Tuesday 20 June 2023

ಮಸೂದ್, ಪ್ರವೀಣ್, ಫಾಝಿಲ್: ಸಂತ್ರಸ್ತರು ಹೇಳಿದ ಕಾರಣಗಳು

 


4-8-2022

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಆಧಾರದಲ್ಲಿ ಹತ್ಯೆಗಳು ನಡೆದಿರುವುದು ಇದು ಮೊದಲಲ್ಲ. ಆದರೆ ಅತ್ಯಂತ ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಒಂದು ಸರ್ಕಾರ ಒಂದು ಕೋಮಿನ ಪರ ನಿಂತಿದ್ದು ಇದೇ ಮೊದಲು. ಹತ್ಯೆಗೀಡಾದ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ತೇಜಸ್ವಿ ಸೂರ್ಯ, ಸಚಿವರಾದ ಸುನೀಲ್ ಕುಮಾರ್, ಅಂಗಾರ, ಬಿಜೆಪಿ ಶಾಸಕರಾದ ಮಠಂದೂರು, ಪೂಂಜಾ ಸಹಿತ ಸಾಲು ಸಾಲು ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದೆ. ಮೃತ ವ್ಯಕ್ತಿಯ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ ಪ್ರವೀಣ್ ಹತ್ಯೆಗಿಂತ ಮೊದಲು ಅದೇ ಪರಿಸರದಲ್ಲಿ ಮಸೂದ್ ಎಂಬ ಯುವಕನ ಹತ್ಯೆಯಾಗಿದೆ. ಹಾಗೆಯೇ ಪ್ರವೀಣ್ ಹತ್ಯೆಯ ಎರಡೇ ದಿನದೊಳಗೆ ಫಾಝಿಲ್ ಎಂಬ ಯುವಕನ ಹತ್ಯೆಯಾಗಿದೆ. ಈ ಹತ್ಯೆ ನಡೆಯುವಾಗಲಂತೂ ಮುಖ್ಯಮಂತ್ರಿಯವರು ಜಿಲ್ಲೆಯಲ್ಲೇ ಇದ್ದರು. ಆದರೆ ಪ್ರವೀಣ್ ಮನೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು ಅಲ್ಲೆ ಪಕ್ಕದ ಮಸೂದ್ ಮನೆಗೆ ಭೇಟಿ ಕೊಟ್ಟಿಲ್ಲ. ಅವರು ಬಿಡಿ, ಸ್ಥಳೀಯ ಸಂಸದ ನಳೀನ್ ಕುಮಾರ್ ಕಟೀಲ್ ಆಗಲಿ, ಕ್ಷೇತ್ರದ ಶಾಸಕ ಅಂಗಾರ ಆಗಲಿ ಯಾರೂ ಆ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ನಯಾಪೈಸೆ ಪರಿಹಾರ ಘೋಷಿಸಿಲ್ಲ. ಅಲ್ಲದೇ, ಇಂಥದ್ದೆ ನಿರ್ಲಕ್ಷ್ಯ ಫಾಝಿಲ್ ಹತ್ಯೆ ವಿಚಾರದಲ್ಲೂ ನಡೆದಿದೆ. ಜಿಲ್ಲೆಯ ಸಂಸದ ಕಟೀಲ್ ಆಗಲಿ, ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಯಾಗಲಿ ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ಯಾವ ಪರಿಹಾರವನ್ನೂ ಘೋಷಿಸಿಲ್ಲ. ಇದು ಘಟನೆಯ ಒಂದು ಮುಖವಾದರೆ, ಇನ್ನೊಂದು ಮುಖ ಪಕ್ಷಬೇಧ ಮತ್ತು ಧರ್ಮಬೇಧದ ಹಂಗಿಲ್ಲದೇ ನಮ್ಮೆಲ್ಲರ ಕಣ್ಣನ್ನು ತೆರೆಸುವಂಥದ್ದು. ಅದುವೇ, ಫಾಝಿಲ್, ಮಸೂದ್ ಮತ್ತು ಪ್ರವೀಣ್ ಮನೆಯವರು ಹಂಚಿಕೊಂಡ ಸಂಕಟ.

ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕುಟುಂಬಗಳು ತಮ್ಮ ಮನಸ್ಸನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ರಾಜಕೀಯ ಪಕ್ಷ ಪಾತವನ್ನು ಮಸೂದ್ ತಾಯಿ ನೇರವಾಗಿ ಪ್ರಶ್ನಿಸಿದ್ದಾರೆ. ‘ಪ್ರವೀಣ್ ಮನೆಗೆ ಬಂದ ಮುಖ್ಯಮಂತ್ರಿಗಳು ನನ್ನ ಮನೆಗೇಕೆ ಬಂದಿಲ್ಲ, ಪರಿಹಾರವೇಕೆ ಘೋಷಿಸಿಲ್ಲ, ಪ್ರವೀಣ್ ಮತ್ತು ಮಸೂದ್- ಇಬ್ಬರ ದೇಹದಿಂದ ಹರಿದಿರುವುದು ರಕ್ತವೇ ಅಲ್ಲವೇ...’ ಎಂದವರು ಪ್ರಶ್ನಿಸಿದ್ದಾರೆ. ಪ್ರವೀಣ್ ಪತ್ನಿ ನೂತನ ಅಂತೂ ಬಿಜೆಪಿಯ ನಾಯಕರನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದಾರೆ. ‘ನಿಮ್ಮ ಮಕ್ಕಳಿಗೆ ಹೀಗಾಗಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ನನ್ನ ಗಂಡನನ್ನು ನನಗೆ ಮರಳಿಸಿ ಕೊಡಲು ನಿಮ್ಮಿಂದ ಸಾಧ್ಯವಾ...’ ಎಂದು ಮುಂತಾಗಿ ಆಕ್ರೋಶ ಹೊರಹಾಕಿದ್ದಾರೆ. ಫಾಝಿಲ್ ತಂದೆಯಂತೂ ಮಾಧ್ಯಮಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ‘ಪ್ರೇಮ ಪ್ರಕರಣಕ್ಕಾಗಿ ಈ ಹತ್ಯೆ ನಡೆದಿದೆ ಎಂದು ನೀವೇಕೆ ಸುಳ್ಳು ಹೇಳಿದಿರಿ...’ ಎಂದವರು ಪ್ರಶ್ನಿಸಿದ್ದಾರೆ ಅಂದಹಾಗೆ,

ಈ ಮೂರೂ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬದ ಮಾತುಗಳು ಎರಡು ಸಂಗತಿಗಳನ್ನು ಸ್ಪಷ್ಟಪಡಿಸುತ್ತವೆ. 1.ಹೊಲಸು ರಾಜಕೀಯ. 2. ಬೇಜವಾಬ್ದಾರಿ ಮಾಧ್ಯಮ. ಈ ಘಟನೆಯಲ್ಲಿ ಇವೆರಡೂ ಜನರ ಕೆಂಗಣ್ಣಿಗೆ ಗುರಿಯಾಗಿವೆ. ನಿಜವಾಗಿ,

ಇಂಥ ಸಂದರ್ಭಗಳಲ್ಲಿ ಮಾಧ್ಯಮದ ಪಾತ್ರ ಹಿರಿದು. ಯಾವುದೇ ಘಟನೆಯಲ್ಲೂ ಓಟನ್ನು ಹುಡುಕುವ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಮಾಧ್ಯಮ ರಂಗಕ್ಕೆ ಆ ಹಪಾಹಪಿ ಇಲ್ಲ. ಅವು ಜನರ ಓಟಿನಿಂದ ಉಸಿರಾಡುತ್ತಿರುವುದಲ್ಲ. ಅಧಿಕಾರಕ್ಕಾಗಿ ರಾಜಕೀಯ ಮಾಡುವ ರಾಜಕೀಯ ಪಕ್ಷಗಳ ಸಂಚನ್ನು ಬಯಲುಗೊಳಿಸುವುದೇ ಮಾಧ್ಯಮಗಳ ಜವಾಬ್ದಾರಿ. ಆದರೆ ಈ ಮೂರು ಘಟನೆಗಳ ಪೈಕಿ ರಾಜ್ಯದ ಪ್ರಮುಖ ಟಿ.ವಿ. ಚಾನೆಲ್‌ಗಳು ಪ್ರವೀಣ್ ಹತ್ಯೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿದುವು. ಪ್ರಚೋದನಕಾರಿ ಶೀರ್ಷಿಕೆಗಳೊಂದಿಗೆ ಹತ್ತು-ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಪ್ರವೀಣ್ ಮನೆಯ ತುಸು ದೂರದಲ್ಲಿ ನಾಲ್ಕು ದಿನಗಳ ಮೊದಲು ನಡೆದಿದ್ದ ಮಸೂದ್ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸಿದ್ದ ಇವೇ ಮಾಧ್ಯಮಗಳು ಪ್ರವೀಣ್ ಹತ್ಯೆಯನ್ನು ಭಿನ್ನವಾಗಿ ಎತ್ತಿಕೊಂಡವು. ಫಾಝಿಲ್ ಸಾವು ದೃಢವಾಗುವುದಕ್ಕಿಂತ ಮೊದಲೇ ಸೋಷಿಯಲ್ ಮೀಡಿಯಾಗಳಲ್ಲಿ ಊಹಾಪೋಹಗಳನ್ನು ಹರಿಯಬಿಡಲಾಯಿತು. ‘ಫಾಝಿಲ್ ಸುನ್ನಿಯಾಗಿದ್ದು, ಶಿಯಾ ಮುಸ್ಲಿಮರು ಈ ಹತ್ಯೆ ನಡೆಸಿದ್ದಾರೆ..’ ಎಂಬ ಅತ್ಯಂತ ಕ್ರೂರ ಸುಳ್ಳು ಪ್ರಚಾರವಾಯಿತು. ಇಂಗ್ಲಿಷ್‌ನ ಜನಪ್ರಿಯ ಪತ್ರಿಕೆಯೊಂದು ಮುಖಪುಟದಲ್ಲಿ ಈ ಸುಳ್ಳು ಸುದ್ದಿಗೆ ಜಾಗ ನೀಡಿತು. ಓಪ್ ಇಂಡಿಯಾ ಅನ್ನುವ ಬಲಪಂಥೀಯ ವೆಬ್‌ಸೈಟ್ ಕೂಡಾ ಈ ಸುಳ್ಳನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತು. ಫಾಝಿಲ್‌ನ ಹತ್ಯೆಯನ್ನು ಸಂಭ್ರಮಿಸಿದವರು ಹುಟ್ಟು ಹಾಕಿದ ಸುಳ್ಳಿದು. ನಿಜವಾಗಿ,

ಹೊಲಸು ರಾಜಕೀಯ ಮತ್ತು ಬೇಜವಾಬ್ದಾರಿ ಮಾಧ್ಯಮಗಳಿಂದಾಗಿಯೇ ರಾಜ್ಯದ ಜನರ ನೆಮ್ಮದಿ ಹಾಳಾಗಿದೆ. ಅಭಿವೃದ್ಧಿಯನ್ನು ಮುಂದಿಟ್ಟು ರಾಜಕಾರಣ ಮಾಡುವ ಧೈರ್ಯ ಆಡಳಿತಗಾರರಿಗೆ ಇಲ್ಲ. ಮಳೆಗಾಲ ಆರಂಭವಾಗಿದೆ. ಆದರೆ, ಮಳೆಗಾಲವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿದೆ. 2000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿ ಎಷ್ಟು ಕಳಪೆಯಾಗಿದೆಯೆಂದರೆ, ಮೊದಲ ಮಳೆಗೆ ಇಡೀ ಮಂಗಳೂರೇ ಮುಳುಗಿದೆ. ಅತ್ಯಂತ ಅಸಮರ್ಪಕವಾಗಿ ಈ ಕಾಮಗಾರಿ ನಡೆಸಲಾಗಿದೆ. ಮಂಗಳೂರಿನಲ್ಲಿ ಏರ್‌ಪೋರ್ಟ್, ಬಂದರ್, ರೈಲ್ವೇ ನಿಲ್ದಾಣ, ಮಾಲ್‌ಗಳು, ಹಲವು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದ್ದರೂ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಒಪ್ಪುತ್ತಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗವನ್ನರಸಿ ಬೆಂಗಳೂರಿಗೋ ವಿದೇಶಕ್ಕೋ ಹೋಗುತ್ತಿದ್ದಾರೆ. ಪ್ರತಿಭಾವಂತರವನ್ನು ತಯಾರಿಸುವ ಆದರೆ ಉದ್ಯೋಗ ಕೊಡದ ಬಹುಶಃ ಏಕೈಕ ಜಿಲ್ಲೆ ದಕ್ಷಿಣ ಕನ್ನಡವೇ ಇರಬೇಕು. ಹೊರಜಿಲ್ಲೆ ಮತ್ತು ರಾಜ್ಯಗಳಿಂದ ಮಂಗಳೂರಿಗೆ ಶಿಕ್ಷಣಕ್ಕಾಗಿ ಮಕ್ಕಳು ಬರುತ್ತಿದ್ದಾರೆ. ಆಸ್ಪತ್ರೆಗಳಿಗೂ ಹೊರ ರಾಜ್ಯಗಳಿಂದ ರೋಗಿಗಳೂ ಬರುತ್ತಿದ್ದಾರೆ. ಮಂಗಳೂರು ಸಮುದ್ರದಿಂದ ಸುತ್ತುವರಿದಿರುವ ಕಾರಣ ಬಂದರು ಪಟ್ಟಣವಾಗಿಯೂ ಪರಿವರ್ತಿತವಾಗಿದೆ. ಹೊರ ರಾಜ್ಯಗಳ ಜೊತೆ ಇಲ್ಲಿನ ಬಂದರಿನಿAದ ವ್ಯವಹಾರಗಳು ನಡೆಯುತ್ತವೆ. ಇಲ್ಲಿನ ರೈಲು ನಿಲ್ದಾಣವೂ ಜನನಿಬಿಡವಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಲ್ಪಿಸುವ ನಿಲ್ದಾಣವೂ ಇಲ್ಲಿದೆ. ಎರಡು ಬೃಹತ್ ಮಾಲ್‌ಗಳೂ ಸೇರಿದಂತೆ ಹಲವು ಮಾಲ್‌ಗಳೂ ಇಲ್ಲಿವೆ. ಇಷ್ಟೆಲ್ಲ ಇದ್ದೂ ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗದೇ ಇರುವುದಕ್ಕೆ ಏನು ಕಾರಣ? ಯಾಕೆ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಭಯಪಡುತ್ತಿವೆ? ಅಂದಹಾಗೆ, ಈ ಮೂರು ಹತ್ಯೆಗಳ ನಡುವೆಯೇ ಇಲ್ಲಿ ಪಬ್ ದಾಳಿ ನಡೆದಿದೆ. ಕೆಲವು ವರ್ಷಗಳ ಹಿಂದೆ ಇದೇ ಮಂಗಳೂರಿನಲ್ಲಿ ಪಬ್ ದಾಳಿ ನಡೆದಿತ್ತು ಮತ್ತು ಅಲ್ಲಿದ್ದ ಹೆಣ್ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತು. ಅವರ ಮೇಲೆ ಹಲಗಲೆ ನಡೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಂದಹಾಗೆ,

ಬೆAಗಳೂರು ಆಗಿ ಪರಿವರ್ತನೆಯಾಗುವುದಕ್ಕೆ ಸಕಲ ಅವಕಾಶಗಳಿದ್ದೂ ಮಂಗಳೂರು ಯಾಕೆ ಬೆಂಗಳೂರು ಆಗುತ್ತಿಲ್ಲ ಅನ್ನುವುದಕ್ಕೆ ಇಲ್ಲಿನ ಹೊಲಸು ರಾಜಕೀಯವೇ ಮುಖ್ಯ ಕಾರಣ. ಧರ್ಮದ್ವೇಷವನ್ನು ಉತ್ಪಾದಿಸಿ ಮಾರುವ ಕೆಟ್ಟ ರಾಜಕೀಯವೊಂದು ಈ ಜಿಲ್ಲೆಯಲ್ಲಿದೆ. ಇದರ ರೂವಾರಿ ಬಿಜೆಪಿ. ಚುನಾವಣೆ ಹತ್ತಿರ ಬರುವಾಗ ಪ್ರಚೋದನಕಾರಿ ಭಾಷಣ ಮತ್ತು ಹತ್ಯೆಗಳು ಈ ಜಿಲ್ಲೆಗೆ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಧರ್ಮದ್ವೇಷವನ್ನೇ ಬಿತ್ತಿ ಚುನಾವಣೆಯಲ್ಲಿ ಫಸಲು ಪಡೆಯುವ ಸಂಚಿಗೆ ಇಲ್ಲಿ ದಶಕಗಳಿಂದ ಮಾನ್ಯತೆ ಸಿಗುತ್ತಲೇ ಇದೆ. ಎಲ್ಲಿವರೆಗೆ ಈ ರಾಜಕೀಯ ನೀತಿಗೆ ತಿರುಗೇಟು ಸಿಗುವುದಿಲ್ಲವೋ ಅಲ್ಲಿವರೆಗೆ ಬಡವರು ಬಲಿಯಾಗುತ್ತಲೇ ಹೋಗುತ್ತಿರುತ್ತಾರೆ. ಅಂದಹಾಗೆ,

ದ್ವೇಷದ ಚೂರಿಗೆ ಬಲಿಯಾದ ಮಸೂದ್ ಮತ್ತು ಫಾಝಿಲ್ ಕೂಲಿ ಕಾರ್ಮಿಕರಾದರೆ ಪ್ರವೀಣ್ ಕೋಳಿ ಅಂಗಡಿ ವ್ಯಾಪಾರಿ. ರಾಜಕಾರಣಿಗಳು ಮತ್ತು ಅವರ ಮಕ್ಕಳು ಎಲ್ಲೋ ಹಾಯಾಗಿರುತ್ತಾರೆ. ಪ್ರತಿ ಕೋಮು ಹತ್ಯೆ ಹೇಳುತ್ತಿರುವುದೂ ಈ ಸತ್ಯವನ್ನೇ

No comments:

Post a Comment