹೇಳಿಕೆಯು ಈ ಸತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

No comments:

Post a Comment